ಪಾಂಡು

Prince Pandu, in Wayang form
ಮಹಾಭಾರತ ಪುರಾಣದಲ್ಲಿ ಚಂದ್ರವಂಶದ ವಿಚಿತ್ರವೀರ್ಯ ರಾಜ ಹಾಗೂ ಅಂಬಾಲಿಕೆಯ ಮಗನೇ ಪಾಂಡು, ಪಾಂಡು ಮಹಾರಾಜ. ಇವನು ಪಂಚ ಪಾಂಡವರ ತಂದೆಯೆಂದೇ ಹೆಚ್ಚು ಪ್ರಸಿದ್ಧ.
ಜನನ[ಬದಲಾಯಿಸಿ]
- ವಿಚಿತ್ರವೀರ್ಯನ ಮರಣಾ ನಂತರ ಆತನ ತಾಯಿಯಾದ ಸತ್ಯವತಿಯು ಋಷಿ ವೇದವ್ಯಾಸರಿಗೆ ಬರಹೇಳಿದಳು. ತನ್ನ ತಾಯಿಯ ಆಜ್ಞೆಯಂತೆ, ನಿಯೋಗ ಪದ್ಧತಿಯಿಂದ ಮಕ್ಕಳನ್ನು ಕರುಣಿಸಲು ಇವರು ವಿಚಿತ್ರವೀರ್ಯನ ಇಬ್ಬರೂ ಮಡದಿಯರ ಬಳಿಗೆ ಹೋದರು.
- ಮೊದಲ ಮಡದಿ ಅಂಬಿಕೆಯು ಮುನಿಯ ರೂಪವನ್ನು ಕಂಡು ಭಯದಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡುದರ ಫಲವಾಗಿ,ಧೃತರಾಷ್ಟ್ರನು ಕುರುಡನಾಗಿ ಜನಿಸಿದನು. ಹೀಗಾಗಿ ಸತ್ಯವತಿಯು ಅಂಬಾಲಿಕೆಗೆ ಕಣ್ಣುಗಳನ್ನು ತೆರೆದಿರಬೇಕೆಂದು ಅಪ್ಪಣೆ ಮಾಡಿದಳು. ಆದರೆ ಅಂಬಾಲಿಕೆಯು ತನ್ನ ಕಣ್ಣುಗಳನ್ನು ತೆರೆದುಕೊಂಡೇ ಇದ್ದರೂ ಕೂಡ, ಮುನಿಯ ರೂಪವನ್ನು ನೋಡಿ ಕಳಾಹೀನಳಾದಳು (ಬಿಳಿಚಿಕೊಂಡಳು). ಆದುದರಿಂದ ಪಾಂಡುವೂ ಕೂಡ ಕಳಾಹೀನನಾಗಿಯೇ ಜನಿಸಿದನು.
ಜೀವನ[ಬದಲಾಯಿಸಿ]
- ಪಾಂಡುವು ಓರ್ವ ಶ್ರೇಷ್ಠ ಬಿಲ್ಲುಗಾರನಾಗಿದ್ದನು. ಈತನು ಧೃತರಾಷ್ಟ್ರನ ಸೈನ್ಯದ ಸೇನಾಧಿಪತಿಯಾಗಿದ್ದನು ಹಾಗೂ ಆತನ ಪರವಾಗಿ ರಾಜ್ಯಾಡಳಿತವನ್ನು ಕೂಡಾ ಮಾಡುತ್ತಿದ್ದನು. ಪಾಂಡುವು ದಶರ್ಣ, ಕಾಶಿ, ಅಂಗ, ವಂಗ, ಕಳಿಂಗ, ಮಾಗಧ ಇವೇ ಮೊದಲಾದ ಪ್ರದೇಶಗಳ ಮೇಲೆ ದಿಗ್ವಿಜಯ ಸಾಧಿಸಿದನು. ಇದರಿಂದಾಗಿ ಉಳಿದ ರಾಜರುಗಳಿಗಿಂತ ಉತ್ಕೃಷ್ಠತೆಯನ್ನು ಪುನರ್-ಸ್ಥಾಪಿಸಿದನು.
- ಪಾಂಡುವು ಕುಂತಿ ದೇಶದ ಕುಂತಿಭೋಜ ರಾಜನ ಮಗಳಾದ ಕುಂತಿಯನ್ನೂ ಹಾಗೂ ಮದ್ರ ದೇಶದ ಋತಾಯನ ರಾಜನ ಮಗಳಾದ ಮಾದ್ರಿಯನ್ನೂ ಮದುವೆಯಾದನು. ಬೇಟೆಗಾಗಿ ಕಾಡಿಗೆ ಹೋಗಿದ್ದಾಗ, ಕಿಂದಮನೆಂಬ ಋಷಿ ಮೃಗರೂಪವನ್ನು ಧರಿಸಿ ತನ್ನ ಪ್ರಿಯೆಯೊಂದಿಗೆ ವಿಹರಿಸುತ್ತಿದ್ದಾಗ, ಜಿಂಕೆಯೆಂಬ ಭ್ರಾಂತಿಯಿಂದ ಋಷಿ ಕಿಂದಮನನ್ನು ಕೊಂದನು.
- ಆ ಋಷಿಯು ಸಾಯುವಾಗ 'ನಿನ್ನ ಹೆಂಡತಿಯನ್ನು ಪ್ರೀತಿಯಿಂದ ಸಮೀಪಿಸಿದಾಗಲೇ ನಿನ್ನ ಮರಣ' ಎಂದು ಶಪಿಸಿದರು. ಇದರಿಂದ ಖಿನ್ನನಾದ ಪಾಂಡು ರಾಜ್ಯತ್ಯಾಗ ಮಾಡಿ ವಿರಕ್ತನಂತೆ ಶತಶೃಂಗಪರ್ವತದ ಸಮೀಪ ಹೆಂಡತಿಯರೊಂದಿಗೆ ತಾಪಸಿಯಾಗಿದ್ದ. ಹೀಗೆ ಶಾಪಗ್ರಸ್ತನಾಗಿ, ಸಂತಾನಹೀನನಾಗಿದ್ದ ಪಾಂಡುವಿಗೆ ಕುಂತಿಯು ದೂರ್ವಾಸರಿಂದ ಪಡೆದಿದ್ದ ವರಗಳು ಸಹಾಯಕ್ಕೆ ಬಂತು.
- ಪುತ್ರೋತ್ಪತ್ತಿಗಾಗಿ, ಕುಂತಿಯುದೂರ್ವಾಸ ಮುನಿಯಿಂದ ಪಡೆದಿದ್ದ ವರಗಳ ಸಹಾಯದಿಂದ ಮೂರು ಮಕ್ಕಳನ್ನು ಪಡೆದಳು - ಅವರೇ ಯುಧಿಷ್ಠಿರ(ಯಮಧರ್ಮರಾಯನಿಂದ), ಭೀಮ (ವಾಯು ದೇವರಿಂದ) ಹಾಗೂ ಅರ್ಜುನ (ಇಂದ್ರನಿಂದ).( ಸೂರ್ಯನ ವರಪ್ರಸಾದವಾಗಿ ಕರ್ಣನನ್ನೂ ಮದುವೆಗೆ ಮುಂಚೆ ಕನ್ಯಾವಸ್ಥೆಯಲ್ಲಿ ಪಡೆದಿದ್ದಳು).
- ಕುಂತಿಯು ಹಂಚಿದ ಒಂದು ವರದಿಂದ ಮಾದ್ರಿಯು ದೇವ ವೈದ್ಯರುಗಳಾದ ಅಶ್ವಿನಿ ದೇವತೆಗಳಿಂದ ಅವಳಿ ಮಕ್ಕಳಾದ ನಕುಲ ಹಾಗೂ ಸಹದೇವರನ್ನು ಪಡೆದಳು. ಈ ರೀತಿಯಾಗಿ ಪಾಂಡುವಿನ ಮಕ್ಕಳಾದ ಪಾಂಡವರು ಜನಿಸಿದರು.
ಮರಣ[ಬದಲಾಯಿಸಿ]
೧೫ ವರ್ಷಗಳ ಬ್ರಹ್ಮಚರ್ಯದ ನಂತರ, ಕುಂತಿ ಹಾಗೂ ಮಕ್ಕಳು ದೂರದಲ್ಲಿದ್ದಾಗ, ಪಾಂಡುವು ಇದ್ದಕ್ಕಿದ್ದಂತೆ ಮಾದ್ರಿಯ ಕಡೆ ಬಹಳವಾಗಿ ಆಕರ್ಷಿತನಾದ. ಆದರೆ ಶಾಪದ ಪರಿಣಾಮವಾಗಿ, ಮಾದ್ರಿಯೊಡನೆ ರತಿ ಕ್ರೀಡೆಯಲ್ಲಿ ತೊಡಗಲು ಆರಂಭಿಸಿದ ತಕ್ಷಣ ಪಾಂಡುವು ನಿಧನನಾದನು. ಪತಿಯನ್ನು ಕಳೆದುಕೊಂಡ ದುಃಖವನ್ನು ತಾಳಲಾರದೇ, ಮಾದ್ರಿಯು ಪಾಂಡುವಿನ ಚಿತೆಯೊಂದಿಗೆ ಸಹಗಮನ ಮಾಡಿದಳು.