ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಹ್ಮಾಂಡದ ಶಕ್ತಿಯ ಮೂಲ ಸೂರ್ಯ. ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದವನು. ಗಿಡ-ಮರ-ಪ್ರಾಣಿ-ಪಕ್ಷಿಗಳೆನ್ನದೆ ಎಲ್ಲಾ ಜೀವಿಗಳಿಗೂ ಸೂರ್ಯಕಿರಣ ಅತ್ಯಂತ ಅವಶ್ಯವಾಗಿರುತ್ತದೆ.ಅನೇಕ ಉಪಯೋಗಗಳನ್ನು ನಾವು ಸೂರ್ಯನಕಿರಣಗಳಿಂದ ಪಡೆಯಬಹುದಾಗಿದೆ.

ಗಿಡಮರಗಳಿಗೆ[ಬದಲಾಯಿಸಿ]

ಹಲಸು-ಮಾವು-ಬೇವು ನಳನಳಿಸುತ್ತಿರುವುದು

ಯಾವುದೇ ಒಂದು ಬೀಜ ಮೊಳಕೆಯೊಡೆದು ಗಿಡ-ಮರವಾಗಿ ಸೊಂಪಾಗಿ ಬೆಳೆಯಲು ಮಣ್ಣು, ನೀರಿನಷ್ಟೇ ಸೂರ್ಯನ ಕಿರಣವೂಅವಶ್ಯ. ಎಲ್ಲಾ ಸಸ್ಯಗಳಿಗೂ ತಮ್ಮ ಆಹಾರ ತಯಾರಿಕೆಗೆ ಸೂರ್ಯ ರಶ್ಮಿ ಬೇಕೇ ಬೇಕು. ನೀರು, ಇಂಗಾಲದ ಡೈ ಆಕ್ಸೈಡ್ ನೊಂದಿಗೆ ಸೂರ್ಯನ ಶಾಖವನ್ನು ಹೀರಿ ಅವುಗಳು ಆಹಾರ ತಯಾರಿಸುವ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಸೂರ್ಯಕಿರಣದ ಮಹತ್ವತೆ ತಿಳಿಯುತ್ತದೆ.ಕೆಲವು ಪಾಚಿ, ಸೂಕ್ಷ್ಮ ಜೀವಿಗಳಿಗೂ ಸಹ ಇದು ಅನ್ವಯಿಸುತ್ತದೆ. ಈ ಕ್ರಿಯೆಯಲ್ಲಿ ಅವುಗಳು ಹೊರಸೂಸುವ ಆಮ್ಲಜನಕವು ನಮ್ಮ ಪ್ರಾಣವಾಯುವಾಗಿದೆ.

ಮಾನವನಿಗೆ[ಬದಲಾಯಿಸಿ]

ಸೂರ್ಯನ ಬೆಳಕಿನಲ್ಲಿ ಮಾನವನಿಗೆ ಅಗತ್ಯವಾದ ಹಲವಾರು ಅಂಶಗಳಿವೆ.[೧] ಮುಖ್ಯವಾಗಿ ವಿಟಮಿನ್ ಡಿ ( ಜೀವಸತ್ವ ಡಿ) ಯ ಮೂಲವಾಗಿದೆ. ಸೂರ್ಯ ಉದಯಿಸುವ ಹೊತ್ತಿನಲ್ಲಿ, ಸೂರ್ಯನ ಕಿರಣಗಳಿಗೆ ನಮ್ಮ ದೇಹವನ್ನು ಒಡ್ಡುವುದರಿಂದ ಅಥವಾ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದ ಅಂಶಗಳು ಸಿಗುತ್ತವೆಯೆಂದು ವೈದ್ಯರೂ ತಿಳಿಸುತ್ತಾರೆ.ಕೊಬ್ಬನ್ನು ಕರಗಿಸಬಲ್ಲ ಪ್ರೋಹಾರ್ಮೋನುಗಳ ಗುಂಪು ವಿಟಮಿನ್ ಡಿ ಆಗಿರುತ್ತದೆ.ಸೂರ್ಯಕಿರಣಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ನೈಸರ್ಗಿಕವಾಗಿ, ದೇಹದಲ್ಲಿರುವ ಕೊಬ್ಬಿನಂಶವು ಡಿ ವಿಟಮಿನ್ ಆಗಿ ಪರಿವರ್ತನೆಯಾಗಲು ಸಹಕಾರಿಯಾಗುತ್ತದೆ. ಮುಂಜಾನೆಯ ಮತ್ತು ಸಾಯಂಕಾಲದ ಎಳೆ ಬಿಸಿಲು ನಮ್ಮ ಚರ್ಮಕ್ಕೆ ಉತ್ತಮವಾಗಿರುತ್ತದೆ. ಚರ್ಮದಲ್ಲಿ ಉಷ್ಣತೆ ಅಧಿಕವಾಗಿ, ರಕ್ತವೂ ಸ್ವಚ್ಛಗೊಳ್ಳುತ್ತದೆ. ಸರಾಗವಾಗಿ ರಕ್ತ ಸಂಚಾರವಾಗಿ ಚರ್ಮವೂ ಆರೋಗ್ಯಯುತವಾಗುತ್ತದೆ.[೨]ಅಲರ್ಜಿಯನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಳಿಯ ರಕ್ತಕಣಗಳು ಅಧಿಕಗೊಳ್ಳಲು ಸಹಾಯಮಾಡಿ ಸೋಂಕು ಬರುವುದು ಕಡಿಮೆಯಾಗುತ್ತದೆ.(ಶರೀರದಲ್ಲಿ ಗಾಯಗಳಾದಾಗ ಸೂರ್ಯ ಕಿರಣಗಳಿಗೆ ಒಡ್ಡಿದರೆ ಬ್ಯಾಕ್ಟೀರಿಯಾಗಳು ಕಮ್ಮಿಯಾಗಿ ಸೋಂಕು ಬರದಂತೆ ತಡೆಯುತ್ತದೆ.) ವಿಟಮಿನ್ ಡಿ ಚರ್ಮವನ್ನು ಪ್ರೋತ್ಸಾಹಿಸುವುದರೊಂದಿಗೆ ನೈಟ್ರಿಕ್ ಆಕ್ಸೈಡ್ ನ ಉತ್ಪಾದನೆಗೂ ಅಗತ್ಯವಾಗಿದೆ, ಹಾಗೂ ಕರುಳಿನಲ್ಲಿರುವ ಕೋಶಗಳಿಗೆ ಕ್ಯಾಲ್ಶಿಯಂ ಮತ್ತು ರಂಜಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮವಾಗಿರುತ್ತದೆ. ಆಸ್ಟಿಯೋ ಪೊರೋಸಿಸ್ ನ್ನು ದೂರಮಾಡುತ್ತದೆ. ಕ್ಯಾನ್ಸರ್, ಮಧುಮೇಹ, ನರಮಂಡಲದ ಸಮಸ್ಯೆಗಳೂ ಕೆಲವೊಮ್ಮೆ ಡಿ ವಿಟಮಿನ್ ಕೊರತೆಯಿಂದ ಬರುವ ಸಾಧ್ಯತೆಗಳಿವೆ. ಇನ್ಸುಲಿನ್, ಶ್ವಾಸಕೋಶದ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.[೩]

ತಂಪಾದ ವಾತಾವರಣದಲ್ಲಿ ಮಾನಸಿಕವಾಗಿ ಕುಗ್ಗುವಿಕೆ ಉಂಟಾಗಬಹುದು. ಇದಕ್ಕೆ ಬಿಸಿಲಿನ ಕೊರತೆಯೇ ಕಾರಣವಾಗಿರುತ್ತದೆ. ಖಿನ್ನತೆಯನ್ನು ದೂರಮಾಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಬಿಸಿಲು ಮಿದುಳಿನ ಸಿರೊಟೊನಿನ್ ಎಂಬ ರಸದೂತವನ್ನು ಸರಿಯಾದ ಮಟ್ಟಕ್ಕೆ ತರುತ್ತದೆ.[೪]ನಿದ್ರೆಗೆ,ಹೃದಯಕ್ಕೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಗಳಿಗೂ ಸೂರ್ಯನ ಕಿರಣಗಳಿಂದ ಪ್ರಯೋಜನಗಳಿವೆ.


ಸೂರ್ಯನಿಂದ ಬರುವ ಕೆಂಪು ಬಣ್ಣದ ಕಿರಣಗಳು ಮೈಟೊಕಾಂಡ್ರಿಯಾದ ( ಮೈಟೋಕಾಂಡ್ರಿಯನ್) ಕಾರ್ಯವನ್ನು ಹೆಚ್ಚಿಸಿ, ದೇಹದಲ್ಲಿ ಶಕ್ತಿ ವೃದ್ಧಿಯಾಗಿ ಆರೋಗ್ಯ ಸುಧಾರಣೆಗೆ ಸಹಾಯಮಾಡುತ್ತದೆ. ಸೂರ್ಯನ ನೀಲಿ ಬೆಳಕು ದೇಹದಲ್ಲಿ ಅಗತ್ಯ ಪ್ರಮಾಣದ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಸೂರ್ಯನಿಂದ ಬರುವ ನೇರಳಾತೀತ ಬೆಳಕು/ ವಿಕಿರಣವು ಸ್ವಲ್ಪ ಪ್ರಮಾಣದಲ್ಲಿ ದೇಹಕ್ಕೆ ಪೂರಕವಾಗಿದೆ. ಕೊಂಚಮಟ್ಟಿಗೆ ಮಧುಮೇಹ ಬರದಂತೆ ತಡೆಯುವಲ್ಲಿ ಸಹಕಾರಿಯಾಗಿದೆ. ಸೂರ್ಯನ ಕಿರಣ ಮೆಲಟೋನಿನ್ ಮೇಲೆ ಪ್ರಭಾವ ಬೀರುವುದರಿಂದಾಗಿ, ನಿದ್ರೆಗೂ ಸಹಕಾರಿಯಾಗಿರುತ್ತದೆ.[೫]

ನವಜಾತ ಶಿಶುಗಳ ಕಾಮಾಲೆ ರೋಗಕ್ಕೆ, ಸೂರ್ಯನ ಎಳೆಯ ಕಿರಣಗಳಿಗೆ ಶಿಶುಗಳ ದೇಹವನ್ನು ಒಡ್ಡಿದರೆ ಅದುವೇ ಔಷಧವಾಗಿರುತ್ತದೆ. ದೊಡ್ಡವರಿಗೂ ಸಹ ಸೂರ್ಯಸ್ನಾನದಿಂದ ಮನಸ್ಸು- ದೇಹ ಆರೋಗ್ಯಯುತವಾಗುತ್ತದೆ.ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿಯಾಗಿದೆ. ಬಿಸಿಲಿನಿಂದ ಚರ್ಮವು ಕಪ್ಪಾಗುವುದು(ಟ್ಯಾನಿಂಗ್) ಸರಿ.ಅತಿಯಾದ ಬಳಕೆ ಸಲ್ಲ. ದೇಹದ ಹಲವಾರು ಅಗತ್ಯತೆಗಳು ಸೂರ್ಯನ ಕಿರಣಗಳಿಂದ ಪರಿಪೂರ್ಣಗೊಳ್ಳುತ್ತವೆ. ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳು ಸಹ ಆರೋಗ್ಯ ಸರಿಯಿರದ ಸಂದರ್ಭಗಳಲ್ಲಿ ಬಿಸಿಲಲ್ಲಿ ಮಲಗಿ ಆರೋಗ್ಯ ಸುಧಾರಿಸಿಕೊಳ್ಳುತ್ತವೆ.

ಆಹಾರ ಸಂರಕ್ಷಣೆ[ಬದಲಾಯಿಸಿ]

ಒಣಗಿದ/ಒಣಗುತ್ತಿರುವ ಹಣ್ಣುಗಳು

ಕೆಲವೊಂದು ಹಣ್ಣು-ಕಾಯಿಪಲ್ಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿಟ್ಟರೆ ಬಹಳಷ್ಟು ಸಮಯ ಹಾಳಾಗದೆಯೆ ಉಳಿಯುತ್ತದೆ. ಹಿಂದಿನ ಕಾಲದಲ್ಲಿ ಮಳೆಗಾಲದ ಉಪಯೋಗಕ್ಕಾಗಿ ವಿಧ ವಿಧದ ಹಪ್ಪಳ, ಸಂಡಿಗೆ, ಮಾವಿನ ಹಣ್ಣಿನ ರಸದಿಂದ ಮಾಡುವ ಮಾಂಬಳ, ಬಾಳುಕ್ಕು ಮೆಣಸುಗಳನ್ನು ಬೇಸಗೆಯಲ್ಲಿ ಮಾಡಿ ಒಣಗಿಸಿಡುತ್ತಿದ್ದರು. ಹಲಸು ( ಹಲಸಿನಕಾಯಿ- ಹಣ್ಣು- ಬೀಜ( ಬೇಯಿಸಿ) ಬಾಳೆಕಾಯಿ- ಬಾಳೆ ಹಣ್ಣು, ಮೊದಲಾದವುಗಳನ್ನು ಹಳ್ಳಿಯ ಕಡೆಗಳಲ್ಲಿ ಸಂರಕ್ಷಿಸಿಟ್ಟುಕೊಳ್ಳುತ್ತಾರೆ. ಇಂತಹ ಹಣ್ಣುಗಳಲ್ಲಿ ಜೀವಸತ್ವಗಳಿರುತ್ತವೆ. ನಾರಿನಂಶವನ್ನೂ ಹೊಂದಿರುವುದರಿಂದ ಚಯಾಪಚಯ ಕ್ರಿಯೆಯನ್ನು ಸುಲಭವಾಗಿಸಿ ಮಲಬಧ್ಢತೆಯನ್ನು ನಿವಾರಿಸುತ್ತವೆ.

ಇತರ ಪ್ರಯೋಜನಗಳು[ಬದಲಾಯಿಸಿ]

ಬಿಸಿಲಿನಲ್ಲಿ

ಹಳ್ಳಿಯಲ್ಲಿ ಕೃಷಿಕರು ತಮ್ಮ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಕಾಫಿಬೀಜ ಹಾಗೂ ಆಹಾರ ಧಾನ್ಯಗಳಾದ ಭತ್ತ, ರಾಗಿ, ಗೋಧಿ, ನೆಲಗಡಲೆಯೇ ಮೊದಲಾದವುಗಳನ್ನು ಬಿಸಿಲಲ್ಲೊಣಗಿಸಿ ರಕ್ಶಿಸಿಟ್ಟುಕೊಳ್ಳುತ್ತಾರೆ.ಪಟ್ಟಣ- ಹಳ್ಳಿಗಳೆನ್ನದೆ ಈಗೀಗ ಎಲ್ಲಾ ಕಡೆಗಳಲ್ಲಿಯೂ ತಮ್ಮ ತಮ್ಮ ಮನೆ, ಆಫೀಸುಗಳ ತಾರಸಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಂಡಿರುತ್ತಾರೆ. ಸೂರ್ಯನ ಕಿರಣದ ಶಕ್ತಿಯನ್ನು ಕೇಂದ್ರೀಕರಿಸಿ ಶಾಖ ಶಕ್ತಿಯಾಗಿ ಪರಿವರ್ತಿಸಿ ಸೌರ ಒಲೆ( ಸೌರ ಕುಕ್ಕರ್)ಯನ್ನು ಆಹಾರವನ್ನು ಬೇಯಿಸಲು ಉಪಯೋಗಿಸುವುದನ್ನೂ ಕಾಣಬಹುದಾಗಿದೆ. ಸೌರ ಹಸಿರು ಮನೆ, ನೀರು ಬಿಸಿಯಾಗಿಸಲು ಸೋಲಾರ್ ವಾಟರ್ ಹೀಟರ್, ಸೌರ ವಿದ್ಯುತ್, ಸೌರ ಶಕ್ತಿಯನ್ನುಪಯೋಗಿಸುವ ವಾಹನಗಳೂ ಹೆಚ್ಚುತ್ತಿವೆ. ಬಳಸಿದರೆ ಮುಗಿಯದಂತಹ ಈ ರೀತಿಯ ಇಂಧನ-ಶಕ್ತಿಯನ್ನು ಉಪಯೋಗಿಸುವುದು ನಮಗೆ,ಪರಿಸರ- ಪ್ರಕೃತಿಗೆ ಹಿತಕರವೂ ಆಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

[[೧]]


ಉಲ್ಲೇಖಗಳು[ಬದಲಾಯಿಸಿ]

  1. https://kannada.boldsky.com/health/wellness/2014/6-reasons-why-sunlight-is-good-health-008746.html
  2. https://www.aveeno.com/journal/4-benefits-sun-your-skin-and-well-being
  3. https://www.healthline.com/nutrition/vitamin-d-from-sun
  4. https://www.healthline.com/health/depression/benefits-sunlight
  5. https://kannada.news18.com/news/lifestyle/health-benefits-of-sunlight-amk-ssd-669785.html