ಮಧುಮೇಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುಮೇಹದ ಪ್ರಮುಖ ಲಕ್ಷಣಗಳು

ಪೀಠಿಕೆ[ಬದಲಾಯಿಸಿ]

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. [೧] ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ:ಪದೇ ಪದೇ ಮೂತ್ರವಿಸರ್ಜಿಸುವುದು, ತೀವ್ರವಾಗಿ ಬಾಯಾರಿಕೆ ಹಾಗೂ ಹಸಿವಾಗುವುದು,ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ, ಆಯಾಸ,ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು. ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.

ಮಧುಮೇಹ[ಬದಲಾಯಿಸಿ]

ಸಕ್ಕರೆ ಕಾಯಿಲೆ,ಇದನ್ನು ಮಧುಮೇಹ,ಡಯಾಬಿಟೀಸ್,ಶುಗರ್‌ ಎಂದು ನಾನಾ ವಿಧದಲ್ಲಿ ಕರೆಯುತ್ತಾರೆ. ರಕ್ತದಲ್ಲಿ ಗ್ಲುಕೋಸ್‌ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ. ವ್ಯಕ್ತಿಯ ದೇಹದಲ್ಲಿ ಮೆದೋಜೀರಕ ಗ್ರಂಥಿ ಇನ್ಸುಲಿನ್ ಅನ್ನೋ ಹಾರ್ಮೋನ್‌ನನ್ನು ಉತ್ಪಾದಿಸುತ್ತದೆ.ಇದು ಆಹಾರ ಸೇವನೆಯ ನಂತರ ಅಂಗಾಂಶಗಳಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿರುವಾಗ ಅಥವಾ ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಕಾಯಿಲೆ ಶುರುವಾಗುತ್ತದೆ.

ವಿಧಗಳು[ಬದಲಾಯಿಸಿ]

ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಇನ್ಸುಲಿನ್ ಅವಲಂಭಿತ ಡಯಾಬಿಟೀಸ್. ಮೆದೊಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗುತ್ತದೆ. ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಿಗೆ ಮತ್ತು ಹದಿಹರೆಯದವರಲ್ಲಿ ಕಂಡುಬರುತ್ತದೆ. ಕೆಲವೊಂದು ಬಾರಿ ೩೦ ವರ್ಷ ದಾಟಿದವರಲ್ಲಿಯೂ ಕಾಣಿಸುತ್ತದೆ. ಎರಡನೆಯದು ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ೪೫ ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತದೆ. ಕೆಲವೊಂದು ಬಾರಿ ಮಕ್ಕಳಲ್ಲಿ, ಸ್ಥೂಲಕಾಯ,ಕಡಿಮೆ ದೈಹಿಕ ಸಕ್ರಿಯತೆ ಇರುವವರಲ್ಲಿ ಕಂಡುಬರುತ್ತದೆ.

ರೋಗ ಲಕ್ಷಣಗಳು[ಬದಲಾಯಿಸಿ]

  1. ಅತಿಯಾಗಿ ಬಾಯಾರಿಕೆಯಾಗುವುದು. ಬಾಯಾರಿಕೆ ಕೇವಲ ಮಧುಮೇಹದ ಲಕ್ಷಣ ಮಾತ್ರ ಅಲ್ಲ. ರಕ್ತದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಿದರೆ ಅಂದರೆ ರಕ್ತದ ಜಯಾನುಸ್ಥಿತಿಯಲ್ಲಿ ಸಾಕಷ್ಟು ಇಳಿತ ಉಂಟಾದರೆ ಅದರ ಒಂದು ಲಕ್ಷಣವಾಗಿ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ.
  2. ಹಸಿವಾಗುವುದು
  3. ದೃಷ್ಟಿ ಮಂಜಾಗುವಿಕೆ
  4. ತೂಕ ಇಳಿಯುವಿಕೆ
  5. ಬೆವರು, ಸುಸ್ತು
  6. ಗಾಯ ಬೇಗ ವಾಸಿಯಾಗದೇ ಇರುವುದು.
  7. ಪದೇ ಪದೇ ಮೂತ್ರವಿಸರ್ಜನೆ
  8. ಗಡಸುಚರ್ಮ
  9. ಕೈ ಕಾಲುಗಳ ಅಡಿಯಲ್ಲಿಜುಮ್ಮೆನಿಸುವುದು.

ಕೆಲವೊಂದು ಬಾರಿ ಮೇಲಿನ ಯಾವುದೇ ಅಂಶ ಕಂಡುಬರದೆ ಇರಬಹುದು. ರಕ್ತ ಪರೀಕ್ಷೆ ಮಾಡಿದಾಗ ಗೊತ್ತಾಗುತ್ತದೆ.

ಅಪಾಯಕಾರಿ ಪರಿಣಾಮಗಳು[ಬದಲಾಯಿಸಿ]

  1. ಸ್ಟ್ರೋಕ್
  2. ರಕ್ತನಾಳಗಳಲ್ಲಿ ತೊಂದರೆ
  3. ಹೃದಯಾಘಾತ
  4. ಮೂತ್ರಪಿಂಡಗಳಿಗೆ ಹಾನಿ
  5. ವಂಶಪಾರಂಪರ್ಯ

ಚಿಕಿತ್ಸಾ ಕ್ರಮಗಳು[ಬದಲಾಯಿಸಿ]

ಪ್ರಕೃತಿ ಚಿಕಿತ್ಸೆಯು ಡ್ರಗ್‌ಲೆಸ್‌ ಚಿಕಿತ್ಸೆಯಾಗಿದ್ದು ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸದೇ ಇದ್ದರು ಅದನ್ನು ಹತೋಟಿಯಲ್ಲಿಡಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಖಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟು ಕಾಯಿಲೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಗುರಿಯಾಗಿದೆ.

ದೈಹಿಕ ವ್ಯಾಯಾಮ[ಬದಲಾಯಿಸಿ]

ದೈಹಿಕ ವ್ಯಾಯಾಮವಿಲ್ಲದೆ ಜನರು ಹೆಚ್ಚು ದೇಹವನ್ನು ಬೆಳೆಸಿಕೊಂಡು ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಅದನ್ನು ತಡೆಗಟ್ಟಲು ಮತ್ತು ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅತಿ ಮುಖ್ಯ.ಜೊತೆಗೆ ಯೋಗಾಭ್ಯಾಸ, ಪ್ರಾಣಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಪಯುಕ್ತವಾಗಿದೆ.ಯೋಗಾಭ್ಯಾಸದಿಂದ ಹಲವಾರು ಕಾಯಿಲೆಗಳಿಗೆ ಮುಕ್ತಿ ದೊರಕಿರುವುದನ್ನು ನಾವು ಈಗಾಗಲೇ ಅನೇಕ ಉದಾಹರಣೆಗಳಿಂದ ಖಚಿತಪಡಿಸಿಕೊಂಡಿದ್ದೇವೆ.

ಆಹಾರ ಪದ್ಧತಿ[ಬದಲಾಯಿಸಿ]

ಈಗ ಎಲ್ಲಾ ಕಡೆ ಕಲಬೆರಕೆ ಆಹಾರ, ಅನಾರೋಗ್ಯಕರ ಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು, ಸಿಹಿಯಾದ ಮಾವು, ಹಲಸು ಇಂತಹ ಕ್ಯಾಲೋರಿ ಇರುವ ಹಣ್ಣುಗಳನ್ನು ಒಂದು ಹೊತ್ತಿನ ಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ನಂತರ ಮುಂಚಿನ ದಿನ ನೀರಿನಲ್ಲಿ ನೆನೆ ಹಾಕಿದ್ದ ಮೆಂತ್ಯೆಯನ್ನು ಕುಡಿಯಬೇಕು. ಬೆಂಡೆಕಾಯಿಯನ್ನು ತುಂಡರಿಸಿ ನೀರಲ್ಲಿ ಹಾಕಿ ಅದನ್ನು ಕುಡಿಯುವುದು ಅಥವಾ ಅಗಸೆ ಬೀಜವನ್ನು ತಿನ್ನಬೇಕು. ಬೆಳಗ್ಗಿನ ಉಪಹಾರಕ್ಕೆ ಗೋಧಿ, ರಾಗಿ, ನವಣೆಯಂತಹ ನವಧಾನ್ಯಗಳಿಂದ ಮಾಡಿರುವ ತಿಂಡಿಗಳನ್ನು ತಿನ್ನಬೇಕು. ಮದ್ಯಾಹ್ನಕ್ಕೆ ಸಣ್ಣ ಪ್ರಮಾಣದಲ್ಲಿ ಅನ್ನ ಮತ್ತು ಹೆಚ್ಚಾಗಿ ತರಕಾರಿಗಳನ್ನು ಹೊಟ್ಟೆ ತುಂಬುವಷ್ಟು ತಿನ್ನಬೇಕು. ಜೊತೆಗೆ ಹಣ್ಣುಗಳು, ಸೊಪ್ಪಿನ ಪಲ್ಯಗಳನ್ನೂ ಸಹ ಸೇವಿಸಬೇಕು. ರಾತ್ರಿ ಊಟಕ್ಕೆ ಸಲಾಡ್, ಮಜ್ಜಿಗೆ ಅಥವಾ ಚಪಾತಿ, ತರಕಾರಿ ಪಲ್ಯ, ಹೀಗೆ ಆಹಾರ ಸೇವಿಸಬೇಕು. ಮುಖ್ಯವಾಗಿ ಆಹಾರ ಪದ್ಧತಿಯಿಂದಲೇ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಡಬಹುದು. ಇವಿಷ್ಟಲ್ಲದೆ ಸೂಜಿಚಿಕಿತ್ಸೆ ಮತ್ತು ನೀರಿನ ಕೆಲವೊಂದು ಚಿಕಿತ್ಸೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಪರಿಣಾಮಕಾರಿ. ಈ ಎಲ್ಲಾ ಅಭ್ಯಾಸಗಳಿಂದ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಡ್ಡಪರಿಣಾಮದಿಂದ ಕಾಪಾಡಿಕೊಳ್ಳಬಹುದು. ಪ್ರಕೃತಿಚಿಕಿತ್ಸೆಯಲ್ಲಿ ಎಲ್ಲಾ ವಿಧಧ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಮತ್ತು ಹೆಚ್ಚಾಗದಂತೆ ನಿಯಂತ್ರಣದಲ್ಲಿರಿಸಲು ಅನೇಕ ಚಿಕಿತ್ಸೆಗಳಿವೆ.

ಉಲ್ಲೇಖ[ಬದಲಾಯಿಸಿ]

  1. https://www.webmd.com/diabetes/default.htm
  2. https://www.who.int/news-room/fact-sheets/detail/diabetes
  3. ನಾವು ಭವಿಷ್ಯದಲ್ಲಿ ಸಕ್ಕರೆ ಕಾಯಿಲೆ ಬಾರದಂತೆ ಹೇಗೆ ನೋಡಿಕೊಳ್ಳಬಹುದು? Archived 2023-08-10 ವೇಬ್ಯಾಕ್ ಮೆಷಿನ್ ನಲ್ಲಿ.

ಇದನ್ನೂ ನೋಡಿ[ಬದಲಾಯಿಸಿ]

ಮಧುಮೇಹ ಮೆಲ್ಲಿಟಸ್ 2ನೇ ವಿಧ

  1. ಮಹಾಮಾರಿ ಮಧುಮೇಹ, ಪ್ರಜಾವಾಣಿ, ಡಾ. ವೀಣಾ ಭಟ್‌ಭದ್ರಾವತಿ, 11/14/2015
"https://kn.wikipedia.org/w/index.php?title=ಮಧುಮೇಹ&oldid=1204222" ಇಂದ ಪಡೆಯಲ್ಪಟ್ಟಿದೆ