ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಜಯಪುರ ಲೋಕಸಭಾ ಕ್ಷೇತ್ರ ಇಂದ ಪುನರ್ನಿರ್ದೇಶಿತ)
ರಮೇಶ ಜಿಗಜಿಣಗಿ, ಪ್ರಸ್ತುತ ಸಂಸದರು

ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾಗಿದೆ . ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿಯಾಗಿತ್ತು . ಸೂಫಿ ಸಂತರ ಪ್ರಭಾವದ ನೆಲೆ, ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ,(ಮಿನಿ ತಾಜಮಹಲ್ ) ಭಾರ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶಿವಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಗ್ರಾಮದ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತದ ಈ ಬಾವಿ ಈಗಲೂ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ.

ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇಯಾದ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾಖಂಡಕಿ ಗ್ರಾಮದಲ್ಲಿ ಮಹಿಪತಿದಾಸರ ಬೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ, ಐತಿಹಾಸಿಕ ಉಪ್ಪಲದಿನ್ನಿಯ ಸಂಗಮೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದ್ದರು .

ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತೊಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ಇದರಂತೆ ಹತ್ತಾರು ಸಕ್ಕರೆ ಕಾರ್ಖಾನೆಗಳು ಆರಂಭಗೊಂಡಿವೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಲಿಂಬೆ ಹಣ್ಣಿನ ಖಣಜವಾದ ಇಂಡಿ ತಾಲ್ಲೂಕಿನಿಂದ ದೇಶ-ವಿದೇಶಕ್ಕೂ ನಿಂಬೆ ಹಣ್ಣು ರಫ್ತಾಗುತ್ತಿದೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.

ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸಗಿ-ತಂಗಡಗಿಯಲ್ಲೇ. ತಾಳಿಕೋಟಿ ಸಮೀಪದ ಮಿಣಜಗಿಯ ಪರ್ಸಿ(ತಾರಸಿ) ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿವಾಗಿದೆ . 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲ ಸಂಗಮವು ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಸಾಕಷ್ಟು ಲಂಬಾಣಿ ಜನಾಂಗವನ್ನು ಕಾಣಬಹುದು. ಈತ್ತಿಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಉಷ್ಣ ವಿದ್ಯುತ್ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವನ್ನು 1951 - 1967ವರೆಗೆ ಬಿಜಾಪುರ ಉತ್ತರ ಲೋಕ ಸಭೆ ಚುನಾವಣಾ ಕ್ಷೇತ್ರವೆಂದು ಕರೆಯುತ್ತಿದ್ದರು.
  • 1951ರಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ವಿಧಾನಸಭೆ ಕ್ಷೇತ್ರವು ವಿಜಯಪುರ ಲೋಕ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.
  • ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 9 ಬಾರಿ, ನಂತರದ ಸ್ಥಾನದಲ್ಲಿ ಬಿಜೆಪಿ 5 ಬಾರಿ ವಿಜಯಿಯಾಗಿದೆ.
  • ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದು ವಿಜಯಪುರದಲ್ಲಿ ನೆಲೆಸಿರುವ ರಾಜಾರಾಮ ಗಿರಿಧರಲಾಲ ದುಬೆಯವರು ಕಾಂಗ್ರೆಸ್‍ನಿಂದ ಪ್ರ-ಪ್ರಥಮ ಬಾರಿಗೆ ಆಯ್ಕೆಯಾದರು.
  • 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿ ದಾಖಲೆ ಬರೆದಿದ್ದಾರೆ. ನಂತರ 1967ರಲ್ಲಿ ಉತ್ತರ ಕನ್ನಡ ಲೋಕ ಸಭೆ ಚುನಾವಣಾ ಕ್ಷೇತ್ರ(ಹಳೆಯ ಕೆನರಾ)ದಿಂದ ದಿನಕರ ದೇಸಾಯಿ(ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. ಅದರಂತೆ ಮಂಡ್ಯ ಲೋಕ ಸಭೆ ಚುನಾವಣಾ ಕ್ಷೇತ್ರದಿಂದ 2019ರಲ್ಲಿ ಸುಮಲತಾರವರು ಪಕ್ಷೇತರವಾಗಿ ಆಯ್ಕೆಯಾದ, ಕರ್ನಾಟಕದ ಮೂರನೇಯ ಹಾಗೂ ಪ್ರಥಮ ಮಹಿಳಾ ಸಂಸದರಾಗಿದ್ದಾರೆ.[೧][೨]
  • 1999ರಲ್ಲಿ ಬಿ.ಕೆ.ಗುಡದಿನ್ನಿಯವರ ಪತ್ನಿಯಾದ ಲಕ್ಷ್ಮಿಬಾಯಿ ಗುಡದಿನ್ನಿಯವರು ಪ್ರಥಮ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲುಂಡರು.[೩]
  • 2009 ಮತ್ತು 2014ರಲ್ಲಿ ರಮೇಶ್ ಜಿಗಜಿಣಗಿಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ನರೇಂದ್ರ ಮೋದಿ ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು.
  • ಕಾಂಗ್ರೆಸ್‍ನ ಬಿ.ಕೆ.ಗುಡದಿನ್ನಿಯವರು 1967ರಲ್ಲಿ ನಡೆದ ಉಪಚುನಾವಣೆ ಮತ್ತು 1989, 1991ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಒಟ್ಟಾರೆ ಮೂರು ಬಾರಿ ಆಯ್ಕೆಯಾಗಿ 1971ರಲ್ಲಿ ಒಂದು ಬಾರಿ ಸೋತಿದ್ದಾರೆ.[೪]
  • ಬಿಜೆಪಿಯಿಂದ ರಮೇಶ್ ಜಿಗಜಿಣಗಿಯವರು 2009, 2014 ಮತ್ತು 2019ರಲ್ಲಿ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ.
  • 2019ರಲ್ಲಿ ಜೆಡಿಎಸ್‌ - ಕಾಂಗ್ರೆಸ್‍ನ ಮೈತಿ ಅಭ್ಯರ್ಥಿಯಾಗಿ ಸುನಿತಾ ದೇವಾನಂದ ಚವ್ಹಾಣರವರು ಪ್ರಥಮ ಬಾರಿ ಸ್ಪರ್ಧಿಸಿ ಸೋಲುಂಡರು.
  • 1999ರಿಂದ 2019ರ ವರೆಗೆ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ.

ವಿಧಾನ ಸಭಾ ಚುನಾವಣಾ ಕ್ಷೇತ್ರಗಳು[ಬದಲಾಯಿಸಿ]

ವಿಜಯಪುರ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.

ವಿಧಾನಸಭೆ ಸಂಖ್ಯೆ ವಿಧಾನಸಭೆ ಮೀಸಲಾತಿ
26 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಸಾಮಾನ್ಯ
27 ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಸಾಮಾನ್ಯ
28 ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸಾಮಾನ್ಯ
29 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಸಾಮಾನ್ಯ
30 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಸಾಮಾನ್ಯ
31 ನಾಗಠಾಣ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ
32 ಇಂಡಿ ವಿಧಾನಸಭಾ ಕ್ಷೇತ್ರ ಸಾಮಾನ್ಯ
33 ಸಿಂದಗಿ ವಿಧಾನಸಭಾ ಕ್ಷೇತ್ರ ಸಾಮಾನ್ಯ

ಪ್ರಮುಖ ರಾಜಕೀಯ ಪಕ್ಷಗಳು[ಬದಲಾಯಿಸಿ]

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು

  • ಜನತಾ ದಳ (JD)
  • ಸ್ವತಂತ್ರ ಪಕ್ಷ(SWA)
  • ಭಾರತೀಯ ಲೋಕ ದಳ (BLD)
  • ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP)
  • ಪಕ್ಷೇತರ(IND)

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ಸಂಸತ್ತಿನ ಸದಸ್ಯರ ವಿವರಣೆ

ವರ್ಷ ಲೋಕ ಸಭಾ ಕ್ಷೇತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಕರ್ನಾಟಕ ರಾಜ್ಯ
2019 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 635867 ಸುನಿತಾ ದೇವಾನಂದ ಚವ್ಹಾಣ JDS 377829
2014 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 471757 ಪ್ರಕಾಶ ರಾಠೋಡ INC 401938
2009 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ BJP 308939 ಪ್ರಕಾಶ ರಾಠೋಡ INC 266535
2004 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 344905 ಬಿ.ಎಸ್.ಪಾಟೀಲ(ಮನಗೂಳಿ) INC 307372
1999 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) BJP 348816 ಲಕ್ಷ್ಮಿಬಾಯಿ ಗುಡದಿನ್ನಿ INC 312177
1998 ವಿಜಯಪುರ ಲೋಕಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 261623 ಬಸನಗೌಡ ಲಿಂಗನಗೌಡ ಪಾಟೀಲ BJP 208801
1996 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ರುದ್ರಗೌಡ ಪಾಟೀಲ JD 185504 ಬಸನಗೌಡ ಪಾಟೀಲ(ಯತ್ನಾಳ) BJP 154911
1991 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 207887 ರಾಜಶೇಖರ ಪಟ್ಟಣಶೆಟ್ಟಿ BJP 140233
1989 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 306050 ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ JD 182717
1984 ವಿಜಯಪುರ ಲೋಕಸಭಾ ಕ್ಷೇತ್ರ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ JNP 206737 ಡಾ.ಆರ್.ಬಿ.ಚೌಧರಿ INC 204318
1980 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ INC(I) 167091 ನಿಂಗಪ್ಪ ಸಿದ್ದಪ್ಪ ಖೇಡ JNP 156529
1977 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ INC(I) 173700 ಈರಪ್ಪ ಚನ್ನಮಲ್ಲಪ್ಪ ನಾಗಠಾಣ BLD 152026
ಮೈಸೂರು ರಾಜ್ಯ
1971 ವಿಜಯಪುರ ಲೋಕಸಭಾ ಕ್ಷೇತ್ರ ಭೀಮಪ್ಪ ಎಲ್ಲಪ್ಪ ಚೌಧರಿ INC(I) 131486 ಬಿ.ಕೆ.ಗುಡದಿನ್ನಿ INC(O) 83798
ಉಪಚುನಾವಣೆ 1968
1968 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ INC 107997 ಆರ್.ಬಿ.ಪಾಟೀಲ SWA 59089
1967 ವಿಜಯಪುರ ಲೋಕಸಭಾ ಕ್ಷೇತ್ರ ಗುರುಲಿಂಗಪ್ಪ ದೇವಪ್ಪ ಪಾಟೀಲ SWA 113208 ರಾಜಾರಾಮ ಗಿರಿಧರಲಾಲ ದುಬೆ INC 111104
1962 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ INC 105452 ಮುರಿಗಪ್ಪ ಸಿದ್ದಪ್ಪ ಸುಗಂಧಿ SWA 63456
1957 ವಿಜಯಪುರ ಲೋಕಸಭಾ ಕ್ಷೇತ್ರ ಮುರಿಗಪ್ಪ ಸಿದ್ದಪ್ಪ ಸುಗಂಧಿ IND 88209 ರಾಜಾರಾಮ ಗಿರಿಧರಲಾಲ ದುಬೆ INC 77273
ಬಾಂಬೆ ರಾಜ್ಯ
1951 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ INC 119895 ಮುರಿಗಪ್ಪ ಸಿದ್ದಪ್ಪ ಸುಗಂಧಿ KMPP 44095

ಉಲ್ಲೇಖಗಳು[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]