ಆಲೂರು ವೆಂಕಟರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಲೂರು ವೆಂಕಟ ರಾವ್ ಇಂದ ಪುನರ್ನಿರ್ದೇಶಿತ)
ಆಲೂರು ವೆಂಕಟರಾವ್
ಜನನಜುಲೈ ೧೨, ೧೮೮೦
ಬಿಜಾಪುರ, ಕರ್ನಾಟಕ, ಭಾರತ
ಮರಣಫೆಬ್ರುವರಿ ೨೫, ೧೯೬೪
ಧಾರವಾಡ, ಕರ್ನಾಟಕ, ಭಾರತ
ವೃತ್ತಿಸಾಹಿತಿಗಳು,ಸ್ವಾತಂತ್ರ್ಯ ಹೋರಾಟಗಾರರು, ವಕೀಲರು
ವಿಷಯಕನ್ನಡ ಸಾಹಿತ್ಯ

ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.

ಜನನ[ಬದಲಾಯಿಸಿ]

ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ವಿಜಯಪುರದಲ್ಲಿ ಜನಿಸಿದರು. ಇವರ ವಂಶಜರು ಧಾರವಾಡದ ಬಳಿಯ ಆಲೂರ(ಈಗಿನ ಗದಗ ಜಿಲ್ಲೆ, ರೋಣ ತಾಲ್ಲೂಕಿನ ಹೊಳೆ-ಆಲೂರ)ಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ.

ಶಿಕ್ಷಣ[ಬದಲಾಯಿಸಿ]

ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಎ. ಪದವಿ ಪಡೆದರು. ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.

ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳು.[೧]

ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.

ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು ೧೯೦೬ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ೧೯೨೨ ನವೆಂಬರ್ ೪ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.

ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. ೧೯೧೫ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.

ಸಾಮಾಜಿಕ ಕಾರ್ಯ[ಬದಲಾಯಿಸಿ]

ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. ೧೯೦೭ರಲ್ಲಿಯೆ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.

ಉದ್ಯಮಶೀಲತೆ[ಬದಲಾಯಿಸಿ]

[೨] ಆಲೂರರ ಉದ್ಯಮಶೀಲತೆ ಅಸಾಧಾರಣವಾದದ್ದು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೆಟ್ಟಿಗೆ ಕಾರಖಾನೆ, ಪೆನ್ಸಿಲ್ ಕಾರಖಾನೆ, ಉಡುಗೆ ಫ್ಯಾಕ್ಟರಿ, ಡ್ರಾಯಿಂಗ್ ಪೆಯಿಂಟಿಂಗ್ ಕ್ಲಾಸು, ಮತ್ತು ಪ್ರಿಂಟಿಂಗ್ ಕ್ಲಾಸುಗಳನ್ನೂ ಪ್ರಾರಂಭಿಸಿದರು. ಆಗಿನ ಬ್ರಿಟಿಷ್ ಆಳ್ವಿಕೆಯ ಹತ್ತಿಕ್ಕುವ ನೀತಿಯಿಂದಾಗಿ ಈ ಸಂಸ್ಥೆಯನ್ನು ಮುಚ್ಚಬೇಕಾಗಿ ಬಂತು. ನಂತರ ಸಕ್ಕರೆ ಕಾರಖಾನೆ, ಬೆಳಗಾವಿಯ ಹತ್ತಿರ ಖಾನಾಪುರದಲ್ಲಿ ಹಂಚಿನ ಕಾರಖಾನೆ,ಹೊಳೆ ಆಲೂರಿನಲ್ಲಿ ಹತ್ತಿಯ ಮಿಲ್ಲು, ಹೀಗೆ ಒಂದಾದಮೇಲೊಂದು ಉದ್ಯಮಗಳನ್ನು ಹುಟ್ಟುಹಾಕಿದರು. ನಂತರ ಮಿತ್ರರೊಂದಿಗೆ ಅಗ್ರಿಕಲ್ಚರಲ್ ಸೊಸೈಟಿ ತೆರೆದರು. ನಂತರ ಬಟ್ಟೆ ಅಂಗಡಿ ತೆರೆದರು. ತದನಂತರ ಮ್ಯೂಚುವಲ್ ಹೆಲ್ಪ್ ಫಂಡ್ ತೆರೆದರು. ದುರದೃಷ್ಟವಶಾತ್ ಇವು ಯಾವುದೂ ಯಶಸ್ವಿಯಾಗಲಿಲ್ಲ. ಈ ಪ್ರಯತ್ನಗಳಲ್ಲಿ ಬರಿಯ ಲಾಭ ಮಾಡಿಕೊಳ್ಳುವ ದೃಷ್ಟಿಯಿರದೆ, ಅವೆಲ್ಲವುಗಳಲ್ಲಿ ಒಂದು ವಿಶಿಷ್ಟ ರಾಷ್ಟ್ರೀಯ ಸೊಗಡಿದ್ದು, ಭಾರತದ ಔದ್ಯೋಗಿಕ ಪ್ರಗತಿಯ ಅಂಗವಾಗಿದ್ದವು.

ಸಾಹಿತ್ಯ[ಬದಲಾಯಿಸಿ]

ಆಲೂರು ವೆಂಕಟರಾಯರು ಸುಮಾರು ಇಪ್ಪತ್ತೈದು ಕೃತಿಗಳನ್ನು ಬರೆದಿದ್ದು ಕೆಲವು ಇಂತಿವೆ:

ಶ್ರೀ ವಿದ್ಯಾರಣ್ಯ ಚರಿತ್ರೆ , ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ(ಅನುವಾದ), ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ(ನಾಟಕ), ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ, ಗೀತಾಪ್ರಕಾಶ, ಗೀತಾಸಂದೇಶ, ಗೀತಾಪರಿಮಳ, ಗೀತಾಭಾವ ಪ್ರದೀಪ, ಶ್ರೀ ಮಧ್ವಾಚಾರ್ಯರ ಮೂಲ ಸಿದ್ಧಾಂತ, ಶ್ರೀ ಮಧ್ವಾಚಾರ್ಯರ ಪೂರ್ಣ ಬ್ರಹ್ಮವಾದ. ಆತ್ಮಕಥನ - ನನ್ನ ಜೀವನ ಸ್ಮೃತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಲೂರು ವೆಂಕಟರಾಯರು ೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಜನತೆ ಇವರಿಗೆ ದೇಶಸೇವಾಧುರೀಣ , ಸ್ವಭಾಷಾರಕ್ಷಕ ಎಂದು ಕರೆದು ಸನ್ಮಾನಿಸಿದೆ. ಅಲ್ಲದೆ ಕರ್ನಾಟಕದ ಕುಲಪುರೋಹಿತ ಎಂದು ಗೌರವಿಸಿದೆ. ಆಲೂರು ವೆಂಕಟರಾಯರು ೧೯೬೪ಫೆಬ್ರುವರಿ ೨೫ ರಂದು ನಿಧನ ಹೊಂದಿದರು.

ಕನ್ನಡಕ್ಕಾಗಿ ಕಾಯಕಲ್ಪ[ಬದಲಾಯಿಸಿ]

ಆಲೂರರ 'ಗತವೈಭವ'ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ... "ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ". ಈ ಮಾತುಗಳು ಆಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ಆಲೂರು ವೆಂಕಟರಾಯರು ಮಾಡಿದ ಕಾರ್ಯಗಳು ಬುನಾದಿ ಒದಗಿಸಿವೆ.

ಜಯ ಕರ್ನಾಟಕದ ಲೇಖನ[ಬದಲಾಯಿಸಿ]

ಆಲೂರರು ಪ್ರಸಿದ್ಧ 'ಜಯಕರ್ನಾಟಕ' ಪತ್ರಿಕೆಯನ್ನು ೧೯೨೨ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. "ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ."

ರಾಷ್ಟ್ರೀಯತ್ವಕ್ಕಾಗಿ ಹೋರಾಟ[ಬದಲಾಯಿಸಿ]

ಆಲೂರರು ಕರ್ನಾಟಕಕ್ಕಾಗಿ ಹೇಗೆ ಹೋರಾಡಿದರೋ ಅದೇ ರೀತಿಯಲ್ಲಿ ರಾಷ್ಟ್ರೀಯತ್ವಕ್ಕಾಗಿ ಹೊಡೆದಾಡಿದರು. ೧೯೨೮ರಲ್ಲಿ ಅವರು "ರಾಷ್ಟ್ರೀಯ ಮೀಮಾಂಸೆ" ಎಂಬ ಒಂದು ಕಿರುಹೊತ್ತಗೆಯನ್ನು ಬರೆದು ಪ್ರಕಟಿಸಿದರು. ರಾಷ್ಟ್ರೀಯತ್ವವನ್ನು ಸುಂದರವಾಗಿ ವರ್ಣಿಸುವ, ಆಲೂರರ ಈ ವಾಕ್ಯವೃಂದವನ್ನು ನೋಡುವಾಗ, ನಮಗೆ ಅವರ ಕಲ್ಪನೆಯ ನಿಚ್ಚಳತೆ ಕಂಡುಬರುತ್ತದೆ. "ರಾಷ್ರೀಯತೆಯನ್ನು, ಅಥವಾ ರಾಷ್ಟ್ರಾಭಿಮಾನ ಎಂಬುದನ್ನು ಅಥವಾ ಅಹಂಕಾರವನ್ನು ಒಂದು ನದಿಗೆ ಹೋಲಿಸಬಹುದು. ಈ ಅಹಂಕಾರ ರೂಪ ನದಿಯ ಉಗಮವು ಚಿಕ್ಕದಿದ್ದು, ಅದು ತನ್ನ ಸ್ವಂತ ಮನಸ್ಸು ಎಂಬಷ್ಟರಮಟ್ಟಿಗೆ ಮಾತ್ರವೇ ಇರುತ್ತದೆ. ಆದರೆ ಅದು ಮುಂದೆ ವಿಸ್ತಾರವಾಗುತ್ತ ತನ್ನ ಹೆಂಡಿರು, ಮಕ್ಕಳು, ತನ್ನ ಊರು, ತನ್ನ ಪ್ರಾಂತ್ಯ, ತನ್ನ ರಾಷ್ಟ್ರ - ಇಲ್ಲಿಯವರೆಗೆ ವಿಸ್ತಾರಹೊಂದಿ ಕೊನೆಗೆ ಅದು ಸರ್ವಭೂಸಹಿತ ಸಮುದ್ರಕ್ಕೆ ಹೋಗಿ ಕೂಡುತ್ತದೆ". "ರಾಷ್ಟ್ರೀಯತ್ವಕ್ಕೆ ಒಂದೇ ಜಾತಿ ಅಥವಾ ಜನಾಂಗವಿರಬೇಕೆಂಬ ಅವಶ್ಯಕತೆಯೂ ಇಲ್ಲ, ಒಂದೇ ಭಾಷೆಯಿರಬೇಕೆಂಬುದೂ ಹೇಳಲಾಗುವುದಿಲ್ಲ; ಒಂದೇ ಧರ್ಮವೂ ಬೇಕೇಬೇಕಂತಲ್ಲ; ಒಂದೇ ದೇಶವೂ ಕೂಡ ಇಲ್ಲದಿದ್ದರೂ ಸಾಗಬಹುದು."

ಆಧ್ಯಾತ್ಮಿಕತೆ[ಬದಲಾಯಿಸಿ]

ಆಲೂರರು ಮೂಲತಃ ಧಾರ್ಮಿಕ ವ್ಯಕ್ತಿ. ಬಾಲಗಂಗಾಧರ ತಿಲಕರ 'ಗೀತಾರಹಸ್ಯ'ದ ಅನುವಾದ ಕಾರ್ಯ, ಅವರ ರಾಜಕಾರಣ ಮತ್ತು ಧರ್ಮದೃಷ್ಟಿಗಳ ಸಮನ್ವಯಕ್ಕೆ ಒಂದು ದಾರಿ ಮಾಡಿಕೊಟ್ಟಿತು ಎನ್ನಬಹುದು. 'ಗೀತಾ ರಹಸ್ಯ'ದ ಅನುವಾದ ಕಾರ್ಯ ಕೈಗೊಂಡದ್ದು, ತಿಲಕರ ಒತ್ತಾಯದ ಮೇರೆಗೆ. ಅನುವಾದ ಎಲ್ಲರಿಗೂ ಸಮ್ಮತವಾಗಬೇಕೆಂದ ದೃಷ್ಟಿಯಿಂದ, ಬಿ.ಎಂ.ಶ್ರೀ ಮತ್ತಿತರರ ಅಭಿಪ್ರಾಯ ಪಡೆದು ಅದನ್ನು ಪರಿಷ್ಕರಿಸಿದರು. ಆಲೂರರ ಜೊತೆಗೆ ಕೆರೂರು ವಾಸುದೇವಾಚಾರ್ಯರು ಕೊನೆಯ ಭಾಗದ ಕೆಲವು ಶ್ಲೋಕಗಳನ್ನು ಅನುವಾದ ಮಾಡಿ ಸಹಕರಿಸಿದರು. ಅಲೂರ ವೆಂಕಟರಾಯರದು ಆಧ್ಯಾತ್ಮಿಕ ಪ್ರವೃತ್ತಿ. ೧೯೩೧ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ 'ಸರ್ಚ್ ವಾರೆಂಟ್' ಅನ್ನು ಹೊರಡಿಸಿತು. ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ದಿಗ್ಭಂದನದಲ್ಲಿ ಇರಿಸಿದರು. ಇದರ ಪರಿಣಾಮ ಆಲೂರರ ಮೇಲೆ ಒಳ್ಳೆಯದನ್ನೇ ಮಾಡಿತು. ಅವರ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ಈ ಬಿಡುವು ಅನುವು ಮಾಡಿಕೊಟ್ಟಿತು. ಅವರು ಗೀತೆಯ ಬಗ್ಗೆ ಅನಂತರ ಬರೆದ ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳ ಬರವಣಿಗೆಗೆ ಇಲ್ಲಿ ನಡೆಸಿದ ಚಿಂತನೆ ಮತ್ತು ಅಧ್ಯಯನಗಳೇ ಬುನಾದಿ ಹಾಕಿದವು ಎಂದು ಹೇಳಬಹುದು. ಒಬ್ಬ ಮಾಧ್ವ ಧರ್ಮಾನುಯಾಯಿಯಾಗಿಯೂ ವೆಂಕಟರಾಯರು ಹಲವು ವಿಭಿನ್ನ ಮನೋಧರ್ಮದ ಗ್ರಂಥಗಳನ್ನು ಬರೆದರು.

ಕರ್ನಾಟಕದ ಪ್ರಾಣೋಪಾಸಕರು[ಬದಲಾಯಿಸಿ]

ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: "ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ... ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ."

ಆಕರಗಳು[ಬದಲಾಯಿಸಿ]

  1. ಅ.ನ. ಕೃಷ್ಣರಾಯ. "ಕನ್ನಡ ಕುಲರಸಿಕರು". ಕನ್ನಡ ಸಾಹಿತ್ಯ ಪರಿಷತ್ತು, ೨೦೧೪. pp. ೩-೬.
  2. ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು, ಮೂಲ:ಕೆ.ರಾಘವೇಂದ್ರ ರಾವ್, ಕನ್ನಡಕ್ಕೆ : ಆರ್ಯ, ಮನೋಹರ ಗ್ರಂಥ ಮಾಲಾ, ಧಾರವಾಡ ,2005 ಪುಟ 98-99