ವಿಜಯಪುರ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಪುರ

ವಿಜಯಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 16.83° N 75.71° E
ವಿಸ್ತಾರ
 - ಎತ್ತರ
33.05 km²
 - 553 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
3,27,427
 - 265/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 586101
 - +08352
 - KA-28
ವಿಜಯಪುರ ಜಿಲ್ಲೆಯ ನಕ್ಷೆ
ವಿಶ್ವಗುರು ಮಹಾತ್ಮ ಬಸವಣ್ಣನವರು
ಶಿವನ ವಿಗ್ರಹ
ಗೋಲ ಗುಂಬಜ್
ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ
ಬಾರಾ ಕಮಾನ್
ಇಬ್ರಾಹಿಮ್ ರೋಜಾ
ಮಲಿಕ್- ಎ - ಮೈದಾನ ತೋಪು
ತಾಜ್ ಬೌಡಿ

ವಿಜಯಪುರ - ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ವಿಜಯಪುರ ನಗರವು ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಕೇಂದ್ರಸ್ಥಳ. ವಿಜಯಪುರ ನಗರವು ಬೆಂಗಳೂರಿನಿಂದ ಉತ್ತರ - ಪಶ್ಚಿಮಕ್ಕೆ 530 ಕಿ.ಮೀ. ದೂರದಲ್ಲಿದೆ.

ಚರಿತ್ರೆ[ಬದಲಾಯಿಸಿ]

ನಾಣ್ಯದ ಮೇಲೆ ಮಹಾತ್ಮ ಬಸವಣ್ಣ

ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.

ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.

ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲಾದಗಿ ಜಿಲ್ಲೆಗೆ ಈಗಿನ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕಲಾದಗಿ ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು.

ತದನಂತರ ಕ್ರಿ.ಶ. 1956 ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು ಕರ್ನಾಟಕ ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು ಕರ್ನಾಟಕ ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ.

ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.

ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು.

ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು.

ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.

ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ.

ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ.

ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ.

ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ.

ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ.

ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.

ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು.

ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು.

ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ.

ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ.

ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.

ಚಾರಿತ್ರಿಕ ಘಟನೆಗಳು[ಬದಲಾಯಿಸಿ]

  • 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ.
  • 1884 - ರೈಲು ಚಾಲನೆ ಪ್ರಾರಂಭವಾಯಿತು.
  • 1884 - ಜಿಲ್ಲಾ ಕೇಂದ್ರ ಕಲಾದಗಿಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು.
  • 1910 - ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಯಿತು.
  • 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು.
  • 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು.
  • 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ.
  • 1964 - ಆಲಮಟ್ಟಿ ಆಣೆಕಟ್ಟುಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು.
  • 1982 - ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಸ್ಥಾಪನೆಯಾಯಿತು.
  • 1984 - ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ.
  • 1986 - ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ.
  • 1987 - ಆಲಮಟ್ಟಿಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ.
  • 1991 - ಹಿಟ್ಟಿನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ.
  • 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು.
  • 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ ಬಾಗಲಕೋಟ ಜಿಲ್ಲೆಯನ್ನು ಮಾಡಲಾಯಿತು.
  • 1999 - ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಸ್ಥಾಪನೆಯಾಯಿತು.
  • 2003 - ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು.
  • 2004 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ.
  • 2004 - ಅಮೇರಿಕಾಮೈಕ್ರೋಸಾಪ್ಟ್ ಕಂಪನಿಯ ಒಡೆಯ ಬೀಲ್ ಗೇಟ್ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ.
  • 2005 - ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ.
  • 2006 - ವಿಜಯಪುರ - ಬಾಗಲಕೋಟ ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ.
  • 2008 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ.
  • 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ.
  • 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ.
  • 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ.
  • 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ.
  • 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ.
  • 2013 - ನಗರ ಬಸ್ ಸೇವೆ ಪ್ರಾರಂಭವಾಯಿತು.
  • 2013 - ಕರ್ನಾಟಕ ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ.
  • 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ.
  • 2013 - ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ.
  • 2018 - ಕರ್ನಾಟಕ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ.

ಧಾರ್ಮಿಕ ಕೇಂದ್ರಗಳು[ಬದಲಾಯಿಸಿ]

ಡಾ.ಎಂ. ಸಿ. ಮೋದಿ
  • ಅರಕೇರಿ - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ
  • ಆಲಮೇಲ - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ.
  • ಬಬಲಾದಿ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ.
  • ಹಣಮಸಾಗರ - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ.
  • ಬಬಲೇಶ್ವರ - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ.
  • ಬಸವನ ಬಾಗೇವಾಡಿ - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
  • ಬಂಥನಾಳ - ಬಂಥನಾಳ ಶಿವಯೋಗಿಗಳ ಸಂಗನ ಬಸವೇಶ್ವರ ಮಠವಿದೆ.
  • ಬಸರಕೋಡ - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ.
  • ದೇವರ ಗೆಣ್ಣೂರ - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ.
  • ಚಡಚಣ - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.
  • ಹೊರ್ತಿ - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ
  • ಹಲಗಣಿ - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ.
  • ಕಂಬಾಗಿ - ಶ್ರೀ ಹನುಮಾನ ದೇವಾಲಯವಿದೆ.
  • ಯಲಗೂರ - ಶ್ರೀ ಹನುಮಾನ ದೇವಾಲಯವಿದೆ.
  • ಇಂಚಗೇರಿ - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ.
  • ಇಂಗಳೇಶ್ವರ - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
  • ಕಾಖಂಡಕಿ - ದಾಸ ಸಾಹಿತ್ಯದ ಮಹಿಪತಿದಾಸರ ವೃಂದಾವನವಿದೆ.
  • ಲಚ್ಯಾಣ - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ.
  • ನಾಲತವಾಡ - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ.
  • ತಾಳಿಕೋಟೆ - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ.
  • ಉಪ್ಪಲದಿಣ್ಣಿ - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ.
  • ಬೆಳ್ಳುಬ್ಬಿ - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ.
  • ಅಥರ್ಗಾ - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ.
  • ಕನ್ನೂರ - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ.
  • ಸಾರವಾಡ - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ.
  • ಸೋಮದೇವರಹಟ್ಟಿ - ಪ್ರಸಿದ್ಧ ದುರ್ಗಾದೇವಿಯ ದೇವಾಲಯವಿದೆ.
  • ಆಸಂಗಿಹಾಳ - ಶ್ರೀ ಆರೂಢ ಆಶ್ರಮವಿದೆ.
  • ದೇವರನಾವದಗಿ - ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ.
  • ಜಿಗಜೇವಣಿ - ಶ್ರೀ ಕೌದೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.

ಭೌಗೋಳಿಕ[ಬದಲಾಯಿಸಿ]

ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು ಕಲಬುರಗಿ ಜಿಲ್ಲೆ (ಪುರ್ವಕ್ಕೆ), ರಾಯಚೂರು ಜಿಲ್ಲೆ (ದಕ್ಷಿಣಕ್ಕೆ), ಬಾಗಲಕೋಟೆ ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), ಬೆಳಗಾವಿ ಜಿಲ್ಲೆ (ಪಶ್ಚಿಮಕ್ಕೆ), ಮಹಾರಾಷ್ಟ್ರಸಾಂಗಲಿ ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು ಸೊಲ್ಲಾಪುರ ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ.

ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಕೃಷ್ಣಾ ಮತ್ತು ಭೀಮಾ.

ವಿಜಯಪುರ ಪಟ್ಟಣವು

ಈ ಜಿಲ್ಲೆಯು ಕರ್ನಾಟಕ ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ , 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ , 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ.

ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ.

ಹವಾಮಾನ
  • ಬೇಸಿಗೆ-ಚಳಿಗಾಲ - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ ಕಾಲ - 35 °C - 42 °C.
  • ಚಳಿಗಾಲ ಮತ್ತು ಮಳೆಗಾಲ - 18 °C - 32 °C.
  • ಮಳೆಗಾಲ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ.
ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
ತಿಂಗಳು ಜನವರಿ ಫೆಬ್ರುವರಿ ಮಾರ್ಚ ಏಪ್ರಿಲ್ ಮೇ ಜೂನ್ ಜೂಲೈ ಆಗಷ್ಟ ಸೆಪ್ಟೆಂಬರ ಅಕ್ಟೋಬರ ನವೆಂಬರ ಡಿಸೆಂಬರ ಸರಾಸರಿ
ಹೆಚ್ಚು *C 30 34 37 39 39 34 31 31 32 32 31 30 33
ಕಡಿಮೆ *C 16 18 22 25 25 23 22 21 22 20 18 16 21
ಮಳೆ ಮಿಮಿ 8.6 3.1 6.1 10.1 16.2 61.1 77.1 74.5 62.1 51.6 27.2 3.5 400.5
ಮಳೆ ಮಾಪನ ಕೇಂದ್ರಗಳು

ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ.

ಪ್ರವಾಸ[ಬದಲಾಯಿಸಿ]

ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು
ಬಸವಣ್ಣ

ವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ.

ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್.

ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು.

ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು
ಗೋಲ್ ಗುಂಬಜ್

ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).

ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು.

ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ.

ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ.

ಇಬ್ರಾಹಿಮ್ ರೋಜಾ

ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.

ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ.

ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ.

ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)

ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ , 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ.

ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ.

ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು.

ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ.

ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ.

ಜುಮ್ಮಾ ಮಸೀದಿ

ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು.

ತಾಳಿಕೋಟೆಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ.

ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು.

ಬಾರಾ ಕಮಾನ್

ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ , ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ.

ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ.

ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಅಸರ ಮಹಲ್

ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು.

ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ.

ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಗಗನ್ ಮಹಲ್

ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು , 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು.

ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು.

ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ.

ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ.

ಸಂಗೀತ ಮಹಲ್

ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ.

ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ ತೊರವಿ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ.

ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ.

ಉಪ್ಪಲಿ ಬುರಜ್

ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ.

ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು.

ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ.

ಚಾಂದ್ (ತಾಜ್) ಬೌಡಿ

ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು.

ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು.

ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ.

ಜೋಡ ಗುಮ್ಮಟ

ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ.

ಮೆಹತರ ಮಹಲ್

ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಸಾತ್ ಮಂಜಿಲ್

ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ.

ಜಲ ಮಂಜಿಲ್

ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು.

ಆನಂದ ಮಹಲ್

ಆನಂದ ಮಹಲನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ.

ಪ್ರಾಚ್ಯ ವಸ್ತು ಸಂಗ್ರಹಾಲಯ

ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಆಕರ್ಷಕ ವಾಸ್ತುಶಿಲ್ಪವಿರುವ ಕಟ್ಟಡವಿದೆ. ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಿರುವ ಈ ಕಟ್ಟಡ, ಎದುರಿನ ಗುಮ್ಮಟ ನೋಡಿ ಬಂದವರನ್ನು ತನ್ನತ್ತ ಸೆಳೆಯುತ್ತದೆ. ಎರಡು ಬೃಹತ್ ಕಂಬಗಳ ನಡುವೆ ನಿಲ್ಲಿಸಿದ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ಇಂಡೋಸಾರ್ಸೆನಿಕ್ ಶೈಲಿಯ ಪ್ರಮುಖದ್ವಾರವಿದೆ. ಅದೇ ಆಕಾರದ ಏಳು ಕಿಟಕಿಗಳಿವೆ. ಇದೇ ನಖ್ಖರ್ ಖಾನ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯ.

1892ರಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಒಂದೂಕಾಲು ಶತಮಾನ ಪೂರೈಸಿದೆ. ಕ್ರಿ.ಶ 6ನೇ ಶತಮಾನದಿಂದ 18ನೇ ಶತಮಾನದ ನಡುವಿನ ಕಾಲಘಟ್ಟದ ವಸ್ತುಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಈ ಸಂಗ್ರಹಾಲಯ, ಗೋಳಗುಮ್ಮಟದಷ್ಟೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ.

ಮ್ಯೂಸಿಯಂನ ಪ್ರವೇಶ ದ್ವಾರದ ಅಕ್ಕ–ಪಕ್ಕದಲ್ಲಿ ಆರು ಚಿಕ್ಕ–ಡೊಡ್ಡ ತೋಪುಗಳನ್ನಿಟ್ಟಿದ್ದಾರೆ. ತೋಪಿಗೆ ಬಳಸುತ್ತಿದ್ದ ಕಲ್ಲು ಗುಂಡುಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಮುಖ್ಯದ್ವಾರ ದಾಟಿಕೊಂಡು ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲಿ ನೆಲಮಾಳಿಗೆಗೆ ಹೋಗುವ ಮೆಟ್ಟಿಲು ಕಾಣಿಸುತ್ತದೆ. ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತುಗಳಲ್ಲಿ 8 ಗ್ಯಾಲರಿಗಳಿವೆ. ಅದರಲ್ಲಿ ಮೂರು ಗ್ಯಾಲರಿ ನೆಲಮಹಡಿಯಲ್ಲಿ ಉಳಿದ ಐದು ಗ್ಯಾಲರಿ ಮೊದಲ ಮಹಡಿಯಲ್ಲಿವೆ.

11ನೇ ಶತಮಾನದ ಅಷ್ಟಭುಜಾಕಾರದ ನಟರಾಜನ ಭಗ್ನ ಪ್ರತಿಮೆ, ಶಿವ ತನ್ನ ಗಣಗಳ ಜತೆ ನರ್ತಿಸುತ್ತಿರುವ ಕಲ್ಲಿನ ಬಾಗಿಲು ತೋರಣ, ಕಹಳೆ ಊದುತ್ತಿರುವ, ಮದ್ದಲೆ ಬಾರಿಸುತ್ತಿರುವ ಉಬ್ಬು ಶಿಲ್ಪಗಳಿವೆ. ಏಳು–ಎಂಟನೇ ಶತಮಾನದ ವೀರಗಲ್ಲುಗಳು, ಶಾಸನಗಳು, ಸಮಭಂಗಿಯಲ್ಲಿರುವ ಅಪರೂಪದ ಕೇಶವ, ವೀರಭದ್ರ, 8ನೇ ಶತಮಾನದ ಐಹೊಳೆಯಲ್ಲಿ ದೊರೆತ ಕಲ್ಲಿನ ಗಣೇಶ, 14ನೇ ಶತಮಾನದ ಪಾರ್ಶ್ವನಾಥ ವಿಗ್ರಹಗಳು ಮ್ಯೂಸಿಯಂನ ಪ್ರಮುಖ ಆಕರ್ಷಣೆ.

ನೆಲಮಹಡಿಯ ಮಧ್ಯದಲ್ಲಿ ಕ್ರಿ.ಶ. ಆರನೇ ಶತಮಾನದಲ್ಲಿ ಮಂಗಳೇಶ ನಿರ್ಮಿಸಿದ ಮಹಾಕೂಟದಲ್ಲಿ ದೊರೆತ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಅಳಿಯ ರಾಮರಾಯನ ಕಲ್ಲಿನ ಶಿರೋ ಭಾಗವನ್ನು ಇಲ್ಲಿಡಲಾಗಿದೆ. ಕಲ್ಲಿನ ಮೊಸಳೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ.

11–12ನೇ ಶತಮಾನದಲ್ಲಿ ಅಗ್ರಹಾರ ಸಾಲೋಟಗಿ ವಿದ್ಯಾಲಯಕ್ಕೆ ದಾನಕೊಟ್ಟ ಸ್ತಂಭ ಶಾಸನವಿದ್ದು, ಇದರ ಮೂರು ದಿಕ್ಕುಗಳಲ್ಲಿ ಸಂಸ್ಕೃತ ಲಿಪಿ, ಕೆಳಭಾಗದಲ್ಲಿ ಕನ್ನಡ ಲಿಪಿಯಿದೆ. 13ನೇ ಶತಮಾನದ ಕನ್ನಡ ಶಾಸನವೊಂದರಲ್ಲಿ ವಿಜಯಪುರ ಉಲ್ಲೇಖವಿದೆ. ಕ್ರಿ.ಶ 17ನೇ ಶತಮಾನದ ಕಲಾತ್ಮಕ ಹಸ್ತ ಪ್ರತಿಯನ್ನು ಹೊಂದಿರುವ ಅರೇಬಿಕ್–ಪರ್ಶಿಯನ್ ಲಿಪಿಗಳ ಶಾಸನ ಶಿಲೆಗಳಿವೆ. ಪುಷ್ಪಗಳ ವಿನ್ಯಾಸ ಹೊಂದಿರುವ ಕಲ್ಲಿನ ಜಾಲಂದ್ರಗಳು, ಕಲ್ಲಿನ ಸರಪಳಿಗಳು ಆಕರ್ಷಿಸುತ್ತವೆ.

ಮೂವತ್ತೆರಡು ಮೆಟ್ಟಿಲುಗಳನ್ನೇರಿ ಮೊದಲ ಮಹಡಿ ತಲುಪಿದರೆ, ಆದಿಲ್‌ ಶಾಹಿ ಅರಸರ ಕಲೆ, ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಬಹುತೇಕ ಪ್ರಾಚ್ಯ ವಸ್ತುಗಳ ದರ್ಶನ ಲಭ್ಯ. ಅರಸರು ಬಳಸುತ್ತಿದ್ದ ನಿತ್ಯೋಪಯೋಗಿ ವಸ್ತುಗಳು, ಸುಲ್ತಾನರು ತೊಡುತ್ತಿದ್ದ ನಿಲುವಂಗಿ, ಕಠಾರಿ, ಭರ್ಜಿ, ರಾಜರು–ರಾಣಿಯರ ಭಾವಚಿತ್ರ, ಸೂಫಿ ಸಂತರ ಭಾವಚಿತ್ರದ ಚಿತ್ರಕಲೆಯೂ ಕಾಣಿಸುತ್ತದೆ.

ಚೀನಿ ಮಣ್ಣಿನ ತಟ್ಟೆ, ಬಟ್ಟಲು, ಹೂಜಿ, ಆದಿಲ್‌ ಶಾಹಿ ಸುಲ್ತಾನರು ಭೋಜನಕ್ಕೂ ಮುನ್ನ ಸೆಲಡನ್‌ ಪಾತ್ರೆಯಲ್ಲಿ ಆಹಾರ ಪರೀಕ್ಷಿಸುತ್ತಿದ್ದ ಪರಿ, ಅವರ ಕಾಲದ ತಂತ್ರಜ್ಞಾನವನ್ನು ಪರಿಚಯಿಸಲಿದೆ.

ಜತೆಗೆ ಆ ಕಾಲದಲ್ಲೇ ಚೀನಾದೊಂದಿಗೆ ಹೊಂದಿದ್ದ ರಾಜತಾಂತ್ರಿಕ–ವ್ಯವಹಾರಿಕ ಸಂಬಂಧವನ್ನು ಈ ವಸ್ತುಗಳು ಬಿಂಬಿಸುತ್ತವೆ.

17ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪನವಿರುವ ವರ್ಣಚಿತ್ರ, ದಖನಿ ಶೈಲಿಯ ಚಿಕಣಿ ಚಿತ್ರಗಳಲ್ಲಿ ಚಾಂದ್‌ಬೀಬಿ, ರಂಭಾವತಿ, ಔರಂಗಜೇಬನ ಪುತ್ರಿ ಜೈಬುನ್ನೀಸಾ ಚಿತ್ರಗಳಿವೆ. ಆದಿಲ್‌ಶಾಹಿ ಅರಸರು, ಸೂಫಿ ಸಂತರ ಚಿತ್ರಗಳು ಜತೆಗೆ ನಾಣ್ಯಗಳನ್ನು ಜೋಡಿಸಿದ್ದಾರೆ. ಹಳದಿ, ಕೆಂಪು, ನೀಲಿ ವರ್ಣಗಳಲ್ಲಿರುವ ಕುರಾನ್‌ನ ಹಸ್ತ ಪ್ರತಿಗಳು ಗಮನಸೆಳೆಯುತ್ತವೆ. ಇದರಲ್ಲಿ ಕೆಲ ಅಕ್ಷರಗಳಿಗೆ ಚಿನ್ನ ಲೇಪಿತವಾಗಿದೆ. ಇವು 13 ರಿಂದ 18ನೇ ಶತಮಾನದ ಅವಧಿಯಲ್ಲಿ ರಚನೆಯಾಗಿರುವಂಥದ್ದು ಎಂಬುದನ್ನು ಮ್ಯೂಸಿಯಂನ ದಾಖಲೆ ತಿಳಿಸುತ್ತದೆ.

ಐತಿಹಾಸಿಕ ಮಹತ್ವವುಳ್ಳ ಗದ್ಯ–ಪದ್ಯಗಳ ಗ್ರಂಥಗಳು, ಶೃಂಗಾರ ಕಾವ್ಯಗಳು, ರಾಜಮುದ್ರೆಯಿರುವ ಸನ್ನದ್‌, ಫರ್ಮಾನ್, ಪರ್ಶಿಯಾದ ರತ್ನಗಂಬಳಿ, ವಿಶಿಷ್ಟ ತಂತ್ರಜ್ಞಾನ ಒಳಗೊಂಡ ಬೀಗ, ಬಿದರಿ ಅಲಂಕೃತ ಪಾತ್ರೆ, ಅಫ್ಜಲ್‌ಖಾನ್‌ ಬಳಸಿದ್ದ ಎನ್ನಲಾದ ಏಳು ಕೆ.ಜಿ. ತೂಕದ 3.9 ಅಡಿ ಉದ್ದದ ಖಡ್ಗ ಸೇರಿದಂತೆ ಇನ್ನಿತರೆ ಅಪರೂಪದ ವಸ್ತುಗಳನ್ನು ಭದ್ರವಾದ ಗಾಜಿನ ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ.

ಮ್ಯೂಸಿಯಂ ಪ್ರಾರಂಭದ ಹಿಂದಿನ ಕಥೆ : ವಿಜಯಪುರ ಜಿಲ್ಲೆಯ ಪುರಾತನ ಐತಿಹ್ಯ, ವಸ್ತುಗಳ ಅಧ್ಯಯನ ಆರಂಭಿಸಿದ ಇಂಗ್ಲೆಂಡ್‌ನ ಡಾ.ಜೆಮ್ಸ್‌ ಬರ್ಗೇಸ್‌, ಹೆನ್ರಿ ಕಸಿನ್ಸ್ ಇಲ್ಲಿನ ಆನಂದ ಮಹಲ್ ಹಿಂಭಾಗದ ಚಿಕ್ಕ ಕಟ್ಟಡದಲ್ಲಿ, ಆ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 1892ರಿಂದ ಆರಂಭವಾದ ಈ ವಸ್ತು ಸಂಗ್ರಹ ಕೆಲಸ, ಕೊನೆಗೆ ಪ್ರಾಚ್ಯ ವಸ್ತು ಸಂಗ್ರಹಾಲಯ (ಮ್ಯೂಸಿಯಂ)ವಾಯಿತು. ಮ್ಯೂಸಿಯಂ ಚಾಲನೆಗೂ ಕಾರಣವಾಯಿತು.

ಈ ಅವಧಿಯಲ್ಲೇ ಬ್ರಿಟಿಷರು ಆಗಿನ ಕಲಾದಗಿ ಜಿಲ್ಲಾ ಕೇಂದ್ರವನ್ನು ವಿಜಯಪುರಕ್ಕೆ ಸ್ಥಳಾಂತರಿಸಿದರು. ಸರ್ಕಾರಿ ಕಚೇರಿಗಳ ಬಳಕೆಗಾಗಿ ಆದಿಲ್‌ಶಾಹಿ ಅರಸರು ತಮ್ಮ ಆಡಳಿತದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಮತ್ತು ಅವುಗಳನ್ನು ಬಳಸಲು ಮುಂದಾದರು. ಈ ಸಂದರ್ಭದಲ್ಲಿ ದೊರೆತ ಅಪರೂಪದ ವಸ್ತುಗಳ ಸಂಗ್ರಹವೇ ಈ ವಸ್ತು ಸಂಗ್ರಹಾಲಯ. ಆದರೆ, ಜಾಗದ ಕೊರತೆ ಕಾಡಿದ್ದರಿಂದ, ಮೊಹಮ್ಮದ್ ಆದಿಲ್‌ಶಾಹಿ ಗೋಳಗುಮ್ಮಟದ ಮುಂಭಾಗ ಕ್ರಿ.ಶ.1631ರಲ್ಲೇ ನಿರ್ಮಿಸಿದ್ದ ನಖ್ಖರ್ ಖಾನ/ನಗರ ಖಾನ ಕಟ್ಟಡಕ್ಕೆ ಅವಶೇಷಗಳನ್ನು 1912ರಲ್ಲಿ ಸ್ಥಳಾಂತರಿಸಿದರು.

ಬೇಸಿಗೆ ಅರಮನೆ, ಕುಮಟಗಿ

ವಿಜಯಪುರ ನಗರದಿಂದ 20 ಕಿಮೀ ದೂರದ ಕುಮಟಗಿ ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ.

ವಿಜಯಪುರ ಕೋಟೆ

ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ.

ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ.

ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು.

ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ.

ನೋಡಬೇಕಾದ ಸ್ಥಳಗಳು

ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ.

ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು
ಶಿವಗಿರಿ (ಶಿವನ ಬೃಹತ ಪ್ರತಿಮೆ)
ಶಿವನ ವಿಗ್ರಹ

ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ.

ಇದನ್ನು ಶಿವಮೊಗ್ಗ ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ.

ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ.

ಶ್ರೀ ಸಿದ್ದೇಶ್ವರ ದೇವಾಲಯ

ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ.

ತೊರವಿ ಶ್ರೀ ನರಸಿಂಹ ದೇವಾಲಯ

ವಿಜಯಪುರ ನಗರದ ಹೊರಭಾಗದ ತೊರವಿ ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. ಕುಮಾರ ವಾಲ್ಮೀಕಿಯು ಇದೇ ದೇವಾಲಯದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವೆ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ.

ತೊರವಿ ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, ಕುಮಾರ ವಾಲ್ಮೀಕಿ ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು ತೊರವೆ ರಾಮಾಯಣವನ್ನು ರಚಿಸಿದ ಎಂಬ ಪ್ರತೀತಿ ಇದೆ.

ಸಹಸ್ರ ಫಣಿ ಜೈನಮಂದಿರ

ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ ಸಹಸ್ರಫಣಿ ಪಾರ್ಶ್ವನಾಥ ಬಸದಿ ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ.

ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ.

ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ

ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು.

ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು

ಜನಸಂಖ್ಯೆ[ಬದಲಾಯಿಸಿ]

ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ.

ಕರ್ನಾಟಕದ ಜಿಲ್ಲೆಗಳು
ಕರ್ನಾಟಕದ ಜಿಲ್ಲೆಗಳು
ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ
ಕ್ರ.ಸಂ. ವಿವರಣೆ 2011 2001
1 ಒಟ್ಟು ಜನಸಂಖ್ಯೆ 21,77,331 18,06,918
2 ಪುರುಷರು 11,11,022 9,26,424
3 ಮಹಿಳೆಯರು 10,66,309 8,80,494
4 ಜನಸಂಖ್ಯಾ ಬೆಳವಣಿಗೆ 20.50% 17.51%
5 ಪ್ರದೇಶ(ಚ.ಕಿ.ಮೀ) 10,498 10,498
6 ಜನಸಾಂದ್ರತೆ/(ಚ.ಕಿ.ಮೀ) 207 172
7 ಕರ್ನಾಟಕ ಜನಸಂಖ್ಯೆಯ ಅನುಪಾತ 3.56% 3.42%
8 ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) 960 950
9 ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) 931 928
10 ಸರಾಸರಿ ಸಾಕ್ಷರತೆ 67.15% 57.01%
11 ಪುರುಷರ ಸಾಕ್ಷರತೆ 77.21% 69.94%
12 ಮಹಿಳಾ ಸಾಕ್ಷರತೆ 56.72% 43.47%
13 ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) 3,18,406 2,86,831
14 ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) 1,64,856 1,48,750
15 ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) 1,53,550 1,38,081
16 ಅಕ್ಷರಸ್ಥರು 12,48,268 8,66,561
17 ಪುರುಷ ಅಕ್ಷರಸ್ಥರು 7,30,566 5,43,869
18 ಮಹಿಳಾ ಅಕ್ಷರಸ್ಥರು 5,17,702 3,22,692
19 ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) 14.62% 15.87%
20 ಗಂಡು ಮಕ್ಕಳ ಪ್ರಮಾಣ(1-6 ವರ್ಷ) 14.84% 16.06%
21 ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) 14.40% 15.68%
ಸಾಕ್ಷರತೆ

ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.

ಕ್ರ.ಸಂ. ವಿವರಣೆ 2011 2001
1 ಒಟ್ಟು ಜನಸಂಖ್ಯೆ 2,177,331 1,806,918
2 ಪುರುಷರು 1,111,022 926,424
3 ಮಹಿಳೆಯರು 1,066,309 880,494
4 ಪ್ರದೇಶ (ಚ. ಕಿ.ಮೀ) 10,498 10,498
5 ಜನಸಾಂದ್ರತೆ /(ಚ. ಕಿ.ಮೀ) 207 172
6 ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ 3.56% 3.42%
7 ಸರಾಸರಿ ಸಾಕ್ಷರತೆ 67.15% 57.01%
8 ಪುರುಷರ ಸಾಕ್ಷರತೆ 77.21% 69.94%
9 ಮಹಿಳಾ ಸಾಕ್ಷರತೆ 56.72% 43.47%
10 ಅಕ್ಷರಸ್ಥರು 1,248,268 866,561
11 ಪುರುಷ ಅಕ್ಷರಸ್ಥರು 730,566 543,869
12 ಮಹಿಳಾ ಅಕ್ಷರಸ್ಥರು 517,702 322,692
ಧರ್ಮಗಳು
ವಿಜಯಪುರ ಜಿಲ್ಲೆಯಲ್ಲಿರುವ ಧರ್ಮಗಳು
ಧರ್ಮ ಪ್ರತಿಶತ
ಹಿಂದೂ
  
65%
ಮುಸ್ಲಿಂ
  
29%
ಜೈನ
  
4.6%
ಕ್ರೈಸ್ತ
  
0.6%
ಇತರೆ
  
0.4%

ವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.

ಕ್ರ.ಸಂ. ಧರ್ಮ ಪ್ರತಿಶತ
1 ಹಿಂದೂ 82.07%
2 ಮುಸ್ಲಿಂ 16.97%
3 ಜೈನ 0.40%
4 ಕ್ರೈಸ್ತ 0.11 %
5 ಇತರೆ 0.45%

ಸಾಂಸ್ಕೃತಿಕ[ಬದಲಾಯಿಸಿ]

ಲಂಬಾಣಿ ಜನಾಂಗದ ಮಹಿಳೆ
ಉತ್ತರ ಕರ್ನಾಟಕದ ಊಟ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಯಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಆಹಾರ ಪದ್ಧತಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಭಾಷೆಗಳು

ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ.

ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಕಲೆ

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಆರ್ಥಿಕತೆ[ಬದಲಾಯಿಸಿ]

ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ಹಣಕಾಸು

ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ ಬಸವನ ಬಾಗೇವಾಡಿ ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ.

ವ್ಯಾಪಾರ

ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.

ಉದ್ಯೋಗ

ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಬ್ಯಾಂಕುಗಳು[ಬದಲಾಯಿಸಿ]

ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ

ರಾಷ್ತ್ರೀಕೃತ ಬ್ಯಾಂಕುಗಳು

ಖಾಸಗಿ ಬ್ಯಾಂಕುಗಳು

ಸಹಕಾರಿ ಬ್ಯಾಂಕುಗಳು

ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು

* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)

ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ.

ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು

ಖಜಾನೆ ಕಚೇರಿಗಳು

ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ.

ಆಡಳಿತ[ಬದಲಾಯಿಸಿ]

ವಿಜಯಪುರ ಜಿಲ್ಲೆಯೂ ಕರ್ನಾಟಕದ ಬೆಳಗಾವಿ ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಸಿಂದಗಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.

ವಿಜಯಪುರ ಜಿಲ್ಲೆಯ ತಾಲೂಕುಗಳು
ವಿಜಯಪುರ ಜಿಲ್ಲೆಯ ನಕಾಶೆ
ವಿಜಯಪುರ ಜಿಲ್ಲೆಯ ತಾಲೂಕುಗಳ ನಕ್ಷೆ
ವಿಜಯಪುರ ನಕಾಶೆ

ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ.

ಹೊಸ ತಾಲ್ಲೂಕುಗಳು

ಜಿಲ್ಲೆ ತಾಲ್ಲೂಕು ನಗರ ಸ್ಥಿತಿ
ವಿಜಯಪುರ
ವಿಜಯಪುರ ಮಹಾನಗರ ಪಾಲಿಕೆ
ಇಂಡಿ ಪುರ ಸಭೆ
ಮುದ್ದೇಬಿಹಾಳ ಪುರ ಸಭೆ
ಸಿಂದಗಿ ಪುರ ಸಭೆ
ಬಸವನ ಬಾಗೇವಾಡಿ ಪುರ ಸಭೆ
ತಾಳಿಕೋಟಿ ಪುರ ಸಭೆ
ಬಬಲೇಶ್ವರ ಪಟ್ಟಣ ಪಂಚಾಯಿತಿ
ತಿಕೋಟಾ ಪಟ್ಟಣ ಪಂಚಾಯಿತಿ
ಕೊಲ್ಹಾರ ಪಟ್ಟಣ ಪಂಚಾಯಿತಿ
ನಿಡಗುಂದಿ ಪಟ್ಟಣ ಪಂಚಾಯಿತಿ
ದೇವರ ಹಿಪ್ಪರಗಿ ಪಟ್ಟಣ ಪಂಚಾಯಿತಿ
ಚಡಚಣ ಪಟ್ಟಣ ಪಂಚಾಯಿತಿ
ಆಲಮೇಲ ಪಟ್ಟಣ ಪಂಚಾಯಿತಿ

ಪಟ್ಟಣ ಪಂಚಾಯತಿಗಳು

ಹಳ್ಳಿಗಳು[ಬದಲಾಯಿಸಿ]

ತಾಲ್ಲೂಕು ಹಳ್ಳಿಗಳ ಸಂಖ್ಯೆ
 ಇಂಡಿ  134
 ಮುದ್ದೇಬಿಹಾಳ  155
 ವಿಜಯಪುರ  132
 ಸಿಂದಗಿ  151
 ಬಸವನ ಬಾಗೇವಾಡಿ  126
 ಒಟ್ಟು  698

ವಿಜಯಪುರ ಜಿಲ್ಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ.

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಗ್ರಾಮ ಪಂಚಾಯತಿಗಳು
ತಾಲ್ಲೂಕು ಗ್ರಾಮ ಪಂಚಾಯತಿಗಳ ಸಂಖ್ಯೆ
 ಇಂಡಿ  38
 ಚಡಚಣ  13
 ಮುದ್ದೇಬಿಹಾಳ  20
 ತಾಳಿಕೋಟ  14
 ವಿಜಯಪುರ  17
 ತಿಕೋಟಾ  14
 ಬಬಲೇಶ್ವರ  17
 ಸಿಂದಗಿ  25
 ದೇವರ ಹಿಪ್ಪರಗಿ  14
 ಬಸವನ ಬಾಗೇವಾಡಿ  15
 ನಿಡಗುಂದಿ  8
 ಕೊಲ್ಹಾರ  8
 ಒಟ್ಟು  201

ಜಿಲ್ಲೆಯಲ್ಲಿ 201 ಗ್ರಾಮ ಪಂಚಾಯತಿಗಳಿವೆ.

ಚಡಚಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಬಬಲೇಶ್ವರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ತಿಕೋಟಾ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ನೆಮ್ಮದಿ (ಹೋಬಳಿ) ಕೇಂದ್ರಗಳು
ವಿಜಯಪುರ ಪ್ರವಾಸಿ ಸ್ಥಳಗಳು

ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ.

ನಾಡ ಕಚೇರಿಗಳು
ಶ್ರೀ ಹನುಮಾನ ಮೂರ್ತಿ, ಯಲಗೂರ
ಕಂದಾಯ ಕಚೇರಿಗಳು

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ[ಬದಲಾಯಿಸಿ]

ತಾಲ್ಲೂಕು ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ
 ಇಂಡಿ  33
 ಮುದ್ದೇಬಿಹಾಳ  20
 ವಿಜಯಪುರ  33
 ಸಿಂದಗಿ  30
 ಬಸವನ ಬಾಗೇವಾಡಿ  28
 ಒಟ್ಟು  144

ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ತಾಲ್ಲೂಕು ಪಂಚಾಯತಿಗಳು

ತಾಲ್ಲೂಕು ಪಂಚಾಯತ, ಇಂಡಿ

ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ತಾಲ್ಲೂಕು ಪಂಚಾಯತ, ವಿಜಯಪುರ

ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ.

ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ತಾಲ್ಲೂಕು ಪಂಚಾಯತ, ಸಿಂದಗಿ

ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ

ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ ಮನಗೂಳಿ ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ.

ತಾಲ್ಲೂಕು ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ
 ಇಂಡಿ  10
 ಮುದ್ದೇಬಿಹಾಳ  6
 ವಿಜಯಪುರ  10
 ಸಿಂದಗಿ  9
 ಬಸವನ ಬಾಗೇವಾಡಿ  8
 ಒಟ್ಟು  43

ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಿಕೋಟಾ, ಕನಮಡಿ, ಅರಕೇರಿ, ಕಾಖಂಡಕಿ, ಬಬಲೇಶ್ವರ, ಮಮದಾಪುರ ಹಾಗೂ ಸಾರವಾಡ ಜಿಪಂ ಕ್ಷೇತ್ರಗಳಿವೆ. ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಣಗಿ, ನಾಗಠಾಣ ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕನ್ನೂರ ಜಿಪಂ ಕ್ಷೇತ್ರಗಳು ಸೇರಿವೆ.

ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ವಸತಿ ನಿಲಯಗಳು[ಬದಲಾಯಿಸಿ]

ಕೃಷ್ಣ ಗೋಪಾಲ ಜೋಶಿ

ವಿಜಯಪುರ ಜಿಲ್ಲೆಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ.

ವಸತಿ ನಿಲಯ ಸಂಖ್ಯೆ
 ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು  52
 ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು  12
 ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು  13
 ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು  24
 ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು  46
 ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು  5
 ಒಟ್ಟು  152

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ವಿಜಯಪುರ, ಅರ್ಜುಣಗಿ, ಹೊನವಾಡ, ಕಳ್ಳಕವಟಗಿ, ಬಿಜ್ಜರಗಿ, ನಿಡೋಣಿ, ಅರ್ಜುಣಗಿ, ಮಮದಾಪುರ, ತಿಕೋಟಾ, ನಾಗಠಾಣ, ಶಿವಣಗಿ, ಭುರಣಾಪುರ, ಕನ್ನೂರ, ಬೊಮ್ಮನಳ್ಳಿ, ಲೋಹಗಾಂವ, ಬಬಲೇಶ್ವರ, ಹೊನ್ನಳ್ಳಿ, ಐನಾಪುರ, ಕತಕನಹಳ್ಳಿ, ಬಾಬಾನಗರ, ಕಾಖಂಡಕಿ, ಕಗ್ಗೋಡ, ಹೊನ್ನುಟಗಿ.

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ವಿಜಯಪುರ, ತಿಕೋಟಾ, ನಾಗಠಾಣ, ಹೊನ್ನುಟಗಿ.

  • ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ

ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ
  • ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ
  • ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ
  • ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ
  • ಸತಿ ಸಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ
  • ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ
  • ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ
  • ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ
  • ಶ್ರೀ ಮಂಗಮ್ಮದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ
  • ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ
  • ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ
  • ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ
  • ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ
  • ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ

ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ಬಸವನ ಬಾಗೇವಾಡಿ, ಭೈರವಾಡಗಿ, ಗಣಿ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿ, ಕೂಡಗಿ, ಮನಗೂಳಿ, ನರಸಲಗಿ, ನಿಡಗುಂದಿ, ಸಾಸನೂರ, ಯರನಾಳ, ಹೆಬ್ಬಾಳ, ತೆಲಗಿ, ವಡವಡಗಿ, ಸಿದ್ದನಾಥ

ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ

ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ
  • ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ
  • ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ
  • ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ
  • ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ
  • ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ
  • ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ
  • ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ

ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ಅಥರ್ಗಾ, ಬರಡೋಲ, ಮಸಳಿ ಬಿ.ಕೆ., ತದ್ದೇವಾಡಿ, ಝಳಕಿ, ಚಡಚಣ, ಇಂಡಿ, ತಾಂಬಾ, ಸಾಲೋಟಗಿ, ತಡವಲಗಾ, ನಿಂಬಾಳ, ನಿವರಗಿ, ದೇವರ ನಿಂಬರಗಿ, ಹೊರ್ತಿ, ಹಲಸಂಗಿ, ಧೂಳಖೇಡ, ಲಚ್ಯಾಣ, ಹಿರೇಬೇವನೂರ, ಹಳಗುಣಕಿ, ಲೋಣಿ ಬಿ.ಕೆ.

ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ಇಂಡಿ, ಗೊಳಸಾರ, ಹೊರ್ತಿ,

ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ
  • ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ
  • ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ
  • ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ
  • ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ
  • ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ
  • ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ
  • ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ
  • ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ
  • ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ
  • ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ
  • ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ
  • ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ

ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ಮುದ್ದೇಬಿಹಾಳ, ಇಂಗಳಗೇರಿ, ನಾಲತವಾಡ, ತಾಳಿಕೋಟ, ತುಂಬಗಿ, ಢವಳಗಿ, ಕೊಡಗಾನೂರ, ಕೊಣ್ಣೂರ, ರಕ್ಕಸಗಿ, ಕೋಳೂರ

ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ಮುದ್ದೇಬಿಹಾಳ, ತಾಳಿಕೋಟ

ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ಬಾಲಕರ ವಸತಿ ನಿಲಯ, ಕುಂಟೋಜಿ

ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು

ಸಿಂದಗಿ, ಆಲಮೇಲ, ನಾಗಾವಿ ಬಿ.ಕೆ., ಬಾಗಲೂರ, ತಿಳಿಗೂಳ, ದೇವಣಗಾಂವ, ದೇವರಹಿಪ್ಪರಗಿ, ಗೋಲಗೇರಿ, ಗುಬ್ಬೇವಾಡ, ಕಡಣಿ, ಸುಂಗಠಾಣ, ಯಂಕಂಚಿ, ಬಳಗಾನೂರ, ಮಲಘಾಣ, ಬಿ.ಬಿ.ಇಂಗಳಗಿ, ಅಸ್ಕಿ, ಕಲಕೇರಿ, ಮುಳಸಾವಳಗಿ, ಹಿಟ್ಟಿನಹಳ್ಳಿ ಎಲ್.ಟಿ

ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು

ಸಿಂದಗಿ, ಆಲಮೇಲ, ಜಾಲವಾದ, ಹಿಟ್ಟಿನಹಳ್ಳಿ ಎಲ್.ಟಿ

ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು

  • ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ
  • ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ
  • ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ
  • ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ
  • ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ
  • ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ

ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು

ವಿಜಯಪುರ(7), ಬಸವನ ಬಾಗೇವಾಡಿ, ಕೂಡಗಿ, ಮುದ್ದೇಬಿಹಾಳ , ಸಿಂದಗಿ, ಇಂಡಿ(2), ನಿಡಗುಂದಿ, ತಾಳಿಕೋಟೆ.

  • ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ

ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು

  • ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ
  • ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಲೋಣಿ ಬಿ.ಕೆ.
  • ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ
  • ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ
  • ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ

ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು

ವಿಜಯಪುರ(9), ನಾಗಠಾಣ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ಮನಗೂಳಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ, ತಾಳಿಕೋಟ, ಇಂಡಿ, ಝಳಕಿ, ಚಡಚಣ, ತಾಂಬಾ, ಸಿಂದಗಿ, ದೇವರಹಿಪ್ಪರಗಿ, ಆಲಮೇಲ.

ಗ್ರಂಥಾಲಯಗಳು

ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ.

ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ.

ತಾಲ್ಲೂಕು ದೂರವಾಣಿ ವಿನಿಮಯ ಕೇಂದ್ರಗಳ ಸಂಖ್ಯೆ
 ಇಂಡಿ  23
 ಮುದ್ದೇಬಿಹಾಳ  14
 ವಿಜಯಪುರ  25
 ಸಿಂದಗಿ  15
 ಬಸವನ ಬಾಗೇವಾಡಿ  22
 ಒಟ್ಟು  144

ದೂರವಾಣಿ ವಿನಿಮಯ ಕೇಂದ್ರಗಳು

ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ.

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು[ಬದಲಾಯಿಸಿ]

ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ.

ಉಪ ಮತ್ತು ಶಾಖಾ ಅಂಚೆ ಕಚೇರಿಗಳು

ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು

ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು

ಬಬಲೇಶ್ವರ - 586113

ಕನ್ನೂರ - 586119

ಸಾರವಾಡ - 586125

ಶಿವಣಗಿ - 586127

ಅಗರಖೇಡ - 586111

ಅಥರ್ಗಾ - 586112

ಢವಳಗಿ - 586116

ಹೊರ್ತಿ - 586117

ಕಲಕೇರಿ - 586118

ಕೊರವಾರ - 586120

ಮೊರಟಗಿ - 586123

ನಾಲತವಾಡ - 586124

ಸಿಂದಗಿ - 586128

ತಂಗಡಗಿ- 586129

ತಿಕೋಟಾ- 586130

ಆಲಮೇಲ - 586202

ಬಸವನ ಬಾಗೇವಾಡಿ - 586203

ಬರಡೋಲ - 586204

ಚಡಚಣ - 586205

ಹೂವಿನ ಹಿಪ್ಪರಗಿ - 586208

ಕೊಲ್ಹಾರ - 586210

ಲಚ್ಯಾಣ - 586211

ಮುದ್ದೇಬಿಹಾಳ - 586212

ನಿಡಗುಂದಿ - 586213

ತಾಳಿಕೋಟಿ - 586214

ತಾಂಬಾ - 586215

ತೆಲಗಿ - 586216

ಸಾಲೋಟಗಿ - 586217

ಬಿಜ್ಜರಗಿ - 586114 - ಗೋಣಸಗಿ, ಹುಬನೂರ, ಕನಮಡಿ, ಸೋಮದೇವರಹಟ್ಟಿ, ಬಾಬಾನಗರ

ಕೂಡಗಿ - 586121 - ಕಲಗುರ್ಕಿ, ಮಲಘಾಣ, ಮಸೂತಿ, ತಳೇವಾಡ

ಮನಗೂಳಿ - 586122 - ನಂದಿಹಾಳ, ಯರನಾಳ, ಹತ್ತರಕಿಹಾಳ, ಹಿಟ್ಟಿನಹಳ್ಳಿ, ಜುಮನಾಳ

ದೇವಣಗಾಂವ - 586206 - ಬೊಮ್ಮನಹಳ್ಳಿ, ದೇವರನಾವದಗಿ, ಕಡ್ಲೇವಾಡ ಪಿ.ಎ., ಕುಮಸಗಿ

ಹಲಸಂಗಿ - 586207 - ಅರ್ಜನಾಳ, ಬೈರುಣಗಿ, ಭತಗುಣಕಿ, ಚಣೇಗಾಂವ, ಧೂಳಖೇಡ, ಹಿಂಗಣಿ

ಇಂಡಿ - 586209 - ಇಂಡಿ, ಇಂಡಿ ಬಜಾರ

ಸಂಘಗಳು[ಬದಲಾಯಿಸಿ]

ಮೀನುಗಾರಿಕೆ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ

ನೇಕಾರರ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ

ಕಟ್ಟಡ ನಿರ್ಮಾಣ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ

ನೀರು ಬಳಕೆದಾರರ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ

ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ.

ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ
 ಇಂಡಿ  49
 ಮುದ್ದೇಬಿಹಾಳ  40
 ವಿಜಯಪುರ  53
 ಸಿಂದಗಿ  55
 ಬಸವನ ಬಾಗೇವಾಡಿ  47
 ಒಟ್ಟು  244

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಸರ್ಕಾರೇತರ ಸಂಸ್ಥೆಗಳು

ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ.

ನೀರಾವರಿ[ಬದಲಾಯಿಸಿ]

ಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ ಕೃಷ್ಣಾ, ಭೀಮಾ ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ.

ಕೆರೆಗಳು[ಬದಲಾಯಿಸಿ]

ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ.

ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು

ವಿಜಯಪುರ ತಾಲ್ಲೂಕಿನ ಕೆರೆಗಳು

ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು

ಇಂಡಿ ತಾಲ್ಲೂಕಿನ ಕೆರೆಗಳು

ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು

ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು

ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು

ಜಲಪುರ, ವನಹಳ್ಳಿ, ಬಳಗಾನೂರ, ಕೋಳೂರ, ಮಲಗಾಲದಿನ್ನಿ.

ಸಿಂದಗಿ ತಾಲ್ಲೂಕಿನ ಕೆರೆಗಳು

ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು

ಆಣೆಕಟ್ಟುಗಳು[ಬದಲಾಯಿಸಿ]

ಆಲಮಟ್ಟಿ ಆಣೆಕಟ್ಟು (ಲಾಲ ಬಹಾದ್ದೂರ ಶಾಸ್ತ್ರಿ ಸಾಗರ)

ಆಲಮಟ್ಟಿ ಆಣೆಕಟ್ಟು (ಲಾಲ ಬಹಾದ್ದೂರ ಶಾಸ್ತ್ರಿ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಬಳಿ ಕಟ್ಟಲಾಗಿದೆ.

ಆಲಮಟ್ಟಿ ಆಣೆಕಟ್ಟು
ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು

ಆಲಮಟ್ಟಿ ಆಣೆಕಟ್ಟುನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲುಕಿನ ಆಲಮಟ್ಟಿ ಗ್ರಾಮದ ಸಮೀಪ ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ft ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ ಬಹಾದ್ದೂರ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.


ನಾರಾಯಣಪುರ ಜಲಾಶಯ(ಬಸವ ಸಾಗರ)

ನಾರಾಯಣಪುರ ಜಲಾಶಯ(ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಕಟ್ಟಲಾಗಿದೆ.

ನಾರಾಯಣಪುರ ಜಲಾಶಯ(ಬಸವ ಸಾಗರ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.[೧] ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ.

ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಕಾಲುವೆಗಳು[ಬದಲಾಯಿಸಿ]

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟು ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ.

  • ನಾರಾಯಣಪುರ ಎಡದಂದೆ ಕಾಲುವೆ
  • ಮುಳವಾಡ ಏತ ನೀರಾವರಿ ಕಾಲುವೆ
  • ಆಲಮಟ್ಟಿ ಎಡದಂದೆ ಕಾಲುವೆ

ನೀರಾವರಿ ಯೋಜನೆಗಳು

ಕೃಷಿ[ಬದಲಾಯಿಸಿ]

ಆಲಮಟ್ಟಿ ಉದ್ಯಾನವನದ ನೋಟ

ಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಕ್ರ.ಸಂ. ಪ್ರದೇಶದ ಹೆಸರು ಲೆಕ್ಕಾಚಾರ ಘಟಕ
1 ಒಟ್ಟು ಪ್ರದೇಶ 10,53,471 ಹೆಕ್ಟೆರ್
2 ಕೃಷಿಯೊಗ್ಯ ಭೂಮಿ 7,87,593 ಹೆಕ್ಟೆರ್
3 ಕಾಡು ಪ್ರದೇಶ 1,977 ಹೆಕ್ಟೆರ್
4 ಕೃಷಿಯೊಗ್ಯವಲ್ಲದ ಭೂಮಿ 16,383 ಹೆಕ್ಟೆರ್
5 ಕೃಷಿಗೆ ಲಭ್ಯವಿಲ್ಲದ ಭೂಮಿ 64,906 ಹೆಕ್ಟೆರ್
6 ಪಾಳು ಭೂಮಿ 2,52,952 ಹೆಕ್ಟೆರ್
ತೋಟಗಾರಿಕೆ

ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.

ಕೃಷಿ ಮಾರುಕಟ್ಟೆಗಳು

ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ.

ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು

  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಇಂಡಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಚಡಚಣ
ರೈತ ಸಂಪರ್ಕ ಕೇಂದ್ರಗಳು
ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ

ವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ.

  • ವಿಜಯಪುರ - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ.
  • ಮುದ್ದೇಬಿಹಾಳ - ತಾಳಿಕೋಟ, ನಾಲತವಾಡ, ಢವಳಗಿ.
  • ಸಿಂದಗಿ - ಆಲಮೇಲ, ದೇವರಹಿಪ್ಪರಗಿ.
  • ಬಸವನ ಬಾಗೇವಾಡಿ - ಕೊಲ್ಹಾರ, ಹೂವಿನ ಹಿಪ್ಪರಗಿ.
  • ಇಂಡಿ - ಬಳ್ಳೊಳ್ಳಿ, ಚಡಚಣ.
ಬೀಜ ಉತ್ಪಾದಕ ಕಂಪನಿಗಳು
  • ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ.
  • ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ.
ಆಹಾರ ಸಂಸ್ಕರಣೆ ಘಟಕಗಳು
ಆಲಮಟ್ಟಿ ರಾಕ್ ಉದ್ಯಾನ ವನ
  • ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ
ಮದ್ಯ ಘಟಕಗಳು
  • ನಿಸರ್ಗ ಮದ್ಯ ಘಟಕ, ವಿಜಯಪುರ
  • ರಿಕೊ ಮದ್ಯ ಘಟಕ, ಕನ್ನಾಳ, ತಾ||ಜಿ|| ವಿಜಯಪುರ
  • ಹಂಪಿ ಹೆರಿಟೆಜ್ ಮದ್ಯ ಘಟಕ, ಭೂತನಾಳ, ತಾ||ಜಿ|| ವಿಜಯಪುರ
ಅರಣ್ಯ
ಆಲಮಟ್ಟಿ ಆಣೆಕಟ್ಟು

ಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು

  • ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ , ತಾ||ಜಿ|| ವಿಜಯಪುರ
  • ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ
  • ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ
  • ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ
  • ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ

ಅರಣ್ಯ ಇಲಾಖೆಯ ನರ್ಸರಿಗಳು

  • ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ
  • ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ
  • ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ

ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು

ಅಡವಿ ಸೋಮನಾಳ, ಆಲಕೊಪ್ಪರ, ಅಂಜುಟಗಿ, ಬಬಲಾದ, ಬಾಬಾನಗರ, ಬಬಲೇಶ್ವರ, ಬಸ್ತಿಹಾಳ, ಭೂತನಾಳ, ಬೆಕಿನಾಳ, ಬೂದಿಹಾಳ, ಚಿಕ್ಕಬೇವನೂರ, ದೇವರನಿಂಬರಗಿ, ಧುಮಕನಾಳ, ಗುಂದವಾನ, ಹಡಗಲಿ, ಹಡಲಸಂಗ, ಹಡಗಿನಾಳ, ಹಳಗುಣಕಿ, ಹಂದಿಗನೂರ, ಹರನಾಳ, ದೇವರ ಹುಲಗಬಾಳ, ಇಂಚಗೇರಿ, ಇಂಗಳೇಶ್ವರ, ಇಟ್ಟಂಗಿಹಾಳ, ಜಕ್ಕೇರಾಳ, ಜಾಲವಾದ, ಜಂಬಲದಿನ್ನಿ, ಜೇವೂರ, ಕಂಬಾಗಿ, ಕಣಕಾಲ, ಕನ್ನಾಳ, ಕವಡಿಮಟ್ಟಿ,ಕೇಸಾಪುರ, ಕ್ಯಾತನಡೋಣಿ, ಮಧಬಾವಿ, ಮಣ್ಣೂರ, ಮುಳವಾಡ, ಮುತ್ತಗಿ, ಮುತ್ತಲದಿನ್ನಿ, ನಾಗರಬೆಟ್ಟ, ನಿಡೋಣಿ, ಸಂಗಾಪುರ(ಎಸ್.ಹೆಚ್), ಸಂಕನಾಳ, ಸಾವಳಸಂಗ, ಶಿವಾಪುರ, ತಡವಲಗಾ, ಉಪ್ಪಲದಿಣ್ಣಿ, ವರ್ಕನಹಳ್ಳಿ.

ಸಸ್ಯಾಗಾರದ ಹೆಸರ

  • ಬಸವವನ ಸಸ್ಯಾಗಾರ, ವಿಜಯಪುರ
  • ಸಸ್ಯಾಗಾರ, ವಿಜಯಪುರ
  • ವಿಜಯಪುರ ಕ್ಷೇತ್ರ, ವಿಜಯಪುರ
  • ಇಂಡಿ ಸಸ್ಯಾಗಾರ, ಇಂಡಿ
  • ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ
  • ಆಲಮೇಲ ಸಸ್ಯಾಗಾರ, ಆಲಮೇಲ
  • ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ
ಶೀತಲಿಕರಣ ಘಟಕಗಳು

  • ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ
ಹಾಲು ಉತ್ಪಾದಕ ಘಟಕಗಳು

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಹಾಲು ಉತ್ಪಾದಕ ಸಹಕಾರಿ ಸಂಘಗಳು

ತಾಲ್ಲೂಕು ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆ
 ಇಂಡಿ  41
 ಮುದ್ದೇಬಿಹಾಳ  6
 ವಿಜಯಪುರ  37
 ಸಿಂದಗಿ  14
 ಬಸವನ ಬಾಗೇವಾಡಿ  22
 ಒಟ್ಟು  120

ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯಗಳು

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿಗಳು

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ವಿದ್ಯುತ್ ಪರಿವರ್ತನಾ ಕೇಂದ್ರಗಳು

ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ.

  • ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ , ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
  • ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ

ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ.

ಪಾಸ್ ಪೋರ್ಟ್ ಕೇಂದ್ರ[ಬದಲಾಯಿಸಿ]

  • ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ
ಕರ್ನಾಟಕದಲ್ಲಿರುವ ಪ್ರಮುಖ ಪಾಸ್ ಪೋರ್ಟ್ ಸೇವಾ ಕೇಂದ್ರಗಳು

ನ್ಯಾಯಾಲಯಗಳು[ಬದಲಾಯಿಸಿ]

ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ

ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು.

  • ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ
  • ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ
  • ಕಾರ್ಮಿಕರ ನ್ಯಾಯಾಲಯ, ವಿಜಯಪುರ
  • ಕುಟುಂಬ ನ್ಯಾಯಾಲಯ, ವಿಜಯಪುರ
  • ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ

ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ.

ಪೋಲಿಸ್(ಆರಕ್ಷಕ) ಠಾಣೆಗಳು[ಬದಲಾಯಿಸಿ]

ವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ.

ವಿಶೇಷ ಪೋಲಿಸ್ ಠಾಣೆಗಳು

  • ಅಬಕಾರಿ ಪೋಲಿಸ್ ಠಾಣೆ, ವಿಜಯಪುರ
  • ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ
  • ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ
  • ರೈಲ್ವೆ ಪೋಲಿಸ್ ಠಾಣೆ, ವಿಜಯಪುರ
  • ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ

ಅಗ್ನಿಶಾಮಕ ಠಾಣೆಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ.

ನದಿಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕು
ಬಸವನ ಬಾಗೇವಾಡಿ ತಾಲ್ಲೂಕು
ವಿಜಯಪುರ ತಾಲ್ಲೂಕು
ಇಂಡಿ ತಾಲ್ಲೂಕು
ಮುದ್ದೇಬಿಹಾಳ ತಾಲ್ಲೂಕು

ವಿಜಯಪುರ ಜಿಲ್ಲೆಯಲ್ಲಿ ಹರಿಯುವ ನದಿಗಳೆಂದರೆ ಕೃಷ್ಣಾ , ಭೀಮಾ ಮತ್ತು ಡೋಣಿ.

ಉಗಮ ಸ್ಥಾನ

ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಮಲಪ್ರಭಾ, ಘಟಪ್ರಭಾ, ತುಂಗಭದ್ರಾ ಮತ್ತು ಡೋಣಿ ನದಿಗಳು ಕೃಷ್ಣಾ ನದಿಯ ಉಪನದಿಗಳಾಗಿವೆ.

ಕೃಷ್ಣಾ ನದಿಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಹತ್ತಿರ ಆಲಮಟ್ಟಿ ಆಣೆಕಟ್ಟು ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಾಚಿಹಾಳ - ಸಿದ್ದಾಪುರ ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. ರಾಯಚೂರ ಜಿಲ್ಲೆಯ ದೇಸಗೂರು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ.

ಶಿಲಾನ್ಯಾಸ

1962ರಲ್ಲಿ ಭಾರತದ ಮಾಜಿ ಪ್ರಧಾನ ಮಂತ್ರಿಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು ಮಲಪ್ರಭಾ ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.

ಮುಳುಗಡೆ ಪ್ರದೇಶ

ಆಲಮಟ್ಟಿಯಿಂದ ಹಿಪ್ಪರಗಿವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು ಬಾಗಲಕೋಟೆಯ ಬಹುತೇಕ ಭಾಗ ಮುಳುಗಡೆಯಾಗಿವೆ.

ಜಲ ಸಂಗ್ರಹ

ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ.

ನೀರಾವರಿ ಪ್ರದೇಶ

ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.

ವಿದ್ಯುತ್ ಉತ್ಪಾದನೆ

15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ.

ವೆಚ್ಚ

ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ.

ಉದ್ಘಾಟನೆ

21 ಆಗಸ್ಟ್ 2006ರಂದು ಭಾರತದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಲಾಲ ಬಹಾದ್ದೂರ ಶಾಸ್ತ್ರಿ ಸಾಗರ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.

ಉಗಮ ಮತ್ತು ಸಂಗಮ

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದಾಸೂರ ಎಂಬಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ.

ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ದೇಸಗೂರು ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ.

ಉಪನದಿಗಳು

ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.

ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಯಾದಗಿರಿ ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. "ಡೋಣಿ ಬೆಳೆದರೆ ಓಣಿಲ್ಲ ಜೋಳ"ವೆಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ.

ಕೈಗಾರಿಕೆಗಳು[ಬದಲಾಯಿಸಿ]

ಸಕ್ಕರೆ ಕಾರ್ಖಾನೆಗಳು

ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ

ಕೈಗಾರಿಕಾ ಪ್ರದೇಶಗಳು[ಬದಲಾಯಿಸಿ]

ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ.

ಕೈಗಾರಿಕಾ ಪ್ರದೇಶಗಳು

  • ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1
  • ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2
  • ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ

ಕೈಗಾರಿಕಾ ಎಸ್ಟೇಟುಗಳು

ಆಸ್ಪತ್ರೆಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ.

ಸಾಮಾನ್ಯ ಆಸ್ಪತ್ರೆಗಳು

ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು

ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಕ್ರ.ಸಂ. ಆರೋಗ್ಯ ಕೇಂದ್ರಗಳು ಸಂಖ್ಯೆ
1 ಜಿಲ್ಲಾ ಆಸ್ಪತ್ರೆ 1
2 ತಾಲ್ಲೂಕು ಆಸ್ಪತ್ರೆ 4
3 ಸಮುದಾಯ ಆರೋಗ್ಯ ಕೇಂದ್ರಗಳು 9
4 ಪ್ರಾಥಮೀಕ ಆರೋಗ್ಯ ಕೇಂದ್ರಗಳು 63
5 ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 42
6 ಪ್ರಾಥಮೀಕ ಆರೋಗ್ಯ ಉಪಕೇಂದ್ರಗಳು 298
7 ಅಲೋಪತಿ ಆಸ್ಪತ್ರೆಗಳು 74
8 ಆಯುರ್ವೇದ ಆಸ್ಪತ್ರೆಗಳು 4
9 ಖಾಸಗಿ ಆಸ್ಪತ್ರೆಗಳು 81

ಸಮುದಾಯ ಆರೋಗ್ಯ ಕೇಂದ್ರಗಳು

ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಪಶು ಆಸ್ಪತ್ರೆಗಳು

ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ.

ಪಶು ಆಸ್ಪ ತ್ರೆಗಳು

ಪಶು ಕೃತಕ ಗರ್ಭಧಾರಣಾ ಕೇಂದ್ರಗಳು

ಕವಲಗಿ, ಹೊನಗನಹಳ್ಳಿ , ನಾಗಠಾಣ, ತೊರವಿ, ಹಿಟ್ನಳ್ಳಿ , ಸಾರವಾಡ

ಪಶು ಚಿಕಿತ್ಸಾಲಯಗಳು

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಆಕಾಶವಾಣಿ ಕೇಂದ್ರ[ಬದಲಾಯಿಸಿ]

ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.

ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ ದೆಹಲಿ, ಬೆಂಗಳೂರು, ಮುಂಬಯಿ ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ.

2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.

ಸಾರಿಗೆ[ಬದಲಾಯಿಸಿ]

ವಾಹನ ಸಾರಿಗೆ

ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.

ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ.

ವಿಜಯಪುರದಿಂದ ಮುಂಬಯಿ, ಪುನಾ, ಬೆಂಗಳೂರು, ಹೈದರಾಬಾದುಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ (ಗೋವಾ ಮತ್ತು ಮಹಾರಾಷ್ಟ್ರ) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - ಕೆ ಎ - 28 ಆಗಿದೆ. ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ.

ರೈಲು ಸಾರಿಗೆ

ವಿಜಯಪುರದಿಂದ ಹೊರಡುವ ರೈಲುಗಳು

ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿದೆ.

ಕ್ರ.ಸಂ. ರೈಲಿನ ಸಂಖ್ಯೆ ಆರಂಭ ಸ್ಥಳ ಅಂತಿಮ ಸ್ಥಳ ರೈಲಿನ ಹೆಸರು ದಿನಗಳು(ವಾರಕ್ಕೆ)
1 19405/19406 ಬೆಂಗಳೂರು ಅಮದಾಬಾದ್ ಯಶವಂತಪುರ ಎಕ್ಸಪ್ರೆಸ್ ಒಂದು ಸಲ
2 16217/16202 ಶಿರಡಿ ಮೈಸೂರ ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ ಒಂದು ಸಲ
3 16201/16202 ಬೆಂಗಳೂರು ಜೈಪುರ ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ ಒಂದು ಸಲ
4 06511/06512 ಮುಂಬಯಿ ವಿಜಯಪುರ ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ ನಾಲ್ಕು ದಿನ
5 16535/16536 ಸೊಲ್ಲಾಪುರ ಮೈಸೂರ ಗೋಳಗುಂಬಜ್ ಎಕ್ಸಪ್ರೆಸ್ ಪ್ರತಿದಿನ
6 17307/17308 ಬಾಗಲಕೋಟ ಮೈಸೂರ ಬಸವ ಎಕ್ಸಪ್ರೆಸ್ ಪ್ರತಿದಿನ
7 11423/11424 ಸೊಲ್ಲಾಪುರ ಹುಬ್ಬಳ್ಳಿ ಸೊಲ್ಲಾಪುರ ಎಕ್ಸಪ್ರೆಸ್ ಪ್ರತಿದಿನ
8 01493/01494 ಹುಬ್ಬಳ್ಳಿ ವಿಜಯಪುರ ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ ಪ್ರತಿದಿನ
9 57641/57642 ಸೊಲ್ಲಾಪುರ ಗದಗ ಗದಗ - ಸೊಲ್ಲಾಪುರ ಪ್ಯಾಸೆಂಜರ ಪ್ರತಿದಿನ
10 56903/56904 ಧಾರವಾಡ ಸೊಲ್ಲಾಪುರ ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ ಪ್ರತಿದಿನ
11 56905/56906 ಸೊಲ್ಲಾಪುರ ಹುಬ್ಬಳ್ಳಿ ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ ಪ್ರತಿದಿನ
12 57685/57686 ವಿಜಯಪುರ ಸೊಲ್ಲಾಪುರ ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ ಪ್ರತಿದಿನ
13 57133/57134 ವಿಜಯಪುರ ರಾಯಚೂರ ವಿಜಯಪುರ - ರಾಯಚೂರ ಪ್ಯಾಸೆಂಜರ ಪ್ರತಿದಿನ
14 57129/57130 ವಿಜಯಪುರ ಹೈದರಾಬಾದ್ ಬೊಳರಮ್ ಪ್ಯಾಸೆಂಜರ ಪ್ರತಿದಿನ

ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು

ದಕ್ಷಿಣದಿಂದ ಉತ್ತರದ ಕಡೆಗೆ

ವಾಯು ಸಾರಿಗೆ

ವಿಮಾನ ನಿಲ್ದಾಣ

ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ ಗ್ರಾಮದ ಹತ್ತಿರ) ದೂರದಲ್ಲಿರುವ ನಿವೇಶನದಲ್ಲಿ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ.

ಜಲ ಸಾರಿಗೆ

ಬಂದರು

ಜಿಲ್ಲೆಗೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ರಾಷ್ಟ್ರೀಯ ಹೆದ್ದಾರಿಗಳು

ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218

ರಾಷ್ಟ್ರೀಯ ಹೆದ್ದಾರಿ - 52 => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ.

ರಾಷ್ಟ್ರೀಯ ಹೆದ್ದಾರಿ - 50 => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ.

ರಾಜ್ಯ ಹೆದ್ದಾರಿಗಳು

ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ,

ರಾಜ್ಯ ಹೆದ್ದಾರಿ - 12 => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ.

ರಾಜ್ಯ ಹೆದ್ದಾರಿ - 16 => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್.

ರಾಜ್ಯ ಹೆದ್ದಾರಿ - 34 => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ.

ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.

ರಾಜ್ಯ ಹೆದ್ದಾರಿ - 43 => ತಿಕೋಟಾ - ಕನಮಡಿ - ಜತ್ತ.

ರಾಜ್ಯ ಹೆದ್ದಾರಿ - 55 => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ.

ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.

ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.

ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ

ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.

ಕ್ರ.ಸಂ. ತಾಲ್ಲೂಕುಗಳು ಬಸವನ ಬಾಗೇವಾಡಿ ವಿಜಯಪುರ ಇಂಡಿ ಮುದ್ದೇಬಿಹಾಳ ಸಿಂದಗಿ
1 ಬಸವನ ಬಾಗೇವಾಡಿ 0 45 85 37 57
2 ವಿಜಯಪುರ 45 0 55 82 60
3 ಇಂಡಿ 85 55 0 100 50
4 ಮುದ್ದೇಬಿಹಾಳ 37 82 100 0 80
5 ಸಿಂದಗಿ 57 60 50 80 0
ಸರಕಾರಿ ವಾಹನ ನಿಲ್ದಾಣಗಳು
ಸರಕಾರಿ ವಾಹನ ಘಟಕಗಳು
  • ಬಸವನ ಬಾಗೇವಾಡಿ
  • ವಿಜಯಪುರ
  • ಇಂಡಿ
  • ಮುದ್ದೇಬಿಹಾಳ
  • ಸಿಂದಗಿ
  • ತಾಳಿಕೋಟ
ಸೇತುವೆಗಳು

ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ , ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ.

ವಾಹನ ತರಬೇತಿ ಶಾಲೆಗಳು

ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ.

  • ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ.
  • ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ.
  • ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ.
  • ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ.

ಕ್ರೀಡೆ ಹಾಗೂ ಕ್ರೀಡಾಂಗಣ[ಬದಲಾಯಿಸಿ]

ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.

ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.

  • ಕ್ರೀಡಾ ನಿಲಯ, ವಿಜಯಪುರ

ಚಿತ್ರ ಮಂದಿರಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ.

ರಾಜಕೀಯ[ಬದಲಾಯಿಸಿ]

ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ.

ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು

ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ವಿಜಯಪುರ ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ IND ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ BJPಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ ಬಸನಗೌಡ ಪಾಟೀಲ(ಯತ್ನಾಳ) ಮೂಲಕ BJP ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ BJPಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು.

ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ.

ಕ್ಷೇತ್ರದ ವಿಶೇಷತೆ

  • ಕೆ.ಟಿ.ರಾಠೋಡರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು.
  • 1983ರಲ್ಲಿ ಚಂದ್ರಶೇಖರ ಗಚ್ಚಿನಮಠರು ವಿಜಯಪುರ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ದಾಖಲೆಯಿದೆ.
  • ಎಮ್.ಎಲ್.ಉಸ್ತಾದರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು.
  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.
  • ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 3 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ.
  • ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 94211 ಅಬ್ದುಲ್ ಹಮೀದ್ ಮುಸ್ರೀಫ್ INC 85978
2018 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 76308 ಅಬ್ದುಲ್ ಹಮೀದ್ ಮುಸ್ರೀಫ್ INC 69895
2013 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಡಾ.ಮಕಬುಲ್ ಬಾಗವಾನ INC 48615 ಬಸನಗೌಡ ಪಾಟೀಲ(ಯತ್ನಾಳ) JDS 39235
2008 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ BJP 34217 ಎಸ್.ಎ.ಹೊರ್ತಿ INC 16653
2004 ವಿಜಯಪುರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ BJP 70001 ಎಮ್.ಎಲ್.ಉಸ್ತಾದ್ INC 45968
1999 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ್ INC 42902 ಅಪ್ಪು ಪಟ್ಟಣಶೆಟ್ಟಿ BJP 39749
1994 ವಿಜಯಪುರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 45286 ಎಮ್.ಎಲ್.ಉಸ್ತಾದ್ JDS. 29158
1989 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ್ INC 45623 ಎಸ್.ಆರ್.ಔರಂಗಾಬಾದ್ JDS 34355
1985 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ್‌ INC 26829 ಬಿ.ಆರ್.ಪಾಟೀಲ JNP 25914
1983 ವಿಜಯಪುರ ವಿಧಾನಸಭಾ ಕ್ಷೇತ್ರ ಚಂದ್ರಶೇಖರ ಗಚ್ಚಿನಮಠ BJP 28795 ಖಾಜಿಹುಸೇನ್ ಜಾಹಾಗೀರದಾರ INC 24974
1978 ವಿಜಯಪುರ ವಿಧಾನಸಭಾ ಕ್ಷೇತ್ರ ಹಬೀಬುದ್ದೀನ್ ಬಕ್ಷಿ JNP 26191 ಕೆ.ಟಿ.ರಾಠೋಡ INC 16663
ವಿಜಯಪುರ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ವಿಜಯಪುರ ವಿಧಾನಸಭಾ ಕ್ಷೇತ್ರ ಕೆ.ಟಿ.ರಾಠೋಡ INC 23205 ವಿಷ್ಣು ಕೇಶವ ಪಂಡಿತ NCO 13970
1967 ವಿಜಯಪುರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ INC 18818 ಮಲ್ಲಪ್ಪ ಕರಬಸಪ್ಪ ಸುರಪುರ SWA 5396
1962 ವಿಜಯಪುರ ವಿಧಾನಸಭಾ ಕ್ಷೇತ್ರ ರೇವಣಸಿದ್ದಪ್ಪ ನಾವದಗಿ INC 13828 ನಬೀಸಾಬ್ ಬಾಳಾಸಿಂಗ್ SWA 4846
1957 ವಿಜಯಪುರ ವಿಧಾನಸಭಾ ಕ್ಷೇತ್ರ ಡಾ.ಬಸವರಾಜ ನಾಗೂರ IND 11827 ಮೊಹದ್ದಿನ್ ಮಹಾಲ್ದಾರ INC 7995
ವಿಜಯಪುರ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ವಿಜಯಪುರ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಪಾಟೀಲ INC 10406 ನಬೀಸಾಬ್ ಬಾಳಾಸಿಂಗ್ CPI 6069

ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಗುರು ಚಕ್ರವರ್ತಿ ಸದಾಶಿವ ಮಠ, ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.

ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.

1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ BJPಯ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.

2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ(ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು.

ಕ್ಷೇತ್ರದ ವಿಶೇಷತೆ

  • ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ ಚೆನ್ನಬಸಪ್ಪ ಅಂಬಲಿಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ.
  • ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು.
  • 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು.
  • 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಆಯ್ಕೆಯಾಗಿದ್ದರು.
  • ಶಿವಾನಂದ ಪಾಟೀಲರು 1994ರಲ್ಲಿ ಜನತಾ ಪಕ್ಷ ಮತ್ತು 1999ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.
  • ಬಿ.ಎಂ.ಪಾಟೀಲರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
  • ಎಂ.ಬಿ.ಪಾಟೀಲರು 2013ರಲ್ಲಿ ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು.
  • ಎಂ.ಬಿ.ಪಾಟೀಲರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು.
  • ಎಂ.ಬಿ.ಪಾಟೀಲರು 2008 - 2023ರ ವರಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.
  • ಶಿವಾನಂದ ಪಾಟೀಲರ ಸಹೋದರರಾದ ವಿಜಯಗೌಡ ಪಾಟೀಲರು ನಾಲ್ಕು ಬಾರಿ ಸ್ಪರ್ಧಿಸಿದರೂ ಒಮ್ಮೆಯೂ ಆಯ್ಕೆಯಾಗಿಲ್ಲ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಬಲೇಶ್ವರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 93923 ವಿಜಯಗೌಡ ಪಾಟೀಲ BJP 78707
2018 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 98339 ವಿಜಯಗೌಡ ಪಾಟೀಲ BJP 68624
2013 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 62061 ವಿಜಯಗೌಡ ಪಾಟೀಲ JDS 57706
2008 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 55525 ವಿಜಯಗೌಡ ಪಾಟೀಲ JDS 38886
ತಿಕೋಟಾ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2004 ತಿಕೋಟಾ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 48274 ಎಂ.ಎಸ್.ರುದ್ರಗೌಡರ JDU 19040
1999 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ BJP 49080 ಎಂ.ಬಿ.ಪಾಟೀಲ INC 41649
1994 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ JD 50679 ಎಂ.ಬಿ.ಪಾಟೀಲ INC 25897
1991 ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) ಎಂ.ಬಿ.ಪಾಟೀಲ INC 32832 ಶಿವಾನಂದ ಪಾಟೀಲ JD 28228
1989 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 37832 ಬಿ.ಆರ್.ಪಾಟೀಲ JD 33228
1985 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 26829 ಬಿ.ಆರ್.ಪಾಟೀಲ JNP 25914
1983 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 27884 ಬಿ.ಎಮ್.ಕೊತೀಹಾಳ JNP 18092
1978 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಬಿ.ಪಾಟೀಲ JNP 21317 ಎಸ್.ಎ.ಜಿದ್ದಿ INC 16899
ತಿಕೋಟಾ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ತಿಕೋಟಾ ವಿಧಾನ ಸಭಾ ಕ್ಷೇತ್ರ ಜಿ.ಎನ್.ಪಾಟೀಲ NCO 22119 ಎಸ್.ಎ.ಜಿದ್ದಿ INC 14156
1967 ತಿಕೋಟಾ ವಿಧಾನ ಸಭಾ ಕ್ಷೇತ್ರ ಶರಣಯ್ಯ ವಸ್ತ್ರದ INC 16329 ಎನ್.ಕೆ.ಉಪಾಧ್ಯಯ CPM 3353
1962 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 19957 ಬಿ.ಜಿ.ಬಿರಾದಾರ SWA 4024
1957 ತಿಕೋಟಾ ವಿಧಾನ ಸಭಾ ಕ್ಷೇತ್ರ ಚೆನ್ನಬಸಪ್ಪ ಅಂಬಲಿ INC 12933 ಡಾ.ಬಸವರಾಜ ನಾಗೂರ IND 8262
ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ ಚೆನ್ನಬಸಪ್ಪ ಅಂಬಲಿ INC 21042 ಆರ್.ಎಂ.ಪಾಟೀಲ KMPP 9001

ಇಂಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ ಇಂಡಿ ಕ್ಷೇತ್ರವು ವಿಜಯಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಭೀಮಾ ನದಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ.

ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. 1995ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. 2000ರಲ್ಲಿ 2ನೇ ಬಾರಿ ಆಯ್ಕೆಯಾಗಿ 2002-03ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ಲ್ಲಿ 3ನೇ ಬಾರಿ ಜಿಪಂ ಸದಸ್ಯರಾದರು. 2008ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 571 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

ಕ್ಷೇತ್ರದ ವಿಶೇಷತೆ

  • 1978, 1983 ಮತ್ತು 1989ರಲ್ಲಿ ಆರ್.ಆರ್. ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು.
  • ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ ಆರ್.ಆರ್. ಕಲ್ಲೂರರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು.
  • 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು.
  • ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು.
  • 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ.
  • ಕಾಂಗ್ರೆಸನ ಯಶವಂತರಾಯಗೌಡ ಪಾಟೀಲರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ.
  • ಯಶವಂತರಾಯಗೌಡ ಪಾಟೀಲರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
  • ಯಶವಂತರಾಯಗೌಡ ಪಾಟೀಲರು 2013, 2018 ಹಾಗೂ 2023 ರಲ್ಲಿ ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ.
  • ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಇಂಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 71785 ಬಿ.ಡಿ.ಪಾಟೀಲ(ಹಂಜಗಿ) JDS 61456
2018 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 50401 ಬಿ.ಡಿ.ಪಾಟೀಲ(ಹಂಜಗಿ) JDS 40463
2013 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 58562 ರವಿಕಾಂತ ಪಾಟೀಲ KJP 25260
2008 ಇಂಡಿ ವಿಧಾನಸಭಾ ಕ್ಷೇತ್ರ ಡಾ.ಸರ್ವಭೌಮ ಬಗಲಿ BJP 29456 ಯಶವಂತರಾಯಗೌಡ ಪಾಟೀಲ INC 28885
2004 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 42984 ಬಿ.ಜಿ.ಪಾಟೀಲ(ಹಲಸಂಗಿ) INC 33652
1999 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 44523 ಬಿ.ಆರ್.ಪಾಟೀಲ(ಅಂಜುಟಗಿ) INC 25203
1994 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 23200 ಬಿ.ಜಿ.ಪಾಟೀಲ(ಹಲಸಂಗಿ) JDS 19469
1989 ಇಂಡಿ ವಿಧಾನಸಭಾ ಕ್ಷೇತ್ರ ರೇವಣಸಿದ್ದಪ್ಪ ಕಲ್ಲೂರ INC 27154 ಬಿ.ಜಿ.ಪಾಟೀಲ(ಹಲಸಂಗಿ) JDS. 18438
1985 ಇಂಡಿ ವಿಧಾನಸಭಾ ಕ್ಷೇತ್ರ ಎನ್.ಎಸ್.ಖೇಡ JNP 30349 ಭೀಮನಗೌಡ ಪಾಟೀಲ INC 23541
1983 ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ INC 24132 ಬಸನಗೌಡ ಪಾಟೀಲ SWA 11098
1978 ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ JNP 26022 ಸಿದ್ದೂಬಾ ಮಿಸಾಳೆ INC 15856
ಇಂಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸುರಪುರ INC 17517 ಆರ್.ಆರ್. ಕಲ್ಲೂರ NCO 14490
1967 ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸುರಪುರ SWA 15769 ರೇವಣಸಿದ್ದಪ್ಪ ಕಲ್ಲೂರ INC 11703
1962 ಇಂಡಿ ವಿಧಾನಸಭಾ ಕ್ಷೇತ್ರ ಗುರುಲಿಂಗಪ್ಪ ಪಾಟೀಲ SWA 14624 ಮಲ್ಲಪ್ಪ ಸುರಪುರ INC 13673
1957 ಇಂಡಿ ವಿಧಾನಸಭಾ ಕ್ಷೇತ್ರ-1 ಜಟ್ಟೇಪ್ಪ ಕಬಾಡಿ INC 17402 ಲಚ್ಚಪ್ಪ ಸಂಧಿಮನಿ SWA 16390
1957 ಇಂಡಿ ವಿಧಾನಸಭಾ ಕ್ಷೇತ್ರ-2 ಮಲ್ಲಪ್ಪ ಸುರಪುರ INC 23033 ಯಶವಂತರಾವ್ ಪಾಟೀಲ SFC 6586
ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-1 ಜಟ್ಟೇಪ್ಪ ಕಬಾಡಿ INC 30231 ಬಾಬುರಾಮ ಹುಜರೆ SFC 5457
1951 ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 ಮಲ್ಲಪ್ಪ ಸುರಪುರ INC 30322 ರಾವಪ್ಪ ಕಾಳೆ SWA 4536

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ.

ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.

1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು.

ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ.

1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು.

ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ BJPಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ.

ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ INC ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ INC ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು INC ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು.

1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು SWA ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ INC ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು.

ಕ್ಷೇತ್ರದ ವಿಶೇಷತೆ

  • ವಿಮಲಾಬಾಯಿ ದೇಶಮುಖರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
  • ಜನತಾ ಪಕ್ಷದಿಂದ ಜಗದೇವರಾವ್ ದೇಶಮುಖರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ.
  • ಸಿ.ಎಸ್.ನಾಡಗೌಡರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು.
  • ಸಿ.ಎಸ್.ನಾಡಗೌಡರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಆರು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ.
  • ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.
  • ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ.
  • ಎ.ಎಸ್.ಪಾಟೀಲ(ನಡಹಳ್ಳಿ)ಯವರು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದರು.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 79483 ಎ.ಎಸ್.ಪಾಟೀಲ(ನಡಹಳ್ಳಿ) BJP 71846
2018 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) BJP 63512 ಸಿ.ಎಸ್.ನಾಡಗೌಡ INC 54879
2013 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 34747 ವಿಮಲಾಬಾಯಿ ದೇಶಮುಖ KJP 22545
2008 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 24065 ಮಂಗಳಾದೇವಿ ಬಿರಾದಾರ BJP 21662
2004 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 30203 ವಿಮಲಾಬಾಯಿ ದೇಶಮುಖ JDS. 27776
1999 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 43662 ವಿಮಲಾಬಾಯಿ ದೇಶಮುಖ JDU 32632
1994 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವಿಮಲಾಬಾಯಿ ದೇಶಮುಖ JD 39149 ಸಿ.ಎಸ್.ನಾಡಗೌಡ INC 21756
1989 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿ.ಎಸ್.ನಾಡಗೌಡ INC 31933 ಜಗದೇವರಾವ್ ದೇಶಮುಖ JD 29840
1985 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ JNP 35056 ಬಸವರಾವ್ ಜಗ್ಗಲ INC 16052
1983 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ JNP 21885 ರಾಮರಾವ್ ಭಗವಂತ SWA 9530
1978 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಜಗದೇವರಾವ್ ದೇಶಮುಖ JNP 28857 ಮಲ್ಲಪ್ಪ ಸಜ್ಜನ INC 11486
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸಜ್ಜನ INC 17778 ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ NCO 17021
1967 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ INC 19452 ಶ್ರೀಶೈಲಪ್ಪ ಮಸಳಿ SWA 14740
1962 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ INC 13969 ಶ್ರೀಶೈಲಪ್ಪ ಮಸಳಿ SWA 10680
1957 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿದ್ಧಾಂತಿ ಪ್ರಾಣೇಶ ಭಟ್ INC 12888 ಶಿವಬಸವಸ್ವಾಮಿ ವಿರಕ್ತಮಠ SWA 11657
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಿದ್ಧಾಂತಿ ಪ್ರಾಣೇಶ ಭಟ್ INC 16627 ಭೀಮನಗೌಡ ಪಾಟೀಲ KMPP 7745

ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ದೇವರ ಹಿಪ್ಪರಗಿ ಗ್ರಾಮ ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು.

INC ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು.

ಕ್ಷೇತ್ರದ ವಿಶೇಷತೆ

  • ಬಸವನ ಬಾಗೇವಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರವಾಗಿದೆ.
  • ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು.
  • ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು.
  • ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
  • ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ.
  • ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
  • ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ.
  • ಬಿ.ಎಸ್.ಪಾಟೀಲ(ಸಾಸನೂರ)ರ ಪುತ್ರರಾದ ಸೋಮನಗೌಡ ಪಾಟೀಲರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
  • ರಾಜುಗೌಡ(ಭೀಮನಗೌಡ) ಬಸನಗೌಡ ಪಾಟೀಲರು 2023ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತ ಉಪಾಂತ ವಿಜೇತ ಪಕ್ಷ ಮತ
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ರಾಜುಗೌಡ ಪಾಟೀಲ JDS 65952 ಸೋಮನಗೌಡ ಪಾಟೀಲ BJP 45777
2018 ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಸೋಮನಗೌಡ ಪಾಟೀಲ BJP 48245 ರಾಜುಗೌಡ ಪಾಟೀಲ JDS. 44892
2013 ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) INC 36231 ಸೋಮನಗೌಡ ಪಾಟೀಲ BJP 28135
2008 ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) INC 54879 ಬಸನಗೌಡ ಪಾಟೀಲ(ಯತ್ನಾಳ) BJP 23986
2004 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ BJP 39224 ಬಿ.ಎಸ್.ಪಾಟೀಲ(ಸಾಸನೂರ) INC 32927
1999 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) INC 46088 ಶಿವಪುತ್ರಪ್ಪ ದೇಸಾಯಿ JDU 28492
1994 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ JD 35849 ಬಿ.ಎಸ್.ಪಾಟೀಲ(ಸಾಸನೂರ) INC 23422
1989 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) INC 36588 ಶಿವಪುತ್ರಪ್ಪ ದೇಸಾಯಿ JD 21193
1985 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ JNP 31748 ಬಿ.ಎಸ್.ಪಾಟೀಲ(ಸಾಸನೂರ) INC 27949
1983 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) INC 30320 ಬಸನಗೌಡ ಲಿಂ ಪಾಟೀಲ JNP 17872
1978 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) JNP 26814 ಕುಮಾರಗೌಡ ಪಾಟೀಲ INC(I) 22531
ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಕೆ.ಡಿ.ಪಾಟೀಲ(ಉಕ್ಕಲಿ) NCO 18331 ಎಲ್.ಆರ್.ನಾಯಕ INC 12855
1967 ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ ಗದಿಗೆಪ್ಪಗೌಡ ಪಾಟೀಲ INC 15189 ಹೆಚ್.ಕೆ.ಮಾರ್ತಂಡಪ್ಪ SWA 7050
1962 ತಾಳಿಕೋಟ ವಿಧಾನಸಭಾ ಕ್ಷೇತ್ರ ಗದಿಗೆಪ್ಪಗೌಡ ಪಾಟೀಲ INC ಅವಿರೋದ ಆಯ್ಕೆ
1957 ತಾಳಿಕೋಟ ವಿಧಾನಸಭಾ ಕ್ಷೇತ್ರ ಕುಮಾರಗೌಡ ಪಾಟೀಲ IND 15200 ಶರಣಯ್ಯ ವಸ್ತದ INC 12804
ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ INC 17752 ಸಾವಳಗೆಪ್ಪ ನಂದಿ KMPP 5507

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು BJP ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ.

ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.

ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ BJPಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್.ಪಾಟೀಲ(ಮನಗೂಳಿ) ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು.

ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ BJP ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ BJP ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ BJP ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.

13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ BJP ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ.

ಕ್ಷೇತ್ರದ ವಿಶೇಷತೆ

  • ಬಿ.ಎಸ್.ಪಾಟೀಲ(ಮನಗೂಳಿ)ರು 6 ಬಾರಿ ಆಯ್ಕೆಯಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು.
  • ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಸುಶಿಲಾಬಾಯಿ ಶಹಾರವರು ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು.
  • ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು.
  • 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ ಎಸ್.ಕೆ.ಬೆಳ್ಳುಬ್ಬಿಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು.
  • 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಿವಾನಂದ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
  • ಶಿವಾನಂದ ಪಾಟೀಲ ನಾಲ್ಕು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
  • ಶಿವಾನಂದ ಪಾಟೀಲರು 2013, 2018 ಮತ್ತು 2023ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ.
  • ಬಿ.ಎಸ್.ಪಾಟೀಲ(ಮನಗೂಳಿ)ರು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರ ಪುತ್ರರಾದ ಸೋಮನಗೌಡ(ಅಪ್ಪು) ಪಾಟೀಲರು ನಾಲ್ಕು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದರೂ ಆಯ್ಕೆಯಾಗಿಲ್ಲ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 68126 ಎಸ್.ಕೆ.ಬೆಳ್ಳುಬ್ಬಿ BJP 43263
2018 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 58647 ಅಪ್ಪು ಪಾಟೀಲ(ಮನಗೂಳಿ) JDS 55461
2013 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 56329 ಎಸ್.ಕೆ.ಬೆಳ್ಳುಬ್ಬಿ BJP 36653
2008 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ BJP 48481 ಶಿವಾನಂದ ಪಾಟೀಲ INC 34594
2004 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 50238 ಎಸ್.ಕೆ.ಬೆಳ್ಳುಬ್ಬಿ BJP 46933
1999 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ BJP 50543 ಬಿ.ಎಸ್.ಪಾಟೀಲ(ಮನಗೂಳಿ) INC 40487
1994 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 27557 ಕುಮಾರಗೌಡ ಪಾಟೀಲ JD 19270
1989 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 37868 ಕುಮಾರಗೌಡ ಪಾಟೀಲ JD 25235
1985 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕುಮಾರಗೌಡ ಪಾಟೀಲ JNP 29320 ಭೀಮನಗೌಡ ಪಾಟೀಲ INC 23744
1983 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 34386 ರಾಜಶೇಖರ ಪಟ್ಟಣಶೆಟ್ಟಿ BJP 15577
1978 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) JNP 27806 ಬಸವಂತರಾಯ ಪಾಟೀಲ INC 16048
ಬಾಗೇವಾಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) NCO 23061 ಜಿ.ವಿ.ಪಾಟೀಲ INC 16250
1967 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 25173 ಜಿ.ಬಿ.ಈರಯ್ಯ SWA 2759
1962 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ INC 12365 ರಾಮನಗೌಡ ಪಾಟೀಲ SWA 6113
1957 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ INC 11941 ರಾಮಣ್ಣ ಕಲ್ಲೂರ SWA 4883
ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ INC 17752 ಸಾವಳಗೆಪ್ಪ ನಂದಿ KMPP 5507

ಸಿಂದಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ.

ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.

ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ IND ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ BJPಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ BJPಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು.

ಕ್ಷೇತ್ರದ ವಿಶೇಷತೆ

  • ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ ಎಂ.ಸಿ.ಮನಗೂಳಿ 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ.
  • 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು.
  • ಎಂ.ಸಿ.ಮನಗೂಳಿಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
  • ಡಾ.ಆರ್.ಬಿ.ಚೌಧರಿಯವರು 1992ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು.
  • 1994ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.
  • 2018ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು.
  • ಎಂ.ಸಿ.ಮನಗೂಳಿಯವರ ನಿದನದ ನಂತರ, ಅವರ ಪುತ್ರರಾದ ಅಶೋಕ ಮನಗೂಳಿಯವರು 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ ರಮೇಶ ಭೂಸನೂರ ರವರ ವಿರುದ್ದ ಸೋತರು.
  • ಅಶೋಕ ಮನಗೂಳಿಯವರು 2023ರಲ್ಲಿ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಸಿಂದಗಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಸಿಂದಗಿ ವಿಧಾನಸಭಾ ಕ್ಷೇತ್ರ ಅಶೋಕ ಮನಗೂಳಿ INC 87621 ರಮೇಶ ಭೂಸನೂರ BJP 79813
2018 ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ JDS 70865 ರಮೇಶ ಭೂಸನೂರ BJP 61560
2013 ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ BJP 37834 ಎಂ.ಸಿ.ಮನಗೂಳಿ JDS 37082
2008 ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ BJP 35227 ಎಂ.ಸಿ.ಮನಗೂಳಿ JDS. 20466
2004 ಸಿಂದಗಿ ವಿಧಾನಸಭಾ ಕ್ಷೇತ್ರ ಅಶೋಕ ಶಾಬಾದಿ BJP 38853 ಎಂ.ಸಿ.ಮನಗೂಳಿ JDS 29803
1999 ಸಿಂದಗಿ ವಿಧಾನಸಭಾ ಕ್ಷೇತ್ರ ಶರಣಪ್ಪ ಸುಣಗಾರ INC 30432 ಎಂ.ಸಿ.ಮನಗೂಳಿ SWA 19675
1994 ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ JD 45356 ಡಾ.ರಾಯಗೊಂಡಪ್ಪ ಚೌಧರಿ INC 17137
1989 ಸಿಂದಗಿ ವಿಧಾನಸಭಾ ಕ್ಷೇತ್ರ ಡಾ.ರಾಯಗೊಂಡಪ್ಪ ಚೌಧರಿ INC 29798 ಎಂ.ಸಿ.ಮನಗೂಳಿ JNP 21169
1985 ಸಿಂದಗಿ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಬಿರಾದಾರ JNP 31483 ತಿಪ್ಪಣ್ಣ ಅಗಸರ INC 17564
1983 ಸಿಂದಗಿ ವಿಧಾನಸಭಾ ಕ್ಷೇತ್ರ ನಿಂಗನಗೌಡ ಪಾಟೀಲ INC 25778 ಮಲ್ಲನಗೌಡ ಬಿರಾದಾರ JNP 18788
1978 ಸಿಂದಗಿ ವಿಧಾನಸಭಾ ಕ್ಷೇತ್ರ ಮಹಿಬೂಬ್ ಬೆಕಿನಾಳಕರ INC(I) 19592 ಶಂಕರಗೌಡ ಪಾಟೀಲ JNP 18268
ಸಿಂದಗಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಸಿಂದಗಿ ವಿಧಾನಸಭಾ ಕ್ಷೇತ್ರ ಎಸ್.ವಾಯ್.ಪಾಟೀಲ NCO 17516 ಮಹಿಬೂಬಸಾಬ್ ಬೆಕಿನಾಳಕರ INC 16538
1967 ಸಿಂದಗಿ ವಿಧಾನಸಭಾ ಕ್ಷೇತ್ರ ಸಿ.ಎಮ್.ದೇಸಾಯಿ INC 16668 ಎಸ್.ವಾಯ್.ಪಾಟೀಲ SWA 13298
1962 ಸಿಂದಗಿ ವಿಧಾನಸಭಾ ಕ್ಷೇತ್ರ ಸಿ.ಎಮ್.ದೇಸಾಯಿ INC 14012 ಸಿದ್ದಪ್ಪ ರಡ್ಡೆವಾಡಗಿ SWA 7432
1957 ಸಿಂದಗಿ ವಿಧಾನಸಭಾ ಕ್ಷೇತ್ರ ಎಸ್.ವಾಯ್.ಪಾಟೀಲ INC 10149 ಗೋವಿಂದಪ್ಪ ಕೊಣ್ಣೂರ SWA 7739
ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಸಿಂದಗಿ ವಿಧಾನಸಭಾ ಕ್ಷೇತ್ರ ಜಟ್ಟೆಪ್ಪ ಕಬಾಡಿ INC 30231 ಬಾಬುರಾಮ್ ಹುಜರೆ SFC 5457

ನಾಗಠಾಣ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರವು, ವಿಜಯಪುರ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ INC ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು.

ಕ್ಷೇತ್ರದ ವಿಶೇಷತೆ

  • ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು.
  • ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ.
  • ರಾಜು ಆಲಗೂರುರವರು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
  • ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
  • ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ.
  • ವಿಠ್ಠಲ ಕಟಕದೊಂಡ, ರಾಜು ಆಲಗೂರು ಮತ್ತು ಸಿದ್ಧಾರ್ಥ ಅರಕೇರಿಯವರು 2 ಬಾರಿ ಹಾಗೂ ರಮೇಶ್ ಜಿಗಜಿಣಗಿ 3 ಬಾರಿ ಆಯ್ಕೆಯಾಗಿದ್ದಾರೆ.
  • ರಮೇಶ್ ಜಿಗಜಿಣಗಿಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.
  • ವಿಠ್ಠಲ ಕಟಕದೊಂಡರವರು 2008ರಲ್ಲಿ ಬಿಜೆಪಿಯಿಂದ ಹಾಗೂ 2023ರಲ್ಲಿ ಕಾಂಗ್ರೇಸ್ ನಿಂದ ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ನಾಗಠಾಣ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ನಾಗಠಾಣ ವಿಧಾನಸಭಾ ಕ್ಷೇತ್ರ ವಿಠ್ಠಲ ಕಟಕದೊಂಡ INC 78990 ಸಂಜೀವ ಐಹೊಳೆ BJP 48175
2018 ನಾಗಠಾಣ ವಿಧಾನಸಭಾ ಕ್ಷೇತ್ರ ದೇವಾನಂದ ಚವ್ಹಾಣ JDS 59709 ವಿಠ್ಠಲ ಕಟಕದೊಂಡ INC 54108
2013 ನಾಗಠಾಣ ವಿಧಾನಸಭಾ ಕ್ಷೇತ್ರ ರಾಜು ಆಲಗೂರ INC 45570 ದೇವಾನಂದ ಚವ್ಹಾಣ JDS 44903
2008 ನಾಗಠಾಣ ವಿಧಾನಸಭಾ ಕ್ಷೇತ್ರ ವಿಠ್ಠಲ ಕಟಕದೊಂಡ BJP 40225 ರಾಜು ಆಲಗೂರ INC 36018
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2004 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಆರ್.ಕೆ.ರಾಠೋಡ JDS 39915 ರಾಜು ಆಲಗೂರ INC 28873
1999 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಾಜು ಆಲಗೂರ INC 27194 ಆರ್.ಕೆ.ರಾಠೋಡ JDS 24667
1994 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ ಜಿಗಜಿಣಗಿ JD 29018 ಫೂಲಸಿಂಗ್ ಚವ್ಹಾಣ INC 17591
1989 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಮನೋಹರ ಐನಾಪುರ INC 27782 ರಮೇಶ ಜಿಗಜಿಣಗಿ JD 23357
1985 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ ಜಿಗಜಿಣಗಿ JNP 32360 ದಯಾನಂದ ಕೊಂಡಗೂಳಿ INC 21311
1983 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ ಜಿಗಜಿಣಗಿ JNP 24603 ಸಿದ್ಧಾರ್ಥ ಅರಕೇರಿ INC 11876
1978 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಸಿದ್ಧಾರ್ಥ ಅರಕೇರಿ JNP 23023 ಚಂದ್ರಶೇಖರ ಹೊಸಮನಿ INC 14204
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ NCO 15537 ಬಾಬುರಾವ್ ಹುಜರೆ INC 11204
1967 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಸಿದ್ಧಾರ್ಥ ಅರಕೇರಿ RIP 14653 ಜೆಟ್ಟೆಪ್ಪ ಕಬಾಡಿ INC 10738
1962 ಬರಡೋಲ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 9792 ಶಿವಪ್ಪ ಕಾಂಬ್ಳೆ RIP 2623
1957 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 17402 ಲಚ್ಚಪ್ಪ ಸಂಧಿಮನಿ SWA 16390
ಇಂಡಿ ವಿಧಾನಸಭಾ ಕ್ಷೇತ್ರ-೧ ಬಾಂಬೆ ರಾಜ್ಯ
1951 ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 30322 ಬಾಬುರಾವ್ ಹುಜರೆ SFC 5457

ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರ

ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.

ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತಿದ ಈ ಬಾವಿ ಈಗಲೂ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾಖಂಡಕಿ ಗ್ರಾಮದಲ್ಲಿ ಮಹಿಪತಿದಾಸರ ವೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.

ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸಗಿ-ತಂಗಡಗಿಯಲ್ಲೇ. ತಾಳಿಕೋಟಿ ಸಮೀಪದ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ.

ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ಕ್ಷೇತ್ರದ ವಿಶೇಷತೆ

  • ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 8 ಬಾರಿ ವಿಜಯಿಯಾಗಿದೆ.
  • ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ರಾಜಾರಾಂ ಗಿರಿಧರಲಾಲ್ ದುಬೆಯವರು ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಆಯ್ಕೆಯಾದರು.
  • ರಾಜಾರಾಂ ಗಿರಿಧರಲಾಲ್ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು.
  • ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರವಾಗಿ ಆಯ್ಕೆಯಾದರು. ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿದ್ದರು. ನಂತರ 1967ರಲ್ಲಿ ಉತ್ತರ ಕನ್ನಡ (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ ದಿನಕರ ದೇಸಾಯಿ(ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು.
  • 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು.
  • 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ, 1984ರಲ್ಲಿ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಕಾಂಗ್ರೆಸ್‍ಯೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.
  • 2009 ಮತ್ತು 2014ರಲ್ಲಿ ರಮೇಶ್ ಜಿಗಜಿಣಗಿಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ನರೇಂದ್ರ ಮೋದಿ ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು.
  • 1999ರಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ.
  • ರಮೇಶ್ ಜಿಗಜಿಣಗಿಯವರು ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ.

ವಿಧಾನಸಭಾ ಚುನಾವಣಾ ಕ್ಷೇತ್ರಗಳು

ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆ(ಶಾಸಕರು)ಗೆ, ಒಬ್ಬರು ಲೋಕಸಭೆ(ಸಂಸದರು)ಗೆ ಮತ್ತು ಒಬ್ಬರು ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುತ್ತಾರೆ.

ಪ್ರಮುಖ ರಾಜಕೀಯ ಪಕ್ಷಗಳು

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು

  • ಜನತಾ ದಳ (JD)
  • ಸ್ವತಂತ್ರ ಪಕ್ಷ(SWA)
  • ಭಾರತೀಯ ಲೋಕ ದಳ (BLD)
  • ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP)
  • ಪಕ್ಷೇತರ(IND)

ಜನಪ್ರತಿನಿಧಿಗಳ ವಿವರ

ಸಂಸತ್ತಿನ ಸದಸ್ಯರ ವಿವರಣೆ

ವರ್ಷ ಲೋಕ ಸಭಾ ಕ್ಷೇತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಕರ್ನಾಟಕ ರಾಜ್ಯ
2019 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 635867 ಸುನಿತಾ ಚವ್ಹಾಣ JDS 377829
2014 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 471757 ಪ್ರಕಾಶ ರಾಠೋಡ INC 401938
2009 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 308939 ಪ್ರಕಾಶ ರಾಠೋಡ INC 266535
2004 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 344905 ಬಿ.ಎಸ್.ಪಾಟೀಲ(ಮನಗೂಳಿ) INC 307372
1999 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 348816 ಲಕ್ಷ್ಮಿಬಾಯಿ ಗುಡದಿನ್ನಿ INC 312177
1998 ವಿಜಯಪುರ ಲೋಕಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 261623 ಬಸನಗೌಡ ಲಿಂಗನಗೌಡ ಪಾಟೀಲ BJP 208801
1996 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ರುದ್ರಗೌಡ ಪಾಟೀಲ JD 185504 ಬಸನಗೌಡ ಪಾಟೀಲ(ಯತ್ನಾಳ) BJP 154911
1991 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 207887 ರಾಜಶೇಖರ ಪಟ್ಟಣಶೆಟ್ಟಿ BJP 140233
1989 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 306050 ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ JD 182717
1984 ವಿಜಯಪುರ ಲೋಕಸಭಾ ಕ್ಷೇತ್ರ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ JNP 206737 ರಾಯನಗೌಡ ಭೀಮಪ್ಪ ಚೌಧರಿ INC 204318
1980 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ INC(I) 167091 ನಿಂಗಪ್ಪ ಸಿದ್ದಪ್ಪ ಖೇಡ JNP 156529
1977 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ INC 173700 ಈರಪ್ಪ ಚನ್ನಮಲ್ಲಪ್ಪ ನಾಗಠಾಣ BLD 152026
ಮೈಸೂರು ರಾಜ್ಯ
1971 ವಿಜಯಪುರ ಲೋಕಸಭಾ ಕ್ಷೇತ್ರ ಭೀಮಪ್ಪ ಎಲ್ಲಪ್ಪ ಚೌಧರಿ INC 131486 ಬಿ.ಕೆ.ಗುಡದಿನ್ನಿ INC(O) 83798
ಉಪಚುನಾವಣೆ 1967
1967 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 107997 ಆರ್.ಬಿ.ಪಾಟೀಲ SWA 59089
1967 ವಿಜಯಪುರ ಲೋಕಸಭಾ ಕ್ಷೇತ್ರ ಗುರುಲಿಂಗಪ್ಪ ದೇವಪ್ಪ ಪಾಟೀಲ SWA 113208 ರಾಜಾರಾಮ ಗಿರಿಧರಲಾಲ ದುಬೆ INC 111104
1962 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ INC 105452 ಮುರಿಗಪ್ಪ ಸಿದ್ದಪ್ಪ ಸುಗಂಧಿ SWA 63456
1957 ವಿಜಯಪುರ ಲೋಕಸಭಾ ಕ್ಷೇತ್ರ ಮುರಿಗಪ್ಪ ಸಿದ್ದಪ್ಪ ಸುಗಂಧಿ IND 88209 ರಾಜಾರಾಮ ಗಿರಿಧರಲಾಲ ದುಬೆ INC 77273
ಬಾಂಬೆ ರಾಜ್ಯ
1951 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ INC 119895 ಮುರಿಗಪ್ಪ ಸಿದ್ದಪ್ಪ ಸುಗಂಧಿ KMPP 44095

ಪಾಟೀಲರ ರಾಜಕಾರಣ

ವಿಜಯಪುರ ಜಿಲ್ಲೆಯ ರಾಜಕಾರಣದಲ್ಲಿ ಪಾಟೀಲರದ್ದೇ ಪಾರುಪತ್ಯ. ಯಾವುದೇ ಪಕ್ಷದಿಂದ ಪಾಟೀಲರೊಬ್ಬರು ಕಣಕ್ಕಿಳಿದರೆ ಎದುರಾಳಿಯೂ ಪಾಟೀಲರೇ ಆಗಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಪಾಟೀ ಸವಾಲು ನೋಡುವುದೇ ಮತದಾರರಿಗೆ ಖುಷಿ. ಇಲ್ಲಿ ಪಾಟೀಲರೇ ದುಷ್ಮನ್‌ಗಳು, ಪಾಟೀಲರೇ ಗೆಳೆಯರು. ಹೀಗಾಗಿ ಪಾಟೀಲರ ತಂತ್ರ- ಪ್ರತಿತಂತ್ರದ ಕುತೂಹಲ ಹೆಚ್ಚು.

ಜಿಲ್ಲೆಯಲ್ಲಿ 1957ರಿಂದ ಈವರೆಗಿನ ಚುನಾವಣೆ ಪುಟಗಳನ್ನು ತಿರುವಿ ಹಾಕಿದರೆ ಪಾಟೀಲರೇ ಕದನ ಕಲಿಗಳಾಗಿ ಮಿಂಚಿರುವುದನ್ನು ಕಾಣಬಹುದು. ಇಡೀ ಜಿಲ್ಲೆಯಲ್ಲಿ 119 ಮಂದಿ ಪಾಟೀಲರು ಸ್ಪರ್ಧಿಸಿ 40 ಮಂದಿ ಚುನಾಯಿತರಾಗಿದ್ದಾರೆ. ಇದರಲ್ಲಿ 6, 4 ಬಾರಿ ಗೆದ್ದ ಪಾಟೀಲರೇ ಹೆಚ್ಚಿದ್ದಾರೆ. ಗೆದ್ದವರು ಒಬ್ಬರು ಪಾಟೀಲರಾದರೆ ಸೋತವರೂ ಮತ್ತೊಬ್ಬ ಪಾಟೀಲರೇ ಆಗಿದ್ದಾರೆ. ಅದರಲ್ಲೂ ಹಿಪ್ಪರಗಿ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಸಿಂದಗಿ ಕ್ಷೇತ್ರದ ಮತ ಸಮರದಲ್ಲಿ ಪಾಟೀಲರೇ ಜಿದ್ದಾಜಿದ್ದಿನ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ. ಕನಿಷ್ಠ ನಾಲ್ಕು ಮಂದಿ ಪಾಟೀಲರು ಶಾಸಕರಾಗಿ ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. 2013ರಲ್ಲೂ ಸಚಿವ ಎಂ.ಬಿ.ಪಾಟೀಲ, ಹಿರಿಯ ಶಾಸಕ ಶಿವಾನಂದ ಪಾಟೀಲ, ಎ.ಎಸ್.ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ನಾಲ್ವರು ಚುನಾಯಿತರಾಗಿದ್ದರು.

ಜಿಲ್ಲೆಯ 7 ಸಾಮಾನ್ಯ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಮಾಹಿತಿ ಗಮನಿಸಿದರೆ ಎ ಟು ಝಡ್‌ ಪಾಟೀಲರೇ ಇರುವುದು ಕಂಡುಬರುತ್ತದೆ. ಅಂದರೆ ಇಂಗ್ಲಿಷ್‌ ಅಕ್ಷರಗಳ ಪ್ರಕಾರ ಅವರ ಹೆಸರು ಇರುವ ಶಾಸಕರು ಇದ್ದಾರೆ. ಅಂದರೆ ಅಮೀನಪ್ಪ ಪಾಟೀಲ, ಬಸನಗೌಡ, ಚಂದ್ರಗೌಡ, ದೊಡ್ಡನಗೌಡ, ಜಗದೀಶಗೌಡ, ಕುಮಾರಗೌಡ, ಮಲ್ಲನಗೌಡ, ಮಲಕೇಂದ್ರ ಪಾಟೀಲ, ಪ್ರಭುಗೌಡ, ಶಿವಾನಂದ ಪಾಟೀಲ, ಶಾಂತಗೌಡ, ರವಿಕಾಂತ ಪಾಟೀಲ, ವಿಜುಗೌಡ, ಯಶವಂತರಾಯಗೌಡ ಪಾಟೀಲ ಹೀಗೆ ಪಟ್ಟಿ ಸಾಗುತ್ತದೆ.

ಒಂದೇ ಹೆಸರಿವರೂ ಎದುರಾಳಿಗಳಾಗಿದ್ದು, ಪಕ್ಕದ ಕ್ಷೇತ್ರಗಳಲ್ಲಿ ಉದಾಹರಣೆಯಿದೆ. ಅಪ್ಪ-ಮಗ, ಅಣ್ಣ-ತಮ್ಮ, ಬೀಗರು, ಹತ್ತಿರದ ಸಂಬಂಧಿಗಳು ಸ್ಪರ್ಧಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಮಾತ್ರವಲ್ಲದೇ ಮುಸ್ಲಿಂ ಸಹಿತ ಇತರೆ ಸಮುದಾಯದವರೂ ಪಾಟೀಲರು ಎನ್ನುವ ಸರ್‌ ನೇಮ್‌(ಮನೆತನ ಹೆಸರು) ಹೊಂದಿರುವುದರಿಂದ ಒಳಪಂಗಡಗಳ ಸುಳಿ ಗೊತ್ತಾಗುವುದು ಚುನಾವಣೆಯಲ್ಲಿ ಗೆದ್ದಾಗ ಇಲ್ಲವೇ ಸೋತಾಗಲೇ.

1957ರಲ್ಲಿ 4, 1962ರಲ್ಲಿ 5, 1967ರಲ್ಲಿ 3, 1972ರಲ್ಲಿ 4, 1984ರಲ್ಲಿ 11, 1983ರಲ್ಲಿ 10, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 13, 1999ರಲ್ಲಿ 8, 2004ರಲ್ಲಿ 9, 2008ರಲ್ಲಿ 16 , 2013ರಲ್ಲಿ 15 ಜನರು ಪಾಟೀಲರೇ ಸ್ಪರ್ಧಿಸಿದ್ದಾರೆ.

ಬಿ.ಎಸ್.ಪಾಟೀಲ(ಮನಗೂಳಿ) 6 ಬಾರಿ, ಶಿವಾನಂದ ಪಾಟೀಲ ಮತ್ತು ಎಂ.ಬಿ.ಪಾಟೀಲ 5 ಬಾರಿ, ಬಿ.ಎಸ್‌.ಪಾಟೀಲ(ಸಾಸನೂರ) ಹಾಗೂ ಬಿ.ಎಂ.ಪಾಟೀಲ 4 ಬಾರಿ ಗೆಲುವು ಕಂಡಿದ್ದಾರೆ. ರವಿಕಾಂತ ಪಾಟೀಲ 3 ಬಾರಿ ಪಕ್ಷೇತರವಾಗಿ ಗೆದ್ದ ದಾಖಲೆಯಿದ್ದು, ಜಿ.ಎನ್‌.ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ(ಯತ್ನಾಳ), ಕುಮಾರಗೌಡ ಪಾಟೀಲ,ಯಶವಂತರಾಯಗೌಡ ಪಾಟೀಲ ಮತ್ತು ವೈ.ಎಸ್‌.ಪಾಟೀಲ್‌ ಅವರು 2 ಬಾರಿ ಗೆದ್ದಿದ್ದಾರೆ. ಬಿ.ಬಿ.ಪಾಟೀಲ, ಕೆ.ಡಿ.ಪಾಟೀಲ(ಉಕ್ಕಲಿ), ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲರು ತಲಾ ಒಂದು ಬಾರಿ ಗೆದ್ದಿದ್ದಾರೆ.

ಬಸವನಬಾಗೇವಾಡಿಯಲ್ಲಿ ಸಂಬಂಧಿಕರೇ ಎದುರಾಳಿಗಳಾಗಿದ್ದರೆ, ಹಿಪ್ಪರಗಿಯಲ್ಲಿ ಜಿ.ಎನ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾದ ಇತಿಹಾಸವಿದೆ.

ನಗರಾಡಳಿತ[ಬದಲಾಯಿಸಿ]

ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ.

  • ಜನಸಂಖ್ಯೆ - 3,26,368 (2011)
  • ವಿಸ್ತೀರ್ಣ - 93.5 ಸ್ಕ್ವರ್ ಮೀಟರ್
  • ವಾರ್ಡಗಳು - 35
  • ನಗರದಲ್ಲಿ ರಸ್ತೆಯ ಉದ್ದ - 600 ಕಿ.ಮೀ.

ನಗರದ ಪ್ರಮುಖ ಬಡಾವಣೆಗಳು

ಶಿಕ್ಷಣ[ಬದಲಾಯಿಸಿ]

ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಯಪುರ
ಅಂಜುಮನ್ ಮಹಾವಿದ್ಯಾಲಯ, ವಿಜಯಪುರ
ಬಂಜಾರಾ ಸಂಘ, ವಿಜಯಪುರ

ವಿಶ್ವವಿದ್ಯಾಲಯಗಳು

ಸಾಹಿತ್ಯ[ಬದಲಾಯಿಸಿ]

ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ

ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ ಅಣ್ಣ ಬಸವಣ್ಣ, ಅಭಿನವ ಪಂಪ ನಾಗಚಂದ್ರ, ಕುಮಾರ ವಾಲ್ಮೀಕಿ, ಅಗ್ಗಳ, ಗೋಪಕವಿ, ಕಾಖಂಡಕಿ ಮಹಿಪತಿದಾಸರು, ರುಕ್ಮಾಂಗದ ಪಂಡಿತರು, ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಶಿಂಪಿ ಲಿಂಗಣ್ಣ, ಹಲಸಂಗಿ ಮಧುರ ಚೆನ್ನ, ಹರ್ಡೇಕರ ಮಂಜಪ್ಪ, ಕಾಪಸೆ ರೇವಪ್ಪ, ಶ್ರೀರಂಗ, ರಂ. ಶ್ರೀ. ಮುಗಳಿ, ಮಲ್ಲಪ್ಪ ಚಾಂದಕವಟೆ, ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, ಡಾ.ಬಿ.ಬಿ.ಹೆಂಡಿ, ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, ಎಮ್.ಎಮ್.ಕಲಬುರ್ಗಿ, ಶಂ.ಗು.ಬಿರಾದಾರ, ಶರಣಪ್ಪ ಕಂಚಾಣಿ, ಕುಮಾರ ಕಕ್ಕಯ್ಯ, ಸಿ ಸು ಸಂಗಮೇಶ, ಸಂಗಮನಾಥ ಹಂಡಿ, ರಂಜಾನ ದರ್ಗಾ, ಸ.ಜ.ನಾಗಲೋಟಿ ಮಠ, ಎಚ್ ಬಿ ವಾಲೀಕಾರ, ಆರ್. ಆರ್. ಹಂಚಿನಾಳ, ಕೃಷ್ಣ ಕೊಲ್ಹಾರ ಕುಲಕರ್ಣಿ, ಜಿ.ವಿ.ಕುಲಕರ್ಣಿ, ಪಿ.ಬಿ.ಧುತ್ತರಗಿ, ಬಸವರಾಜ ಡೋಣೂರ, ಕೃಷ್ಣಮೂರ್ತಿ ಪುರಾಣಿಕ, ರಾಮಚಂದ್ರ ಕೊಟ್ಟಲಗಿ, ಕೆ.ಎನ್.ಸಾಳುಂಕೆ, ಶಾಂತಾ ಇಮ್ರಾಪುರ, ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, ಪ್ರೊ.ಎನ್.ಜಿ.ಕರೂರ, ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, ಜಂಬುನಾಥ ಕಲ್ಯಾಣಿ, ಡಾ. ವಿಜಾಯಾ ದೇವಿ, ಪ್ರೊ.ಜಿ.ಬಿ.ಸಜ್ಜನ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.

ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ.

ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ.

ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು.

1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ.

ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”

ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ.

ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ.

ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ.

1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.

ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.

ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ.

‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ.

ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು

ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೊ.ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು.

ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಕ್ರ.ಸಂ. ವರ್ಷ ಸ್ಥಳ ಅಧ್ಯಕ್ಷತೆ
9 1923 ವಿಜಯಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
79 2013 ವಿಜಯಪುರ ಕೊ. ಚನ್ನಬಸಪ್ಪ

ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಸಿಂಪಿ ಲಿಂಗಣ್ಣ, ಶ್ರೀರಂಗ ಮತ್ತು ಫ.ಗು.ಹಳಕಟ್ಟಿ.

ಕ್ರ.ಸಂ. ವರ್ಷ ಸ್ಥಳ ಅಧ್ಯಕ್ಷತೆ
12 1926 ಬಳ್ಳಾರಿ ಫ.ಗು.ಹಳಕಟ್ಟಿ
38 1956 ರಾಯಚೂರು ಶ್ರೀರಂಗ
62 1993 ಕೊಪ್ಪ್ಪಳ ಸಿಂಪಿ ಲಿಂಗಣ್ಣ
ಪ್ರಶಸ್ತಿ (ಪುರಸ್ಕಾರ)ಗಳು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತರು

ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು

ಪಂಪ ಪ್ರಶಸ್ತಿ ಪುರಸ್ಕೃತರು

ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು

ಕನಕಶ್ರೀ ಪ್ರಶಸ್ತಿ ಪುರಸ್ಕೃತರು

ವೃತ್ತ ಪತ್ರಿಕೆಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಲ್ಲಿ ವೈಭವ ಮತ್ತು ಉದಯ ಕರ್ನಾಟಕ ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು.

  • ಬಹುಜನ ನಾಯಕ
  • ಗುಮ್ಮಟ ನಗರಿ

ವಸ್ತು ಸಂಗ್ರಾಲಯಗಳು[ಬದಲಾಯಿಸಿ]

  • ಪ್ರಾಚ್ಯ ವಸ್ತು ಸಂಗ್ರಾಲಯ, ಗೊಳ್ ಗುಂಬಜ್ ಆವರಣ, ವಿಜಯಪುರ.
  • ರೈಲ್ವೆ ವಸ್ತು ಸಂಗ್ರಾಲಯ, ವಿಜಯಪುರ
  • ವೈಜ್ಞಾನಿಕ ವಸ್ತು ಸಂಗ್ರಾಲಯ, ವಿಜಯಪುರ
  • ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ

ವೃತ್ತಿರಂಗಭೂಮಿ ನಾಟ್ಯ(ನಾಟಕ) ಸಂಘಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ವೃತ್ತಿರಂಗಭೂಮಿ ನಾಟಕ ಸಂಘಗಳಿವೆ.

  • ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಯಪುರ.
  • ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ.
  • ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ.

ವಿಜ್ಞಾನ ಮತ್ತು ತಂತ್ರಜ್ಞಾನ[ಬದಲಾಯಿಸಿ]

ಭಾಸ್ಕರಾಚಾರ್ಯರು ವಿಜಯಪುರ ಜಿಲ್ಲೆಯ ಗಣಿತಜ್ಞರು.

ಭಾಸ್ಕರಾಚಾರ್ಯರು ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ.

ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. ಕರ್ನಾಟಕದ ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು.

ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.

ಭಾಸ್ಕರಾಚಾರ್ಯನ ಮುಖ್ಯಕೃತಿಗಳು:

  • ಲೀಲಾವತಿ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
  • ಬೀಜಗಣಿತ
  • ಸಿದ್ಧಾಂತಶಿರೋಮಣಿ

ಇದರಲ್ಲಿ ಎರಡು ಭಾಗಗಳಿವೆ:

  • ಗೋಳಾಧ್ಯಾಯ
  • ಗ್ರಹಗಣಿತ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.

ವಿಜಯಪುರ ಕೃಷಿ ಹವಾಮಾನ ಸೇವೆಗಳು

ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Narayanpur Dam". Krishna Bhagya Jal Nigam Ltd. Retrieved 21 June 2016.

ದಿಕ್ಕುಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]