ಸಿದ್ಧಲಿಂಗಯ್ಯ ನಿರ್ದೇಶನದ ಪಾರಿಜಾತ(೧೯೮೨) ಚಿತ್ರದ ಚಿಕ್ಕ ಪಾತ್ರದ ಮೂಲಕ ಕನ್ನಡದ ಬೆಳ್ಳಿತೆರೆ ಪ್ರವೇಶಿಸಿದ ವಿಜಯರಂಜಿನಿ ಅವರಿಗೆ ಬ್ಯಾಂಕರ್ ಮಾರ್ಗಯ್ಯ(೧೯೮೩) ಚಿತ್ರದ ಪಾತ್ರ ಸಾಕಷ್ಟು ಹೆಸರು ತಂದು ಕೊಟ್ಟಿತು. ರಾಜ್ ಕುಮಾರ್ ಮತ್ತು ಊರ್ವಶಿ ಅಭಿನಯದ ಶ್ರಾವಣ ಬಂತು(೧೯೮೪) ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ವಿಜಯರಂಜಿನಿ ರಾಜ್ ಕುಮಾರ್ ಅಭಿನಯದ ಅದೇ ಕಣ್ಣು(೧೯೮೫) ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದರೂ ವಿಜಯರಂಜಿನಿ ವೃತ್ತಿ ಬದುಕಿನಲ್ಲಿ ಸವಾಲಿನ ಪಾತ್ರಗಳು ದೊರಕಲಿಲ್ಲ. ಲಂಚ ಲಂಚ ಲಂಚ(೧೯೮೬), ಮುತ್ತಿನಂಥಾ ಮನುಷ್ಯ(೧೯೮೯), ಯಾರು ಹೊಣೆ(೧೯೮೯), ಪ್ರಜೆಗಳು ಪ್ರಭುಗಳು(೧೯೯೨) ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. ೧೯೯೩ರಲ್ಲಿ ಬಿಡುಗಡೆಯಾದ ಪ್ರತಿಫಲ ವಿಜಯರಂಜಿನಿಯವರ ಬಿಡುಗಡೆಯಾದ ಕೊನೆಯ ಚಿತ್ರ. ಈ ಚಿತ್ರದ ನಂತರ ವಿಜಯರಂಜಿನಿ ನಟನೆಗೆ ವಿದಾಯ ಹೇಳಿ ವೈಯಕ್ತಿಕ ಬದುಕಿನೆಡೆಗೆ ಗಮನ ಹರಿಸಿದರು.