ಅಮಿತಾಭ್ ಬಚ್ಚನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಮಿತಾಬ್ ಬಚ್ಚನ್ ಇಂದ ಪುನರ್ನಿರ್ದೇಶಿತ)
ಅಮಿತಾಭ್ ಬಚ್ಚನ್'

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಅಮಿತಾಭ್ ಹರಿವಂಶ್ ಬಚ್ಚನ್'
೧೯೪೨-೧೦-೧೧
ಅಲ್ಲಹಾಬಾದ್
ಬೇರೆ ಹೆಸರುಗಳು ಬಿಗ್ ಬಿ
ವೃತ್ತಿ ನಟ, ಗಾಯಕ, ನಿರೂಪಕ
ವರ್ಷಗಳು ಸಕ್ರಿಯ ೧೯೬೯– ಪ್ರಸಕ್ತ
ಪತಿ/ಪತ್ನಿ ಜಯಾ ಭಾದುರಿ (೧೯೭೩ - ಪ್ರಸಕ್ತ)

ಅಮಿತಾಭ್ ಬಚ್ಚನ್ (ಹಿಂದಿ:अमिताभ बच्चन, pronounced [əmɪˈtaːbʱ ˈbətːʃən], ಅಕ್ಟೋಬರ್ 11, 1942ರಂದು ಅಮಿತಾಭ್ ಹರಿವಂಶ್‌ ಬಚ್ಚನ್ ಜನನ), ಭಾರತದ ಒಬ್ಬ ಚಲನಚಿತ್ರ ನಟ. ಅವರನ್ನು ಬಿಗ್ B ಮತ್ತು ಷಹೇನ್‌ಷಾ ಎಂದೂ ಕರೆಯಲಾಗುತ್ತಿದೆ. 1970ರ ದಶಕದಲ್ಲಿ ಆರಂಭದಲ್ಲಿ "ಆಂಗ್ರಿ ಯಂಗ್ ಮ್ಯಾನ್" ಇಮೇಜ್‌ನೊಂದಿಗೆ ಅಮಿತಾಭ್ ಬಚ್ಚನ್ ಬಾಲಿವುಡ್ ಚಲನಚಿತ್ರದಲ್ಲಿ ಮೊದಲು ಜನಪ್ರಿಯತೆಗೆ ಬಂದರು, ಆ ಬಳಿಕ ಅವರು ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು.[೧][೨] ಬಚ್ಚನ್ ತಮ್ಮ ಚಲನಚಿತ್ರ ವೃತ್ತಿ ಜೀವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹನ್ನೆರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣಗೊಂಡ ದಾಖಲೆ ಕೂಡ ಅವರ ಹೆಸರಲ್ಲಿದೆ. ಬಚ್ಚನ್ ಅವರು ನಟನೆ ಮಾತ್ರವಲ್ಲದೆ, ಹಿನ್ನೆಲೆ ಗಾಯಕರಾಗಿ, ಚಿತ್ರ ನಿರ್ಮಾಪಕರಾಗಿ ಮತ್ತು ಟಿವಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ, ಮತ್ತು 1984ರಿಂದ 1987ರವರೆಗಿನ ಅವಧಿಗೆ ಭಾರತದ ಸಂಸತ್‌‌ ಸದಸ್ಯರಾಗಿ ಬಚ್ಚನ್ ಆಯ್ಕೆಯಾಗಿದ್ದರು. ನಟಿ ಜಯಾ ಭಾದುರಿ ಅವರನ್ನು ಬಚ್ಚನ್ ವಿವಾಹವಾಗಿದ್ದಾರೆ. ಬಚ್ಚನ್ ದಂಪತಿಗಳಿಗೆ ಶ್ವೇತಾ ನಂದಾ ಮತ್ತು ಅಭಿಷೇಕ್ ಬಚ್ಚನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ನಟನಾಗಿದ್ದು, ನಟಿ ಐಶ್ವರ್ಯಾ ರೈಯನ್ನು ವಿವಾಹವಾಗಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಉತ್ತರ ಪ್ರದೇಶಅಲಹಾಬಾದ್‌ನಲ್ಲಿ ಜನಿಸಿದ ಅಮಿತಾಭ್ ಬಚ್ಚನ್, ಮೂಲತಃ ಹಿಂದೂ-ಸಿಖ್ ಮನೆತನಕ್ಕೆ ಸೇರಿದವರು. ಅವರ ತಂದೆ, Dr.ಹರಿವಂಶ್‌ ರಾಯ್ ಬಚ್ಚನ್ಹಿಂದಿಯ ಪ್ರಖ್ಯಾತ ಕವಿಯಾದರೆ, ತಾಯಿ ತೇಜಿ ಬಚ್ಚನ್ ಫೈಸಲಾಬಾದ್‌ನ(ಈಗ ಪಾಕಿಸ್ತಾನದಲ್ಲಿದೆ) ಸಿಖ್-ಪಂಜಾಬಿ ಕುಟುಂಬಕ್ಕೆ ಸೇರಿದವರು.[೩] ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ಪ್ರಸಿದ್ಧವಾಗಿದ್ದ ಇನ್‌ಖಿಲಾಬ್ ಜಿಂದಾಬಾದ್ ಎಂಬ ಘೋಷಣೆಯಿಂದ ಸ್ಫೂರ್ತಿಗೊಂಡು ಬಚ್ಚನ್‌ಗೆ ಆರಂಭದಲ್ಲಿ ಇನ್‌ಖಿಲಾಬ್ ಎಂದು ಹೆಸರಿಡಲಾಗಿತ್ತು, ಆ ನಂತರ ಅಮಿತಾಭ್ ಎಂದು ಮರು ನಾಮಕರಣ ಮಾಡಲಾಯಿತು, ಅಂದರೆ "ನಂದಾದೀಪ" ಎಂಬರ್ಥ. ಬಚ್ಚನ್ ಮನೆತನದ ಹೆಸರು ಶ್ರೀವಾಸ್ತವ ಎಂದಿದ್ದರೂ, ಅವರ ತಂದೆ ಬಚ್ಚನ್ ಹೆಸರನ್ನು ಆರಿಸಿಕೊಂಡು, ಆ ಹೆಸರಿನಲ್ಲೇ ತಮ್ಮ ಎಲ್ಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಮಿತಾಭ್ ತಮ್ಮ ಕೊನೆಯ ಹೆಸರಿನ ಮೂಲಕ ಚಿತ್ರರಂಗ ಪ್ರವೇಶಿಸಿದರು, ಅಲ್ಲದೆ ಸಾರ್ವಜನಿಕ ಉದ್ದೇಶಗಳಿಗಾಗಿ ಅವರ ಕುಟುಂಬದ ಎಲ್ಲ ಸದಸ್ಯರು ಬಚ್ಚನ್ ಎಂದೇ ಕರೆಸಿಕೊಂಡಿದ್ದಾರೆ. ಹರಿವಂಶ್‌ ರಾಯ್ ಬಚ್ಚನ್‌ರವರ ಇಬ್ಬರು ಪುತ್ರರ ಪೈಕಿ ಅಮಿತಾಭ್ ಹಿರಿಯರು, ಅಜಿತಾಭ್ ಎರಡನೆಯವರು. ಬಚ್ಚನ್ ತಾಯಿಗೆ ರಂಗಭೂಮಿಯಲ್ಲಿ ಅತೀವ ಆಸಕ್ತಿಯಿತ್ತು, ಮತ್ತು ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೂಡ ದೊರೆತಿತ್ತು, ಆದರೆ ಚಲನಚಿತ್ರಕ್ಕೆ ಸೇರದೆ ಅವರು ಗೃಹಿಣಿಯಾಗಿಯೇ ಉಳಿದರು. ಅಮಿತಾಭ್ ಚಿತ್ರ ವೃತ್ತಿ ಜೀವನವನ್ನು ಆರಿಸಿಕೊಳ್ಳುವಲ್ಲಿ ಅವರ ತಾಯಿಯ ಪ್ರಭಾವವೂ ಇತ್ತು, ಏಕೆಂದರೆ ತಮ್ಮ ಪುತ್ರ ಕೇಂದ್ರ ಬಿಂದುವಾಗಬೇಕೆಂದು ಅವರು ಆಶಿಸಿದ್ದರು.[೪] ತಮ್ಮ ಆರಂಭದ ಶಿಕ್ಷಣವನ್ನು ಅಲಹಾಬಾದ್‌ಜ್ಞಾನ ಪ್ರಬೋಧಿನಿ ಮತ್ತು ಬಾಲಕ ಪ್ರೌಢ ಶಾಲೆ (BHS) ಮುಗಿಸಿದ ಅಮಿತಾಭ್, ಕಲೆಯನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡು ನೈನಿತಾಲ್‌ಶೇರ್‌ವುಡ್ ಕಾಲೇಜಿನಲ್ಲಿ ಓದಿದರು. ಬಳಿಕ ಪದವಿ ಶಿಕ್ಷಣಕ್ಕಾಗಿ ದೆಹಲಿ ವಿಶ್ವವಿದ್ಯಾಲಯಕಿರೊರಿ ಮಾಲ್ ಕಾಲೇಜ್‌ಗೆ ತೆರಳಿ, ಬ್ಯಾಚಲರ್ ಆಫ್ ಸೈನ್ಸ್ ಪದವಿ ಪಡೆದರು. ಕಲ್ಕತ್ತಾ(ಈಗ ಕೊಲ್ಕತಾ) ಮೂಲದ ಬರ್ಡ್ ಅಂಡ್ ಕೊ. ಸಂಸ್ಥೆಗೆ ಸೇರಿದ ವಾಣಿಜ್ಯ ಹಡಗಿನ ಸರಕುಸಾಗಾಣೆ ದಲ್ಲಾಳಿಯಾಗಿದ್ದ ಬಚ್ಚನ್, ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅಭಿನಯ ವೃತ್ತಿಯನ್ನು ಮುಂದುವರಿಸುವ ಸಲುವಾಗಿ ಉದ್ಯೋಗಕ್ಕೆ ತಿಲಾಂಜಲಿಯಿತ್ತರು.

ಬದುಕು[ಬದಲಾಯಿಸಿ]

ಆರಂಭಿಕ ಕೆಲಸ-ಕಾರ್ಯಗಳು 1969-1972[ಬದಲಾಯಿಸಿ]

' ಸಾತ್ ಹಿಂದೂಸ್ತಾನಿ ಚಿತ್ರದ ಏಳು ಮಂದಿ ನಾಯಕರ ಪೈಕಿ ಒಬ್ಬರಾಗಿ ಬಚ್ಚನ್ 1969ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರವನ್ನು ಖ್ವಾಜಾ ಅಹ್ಮದ್ ಅಬ್ಬಾಸ್ ನಿರ್ದೇಶಿಸಿದ್ದಾರೆ, ಮತ್ತು ಉತ್ಪಲ್ ದತ್, ಮಧು ಮತ್ತು ಜಲಾಲ್ ಆಘಾ ಮುಂತಾದವರ ತಾರಾಗಣವಿದೆ. ಆರ್ಥಿಕವಾಗಿ ಈ ಚಿತ್ರ ಯಶಸ್ಸು ಕಾಣದಿದ್ದರೂ, ಬಚ್ಚನ್ ಅವರು ಈ ಚಿತ್ರದಲ್ಲಿನ ನಟನೆಗಾಗಿ ಮೊದಲ ಬಾರಿ ಅತ್ಯುತ್ತಮ ಹೊಸ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು.[೫] ಆ ನಂತರ ರಾಜೇಶ್ ಖನ್ನಾ ಜೊತೆ ಬಚ್ಚನ್ ನಟಿಸಿದ ಆನಂದ್ (1971) ಚಿತ್ರ ವಾಣಿಜ್ಯವಾಗಿ ಯಶಸ್ಸು ಕಂಡಿತು ಮತ್ತು ವಿಮರ್ಶಕರ ಮೆಚ್ಚುಗೆಯನ್ನೂ ಪಡೆಯಿತು. ಈ ಚಿತ್ರದಲ್ಲಿ ಬಚ್ಚನ್ ನಿರ್ವಹಿಸಿದ ಜೀವನದ ಬಗ್ಗೆ ಸಿನಿಕ ದೃಷ್ಟಿಕೋನವುಳ್ಳ ವೈದ್ಯನ ಪಾತ್ರ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರ ಅಮಿತಾಭ್ ಪರ್ವಾನ (1971) ಚಿತ್ರದಲ್ಲಿ ನವೀನ್ ನಿಸ್ಕೋಲ್, ಯೋಗಿತಾ ಬಾಲಿ ಮತ್ತು ಓಂ ಪ್ರಕಾಶ್ ತಾರಾಗಣದಲ್ಲಿ ಅವಿವೇಕಿ ಪ್ರೇಮಿಯ ಪಾತ್ರದಲ್ಲಿ ನಟಿಸಿದರು, ಅಲ್ಲದೆ ಖಳ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಕ್ಕೆ ಇದು ಅಪರೂಪದ ಉದಾಹರಣೆ ಕೂಡ ಹೌದು. ರೇಶ್ಮಾ ಔರ್ ಷೇರಾ (1971)ಸೇರಿದಂತೆ ಆ ನಂತರ ಬಿಡುಗಡೆಯಾದ ಬಚ್ಚನ್ ಅಭಿನಯದ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಶೇಷ ಯಶಸ್ಸು ಪಡೆಯಲಿಲ್ಲ. ಇದೇ ಸಮಯದಲ್ಲಿ, ನಟ ಧರ್ಮೇಂದ್ರ ಮತ್ತು ತಮ್ಮ ಭಾವಿ ಪತ್ನಿ ಜಯಾ ಬಾಧುರಿ ನಟಿಸಿದ ಗುಡ್ಡಿ ಚಿತ್ರದಲ್ಲಿ ಅತಿಥಿ ನಟನಾಗಿ ಬಚ್ಚನ್ ಕಾಣಿಸಿಕೊಂಡರು. ಆರಂಭಿಕ ವೃತ್ತಿ ಜೀವನದಲ್ಲಿ ತಮ್ಮ ಅಪೂರ್ವ ಧ್ವನಿಯಿಂದ ಎಲ್ಲರ ಗಮನ ಸೆಳೆದಿದ್ದ ಅವರು, ಬಾವರ್ಚಿ ಚಿತ್ರದ ಭಾಗವೊಂದನ್ನು ನಿರೂಪಿಸಿದ್ದಾರೆ. 1972ರಲ್ಲಿ, ಎಸ್. ರಾಮನಾಥನ್ ನಿರ್ದೇಶಿಸಿದ ಪ್ರಯಾಣದ ಸನ್ನಿವೇಶಗಳಿರುವ ಸಾಹಸ ಮತ್ತು ಹಾಸ್ಯಮಯ ಬಾಂಬೆ ಟು ಗೋವಾ ಚಿತ್ರದಲ್ಲಿ ಬಚ್ಚನ್ ಅಭಿನಯಿಸಿದರು. ಈ ಚಿತ್ರದಲ್ಲಿ ಅರುಣಾ ಇರಾನಿ, ಮೆಹ್ಮೂದ್, ಅನ್ವರ್ ಆಲಿ ಮತ್ತು ನಾಸಿರ್ ಹುಸೇನ್ ಮುಂತಾದವರ ಜೊತೆಗೆ ಬಚ್ಚನ್ ನಟಿಸಿದ್ದಾರೆ.

ಲಂಡನ್‌ನಲ್ಲಿ ಅಮಿತಾಭ್ ಬಚ್ಚನ್‌ರವರ ಜೇನುಮೇಣದ ಪ್ರತಿಮೆ[ಬದಲಾಯಿಸಿ]

ಲಂಡನ್‌ನಲ್ಲಿ ಬಾಲಿವುಡ್ ಚಲನಚಿತ್ರ ನಟ ಅಮಿತಾಭ್ ಬಚ್ಚನ್ ಅವರ ಜೇನುಮೇಣದ ಪ್ರತಿಮೆಯಿದೆ.

ತಾರಾಪಟ್ಟಕ್ಕೆ ಏರಿದ ಬಗೆ 1973-1983[ಬದಲಾಯಿಸಿ]

೧973ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ಜಂಜೀರ್ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ವಿಜಯ್ ಖನ್ನಾ ಪಾತ್ರ ಅಮಿತಾಭ್‌ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಿತು== ರೊಮ್ಯಾಂಟಿಕ್ ಕಥಾವಸ್ತು ಹೊಂದಿದ್ದ ಅವರ ಈ ಹಿಂದಿನ ಚಿತ್ರಗಳಿಗೆ ಜಂಜೀರ್ ತದ್ವಿರುದ್ಧವಾಗಿತ್ತು ಮತ್ತು ಇದರ ಬೆನ್ನಿಗೆ ತೆರೆ ಕಂಡ ಇದೇ ತೆರನಾದ ಚಿತ್ರಗಳು ಅಮಿತಾಭ್‌ಗೆ ಬಾಲಿವುಡ್ ಚಲನಚಿತ್ರದ[೨] "ಆಂಗ್ರಿ ಯಂಗ್ ಮ್ಯಾನ್" ಪಟ್ಟ ನೀಡಿದವು. ಇಷ್ಟು ಮಾತ್ರವಲ್ಲದೆ ಮುಂಚೂಣಿ ನಾಯಕನ ಪಾತ್ರದಲ್ಲಿ ಅಮಿತಾಭ್‌ಗೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ತಂದುಕೊಟ್ಟ ಮೊದಲ ಚಿತ್ರ ಕೂಡ ಇದಾಗಿದೆ, ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮಕರಣವನ್ನೂ ಗಳಿಸಿಕೊಟ್ಟಿತು. ಇದೇ ವರ್ಷ ಅಂದರೆ 1973ರಲ್ಲಿ ಜಯಾರನ್ನು ಅಮಿತಾಭ್ ವಿವಾಹವಾದರು.ಇದೇ ಹೊತ್ತಿಗೆ ಮತ್ತು ಸರಿಸುಮಾರು ವಿವಾಹವಾದ ಒಂದು ತಿಂಗಳ ನಂತರ ತೆರೆ ಕಂಡ ಚಿತ್ರಗಳ ಜಂಜೀರ್ ಮತ್ತು ಅಭಿಮಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಮಿತಾಭ್‌-ಜಯಾ ಜೊತೆಯಾಗಿ ನಟಿಸಿದರು. ನಂತರ, ಹೃಷಿಕೇಷ್ ಮುಖರ್ಜಿ ನಿರ್ದೇಶಿಸಿದ ಮತ್ತು ಸ್ನೇಹದ ಕಥಾವಸ್ತುವುಳ್ಳ ಸಾಮಾಜಿಕ ಚಿತ್ರ ನಮಕ್ ಹರಾಮ್ ಚಿತ್ರದಲ್ಲಿ ವಿಕ್ರಂ ಪಾತ್ರದಲ್ಲಿ ಬಚ್ಚನ್ ನಟಿಸಿದರು. ಬೀರೇಶ್ ಚಟರ್ಜಿ ಈ ಚಿತ್ರದ ಕಥಾವಸ್ತು ಬರೆದಿದ್ದಾರೆ. ರಾಜೇಶ್ ಖನ್ನಾ ಮತ್ತು ರೇಖಾ ತಾರಾಗಣವಿದ್ದ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಮಿತಾಭ್ ಅಭಿನಯ ಮೆಚ್ಚುಗೆ ಪಡೆಯಿತಲ್ಲದೆ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. 1974ರಲ್ಲಿ, ಕುಂವಾರಾ ಬಾಪ್ ಮತ್ತು ದೋಸ್ತ್ ಮುಂತಾದ ಚಿತ್ರಗಳಲ್ಲಿ ಅನೇಕ ಬಾರಿ ಅತಿಥಿ ನಟನಾಗಿ ಬಚ್ಚನ್ ಕಾಣಿಸಿಕೊಂಡರು, ಇದಕ್ಕಿಂತ ಮೊದಲು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರ ರೋಟಿ ಕಪ್ಡಾ ಔರ್ ಮಕಾನ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಥೆ ಬರೆದು, ನಿರ್ದೇಶಿಸಿದ್ದಾರೆ. ಶೋಷಣೆ, ಆರ್ಥಿಕ ಮತ್ತು ಭಾವನಾತ್ಮಕ ಒದ್ದಾಟಗಳ ನಡುವೆ ಪ್ರಾಮಾಣಿಕತೆಯ ಮುಖವಾಡದ ಕಥಾವಸ್ತು ಹೊಂದಿರುವ ಈ ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆಯಿತು ಮತ್ತು ವಾಣಿಜ್ಯವಾಗಿ ಯಶಸ್ಸು ಕಂಡಿತು, ಮಾತ್ರವಲ್ಲದೆ ಸ್ವತಃ ಕುಮಾರ್, ಶಶಿ ಕಪೂರ್ ಮತ್ತು ಜೀನತ್ ಅಮಾನ್ ಅವರ ಸಾಲಿನಲ್ಲಿ ಬಚ್ಚನ್‌‌ರನ್ನು ಸೇರಿಸಿತು. ಬಚ್ಚನ್ ನಂತರ ನಾಯಕ ಪಾತ್ರದಲ್ಲಿ ನಟಿಸಿದ ಮಜ್ಬೂರ್‌ ಚಿತ್ರ ಡಿಸೆಂಬರ್ 6, 1974ರಲ್ಲಿ ತೆರೆ ಕಂಡಿತು, ಇದು ಜಾರ್ಜ್ ಕೆನೆಡಿ ನಟನೆಯ ಹಾಲಿವುಡ್ ಚಿತ್ರ ಜಿಗ್‌ಜ್ಯಾಗ್‌ ನ ರಿಮೇಕ್‌. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ತಕ್ಕ ಮಟ್ಟಿನ ಯಶಸ್ಸು ಕಂಡಿತು[೬]. 1975ರ ಹಾಸ್ಯಮಯ ಚುಪ್ಕೆ ಚುಪ್ಕೆ , ಅಪರಾಧ ಕಥಾವಸ್ತುವುಳ್ಳ ಫರಾರ್ ಚಿತ್ರದಿಂದ ಹಿಡಿದು ರೊಮ್ಯಾಂಟಿಕ್ ಚಿತ್ರ ಮಿಲಿ ವರೆಗೆ ವೈವಿಧ್ಯಮಯ ಪ್ರಕಾರಗಳ ಚಿತ್ರಗಳಲ್ಲಿ ಬಚ್ಚನ್ ನಟಿಸಿದರು. ಆದಾಗ್ಯೂ 1975ರಲ್ಲಿ ಅವರು ಕೇವಲ ಎರಡು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡರು, ಆದರೂ ಈ ಚಿತ್ರಗಳಿಗೆ ಹಿಂದಿ ಚಿತ್ರರಂಗದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಯಶ್ ಚೋಪ್ರಾ ನಿರ್ದೇಶನದ ದೀವಾರ್ ಚಿತ್ರದಲ್ಲಿ ಶಶಿ ಕಪೂರ್, ನಿರೂಪ ರಾಯ್, ಮತ್ತು ನೀತು ಸಿಂಗ್ ಜೊತೆ ಬಚ್ಚನ್ ನಟಿಸಿದರು, ಮತ್ತು ಇದರಲ್ಲಿನ ಅಭಿನಯ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮಕರಣ ಗಳಿಸಿಕೊಟ್ಟಿತು. ಈ ಚಿತ್ರ 1975ರಲ್ಲಿ ಭಾರಿ ಯಶಸ್ಸು ಪಡೆದು, ಗಲ್ಲಾಪೆಟ್ಟಿಗೆಯಲ್ಲಿ 4ನೆ ಸ್ಥಾನ ಪಡೆಯಿತು.[೭] ಬಾಲಿವುಡ್‌ನ ನೋಡಲೇಬೇಕಾದ ಉನ್ನತ 25 ಚಿತ್ರಗಳ ಪೈಕಿ ದೀವಾರ್ ಕೂಡ ಎಂದು ಇಂಡಿಯಾಟೈಮ್ಸ್ ಮೂವೀಸ್ ಎಂದು ಹೇಳಿದೆ.[೮] 1975, ಅಗಸ್ಟ್ 15ರಂದು ತೆರೆ ಕಂಡ ಶೋಲೆ (ಜ್ವಾಲೆ ಎಂಬರ್ಥ) ಚಿತ್ರ ಅತಿ ಹೆಚ್ಚು Rs.2,36,45,00,000 ಅಂದರೆ US$ 60 ದಶಲಕ್ಷಕ್ಕೆ ಸಮನಾಗಿ ಗಳಿಸಿ ಭಾರತದಲ್ಲಿ ಸರ್ವಕಾಲೀಕ ದಾಖಲೆಯನ್ನು ಸ್ಥಾಪಿಸಿದೆ, ಇಲ್ಲಿ ಗಳಿಕೆಯನ್ನು ಹಣದುಬ್ಬರಕ್ಕೆ ಹೊಂದಾಣಿಸಲಾಗಿದೆ.[೯] ಬಚ್ಚನ್ ಈ ಚಿತ್ರದಲ್ಲಿ ಜೈದೇವ್ ಪಾತ್ರ ನಿರ್ವಹಿಸಿದ್ದಾರೆ, ಹಿಂದಿ ಚಿತ್ರರಂಗದ ಖ್ಯಾತ ನಟರಾದ ಧರ್ಮೇಂದ್ರ, ಹೇಮ ಮಾಲಿನಿ, ಸಂಜೀವ್ ಕುಮಾರ್, ಜಯಾ ಭಾದುರಿ ಮತ್ತು ಅಮ್ಜದ್ ಖಾನ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. 1999ರಲ್ಲಿ, ಭಾರತದ BBC ವಿಭಾಗವು ಇದನ್ನು "ಶತಮಾನದ ಚಿತ್ರ"ವೆಂದು ಘೋಷಿಸಿದೆ, ಮತ್ತು ದೀವಾರ್ ಚಿತ್ರದಂತೆ ಶೋಲೆಯನ್ನೂ ಬಾಲಿವುಡ್‌ನ ನೋಡಲೇಬೇಕಾದ ಉನ್ನತ 25 ಚಿತ್ರಗಳ ಸಾಲಿನಲ್ಲಿ ಇಂಡಿಯಾಟೈಮ್ಸ್‌ ಮೂವೀಸ್ ಸೇರಿಸಿತು.[೮] ಅದೇ ವರ್ಷ ಶೋಲೆ ಚಿತ್ರಕ್ಕೆ 50ನೆ ವಾರ್ಷಿಕ ಫಿಲ್ಮ್‌ಫೇರ್ ಪ್ರಶಸ್ತಿಗಳ ತೀರ್ಪುಗಾರರು 50 ವರ್ಷಗಳಲ್ಲೇ ಅತ್ಯುತ್ತಮ ಚಿತ್ರ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿ ನೀಡಿದರು. ಗಲ್ಲಾಪೆಟ್ಟಿಗೆಯಲ್ಲಿ ಶೋಲೆ ಚಿತ್ರದ ಭಾರಿ ಯಶಸ್ಸಿನ ಬಳಿಕ, ಬಚ್ಚನ್ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು ಮತ್ತು 1976ರಿಂದ 1984ರ ಅವಧಿಯಲ್ಲಿ ಬಚ್ಚನ್ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳು ಮತ್ತು ನಾಮಕರಣಗಳು ಹರಿದು ಬಂದವು. ಬಾಲಿವುಡ್‌ನಲ್ಲಿ ಬಚ್ಚನ್‌‌‌ರಿಗಿದ್ದ ಸರ್ವೋತ್ಕೃಷ್ಟ ಸಾಹಸ ನಾಯಕ ಸ್ಥಾನವನ್ನು ಶೋಲೆಯಂತಹ ಚಿತ್ರಗಳು ಭದ್ರಪಡಿಸಿದ್ದಾಗ್ಯೂ, ಕಭೀ ಕಭೀ (1976)ಯಂತಹ ಚಿತ್ರಗಳಲ್ಲಿ ಪ್ರೇಮಿಯಾಗಿ, ಅಮರ್ ಅಕ್ಬರ್ ಅಂತೋನಿ (1977) ಮತ್ತು ಇದಕ್ಕೂ ಹಿಂದಿನ ಚುಪ್ಕೆ ಚುಪ್ಕೆ (1975)ಯಂತಹ ಹಾಸ್ಯಮಯ ಚಿತ್ರಗಳಲ್ಲೂ ನಟಿಸಿ ತಾವು ಇತರೆ ಪಾತ್ರಗಳಲ್ಲೂ ಸೈ ಎಂಬುದನ್ನು ಬಚ್ಚನ್ ಸಾಬೀತುಪಡಿಸಿದರು. 1976ರಲ್ಲಿ, ನಿರ್ದೇಶಕ ಯಶ್ ಚೋಪ್ರಾರ ಎರಡನೆ ಚಿತ್ರ ಕಭೀ ಕಭೀ ಯಲ್ಲಿ ಬಚ್ಚನ್ ನಟಿಸಿದರು, ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರದಲ್ಲಿ ಪೂಜಾ ಎಂಬ ಚೆಲುವೆಯನ್ನು ಪ್ರೀತಿಸುವ ಯುವ ಕವಿ ಅಮಿತ್ ಮಲ್ಹೋತ್ರಾನ ಪಾತ್ರದಲ್ಲಿ ಬಚ್ಚನ್ ಅಭಿನಯಿಸಿದ್ದಾರೆ. ಪೂಜಾ ಪಾತ್ರದಲ್ಲಿ ರಾಖೀ ಗುಲ್ಜಾರ್ ಕಾಣಿಸಿಕೊಂಡಿದ್ದಾರೆ. ಮೃದುತ್ವ ಮತ್ತು ವಿಶಾಲದೃಷ್ಟಿಯುಳ್ಳ ಭಾವನಾತ್ಮಕ ಸಂಭಾಷಣೆ ಹೊಂದಿರುವ ಈ ಚಿತ್ರಕಥೆ ಅಮಿತಾಭ್‌ರ ಈ ಹಿಂದಿನ ಸಾಹಸಮಯ ಚಿತ್ರಗಳು ಮತ್ತು ಮುಂದೆ ನಟಿಸಲಿರುವ ಚಿತ್ರಗಳ ಕಥೆಗಳಿಗೆ ನೇರವಾಗಿ ವಿರುದ್ಧವಾಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತಲ್ಲದೆ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣ ಗಳಿಸಿಕೊಟ್ಟಿತು. 1977ರಲ್ಲಿ ಅಮರ್ ಅಕ್ಬರ್ ಅಂತೋಣಿ ಚಿತ್ರದಲ್ಲಿನ ಅಭಿನಯಕ್ಕೆ ಅಮಿತಾಭ್‌ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು, ಈ ಚಿತ್ರದಲ್ಲಿ ವಿನೋದ್ ಖನ್ನಾ ಮತ್ತು ರಿಷಿ ಕಪೂರ್ ಜೊತೆಗೆ ಮೂರನೇ ನಾಯಕ ಅಂತೋನಿ ಗೊನ್ಸಾಲ್ವಿಸ್ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ. 1978ನೆ ಇಸವಿ ಅವರ ವೃತ್ತಿಯಲ್ಲೇ ಕಿರೀಟ ಪ್ರಾಯವಾದ್ದು ಎಂದರೆ ತಪ್ಪಾಗಲಾರದು, ಏಕೆಂದರೆ ಆ ವರ್ಷ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಎಲ್ಲ ನಾಲ್ಕು ಚಿತ್ರಗಳಲ್ಲಿ ಅಮಿತಾಭ್ ನಟಿಸಿದ್ದಾರೆ.[೧೦] ಕಸ್ಮೆ ವಾದೆ ಚಿತ್ರದಲ್ಲಿ ಅಮಿತ್ ಹಾಗೂ ಶಂಕರ್ ಮತ್ತು ಡಾನ್ ಚಿತ್ರದಲ್ಲಿ ಭೂಗತ ದೊರೆಯಾಗಿ ಮತ್ತು ಅವನಂತೆ ಕಾಣುವ ವಿಜಯ್ ಪಾತ್ರದಲ್ಲಿ ನಟಿಸುವುದರೊಂದಿಗೆ ದ್ವಿಪಾತ್ರ ನಟನೆಗೆ ಬಚ್ಚನ್ ಮರಳಿದರು. ತ್ರಿಶೂಲ್ ಮತ್ತು ಮುಖದ್ದರ್ ಕಾ ಸಿಕಂದರ್ ಚಿತ್ರಗಳಲ್ಲಿನ ಅಭಿನಯ ವಿಮರ್ಶಕರಿಂದ ಗಮನಾರ್ಹವಾಗಿ ಮೆಚ್ಚುಗೆ ಪಡೆಯಿತಲ್ಲದೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ಅನೇಕ ನಾಮಕರಣಗಳನ್ನು ಗಳಿಸಿಕೊಟ್ಟಿತು. ಈ ಹಂತದಲ್ಲಿ ವೃತ್ತಿ ಜೀವನದಲ್ಲಿ ಅಮಿತಾಭ್ ಪಡೆದ ಅಭೂತಪೂರ್ವ ಯಶಸ್ಸಿನಿದಾಗಿ, ಅವರನ್ನು ಫ್ರೆಂಚ್ ನಿರ್ದೇಶಕ ಫ್ರಾಮ್ಕೋಯಿಸ್ ಟ್ರಫೌಟ್ "ವನ್-ಮ್ಯಾನ್ ಇಂಡಸ್ಟ್ರಿ" ಎಂದು ಸಾರಿದರು.[೧೧] 1979ರಲ್ಲಿ, ಮೊದಲ ಬಾರಿಗೆ ಅಮಿತಾಭ್ Mr.ನಟ್ವರ್‌ಲಾಲ್ ಚಿತ್ರಕ್ಕಾಗಿ ತಮ್ಮ ಸಂಗೀತ ಧ್ವನಿಯನ್ನು ಬಳಸಬೇಕಾದ ಅವಶ್ಯಕತೆ ಬಂದಿತ್ತು, ಈ ಚಿತ್ರದಲ್ಲಿ ರೇಖಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ನಿರ್ವಹಣೆ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯನ ಪ್ರಶಸ್ತಿಗಳಿಗೆ ನಾಮಕರಣಗಳನ್ನು ಗಳಿಸಿಕೊಟ್ಟಿತು. 1979ರಲ್ಲಿ, ಕಾಲ ಪತ್ತರ್‌ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣಗೊಂಡರು ಮತ್ತು 1980ರಲ್ಲಿ ರಾಜ್ ಖೋಸ್ಲಾ ನಿರ್ದೇಶನದ ದೋಸ್ತಾನ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಮತ್ತೆ ಪುನಃ ನಾಮಕರಣಗೊಂಡರು, ಈ ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಮತ್ತು ಜೀನತ್ ಅಮಾನ್ ಜೊತೆ ಬಚ್ಚನ್ ನಟಿಸಿದ್ದಾರೆ. ದೋಸ್ತಾನ 1980ರಲ್ಲಿ ವಾಣಿಜ್ಯವಾಗಿ ಅತ್ಯಂತ ಹೆಚ್ಚು ಯಶಸ್ಸು ಪಡೆದ ಚಿತ್ರವಾಗಿದೆ.[೧೨] 1981ರಲ್ಲಿ, ಯಶ್ ಚೋಪ್ರಾರ ಪ್ರೇಮಕಥಾನಕ ಸಿಲ್ಸಿಲಾ ದಲ್ಲಿ ಪತ್ನಿ ಜಯಾ ಜೊತೆ ನಟಿಸಿದರು ಮತ್ತು ಈ ನಡುವೆ ನಟಿ ರೇಖಾರನ್ನು ಅಮಿತಾಭ್ ಪ್ರೀತಿಸುತ್ತಿದ್ದಾರೆಂಬ ಊಹಾಪೋಹಗಳೂ ಹಬ್ಬಿದವು. ಆ ಅವಧಿಯಲ್ಲಿ ತೆರೆ ಕಂಡ ಇತರೆ ಚಿತ್ರಗಳಾದರಾಮ್ ಬಲರಾಮ್‌ (1980), ಶಾನ್‌ (1980), ಲಾವಾರಿಸ್‌ (1981), ಮತ್ತು ಶಕ್ತಿ (1982)ಯಲ್ಲಿ ನಟಿಸುವುದರೊಂದಿಗೆ ಅಮಿತಾಭ್ ಅವರು ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್‌[೧೩] ಜೊತೆ ಹೋಲಿಸಲ್ಪಟ್ಟರು. ಅಮಿತಾಭ್ ಆ ಕಾಲದ ಮಹಾನ್ ನಟ, ಮಾತ್ರವಲ್ಲದೆ ಮೌಲ್ಯಯುತ ನಟ ಎಂದುದರಲ್ಲಿ ಯಾವುದೇ ಸಂದೇಹವಿಲ್ಲ.

1982- ಕೂಲೀ ಚಿತ್ರೀಕರಣದ ವೇಳೆ ಗಾಯ[ಬದಲಾಯಿಸಿ]

1982ರಲ್ಲಿ ಕೂಲೀ ಚಿತ್ರೀಕರಣದ ವೇಳೆ, ಸಹ ನಟ ಪುನೀತ್ ಇಸ್ಸಾರ್‌ ಜೊತೆ ಅಮಿತಾಭ್ ಹೊಡೆದಾಡುವ ದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದಾಗ ಅವರ ಕರುಳಿಗೆ ಮಾರಣಾಂತಿಕ ಗಾಯಗಳಾಯಿತು.[೧೪] ನೈಜ ಸಂಗತಿಯೆಂದರೆ, ಈ ಚಿತ್ರದಲ್ಲಿ ತಾವಾಗಿಯೇ ಸಾಹಸಗಳನ್ನು ಪ್ರದರ್ಶಿಸುವ ಸಾಹಸಕ್ಕೆ ಬಚ್ಚನ್ ಕೈ ಹಾಕಿದ್ದರು ಮತ್ತು ಚಿತ್ರದ ಒಂದು ಸನ್ನಿವೇಶದಲ್ಲಿ ಅವರು ಮೇಜಿನ ಮೇಲೆ ಬಿದ್ದು, ನಂತರ ನೆಲಕ್ಕೆ ಉರುಳಬೇಕಿತ್ತು. ಆದರೆ ದುರದೃಷ್ಟವಶಾತ್ ಅವರು ಮೇಜಿನ ಮೇಲೆ ಬಿದ್ದಾಗ, ಮೇಜಿನ ಒಂದು ತುದಿ ಹೊಟ್ಟೆಗೆ ಬಡಿದ ಪರಿಣಾಮ ಗುಲ್ಮ ಛಿದ್ರ(ಹರ್ನಿಯಾ)ವಾಗಿ ಸಾಕಷ್ಟು ರಕ್ತವನ್ನು ಕಳೆದುಕೊಂಡರು. ನಂತರ ಅವರು ತುರ್ತಾಗಿ ಸ್ಪ್ಲಿನೆಕ್ಟಮಿ(ಗುಲ್ಮದ ಶಸ್ತ್ರ ಚಿಕಿತ್ಸೆ)ಗೊಳಗಾದರು ಮತ್ತು ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದರು, ಕೆಲವೊಮ್ಮೆ ಸಾವಿಗೆ ಸನಿಹದಲ್ಲಿದ್ದರು. ಅಮಿತಾಭ್‌ರನ್ನು ಉಳಿಸಿಕೊಳ್ಳಲು ಅಭಿಮಾನಿಗಳು ದೇವಾಲಯಗಳಲ್ಲಿ ಪ್ರಾರ್ಥಿಸಿದರು ಮತ್ತು ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಅಂಗಗಳನ್ನೇ ಸಮರ್ಪಿಸಿದರು. ಅಮಿತಾಭ್ ಚೇತರಿಸಿಕೊಳ್ಳುತ್ತಿದ್ದ ಆಸ್ಪತ್ರೆಯ ಹೊರಗಡೆ ಅಭಿಮಾನಿಗಳು ಉದ್ದದ ಸರತಿ ಸಾಲಲ್ಲಿ ನಿಂತಿದ್ದರು.[೧೫] ಆದಾಗ್ಯೂ, ಅವರು ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು ಮತ್ತು ದೀರ್ಘಕಾಲದ ಚೇತರಿಕೆ ನಂತರ ವರ್ಷದ ಕೊನೆಗೆ ಚಿತ್ರೀಕರಣದಲ್ಲಿ ಅಮಿತಾಭ್ ಪಾಲ್ಗೊಂಡರು. 1983ರಲ್ಲಿ ಕೂಲೀ ಚಿತ್ರ ಬಿಡುಗಡೆಯಾಯಿತು, ಮತ್ತು ಬಚ್ಚನ್‌ ಗಾಯಗೊಂಡಿದ್ದಾಗ ದೊರೆತ ಪ್ರಚಾರದಿಂದಾಗಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು.[೧೬] ಬಚ್ಚನ್‌ ಗಾಯಗೊಂಡ ಬಳಿಕ ನಿರ್ದೇಶಕ ಮನಮೋಹನ್ ದೇಸಾಯಿ ಕೂಲೀ ಚಿತ್ರದ ಅಂತ್ಯದಲ್ಲಿ ಬದಲಾವಣೆಗಳನ್ನು ಮಾಡಿದರು. ಮೂಲಕಥೆ ಪ್ರಕಾರ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಚಿತ್ರದ ಅಂತ್ಯದಲ್ಲಿ ಸಾಯಿಸಲು ಉದ್ದೇಶಿಸಲಾಗಿತ್ತು. ಆದರೆ ಘಟನೆಯ ನಂತರ ಕಥಾವಸ್ತುವಿನಲ್ಲಿ ಬದಲಾವಣೆ ತಂದು, ಬಚ್ಚನ್ ಪಾತ್ರ ಬದುಕುಳಿಯುವಂತೆ ಮಾಡಲಾಯಿತು. ನೈಜ ಜೀವನದಲ್ಲಿ ಈಗಷ್ಟೇ ಸಾವನ್ನು ಹಿಮ್ಮೆಟ್ಟಿಸಿ ಬಂದ ವ್ಯಕ್ತಿಯನ್ನು ತೆರೆಯ ಮೇಲೆ ಕೊಲ್ಲುವುದು ಉಚಿತವಾಗದು ಎಂದು ನಿರ್ದೇಶಕ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಬಿಡುಗಡೆಯಾಗಿರುವ ಚಿತ್ರದಲ್ಲೂ ನಿರ್ಣಾಯಕ ಕ್ಷಣದ ಹೊಡೆದಾಟದ ದೃಶ್ಯವನ್ನು ತೋರಿಸಿಲ್ಲ, ಬದಲಾಗಿ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ ಮತ್ತು ಅದರಲ್ಲಿ ಅಮಿತಾಭ್‌ ಗಾಯಗೊಂಡ ಕುರಿತು ವಿವರಣೆ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ.[೧೫] ನಂತರ, ಸ್ನಾಯು ದೌರ್ಬಲ್ಯದಿಂದ ಅಮಿತಾಭ್ ಬಳಲುತ್ತಿರುವುದು ಆರೋಗ್ಯ ತಪಾಸಣೆ ವೇಳೆ ಪತ್ತೆಯಾಯಿತು. ಅನಾರೋಗ್ಯ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಹೀನನ್ನಾಗಿ ಮಾಡಿತಲ್ಲದೆ, ಚಿತ್ರರಂಗದಿಂದ ಹೊರಬಂದು ರಾಜಕೀಯ ಪ್ರವೇಶಿಸಲು ಅಮಿತಾಭ್ ನಿರ್ಧರಿಸಿದರು. ಆ ಹೊತ್ತಿಗೆ ನಿರಾಶವಾದಿಯಾಗಿ ಪರಿವರ್ತನೆಗೊಂಡಿದ್ದ ಅವರು, ತಾವು ಹೊಸ ಚಿತ್ರದಲ್ಲಿ ನಟಿಸಿದರೆ ಜನ ತಮ್ಮನ್ನು ಹೇಗೆ ಸ್ವೀಕರಿಸಿಯಾರು ಎಂಬ ವಿಚಾರದಲ್ಲಿ ತೀವ್ರ ಕಳವಳಕ್ಕೀಡಾಗಿದ್ದರು. ಎಷ್ಟರ ಮಟ್ಟಿಗೆ ನಿರಾಶಾವಾದಿಯಾಗಿದ್ದರೆಂದರೆ, ಪ್ರತಿ ಚಿತ್ರದ ಬಿಡುಗಡೆಗೆ ಮೊದಲು "ಯೆ ಫಿಲ್ಮ್‌ ತೊ ಫ್ಲಾಪ್ ಹೋಗಿ" ಎಂಬ ಋಣಾತ್ಮಕ ಹೇಳಿಕೆಯನ್ನು ಕೊಡುತ್ತಿದ್ದರು. ("ಈ ಚಿತ್ರ ಸೋಲಲಿದೆ").[೧೭]

ರಾಜಕೀಯ: 1984-1987[ಬದಲಾಯಿಸಿ]

1984ರಲ್ಲಿ, ನಟನೆಯಿಂದ ತಾತ್ಕಾಲಿಕ ವಿಶ್ರಾಂತಿ ಪಡೆದ ಅಮಿತಾಭ್, ದೀರ್ಘಕಾಲದ ತಮ್ಮ ಕುಟುಂಬ ಸ್ನೇಹಿತ ರಾಜೀವ್ ಗಾಂಧಿ ಅವರ ನೆರವಿನೊಂದಿಗೆ ರಾಜಕೀಯ ಪ್ರವೇಶಿಸಿ ಸ್ವಲ್ಪಕಾಲ ಸಕ್ರಿಯರಾಗಿದ್ದರು. ಅಲಹಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್.ಎನ್.ಬಹುಗುಣ ವಿರುದ್ಧ ಸ್ಪರ್ಧಿಸಿ, ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲೇ(ಒಟ್ಟು ಮತದಾನದ 68.2%) ದಾಖಲೆ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದರು.[೧೮] ಆದರೆ ಅವರ ರಾಜಕೀಯ ವೃತ್ತಿ ಜೀವನ, ಅಲ್ಪಕಾಲ ಮಾತ್ರ ಬಾಳಿತು: ಮೂರು ವರ್ಷಗಳ ನಂತರ ಒಟ್ಟಾರೆ ರಾಜಕೀಯವನ್ನು ರೊಚ್ಚುಗುಂಡಿಎಂದು ಟೀಕಿಸಿ ಅದರಿಂದ ನಿವೃತ್ತಿ ಹೊಂದಿದರು. "ಬೋಫೋರ್ಸ್ ಹಗರಣ"ದಲ್ಲಿ ಬಚ್ಚನ್ ಮತ್ತು ಅವರ ಸಹೋದರ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಪತ್ರಿಕೆಯೊಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಅಮಿತಾಭ್ ರಾಜಕೀಯದಿಂದ ನಿವೃತ್ತಿ ಹೊಂದಿದರು, ಮಾತ್ರವಲ್ಲದೆ ಪತ್ರಿಕೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದರು.[೧೯] ಆದರೆ ಕ್ರಮೇಣವಾಗಿ ವಿಚಾರಣೆ ವೇಳೆ ಬೋಫೋರ್ಸ್ ಹಗರಣದಲ್ಲಿ ಬಚ್ಚನ್ ಭಾಗಿಯಲ್ಲ ಎಂಬುದು ಕಂಡು ಬಂತು. ಈ ನಡುವೆ, ಅಮಿತಾಭ್‌ರ ಸಂಸ್ಥೆ ABCL ದಿವಾಳಿಯೆದ್ದ ಪರಿಣಾಮ ಉಂಟಾದ ಹಣಕಾಸಿನ ಬಿಕ್ಕಟ್ಟನ್ನು ಸರಿಪಡಿಸಲು ಅವರ ಹಳೆ ಸ್ನೇಹಿತ ಅಮರ್ ಸಿಂಗ್ ನೆರವು ನೀಡಿದರು. ಈ ಹಿನ್ನೆಲೆಯಲ್ಲಿ ಅಮರ್ ಸಿಂಗ್‌ರ ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಬಚ್ಚನ್ ಶುರು ಮಾಡಿದರು. ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷವನ್ನು ಸೇರಿದ್ದೇ ಅಲ್ಲದೆ, ರಾಜ್ಯಸಭಾ ಸದಸ್ಯತ್ವವನ್ನೂ ಪಡೆದರು.[೨೦] ರಾಜಕೀಯ ಪ್ರಚಾರ ಮತ್ತು ಜಾಹೀರಾತು ಸೇರಿದಂತೆ ಇತರೇ ರಾಜಕೀಯ ವಿಚಾರಗಳಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವುದನ್ನು ಬಚ್ಚನ್ ಮುಂದುವರಿಸಿದರು. ಈ ಚಟುವಟಿಕೆಗಳು ಅವರನ್ನು ಇತ್ತೀಚೆಗೆ ಮತ್ತೆ ಸಂಕಷ್ಟಕ್ಕೆ ದೂಡಿದ್ದವು, ತಾನು ರೈತನೆಂದು ಹೇಳಿಕೆ ನೀಡಿ ನ್ಯಾಯಾಲಯಕ್ಕೆ ಸುಳ್ಳು ಕಾನೂನು ಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಅವರು ಮತ್ತೆ ನ್ಯಾಯಾಲಯದ ಕಟಕಟೆ ಹತ್ತಬೇಕಾಯಿತು.[೨೧] ಈ ಮಧ್ಯೆ, ಅಮಿತಾಭ್ ನಟನಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಸ್ಟಾರ್‌ಡಸ್ಟ್ ಮತ್ತು ಇತರ ಕೆಲವು ಚಲನಚಿತ್ರದ ಮ್ಯಾಗಜೀನ್‌ಗಳಿಂದ 15 ವರ್ಷಗಳ ಪತ್ರಿಕಾ ನಿಷೇಧಕ್ಕೆ ಒಳಗಾದರು. ಇದಕ್ಕೆ ಪ್ರತಿಯಾಗಿ, ತಾವು ನಟಿಸುವ ಚಿತ್ರಗಳ ಸೆಟ್‌ಗೆ ಪತ್ರಿಕಾ ಪ್ರತಿನಿಧಿಗಳು ಪ್ರವೇಶಿಸುವುದನ್ನು ಅಮಿತಾಭ್ ನಿಷೇಧಿಸಿದ್ದರೆಂದು ಹೇಳಲಾಗಿದ್ದು, ಅದು 1989ರವರೆಗೂ ಜಾರಿಯಲ್ಲಿತ್ತು ಎನ್ನಲಾಗಿದೆ.[೨೨]

ಹಿನ್ನಡೆ ಮತ್ತು ನಿವೃತ್ತಿ: 1988-1992[ಬದಲಾಯಿಸಿ]

1988ರಲ್ಲಿ, ಷಹೇನ್‌ಷಾ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುವುದರೊಂದಿಗೆ ಬಚ್ಚನ್ ಚಿತ್ರರಂಗಕ್ಕೆ ಮರಳಿದರು, ಬಚ್ಚನ್ ವಾಪಸಾತಿಗೆ ದೊರೆತ ಪ್ರಚಾರದಿಂದಾಗಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಪಡೆಯಿತು.[೨೩] ಆದರೆ ಈ ಯಶಸ್ಸಿನ ನಂತರ ಬಿಡುಗಡೆಯಾದ ಎಲ್ಲ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲಾಗಿ ಸೋತ ಕಾರಣ ಅವರ ತಾರಾ ವರ್ಚಸ್ಸು ಕುಂದಿತು. 1991ರ ಯಶಸ್ವಿ ಚಿತ್ರ, ಹಮ್‌ ಸೋಲುವ ಪ್ರವೃತ್ತಿಯನ್ನು ಬದಲಾಯಿಸುವಂತೆ ಕಂಡು ಬಂದರೂ, ಅವರ ಇತರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತದ್ದರಿಂದಾಗಿ ಯಶಸ್ಸಿನ ಕ್ಷಣಗಳು ಅಲ್ಪಕಾಲ ಮಾತ್ರ ಬಾಳಿತು. ಎಲ್ಲ ಚಿತ್ರಗಳು ಸೋತಾಗ್ಯೂ, ಅಮಿತಾಭ್ ಈ ಅವಧಿಯಲ್ಲಿ ತೆರೆ ಕಂಡ 1990ರ ಅಗ್ನಿಪಥ್ ಚಿತ್ರದಲ್ಲಿ ಮಾಫಿಯಾ ದೊರೆ ಪಾತ್ರದ ನಿರ್ವಹಣೆಗಾಗಿ ಎರಡನೆ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದದ್ದು ಇಲ್ಲಿ ಗಮನಾರ್ಹ. ಕೆಲವು ವರ್ಷಗಳ ಮಟ್ಟಿಗಾದರೂ ಅವರು ತೆರೆ ಮೇಲೆ ಕಾಣಿಸಿಕೊಳ್ಳುವುದು, ಈ ವರ್ಷಗಳಲ್ಲೇ ಕೊನೆಯಾದೀತೆಂದು ಭಾವಿಸಲಾಯಿತು. 1992ರಲ್ಲಿ ಖುದಾ ಗವಾಹ್ ತೆರೆ ಕಂಡ ನಂತರ, ಐದು ವರ್ಷಗಳ ಕಾಲ ಬಚ್ಚನ್ ತೆರೆ ಮೇಲೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ತಡವಾಗಿ ತೆಗೆದ ಚಿತ್ರ ಇನ್‌‌ಸಾನಿಯತ್ 1994ರಲ್ಲಿ ಬಿಡುಗಡೆಯಾದರೂ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲು ವಿಫಲವಾಯಿತು.[೨೪]

ನಿರ್ಮಾಪಕ ಮತ್ತು ನಟನೆಗೆ ಪುನರಾಗಮನ 1996-1999[ಬದಲಾಯಿಸಿ]

ಬಚ್ಚನ್ ತಮ್ಮ ತಾತ್ಕಾಲಿಕ ವಿರಾಮದ ಅವಧಿಯಲ್ಲಿ ಚಿತ್ರ ನಿರ್ಮಾಣದತ್ತ ಹೊರಳಿದರು, ಅಲ್ಲದೆ 1996ರಲ್ಲಿ ಕಾರ್ಪೊರೇಷನ್ ಲಿಮಿಟೆಡ್. (A.B.C.L.) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು, 2000ದ ವೇಳೆ ೧೦ ಶತಕೋಟಿ ರೂಪಾಯಿ (ಅಂದಾಜು 250 ದಶಲಕ್ಷ $US)ಆದಾಯವಿರುವ ಪ್ರಮುಖ ಮನರಂಜನೆ ಸಂಸ್ಥೆಯನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಭಾರತದ ಎಲ್ಲ ಮನರಂಜನೆ ಉದ್ಯಮಕ್ಕೆ ಅವಶ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುವುದು ABCLನ ಯೋಜನೆಯಾಗಿತ್ತು. ಮುಖ್ಯವಾಹಿನಿಯಲ್ಲಿರುವ ವಾಣಿಜ್ಯ ಚಿತ್ರ ನಿರ್ಮಾಣ ಮತ್ತು ವಿತರಣೆ, ಆಡಿಯೋ ಕ್ಯಾಸೆಟ್‌ಗಳು ಮತ್ತು ವಿಡಿಯೋ ಡಿಸ್ಕ್‌ಗಳು, ಟಿವಿಗಾಗಿ ತಂತ್ರಾಂಶ ನಿರ್ಮಾಣ ಮತ್ತು ಮಾರುಕಟ್ಟೆ ನಿರ್ವಹಣೆ, ಖ್ಯಾತನಾಮರ ನಿರ್ವಹಣೆ ಮತ್ತು ಕಾರ್ಯಕ್ರಮದ ವ್ಯವಸ್ಥಾಪನೆಗಳು ಸಂಸ್ಥೆಯ ಕಾರ್ಯಕ್ಷೇತ್ರವಾಗಿತ್ತು. 1996ರಲ್ಲಿ ಸಂಸ್ಥೆ ಆರಂಭವಾದ ಕೆಲವೇ ದಿನಗಳಲ್ಲಿ, ಮೊದಲ ಚಿತ್ರವನ್ನು ನಿರ್ಮಿಸಿತು. ತೇರೆ ಮೇರೆ ಸಪ್ನೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ನಟ ಅರ್ಷದ್ ವಾರ್ಸಿ ಮತ್ತು ದಕ್ಷಿಣ ಭಾರತದ ಚಿತ್ರನಟಿ ಸಿಮ್ರಾನ್‌ ಅವರ ಚಿತ್ರ ವೃತ್ತಿ ಜೀವನ ಇದರಿಂದ ಆರಂಭವಾಯಿತು. ABCL ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿತಾದರೂ, ಅವುಗಳ ಪೈಕಿ ಯಾವುದೂ ಗೆಲ್ಲಲಿಲ್ಲ. 1997ರಲ್ಲಿ, ABCL ನಿರ್ಮಾಣದ ಮೃತ್ಯುದಾತ ಚಿತ್ರದಲ್ಲಿ ನಟಿಸುವ ಮೂಲಕ ಬಚ್ಚನ್ ನಟನಾ ವೃತ್ತಿಗೆ ಮರಳಲು ಪ್ರಯತ್ನಿಸಿದರು. ಬಚ್ಚನ್‌ರಿಗೆ ಹಿಂದೆಯಿದ್ದ ಸಾಹಸ ನಾಯಕನ ಪಟ್ಟವನ್ನು ವಾಪಸ್ ಗಳಿಸಿಕೊಡಲು ಮೃತ್ಯುದಾತ ಯತ್ನಿಸಿದ್ದಾಗ್ಯೂ, ಚಿತ್ರ ಆರ್ಥಿಕವಾಗಿ ಸೋತಿತು, ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆ ಪಡೆಯುವಲ್ಲೂ ವಿಫಲವಾಯಿತು. 1996ರ ಮಿಸ್ ವರ್ಲ್ಡ್ ಬ್ಯೂಟಿ ಪೆಜೆಂಟ್ /0} ಸ್ಪರ್ಧೆಯನ್ನು ಬೆಂಗಳೂರಿ ನಲ್ಲಿ ABCL ಪ್ರಾಯೋಜಿಸಿತು, ಆದರೆ ದಶಲಕ್ಷ ರೂಪಾಯಿಗಳನ್ನು ಕಳೆದುಕೊಂಡಿತು. ABCLನ ಅಧ್ವಾನಗಳು ಮತ್ತು ಇದರಿಂದಾಗಿ ಉಂಟಾದ ಕಾನೂನು ಸಮರಗಳು, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಇಟ್ಟುಕೊಂಡ ವಿವಿಧ ಹೆಸರುಗಳು, ABCLನ ಉನ್ನತ ಹಂತದಲಿದ್ದ ಹೆಚ್ಚಿನ ವ್ಯವಸ್ಥಾಪಕರುಗಳಿಗೆ ಮಿತಿ ಮೀರಿ ವೇತನ ನೀಡಿದ್ದು.. ಇತ್ಯಾದಿಗಳು ಸೇರಿಕೊಂಡು ಕ್ರಮೇಣವಾಗಿ ಸಂಸ್ಥೆ 1997ರಲ್ಲಿ ಆರ್ಥಿಕವಾಗಿ ಮತ್ತು ಕಾರ್ಯಕಾರಿಯಾಗಿ ಪತನಗೊಂಡಿತು. ಆಡಳಿತಾತ್ಮಕವಾಗಿ ಸಂಸ್ಥೆಯ ಅಸ್ತಿತ್ವ ಮುಂದುವರಿದರೂ, ನಂತರ ದಿನಗಳಲ್ಲಿ ಭಾರತದ ಕೈಗಾರಿಕಾ ಮಂಡಳಿ ಬಚ್ಚನ್‌ರದ್ದು ವಿಫಲ ಸಂಸ್ಥೆ ಎಂದು ಘೋಷಿಸಿತು. ಏಪ್ರಿಲ್ 1999ರಲ್ಲಿ, ಬಚ್ಚನ್ ಅವರು ಬಾಂಬೆಯಲ್ಲಿರುವ ತಮ್ಮ ಬಂಗಲೆ 'ಪ್ರತೀಕ್ಷಾ' ಮತ್ತು ಎರಡು ವಸತಿಗೃಹಗಳನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಅದನ್ನು ತಡೆ ಹಿಡಿದ ಬಾಂಬೆ ಉಚ್ಚ ನ್ಯಾಯಾಲಯ, ಕೆನರಾ ಬ್ಯಾಂಕ್‌ನ ಸಾಲಕ್ಕೆ ಸಂಬಂಧಿಸಿ ಬಾಕಿಯಿದ್ದ ಕೇಸುಗಳು ಇತ್ಯರ್ಥಗೊಳ್ಳುವವರೆಗೆ ಬಂಗಲೆ ಮತ್ತು ವಸತಿಗೃಹಗಳನ್ನು ಮಾರುವಂತಿಲ್ಲ ಎಂದು ತಿಳಿಸಿತು. ತಮ್ಮ ಸಂಸ್ಥೆಗೆ ಹಣಕಾಸಿನ ಅಗತ್ಯವಿರುವುದರಿಂದ ಸಹರಾ ಇಂಡಿಯಾ ಫೈನಾನ್ಸ್‌ಗೆ ಬಂಗಲೆಯನ್ನು ಅಡವಿಟ್ಟಿರುವುದಾಗಿ ಬಚ್ಚನ್ ನ್ಯಾಯಾಲಯದಲ್ಲಿ ವಾದಿಸಿದರು.[೨೫] ಈ ನಡುವೆ, ಬಚ್ಚನ್ ತಮ್ಮ ನಟನಾ ವೃತ್ತಿಗೂ ಮತ್ತೆ ಜೀವ ತುಂಬಲು ಪ್ರಯತ್ನಿಸಿದರು, ಮತ್ತು ಅವರು ನಟಿಸಿದ ಬಡೇ ಮಿಯಾ ಛೋಟೆ ಮಿಯಾ (1998)[೨೪] ಚಿತ್ರ ಸಾಧಾರಣ ಯಶಸ್ಸು ಕಂಡಿತು, ಮತ್ತು ಸೂರ್ಯವಂಶಂ (1999)[೨೬] ಚಿತ್ರ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆದರೆ ಲಾಲ್ ಬಾದ್‌ಷಾ (1999) ಮತ್ತು ಹಿಂದೂಸ್ತಾನ್‌ ಕಿ ಕಸಂ (1999) ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತವು.

ಟಿವಿ ಬದುಕು[ಬದಲಾಯಿಸಿ]

2000ದಲ್ಲಿ, ಬ್ರಿಟೀಷ್ ಟಿವಿ ಗೇಮ್ ಶೋಹೂ ವಾಂಟ್ಸ್ ಟು ಬಿ ಮಿಲಿಯನೇರ್? ನ ಭಾರತೀಯ ರೂಪಾಂತರವನ್ನು ಅಮಿತಾಭ್ ನಡೆಸಿಕೊಟ್ಟರು. ಇದಕ್ಕೆ ಕೌನ್ ಬನೇಗಾ ಕ್ರೋರ್‌ಪತಿ ಎಂದು ಹೆಸರಿಡಲಾಗಿತ್ತು. ಈ ಕಾರ್ಯಕ್ರಮವನ್ನು ರೂಪಾಂತರಗೊಳಿಸಿದ್ದ ಇತರ ದೇಶಗಳು ಇದೇ ರೀತಿಯ ಹೆಸರಿನ್ನಿರಿಸಿಕೊಂಡಿದ್ದವು, ಅಲ್ಲದೆ ಇದು ಕೆಲವೇ ದಿನಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ನವೆಂಬರ್ 2000ರಲ್ಲಿ ಕೆನರಾ ಬ್ಯಾಂಕ್ ಬಚ್ಚನ್ ವಿರುದ್ಧ ಹೂಡಿದ್ದ ಕಾನೂನು ಮೊಕದ್ದಮೆಯನ್ನು ವಾಪಸ್ ಪಡೆಯಿತು. ಬಚ್ಚನ್ KBC ಕಾರ್ಯಕ್ರಮವನ್ನು ನವೆಂಬರ್ 2005ರವರೆಗೂ ನಿರೂಪಿಸಿದರು, ಈ ಯಶಸ್ಸು ಅವರಿಗೆ ಮತ್ತೆ ಜನಪ್ರಿಯತೆ ತಂದುಕೊಟ್ಟಿತಲ್ಲದೆ ಚಿತ್ರರಂಗಕ್ಕೆ ಮರಳಲು ವೇದಿಕೆ ನಿರ್ಮಿಸಿಕೊಟ್ಟಿತು. 2009ರ ಆಸ್ಕರ್ ಪ್ರಶಸ್ತಿ ವಿಜೇತ ಸ್ಲಂಡಾಗ್ ಮಿಲಿಯನೇರ್‌ ಚಿತ್ರದಲ್ಲಿ ಬರುವ ಹೂ ವಾಂಟ್ಸ್ ಟು ಬಿ ಮಿಲಿಯನೇರ್? ಸ್ಪರ್ಧೆಯಲ್ಲಿ 'ಜಂಜೀರ್' ಚಿತ್ರದ ನಾಯಕ ಯಾರು? ಎಂಬ ಮೊದಲ ಪ್ರಶ್ನೆಗೆ "ಅಮಿತಾಭ್ ಬಚ್ಚನ್" ಸರಿಯಾದ ಉತ್ತರವಾಗಿತ್ತು. ಚಿತ್ರದಲ್ಲಿ ಫೆರೋಜ್ ಅಬ್ಬಾಸ್ ಖಾನ್ ಅಮಿತಾಭ್ ಬಚ್ಚನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿಲ್ ಕಪೂರ್ ಸ್ಪರ್ಧೆಯ ನಿರೂಪಕರಾಗಿ ನಟಿಸಿದ್ದರು.

ಮರೆಯಿಂದ ತೆರೆಗೆ: 2000-ಇದುವರೆಗೂ[ಬದಲಾಯಿಸಿ]

2000ರಲ್ಲಿ ಯಶ್ ಚೋಪ್ರಾ ನಿರ್ಮಾಣದ ಆದಿತ್ಯ ಚೋಪ್ರಾ ನಿರ್ದೇಶಿಸಿದ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ಚಿತ್ರ ಮೊಹಬತೇನ್‌ ನಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡರು. ಶಾರುಖ್ ಖಾನ್‌ ನಟಿಸಿದ ಪಾತ್ರಕ್ಕೆ ಸರಿಸಮನಾಗಿ ನಿಲ್ಲುವ ತೀರಾ ಕಟ್ಟುನಿಟ್ಟಿನ, ಹಿರಿಯ ವ್ಯಕ್ತಿಯ ಪಾತ್ರದಲ್ಲಿ ಅಮಿತಾಭ್ ಅಭಿನಯಿಸಿದರು. ಇದರ ಹಿಂದೆಯೇ ತೆರೆ ಕಂಡ ಏಕ್ ರಿಶ್ತಾ: ದಿ ಬಾಂಡ್ ಆಫ್ ಲವ್ (2001), ಕಭೀ ಖುಷಿ ಕಭೀ ಗಮ್‌ (2001) ಮತ್ತು ಬಾಗ್ಬನ್‌ (2003) ಚಿತ್ರಗಳಲ್ಲಿ ಕುಟುಂಬದ ಹಿರಿಯವನಾಗಿ ಅಮಿತಾಭ್ ನಟಿಸಿದರು, ಮತ್ತು ಈ ಚಿತ್ರಗಳು ಯಶಸ್ವಿಯಾದವು. ಅಮಿತಾಭ್ ಒಬ್ಬ ನಟನಾಗಿ ವಿವಿಧ ಬಗೆಯ ಪಾತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದರು, ಅವರು ನಟಿಸಿದ ಅಕ್ಸ್‌ (2001), ಆಂಖೇ (2002), ಖಾಕೀ (2004), ದೇವ್ (2004) ಮತ್ತು ಬ್ಲ್ಯಾಕ್ (2005) ಚಿತ್ರಗಳು ವಿಮರ್ಶಕರ ಪ್ರಶಂಸೆಗೆ ಪಾತ್ರವಾದವು. ಚಿತ್ರರಂಗದಲ್ಲಿ ಪುನರುಜ್ಜೀವನದ ಲಾಭ ಪಡೆದ ಅವರು, ಹಲವು ಉತ್ಪನ್ನಗಳು ಮತ್ತು ಸೇವೆಗಳನ್ನು ಅನುಮೋದಿಸಲು ಶುರು ಮಾಡಿದರಲ್ಲದೆ ಟಿವಿಯಲ್ಲಿ ಮತ್ತು ದೊಡ್ಡ ಜಾಹೀರಾತು ಫಲಕಗಳಲ್ಲಿ ಕಾಣಿಸಿಕೊಳ್ಳತೊಡಗಿದರು. 2005 ಮತ್ತು 2006ರಲ್ಲಿ, ಬಂಟಿ ಔರ್ ಬಬ್ಲಿ (2005), ದಿ ಗಾಡ್‌ಫಾದರ್ , ಗೌರವಾರ್ಥಸರ್ಕಾರ್ (2005), ಮತ್ತು ಕಭೀ ಅಲ್ವಿದ ನಾ ಕೆಹ್ನಾ (2006) ಚಿತ್ರಗಳಲ್ಲಿ ಪುತ್ರ ಅಭಿಷೇಕ್ ಜೊತೆ ನಟಿಸಿದರು. ಈ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿವೆ.[೨೭][೨೮] 2006ರ ಕೊನೆಗೆ ಮತ್ತು 2007ರ ಆರಂಭದಲ್ಲಿ ಬಿಡುಗಡೆಯಾದ ಅಮಿತಾಭ್ ನಟನೆಯ ಚಿತ್ರಗಳಾದ ಬಬೂಲ್ (2006),[೨೯] ಏಕಲವ್ಯ ಮತ್ತು ನಿಶ್ಯಬ್ದ್ (2007) ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ಅಮಿತಾಭ್ ಅಭಿನಯ ವಿಮರ್ಶಕರ ಮೆಚ್ಚುಗೆ ಪಡೆಯಿತು.[೩೦] ಕನ್ನಡಕ್ಕೂ ಕಾಲಿಟ್ಟ ಅಮಿತಾಭ್ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡರು. 2007ರಲ್ಲಿ, ಅವರು ನಟಿಸಿದ ಚೀನೀ ಕಮ್ ಮತ್ತು ಬಹುತಾರಾಗಣವಿರುವ ಶೂಟೌಟ್ ಅಟ್ ಲೋಕಂಡ್ವಾಲಾ ಚಿತ್ರಗಳು ಬಿಡುಗಡೆಯಾದವು. ಶೂಟೌಟ್ ಆಟ್ ಲೋಕಂಡ್ವಾಲಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿದ್ದೇ ಅಲ್ಲದೆ, ಯಶಸ್ವಿ ಚಿತ್ರ ಎಂದು ಭಾರತದಲ್ಲಿ ಘೋಷಿಸಲಾಯಿತು. ಚೀನೀ ಕಮ್ ನಿಧಾನಗತಿಯಲ್ಲಿ ಆರಂಭವಾಗಿ ಕ್ರಮೇಣ ಉತ್ತಮ ಪ್ರದರ್ಶನ ಕಂಡಿತು ಮತ್ತು ಒಟ್ಟಾರೆ ಸರಾಸರಿ ಯಶಸ್ವಿ ಚಿತ್ರವೆಂದು ಘೋಷಿಸಲಾಯಿತು.[೩೧] 2007ರಲ್ಲಿ ತೆರೆ ಕಂಡ, ಸರ್ವಕಾಲೀಕ ದಾಖಲೆ ಸ್ಥಾಪಿಸಿದ ಶೋಲೆ (1975) ಚಿತ್ರದ ರಿಮೇಕ್ರಾಮ್ ಗೋಪಾಲ್ ವರ್ಮಾ ಕಿ ಆಗ್ ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣ ಸೋಲನುಭವಿಸಿತು[೩೧] ಮತ್ತು ವಿಮರ್ಶಕರು ಕೂಡ ಇದನ್ನು ಹುರುಪಿನಿಂದ ಸ್ವೀಕರಿಸಲಿಲ್ಲ. ಅಮಿತಾಭ್‌ ನಟಿಸಿದ ಆಂಗ್ಲ ಭಾಷೆಯ ಮೊದಲ ಚಿತ್ರ, ರಿತುಪರ್ಣೋ ಘೋಷ್‌ರವರ ದಿ ಲಾಸ್ಟ್ ಲೀರ್ , ಸೆಪ್ಟೆಂಬರ್ 9, 2007ರಂದು ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2007 ದಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಚಿತ್ರದಲ್ಲಿನ ಅಭಿನಯಕ್ಕೆ ಬಚ್ಚನ್ ಧನಾತ್ಮಕ ವಿಮರ್ಶೆಗಳನ್ನು ಪಡೆದರು, ಅಲ್ಲದೆ ಬ್ಲ್ಯಾಕ್ ನಂತರದ ಅತ್ಯುತ್ತಮ ನಟನೆ ಎಂಬ ಪ್ರಶಂಸೆಗೆ ಪಾತ್ರರಾದರು.[೩೨] ಮೀರಾ ನಾಯರ್ ನಿರ್ದೇಶನದ, ಹಾಲಿವುಡ್ ನಟ ಜಾನಿ ಡೆನ್ ನಾಯಕನಾಗಿ ನಟಿಸಿರುವ ಶಾಂತಾರಾಮ್ ಚಿತ್ರದಲ್ಲಿ ಬಚ್ಚನ್ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆ. ಬಚ್ಚನ್ ಅವರಿಗೆ ಇದು ಮೊದಲನೇ ಅಂತರರಾಷ್ಟ್ರೀಯ ಚಿತ್ರವೂ ಹೌದು. ಈ ಚಿತ್ರದ ಚಿತ್ರೀಕರಣ ಫೆಬ್ರವರಿ 2008ರಲ್ಲೇ ಆರಂಭಗೊಳ್ಳಬೇಕಿತ್ತು, ಆದರೆ ಲೇಖಕರ ಮುಷ್ಕರದಿಂದಾಗಿ ಚಿತ್ರೀಕರಣವನ್ನು ಸೆಪ್ಟೆಂಬರ್ 2008ಕ್ಕೆ ಮುಂದೂಡಲಾಗಿತ್ತು.[೩೩] ಭೂತದ ಪಾತ್ರದಲ್ಲಿ ಅಮಿತಾಭ್ ನಟಿಸಿದ ಭೂತ್‌ನಾಥ್ ಚಿತ್ರ 2008, ಮೇ 9ರಂದು ಬಿಡುಗಡೆಯಾಯಿತು. ಸರ್ಕಾರ್ ರಾಜ್‌ ಜೂನ್ 2008ರಲ್ಲಿ ತೆರೆ ಕಂಡಿತು, ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ಸಿ ಚಿತ್ರವಾಯಿತು.

ಆರೋಗ್ಯ[ಬದಲಾಯಿಸಿ]

2005ರಲ್ಲಿ ಆಸ್ಪತ್ರೆಗೆ ದಾಖಲು[ಬದಲಾಯಿಸಿ]

ನವೆಂಬರ್ 2005ರಲ್ಲಿ, ಚಿಕ್ಕ ಕರುಳಿಉರಿಯೂತದ ಶಸ್ತ್ರ ಚಿಕಿತ್ಸೆಗಾಗಿ ಅಮಿತಾಭ್ ಬಚ್ಚನ್ ಅವರು ಲೀಲಾವತಿ ಆಸ್ಪತ್ರೆಯ ICUಗೆ ಮತ್ತೊಮ್ಮೆ ದಾಖಲಾದರು.[೩೪] ಕೆಲವು ದಿನಗಳ ಮೊದಲೇ ಬಚ್ಚನ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅವಧಿ ಮತ್ತು ಚೇತರಿಸಿಕೊಳ್ಳುತ್ತಿದ್ದ ವೇಳೆ ಟಿವಿ ಗೇಮ್ ಶೋಕೌನ್ ಬನೇಗಾ ಕ್ರೋರ್‌ಪತಿ ಸೇರಿದಂತೆ ಅಮಿತಾಭ್ ಪಾಲ್ಗೊಂಡಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು. 2006 ಮಾರ್ಚ್‌ನಲ್ಲಿ ಅಮಿತಾಭ್ ಕೆಲಸಕ್ಕೆ ಮರಳಿದರು.[೩೫]

ಧ್ವನಿ[ಬದಲಾಯಿಸಿ]

ಬಚ್ಚನ್ ಅವರು ಆಳವಾದ, ಮಧ್ಯಮ ಸ್ಥಾಯಿ (ಸಂಗೀತ) ಧ್ವನಿಗೆ ಹೆಸರಾಗಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ವಿವರಣೆಕಾರರಾಗಿ, ಹಿನ್ನೆಲೆ ಗಾಯಕರಾಗಿ ಮತ್ತು ನಿರೂಪಕರಾಗಿ ಅವರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರು ಬಚ್ಚನ್‌ರ ಧ್ವನಿಗೆ ಮಾರುಹೋಗಿದ್ದರು, ಅಲ್ಲದೆ ತಮ್ಮ ಚಿತ್ರ ಷತ್ರಂಜ್ ಕೆ ಖಿಲಾಡಿ ಯಲ್ಲಿ ಬಚ್ಚನ್‌ಗೆ ಸರಿ ಹೊಂದುವ ಪಾತ್ರಗಳಿಲ್ಲದ ಕಾರಣ ಅವರ ಧ್ವನಿಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದರು.[೩೬] ಅಚ್ಚರಿಯ ವಿಷಯವೆಂದರೆ, ಚಿತ್ರರಂಗ ಪ್ರವೇಶಿಸುವ ಮೊದಲು ಅಮಿತಾಭ್ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಹಾಕಿದ್ದರು, ಆದರೆ ಅರ್ಜಿ ತಿರಸ್ಕೃತಗೊಂಡಿದ್ದು ಬೇರೆ ಸಂಗತಿ.

ವಿವಾದಗಳು ಮತ್ತು ಟೀಕೆ[ಬದಲಾಯಿಸಿ]

ಬಾರಬಂಕಿ ಭೂಮಿ ಪ್ರಕರಣ[ಬದಲಾಯಿಸಿ]

2007ರ ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗಲೇ, ಮುಲಾಯಂ ಸಿಂಗ್ ಸರ್ಕಾರದ ಸಾಧನೆಗಳನ್ನು ಕೊಂಡಾಡುವ ಚಿತ್ರವೊಂದನ್ನು ಅಮಿತಾಭ್ ನಿರ್ಮಿಸಿದರು. ಆದರೆ ಬಚ್ಚನ್‌ ಬೆಂಬಲವಾಗಿ ನಿಂತಿದ್ದ ಸಮಾಜವಾದಿ ಪಕ್ಷ ಹೀನಾಯ ಸೋಲನುಭವಿಸಿತು, ಮತ್ತು ಮಾಯಾವತಿ ಅಧಿಕಾರಕ್ಕೆ ಬಂದರು. 2007, ಜೂನ್ 2ರಂದು, ಜಮೀನಿಲ್ಲದ ದಲಿತ ರೈತರಿಗೆಂದೇ ನಿರ್ದಿಷ್ಟವಾಗಿ ಮೀಸಲಿರಿಸಿದ್ದ ಕೃಷಿ ಭೂಮಿಯನ್ನು ಕಾನೂನು ಬಾಹಿರವಾಗಿ ಅಮಿತಾಭ್ ಸಂಪಾದಿಸಿದ್ದಾರೆ ಎಂದು ಫೈಜಾಬಾದ್ ನ್ಯಾಯಾಲಯ ಆರೋಪಿಸಿತು.[೩೭] ತಾವು ಕೂಡ ರೈತನೆಂದು ಅಮಿತಾಭ್ ಹೇಳಿಕೊಂಡಿದ್ದಾರೆಂಬ ಹಿನ್ನೆಲೆಯಲ್ಲಿ ಸುಳ್ಳುಪತ್ರ ಸಂಬಂಧಿತ ಆರೋಪಗಳ ಮೇಲೆ ಅವರನ್ನು ತನಿಖೆಗೊಳಪಡಿಸಬಹುದಾದ ಸಾಧ್ಯತೆಗಳಿವೆ ಎಂದು ಆಗ ಊಹಿಸಲಾಗಿತ್ತು.[೩೮] ಆದರೆ 2007, ಜುಲೈ 19ರಂದು ಹಗರಣ ಬಹಿರಂಗಗೊಂಡ ನಂತರ, ಬಚ್ಚನ್ ಉತ್ತರ ಪ್ರದೇಶಬಾರಬಂಕಿ ಮತ್ತು ಪುಣೆಯಲ್ಲಿ ಸಂಪಾದಿಸಿದ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ಪುಣೆಯಲ್ಲಿ ಕಾನೂನು ಬಾಹಿರವಾಗಿ ಸಂಪಾದಿಸಿದ್ದೆನ್ನಲಾದ ಭೂಮಿಯನ್ನು ದಾನ ಮಾಡುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರಿಗೆ ಪತ್ರ ಬರೆದರು.[೩೯] ಆದರೆ, ಭೂದಾನವನ್ನು ತಡೆ ಹಿಡಿದ ಲಖನೌ ನ್ಯಾಯಾಲಯ, ವಿವಾದಿತ ಭೂಮಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶಿಸಿತು. 2007, ಅಕ್ಟೋಬರ್ 12ರಂದು, ಬಾರಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿನ ಭೂಮಿ ಕುರಿತು ನೀಡಿದ್ದೆನ್ನಲಾದ ಹೇಳಿಕೆಯಿಂದ ಬಚ್ಚನ್ ಹಿಂದೆ ಸರಿದರು.[೪೦] ಈ ನಡುವೆ 2007, ಡಿಸೆಂಬರ್ 11ರಂದು, ಬಾರಬಂಕಿ ಜಿಲ್ಲೆಯಲ್ಲಿ ದಲಿತರಿಗೆ ಸೇರಬೇಕಾಗಿದ್ದ ಸರ್ಕಾರಿ ಭೂಮಿಯನ್ನು ಮೋಸದಿಂದ ಬಚ್ಚನ್‌ಗೆ ನೀಡಿದ ಪ್ರಕರಣದಲ್ಲಿ ಬಚ್ಚನ್ ನಿರ್ದೋಷಿಯೆಂದು ಅಲಹಾಬಾದ್ ಉಚ್ಚ ನ್ಯಾಯಾಲಯಲಖನೌ ಪೀಠ ತೀರ್ಪು ನೀಡಿತು. "ಯಾವುದೇ ವಂಚನೆಯಲ್ಲಿ ಸ್ವತಃ ಅಮಿತಾಭ್ ಪಾಲ್ಗೊಂಡಿರುವುದಕ್ಕೆ ಅಥವಾ ಆದಾಯದ ದಾಖಲೆಗಳಲ್ಲಿ ಅವರು ರಹಸ್ಯವಾಗಿ ಕೈಚಳಕ ಪ್ರದರ್ಶಿಸಿದ್ದಾರೆ" ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲಖನೌ ಏಕಪೀಠದ ನ್ಯಾಯಮೂರ್ತಿಗಳು ತಿಳಿಸಿದರು.[೪೧][೪೨] ಬಾರಬಂಕಿ ಪ್ರಕರಣದಲ್ಲಿ ಧನಾತ್ಮಕ ತೀರ್ಪು ಬಂದ ನಂತರ, ಪುಣೆ ಜಿಲ್ಲೆಯ ಮಾವಲ್ ತಾಲ್ಲೂಕಿನಲ್ಲಿರುವ ಭೂಮಿಯನ್ನು ಸರ್ಕಾರಕ್ಕೆ ಕೊಡಲು ತಾವು ಇಚ್ಚಿಸುವುದಿಲ್ಲವೆಂದು ಅಮಿತಾಭ್ ಬಚ್ಚನ್ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದರು.[೪೩]

ರಾಜ್ ಠಾಕ್ರೆಯವರ ಟೀಕೆ[ಬದಲಾಯಿಸಿ]

ಭಾರತದ ವ್ಯಾಪಾರ ಕೇಂದ್ರಗಳಲ್ಲಿರುವ ಜಾಹೀರಾತುಗಳಲ್ಲಿ ಬಚ್ಚನ್‌ರನ್ನು ಪ್ರದರ್ಶಿಸಲಾಗಿದೆ.

ಜನವರಿ 2008ರಲ್ಲಿ ನಡೆದ ರಾಜಕೀಯ ರ್ಯಾಲಿಗಳಲ್ಲಿ ಅಮಿತಾಭ್ ಬಚ್ಚನ್‌ರನ್ನು ತಮ್ಮ ಟೀಕೆಯ ಗುರಿಯಾಗಿಸಿಕೊಂಡ ಮಹಾರಾಷ್ಟ್ರ ನವ್‌ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಅಮಿತಾಭ್ ತನಗೆಲ್ಲಾ ನೀಡಿದ ಮಹಾರಾಷ್ಟ್ರದ ಬದಲು ತಾವು ಜನಿಸಿದ ರಾಜ್ಯದತ್ತ ಹೆಚ್ಚು ಒಲವು ಹೊಂದಿದ್ದಾರೆ ಎಂದು ಹರಿಹಾಯ್ದಿದ್ದರು. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಅಮಿತಾಭ್ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಹೆಸರಿನಲ್ಲಿ ಬಾಲಕಿಯರ ಶಾಲೆ ತೆರೆದದ್ದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದ ರಾಜ್ ಠಾಕ್ರೆ, ಆ ಕೆಲಸವನ್ನು ಅಮಿತಾಭ್ ಮಹಾರಾಷ್ಟ್ರದಲ್ಲಿ ಮಾಡಬೇಕಿತ್ತು ಎಂದು ಟೀಕಿಸಿದ್ದರು.[೪೪] ಮಾಧ್ಯಮಗಳ ಪ್ರಕಾರ, ಅಭಿಷೇಕ್‌-ಐಶ್ವರ್ಯಾ ವಿವಾಹಕ್ಕೆ ತಮ್ಮಿಂದ ದೂರವಾದ ಚಿಕ್ಕಪ್ಪ ಬಾಳ್‌ ಠಾಕ್ರೆ ಮತ್ತು ಸೋದರ ಉದ್ಧವ್ ಠಾಕ್ರೆ ಅವರನ್ನು ಆಮಂತ್ರಿಸಿ, ತಮ್ಮನ್ನು ಆಹ್ವಾನಿಸದೆ ಇದ್ದುದು ಅಮಿತಾಭ್ ಅಭಿಮಾನಿಯಾಗಿದ್ದ ರಾಜ್ ಠಾಕ್ರೆ ತಿರುಗಿ ಬೀಳಲು ಕಾರಣ ಎನ್ನಲಾಗಿದೆ.[೪೫][೪೬] ರಾಜ್‌ ಠಾಕ್ರೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಚ್ಚನ್‌ರ ಪತ್ನಿ ಹಾಗೂ SP MP ಜಯಾ ಬಚ್ಚನ್, MNS ನಾಯಕರು ಮುಂಬಯಿಯಲ್ಲಿ ಸ್ಥಳಾವಕಾಶ ಒದಗಿಸಿದರೆ ಬಚ್ಚನ್‌ ಕುಟುಂಬ ಶಾಲೆ ಕಟ್ಟಲು ಸಿದ್ಧವಿದೆ ಎಂದರು. "ರಾಜ್ ಠಾಕ್ರೆಯವರು ಮಹಾರಾಷ್ಟ್ರದ ಮುಂಬಯಿ-ಕೊಹಿನೂರ್ ಮಿಲ್ಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಬಗ್ಗೆ ಕೇಳಿದ್ದೇನೆ. ಅವರು ಭೂಮಿ ನೀಡಲು ಸಿದ್ಧರಿದ್ದಲ್ಲಿ, ನಾವು ಐಶ್ವರ್ಯಾ ಹೆಸರಲ್ಲಿ ಶಾಲೆಯೊಂದನ್ನು ಆರಂಭಿಸಬಹುದು." ಎಂದು ಜಯಾ ಬಚ್ಚನ್ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.[೪೭] ಆದರೆ, ಅಮಿತಾಭ್ ಈ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದರು. ಬಚ್ಚನ್ ವಿರುದ್ಧದ ಆರೋಪಗಳನ್ನು ಖಂಡಿಸಿದ್ದ ಬಾಳ್ ಠಾಕ್ರೆ, "ಅಮಿತಾಭ್ ಬಚ್ಚನ್ ಅವರು ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದು ಅವರಿಗೆ ಮಹಾರಾಷ್ಟ್ರ ಬಗ್ಗೆ ಅಪಾರ ಪ್ರೀತಿಯಿದೆ, ಮತ್ತು ಇದು ಹಲವು ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಮಹಾರಾಷ್ಟ್ರ ಅದರಲ್ಲೂ ನಿರ್ದಿಷ್ಟವಾಗಿ ಮುಂಬಯಿ ತಮಗೆ ಖ್ಯಾತಿ ಮತ್ತು ಪ್ರೀತಿಯನ್ನು ಕೊಟ್ಟಿದೆ ಎಂದು ಅಮಿತಾಭ್ ಆಗಿಂದಾಗ್ಗೆ ಹೇಳುತ್ತಾ ಬಂದಿದ್ದಾರೆ. ತಾನು ಇಂದು ಏನಾಗಿದ್ದೇನೋ ಅದಕ್ಕೆ ಜನರು ನೀಡಿದ ಪ್ರೀತಿಯೇ ಕಾರಣ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ಮುಂಬಯಿ ಮಂದಿ ಅಮಿತಾಭ್‌ರನ್ನು ಯಾವತ್ತೂ ಕಲಾವಿದನೆಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾದ ಅವರ ವಿರುದ್ಧ ಸಂಕುಚಿತ ಆರೋಪಗಳನ್ನು ಮಾಡುವುದು ತೀರಾ ಮೂರ್ಖತನವೆನ್ನಬಹುದು. ಅಮಿತಾಭ್ ಜಾಗತಿಕವಾಗಿ ಸೂಪರ್‌ಸ್ಟಾರ್. ಜಗತ್ತಿನಾದ್ಯಂತ ಎಲ್ಲ ಜನರು ಅವರನ್ನು ಗೌರವಿಸುತ್ತಾರೆ. ಇದನ್ನು ಯಾರೂ ಮರೆಯುವಂತಿಲ್ಲ. ಅಮಿತಾಭ್ ಅವರು ಈ ತಿಳಿಗೇಡಿ ಆರೋಪಗಳನ್ನು ನಿರ್ಲಕ್ಷಿಸಿ, ನಟನೆಯತ್ತ ಗಮನ ಕೇಂದ್ರೀಕರಿಸಬೇಕು." ಎಂದಿದ್ದರು.[೪೮] 2008 ಮಾರ್ಚ್ 23ರಂದು, ಅಂದರೆ ರಾಜ್ ಟೀಕೆಗಳು ಪ್ರಕಟಗೊಂಡು ಸುಮಾರು ಒಂದೂವರೆ ತಿಂಗಳ ನಂತರ, ಕೊನೆಗೂ ಮೌನ ಮುರಿದು ಸ್ಥಳೀಯ ಟ್ಯಾಬ್ಲಾಯ್ಡ್ ಒಂದಕ್ಕೆ ಸಂದರ್ಶನ ನೀಡಿದ ಅಮಿತಾಭ್, "ಮನಬಂದಂತೆ ಮಾಡಿದ ಆರೋಪಗಳ ಮನೋಧರ್ಮ ಕೂಡ ಅಂತೆಯೇ ಇರುತ್ತದೆ, ಆದ್ದರಿಂದ ನೀವುಗಳು ನನಗೆ ಕೊಡಬೇಕಾದಷ್ಟು ಮಹತ್ವವನ್ನು ಆ ಆರೋಪಗಳಿಗೆ ಕೊಡಬೇಕಾದ್ದಿಲ್ಲ" ಎಂದರು.[೪೯] ನಂತರ, ಮಾರ್ಚ್ 28ರಂದು ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಅಕಾಡೆಮಿಗಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಲಸೆ-ವಿರೋಧಿ ಸಮಸ್ಯೆಗೆ ಕುರಿತು ಅಮಿತಾಭ್‌ರಲ್ಲಿ ಕೇಳಿದ್ದಕ್ಕೆ, ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವುದು ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಸಂವಿಧಾನ ಕೂಡ ಇದನ್ನು ಸಮ್ಮತಿಸಿದೆ ಎಂದಿದ್ದರು.[೫೦] ರಾಜ್ ಹೇಳಿಕೆಗಳು ತಮ್ಮ ಮೇಲೆ ಪರಿಣಾಮ ಬೀರಿಲ್ಲ ಎಂದೂ ಅವರು ಹೇಳಿದ್ದರು.[೫೧]

ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು[ಬದಲಾಯಿಸಿ]

List of Amitabh Bachchan's awards, honours and recognitions

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಇತ್ತೀಚಿನ ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ Other Notes
2006 ಫ್ಯಾಮಿಲಿ ವೀರೇನ್ ಸಾಹಿ
ಡರ್ನಾ ಜರೂರಿ ಹೇ ಫ್ರೊಫೆಸರ್
ಕಭೀ ಅಲ್ವಿದ ನಾ ಕೆಹ್ನಾ ಸಮರ್ಜಿತ್ ಸಿಂಗ್ ತಲ್ವಾರ್ (ಅಕಾ. ಸೆಕ್ಸಿ ಸ್ಯಾಮ್) ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
ಬಬೂಲ್ ಬಲ್ರಾಜ್ ಕಪೂರ್
2007 ಏಕಲವ್ಯ: ದಿ ರಾಯಲ್ ಗಾರ್ಡ್ ಏಕಲವ್ಯ
ನಿಶ್ಯಬ್ದ್ ವಿಜಯ್
ಚೀನೀ ಕಮ್ ಬುದ್ಧದೇವ್ ಗುಪ್ತಾ
ಶೂಟೌಟ್ ಅಟ್ ಲೋಖಂಡ್ವಾಲಾ ದಿಂಗ್ರ ವಿಶೇಷ ಪಾತ್ರ
ಜೂಮ್ ಬರಾಬರ್ ಜೂಮ್ ಸೂತ್ರಧಾರ್ ವಿಶೇಷ ಪಾತ್ರ
ರಾಮ್ ಗೋಪಾಲ್ ವರ್ಮಾ ಕಿ ಆಗ್ ಬಬ್ಬನ್ ಸಿಂಗ್
ಓಂ ಶಾಂತಿ ಓಂ ಸ್ವಯಂ/ಸ್ವತಃ/ತಮ್ಮದೇ ಚಿತ್ರೀಕರಣ ವಿಶೇಷ ಪಾತ್ರ
2008 ಜೋಧಾ ಅಕ್ಬರ್ ನಿರೂಪಕ/ವಿವರಣೆಕಾರ
ಭೂತ್‌ನಾಥ್ ಭೂತ್‌ನಾಥ್(ಕೈಲಾಶ್‌ನಾಥ್)
ಸರ್ಕಾರ್‌ರಾಜ್ ಸುಭಾಷ್/"ಸರ್ಕಾರ್‌"
ಗಾಡ್ ತುಸೀ ಗ್ರೇಟ್ ಹೊ ಗಾಡ್ ಆಲ್ಮೈಟಿ
ದಿ ಲಾಸ್ಟ್ ಲೀರ್ ಹರೀಶ್ 'ಹ್ಯಾರಿ' ಮಿಶ್ರಾ ವಿಜೇತ , ಸ್ಟಾರ್‌ಡಸ್ಟ್ ಅತ್ಯುತ್ತಮ ನಟ ಪ್ರಶಸ್ತಿ
2009 ಡೆಲ್ಲಿ-6 ದಾದಾಜಿ ವಿಶೇಷ ಪಾತ್ರ
ಅಲಾದಿನ್ ಜಿನ್ ಅಕ್ಟೋಬರ್ 23, 2009ರಂದು ಬಿಡುಗಡೆ
ಪಾ ನವೆಂಬರ್ 20, 2009ರಂದು ಬಿಡುಗಡೆ
೨೦೧೦ ರಣ್ ವಿಜಯ್ ಹರ್ಷವರ್ಧನ್ ಮಲಿಕ್ ಜನವರಿ 22, 2010ರಂದು ಬಿಡುಗಡೆ
ಝಮಾನಕ್ ಶಿವಶಂಕರ್ ತಡವಾಗಿದೆ
ಶೂಬೈಟ್ ಜಾನ್ ಪಿರೇರಾ ನಿರ್ಮಾಣದ-ನಂತರ
ತಾಲಿಸ್ಮಾನ್ ಚಿತ್ರೀಕರಣಗೊಳ್ಳುತ್ತಿದೆ
ತೀನ್ ಪಟ್ಟಿ ಚಿತ್ರೀಕರಣಗೊಳ್ಳುತ್ತಿದೆ

ನಿರ್ಮಾಪಕ[ಬದಲಾಯಿಸಿ]

ವರ್ಷ ಚಿತ್ರ
1996 ತೆರೆ ಮೇರೆ ಸಪ್ನೆ (1971 ಚಲನಚಿತ್ರ )
1997 ಉಲ್ಲಾಸಮ್‌
ಮೃತ್ಯುದಾತ
1998 ಮೇಜರ್ ಸಾಬ್
2001 ಅಕ್ಸ್
2005 ವಿರುದ್ಧ್
2006 ಫ್ಯಾಮಿಲಿ - ಟೈಸ್ ಆಫ್ ಬ್ಲಡ್

ಹಿನ್ನೆಲೆ ಗಾಯಕ[ಬದಲಾಯಿಸಿ]

ವರ್ಷ ಚಿತ್ರ
1979 ದಿ ಗ್ರೇಟ್ ಗ್ಯಾಂಬ್ಲರ್
Mr. ನಟ್ವರ್‌ಲಾಲ್
1981 ಲಾವಾರಿಸ್
ನಸೀಬ್
ಸಿಲ್ಸಿಲ
1983 ಮಹಾನ್
ಪುಕಾರ್
1984 ಶರಾಬಿ
1989 ತೂಫಾನ್
ಜಾದೂಗಾರ್
1992 ಖುದಾ ಗವಾಹ್
1998 ಮೇಜರ್ ಸಾಬ್
1999 ಸೂರ್ಯವಂಶಂ
2001 ಅಕ್ಸ್
ಕಭೀ ಖುಷಿ ಕಭೀ ಗಮ್
(2002) ಆಂಖೇ
2003 ಅರ್ಮಾನ್
ಬಾಗ್ಬನ್
2004 ದೇವ್
ಏತ್‌ಬಾರ್
2006 ಬಬೂಲ್
2007 ನಿಶ್ಯಬ್ದ್
ಚೀನಿ ಕಂ
2008 ಭೂತ್‌ನಾಥ್
2009 ಅಲಾದಿನ್

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಅಮಿತಾಭ್ ಬಚ್ಚನ್: ದಿ ಆಂಗ್ರಿ ಯಂಗ್ ಮ್ಯಾನ್". Archived from the original on 2009-05-05. Retrieved 2009-11-03.
  2. ೨.೦ ೨.೧ ಬಾಲಿವುಡ್ ಪ್ರಚಾರಕ್ಕೆ ಚಲನಚಿತ್ರದ ದಂತಕಥೆ
  3. Mishra, Vijay (2001). Bollywood cinema: temples of desire. Routledge. p. 131. ISBN 0415930154.
  4. "Reviews on: To Be or Not To Be Amitabh Bachchan - Khalid Mohamed".
  5. "Bachchan wins his first national award". India Times. Archived from the original on 13 ಅಕ್ಟೋಬರ್ 2007. Retrieved 11 March 2007. {{cite web}}: Italic or bold markup not allowed in: |work= (help); Unknown parameter |dateformat= ignored (help)
  6. ಭಾರತದ ಗಲ್ಲಾಪೆಟ್ಟಿಗೆ.
  7. "Box Office 1975". BoxOffice India.com. Archived from the original on 2012-07-20. Retrieved 2009-11-03.
  8. ೮.೦ ೮.೧ Kanwar, Rachna (October 3, 2005). "25 Must See Bollywood Movies". Indiatimes movies. Archived from the original on 2018-12-24. Retrieved 2007-12-06.
  9. "Sholay". International Business Overview Standard. Archived from the original on 2012-06-30. Retrieved 2007-12-06.
  10. "Bachchan's historic 1978 year at the box office". ibosnetwork.com. Retrieved 1 February 2008. {{cite web}}: Unknown parameter |dateformat= ignored (help)[ಶಾಶ್ವತವಾಗಿ ಮಡಿದ ಕೊಂಡಿ]
  11. "Truffaut labeled Bachchan a one-man industry". China Daily. Archived from the original on 1 ಫೆಬ್ರವರಿ 2008. Retrieved 1 February 2008. {{cite web}}: Unknown parameter |dateformat= ignored (help)
  12. "ಬಾಕ್ಸ್‌ಆಫೀಸ್ ಇಂಡಿಯಾ.ಕಾಂ". Archived from the original on 2012-07-07. Retrieved 2012-07-07.
  13. "Bachchan's box office success". boxofficeindia.com. Archived from the original on 20 ಜುಲೈ 2012. Retrieved 10 April 2007. {{cite web}}: Unknown parameter |dateformat= ignored (help)
  14. "Bachchan injured whilst shooting scene". rediff.com. Retrieved 11 March 2007. {{cite web}}: Unknown parameter |dateformat= ignored (help)
  15. ೧೫.೦ ೧೫.೧ "Footage of fight scene in Coolie released to the public". IMDB. Retrieved 11 March 2007. {{cite web}}: Unknown parameter |dateformat= ignored (help)
  16. "Coolie a success". boxofficeindia.com. Archived from the original on 23 ಜುಲೈ 2012. Retrieved 11 March 2007. {{cite web}}: Unknown parameter |dateformat= ignored (help)
  17. Mohamed, Khalid. "Reviews on: To Be or Not To Be Amitabh Bachchan". mouthshut.com. Retrieved 11 March 2007. {{cite web}}: Unknown parameter |dateformat= ignored (help)
  18. "Amitabh Bachchan: Stint in Politics". HindustanTimes.com. Archived from the original on 2006-01-09. Retrieved 2005-12-05.
  19. "Interview with Amitabh Bachchan". sathnam.com. Archived from the original on 2018-12-24. Retrieved 2009-11-03.
  20. "ಬಚ್ಚನ್ ಹ್ಯಾಸ್ ನೊ ಪ್ಲ್ಯಾನ್ಸ್ ಫಾರ್ ಇಲೆಕ್ಷನ್." Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂ.ಕಾಂ.
  21. "Bollywood's Bachchan in trouble over crime claim". AFP. October 4, 2007. Archived from the original on ಜನವರಿ 16, 2008. Retrieved ನವೆಂಬರ್ 3, 2009.
  22. "ದಿ 15-ಈಯರ್ ಬ್ಯಾನ್ ಆನ್ ಬಚ್ಚನ್!" ಇಂಡಿಯಾಎಫ್ಎಂ ನ್ಯೂಸ್ ಬ್ಯೂರೋ. ಜನವರಿ27, 2007.
  23. "Top Actor". www.boxofficeindia.com/topactors.htm. Archived from the original on 2012-07-20. Retrieved 2009-11-03.
  24. ೨೪.೦ ೨೪.೧ "Box Office 1994". Box Office India. Archived from the original on 2013-01-07. Retrieved 2009-11-03.
  25. Patil, Vimla (March 4, 2001). "Muqaddar Ka Sikandar".
  26. Taliculam, Sharmila. "He's back!".
  27. "Amitabh and Abhishek rule the box office". Box Office India. Archived from the original on 30 ಜೂನ್ 2012. Retrieved 11 March 2007. {{cite web}}: Unknown parameter |dateformat= ignored (help)
  28. "Box Office 2006". Box Office India. Archived from the original on 25 ಮೇ 2012. Retrieved 11 March 2007. {{cite web}}: Unknown parameter |dateformat= ignored (help)
  29. "Films fail at the BO". Box Office India. Archived from the original on 2012-05-25. Retrieved 2009-11-03.
  30. Adarsh, Taran. "Top 5: 'Nishabd', 'N.P.D.' are disasters". Bollywood Hungma. Archived from the original on 24 ಡಿಸೆಂಬರ್ 2018. Retrieved 26 March 2007. {{cite web}}: Unknown parameter |dateformat= ignored (help)
  31. ೩೧.೦ ೩೧.೧ "Box Office India".
  32. "This is Amitabh's best performance after Black".
  33. "Amitabh Bachchan to star with Johnny Depp". ourbollywood.com. Archived from the original on 1 ಏಪ್ರಿಲ್ 2007. Retrieved 11 March 2007. {{cite web}}: Unknown parameter |dateformat= ignored (help)
  34. "Amitabh better today". Rediff. December 1, 2005. Retrieved 2008-04-27.
  35. Us Salam, Ziya (December 9, 2005). "Waiting for Mr. Bachchan". The Hindu. Archived from the original on 2009-01-08. Retrieved 2008-04-27.
  36. ಹಿಂದೂಸ್ತಾನ್‌ಟೈಮ್ಸ್.ಇನ್ "ಅಮಿತಾಭ್ ವಾಯ್ಸ್ ಫಾರ್ ಷತ್ರಂಜ್ ಕೆ ಕಿಲಾಡಿ." ಹಿಂದೂಸ್ತಾನ್‌ಟೈಮ್ಸ್ .
  37. Sanket Upadhyay (2007-06-01 (Faizabad)). "Land row: Setback for Bachchan". NDTV. Archived from the original on 2007-09-29. Retrieved 2007-06-03. {{cite news}}: Check date values in: |date= (help)
  38. "Amitabh's land records look forged". ಟೈಮ್ಸ್ ಆಫ್ ಇಂಡಿಯ. 2 Jun, 2007. {{cite news}}: Check date values in: |date= (help)
  39. "Amitabh Bachchan is not a farmer: UP court". Rediff.com. June 1, 2007. Retrieved 2008-04-27.
  40. "Big B abandons claim on farmland". Times of India. {{cite web}}: Text "October 12, 2007" ignored (help)
  41. "ಎಚ್‌ಸಿ ಗಿವ್ಸ್ ಕ್ಲೀನ್ ಚಿಟ್ ಟು ಅಮಿತಾಭ್ ಬಚ್ಚನ್ ಇನ್ ಲ್ಯಾಂಡ್ ಡಿಸ್ಪ್ಯೂಟ್ ಕೇಸ್." ಹ್ಯಾಪನಿಂಗ್ಸ್ ನ್ಯೂಸ್ : ಅಪುನ್‌ಕಾಚಾಯ್ಸ್. ಕಾಂ . ಡಿಸೆಂಬರ್12, 2007.
  42. "ಅಮಿತಾಭ್ ಬಚ್ಚನ್ ಗೆಟ್ಸ್ ಕ್ಲೀನ್ ಚಿಟ್ ಇನ್ UP ಭೂ ಹಗರಣ." Archived 2009-03-07 ವೇಬ್ಯಾಕ್ ಮೆಷಿನ್ ನಲ್ಲಿ. ಆಲ್‌ಬಾಲಿವುಡ್.ಕಾಂಡಿಸೆಂಬರ್ 11, 2007.
  43. "No question of proceeding further on Amitabh's land: Rane". hindu.com. Archived from the original on 2009-02-01. Retrieved 2009-11-03.
  44. "Big B draws Raj Thakeray's ire over 'UP interests'". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2008-05-30. {{cite news}}: Italic or bold markup not allowed in: |publisher= (help)
  45. "Rift between Raj and Big B over a wedding invite". Daily News & Analysis. Retrieved 2008-04-04. {{cite news}}: Italic or bold markup not allowed in: |publisher= (help)
  46. "Rift between Raj and Big B over a wedding invite". MSN. 2008-02-05. Archived from the original on 2008-03-12. Retrieved 2008-04-04.
  47. "I don't know who Raj Thackeray is: Jaya Bachchan". The Indian Express. Archived from the original on 2008-07-06. Retrieved 2008-05-30. {{cite news}}: Italic or bold markup not allowed in: |publisher= (help)
  48. "Bal Thackeray: Amitabh loves Maharashtra". ದಿ ಹಿಂದೂ. 2008-02-07. Archived from the original on 2008-04-11. Retrieved 2008-04-04. {{cite news}}: Italic or bold markup not allowed in: |publisher= (help)
  49. "Amitabh breaks silence, dismisses Raj's charges against him". Daily News & Analysis. Retrieved 2008-04-04. {{cite news}}: Italic or bold markup not allowed in: |publisher= (help)
  50. "The Indian Constitution allows me to live anywhere: Amitabh Bachchan". The Indian. Archived from the original on 2009-01-01. Retrieved 2008-04-04. {{cite news}}: Italic or bold markup not allowed in: |publisher= (help)
  51. "Everyone has the right to freedom of expression: Bachchan". ದಿ ಹಿಂದೂ. 2008-03-28. Archived from the original on 2008-04-01. Retrieved 2008-04-04. {{cite news}}: Italic or bold markup not allowed in: |publisher= (help)

ಹೊರಗಿನ ಕೊಂಡಿಗಳು[ಬದಲಾಯಿಸಿ]

This article contains Indic text. Without proper rendering support, you may see question marks or boxes, misplaced vowels or missing conjuncts instead of Indic text.