ಕುಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂತಿ
Kuntī
ಪಾಂಡುವಿನ ಜೊತೆ ಕುಂತಿ
Information
ಗಂಡ/ಹೆಂಡತಿಪಾಂಡು
ಮಕ್ಕಳು
ಸಂಬಂಧಿಕರುಗಾಂಧಾರಿ, ಭೀಷ್ಮ, ಕೃಷ್ಣ, ಕೌರವರು, ಪಾಂಡವರು, ವಿದೂರ, ಸತ್ಯವತಿ, ಮಾದ್ರಿ
ಚಿತ್ರ:Boon of Indra to Kunti.jpg
ಕುಂತಿಗೆ ಇಂದ್ರನ ವರ

ಕುಂತಿ (ಸಂಸ್ಕೃತ: कुंती) ಪುರಾಣ ಕಥೆಗಳಲ್ಲಿ ಬರುವ ಒಂದು ಪಾತ್ರ. ಮಹಾಭಾರತದಲ್ಲಿ ಕಥೆಯಲ್ಲಿ ಹಸ್ತಿನಾಪುರದ ಪಾಂಡು ಮಹಾರಾಜನ ಪತ್ನಿ. ವಿವಾಹ ಪೂರ್ವದಲ್ಲಿ ಈಕೆ ಸೂರ್ಯನಿಂದ ಕರ್ಣನನ್ನು ಪಡೆದಳು. ಈಕೆ ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ. ಈಕೆಯ ಕಥೆಯು ಭಾಗವತ ಪುರಾಣದಲ್ಲಿ ಕೂಡ ಬರುತ್ತದೆ. ಅವಳು ನಕುಲಾ ಮತ್ತು ಸಹದೇವನ ಮಲತಾಯಿ ಅಥವಾ ಸಾಕು ತಾಯಿ. ಕುಂತಿ ತುಂಬಾ ಸುಂದರ ಮತ್ತು ಬುದ್ಧಿವಂತೆಯಾಗಿದ್ದಳು. ಆಕೆ ಮಹಾಭಾರತದ ಮುಖ್ಯಪಾತ್ರಗಳಲ್ಲಿ ಒಬ್ಬಳು.

ಜನನ ಮತ್ತು ಆರಂಭಿಕ ಜೀವನ[ಬದಲಾಯಿಸಿ]

ಕುಂತಿ ಯಾದವ ಮುಖ್ಯಸ್ಥ ಶುರಸೇನನ ಮಗಳು. ಅವಳ ಜನ್ಮ ಹೆಸರು ಪ್ರಿತಾ. ಕುಂತಿ ಕೃಷ್ಣನ ತಂದೆ ವಸುದೇವನ ಸಹೋದರಿ ಮತ್ತು ಕೃಷ್ಣನೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡವಳು . ಆಕೆಯ ತಂದೆ ತನ್ನ ಮಕ್ಕಳಿಲ್ಲದ ಸೋದರಸಂಬಂಧಿ ಕುಂತಿಭೋಜನಿಗೆ ಕುಂತಿಯನ್ನು ಕೊಟ್ಟರು.

  • ಒಮ್ಮೆ ದುರ್ವಾಸ ಮುನಿ ಕುಂತಿಭೋಜನನ್ನು ಭೇಟಿ ಮಾಡಿದರು . ಕುಂತಿ ನೀಡುವ ಎಲ್ಲಾ ಸೌಕರ್ಯಗಳು, ತಾಳ್ಮೆ ಮತ್ತು ಭಕ್ತಿಯಿಂದ ಅವರು ತುಂಬಾ ಸಂತೋಷಪಟ್ಟರು. ಅವರು ಅವಳಿಗೆ ಒಂದು ವರವನ್ನು ಕೊಟ್ಟರು. ಅದರ ಪ್ರಕಾರ ಅವಳು ಯಾವುದೇ ದೇವರನ್ನು(ದೇವತೆಯನ್ನು) ಅವರು ಉಪದೇಶಿಸಿದ ಮಂತ್ರವನ್ನು ಹೇಳಿ ಪ್ರಾರ್ಥಿಸಿದರೆ, ಆ ದೇವತೆಯು ಅವಳಿಗೆ ಪುತ್ರ ಸಂತಾನವನ್ನು ಕೊಡುವನು, ಎಂದು ತಿಳಿಸಿದರು.
  • ಪ್ರಚೋದಕ ಕುತೂಹಲದಿಂದ, ಕುಂತಿಯು ಸೂರ್ಯ ದೇವರನ್ನು ಆಹ್ವಾನಿಸಿದಳು. ಮಂತ್ರದ ಶಕ್ತಿಯಿಂದ ಬಂಧಿಸಲ್ಪಟ್ಟ ಸೂರ್ಯನು ಅವಳಿಗೆ ಪುತ್ರ ಸಂತಾನವನ್ನು ವರವಾಗಿ ನೀಡಿದನು. ಅವಳ ಆಶ್ಚರ್ಯಕ್ಕೆ, ಮಗು ತನ್ನ ಪವಿತ್ರ ರಕ್ಷಾಕವಚದೊಂದಿಗೆ ಜನಿಸಿತು. ಸಾರ್ವಜನಿಕರ ಭಯದಿಂದ, ಕುಂತಿಯು ಮಗುವನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ನಂತರ ಆ ಶಿಶು ಸೂತನೊಬ್ಬನಿಗೆ ಸಿಕ್ಕಿತು. ಅವನು ಅದನ್ನು ಸಾಕಿದನು. ಆ ಮಗು ಬೆಳೆದು ಕರ್ಣ ಎಂದು ಪ್ರಸಿದ್ಧನಾದನು.

ಪರಿಚಯ[ಬದಲಾಯಿಸಿ]

ಕುಂತಿದೇವಿ ಮಹಾಭಾರತದ ಸೂತ್ರಧಾರನಾದ ಭಗವಾನ್ ಶ್ರೀ ಕೃಷ್ಣನ ಸೋದರತ್ತೆ, ವಸುದೇವನ ಸಹೋದರಿ. ಶೂರರಾಜನ ಮಗಳು. ಯದುವಂಶದ ಲಲನೆ, ಪೃಥೆ ಎಂದು ಇವಳನ್ನು ಕರೆಯುತ್ತಿದ್ದುದೂ ಉಂಟು. ಕುಂತೀಭೋಜ ಶೂರರಾಜನ ಸೋದರತ್ತೆಯ ಮಗ. ಇವನಿಗೆ ಸಂತಾನವಿರಲಿಲ್ಲ. ಇವನು ಪೃಥೆಯನ್ನು ತನ್ನ ಮಗಳೆಂದು ಸ್ವೀಕರಿಸಿ ಸಾಕಿ ಸಲಹಿದ. ಆ ಕಾರಣದಿಂದಾಗಿ ಪೃಥೆ ಕುಂತಿಯೂ ಆದಳು, ಇವಳ ಮಕ್ಕಳಾದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನಿಗಿರುವ `ಪಾರ್ಥ’ ಎಂಬ ಹೆಸರು ಇವಳ ಪೃಥೆ ಎಂಬ ಹೆಸರಿನಿಂದ ಬಂದಿದೆ.

ದೂರ್ವಾಸ ಋಷಿ ಮತ್ತು ಕುಂತಿ[ಬದಲಾಯಿಸಿ]

ಕುಂತೀಭೋಜನ ಅರಮನೆಗೆ ಒಮ್ಮೆ ದೂರ್ವಾಸರು ಬಂದರು. ಒಂದು ವರ್ಷಕಾಲ ಅಲ್ಲಿರುವುದಾಗಿ ಸೂಚಿಸಿದರು. ಅವರ ಮುಂಗೋಪ ಸ್ವಭಾವದ ಅರಿವು ರಾಜನಿಗಿತ್ತು. ಸಣ್ಣಪುಟ್ಟ ದೋಷಗಳನ್ನು ಕಂಡರೂ ಸಹಿಸದೆ ಶಪಿಸುವ ಸ್ವಭಾವ ಅವರದೆಂದು ತಿಳಿದಿದ್ದ ಕುಂತೀಭೋಜನ ಪಾಲಿಗೆ ಇವರ ಸೇವಾಶುಶ್ರೂಷೆ ಒಂದು ಸವಾಲಾಯಿತು. ಆಗ ರಾಜನು ಈ ರೀತಿ ಯೋಚಿಸಿದನು. ಕುಂತಿಯು ಹಿರಿಯರ ಸೇವೆಯನ್ನು ಉತ್ಸಾಹದಿಂದ ಮಾಡುವುದು ಅವಳ ಸ್ವಭಾವ. ಅವಳನ್ನೆ ದುರ್ವಾಸರ ಸೇವೆಗೆ ನೇಮಿಸುವುದು ಒಳಿತು. ಏನಾದರೂ ಸೇವೆಯಲ್ಲಿ ತೊಂದರೆ ತೊಡಕುಗಳುಂಟಾದರೂ ಅವಳು ಹೆಣ್ಣು, ಹುಡುಗುತನ ಎಂದು ಮುನಿಗಳು ಸಹನೆಯನ್ನು ತಂದುಕೊಳ್ಳುತ್ತಾರೆ’ ಎಂದು ಬಗೆದ. ಅಂತೆಯೇ ಅವಳನ್ನು ಮುನಿಯ ಸೇವೆಗೆ ನೇಮಿಸಿದ. ದೂರ್ವಾಸರ ವರ್ತನೆ ಅತಿ ವಿಚಿತ್ರವಾಗಿತ್ತು. ಅವರು ಮನಸ್ವೀ ಸ್ವಭಾವದವರು. ಬರುವ ಹೋಗುವ ಸಮಯ ಯಾರಿಗೂ ತಿಳಿಯುತ್ತಿರಲ್ಲಿಲ್ಲ. ಅವರು ಒಮ್ಮೊಮ್ಮೆ ಬರುತ್ತಲೇ ಇರಲಿಲ್ಲ. ಅಕಾಲದಲ್ಲಿ ಬಂದು ಅತ್ಯಂತ ಕಷ್ಟಸಾಧ್ಯವಾದ ತಿನಿಸುಗಳನ್ನು ಅಪೇಕ್ಷಿಸುತ್ತಿದ್ದರು. ಅಂಥ ವೇಳೆಯಲ್ಲೂ ಸಹ ಪೃಥೆ ಶುದ್ಧ ಸೇವಾಭಾವದಿಂದ ಅವರ ಅಪೇಕ್ಷೆಯ ತಿನಿಸನ್ನು ಮೊದಲೇ ಮಾಡಿಟ್ಟುಕೊಂಡಳೋ ಎಂಬಂತೆ ಶೀಘ್ರವಾಗಿ ಸಿದ್ಧಪಡಿಸಿ ತಂದುಕೊಡುತ್ತಿದ್ದಳು.

ದುರ್ವಾಸರ ಮೆಚ್ಚುಗೆ[ಬದಲಾಯಿಸಿ]

ಒಂದು ವರ್ಷ ಅವಳು ಬಹು ತಾಳ್ಮೆಯಿಂದ ಹಸನ್ಮುಖಳಾಗಿ, ಎಂಥ ವಿಷಮ ಸಂದರ್ಭದಲ್ಲೂ ಧೃತಿಗೆಡದೆ ಸೇವೆಗೈದಳು. ಹುಡುಕಿದರೂ ಅವಳ ಸೇವೆಯಲ್ಲಿ ಯಾವ ಕೊರತೆಯೂ ಕಂಡುಬರುವಂತಿರಲ್ಲಿಲ್ಲ. ದುರ್ವಾಸರು ಅವಳ ಸೇವೆಗೆ ಮೆಚ್ಚಿ - " ಮಗಳೇ! ನಿನಗೆ ನಾನು ವರ ಕೊಡಬೇಕೆಂದಿದ್ದೇನೆ. ಏನು ಬೇಕು? ನಿಸ್ಸಂಕೋಚವಾಗಿ ಕೇಳು" - ಎಂದು ಪ್ರಸನ್ನರಾಗಿ ನುಡಿದರು. ಕುಂತಿ ಹೇಳಿದಳು: "ಮಹಾತ್ಮರೇ! ತಾವು ಪ್ರಸನ್ನರಾದಿರಿ ಎಂದು ತಿಳಿದರೆ ನಮ್ಮ ತಂದೆ ಸಂತೋಷ ಪಡುತ್ತಾರೆ. ತಮ್ಮ ಹಾಗೂ ನಮ್ಮ ತಂದೆಯವರ ಪ್ರಸನ್ನತೆಗಿಂತ ಹೆಚ್ಚಿನದೇನು ಬೇಕು? ನಾನು ಅಜ್ಞೆ. ಏನೂ ಕೇಳಬೇಕೆಂದು ನನಗೆ ಹೊಳೆಯುತ್ತಿಲ್ಲ. ನನಗೆ ಯಾವ ಆಸೆಯೂ ಇಲ್ಲ. ನನ್ನ ನಡೆನುಡಿ ಹಾಗೂ ಸೇವೆಯಲ್ಲಿ ಏನಾದರೂ ಕೊರತೆ ಇದ್ದರೆ ಕ್ಷಮಿಸಿಬಿಡಿ. ಅಷ್ಟೇ ಸಾಕು." ದುರ್ವಾಸರಿಗೆ ಈ ಮುಗ್ದೆಯ ವಿವೇಕಪೂರ್ಣ ಮಾತುಗಳು ಬಹು ಪ್ರಿಯವೆನಿಸಿದವು. ಸೇವಾಧರ್ಮ ಎಷ್ಟು ಕಠಿಣ! ಅದನ್ನು ಭಾರವೆಂದು ಬಗೆಯದೆ ಸಂತೋಷದಿಂದ ಮಾಡುವುದು ಮತ್ತುಅದಕ್ಕೆಪ್ರತಿಯಾಗಿ ಸ್ವಸಂತೋಷದಿಂದ ಫಲವನ್ನು ಕೊಡುತೇನೆಂದರೂ ವಿನಯಪೂರ್ವಕ ನಿರಾಕರಿಸು ವುದು ಏನು ಸಾಧಾರಣ ಸ್ವಭಾವವೇ? ಅವಳಲ್ಲಿ ಈ ಗುಣ ಎಷ್ಟು ಸಹಜವಾಗಿ ಬಂದಿದೆ ಎಂದು ಯೋಚಿಸಿ, ಹರ್ಷಚಿತ್ತರಾಗಿ ಅವಳಿಗೆ ಮಂತ್ರೋಪದೇಶವನ್ನಾದರೂ ಮಾಡಬೇಕೆಂದು ಸಂಕಲ್ಪಿಸಿದರು ದುರ್ವಾಸರು. ಆ ಮಹಾಬ್ರಾಹ್ಮಣರನ್ನು ಸಂತೋಷಗೊಳಿಸಲು, ಅವರ ಮಾತನ್ನು ತಿರಸ್ಕರಿಸಲಾರದೆ ಕುಂತಿ ಅದಕ್ಕೆ ಒಪ್ಪಿಕೊಂಡಳು. ದುರ್ವಾಸ ಮಹರ್ಷಿಗಳು ಅವಳಿಗೆ ಅತರ್ವವೇದದ ಶಿರೋಭಾಗದಲ್ಲಿ ಬಂದಿರುವ ಮಂತ್ರವನ್ನು ಉಪದೇಶಿಸಿದರು ಮತ್ತು - " ಮಗು! ಇದನ್ನು ಉಚ್ಚರಿಸಿ ನೀನು ಯಾವ ದೇವ-ದೇವತೆಯನ್ನಾದರೂ ಆವಾಹನೆ ಮಾಡಬಹುದು. ಅವರು ಬಂದು ನಿನ್ನ ಇಷ್ಟಾರ್ಥವನ್ನು ಸಲ್ಲಿಸುವರು" - ಎಂದು ನುಡಿದು ಅಲ್ಲಿಂದ ಕಣ್ಮರೆಯಾದರು.ಕುಂತಿಯ ಈ ಆದರ್ಶ ನಿಶ್ಕಾಮಸೇವಭಾವ ಇಂದಿಗೂ ಪ್ರಸ್ಥುತ. ಇದನ್ನು ನಮ್ಮ ನಾಡಿನ ಬಾಲಕಿಯರಲ್ಲಿ ರೂಡಿಸುವ ಶಿಕ್ಷಣವನ್ನು ವಾತಾವರಣವನ್ನು ನಿರ್ಮಿಸಬೇಕಾಗಿದೆ. ಭಾರತೀಯ ಸಂಸ್ಕೃತಿಯ ’ಅತಿಥಿ ಸೇವಾ’ ಎಂಬ ಅಂಶ ಬೇರಾವ ಸಂಸ್ಕೃತಿಯಲ್ಲೂ ಕಂಡುಕೇಳಿ ಅರಿಯದ ವಿಶಿಷ್ಟಧರ್ಮವಾಗಿದೆ. ಇದನ್ನು ನಾವು ಬಹು ಎಚ್ಚರದಿಂದ ಉಳಿಸಿಕೊಂಡು ಬರಬೇಕು ಎಂದರು

ಕುಂತಿಯ ವಿವಾಹ[ಬದಲಾಯಿಸಿ]

ಅರಮನೆಯಲ್ಲಿ ಕುಂತಿಯು ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆಯೇ ಕುಂತಿಭೋಜನು ಮಂತ್ರಿಗಳೊಡನೆ ಸಮಾಲೋಚಿಸಿ ಸ್ವಯಂವರದ ಮೂಲಕ ಪೃಥೆಗೆ ವಿವಾಹ ಮಾಡಲು ನಿಶ್ಚಯಿಸಿದರು. ಎಲ್ಲಾ ದೇಶದ ರಾಜಕುಮಾರರಿಗೆ ಆಹ್ವಾನವನ್ನು ಕಳುಹಿಸಿದರು. ಸ್ವಯಂವರದ ದಿನ ಕುಂತಿ ವರಮಾಲೆಯನ್ನು ಹಿಡಿದು ಎಲ್ಲಾ ರಾಜಕುಮಾರರನ್ನು ನೋಡುವಾಗ ಪಾಂಡುರಾಜನನ್ನು ನೋಡಿದೊಡನೆ ಅವನನ್ನೇ ತನ್ನ ಪತಿಯನ್ನಾಗಿ ಪಡೆಯಬೇಕೆಂದು ನಿರ್ಧರಿಸುತ್ತಾಳೆ. ಕುಂತಿ ಪಾಂಡುವಿನ ಕೊರಳಿಗೆ ವರ ಮಾಲೆಯನ್ನು ಹಾಕುತ್ತಾಳೆ. ನಂತರದಲ್ಲಿ ಕುಂತಿಭೋಜ ಪಾಂಡುವಿಗೆ ಮಗಳನ್ನು ಕೊಟ್ಟು ಯಥಾನಿಧಿಯಾಗಿ ವಿವಾಹ ಮಾಡಿದ. ಹಸ್ತಿನಾಪುರದ ರಾಜಪರಿವಾರ ಕುಂತಿಯನ್ನು ಆದರದಿಂದ ಬರಮಾಡಿಕೊಂಡಿತು. ಕುಂತಿ ಪಾಂಡುವಿನ ಪತ್ನಿಯಾಗಿ ಹಸ್ತಿನಾವತಿ ಸೇರಿದಳು.

"https://kn.wikipedia.org/w/index.php?title=ಕುಂತಿ&oldid=1186374" ಇಂದ ಪಡೆಯಲ್ಪಟ್ಟಿದೆ