ರಾಜ್ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ್ ಕಪೂರ್
2.5x3.5
2.5x3.5
ಜನನ
ರಣಬೀರ್ ರಾಜ್ ಕಪೂರ್

(೧೯೨೪-೧೨-೧೪)೧೪ ಡಿಸೆಂಬರ್ ೧೯೨೪
ಮರಣ2 June 1988(1988-06-02) (aged 63)
ಇತರೆ ಹೆಸರುಗಳು ದಿ ಶೋ ಮ್ಯಾನ್
ಉದ್ಯೋಗನಟ, ನಿರ್ಮಾಪಕ, ನಿರ್ದೇಶಕ
ಸಕ್ರಿಯ ವರ್ಷಗಳು೧೯೩೫-೧೯೮೫

ದಿ ಶೋ-ಮ್ಯಾನ್ ಎಂದೂ ಕರೆಯಲ್ಪಡುವ ರಣ್‌ಬಿರ್‌ ರಾಜ್ "ರಾಜ್" ಕಪೂರ್ ಹಿಂದಿ:राज कपूर (ಪಂಜಾಬಿಉರ್ದು: راج کپُور: ರಾಜ್ ಕಪೂರ್, ೧೪ ದಶಂಬರ್ ೧೯೨೪ - ೨ ಜೂನ್ ೧೯೮೮), ಭಾರತೀಯ ಹಿಂದಿ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದರು.[೧] ಇವರು ಒಂಭತ್ತು ಭಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದವರು. ಇವರ ಚಿತ್ರ ಆವಾರ (೧೯೫೧) ಮತ್ತು ಬೂಟ್ ಪಾಲಿಶ್ (೧೯೫೪) ಕ್ಯಾನೆ ಫಿಲ್ಮ್ ಫೆಸ್ಟಿವಲ್‌ನ ಪಾಮ್ ಡಿ'ಆರ್‌ಗೆ ನಾಮನಿರ್ದೇಶನಗೊಂಡಿದ್ದವು. ಭಾರತೀಯ ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆಗಾಗಿ ಭಾರತ ಸರಕಾರವು ಇವರನ್ನು ೧೯೭೧ರಲ್ಲಿ ಪದ್ಮಭೂಷಣ ಪ್ರಶಸ್ತಿ ಹಾಗೂ ೧೯೮೭ರಲ್ಲಿ ದಾದಾಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಿತು.

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ರಾಜ್‌ಕಪೂರ್ ಬ್ರಿಟಿಷ್ ಇಂಡಿಯಾದ ಪೇಶಾವರ್‌ನಲ್ಲಿ (ಈಗಿನ ಪಾಕಿಸ್ತಾನ್) ನಟ ಪೃಥ್ವೀರಾಜ್ ಕಪೂರ್ ಮತ್ತು ರಾಮ್‌ಸರ್ನಿ (ರಮಾ) ದೇವಿ ಕಪೂರ್ ( ವಿವಾಹಪೂರ್ವದಲ್ಲಿ ಮೆಹ್ರಾ) ದಂಪತಿಗಳಿಗೆ ಜನಿಸಿದರು. ಪಂಜಾಬಿ ಕುಟುಂಬದ ಆರು ಜನ ಮಕ್ಕಳಲ್ಲಿ ಇವರು ಹಿರಿಯರು.[೨][೩][೪] ಇವರು ದೇವನ್ ಬಶೇಶ್ವರ್‌ನಾಥ್ ಕಪೂರ್‌ರ ಮೊಮ್ಮಗ ಮತ್ತು ದೇವನ್ ಕೇಶವಮಲ್ ಕಪೂರ್‌ರ ಮರಿಮೊಮ್ಮಗರಾಗಿದ್ದು ಪ್ರಸಿದ್ಧ ಕಪೂರ್ ಕುಟುಂಬದ ಸೇರಿದವರಾಗಿದ್ದಾರೆ. ರಾಜ್‌ರ ಸಹೋದರರಲ್ಲಿ ಇಬ್ಬರು ಚಿತ್ರನಟರಾದ ಶಶಿ ಕಪೂರ್ (ಅಕ ಬಲ್‌ಬೀರ್ ರಾಜ್ ಕಪೂರ್) ಮತ್ತು ಶಮ್ಮಿ ಕಪೂರ್‌ (ಶಮ್‌ಶೇರ್ ಕಪೂರ್)ರಾಗಿದ್ದು, ಇನ್ನಿಬ್ಬರು ಎಳೆತನದಲ್ಲೇ ಮರಣ ಹೊಂದಿದ್ದರು. ಇವರಿಗೆ ಊರ್ಮಿಳಾ ಸಾಯಲ್ ಎಂಬ ಹೆಸರಿನ ಸಹೋದರಿಯೂ ಇದ್ದರು.

೧೯೩೦ರಲ್ಲಿ ರಾಜ್ ಕಪೂರ್ ಡೆಹ್ರಾಡೂನ್‌ನ ಕರ್ನಲ್ ಬ್ರೌನ್ ಕ್ಯಾಂಬ್ರಿಡ್ಜ್ ಸ್ಕೂಲ್‌ನ್ನು ಸೇರಿದ್ದರು.

ವೃತ್ತಿಜೀವನ[ಬದಲಾಯಿಸಿ]

೧೯೩೫ರಲ್ಲಿ ಇಂಕ್ವಿಲಾಬ್ ಚಿತ್ರದ ಮೂಲಕ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಪ್ರಪ್ರಥಮ ಬಾರಿಗೆ ಚಲನಚಿತ್ರಗಳಲ್ಲಿ ಇವರು ಕಾಣಿಸಿಕೊಂಡರು. ನಂತರದ ೧೨ ವರ್ಷಗಳಲ್ಲಿ ಇತರ ಹಲವಾರು ಚಿತ್ರಗಳಲ್ಲಿ ನಟಿಸಿದ ರಾಜ್ ಕಪೂರ್‌ಗೆ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ಮಧುಬಾಲಾರ ಜೊತೆ ಪ್ರಧಾನ ನಾಯಕನ ಪಾತ್ರದಲ್ಲಿ ನಟಿಸುವ ಅವಕಾಶ ಚಿತ್ರ ನೀಲ್‌ಕಮಲ್‌ (೧೯೪೭)ನಲ್ಲಿ ದೊರೆತಿದ್ದು ಈ ಚಿತ್ರವು ಇವರಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತು. ೧೯೪೮ರಲ್ಲಿ ತನ್ನ ೨೪ ನೇ ವಯಸ್ಸಿನಲ್ಲಿ ಇವರು ಸ್ವಂತ ಸ್ಟುಡಿಯೋ ಆರ್.ಕೆ ಫಿಲ್ಮ್ಸ್‌ನ್ನು ಸ್ಥಾಪಿಸಿದರು ಹಾಗೂ ಅವರ ಕಾಲದ ಅತ್ಯಂತ ಕಿರಿಯ ಚಿತ್ರನಿರ್ದೇಶಕರೆಂಬ ಕೀರ್ತಿಗೆ ಪಾತ್ರರಾದರು. ೧೯೪೮ರಲ್ಲಿ ಸ್ವಂತ ನಿರ್ಮಾಣ, ನಿರ್ದೇಶನ ಮತ್ತು ನಟನಾಗಿ ಅಭಿನಯಿಸಿದ ಇವರ ಮೊದಲ ಚಿತ್ರ ಆಗ್ , ನಟಿ ನರ್ಗೀಸ್ ಜೊತೆ ಇವರು ನಟಿಸಿದ ಹಲವು ಚಿತ್ರಗಳಲ್ಲಿ ಮೊದಲನೆಯದು. ಆದರೆ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ (ಬಾಕ್ಸ್ ಆಫೀಸ್‌ನಲ್ಲಿ) ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿತು. ೧೯೪೯ರಲ್ಲಿ ಮೆಹಬೂಬ್ ಖಾನ್‌ರ ಅತ್ಯುತ್ಕೃಷ್ಟ ದರ್ಜೆಯ, ಪ್ರಚಂಡ ಯಶಸ್ಸು ಪಡೆದ ಚಿತ್ರ ಅಂದಾಝ್‌ ನಲ್ಲಿ ಮತ್ತೊಮ್ಮೆ ನಟಿ ನರ್ಗೀಸ್ ಮತ್ತು ದಿಲೀಪ್ ಕುಮಾರ್ ಜೊತೆ ನಾಯಕನಾಗಿ ನಟಿಸಿ ಗೆದ್ದಿರುವುದು ಇವರು ನಟನಾಗಿ ಪಡೆದ ಮೊದಲ ಪ್ರಮುಖ ಯಶಸ್ಸಾಗಿದೆ.

ಇವರು ನಿರ್ಮಾಣ, ನಿರ್ದೇಶನ ಮತ್ತು ನಟನಾಗಿ ಮುಂದುವರೆದು ಬರ್ಸಾತ್ (೧೯೪೯), ಆವಾರಾ (೧೯೫೧), ಶ್ರೀ ೪೨೦ (೧೯೫೫), ಚೋರಿ ಚೋರಿ (೧೯೫೬) ಮತ್ತು ದಿಸ್ ದೇಶ್ ಮೆ ಗಂಗಾ ಬೆಹತಿ ಹೈ (೧೯೬೦) ನಂತಹ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಹಲವು ಚಿತ್ರಗಳನ್ನು ಹೊರತಂದರು. ಈ ಚಿತ್ರಗಳು ತೆರೆಯ ಮೇಲಿನ ಈತನ ಆಕರ್ಷಣೆಯನ್ನು ಉಳಿಸಿಕೊಟ್ಟಿದ್ದು ಚಾರ್ಲಿ ಚಾಪ್ಲಿನ್‌ ನಟಿಸಿದ ದಿ ಟ್ರ್ಯಾಂಪ್ ಮಾದರಿಯು ಇವರಿಗೆ ತುಂಬಾ ಪ್ರಸಿದ್ದಿ ತಂದುಕೊಟ್ಟಿತು. ೧೯೬೪ರಲ್ಲಿ ಇವರು ನಿರ್ಮಾಣ, ನಿರ್ದೇಶನ ಹಾಗೂ ನಟನಾಗಿ ಅಭಿನಯಿಸಿದ ಸಂಗಮ್ ಚಿತ್ರವು ಇವರ ಪ್ರಪ್ರಥಮ ಬಣ್ಣದ ಚಿತ್ರವಾಗಿತ್ತು. ಇದು ಇವರು ನಾಯಕ ನಟನಾಗಿ ಪಡೆದ ಕೊನೆಯ ಯಶಸ್ಸು. ನಂತರ ೧೯೬೦ರಲ್ಲಿ ಇವರು ತನ್ನ ಮಹಾತ್ವಕಾಂಕ್ಷೆಯ ಚಿತ್ರವಾದ ಮೇರಾ ನಾಮ್ ಜೋಕರ್‌ ನ ನಿರ್ದೇಶನ ಹಾಗೂ ನಟನೆಯಲ್ಲಿ ಮುಂದುವರೆದು ಇದು ಮುಗಿಯಲು ಸುಮಾರು ಆರು ವರ್ಷಕ್ಕಿಂತ ಹೆಚ್ಚಿನ ಸಮಯವನ್ನೇ ತೆಗೆದುಕೊಂಡಿತ್ತು. ೧೯೭೦ರಲ್ಲಿ ಇದು ಬಿಡುಗಡೆಯಾದಾಗ ಗಲ್ಲಾಪೆಟ್ಟಿಗೆಯಲ್ಲಿ ನಷ್ಟಕ್ಕೆ ತುತ್ತಾಗಿದ್ದುದರಿಂದ ಇವರು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಈ ಮೂಲಕ ಹಿನ್ನಡೆ ಕಂಡರೂ, ರಾಜ್ ಈ ಚಿತ್ರವನ್ನು ತನ್ನ ಅತ್ಯಂತ ಪ್ರೀತಿಯ ಚಿತ್ರವೆಂಬ ಗೌರವ, ಅಭಿಮಾನದಿಂದ ಕಂಡರು.

ತನ್ನ ಹಿರಿಯ ಮಗನಾದ ರಣಧೀರ್ ಕಪೂರ್ ನಟನಾಗಿ ಮತ್ತು ನಿರ್ದೇಶಕನಾಗಿ ಪ್ರಥಮ ಬಾರಿಗೆ ಹೊರತಂದ ಚಿತ್ರ ಕಲ್ ಆಜ್ ಔರ್ ಕಲ್ (೧೯೭೧)ನಲ್ಲಿ ರಣಧೀರ್ ಜೊತೆಗೆ ರಾಜ್ ಸಹನಟನಾಗಿ ನಟಿಸಿದ್ದು ಈ ಚಿತ್ರದಲ್ಲಿ ಇವರು ಮತ್ತೆ ಚೇತರಿಸಿಕೊಂಡರು. ಇದರಲ್ಲಿ ಇವರ ತಂದೆ ಪೃಥ್ವೀರಾಜ್ ಕಪೂರ್ ಮತ್ತು ರಣಧೀರರ ಪತ್ನಿ ಬಬಿತಾ ಕೂಡಾ ಅಭಿನಯಿಸಿದ್ದರು. ಅಲ್ಲಿಂದ ಮುಂದಕ್ಕೆ ಇವರು ಚಿತ್ರಗಳಲ್ಲಿ "ಪಾತ್ರ ನಟ"ರಾಗಿ ಅಭಿನಯ ಮುಂದುವರೆಸಿ ತನ್ನ ಹೆಚ್ಚಿನ ಗಮನವನ್ನು ಚಿತ್ರ ನಿರ್ಮಾಣ ಮತ್ತು ನಿರ್ದೇಶನಗಳಿಗೆ ಮೀಸಲಿಟ್ಟರು. ಬಾಬ್ಬಿ (೧೯೭೧) ಚಿತ್ರದ ನಿರ್ಮಾಣ ಮತ್ತು ನಿರ್ದೇಶನವನ್ನು ತಾವೇ ಮಾಡುವ ಮೂಲಕ ತನ್ನ ಎರಡನೇ ಪುತ್ರ ರಿಷಿ ಕಪೂರ್‌‍ರ ವೃತ್ತಿ ಭವಿಷ್ಯವನ್ನು ರೂಪಿಸಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರಚಂಡ ಯಶಸ್ಸು ಪಡೆಯುವುದರ ಜೊತೆಗೆ ನಂತರದಲ್ಲಿ ಖ್ಯಾತಿ ಪಡೆದ ತಾರೆ ಡಿಂಪಲ್ ಕಪಾಡಿಯಾರನ್ನು ಚಿತ್ರರಂಗಕ್ಕೆ ಪ್ರಥಮ ಭಾರಿಗೆ ಪರಿಚಯಿಸಿತು ಹಾಗೂ ಈ ಚಿತ್ರವು ಹದಿಹರೆಯದ ಪ್ರೇಮಕಥೆಗಳ ಹೊಸ ಜನಾಂಗಕ್ಕೆ ನಾಂದಿ ಹಾಡಿತು. ಈ ಚಿತ್ರದಲ್ಲಿ ಡಿಂಪಲ್ ಬಿಕನಿಗಳನ್ನು ಧರಿಸಿದ್ದರು ನಂತರದಲ್ಲಿ ಇದು ಭಾರತೀಯ ಚಿತ್ರದಲ್ಲಿ ಸಾಮಾನ್ಯವಾಯಿತು.

೧೯೭೦ರ ಕೊನೆಯಾರ್ಧದಲ್ಲಿ ಮತ್ತು ೧೯೮೦ರ ಪೂರ್ವದಲ್ಲಿ ಇವರು ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅಂತಹ ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನಗಳಿಗೆ ಗಮನವಿತ್ತರು. ಇವುಗಳಲ್ಲಿ ಜಿನತ್ ಅಮಾನ್ ಜೊತೆಗಿನ ಸತ್ಯಂ ಶಿವಂ ಸುಂದರಂ (೧೯೭೮), ಪದ್ಮಿನಿ ಕೊಲ್ಹಾಪುರಿ ಜೊತೆಗಿನ ಪ್ರೇಮ್ ರೋಗ್ ಮತ್ತು ಮಂದಾಕಿನಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ರಾಮ್ ತೇರಿ ಗಂಗಾ ಮೈಲಿ (೧೯೮೫) ಮುಂತಾದುವು ಯಶಸ್ವೀ ಚಿತ್ರಗಳು.

ರಾಜ್ ಕಪೂರ್‌ ಕಾಣಿಸಿಕೊಂಡ ಕೊನೆಯ ಬೃಹತ್ ಚಿತ್ರ ವಕೀಲ್ ಬಾಬು (೧೯೮೨). ಇವರ ಈ ಕೊನೆಯ ನಟನೆಯು ಒಂದು ಕಿರುಚಿತ್ರದಲ್ಲಾಗಿದ್ದು ಇದು ೧೯೮೪ರಲ್ಲಿ ಬಿಡುಗಡೆಯಾದ ದೂರದರ್ಶನಕ್ಕಾಗಿ ಬ್ರಿಟಿಷ್ ತಯಾರಿಸಿದ ಕಿರು ಚಿತ್ರ ಕಿಮ್ ಆಗಿದೆ.

ಮರಣ[ಬದಲಾಯಿಸಿ]

ತಮ್ಮ ಅಂತಿಮ ದಿನಗಳಲ್ಲಿ ರಾಜ್ ಕಪೂರ‍್ರು ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಆಸ್ತಮಾಕ್ಕೆ ಸಂಬಂಧಿಸಿದ ತೊಂದರೆಗಳು ಉಲ್ಬಣಗೊಂಡು ೧೯೮೮ರಲ್ಲಿ ತನ್ನ ೬೩ನೇ ವಯಸ್ಸಿನಲ್ಲಿ ಇವರು ಮರಣಹೊಂದಿದರು. ಮರಣ ಕಾಲದಲ್ಲಿ ಇವರು 'ಹೆನ್ನಾ ' [ಇಂಡಿಯಾ - ಪಾಕಿಸ್ತಾನ ಆಧಾರಿತ ಪ್ರೇಮಕಥೆ) ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ಇವರ ಮಗ ರಣಧೀರ್ ಕಪೂರ್‌ ಈ ಚಿತ್ರವನ್ನು ಪೂರ್ಣಗೊಳಿದ್ದು ಇದು ೧೯೯೧ರಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಬೃಹತ್ ಯಶಸ್ಸು ಪಡೆಯಿತು. ಇವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಇವರ ಸಹೋದರರಾದ ಶಶಿ ಕಪೂರ್ ಮತ್ತು ಶಮ್ಮಿ ಕಪೂರ್ ಕೂಡಾ ಉಪಸ್ಥಿತರಿದ್ದರು. ನೆರೆದ ಜನಸಮೂಹದ ಪ್ರಚಂಡ ಕರತಾಡನದ ಮಧ್ಯೆ ರಾಷ್ಟ್ರಾಧ್ಯಕ್ಷರಾದ ಶ್ರೀಯುತ ವೆಂಕಟರಾಮನ್ ಅವರು ಕಪೂರ್‌ರ ಅಸ್ವಸ್ಥತೆಯನ್ನು ಗಮನಿಸಿ ವೇದಿಕೆಯಿಂದ ತಾವೇ ಕೆಳಗಿಳಿದು ಬಂದು ತನ್ನ ಕೊನೆಯ ಉಸಿರನ್ನೆಳೆಯುತ್ತಿದ್ದ ಈ ಐತಿಹಾಸಿಕ ವ್ಯಕ್ತಿಗೆ ಜನರ ಚಪ್ಪಾಳೆಯ ಗುಡುಗಿನ ಮಧ್ಯೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಆ ಕ್ಷಣವೇ ಥಟ್ಟನೇ ಕುಸಿದು ಬಿದ್ದರು ರಾಜ್. ತಕ್ಷಣ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಚಿಕಿತ್ಸೆಗಾಗಿ ಇವರನ್ನು ಸೇರಿಸಲಾಯಿತು. ದೇಶದ ಪ್ರಸಿದ್ಧ ಹೃದಯತಜ್ಞರು ತಮ್ಮೆಲ್ಲಾ ಪ್ರಯತ್ನಗಳನ್ನು ಮಾಡಿದರೂ, ಇವರನ್ನು ಉಳಿಸಿಕೊಳ್ಳಲಾಗಲಿಲ್ಲ.[೫]

ಪರಂಪರೆ[ಬದಲಾಯಿಸಿ]

ರಾಜ್ ಕಪೂರ್‌ರು ಚಿತ್ರರಂಗದ ಟೀಕಾಕಾರರಿಂದ ಹಾಗೂ ಸಾಮಾನ್ಯ ಚಿತ್ರ ಅಭಿಮಾನಿಗಳಿಂದ ಬಹುವಾಗಿ ಅಭಿನಂದಿಸಲ್ಪಟ್ಟಿದ್ದಾರೆ. ಅಲೆಮಾರಿಯಂನಂತಹ ದೇಹಪ್ರಕೃತಿಯಿಂದಲೇ ಚಿತ್ರದಲ್ಲಿ ಪ್ರತಿಬಿಂಬಿಸಲ್ಪಟ್ಟು ಪ್ರತಿಕೂಲ ಸ್ಥಿತಿಯಲ್ಲಿಯೂ ತನ್ನ ಉಲ್ಲಾಸಪೂರ್ಣ ಹಾಗೂ ನಿಷ್ಕಪಟ ಅಭಿನಯಕ್ಕಾಗಿ ಇವರನ್ನು ಚಿತ್ರರಂಗದ ಇತಿಹಾಸಕಾರರು ಮತ್ತು ಸಿನಿಮಾ ಭಕ್ತರು ಇವರನ್ನು "ಭಾರತೀಯ ಚಿತ್ರರಂಗದ ಚಾರ್ಲಿ ಚಾಪ್ಲಿನ್" ಎಂದು ಕರೆಯುತ್ತಿದ್ದರು. ಇವರ ಖ್ಯಾತಿ ವಿಶ್ವದಾದ್ಯಂತ ವ್ಯಾಪಿಸಿತ್ತು. ಇವರು ಆಫ್ರಿಕಾದ ವಿಸ್ತೃತಭಾಗಗಳ, ಮಧ್ಯ ಪೂರ್ವ, ಹಿಂದಿನ ಸೋವಿಯತ್ ಒಕ್ಕೂಟ, ಚೈನಾ ಮತ್ತು ಆಗ್ನೇಯ ಏಷ್ಯಾದ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದರು. ಇವರ ಚಿತ್ರಗಳು ವಿಶ್ವಾದ್ಯಂತ ವ್ಯಾಪಾರೀ ಯಶಸ್ಸನ್ನು ಪಡೆದಿತ್ತು. ಚಿತ್ರ ತಯಾರಿಕೆ ಹಾಗೂ ಅದರ ಮಾರುಕಟ್ಟೆಯಂತಹ ಚಿತ್ರರಂಗದ ಎಲ್ಲಾ ಕ್ಷೇತ್ರಗಳಲ್ಲಿ ಪಳಗಿದ ರಾಜ್‌ಗೆ ಯಾರೇ ಆಗಲಿ, ಅವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಹೊರತರುವ ಕಲೆ ಕರಗತವಾಗಿತ್ತು. ೧೯೬೪ರಲ್ಲಿ ಪಂಡಿತ್ ಜವಾಹರಲಾಲ್ ನೆಹರೂರವರು ಮರಣ ಹೊಂದಿದಾಗ ಕಾಕತಾಳಿಯವೋ ಎಂಬಂತೆ, ರಾಜ್‌ರ ಚಿತ್ರ ಸಂಗಮ್ ಬಿಡುಗಡೆಗೆ ಸಿದ್ಧವಾಗಿತ್ತು. ಇವರು ಈ ಸದವಕಾಶವನ್ನು ಉಪಯೋಗಪಡಿಸಿಕೊಂಡು, ಚಿತ್ರದ ಒಂದು ದೃಶ್ಯವಾದ ಗೋಪಾಲ್ ಭಸ್ಮವು ಗಂಗೆಯಲ್ಲಿ ಮುಳುಗಿದಾಗ ಪಂಡಿತ್ ನೆಹರೂರವರು ತಮ್ಮ ಕವಿಹೃದಯದಿಂದ ವಿವರಿಸಿದಂತಹ ದೃಶ್ಯವನ್ನೂ ಸೇರಿಸಿದರು. ಇವರ ಚಿತ್ರಗಳು ಅವು ನಿರ್ಮಾಣಗೊಂಡ ಸಮಯದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುತ್ತಿದ್ದವು.

ಇವರು ಸಾರ್ವಜನಿಕರ ಅಭಿರುಚಿಯ ಬಗ್ಗೆ ಚೆನ್ನಾಗಿ ಅರ್ಥೈಸಿಕೊಂಡಿದ್ದು ಗಲ್ಲಾಪೆಟ್ಟಿಗೆಯ ಬಗೆಗಿನ ಸಮಗ್ರ ಜ್ಞಾನ ಇವರಿಗಿತ್ತು.ಐವತ್ತರ ದಶಕದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ದೇಶಕ್ಕೆ ಹೆಚ್ಚಿನ ಆದಾಯ ತರಬಲ್ಲ ಒಂದು ಸಾಧನವಾಗಿ ಹಿಂದಿ ಚಿತ್ರಗಳ ಸಾಮರ್ಥ್ಯದ ಕುರಿತಾಗಿ ಚಿಂತಿಸುತ್ತಿದ್ದ ಭಾರತೀಯ ಸಿನಿಮಾರಂಗದ ಪ್ರವರ್ತಕರಲ್ಲೊಬ್ಬರು ರಾಜ್ ಕಪೂರ್. ಇಂದು ಆ ಕನಸು ನಿಜವಾಗಿದೆ.[೬]

ರಾಜ್ ಕಪೂರ್‌ರ ಹೆಚ್ಚಿನ ಚಿತ್ರಗಳು ದೇಶಪ್ರೇಮವನ್ನು ಕಥಾವಸ್ತುವನ್ನಾಗಿ ಹೊಂದಿದ್ದುವು. ಇವರ ಚಿತ್ರಗಳಾದ ಆಗ್ ಶ್ರೀ ೪೨೦ ಮತ್ತು ಜಿಸ್ ದೇಶ್ ಮೆ ಗಂಗಾ ಬೆಹ್ತಿ ಹೆ (ಗಂಗೆಯು ಹರಿಯುತ್ತಿರುವ ನಾಡಿನಲ್ಲಿ ) ಭಾರತವು ಹೊಸದಾಗಿ ಪಡೆದ ಸ್ವಾತಂತ್ರ್ಯವನ್ನು ಆಚರಿಸಿದ್ದು ಚಿತ್ರ ವೀಕ್ಷಣೆಗೆ ಬಂದವರನ್ನು ದೇಶಭಕ್ತರಾಗುವಂತೆ ಹುರಿದುಂಬಿಸಿದವು. ರಾಜ್ ಕಪೂರ್ ತನ್ನ ಚಿತ್ರ ಶ್ರೀ ೪೨೦ ಯಿಂದ "ಮೇರಾ ಜೂತಾ ಹೆ ಜಪಾನಿ" ಚಿತ್ರಕ್ಕಾಗಿ ಈ ಪ್ರಸಿದ್ಧ ಸಾಹಿತ್ಯವನ್ನು ನಿರ್ದೇಶಿಸಿದ್ದರು:

ಮೇರಾ ಜೂತಾ ಹೇ ಜಪಾನಿ
ಯೆ ಪತ್ಲೂನ್ ಇಂಗ್ಲೀಷ್ತಾನಿ
ಸರ್ ಪೆ ಲಾಲ್ ಟೋಪಿ ರೂಸಿ
ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ '
ನನ್ನ ಪಾದುಕೆಗಳು ಜಾಪಾನ್‌ರದ್ದು
ತೊಟ್ಟ ಚಲ್ಲಣವಿದು ಇಂಗ್ಲಿಷರದು
ನನ್ನ ತಲೆಯಲ್ಲಿರುವ ಕೆಂಪು ಟೋಪಿ ರಷಿಯಾದ್ದು
ಆದರೂ, ಎನೇ ಆಗಲಿ, ನನ್ನ ಹೃದಯ ಮಾತ್ರ ಭಾರತದ್ದು.'

ಈ ಹಾಡು ಇನ್ನೂ ಸುಪ್ರಸಿದ್ಧವಾಗಿದ್ದು ಶ್ರೀ ೪೨೦ ಬಿಡುಗಡೆಯಾದ ನಂತರ ತಯಾರಾದ ಹಲವಾರು ಸಿನಿಮಾಗಳಲ್ಲಿ ಇದು ಸೇರಿಸಲ್ಪಟ್ಟಿದೆ. ಭಾರತೀಯ ಲೇಖಕಿ ಮಹಾಶ್ವೇತಾ ದೇವಿ ೨೦೦೬ರಲ್ಲಿ ಫ್ರಾಂಕ್‌ಫರ್ಟ್ ಪುಸ್ತಕ ಮೇಳದಲ್ಲಿನ ತನ್ನ ಉದ್ಘಾಟನಾ ಭಾಷಣದ ಪ್ರದರ್ಶನದಲ್ಲಿ ಈ ಸಾಹಿತ್ಯವನ್ನು ಬಳಸಿದ ಮೇಲೆ ತನ್ನ ಹೃತ್ಪೂರ್ವಕ ದೇಶಪ್ರೇಮವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರದರ್ಶನವನ್ನು ಒಂದು ಕ್ಷಣ ನಿಲ್ಲಿಸಿ ಗೌರವ ಸಮರ್ಪಿಸಿದರು.

ರಾಜ್ ಕಪೂರ್ ಚಿತ್ರಸಂಗೀತ ಮತ್ತು ಸಾಹಿತ್ಯದಲ್ಲಿ ಓರ್ವ ನಿಷ್ಣಾತ ತೀರ್ಪುಗಾರರಾಗಿದ್ದರು. ಇವರು ನಿರ್ದೇಶಿಸಿದ ಹಾಡುಗಳಲ್ಲಿ ಹಲವು ಹಾಡುಗಳು ನಿತ್ಯನೂತನವಾಗಿದ್ದು ಈಗಲೂ ಜಯಭೇರಿ ಬಾರಿಸುತ್ತಿದೆ. ಇವರು ಸಂಗೀತ ನಿರ್ದೇಶಕ ಶಂಕರ್ ಜೈಕಿಶನ್ ಮತ್ತು ಸಾಹಿತ್ಯಕಾರ ಹಸ್ರತ್ ಜೈಪುರಿ ಮತ್ತು ಶೈಲೇಂದ್ರರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ತನ್ನ ಪ್ರಭಲ ದೃಶ್ಯೀಕರಿಸುವ ಪ್ರಜ್ಞೆಯಿಂದ ಇವರು ಈಗಲೂ ನೆನಪಾಗುತ್ತಾರೆ. ಸಂಗೀತದ ಮೂಲಕ ಆಕರ್ಷಕ ದೃಶ್ಯ ಸಂಯೋಜನೆಗಳನ್ನು, ವಿಸ್ತೃತವಾದ ಸೆಟ್‌ಗಳು ನಾಟಕೀಯ ಬೆಳಕನ್ನು ಸೃಷ್ಟಿಸಿ ಒಂದು ಭಾವವನ್ನು ಇವರು ಮೂಡಿಸುತ್ತಿದ್ದರು. ನಟಿಯರಾದ ನಿಮ್ಮಿ, ಡಿಂಪಲ್ ಕಪಾಡಿಯಾ, ನರ್ಗಿಸ್ ಮತ್ತು ಮಂದಾಕಿನಿಯರನ್ನು ಪರಿಚಯಿಸಿದುದಲ್ಲದೇ ತಮ್ಮ ಪುತ್ರರಾದ ರಿಶಿ, ರಣಧೀರ್ ಮತ್ತು ರಾಜೀವ್‌ರ ವೃತ್ತಿಬದುಕನ್ನೂ ರೂಪಿಸಿ ಬೆಳೆಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಕಪೂರ್ ಕುಟುಂಬವು ಈಗ ಪಾಕಿಸ್ತಾನದ ಸರಹದ್ದಿನಲ್ಲಿರುವ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಎಂದು ಕರೆಯಲ್ಪಡುವ ಬ್ರಿಟಿಷ್ ಭಾರತದ ಲ್ಯಾಲ್ಪುರ್‌ನಿಂದ ಬಂದವರಾಗಿದ್ದಾರೆ.

೧೯೫೦ರ ಕಾಲದಲ್ಲಿ ಕಪೂರ್‌ರು ಖ್ಯಾತ ಚಿತ್ರತಾರೆ ನರ್ಗೀಸ್‌ರೊಂದಿಗೆ ದೀರ್ಘಕಾಲದ ಪ್ರೇಮ ಸಂಬಂಧ ಹೊಂದಿದ್ದರು ಎಂಬ ಪ್ರಚಾರವನ್ನೂ ಸಹ ಪಡೆದ್ದರು. ಶ್ರೀ ೪೨೦ ಮತ್ತು ಆವಾರ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿಯು ತಾರೆಗಳಾಗಿ ಮಿಂಚಿದ್ದರು. ಅಲ್ಲದೆ, ಇವರು ತಮ್ಮ ಚಿತ್ರ ಸಂಗಮ್‌ನಲ್ಲಿ ಸಹನಟಿಯಾಗಿ ನಟಿಸಿದ ತಾರೆ ವೈಜಯಂತಿಮಾಲಾರೊಂದಿಗೆ ಪ್ರಣಯ ಸಂಬಂಧ ಹೊಂದಿದ್ದರು ಎಂಬ ಆರೋಪಕ್ಕೂ ಗುರಿಯಾಗಿದ್ದರು.[ಸೂಕ್ತ ಉಲ್ಲೇಖನ ಬೇಕು]

ಕಪೂರ್‌ರ ಮೊಮ್ಮಕ್ಕಳಲ್ಲಿ ಮೂರು ಜನ ಈಗ ಬಾಲಿವುಡ್ ಚಿತ್ರೋದ್ಯಮದಲ್ಲಿ ತಾರೆಗಳಾಗಿದ್ದಾರೆ. ತಮ್ಮ ಮಗ ರಣಧೀರ್ ಕಪೂರ್ ಮತ್ತು ಇವರ ಪತ್ನಿ ಬಬಿತಾರ ಮಕ್ಕಳಾದ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್, ರಾಜ್ ಕಪೂರ್‌ರ ಮೊಮ್ಮಕ್ಕಳು. ರಿಶಿ ಕಪೂರ್‌ ಮತ್ತು ಇವರ ಪತ್ನಿ ನೀತೂ ಸಿಂಗ್‌ರ ಮಗನಾದ ರಣ್‌ಭೀರ್ ಕಪೂರ್ ಇವರ ಮೊಮ್ಮಗ.

ಪ್ರಶಸ್ತಿಗಳು[ಬದಲಾಯಿಸಿ]

ಸುಮಾರು ಹತ್ತೊಂಭತ್ತು ಭಾರಿ ನಾಮನಿರ್ದೇಶನಗೊಂಡು, ಒಂಭತ್ತು ಬಾರಿ ಫಿಲ್ಮ್ ‌ಫೇರ್ ಪ್ರಶಸ್ತಿ ಪಡೆದ ಕಪೂರ್ ತನ್ನ ವೃತ್ತಿಬದುಕಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ೧೯೭೧ರಲ್ಲಿ ಭಾರತ ಸರಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಮತ್ತು ಭಾರತದ ಚಿತ್ರರಂಗದಲ್ಲಿನ ಮಹತ್ತರ ಸಾಧನೆಗೆ ನೀಡಲಾಗುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ೧೯೮೭ರಲ್ಲಿ ನೀಡಿ ಗೌರವಿಸಿತು. ೨೦೦೧ರಲ್ಲಿ ಇವರು ಸ್ಟಾರ್‌ಡಸ್ಟ್ ಪ್ರಶಸ್ತಿಯನ್ನು ಪಡೆಯು ಇದರಿಂದ "ಸಹಸ್ರಮಾನದ ಅತ್ಯುತ್ತಮ ನಿರ್ದೇಶಕರು" ಎಂಬ ಗೌರವಕ್ಕೂ ಪಾತ್ರರಾದರು. ಇವರು ೨೦೦೨ರಲ್ಲಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿಯನ್ನು ಪಡೆದು"ಸಹಸ್ರಮಾನದ ಆಕರ್ಷಕ ವ್ಯಕ್ತಿ" ಎಂಬ ಹೆಸರನ್ನೂ ಪಡೆದರು.

ಇತರ ಕಲಾವಿದರೊಂದಿಗೆ ಜತೆಗಾರಿಕೆ[ಬದಲಾಯಿಸಿ]

ಶಂಕರ್ ಜೈಕಿಶನ್[ಬದಲಾಯಿಸಿ]

ಶಂಕರ್-ಜೈಕಿಶನ್ ಇವರ ಆಯ್ಕೆಯ ಸಂಗೀತ ನಿರ್ದೇಶಕರು. ಇವರೊಂದಿಗೆ ಇಪ್ಪತ್ತು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅದರಲ್ಲಿ ಅವರ ಹತ್ತು ಸ್ವಂತಗಳಾದ ಬರ್ಸಾತ್ ಚಿತ್ರದಿಂದ ಹಿಡಿದು ಕಲ್ ಆಜ್ ಔರ್ ಕಲ್ ಚಿತ್ರದವರೆಗೆ. ಆ ಸಮಯದ ಸಲಿಲ್ ಚೌಧರಿಯೊಂದಿಗಿನ ಜಗ್ತೆ ರಾಹೋ ಚಿತ್ರ ಮತ್ತು ಅಬ್ ದಿಲ್ ದೂರ್ ನಹೀ ಚಿತ್ರಗಳ ಹೊರತಾಗಿ). ಜೈಕಿಶನ್‌ರ ಮರಣದ ನಂತರವೇ ಇವರು ಇತರ ಸಂಗೀತ ನಿರ್ದೇಶಕರ ಕಡೆಗೆ ತಿರುಗಿದ್ದರು. ಬಾಬ್ಬಿ , ಸತ್ಯಂ ಶಿವಂ ಸುಂದರಂ ಮತ್ತು ಪ್ರೇಮ್ ರೋಗ್ ಚಿತ್ರಗಳಿಗಾಗಿ ಲಕ್ಷ್ಮೀಕಾಂತ್ ಪ್ಯಾರೇಲಾಲ್, (ನಂತರದ ದಿನಗಳಲ್ಲಿ ಇವರ ಮಕ್ಕಳು ಲಕ್ಷ್ಮೀಕಾಂತ್ ಪ್ಯಾರೇಲಾಲ್‌ರನ್ನು ಪ್ರೇಮ್ ಗ್ರಂಥ್ ಚಿತ್ರಕ್ಕಾಗಿ ಬಳಸಿದರು) ಮತ್ತು ರಾಮ್ ತೇರಿ ಗಂಗಾ ಮೈಲಿ ಮತ್ತು ಹೆನ್ನಾ ಚಿತ್ರಗಳಿಗಾಗಿ ರವೀಂದ್ರ ಜೈನ್ ಜೊತೆಗೆ ಕೆಲಸ ಮಾಡಿದ್ದರು. ಮದನ್ ಮೋಹನ್‌ರೊಂದಿಗೆ ಯಾವುದೇ ಚಿತ್ರಗಳಲ್ಲಿ ಮತ್ತು ಯಾವುದೇ ಸಂಗೀತದಲ್ಲಿ ರಾಜ್‌ಕಪೂರ್ ನಟಿಸಲಿಲ್ಲ ಮತ್ತು ಒ.ಪಿ. ನಯ್ಯರ್‌ರೊಂದಿಗೆ (ಉಸ್ತಾದ್ ಮಾಡಿರುವ) ಕೇವಲ ಒಂದೇ ಚಿತ್ರದಲ್ಲಿ ನಟಿಸಿದ್ದರು ಎಂಬುದು ವಿಶೇಷವಾಗಿ ಗಮನಿಸಬೇಕಾದ ಅಂಶವಾಗಿದೆ.

ಶಂಕರ್ ಜೈ ಕಿಶನ್‌ರ ಜೊತೆಗಿನ ಚಿತ್ರಗಳು: (೧೮ ಚಿತ್ರಗಳು)

ನರ್ಗೀಸ್[ಬದಲಾಯಿಸಿ]

  • ರಾಜ್ ಕಪೂರ್ ಮತ್ತು ನರ್ಗೀಸ್ ಜೊತೆಯಾಗಿ ೧೬ ಚಿತ್ರಗಳಲ್ಲಿ ನಟಿಸಿದ್ದಾರೆ ಇವುಗಳಲ್ಲಿ ೬ ಸ್ವಂತ ನಿರ್ಮಾಣದ ಚಿತ್ರಗಳು

ಮುಕೇಶ್[ಬದಲಾಯಿಸಿ]

ಮುಕೇಶ್ ರಾಜ್ ಕಪೂರ್‌ರ ಹೆಚ್ಚಿನ ಎಲ್ಲಾ ಚಿತ್ರಗಳಲ್ಲೂ ತಮ್ಮ ಉತ್ತಮ ಕಂಠವನ್ನು ನೀಡಿದ್ದಾರೆ. ಆದ್ದರಿಂದ ಮುಕೇಶ್ ಸತ್ತಾಗ ರಾಜ್, "ನಾನು ನನ್ನ ಧ್ವನಿಯನ್ನು ಕಳೆದುಕೊಂಡಿದ್ದೇನೆ..." ಎಂದು ಉದ್ಗರಿಸಿದ್ದರು. ಹೀಗಿದ್ದಾಗ್ಯೂ ಮನ್ನಾ ಡೆ ಕೂಡ ರಾಜ್ ಕಪೂರ್‌ಗಾಗಿ ಹಲವಾರು ಉತ್ತಮವಾದ ಮತ್ತು ತುಂಬಾ ಪ್ರಸಿದ್ಧವಾದ ಗೀತೆಗಳನ್ನು ಹಾಡಿದ್ದಾರೆ. ಉದಾಹರಣೆಗೆ ಶ್ರೀ ೪೨೦ ಮತ್ತು ಚೋರಿ ಚೋರಿ ಚಿತ್ರಗಳ ಹಾಡುಗಳು. ಕೆಲವು ಅತ್ಯುತ್ತಮ ಗೀತೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

  • ದಿಲ್ ಕಾ ಹಾಲ್ ಸುನ್‌ಲೇ ದಿಲ್‌ವಾಲಾ (ಶ್ರೀ ೪೨೦)
  • ಆಜಾ ಸನಮ್ ಮಧುರ್ ಚಾಂದನಿ ಮೇ ಹಮ್ (ಚೋರಿ ಚೋರಿ)
  • ಜಹಾ ಮೆ ಜಾತಿ ಹೂ ವಹಿ ಚಲೆ ಆತೆ ಹೊ(ಚೋರಿ ಚೋರಿ)
  • ಯೇ ರಾತ್ ಭೀಗೀ ಭೀಗೀ, ಯೆ ಮಸ್ತ್ ಫಿಜಾಯೆ (ಚೋರಿ ಚೋರಿ)
  • ಮಸ್ತಿ ಭರಾ ಹೆ ಸಮಾ (ಪರ್ವರಿಶ್)
  • ಎ ಭಾಯ್, ಜರಾ ದೇಖ್ ಕೆ ಚಲೋ (ಮೇರಾ ನಾಮ್ ಜೋಕರ್)
  • ಪ್ಯಾರ್ ಹುವಾ ಇಕರಾರ್ ಹುವಾ ಹೈ (ಶ್ರೀ ೪೨೦)
  • ಲಾಗಾ ಚುನರಿ ಮೆ ದಾಗ್ (ದಿಲ್ ಹಿ ತೊ ಹೆ)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಮಧು ಜೈನ್‌ರಿಂದ ದಿ ಕಪೂರ್ಸ್: ದ ಫಸ್ಟ್ ಫಿಲ್ಮಿ ಆಫ್ ಇಂಡಿಯನ್ ಸಿನೆಮಾ ,ಪೆಂಗ್ವಿನ್, ವೈಕಿಂಗ್, ೨೦೦೫. ISBN ೦೬೭೦೦೫೮೩೭೮.

ಉಲ್ಲೇಖಗಳು[ಬದಲಾಯಿಸಿ]

  1. ಆಲ್‌ಮ್ಯೂಸಿಕ್ ಬಯಾಗ್ರಫಿ
  2. "Bollywood's First Family". Rediff. Retrieved 2007-09-08.
  3. "Prithviraj Kapoor: A centenary tribute". Daily Times / University of Stockholm. Archived from the original on 2009-05-05. Retrieved 2007-11-03.
  4. "Prithviraj Kapoor:". Kapoor Family Page. Retrieved 2007-11-03.
  5. "Remembering Indian cinema's greatest showman.'". movies.rediff.com. Retrieved 22 Oct 2010.
  6. "ಆರ್ಕೈವ್ ನಕಲು". Archived from the original on 2011-09-17. Retrieved 2011-01-12.

ಮೂಲಗಳು[ಬದಲಾಯಿಸಿ]

  • ರಾಜಾಧ್ಯಕ್ಷ, ಆಶಿಷ್; ವಿಲ್ಲೆಮೆನ್,ಪೌಲ್. ಎನ್‌ಸೈಕ್ಲೋಪಿಡಿಯಾ ಆಫ್ ಇಂಡಿಯನ್ ಸಿನೆಮಾ . ಲಂಡನ್: ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್; ನವ ದೆಹಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೪
  • ಕಿಶೋರ್, ವಲಿಚಾ. ದ ಮೂವಿಂಗ್ ಇಮೇಜ್ . ಹೈದ್ರಾಬಾದ್: ಒರಿಯಂಟ್ ಲಾಂಗ್ಮನ್, ೧೯೮೮

ಬಾಹ್ಯ ಕೊಂಡಿಗಳು[ಬದಲಾಯಿಸಿ]