ಜೈಮಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈಮಿನಿ ಭಾರತೀಯ ಋಷಿಗಳಲ್ಲಿ ಪ್ರಸಿದ್ಧನಾದವ. ಈತ ವ್ಯಾಸ ಮಹರ್ಷಿಯ ನೇತೃತ್ವದಲ್ಲಿ ನಡೆಯಲಾದ್ದು ಎನ್ನಲಾದ ವೇದಗಳ ಸಂಪಾದನೆಯಲ್ಲಿ ಸಾಮವೇದವನ್ನು ಸಂಪಾದಿಸಿದನೆಂದು ಹೇಳಲಾಗಿದೆ. ಬುದ್ಧನ ತರುವಾಯ ಭಾರತೀಯ ತತ್ತ್ವ ಚಿಂತನೆಯಲ್ಲಿ ಆಂದೋಲನ ನಡೆದಾಗ ವೈದಿಕಧರ್ಮವನ್ನು ಸುಸ್ಥಿರಗೊಳಿಸುವ ಪ್ರಯತ್ನ ನಡೆಯಿತು. ಇದರ ಅಂಗಗಳೆಂಬಂತೆ ವೈದಿಕ ದರ್ಶನಗಳೆಲ್ಲ ಸೂತ್ರರೂಪದಲ್ಲಿ ಸಿದ್ಧವಾದವು. ಆಗ ಜೈಮಿನಿ ಮೀಮಾಂಸ ಸೂತ್ರಗಳನ್ನು ರಚಿಸಿದ. ಈ ಸೂತ್ರಗಳ ಕಾಲ ಖಚಿತವಾಗಿಲ್ಲ. ಆದರೆ. ಸೂತ್ರ-ಸಾಹಿತ್ಯದಲ್ಲೆಲ್ಲ ಮೀಮಾಂಸಗಳ ಸೂತ್ರಗಳೇ ಬಹು ಪ್ರಾಚೀನವಾದವು. ವಿದ್ವಾಂಸರ ಅಭಿಪ್ರಾಯದಂತೆ ಈತನ ಕಾಲ ಸುಮಾರು ಕ್ರಿ. ಶ. ಎರಡನೆಯ ಶತಮಾನ. ಸೂತ್ರ ಸಾಹಿತ್ಯದಲ್ಲೆಲ್ಲ ಜೈಮಿನಿಯಿಂದ ರಚಿತವಾದ ಮೀಮಾಂಸ ಸೂತ್ರಗಳೇ ಹೆಚ್ಚು ಸಂಖ್ಯೆಯಿಂದ (2500) ಕೂಡಿದವು. ಇವುಗಳ ಮೂಲಕ ಜೈಮಿನಿ ಸುಮಾರು ಸಾವಿರ ವಿಷಯಗಳನ್ನು ಮಂಡಿಸಿದ್ದಾನೆ. ಇವು ವೇದದ ಕರ್ಮವಿಭಾಗವನ್ನು ಹೆಚ್ಚು ಆಧರಿಸಿಕೊಂಡು ವೇದಧರ್ಮವನ್ನು ಪುಷ್ಟಿಗೊಳಿಸುತ್ತವೆ. (ಕೆ.ಬಿ.ಆರ್.)

ಮಹಾಭಾರತದ ಪ್ರಕಾರ ಈತ ಕುತ್ಸ ಮಹರ್ಷಿಯ ವಂಶದವನೆಂದೂ ಋಗ್ವೇದಾಧ್ಯಾಯಿ ಪೈಲಮುನಿ. ಯಜರ್ವೇದಾಧ್ಯಾಯಿ ವೈಶಂಪಾಯನ, ಅಥರ್ವವೇದಪಾರಂಗತ ಸುಮಂತು ಇವರುಗಳ ಸಹಪಾಠಿಯೆಂದೂ ಪಾಂಡವರ ಮರಿಮಗ ಜನಮೇಜಯ ಮಾಡಿದ ಸರ್ಪಯಾಗದಲ್ಲಿ ಸಾಮಮಂತ್ರ ಪಠಿಸುವ ಉದ್ಗಾತೃವಾಗಿದ್ದನೆಂದೂ ಸರ್ಪಯಾಗದಿಂದ ಪ್ರಾಪ್ತವಾದ ಕುಷ್ಠರೋಗವನ್ನು ಜನಮೇಜಯ ಭಾರತ ಶ್ರವಣದಿಂದ ಪರಿಹರಿಸಿಕೊಂಡನಾದರೂ ಉಳಿದ ಅತ್ಯಲ್ಪ ಕುಷ್ಠವನ್ನು ಜೈಮಿನಿಯಿಂದ ರಚಿತವಾದ ಅಶ್ವಮೇಧಿಕ ಪರ್ವಶ್ರವಣದಿಂದ ಪರಿಹರಿಸಿಕೊಂಡನೆಂದೂ ಹೇಳಲಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಜೈಮಿನಿ&oldid=856292" ಇಂದ ಪಡೆಯಲ್ಪಟ್ಟಿದೆ