ಅರ್ಜುನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಜುನ
ಚಿತ್ರ:Arjuna meets Krishna at Prabhasakshetra.jpg
ಪ್ರಭಾಸಕ್ಷೇತ್ರದಲ್ಲಿ, ಕೃಷ್ಣ-ಅರ್ಜುನರ ಭೇಟಿ
ದೇವನಾಗರಿअर्जुन
ಸಂಗಾತಿದ್ರೌಪದಿ, ಸುಭದ್ರ, ಉಳುಪಿ, ಚಿತ್ರಗಂಧ
ಒಡಹುಟ್ಟಿದವರುಪಾಂಡವರು
ಮಕ್ಕಳುಸ್ರುತಕರ್ಮ, ಅಭಿಮನ್ಯು, ಬಬ್ರುವಾಹನ, ಇರವಣ,*ಪ್ರಗೀತಿ
ತಂದೆತಾಯಿಯರುಪಾಂಡು (ತಂದೆ), ಕುಂತಿ (ತಾಯಿ)
ಚಿತ್ರ:The Swayamvara of Panchala's princess, Draupadi.jpg
ಪಾಂಚಾಲದ ರಾಣಿ, ದ್ರೌಪದಿಯ ಸ್ವಯಂವರ
ಚಿತ್ರ:Arjuna enters Dharma's Budoir.jpg
ಧರ್ಮನ ಶಯನಾಗಾರದಲ್ಲಿ ಅರ್ಜುನನ ಆಗಮನ
ಉಳುಪಿ-ಅರ್ಜುನರ ಭೇಟಿ
ಕಿರಾತಾರ್ಜುನಿಯ
ಚಿತ್ರ:Urvashi curses Arjuna.jpg
ಉರ್ವಶಿಯ ಶಾಪ
ಚಿತ್ರ:Brihannala.jpg
ಬೃಹನ್ನಳ - ನಪುಂಸಕನಾಗಿ ವಿರಾಟ ರಾಜ್ಯದಲ್ಲಿ

ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.

ಪರ್ಷಿಯಾದ ಪುರಾಣ ಕಥೆಗಳಲ್ಲಿ ಬರುವ "ಆರ್ಶ್, ದಿ ಆರ್ಚರ್" ದಂತಕಥೆಯು ಅರ್ಜುನನ ಕಥೆಯೊಂದಿಗೆ ಗಮನ ಸೆಳೆಯುವ ಸಾದೃಶ್ಯವನ್ನು ಹೊಂದಿದೆಯೆಂದು ಆಗಾಗ್ಗೆ ಪ್ರತಿಪಾದಿಸುತ್ತಾರೆ. ಇದು ಭಾರತ ಹಾಗೂ ಪರ್ಷಿಯಾ ದೇಶಗಳು ಸಮಾನ ಪರಂಪರೆಯನ್ನು ಹಂಚಿಕೊಂಡಿದ್ದುದರ ನೆನವರಿಕೆಯೆಂದು ಕೆಲವರು ಹೇಳುತ್ತಾರೆ.

ಇತಿವೃತ್ತ

ಅರ್ಜುನನು ಓರ್ವ ನುರಿತ ಬಿಲ್ಲುಗಾರನಾಗಿದ್ದನು ಹಾಗೂ ಈತನು ಪಾಂಡವರು ಹಾಗೂ ಅವರ ವಿರೋಧಿಗಳಾದ ದೃತರಾಷ್ಟ್ರನ ಮಕ್ಕಳಾದ ಕೌರವರ ಹೋರಾಟದಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದನು. ಯುದ್ಧದಲ್ಲಿ ಶತ್ರು ಪಾಳಯದಲ್ಲಿರುವ ತನ್ನ ಸಂಬಂಧಿಗಳ ಕೊಲೆಯನ್ನು ತನ್ನ ಕೈಯ್ಯಾರೆ ಮಾಡಬೇಕಾಗುತ್ತದೆ ಎಂದು ಅರ್ಜುನನು ಮೊದಲಿಗೆ ಯುದ್ಧದಲ್ಲಿ ಭಾಗವಹಿಸಲು ನಿರಾಸಕ್ತನಾಗಿದ್ದನು. ಅರ್ಜುನನ ಈ ನಿಲುವನ್ನು ಬದಲಾಯಿಸುವಂತೆ ಆತನ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.

ಪರ್ಷಿಯಾದ ಪುರಾಣ ಕಥೆಗಳಲ್ಲಿ ಬರುವ "ಆರ್ಶ್, ದಿ ಆರ್ಚರ್" ದಂತಕಥೆಯು ಅರ್ಜುನನ ಕಥೆಯೊಂದಿಗೆ ಗಮನ ಸೆಳೆಯುವ ಸಾದೃಶ್ಯವನ್ನು ಹೊಂದಿದೆಯೆಂದು ಆಗಾಗ್ಗೆ ಪ್ರತಿಪಾದಿಸುತ್ತಾರೆ. ಇದು ಭಾರತ ಹಾಗೂ ಪರ್ಷಿಯಾ ದೇಶಗಳು ಸಮಾನ ಪರಂಪರೆಯನ್ನು ಹಂಚಿಕೊಂಡಿದ್ದುದರ ನೆನವರಿಕೆಯೆಂದು ಕೆಲವರು ಹೇಳುತ್ತಾರೆ.

ಜನನ

ರತಿಯಲ್ಲಿ ಎಂದಾದರೂ ತೃಪ್ತಿ ಪಡೆದರೆ ಸಾವು ಬರುವುದೆಂಬ ಶಾಪಕ್ಕೆ ಪಾಂಡು ರಾಜನು ಗುರಿಯಾಗಿದ್ದನು. ಇದರಿಂದಾಗಿ ಆತನಿಗೆ ಮಗುವಿನ ತಂದೆಯಾಗಲು ಸಾಧ್ಯವಾಗಲಿಲ್ಲ. ಈತನ ಮೊದಲ ಹೆಂಡತಿಯಾದ ಕುಂತಿಯು ಅವಿವಾಹಿತೆಯಾಗಿದ್ದಾಗ, ದೂರ್ವಾಸ ಮುನಿಗಳು ಅವಳಿಗೆ ಇಷ್ಟವಾದ ದೇವತೆಯನ್ನು ಪ್ರಾರ್ಥಿಸಿದರೆ, ಆ ದೇವತೆಯಿಂದ ಮಗುವು ಪ್ರಾಪ್ತಿಯಾಗುವಂತೆ ವರ ನೀಡಿದ್ದರು. ಪಾಂಡು ಹಾಗೂ ಕುಂತಿ ಈ ವರದ ಸದುಪಯೋಗವನ್ನು ಪಡೆಯಲು ನಿಶ್ಚಯಿಸಿದರು. ಕುಂತಿ ಯಮ ಧರ್ಮರಾಯ, ವಾಯು, ಇಂದ್ರ ದೇವತೆಗಳನ್ನು ಪ್ರಾರ್ಥಿಸಿದಳು ಹಾಗೂ ನಾಲ್ಕು ಮಕ್ಕಳನ್ನು ಪಡೆದಳು. ಇವರಲ್ಲಿ ನಾಲ್ಕನೆಯ ಮಗನು ಇಂದ್ರನ ವರಪ್ರಸಾದವಾಗಿ ಅರ್ಜುನನು ಜನಿಸಿದನು.

ಅರ್ಜುನ ಮತ್ತು ಸುಭದ್ರ.ರಾಜಾ ರವಿವರ್ಮನ ವರ್ಣಚಿತ್ರ.

ವ್ಯಕ್ತಿತ್ವ

ಹಿತಕರವಾದ ಹಾಗೂ ಎಲ್ಲ ರೀತಿಯಲ್ಲೂ ಸಂಪೂರ್ಣವಾದ ವ್ಯಕ್ತಿತ್ವವುಳ್ಳ, ಅರೋಗ್ಯಕರ ದೇಹದಲ್ಲಿ ಉತ್ತಮ ಸ್ವಾಸ್ಥ್ಯವುಳ್ಳ ಮನಸ್ಸನ್ನು ಹೊಂದಿದ, ಯಾವುದೇ ತಾಯಿ, ಮಡದಿ, ಸ್ನೇಹಿತನು ತನ್ನ ಜೀವನದಲ್ಲಿ ಇಂಥಾ ವ್ಯಕ್ತಿಯನ್ನು ಹೊಂದಲು ಹೆಮ್ಮೆ ಪಡುತ್ತಾರೋ ಅಂತಹ ವ್ಯಕ್ತಿತ್ವ ಅರ್ಜುನನದ್ದು ಎಂದು ಮಹಾಭಾರತದಲ್ಲಿ ಚಿತ್ರಿಸಲಾಗಿದೆ. ಬಲಶಾಲಿಯಾದ, ಅತ್ಯಂತ ಸುಂದರನಾದ; ಹೆಂಗಳೆಯರ ಮನಸೂರೆ ಮಾಡುವಂತಹ ಇಂದ್ರ ಪುತ್ರ ಅರ್ಜುನನು ನಾಲ್ಕು ಬಾರಿ ವಿವಾಹವಾಗಿದ್ದನು ಎಂದು ವಿವರಿಸಿದ್ದಾರೆ. ಅರ್ಜುನನು ಓರ್ವ ಸತ್ಯಸಂಧ ಹಾಗೂ ಅತ್ಯಂತ ನಿಷ್ಠಾವಂತ ಸ್ನೇಹಿತನಾಗಿದ್ದನು (ಧೀರ ಯೋಧ ಸಾತ್ಯಕಿ ಈತನ ಆಪ್ತ ಮಿತ್ರನಾಗಿದ್ದನು). ಈತನ ಭಾವನಾಗಿದ್ದ ಶ್ರೀಕೃಷ್ಣನ ಜೊತೆ ಆ ಜೀವನ ಪರ್ಯಂತ ಸಹೃದಯ ಸಂಬಂಧವನ್ನು ಹೊಂದಿದ್ದನು. ಕುರುಕ್ಷೇತ್ರ ಯುದ್ಧದ ಬಗ್ಗೆ ಈತನಿಗಿದ್ದ ಸಂದೇಹದಿಂದ ಈತನು ಸೂಕ್ಷ್ಮನೂ ಹಾಗೂ ಪರಹಿತ ಚಿಂತನೆಯುಳ್ಳವನೂ ಎಂದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣನು ಈತನಿಗೆ ಭಗವದ್ಗೀತೆಯ ಭೋಧನೆಯನ್ನು ಮಾಡಿದನು. ಅತೀ ಕಾರ್ಯನಿಷ್ಠನಾಗಿದ್ದ ಅರ್ಜುನನು ಒಮ್ಮೆ ಬ್ರಾಹ್ಮಣನೋರ್ವನಿಗೆ ಸಹಾಯ ಮಾಡದೇ ಇರುವುದರ ಬದಲಾಗಿ ವನವಾಸ ಹೋಗಲು ನಿರ್ಧರಿಸಿದನು.

ಶ್ರಮಶೀಲ ವಿದ್ಯಾರ್ಥಿ

ಅರ್ಜುನನು ಓರ್ವ ಮಹಾಯೋಧನೆಂದೇ ಕರೆಯಲ್ಪಡುತ್ತಾನೆ. ಈ ಯೋಧನ ಜೀವನದ ಬುನಾದಿ ಬಹಳ ಸಣ್ಣ ವಯಸ್ಸಿನಲ್ಲೇ ಹಾಕಲಾಯಿತು. ಅತ್ಯುನ್ನತ ಹಾಗೂ ಶ್ರದ್ಧಾಶೀಲ ವಿದ್ಯಾರ್ಥಿಯಾಗಿದ್ದ ಅರ್ಜುನನು, ಗುರುಗಳಾದ ದ್ರೋಣಾಚಾರ್ಯರು ಕಲಿಸಿ ಕೊಟ್ಟ ಸಕಲ ವಿದ್ಯೆಗಳಲ್ಲಿ ಪರಿಣತಿ ಹೊಂದಿ, ಅತಿ ಬೇಗನೇ "ಅತಿರಥ" (ಅತ್ಯುನ್ನತ ಯೋಧ)ಎಂಬ ಬಿರುದನ್ನು ಗಳಿಸಿದನು. ಈತನ ವಿದ್ಯಾರ್ಜನೆಯಲ್ಲಿನ ಏಕಾಗ್ರತೆಯು ಪ್ರತಿಯೋರ್ವ ಶಾಲಾ ಬಾಲಕನಿಗೂ ತಿಳಿದಿದೆ. ಒಮ್ಮೆ ದ್ರೋಣಾಚಾರ್ಯರು ತಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯೊಂದನ್ನು ಒಡ್ಡಿದರು. ಮರದ ಕೊಂಬೆಯಲ್ಲಿ ಒಂದು ಮರದ ಹಕ್ಕಿಯನ್ನು ಇಳಿಯ ಬಿಟ್ಟು, ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದರು. ಮರದ ಹಕ್ಕಿಯ ಕಣ್ಣಿಗೆ ಗುರಿ ಹೂಡಿದ ನಂತರ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ, ನಿನಗೆ ಏನೇನು ಕಾಣಿಸುತ್ತಿದೆ ಎಂದು ಕೇಳಿದರು. ಆಗ ಒಬ್ಬೊಬ್ಬರು ತನಗೆ ಉದ್ಯಾನವನ, ಹೂವುಗಳು, ಮರದ ಕೊಂಬೆ ಹಾಗೂ ಇಳಿಯ ಬಿಟ್ಟಿದ್ದ ಮರದ ಹಕ್ಕಿಯು ಕಾಣಿಸುತ್ತಿದೆ ಎಂದರು. ಆ ವಿದ್ಯಾರ್ಥಿಗಳನ್ನು ಪಕ್ಕಕ್ಕೆ ನಿಲ್ಲಿಸುತ್ತಿದ್ದರು. ಅರ್ಜುನನಿಗೆ ಈ ಪ್ರಶ್ನೆಯನ್ನು ಕೇಳಿದಾಗ ಆತನು ನನಗೆ ಹಕ್ಕಿಯ ಕಣ್ಣು ಮಾತ್ರ ಕಾಣಿಸುತ್ತಿದೆ ಎಂದನು. ಈ ಘಟನೆಯು ಅರ್ಜುನನ ಏಕಾಗ್ರತೆಯ ಒಂದು ನಿದರ್ಶನವಾಗಿದೆ.

ಗಾಂಡೀವ

ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ, ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು 'ಗಾಂಡೀವಿ' ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ.

ಶಿವಾರ್ಜುನರ ಯುದ್ಧ

ಅರ್ಜುನನು ತನ್ನ ಅಣ್ಣನ ಆಜ್ಞಾ ಪರಿಪಾಲಕನು. ವನವಾಸದ ಕಾಲದಲ್ಲಿ ಯುಧಿಷ್ಠಿರನು ಅರ್ಜುನನ್ನು ಮುಂದಿನ ಯುದ್ಧದ ಸಿದ್ಧತೆಗಾಗಿ ಶಸ್ತ್ರಾಸ್ತ್ರಗಳನ್ನು ಸಂಪಾದಿಸಲು ಇಂದ್ರನ ಕುರಿತು ತಪಸ್ಸನ್ನು ಮಾಡಲು ನಿರ್ದೇಶಿಸಿದನು. ಅದರಂತೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡಿ ಅನೇಕ ಪರ್ವತ, ನದಿ, ಕಾನನಗಳನ್ನು ದಾಟಿ ಹಗಲು ರಾತ್ರಿಗಳ ವಿವೇಚನೆ ಇಲ್ಲದೆ ಆಯಾಸದ ಪರಿವೆ ಇಲ್ಲದೆ ನಡೆದು ಇಂದ್ರಕೀಲ ಪರ್ವತವನ್ನು ಸೇರಿದನು. ಆ ಪ್ರದೇಶವು ಸಾಮಾನ್ಯ ಮಾನವನಿಗೆ ತಲುಪಲು ಅಸಾಧ್ಯವಾಗಿದ್ದಿತು. ಅದು ಮಹಾತಪಸ್ವಿಗಳ ಸ್ಥಾನವಾಗಿದ್ದಿತು. ಅಲ್ಲಿ ಅವನು ಇಂದ್ರನ ದರ್ಶನ ಪಡೆದು ಅವನ ಆದೇಶದಂತೆ ಶಿವನನ್ನು ಕುರಿತು ತಪಸ್ಸನ್ನಾಚರಿಸಲುಪಕ್ರಮಿಸಿದನು. ಅವನು ಹಿಮವತ್ಪರ್ವತದ ತಪ್ಪಲಿಗೆ ಬಂದು ಘೋರ ತಪಸ್ಸನ್ನಾಚರಿಸಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಬೇಡನ/ಕಿರಾತನ ವೇಷದಲ್ಲಿ ಬಂದು ಅರ್ಜುನನೊಡನೆ ಯುದ್ಧಕ್ಕೆ ನಿಂತನು . ಇವರೀರ್ವರ ನಡುವಿನ ಯುದ್ಧವು ಕೀರಾತಾರ್ಜುನರ ಯುದ್ದವೆಂಬ ಹೆಸರಿನಲ್ಲಿ ಅತ್ಯಂತ ಘೋರವಾಗಿದ್ದಿತೆಂದು ಪುರಾಣಕಥೆಗಳಿಂದ ತಿಳಿದುಬರುತ್ತದೆ. ಆ ಯುದ್ಧವು ಕಿರಾತಾರ್ಜನೇಯ ಯುದ್ಧವೆಂದು ಪ್ರಸಿದ್ಧಿಯಾಗಿದೆ. ಪರಶಿವನೆಂದು ತಿಳಿಯದೆ ಅವನೊಡನೆ ಯುದ್ಧ ಮಾಡಿ ಸೋತ ಅರ್ಜುನನ ಸಾಹಸಕ್ಕೆ ಮೆಚ್ಚಿದ ಶಿವನು ಅವನಿಗೊಲಿದು ಅವನು ಬೇಡಿದ ಪಾಶುಪತಾಸ್ತ್ರ ವರವನ್ನು ಕರುಣಿಸಿದನು. ಇದಾದ ನಂತರ ಅರ್ಜುನನಿಗೆ ಅಷ್ಟದಿಕ್ಪಾಲಕರು ತಾವೇ ಸ್ವತಃ ಬಂದು ಅನೇಕ ದಿವ್ಯಾಸ್ತ್ರಗಳನ್ನು ಕರುಣಿಸಿದರು. ಸ್ವರ್ಗ ದ ಅಧಿಪತಿಯಾದ ಇಂದ್ರನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗಿ ಅನೇಕ ವಿದ್ಯೆಗಳನ್ನು(ಯುದ್ಧದ ಹಾಗೂ ಸಂಗೀತನಾಟ್ಯಗಳ) ತಿಳಿಸಿ ಮಹಾಶಕ್ತಿಯುಳ್ಳ ದಿವ್ಯಾಸ್ತ್ರಗಳನ್ನು ಕೊಟ್ಟನು. ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿಯು ತನ್ನ ಕಾಮೇಚ್ಚೆಯನ್ನು ಅರ್ಜುನ ನೊಂದಿಗೆ ವ್ಯಕ್ತಪಡಿಸಿದಳು. ಇಂದ್ರಿಯಜಿತನಾದ ಅರ್ಜುನನು ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಅರ್ಜುನನನ್ನು ನಪುಂಸಕನೆಂದು ಖ್ಯಾತಿಹೊಂದುವಂತೆ ಶಪಿಸಿದಳು. ಆದರೆ ಮುಂದೆ ಇದರಿಂದ ಅರ್ಜುನನಿಗೆ ಉಪಕಾರವೇ ಆಯಿತು. ಹೀಗೆ ವನವಾಸ ಕಾಲದಲ್ಲಿ ಅರ್ಜುನನು ಮುಂಬರುವ ಯುದ್ಧಕ್ಕಾಗಿ ಸಕಲ ಶಸ್ತ್ರಾಸ್ರಗಳ ಸಿದ್ಧತೆ ಹೊಂದಿ ಭೂಲೋಕಕ್ಕೆ ಬಂದು ತನ್ನ ಸೋದರರನ್ನು ಸೇರಿದನು. ಇಲ್ಲಿ ಅವನ ಅನೇಕ ಗುಣಗಳು ವ್ಯಕ್ತವಾಗಿದೆ. ಅಂಥ ಕಠಿಣ ವನವಾಸ ಕಾಲದಲ್ಲೂ ಸಂಯಮ, ಗುರು ಹಿರಿಯರ ಆಜ್ಞಾ ಪರಿಪಾಲನೆ, ಗುರಿ ಸಾಧಿಸುವ ಛಲ, ಕಷ್ಟ ಸಹಿಷ್ಣುತೆ, ಪರಾಕ್ರಮ, ಭಕ್ತಿ, ನಮ್ರತೆ, ಜಿತೇಂದ್ರಿಯತ್ವ ಹೀಗೆ ಅರ್ಜುನನು ಸದ್ಗುಣ ಹಾಗೂ ಸದಾಚಾರದ ಮೂರ್ತಿಯೇ ಆಗಿದ್ದನೆಂದು ಇದರಿಂದ ತಿಳಿಯ ಬಹುದಾಗಿದೆ.

ಅರ್ಜುನನ ಸಂಪೂರ್ಣ ಕಥೆ

  • ಪಂಚಪಾಂಡವರಲ್ಲಿ ಮಧ್ಯದವ. ಪಾಂಡುರಾಜನ ಮೊದಲ ಹೆಂಡತಿಯಾದ ಕುಂತಿಯಲ್ಲಿ ಇಂದ್ರನ ವರಪ್ರಸಾದದಿಂದ ಹುಟ್ಟಿದ. ಗಂಗಾ ನದಿಯಲ್ಲಿ ಸ್ನಾನಕ್ಕಿಳಿದ ದ್ರೋಣಾಚಾರ್ಯರ ಕಾಲನ್ನು ಹಿಡಿದುಕೊಂಡ ಮೊಸಳೆಯನ್ನು ಕೊಂದ. ದ್ರೋಣಾಚಾರ್ಯರ ಇಷ್ಟದಂತೆ ದ್ರುಪದನನ್ನು ಹಿಂಗಟ್ಟು ಬಿಗಿದು ತಂದು ಗುರುದಕ್ಷಿಣೆಯಾಗಿ ಅರ್ಪಿಸಿದ. ಅರ್ಜುನ, ನರ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ, ಭೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ, ಧನಂಜಯ-ಎಂಬ ಹನ್ನೊಂದು ಹೆಸರುಗಳು ಅರ್ಜುನನಿಗಿವೆ. ದ್ರೌಪದಿ ಸ್ವಯಂವರಕ್ಕಾಗಿ ಹೋಗುತ್ತಿದ್ದಾಗ ಗಂಗಾ ತೀರದಲ್ಲಿ ರಾತ್ರಿಯ ವೇಳೆ ಅಡ್ಡಗಟ್ಟಿದ ಗಂಧರ್ವ ಅಂಗಾರಪರ್ಣನನ್ನು ಸೋಲಿಸಿ ಅವನಿಂದ ಚಾಕ್ಷುಷೀ ವಿದ್ಯೆಯನ್ನು ಗಳಿಸಿ ಅವನ ಸೂಚನೆಯಂತೆ ತಮ್ಮ ಪುರೋಹಿತನನ್ನಾಗಿ ಧೌಮ್ಯಾಚಾರ್ಯರನ್ನು ಒಪ್ಪಿಕೊಂಡ. ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ.
  • ಇದೇ ಸಂಧರ್ಭದಲ್ಲಿ ಯುದ್ಧಕ್ಕೆ ಬಂದ ಕರ್ಣನನ್ನು ಸೋಲಿಸಿದ. ಹಸ್ತಿನಾವತಿಯಲ್ಲಿದ್ದಾಗ ಅನಿವಾರ್ಯವಾಗಿ ಆಯುಧಶಾಲೆಗೆ ಹೋಗಬೇಕಾಗಿ ಬಂದು ಅಲ್ಲಿಗೆ ಹೋಗಿ ಧರ್ಮರಾಯ ದ್ರೌಪದಿಯರು ಏಕಾಂತದಲ್ಲಿದ್ದುದನ್ನು ಕಂಡು ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಂಡ. ನಾರದರಿಂದ ತೀರ್ಥ ಮಾಹಾತ್ಮೆಗಳನ್ನು ತಿಳಿದುಕೊಂಡ. ನಾರೀ ತೀರ್ಥದಲ್ಲಿ ಮೀಯುತ್ತಿದ್ದಾಗ ಹಿಡಿದುಕೊಂಡ ಒಂದು ಮೊಸಳೆಯನ್ನು ಹೊರೆಗೆಳೆಯಲಾಗಿ ಶಾಪವಿಮೋಚನೆ ಹೊಂದಿದ ಅಪ್ಸರೆ ನಿಜರೂಪ ತಳೆದಳು. ಹಾಗೆಯೇ ನೆರೆಹೊರೆಯ ತೀರ್ಥಗಳಲ್ಲಿ ಶಾಪಗ್ರಸ್ಥರಾಗಿದ್ದ ಇತರ ಅಪ್ಸರೆಯರನ್ನು ವಿಮೋಚನೆಗೊಳಿಸಿದ. ಕೃಷ್ಣನ ಸೂಚನೆಯಂತೆ ಯತಿವೇಷವನ್ನು ಧರಿಸಿ ಸುಭದ್ರೆಯನ್ನು ವರಿಸಿದ.
  • ಕೃಷ್ಣಾರ್ಜುನರು ಯಮುನಾ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ಬ್ರಾಹ್ಮಣ ರೂಪದಲ್ಲಿ ಬಂದ ಅಗ್ನಿ, ಶ್ವೇತಕಿ ರಾಜನ ಯಜ್ಞದಲ್ಲಿ ಅಜೀರ್ಣವುಂಟಾಗಿದೆಯೆಂದೂ ತಡೆಯಲು ಬರುವ ಇಂದ್ರನ ಸೇವಕರನ್ನು ಅಡ್ಡಗಟ್ಟಿ ಖಾಂಡವ ವನವನ್ನು ಭಕ್ಷಿಸಲು ಸಹಾಯ ಮಾಡಬೇಕೆಂದೂ ಕೇಳಿಕೊಂಡಾಗ ಅರ್ಜುನನು ಒಪ್ಪಿಕೊಂಡ. ಇದರಿಂದ ಸಂತುಷ್ಟನಾದ ಅಗ್ನಿಯಿಂದ ದಿವ್ಯಧನುಸ್ಸಾದ ಗಾಂಡೀವ, ಅಕ್ಷಯ ತೂಣೀರಗಳು, ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥ-ಇವುಗಳನ್ನು ಪಡೆದ. ಯುದ್ಧಕ್ಕೆ ಬಂದ ಇಂದ್ರನನ್ನು ಸೋಲಿಸಿ ಮಾಯಾಸುರನಿಗೆ ಅಭಯ ಪ್ರಧಾನ ಮಾಡಿದ. ಮಾಯಾಸುರನಿಂದ ದೇವದತ್ತ ಎಂಬ ಶಂಖವನ್ನು ಗಳಿಸಿದ.
  • ರಾಜಸೂಯಯಾಗಕ್ಕೆ ಮುಂಚೆ ಜೈತ್ರಯಾತ್ರೆಗೆಂದು ಹೊರಟು ಅಂತಗಿರಿ, ಉಲೂಕಪುರ, ಮೋದಾಪುರ,ಉರಗಾಪುರ, ಕಾಂಭೋಚ,ಋಷಿಕ್ ಮುಂತಾದ ದೇಶಗಳನ್ನು ಕಿಂಪುರುಷ, ಇಲಾವೃತ, ಕೇತುಮಾಲ ಮುಂತಾದ ಖಂಡಗಳನ್ನು ಗೆದ್ದ. ಪೂರು ಎಂಬುವನು ಸಾರಥಿ. ಇಂದ್ರಕೀಲ ಪವ೯ತದಲ್ಲಿ ತಪಸ್ಸು ಮಾಡಿ ಕಿರಾತವೇಷಿಯಾಗಿ ಬಂದ ಶಿವನೊಂದಿಗೆ ಹೋರಾಡಿ ಪಾಶುಪತಾಸ್ತ್ರವನ್ನು ಗಳಿಸಿದ. ಚಿತ್ರಸೇನೆ ಎಂಬ ಗಂಧರ್ವನಿಂದ ಗಂಧರ್ವವೇದವನ್ನು ಅಭ್ಯಾಸ ಮಾಡಿದ. ನಿವಾತಕವಚರನ್ನೂ ಪೌಲೋನ ಕಾಲಕೇಯರೆಂಬ ದೈತ್ಯರನ್ನೂ ಸಂಹರಿಸಿದ. ಸಂತುಷ್ಟನಾದ ಇಂದ್ರ ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ಕವಚ ಕಿರೀಟ ಇತ್ಯಾದಿಗಳನ್ನು ಕೊಟ್ಟು ಗೌರವಿಸಿದ. ನಪುಂಸಕನಾಗುವಂತೆ ಊರ್ವಶಿ ಶಾಪ ಕೊಟ್ಟಿದ್ದರಿಂದ ಅಜ್ಞಾತವಾಸದ ಕಾಲದಲ್ಲಿ ಅನುಕೂಲವೇ ಆಯಿತು. ಆಗ ಇವನ ಹೆಸರು ಬೃಹನ್ನಳೆ.
  • ಅಜ್ಞಾತವಾಸಕ್ಕಾಗಿ ವಿರಾಟ ನಗರಕ್ಕೆ ನಡೆದು ಬರುವಾಗ ಆಯಾಸಗೊಂಡ ದ್ರೌಪದಿಯನ್ನು ಹೆಗಲಮೇಲೆ ಹೊತ್ತುತಂದ. ಗೋಹರಣ ಕಾಲದಲ್ಲಿ ಕರ್ಣ, ದ್ರೋಣ, ಅಶ್ವತ್ತಾಮ, ದುಶ್ಯಾಸನ, ದುರ್ಯೋಧನ ಮುಂತಾದವರು ಇವನ ಸಮ್ಮೋಹನಾಸ್ತ್ರದಿಂದ ಪರಾಜಯ ಹೊಂದಿದರು. ಮಹಾಭಾರತದ ಯುದ್ಧದ ಕಾಲದಲ್ಲಿ ಕೃಷ್ಣ ಇವನ ಸಾರಥಿ. ಕೃಷ್ಣನಿಂದ ಸಂಧಿ, ವಿಗ್ರಹಗಳ ಉಪದೇಶ ಪಡೆದ. ದ್ರೌಪದಿ, ಸುಭದ್ರ , ಉಲೂಪಿ, ಚಿತ್ರಾಂಗದೆಯರಲ್ಲಿ ಕ್ರಮವಾಗಿ ಶ್ರುತಕೀರ್ತಿ, ಅಭಿಮನ್ಯು, ಇರಾವಂತ, ಬಭ್ರುವಾಹನರೆಂಬ ಮಕ್ಕಳನ್ನು ಪಡೆದ. ಭೀಷ್ಮನ ಶರಮಂಚಕ್ಕೊಂದು ಬಾಣದ ತಲೆದಿಂಬನ್ನೊದಗಿಸಿದ. ವರುಣಾಸ್ತ್ರವನ್ನು ಪ್ರಯೋಗಿಸಿ ಭೀಷ್ಮನ ದಾಹವನ್ನು ಹೋಗಲಾಡಿಸಿದ. ಜಯಗಳಿಕೆಗಾಗಿ ಕೃಷ್ಣನ ಸೂಚನೆಯಂತೆ ರಾತ್ರಿಯಲ್ಲಿ ಪರಮೇಶ್ವರರನ್ನು ಪೂಜಿಸಿದ.
  • ಕರ್ಣ ಇನ್ನು ಸಾಯಲಿಲ್ಲವೆಂಬ ಲೋಪದಿಂದ ನಿಂದಿಸಿ ಗಾಂಡೀವವನ್ನು ಕೃಷ್ಣನಿಗೆ ಕೊಡುವಂತೆ ಧರ್ಮರಾಯ ಹೇಳಿದಾಗ ಕೋಪಗೊಂಡ ಅರ್ಜುನ ಧರ್ಮರಾಯರನ್ನು ಕೊಲ್ಲುವ ಪ್ರಯತ್ನ ಮಾಡಿದ. ಅನಂತರ ಕರ್ಣನ ಮಗ ವೃಷಸೇನನನ್ನು ಕೊಂದ. ಕರ್ಣಬಿಟ್ಟ ಬಾಣ ಅವನ ಕಿರೀಟವನ್ನು ತಗುಲಲು ಕೃಷ್ಣನ ತುಳಿತದಿಂದ ರಥ ಕುಸಿದುದ್ದೇ ಕಾರಣವಾಯಿತು. ಅನಂತರ ಕರ್ಣನನ್ನು ವಧಿಸಿದ. ಅಶ್ವಮೇಧಯಾಗದ ಕುದುರೆಯನ್ನು ಸಂರಕ್ಷಿಸಿ ದಿಗ್ವಿಜಯಕ್ಕೆ ಕಾರಣನಾದ, ಬಭ್ರುವಾಹನನಿಂದ ಇವನ ವಧೆಯಾದಾಗ ಉಲೂಪಿ ಸಂಜೀವಕ ರತ್ನದಿಂದ ಬದುಕಿಸಿದಳು. ಜರಾಸಂಧನ ಮೊಮ್ಮಗನಾದ ಮೇಘಸಂಧಿ ಇವನಿಂದ ಸೋತ. ಇವನ ದುರ್ಲಕ್ಷಣಗಳನ್ನು ಕೃಷ್ಣ ಪಟ್ಟಿಮಾಡಿದ್ದಾನೆ. ಕೃಷ್ಣ ನಿರ್ವಾಣ ಹೊಂದಿದ ಮೇಲೆ ವಾಸುದೇವಾದಿಗಳನ್ನು ಸಂತೈಸಲು ದ್ವಾರಕೆಗೆ ಬಂದ ಕೃಷ್ಣನ ಹದಿನಾರು ಸಾವಿರ ಸ್ತ್ರೀಯರನ್ನು ಹಸ್ತಿನಾವತಿಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಮ್ಲೇಚ್ಛರೊಂದಿಗೆ ಹೋರಾಡಿ ಸೋತು ಹೋದ.

ಅರ್ಜುನನ ಇತರ ನಾಮಗಳು

ಮಹಾಭಾರತದಲ್ಲಿ ಅರ್ಜುನನಿಗೆ ಹತ್ತು ಹೆಸರುಗಳಿವೆಯೆಂದು ಹೇಳಿದೆ:

  • ಅರ್ಜುನ
  • ಕಿರೀಟಿ
  • ಗುಡಾಕೇಶ: ಗುಡಾಕ ಎಂದರೆ ನಿದ್ರೆ. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನೆಂದರ್ಥ.
  • ಜಿಷ್ಣು
  • ಧನಂಜಯ
  • ಪಾರ್ಥ - ಪೃಥೆ ಎಂಬುದು ಕುಂತಿಯ ಹೆಸರು ಅವಳ ಮಗನಾದ್ದರಿಂದ ಅರ್ಜುನನಿಗೆ ಪಾರ್ಥ ಎನ್ನುತ್ತಾರೆ.
  • ಫಾಲ್ಗುಣ
  • ವಿಜಯ
  • ಭೀಭತ್ಸು
  • ಶ್ವೇತವಾಹನ
  • ಸವ್ಯಸಾಚಿ: ಯಾರು ತಮ್ಮ ಎರಡೂ ಕೈಗಳಿಂದ ಬಿಲ್ವಿದ್ಯೆ ಪ್ರದರ್ಶಿಸಬಲ್ಲರೋ ಅವರಿಗೆ ಸವ್ಯಸಾಚಿ ಎಂಬುದು ಅನ್ವರ್ಥಕ ನಾಮ.

ದ್ರೌಪದಿ

ಅರ್ಜುನನ ಧರ್ಮಪತ್ನೀ. ಪಾಂಚಾಲ ರಾಜನ ಮಗಳು. ಪಾಂಚಾಲ ರಾಜ ಮಗಳಿಗೆ ಸ್ವಯಂವರವನ್ನು ಏರ್ಪಡಿಸಿದಾಗ, ಅರ್ಜುನ ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ.

ಭಗವದ್ಗೀತೆ

ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್, ಅಥವಾ ಗೀತೋಪನಿಷತ್, ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ. 'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ.

ಕುರುಕ್ಷೇತ್ರ ಯುದ್ಧ

ಕುರುಕ್ಷೇತ್ರ, ಮಹಾಭಾರತದಲ್ಲಿ ಕೌರವರಿಗೂ ಪಾಂಡವರಿಗೂ ಯುದ್ಧ ನಡೆದ ಸ್ಥಳ. ಮಹಾಭಾರತದ ಯುದ್ಧದಲ್ಲಿ ನಡೆದ ಅತಿ ಮುಖ್ಯವಾದ ಘಟನೆ ಗೀತೋಪದೇಶ. ಕುರುಕ್ಷೇತ್ರದ ಊರ ಹೊರಗೆ ಹೊರಟರೆ ನಾಲ್ಕು ಕಿಲೋಮೀಟರು ದೂರದಲ್ಲಿ ಜೋತಿಸರ ಎಂಬಲ್ಲಿ ಒಂದು ಪ್ರದೇಶವನ್ನು ಈ ಗೀತೋಪದೇಶದ ತಾಣವೆಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಒಂದು ರಥವನ್ನೂ ಅದರ ಚಾಲಕಸ್ಥಾನದಲ್ಲಿ ಕೃಷ್ಣನ ಮೂರ್ತಿಯನ್ನೂ, ಅರ್ಜುನನ ಮೂರ್ತಿಯನ್ನೂ ನಿಲ್ಲಿಸಲಾಗಿದೆ. ಇವೇ ಪುರಾಣ ದೃಶ್ಯಗಳನ್ನು ಮತ್ತೆ ನೋಡಲೆಂದೇ ಇರುವ ಪ್ಯಾನೋರಮಾ ಮತ್ತು ವಿಜ್ಞಾನಕೇಂದ್ರವು ಕುರುಕ್ಷೇತ್ರ ಯುದ್ಧವರ್ಣನೆಯನ್ನು ವಿವರಿಸುವ ವಿನೂತನ ತಂತ್ರಜ್ಞಾನದ ಸ್ಥಿರಚಿತ್ರಶಾಲೆ. ಕುರುಕ್ಷೇತ್ರದ ನೆಲದಲ್ಲಿ ಕಾಲೂರಿ ಕುರುಕ್ಷೇತ್ರದ ಕಾಲಕ್ಕೆ ಜಾರುತ್ತಾ ಅಂದಿನ ಮಹಾಭಾರತ ಯುದ್ಧವನ್ನು ಕಣ್ಣಾರೆ ಕಾಣುವ ಅವಕಾಶ ಒದಗಿಸುತ್ತದೆ ಈ ಕಲಾಕೇಂದ್ರ. 'ಕೃಷ್ಣವಸ್ತುಸಂಗ್ರಹಾಲಯ'ವೂ ಪಕ್ಕದಲ್ಲಿಯೇ ಇದ್ದು ಮಹಾಭಾರತವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ.

ಜಯದ್ರಥನ ಸಂಹಾರ

ಮಹಾಭಾರತ ಮಹಾಕಾವ್ಯದಲ್ಲಿ, ಜಯದ್ರಥನು ಸಿಂಧೂ ರಾಜ್ಯದ ರಾಜನಾಗಿದ್ದನು (ಹಾಗಾಗಿ ಅವನನ್ನು ಸೈಂಧವನೆಂದೂ ಕರೆಯಲಾಗುತ್ತದೆ). ಅವನು ೧೦೦ ಕೌರವ ಸಹೋದರರ ಏಕೈಕ ಸಹೋದರಿಯಾದ ದುಶ್ಯಲೆಯನ್ನು ಮದುವೆಯಾಗಿದ್ದನು. ಅವನು ರಾಜ ವೃಧಕ್ಷತ್ರನ ಮಗನಾಗಿದ್ದನು. ಮಹಾಭಾರತದಲ್ಲಿ ಕೌರವರಿಗೂ ಪಾಂಡವರಿಗೂ ಯುದ್ಧ ನಡೆಯುವ ಸಂದರ್ಭದಲ್ಲಿ ಅರ್ಜುನನ ಮಗ ಅಭಿಮನ್ಯುವನ್ನು ಕೊಂದು, ನಂತರ ಅರ್ಜುನನಿಂದ ಹತನಾಗುವನು.

ಉಲ್ಲೇಖಗಳು

"https://kn.wikipedia.org/w/index.php?title=ಅರ್ಜುನ&oldid=1163032" ಇಂದ ಪಡೆಯಲ್ಪಟ್ಟಿದೆ