ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತ ಇದೆ. ಎವರೆಸ್ಟ್ ಶಿಖರ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಠ್ಮಂಡು.
ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು ಶಾಕ್ಯ ಅರಸುವಂಶದ ಆಡಳಿತಕ್ಕೊಳಪಟ್ಟಿತ್ತು. ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಗೌತಮ ಬುದ್ಧನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆ ನಡೆದವು.
ನೇಪಾಳವು ಸುಮಾರು ೮೦೦ ಕಿ.ಮೀ. ಉದ್ದ ಹಾಗೂ ೨೦೦ ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ. ಈ ಭಾಗಕ್ಕೆ ಕೋಸಿ, ನಾರಾಯಣಿ (ಗಂಡಕಿ) ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ. ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳು ಇವೆ. ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ ೧೦೦೦ದಿಂದ ೪೦೦೦ ಮೀ. ವರೆಗೆ ಎತ್ತರವುಳ್ಳವಾಗಿವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ. ಎವರೆಸ್ಟ್ , ಕಾಂಚನ್ ಜುಂಗಾ, ಅನ್ನಪೂರ್ಣಾ , ಮಕಾಲು , ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. ಅರಣ್ಯನಾಶ ದೇಶದ ಎಲ್ಲಕಡೆ ಅವಿರತವಾಗಿ ಸಾಗಿದ್ದು ಇದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.
ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬತ್ತ, ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು.
ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ, ಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.
ಮಾವೋವಾದಿ ನಾಯಕ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಬುಧವಾರ ಆಯ್ಕೆಯಾದರು. 595 ಸದಸ್ಯ ಬಲದ ನೇಪಾಳ ಸಂಸತ್ನಲ್ಲಿ ಪ್ರಚಂಡ ಅವರ ಪರ 363 ಸದಸ್ಯರು ಮತ್ತು ವಿರುದ್ಧವಾಗಿ 210 ಸದಸ್ಯರು ಮತ ಚಲಾಯಿಸಿದ್ದಾರೆ. 22 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ[೧]
ನೇಪಾಳದ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದ್ದೂರ್ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷ ಯುಎಂಎಲ್ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, 70 ವರ್ಷದ ಶೇರ್ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು. 593 ಸಂಸತ್ ಸದಸ್ಯರ ಪೈಕಿ 558 ಮಂದಿ ಮತಚಲಾಯಿಸಿದರು.ಶೇರ್ ಬಹದ್ದೂರ್ ಅವರು ಜಯಗಳಿಸಲು 297 ಮತಗಳು ಸಾಕಿತ್ತು. ಆದರೆ ಅವರು 388 ಮತ ಪಡೆದಿದ್ದಾರೆ. 1995–1997, 2001–2002, 2004–2005ರವರೆಗೆ ಪ್ರಧಾನಿಯಾಗಿದ್ದ ಶೇರ್ ಬಹದ್ದೂರ್ ಇದೀಗ ನೇಪಾಳದ 40ನೇ ಪ್ರಧಾನಿಯಾಗಿದ್ದಾರೆ.[೨] ಮಾವೋವಾದಿ ನಾಯಕ ಪುಷ್ಪಾ ಕಮಲ್ ದಹಾಲ್ ಅವರು 15 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು- ದೀರ್ಘಾವಧಿಯ ಸ್ಥಳೀಯ ಚುನಾವಣೆ ನೇಪಾಳದಲ್ಲಿ ನಡೆದಿದ್ದರಿಂದ ಬಹದ್ದೂರ್ ದೇವುಬಾಗಾಗಿ ಪಕ್ಕಕ್ಕೆ ನಿಲ್ಲಲು ಒಪ್ಪಿಕೊಂಡರು.[೩]
ಭಾರತದ ಅತಿ ಆಯಕಟ್ಟಿನ ಭೂಪ್ರದೇಶ ನೇಪಾಳದ ರಾಜಕಾರಣ ಅನಿಶ್ಚಿತತೆಗೆ ಬಿದ್ದಿದೆ. ಆಳುವ ಪಕ್ಷದಲ್ಲಿನ ಒಳಜಗಳದಿಂದ ಸಂಸತ್ತಿನ ಕೆಳಮನೆಯನ್ನು ಪ್ರಧಾನಮಂತ್ರಿ ವಿಸರ್ಜಿಸಿದ್ದಾರೆ. ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ತಮ್ಮದೇ ನೇಪಾಳ ಕಮ್ಯುನಿಸ್ಟ್ ಪಾರ್ಟಿ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಲೆಕ್ಕಿಸದೆ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ನೇಪಾಳ ಅವಧಿಗೆ ಮುನ್ನವೇ ಚುನಾವಣೆ ಎದುರಿಸಬೇಕಾಗಿ ಬಂದಿದೆ. ಹಾಲಿ ಅವಧಿಯು 2022ರ ನವೆಂಬರ್ಗೆ ಪೂರ್ಣಗೊಳ್ಳುತ್ತಿತ್ತು. ಹೊಸ ಸರ್ಕಾರದ ಆಯ್ಕೆಗೆ ಮುಂಬರುವ ಏಪ್ರಿಲ್–ಮೇ ಹೊತ್ತಿಗೆ ಮತದಾನ ನಡೆಯಬೇಕಿದೆ.[೪]