ಭೀಷ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಮ್ಮ ಎಂಟನೇ ಮಗುವನ್ನು(ದೇವವ್ರತನನ್ನು/Satya vratha) ನೀರಿನಲ್ಲಿ ಮುಳುಗಿಸುತ್ತಿದ್ದ ಗಂಗೆಯನ್ನು ತಡೆದ ಶಂತನು.
ಗಂಗೆಯು ತನ್ನ ಮಗನಾದ ದೇವವ್ರತ(ಮುಂದೆ ಭೀಷ್ಮ)ನನ್ನು ತನ್ನ ಪತಿ ಶಂತನುವಿಗೆ ಕಾಣಿಕೆಯಾಗಿ ಕೊಡುತ್ತಿರುವ ದೃಶ್ಯದ ತೈಲ ವರ್ಣ ಚಿತ್ರ
ರಾಜ ರವಿವರ್ಮ ವಿರಚಿತ ಭೀಷ್ಮ ತನ್ನ ಪ್ರತಿಜ್ಞೆಯನ್ನು ಮಾಡುತ್ತಿರುವ ದೃಶ್ಯದ ಚಿತ್ರಣ
ಚಿತ್ರ:Bhisma fight in Swayamvara.jpg
ತುಂಬಿದ ಸ್ವಯಂವರದಿಂದ ರಾಜಕುಮಾರಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಅಪಹರಿಸಿದ ಭೀಷ್ಮ.


ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದಲೂ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜ, ಪರಶುರಾಮರಿಂದಲೂ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾನೆ.ಈಗಲೂ ಯಾರಾದರೂ ಪ್ರತಿಜ್ಞೆ ಮಾಡಿ ಅದನ್ನು ತಪ್ಪದೆ ನೆರವೇರಿಸಬೇಕಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎಂದೇ ಸಂಭೋದಿಸಲಾಗುತ್ತದೆ, ಭೀಷ್ಮರ ಪ್ರತಿಜ್ಞಾ ನಿಷ್ಠೆ ಅತಿ ತೀವ್ರವಾದದ್ದು ಎಂದೇ ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ. ಇಡೀ ಮಹಾಭಾರತದ ಆಗು ಹೋಗು, ಒಳ ಹೊರಗುಗಳನ್ನು ಈತ ಬಲ್ಲವನಾಗಿರುತ್ತಾನೆ.

ಹಿನ್ನೆಲೆ[ಬದಲಾಯಿಸಿ]

ಒಮ್ಮೆ ಎಂಟು ಜನ ವಸುಗಳು (ಅಷ್ಟ ವಸುಗಳು) ತಂತಮ್ಮ ಪತ್ನಿಯರೊಡಗೂಡಿ ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೊಬ್ಬ ವಸು 'ಪ್ರಭಾಸ'ನ ಪತ್ನಿಗೆ ವಸಿಷ್ಠರ ಆಶ್ರಮದಲ್ಲಿದ್ದ ಕಾಮಧೇನು ಬಹಳ ಇಷ್ಟವಾಗುತ್ತದೆ. ಬೇಡಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಕೊಡಬಲ್ಲ ಈ ಗೋವು ತನಗೆ ಬೇಕು ಎಂಬ ದುರಾಸೆ ಅವಳಲ್ಲಿ ಉಂಟಾಗುತ್ತದೆ. ಕೂಡಲೇ ತ್ವರೆ ಮಾಡಿ ಆಕೆ ತನ್ನ ಮನದಿಂಗಿತವನ್ನು ಪತಿಯ ಬಳಿ ಹೇಳುತ್ತಾಳೆ. ಪತ್ನಿಯ ಮೇಲಿನ ಅತೀವ ಪ್ರೀತಿಯಿಂದ ಪ್ರಭಾಸನು ಮಹರ್ಷಿಗಳ ಆಶ್ರಮದಿಂದ ಕಾಮಧೇನುವನ್ನು ಕದ್ದುಕೊಂಡು ಹೋಗಲು ತೀರ್ಮಾನಿಸುತ್ತಾನೆ. ಈತನ ಈ ತೀರ್ಮಾನಕ್ಕೆ ಇನ್ನಿತರ ವಸುಗಳು ಕೂಡ ತಲೆಬಾಗಿ ಸಹಾಯ ಮಾಡುತ್ತಾರೆ. ಈ ಹಗರಣದ ಸಂಪೂರ್ಣ ವಿವರವರಿತ ಮಹರ್ಷಿಗಳು ವ್ಯಘ್ರರಾಗಿ ಆ ಎಲ್ಲ ಅಷ್ಟ ವಸುಗಳು ಕೇವಲ ಮಾನವರಾಗಿ ಭೂಮಂಡಲದಲ್ಲಿ ಜನಿಸಲೆಂದು ಶಪಿಸಿಬಿಡುತ್ತಾರೆ.

ಕೂಡಲೇ ಎಚ್ಚೆತ್ತ ವಸುಗಳು ಮಹರ್ಷಿಗಳ ಬಳಿ ಕ್ಷಮೆ ಯಾಚಿಸುತ್ತಾರೆ ಹಾಗು ತಮ್ಮ ಶಾಪವನ್ನು ಹಿಂಪಡೆಯುವಂತೆ ದೈನ್ಯವಾಗಿ ಬೇಡಿಕೊಳ್ಳುತ್ತಾರೆ. ಪ್ರಭಾಸನನ್ನು ಹೊರತು ಪಡಿಸಿ ಇನ್ನುಳಿದ ಏಳು ವಸುಗಳ ಬೇಡಿಕೆಯನ್ನು ಮನ್ನಿಸಿದ ಮಹರ್ಷಿಗಳು ಪೂರ್ಣ ಶಾಪವನ್ನು ಹಿಂಪಡೆಯುವುದಿಲ್ಲವಾದರೂ ಶಾಪದಲ್ಲಿ ವಿನಾಯಿತಿಯಾಗಿ ಅವರು ಮಾನವ ಜನ್ಮ ತಾಳಿದ ಕೂಡಲೇ ಮರಣವನ್ನಪ್ಪಿ ಮುಕ್ತಿ ಹೊಂದುವರೆಂದು ಸೂಚಿಸುತ್ತಾರೆ. ಆದರೆ ಹಗರಣದಲ್ಲಿ ಪ್ರಮುಖನಾಗಿದ್ದ ಕಾರಣ ಪ್ರಭಾಸನ ಶಾಪವನ್ನು ಹಿಂಪಡೆಯಲು ಮಹರ್ಷಿಗಳು ನಿರಾಕರಿಸುತ್ತಾರೆ. ಆದರೂ ಪ್ರಭಾಸನ ಅನೇಕ ಕೋರಿಕೆಗಳ ನಂತರ ಮೃದು ಧೋರಣೆ ತಳೆದ ಮಹರ್ಷಿಗಳು ಆತನು ಮನುಷ್ಯನಾಗಿ ಸುಧೀರ್ಘ ಜೀವನವನ್ನು ನಡೆಸಬೇಕು ಹಾಗು ಅವನ ಸಮಕಾಲೀನ ಕಾಲ ಘಟ್ಟದಲ್ಲಿ ಆತನನ್ನು ಸರಿಗಟ್ಟುವ ಮನುಷ್ಯರೇ ಇಲ್ಲದಂತಾಗಿ, ಹೆಸರಾಂತ ವ್ಯಕ್ತಿಯಾಗಿ ಬದುಕುವಂತೆ ಅನುಗ್ರಹಿಸುತ್ತಾರೆ.ಇದೆ ಪ್ರಭಾಸ ಶಾಪ ನಿಮಿತ್ತ ಗಂಗೆ ಹಾಗು ಶಂತನುವಿನ ಎಂಟನೇ ಮಗ ದೇವವ್ರತನಾಗಿ ಜನಿಸುತ್ತಾನೆ ಹಾಗು ಮುಂದೆ ಭೀಷ್ಮ/ಭೀಷ್ಮಾಚಾರ್ಯ ಎಂದೇ ಪ್ರಸಿದ್ಧಿ ಪಡೆಯುತ್ತಾನೆ.

ಆಕರಗಳು[ಬದಲಾಯಿಸಿ]


"https://kn.wikipedia.org/w/index.php?title=ಭೀಷ್ಮ&oldid=1201083" ಇಂದ ಪಡೆಯಲ್ಪಟ್ಟಿದೆ