ವನಿತಾ ವಾಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವನಿತಾ ವಾಸು
Vanitvasu-matha-shooting 2005
ಜನನ
ಬೆಂಗಳೂರು, ಕರ್ನಾಟಕ
ಉದ್ಯೋಗಚಲನಚಿತ್ರ ಮತ್ತು ಕಿರುತೆರೆ ನಟಿ
ಸಕ್ರಿಯ ವರ್ಷಗಳು೧೯೮೭-ಪ್ರಸ್ತುತ

ವನಿತಾ ವಾಸು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ಅಭಿನೇತ್ರಿ. ೧೯೮೦ರ ದಶಕದ ಕೊನೆಯಿಂದ ೧೯೯೦ರ ದಶಕದ ಮಧ್ಯದವರೆಗೆ ಮೋಹಕ ಪಾತ್ರಗಳಿಗೆ ಹೆಸರಾಗಿದ್ದ ಮೋಹಕ ತಾರೆ. ಆಗಂತುಕ(೧೯೮೭) ಚಿತ್ರದಲ್ಲಿ ನಾಯಕಿಯಾಗಿ ಚಿತ್ರ ಜೀವನ ಪ್ರಾರಂಭಿಸಿದ ವನಿತಾ ಕಾಡಿನ ಬೆಂಕಿ(೧೯೮೮), ತರ್ಕ(೧೯೮೯), ಗೋಲ್‍ಮಾಲ್ ರಾಧಾಕೃಷ್ಣ(೧೯೯೦), ಕಾಲಚಕ್ರ(೧೯೯೧) ಮತ್ತು ನಾಗಮಂಡಲ(೧೯೯೭)ಗಳಂತಹ ವಿಭಿನ್ನ ಚಿತ್ರಗಳಲ್ಲಿನ ವೈವಿಧ್ಯಮಯ ಪಾತ್ರಗಳನ್ನು ಸಮರ್ಥವಾಗಿ ಪೋಷಿಸಿ ಸಿನಿರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿರುವ ವನಿತಾ ಮನೆಯೊಂದು ಮೂರು ಬಾಗಿಲು ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಮಲಯಾಳಿ ಭಾಷಿಕ ಕುಟುಂಬಕ್ಕೆ ಸೇರಿದ ವನಿತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಿಂದಲೇ ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ವನಿತಾ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿ.ಪಿ. ಇಂಡಿಯನ್ ಪಬ್ಲಿಕ್ ಸ್ಕೂಲ್ನಲ್ಲಿ ಪಡೆದಿದ್ದಾರೆ. ಬಿ.ಕಾಂ ಪಧವೀಧರೆಯಾಗಿರುವ ವನಿತಾ ಕಾಲೇಜು ಶಿಕ್ಷಣವನ್ನು ಪಡೆದಿದ್ದು ಮಲ್ಲೇಶ್ವರಂಎಂ.ಇ.ಎಸ್. ಕಾಲೇಜಿನಲ್ಲಿ. ಕಾಲೇಜಿನಲ್ಲಿರುವಾಗ ಪ್ರಿಯದರ್ಶಿನಿ ರೇಷ್ಮೆ ಸೀರೆ ಮಳಿಗೆಗಾಗಿ ರೂಪದರ್ಶಿಯಾಗಿ ಕೆಲಸ ನಿರ್ವಹಿಸಿದ್ದ ವನಿತಾ ಆಗಂತುಕ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ಸುರೇಶ್ ಹೆಬ್ಳೀಕರ್ ಅವರಿಂದ ಗುರುತಿಸಲ್ಪಟ್ಟರು. ಸಿನೆಮಾದ ಬಗ್ಗೆ ಒಲವು ಹೊಂದಿರದ ವನಿತಾರ ಪೋಷಕರು ಸುರೇಶ್ ಹೆಬ್ಳೀಕರ್ ಒತ್ತಾಯಕ್ಕೆ ಮಣಿದು ಆಗಂತುಕ ಚಿತ್ರದಲ್ಲಿ ತಮ್ಮ ಮಗಳು ನಾಯಕಿಯಾಗಿ ನಟಿಸಲು ಒಪ್ಪಿಗೆ ನೀಡಿದರು.

ವೃತ್ತಿ ಜೀವನ[ಬದಲಾಯಿಸಿ]

ಬೆಳ್ಳಿತೆರೆ[ಬದಲಾಯಿಸಿ]

ಆಗಂತುಕ(೧೯೮೭) ಚಿತ್ರದಲ್ಲಿ ಮೂಗಿಯಾಗಿ ಸ್ಮರಣೀಯ ಅಭಿನಯ ನೀಡಿದ ವನಿತಾರ ಪ್ರತಿಭೆಯನ್ನು ಮೆಚ್ಚಿದ ಚಿತ್ರದ ನಿರ್ದೇಶಕ ಸುರೇಶ್ ಹೆಬ್ಳೀಕರ್ ತಮ್ಮ ಮುಂದಿನ ಚಿತ್ರ ಕಾಡಿನ ಬೆಂಕಿ(೧೯೮೮)ಯಲ್ಲಿ ವನಿತಾರನ್ನೇ ನಾಯಕಿಯನ್ನಾಗಿ ಮಾಡಿದರು. ನೈಜ ಘಟನೆಯನ್ನು ಆಧರಿಸಿದ್ದ ಈ ಮನೋವೈಜ್ಞಾನಿಕ ಚಿತ್ರದಲ್ಲಿ ಮುದುಕನಿಗೆ ಮದುವೆಯಾದ ಯುವತಿಯ ಮಾನಸಿಕ ತುಮುಲಗಳನ್ನು ವನಿತಾ ಶಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ೧೯೮೭ನೇ ಸಾಲಿನ ಅತ್ತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರ ೧೯೮೮ನೇ ಸಾಲಿನ ತೃತೀಯ ಅತ್ತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಭಾಜನವಾಯಿತು[೧]. ಈ ಎರಡೂ ಚಿತ್ರಗಳಲ್ಲಿ ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದ ಸುನಿಲ್ ಕುಮಾರ್ ದೇಸಾಯಿ ದಿಟ್ಟ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ವನಿತಾರ ಅಭಿನಯವನ್ನು ಮೆಚ್ಚಿ ತಾವು ಸ್ವತಂತ್ರವಾಗಿ ನಿರ್ದೇಶಿಸಿದ ತರ್ಕ(೧೯೮೯) ಚಿತ್ರಕ್ಕೆ ವನಿತಾರನ್ನು ನಾಯಕಿಯಾಗಿ ಅಯ್ಕೆ ಮಾಡಿಕೊಂಡಿದ್ದರು. ಈ ರಹಸ್ಯಮಯ ರೋಮಾಂಚಕಾರಿ ಚಿತ್ರದಲ್ಲಿ ಮಾನಸಿಕ ಅಸ್ವಸ್ಥನ ಪತ್ನಿಯಾಗಿ ವನಿತಾ ಅಮೋಘ ಅಭಿನಯ ನಿಡಿದ್ದಾರೆ. ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ೧೦೦ ದಿನಗಳ ಪ್ರದರ್ಶನ ಕಾಣುವುದರೊಂದಿಗೆ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.

ಟೈಗರ್ ಪ್ರಭಾಕರ್ ನಿರ್ದೇಶನದ ಶಕ್ತಿ ಚಿತ್ರದಲ್ಲಿ ನಾಯಕನ ತಂಗಿಯಾಗಿ ಭಾವಪೂರ್ಣ ಅಭಿನಯ ನೀಡಿದ ವನಿತಾ ಪ್ರಖ್ಯಾತ ನಟ ಶಂಕರ್ ನಾಗ್ ಅಭಿನಯದ ನಿಗೂಢ ರಹಸ್ಯ(೧೯೯೦) ಮತ್ತು ಪುಂಡ ಪ್ರಚಂಡ(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮನಸೆಳೆಯುವ ಅಭಿನಯ ನೀಡಿದ್ದಾರೆ. ಅನಂತ್ ನಾಗ್ ಅವರ ಹಾಸ್ಯ ಚಿತ್ರಗಳಾದ ಗೋಲ್‍ಮಾಲ್ ರಾಧಾಕೃಷ್ಣ(೧೯೯೦) ಮತ್ತು ಗೋಲ್‍ಮಾಲ್ ರಾಧಾಕೃಷ್ಣ ಭಾಗ-೨(೧೯೯೧) ಮುಂತಾದವುಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶ ಗಳಿಸಿದವು. ಅಂಬರೀಶ್ ಅಭಿನಯದ ಕಾಲಚಕ್ರ(೧೯೯೧) ಚಿತ್ರದಲ್ಲಿ ನಾಯಕನ ಗೆಳತಿಯಾಗಿ ಅಮೋಘ ಅಭಿನಯ ನೀಡಿದ ವನಿತಾ ಮಣ್ಣಿನ ದೋಣಿ(೧೯೯೨) ಮತ್ತು ಎಂಟೆದೆ ಭಂಟ(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್ ಅಭಿನಯದ ವೈಶಾಖದ ದಿನಗಳು(೧೯೯೩) ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಗಮನ ಸೆಳೆದ ವನಿತಾ ಸುನಿಲ್ ಕುಮಾರ್ ದೇಸಾಯಿ ಅವರ ಶ್ರೇಷ್ಠ ಚಿತ್ರ ಬೆಳದಿಂಗಳ ಬಾಲೆ(೧೯೯೫)ಯಲ್ಲಿ ಉತ್ತಮ ಅಭಿನಯ ನಿಡಿದ್ದಾರೆ.

ವೃತ್ತಿ ಜೀವನದ ಉತ್ತುಂಗದ ದಿನಗಳಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ ವನಿತಾ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಶ್ರೇಷ್ಠ ಚಿತ್ರ ನಾಗಮಂಡಲ(೧೯೯೭)ದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಮರಳಿದರು. ಆ ನಂತರದಲ್ಲಿ ಪ್ರೀತ್ಸೆ(೨೦೦೦), ಮೆಜೆಸ್ಟಿಕ್(೨೦೦೨), ಏಕಾಂಗಿ(೨೦೦೨), ಗಣೇಶ(೨೦೦೭) ಮತ್ತು ಹುಡುಗರು(೨೦೧೧) ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ.

ವಿಭಿನ್ನ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿ ಅಭಿನಯಿಸುವ ದಿಟ್ಟತೆಗೆ ಹೆಸರಾಗಿದ್ದ ವನಿತಾ ತಮ್ಮ ಮೋಹಕ ಮೈಮಾಟ, ಅಭಿನಯಗಳಿಂದ ಕನ್ನಡ ಚಿತ್ರರಸಿಕರ ಮನಸೂರೆಗೊಂಡ ನಟಿ. ಜನಪ್ರಿಯ ನಟರಾದ ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಅಂಬರೀಶ್, ಸುರೇಶ್ ಹೆಬ್ಳೀಕರ್, ದೇವರಾಜ್‌ ಮತ್ತು ಕಾಶಿನಾಥ್ ಮುಂತಾದವರೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಂಡಿರುವ ವನಿತಾ ಟಿ.ಎಸ್.ನಾಗಾಭರಣ, ಸುರೇಶ್ ಹೆಬ್ಳೀಕರ್, ಸುನಿಲ್ ಕುಮಾರ್ ದೇಸಾಯಿ, ಡಿ.ರಾಜೇಂದ್ರ ಬಾಬು ಮತ್ತು ಓಂ ಸಾಯಿಪ್ರಕಾಶ್ ಮುಂತಾದ ಜನಪ್ರಿಯ ನಿರ್ದೇಶಕರೊಂದಿಗೆ ಕೆಲಸ ಮಾದಿದ್ದಾರೆ.

ಕಿರುತೆರೆ[ಬದಲಾಯಿಸಿ]

ವಿವಾಹದ ನಂತರ ಕಿರುತೆರೆಯತ್ತ ಗಮನ ಹರಿಸಿದ ವನಿತಾ ಕ್ಷಣ ಕ್ಷಣ, ಮನೆಯೊಂದು ಮೂರು ಬಾಗಿಲು ಮತ್ತು ಸರಸ್ವತಿ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

೧೯೯೦ರ ದಶಕದ ಮಧ್ಯದಲ್ಲಿ ತಂದೆ ತಾಯಿ ಗೊತ್ತುಪಡಿಸಿದ ವ್ಯಕ್ತಿಯೊಂದಿಗೆ ವಿವಾಹವಾದ ವನಿತಾ ವಾಸು ತಮ್ಮ ಪತಿ ಮತ್ತು ಒಬ್ಬ ಮಗನೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.

ವನಿತಾ ವಾಸು ಅಭಿನಯಿಸಿದ ಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೮೭ ಆಗಂತುಕ ಕನ್ನಡ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್, ದೇವರಾಜ್‌
೧೯೮೮ ಕಾಡಿನ ಬೆಂಕಿ ಕನ್ನಡ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್, ಮಮತಾ ರಾವ್
೧೯೮೮ ಕೃಷ್ಣ ರುಕ್ಮಿಣಿ ಕನ್ನಡ ಭಾರ್ಗವ ವಿಷ್ಣುವರ್ಧನ್, ರಮ್ಯಾಕೃಷ್ಣ, ದೇವರಾಜ್‌
೧೯೮೮ ಗಂಡ ಮನೆ ಮಕ್ಕಳು ಕನ್ನಡ ಟಿ.ಪಿ.ಗಜೇಂದ್ರನ್ ಶ್ರೀನಾಥ್, ವಾಣಿಶ್ರೀ, ದ್ವಾರಕೀಶ್, ರಮೇಶ್, ಸುಧಾರಾಣಿ
೧೯೮೮ ಚಿರಂಜೀವಿ ಸುಧಾಕರ್ ಕನ್ನಡ ಸಿಂಗೀತಂ ಶ್ರೀನಿವಾಸರಾವ್ ರಾಘವೇಂದ್ರ ರಾಜ್ ಕುಮಾರ್, ಮೋನಿಷಾ, ಶಶಿ ಕುಮಾರ್
೧೯೮೮ ತಾಯಿ ಕರುಳು ಕನ್ನಡ ಎನ್.ಎಸ್.ಧನಂಜಯ ಶ್ರೀನಿವಾಸಮೂರ್ತಿ, ಜಯಂತಿ, ವಿನೋದ್ ಆಳ್ವ
೧೯೮೮ ಶಕ್ತಿ ಕನ್ನಡ ಪ್ರಭಾಕರ್ ಪ್ರಭಾಕರ್, ರಮ್ಯಾಕೃಷ್ಣ, ಶಂಕರ್ ನಾಗ್, ಶರತ್ ಬಾಬು
೧೯೮೯ ಆನಂತರ ಕನ್ನಡ ಅನ್ವರ್ ತಾವರೆಕೆರೆ ಶ್ರೀನಾಥ್, ಗೀತಾ, ಜೈ ಜಗದೀಶ್
೧೯೮೯ ಅವನೇ ನನ್ನ ಗಂಡ ಕನ್ನಡ ಕಾಶಿನಾಥ್ ಕಾಶಿನಾಥ್, ಸುಧಾರಾಣಿ, ಸಿಹಿಕಹಿ ಚಂದ್ರು
೧೯೮೯ ಗಗನ ಕನ್ನಡ ದೊರೆ-ಭಗವಾನ್ ಅನಂತ್ ನಾಗ್, ಖುಷ್ಬೂ, ಮಹಾಲಕ್ಷ್ಮಿ, ಶ್ರೀನಾಥ್
೧೯೮೯ ಜಯಭೇರಿ ಕನ್ನಡ ಜಿ.ಕೆ.ಮುದ್ದುರಾಜ್ ಅಂಬರೀಶ್, ಭವ್ಯ, ರಾಜೇಶ್
೧೯೮೯ ನರಸಿಂಹ ಕನ್ನಡ ಓಂ ಸಾಯಿಪ್ರಕಾಶ್ ಶಂಕರ್ ನಾಗ್, ಚಂದ್ರಿಕಾ
೧೯೮೯ ತರ್ಕ ಕನ್ನಡ ಸುನಿಲ್ ಕುಮಾರ್ ದೇಸಾಯಿ ಶಂಕರ್ ನಾಗ್, ದೇವರಾಜ್‌
೧೯೯೦ ಅನಂತ ಪ್ರೇಮ ಕನ್ನಡ ಟಿ.ಜನಾರ್ಧನ್ ಅನಂತ್ ನಾಗ್, ಅಭಿಲಾಷ
೧೯೯೦ ಉತ್ಕರ್ಷ ಕನ್ನಡ ಸುನಿಲ್ ಕುಮಾರ್ ದೇಸಾಯಿ ಅಂಬರೀಶ್, ದೇವರಾಜ್‌, ಅಭಿಲಾಷ
೧೯೯೦ ಗೋಲ್‍ಮಾಲ್ ರಾಧಾಕೃಷ್ಣ ಕನ್ನಡ ಓಂ ಸಾಯಿಪ್ರಕಾಶ್ ಅನಂತ್ ನಾಗ್, ಚಂದ್ರಿಕಾ
೧೯೯೦ ಚಪಲ ಚೆನ್ನಿಗರಾಯ ಕನ್ನಡ ಕಾಶಿನಾಥ್ ಕಾಶಿನಾಥ್, ಕಲ್ಪನಾ
೧೯೯೦ ನಿಗೂಢ ರಹಸ್ಯ ಕನ್ನಡ ಪೇರಾಲ ಶಂಕರ್ ನಾಗ್, ಗೀತಾ, ತಾರಾ
೧೯೯೦ ನೀನೆ ನನ್ನ ಜೀವ ಕನ್ನಡ ಟಿ.ಜನಾರ್ಧನ್ ಬಾಲ್‌ರಾಜ್, ಅಮೃತ
೧೯೯೦ ಪ್ರಥಮ ಉಷಾಕಿರಣ ಕನ್ನಡ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್, ಗೀತಾ
೧೯೯೧ ಕಾಲಚಕ್ರ ಕನ್ನಡ ಡಿ.ರಾಜೇಂದ್ರ ಬಾಬು ಅಂಬರೀಶ್, ದೀಪಿಕಾ, ಅಭಿಷೇಕ್, ಪ್ರಿಯಾಂಕಾ
೧೯೯೧ ಗೋಲ್‍ಮಾಲ್ ಭಾಗ-೨ ಕನ್ನಡ ಓಂ ಸಾಯಿಪ್ರಕಾಶ್ ಅನಂತ್ ನಾಗ್, ಚಂದ್ರಿಕಾ, ತಾರಾ
೧೯೯೧ ಪುಂಡ ಪ್ರಚಂಡ ಕನ್ನಡ ಸುಧೀಂದ್ರ ಕಲ್ಲೋಳ್ ಶಂಕರ್ ನಾಗ್, ರಮೇಶ್, ಶ್ರುತಿ, ಜೈ ಜಗದೀಶ್
೧೯೯೧ ಮಾತೃಭಾಗ್ಯ ಕನ್ನಡ ಕೆ.ಎನ್.ಚಂದ್ರಶೇಖರ್ ಶರ್ಮ ಪ್ರಭಾಕರ್, ಮಹಾಲಕ್ಷ್ಮಿ, ದೇವರಾಜ್‌
೧೯೯೨ ವೀರಪ್ಪನ್ ಕನ್ನಡ ರವೀಂದ್ರನಾಥ್ ದೇವರಾಜ್‌, ಲೋಕೇಶ್
೧೯೯೨ ಒಬ್ಬರಿಗಿಂತ ಒಬ್ಬರು ಕನ್ನಡ ಎ.ಎಂ.ಸಮೀವುಲ್ಲ ಸುನೀಲ್, ಕಿನ್ನರಾ, ಗುರುದತ್
೧೯೯೨ ಘರ್ಷಣೆ ಕನ್ನಡ ಓಂ ಸಾಯಿಪ್ರಕಾಶ್ ಶಶಿಕುಮಾರ್
೧೯೯೨ ಮಣ್ಣಿನ ದೋಣಿ ಕನ್ನಡ ಎಂ.ಎಸ್.ರಾಜಶೇಖರ್ ಅಂಬರೀಶ್, ಸುಧಾರಾಣಿ, ಜೈ ಜಗದೀಶ್, ಗುರುದತ್
೧೯೯೨ ಎಂಟೆದೆ ಭಂಟ ಕನ್ನಡ ಡಿ.ರಾಜೇಂದ್ರ ಬಾಬು ಅಂಬರೀಶ್, ರಜನಿ
೧೯೯೩ ಭಗವಾನ್ ಶ್ರೀ ಸಾಯಿಬಾಬ ಕನ್ನಡ ಓಂ ಸಾಯಿಪ್ರಕಾಶ್ ಸಾಯಿಪ್ರಕಾಶ್, ತಾರಾ, ಪಂಡರೀಬಾಯಿ, ಮೈನಾವತಿ
೧೯೯೩ ವೈಶಾಖದ ದಿನಗಳು ಕನ್ನಡ ಕಟ್ಟೆ ರಾಮಚಂದ್ರ ವಿಷ್ಣುವರ್ಧನ್, ಮೂನ್ ಮೂನ್ ಸೇನ್, ಹರ್ಷವರ್ಧನ್
೧೯೯೪ ಅಪೂರ್ವ ಸಂಸಾರ ಕನ್ನಡ ಹರ್ಷವರ್ಧನ್, ತಾರಾ, ಶ್ರುತಿ
೧೯೯೪ ಗೋಲ್ಡ್ ಮೆಡಲ್ ಕನ್ನಡ ಅಂಬರೀಶ್, ಸುಧಾರಾಣಿ, ದೇವರಾಜ್‌
೧೯೯೪ ಚಮತ್ಕಾರ ಕನ್ನಡ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್, ಮರೀನಾ
೧೯೯೪ ಯಾರಿಗೂ ಹೇಳ್ಬೇಡಿ ಕನ್ನಡ ಕೂಡ್ಲು ರಾಮಕೃಷ್ಣ ಅನಂತ್ ನಾಗ್, ಲೋಕೇಶ್, ವಿನಯಾ ಪ್ರಸಾದ್, ತಾರಾ
೧೯೯೫ ಕೋಣ ಈದೈತೆ ಕನ್ನಡ ವಿಜಯ್ ವಿಷ್ಣುವರ್ಧನ್, ಕುಮಾರ್ ಬಂಗಾರಪ್ಪ, ಸುಧಾರಾಣಿ, ವಿನಯಾ ಪ್ರಸಾದ್, ಅಂಜಲಿ
೧೯೯೫ ಬೆಳದಿಂಗಳ ಬಾಲೆ ಕನ್ನಡ ಸುನಿಲ್ ಕುಮಾರ್ ದೇಸಾಯಿ ಅನಂತ್ ನಾಗ್, ಸುಮನ್ ನಗರ್ ಕರ್
೧೯೯೭ ನಾಗಮಂಡಲ ಕನ್ನಡ ಟಿ.ಎಸ್.ನಾಗಾಭರಣ ಪ್ರಕಾಶ್ ರಾಜ್, ವಿಜಯಲಕ್ಷ್ಮಿ

[೨]

ಉಲ್ಲೇಖಗಳು[ಬದಲಾಯಿಸಿ]

  1. "ಈ ಬಾರಿಯ ಸಿನಿವಾರದಲ್ಲಿ 'ಕಾಡಿನ ಬೆಂಕಿ' ಚಿತ್ರ ಪ್ರದರ್ಶನ-ಸಂವಾದ". ಡೈಲಿ ಹಂಟ್ ಕನ್ನಡ.
  2. "ವನಿತಾ ವಾಸು, ಚಿಲೋಕ.ಕಾಮ್". Archived from the original on 2016-04-04. Retrieved 2016-01-13.