ಜಯಪ್ರದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಪ್ರದ
ಜನನಏಪ್ರಿಲ್ ೩, ೧೯೫೮
ಉದ್ಯೋಗಚಲನಚಿತ್ರ ನಟಿ, ರಾಜಕಾರಣಿ

ಜಯಪ್ರದ (ಏಪ್ರಿಲ್ ೩, ೧೯೫೮) ಭಾರತೀಯ ಭಾಷೆಗಳಲ್ಲಿನ ಪ್ರಖ್ಯಾತ ನಟಿ. ೧೯೮೦ ರ ದಶಕದಲ್ಲಿ ಭಾರತೀಯ ಭಾಷೆಗಳಲ್ಲಿ ಬಹುಬೇಡಿಕೆಯಲ್ಲಿದ್ದ ನಟಿ. ಸಿನಿಮಾದೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ರಾಜಕಾರಣಿ ಕೂಡ.

ಜೀವನ[ಬದಲಾಯಿಸಿ]

ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ಯಶಸ್ಸು ಗಳಿಸಿ, ಪ್ರಸಿದ್ಧರಾದ ಸೌಂಧರ್ಯವತಿ ಜಯಪ್ರದ ಅವರು ಏಪ್ರಿಲ್ ೩, ೧೯೬೨ ರಲ್ಲಿ ಆಂಧ್ರಪ್ರದೇಶರಾಜಮಂಡ್ರಿಯಲ್ಲಿ ಜನಿಸಿದರು. ಅಂದಿನ ಅವರ ಹೆಸರು ಲಲಿತಾ ರಾಣಿ.

ಸಿನಿಮಾ ಲೋಕದಲ್ಲಿ[ಬದಲಾಯಿಸಿ]

ಶಾಲೆಯಲ್ಲಿ ಓದುತ್ತಿರುವ ದಿನಗಳಲ್ಲಿ ಸಿನಿಮಾಮಂದಿಯ ಕಣ್ಣಿಗೆ ಬಿದ್ದ ಹುಡುಗಿ ಹತ್ತು ರೂಪಾಯಿ ಸಂಭಾವನೆ ಸ್ವೀಕರಿಸಿ ‘ಭೂಮಿಕೋಸಂ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದಳು. ಮುಂದೆ ಈ ನಟನೆ ಆಕೆಗೆ ಅತ್ಯಂತ ಮೌಲ್ಯಯುತ ಪಾತ್ರಗಳು ಮತ್ತು ಶ್ರೀಮಂತಿಕೆಯನ್ನು ಪ್ರಸಾದಿಸಿದವು. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ನಟಿಸಿದ ಈಕೆ ನಟನೆಗಾಗಿನ ಪ್ರಶಂಸೆ ಮತ್ತು ಜನಪ್ರಿಯತೆಗಳನ್ನು ಹೋದೆಡೆಗಳಲ್ಲೆಲ್ಲಾ ಗಳಿಸಿದರು. ಉತ್ತಮ ಸಂಗೀತ ನೃತ್ಯ ಮೌಲ್ಯಗಳನ್ನು ಚಲನಚಿತ್ರದಲ್ಲಿ ಬಿಂಬಿಸಿದ ಕೆ. ವಿಶ್ವನಾಥ್ ಅವರ ಪ್ರಸಿದ್ಧ ಚಿತ್ರಗಳಾದ ತೆಲುಗಿನ ‘ಸಿರಿ ಸಿರಿ ಮುವ್ವ’ , ಇದೇ ಚಿತ್ರದ ಹಿಂದಿಯ ಅವತರಿಣಿಕೆ ‘ಸರಗಮ್’, ‘ಸಾಗರ ಸಂಗಮ’, ‘ಸೀತಾ ಕಲ್ಯಾಣಂ’ ; ಕೆ. ಬಾಲಚಂದರ್ ಅವರ ‘ಅಂತುಲೆನಿ ಕಥಾ’, ‘ನಿನೈತ್ತಾಲೆ ಇನಿಕ್ಕುಂ’ ಮುಂತಾದ ಪಸಿದ್ಧ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರಿಗೆ ಮುಂದೆ ಅವಕಾಶಗಳು ಎಲ್ಲಾ ಭಾಷೆಗಳಲ್ಲೂ ಹರಿದು ಬರಲಾರಂಭಿಸಿದವು. ಹಿಂದಿಯಲ್ಲಿ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಪ್ರಕಾಶ್ ಮೆಹ್ರಾ ಅವರ ‘ಶರಾಭಿ’ ಚಿತ್ರ ಪ್ರಖ್ಯಾತವಾದುದು. ಅಮಿತಾಬ್ ಬಚ್ಚನ್, ಜಿತೇಂದ್ರ ಅವರ ಜೊತೆಯಲ್ಲಿ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿರುವಂತೆಯೇ ಆ ಕಾಲದ ತಮ್ಮ ಸಮಕಾಲೀನ ಪ್ರಸಿದ್ಧ ನಟಿ ಶ್ರೀದೇವಿ ಅವರೊಂದಿಗೆ ಸಹಾ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಅತ್ಯಂತ ಸುಂದರಿ ಎಂಬ ಹೆಗ್ಗಳಿಕೆ[ಬದಲಾಯಿಸಿ]

ಭಾರತದ ಚಿತ್ರರಂಗದ ಪ್ರಖ್ಯಾತರಾದ ಸತ್ಯಜಿತ್ ರೇ ಅವರಿಂದ ಅತ್ಯಂತ ಸುಂದರಿ ಎಂದು ಹೊಗಳಿಸಿಕೊಂಡ ಜಯಪ್ರದಾ ಕೆಲವೊಂದು ಬಂಗಾಳಿ ಚಿತ್ರಗಳಲ್ಲಿ ನಟಿಸಿದರಾದರೂ, ಸತ್ಯಜಿತ್ ರೇ ಅವರ ಚಿತ್ರಗಳಲ್ಲಿ ನಟಿಸಬೇಕೆಂದಿದ್ದ ಅವರ ಕನಸು ನನಸಾಗಲಿಲ್ಲ. ಮಲಯಾಳಂ, ಮರಾಠಿ ಚಿತ್ರಗಳಲ್ಲಿ ಕೂಡಾ ಅವರು ನಟಿಸಿದ್ದಾರೆ.

ಕನ್ನಡದ ಪ್ರಸಿದ್ಧ ಚಿತ್ರಗಳಲ್ಲಿ[ಬದಲಾಯಿಸಿ]

ಜಯಪ್ರದಾ ಅವರು ತಮ್ಮ ಜನಪ್ರಿಯ ದಿನಗಳಲ್ಲಿ ಕನ್ನಡದ ಪ್ರಸಿದ್ಧ ನಟರಾದ ಡಾ||ರಾಜ್‌ಕುಮಾರ್ ಜೊತೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಹುಲಿಯ ಹಾಲಿನ ಮೇವು, ನಂತರದ ದಿನಗಳಲ್ಲಿ ಶಬ್ಧವೇದಿ ಯಲ್ಲಿ ನಟಿಸಿದ್ದರು. ಡಾ||ವಿಷ್ಣುವರ್ಧನ್ ಜೊತೆ ಹಬ್ಬ, ‘ಹಿಮಪಾತ’, ‘ಈ ಬಂಧನ’, ಅಲ್ಲದೆ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಿಸಿದ ಚಿತ್ರಗಳ, ‘ಕರೆದರೂ ಕೇಳದೆ’, ‘ರಾಗ ಅನುರಾಗ’, ‘ಸದಾ ಕಣ್ಣಲಿ’, ‘ಓ ಪ್ರಿಯತಮಾ ಕರುಣೆಯಾ ತೋರೆಯಾ’, ‘ಜೇನಿನ ಗೂಡು ನಾವೆಲ್ಲಾ’, ‘ಅಯ್ಯೊ ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲ’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯವೆನಿಸಿವೆ. ಕೇವಲ ನಾಟ್ಯ ಪಾತ್ರಗಳಲ್ಲಿ ಮಾತ್ರವಲ್ಲದೆ ಭಾವುಕತೆ ತುಂಬಿದ ಪಾತ್ರಗಳಲ್ಲಿ ಕೂಡಾ ಅವರ ಅಭಿನಯ ಮನಸೆಳೆಯುವಂತಿತ್ತು. ಅವರ ಅಭಿನಯಕ್ಕೆ ಶೋಭೆಯಿಟ್ಟಂತೆ ಇದ್ದುದು ಅವರ ಸೌಂಧರ್ಯ.ಶಶಿಕುಮಾರ್ ಜೊತೆ ಆತ್ಮಬಂಧನ ಮತ್ತು ಅಂಬರೀಶ್ ಜೊತೆಯೂ ನಟಿಸಿದ್ದಾರೆ.

ರಾಜಕೀಯದಲ್ಲಿ[ಬದಲಾಯಿಸಿ]

ಜಯಪ್ರದ ಅವರು ರಾಜಕೀಯದಲ್ಲಿ ಮೊದಲು ಎನ್ ಟಿ ರಾಮರಾವ್ ಅವರ ತೆಲುಗು ದೇಶಂ, ಚಂದ್ರಬಾಬು ನಾಯ್ಡು ತೆಲುಗು ದೇಶಂ ಮತ್ತು ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹೀಗೆ ತಮ್ಮ ರಾಜಕೀಯ ಜೀವನ ಸಾಗಿಸಿದ್ದಾರೆ. ಲೋಕಸಭಾ ಸದಸ್ಯೆಯೂ ಆಗಿದ್ದಾರೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]


"https://kn.wikipedia.org/w/index.php?title=ಜಯಪ್ರದಾ&oldid=1107714" ಇಂದ ಪಡೆಯಲ್ಪಟ್ಟಿದೆ