ಬಿ.ಆರ್.ಪಂತುಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ.ಆರ್.ಪಂತುಲು
ಬಿ ಆರ್ ಪಂತುಲು
ಜನನ
ಬಡಗೂರು ರಾಮಕೃಷ್ಣ ಪಂತುಲು(

(೧೯೧೦-೦೭-೨೬)೨೬ ಜುಲೈ ೧೯೧೦
ಮರಣ8 October 1974(1974-10-08) (aged 64)
ರಾಷ್ಟ್ರೀಯತೆಭಾರತಿಯ
ಉದ್ಯೋಗನಟ, ನಿರ್ದೇಶಕ. ನಿರ್ಮಾಪಕ
ಜೀವನ ಸಂಗಾತಿಬಿ.ಆರ್.ಅಂಡಾಳಮ್ಮಲ್
ಮಕ್ಕಳುಬಿ.ಆರ್ ವಿಜಯಲಕ್ಷ್ಮಿ, ಬಿ. ಆರ್.ರವಿಶಂಕರ್.

ಬಡಗೂರು ರಾಮಕೃಷ್ಣ ಪಂತುಲು(೧೯೧೧ ಜುಲೈ ೨೮ - ೧೯೭೪ ಅಕ್ಟೋಬರ್ ೮) - ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ,ಬೆಳ್ಳಿತೆರೆಯ ಗಾರುಡಿಗರೆಂದೇ ಪ್ರಸಿದ್ಧಿ.

ಜೀವನ[ಬದಲಾಯಿಸಿ]

ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೮ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು,ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು.ಬಾಲ್ಯದಿಂದಲೀ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು.ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು,ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು.ಪಂತುಲು ಅವರ ತಂದೆ ಸಂಗೀತ,ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು.ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು.ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು.ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು.ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿಯೇ ನಡೆದರೂ ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶ ಇರದ ಕಾರಣ ತಾತನ ಮನೆಯಾದ ಕೋಲಾರದಲ್ಲಿದ್ದು ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು.ಶಾಲಾ ಜೀವನದಲ್ಲಿಯೂ ಅವರು ನಾಟಕದ ಅಭಿನಯದಲ್ಲಿ ಪ್ರಸಿದ್ದಿ ಪಡೆದಿದ್ದರು. ಪಂತುಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು.ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೆ ಹೆಚ್ಚು.ಒಂದುದಿನ ಮಕ್ಕಳಿಗೆ ನಾಟಕ ಕಲಿಸುತ್ತಿರುವಾಗ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಬಂದು ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತುಲು ಅವರನ್ನು ಕಂಡು ಕೆಂಡಾಮಂಡಲವಾದರು.ಇದು ಸರಿಯಲ್ಲವೆಂದೂ ಇನ್ನೊಮ್ಮೆ ಹೀಗಾದರೆ ವಜಾಮಾಡುವೆನೆಂದು ನೋಟೀಸ್ ಜಾರಿ ಮಾಡಿದರು.ಇದರಿಂದ ನೊಂದ ಪಂತುಲು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲಿಯೇ ಬದುಕುಕನ್ನು ಅರಸುತ್ತ ಬೆಂಗಳೂರಿಗೆ ಬಂದು ಅವರ ಹಿರಿಯರಾದ ಪಾಪಯ್ಯನವರಿದ್ದ ಮಹಮ್ಮದ್ ಪೀರ್ ಅವರ "ಚಂದ್ರ ಕಲಾ"ನಾಟಕ ಮಂಡಳಿಗೆ ಸೇರಿದರು.ಮುಂದೆ ಇವರಿಗೆ ಹೆಚ್ ಎಲ್ ಎನ್ ಸಿಂಹ ಮತ್ತು ಮಹಮದ್ ಪೀರ್ ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.ಪಂತುಲು ಅವರ ಮಗ ರವಿಶಂಕರ್ ಕೆಲ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು,ಮಗಳು ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದ್ದರು.

ಚಿತ್ರರಂಗ[ಬದಲಾಯಿಸಿ]

೧೯೩೬ರಲ್ಲಿ ಸಂಸಾರ ನೌಕೆ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.ರಾಧಾ ರಮಣ ಚಲನಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು.

೧೯೫೫ರಲ್ಲಿ ಪ.ನೀಲಕಂಠನ್ ಸಹಯೋಗದೊಂದಿಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ, ಮೊದಲ ತೇದಿ ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ ಶಿವಶರಣೆ ನಂಬೆಕ್ಕ.

೧೯೫೭ರಲ್ಲಿ ಕುತೂಹಲಭರಿತ ರತ್ನಗಿರಿ ರಹಸ್ಯ ಎಂಬ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ, ಟಿ ಜಿ ಲಿಂಗಪ್ಪ ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ ಸ್ಕೂಲ್ ಮಾಸ್ಟರ್ ಚಿತ್ರವನ್ನು ೧೯೫೮ರಲ್ಲಿ ನಿರ್ಮಿಸಿದರು.

ಅನಂತರ ಅವರ ಪದ್ಮಿನಿ ಪಿಕ್ಚರ್ಸ್‌‍ನಲ್ಲಿ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ,ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು. ಇವುಗಳಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು."ಶ್ರೀ ಕೃಷ್ಣದೇವರಾಯ" ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರಕಿತು.ಇದೇ ಚಿತ್ರದಲ್ಲಿ ಬಿ.ಆರ್.ಪಂತುಲು ಅವರು ನಿರ್ವಹಿಸಿದ ತಿಮ್ಮರಸುವಿನ ಪಾತ್ರಕ್ಕೆ ಶ್ರೇಷ್ಥ ನಟ ಪ್ರಶಸ್ತಿ ದೊರೆಯಿತು.ಶ್ರೀ ಕೃಷ್ಣದೇವರಾಯ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸಿದ್ದರು. ಅದು ಆ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್‌ಕುಮಾರ್ ಅವರಿಗೆ ನೀಡಬೇಕಿತ್ತು ಎನ್ನುವುದು ಅವರ ವಾದವಾಗಿತ್ತು.ಬಿ.ಆರ್.ಪಂತುಲು ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ನಾಲ್ಕು ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಚಿತ್ರೋದ್ಯಮಕ್ಕಾಗಿ ತಮ್ಮನ್ನೇ ತಾವು ತೇದುಕೊಂಡ ಮಹಾಪರುಷ. ಇವರು ಉದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಚಿತ್ರರಂಗವಿನ್ನೂ ಕುಂಟುತ್ತಿತ್ತು. ಮದ್ರಾಸಿನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕಬೇಕಾಗಿತ್ತು. ಇದನ್ನ ಮನಗಂಡ ಪಂತುಲು ತಮಿಳರೊಂದಿಗೇ ಕಲೆತು ಮೊಟ್ಟಮೊದಲಿಗೆ `ಮೊದಲ ತೇದಿ' ಚಿತ್ರ ನಿರ್ಮಿಸಿದರು. ಇದು ಸರ್ಕಾರಿ ನೌಕರನ ಬದುಕಿನ ಬವಣೆಯ ಸುತ್ತಲಿನದು. ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಾದ್ದು. ಚಿತ್ರ ಹಿಟ್ ಆಯ್ತು. ಧೈರ್ಯ ಬಂತು. ತಮಿಳಿನ ಒಡನಾಟದಲ್ಲಿದ್ದುಕೊಂಡೇ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು ಇದಿಷ್ಟೇ ಅಲ್ಲದೆ ರಾಜ್ ಕುಮಾರ್, ನರಸಿಂಹರಾಜು, ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲ್ ರಂತಹ ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟವರು. ರಾಜ್ ಕುಮಾರ್ ಗಾಗಿಯೇ ಗಾಳಿಗೋಪುರ, ಸಾಕುಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಚಿತ್ರಗಳನ್ನು ಮಾಡಿದ ಪಂತುಲು, ನರಸಿಂಹರಾಜು ಅವರಿಗಾಗಿಯೇ ಪ್ರತ್ಯೇಕ ಪಾತ್ರ ಸೃಷ್ಟಿಸಿ ಹಾಸ್ಯದ ಹೊಸ ಟ್ರ್ಯಾಕೊಂದನ್ನು ಅನಿವಾರ್ಯವಾಗಿ ಚಿತ್ರದಲ್ಲಿರುವಂತೆ ನೋಡಿಕೊಂಡವರು. ಹಾಗೆಯೇ ಇವರ ಸರಿಸುಮಾರು ಎಲ್ಲಾ ಚಿತ್ರಗಳಿಗೂ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶಕರಾಗಿದ್ದುದು ಒಂದು ವಿಶೇಷವೇ.ನಮನ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

  • ೧೯೫೮: ಮೂರನೇ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಲ್ ಇಂಡಿಯಾ ಸರ್ಟಿಫಿಕೇಟ್ ಆಫ್ ಮೆರಿಟ್ - ಸ್ಕೂಲ್ ಮಾಸ್ಟರ್
  • ೧೯೫೯: ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೆರಿಟ್ ಪ್ರಮಾಣಪತ್ರ - ವೀರಪಾಂಡಿಯಾ ಕಟ್ಟಬೊಮ್ಮನ್
  • ೧೯೬೧: ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೆರಿಟ್ ಪ್ರಮಾಣಪತ್ರ - ಕಿತ್ತೂರು ಚೆನ್ನಮ್ಮ
  • ೧೯೬೧: ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ - ಕಪ್ಪಾಲೋಟಿಯಾ ತಮಿಜಾನ್

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

೧೯೬೯-೭೦: ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಶ್ರೀ ಕೃಷ್ಣದೇವರಾಯ

ಅಂತ್ಯ[ಬದಲಾಯಿಸಿ]

ಕಾಲೇಜು ರಂಗ ಚಿತ್ರದ ಸಿದ್ಧತೆಯಲ್ಲಿದ್ದಾಗ, ಅಕ್ಟೋಬರ್ ೮, ೧೯೭೪ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿನಿ ಪಿಕ್ಚರ್ಸ್‌ನ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು.

ಪುಟ್ಟಣ್ಣ ಕಣಗಾಲರ ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ.ಆರ್. ಪಂತುಲು. ಅವರು ಅಭಿನಯ-ನಿರ್ದೇಶನ-ನಿರ್ಮಾಣ ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದ ಕಲಾವಿದ. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು ಕನ್ನಡ ಚಿತ್ರರಂಗದತ್ತ ಭಾರತದ ಇಡೀ ಚಿತ್ರರಂಗ ತಿರುಗಿ ನೋಡು ವಂಥ ಇತಿಹಾಸವನ್ನೇ ನಿರ್ಮಿಸಿತು. ಸುಮಾರು 20 ಚಿತ್ರಗಳಲ್ಲಿನ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಾಯಕನಟ ನಾಗಿ ಅಭಿನಯಿಸಿರುವುದೊಂದು ವಿಶೇಷ. ಜೊತೆಗೆ ಸ್ವತಃ ಬಿ.ಆರ್.ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣ ವಾಗುತ್ತಿದ್ದುದು ಆ ಚಿತ್ರಗಳ ಇನ್ನೊಂದು ಸುವಿಶೇಷ. 1955ರಲ್ಲಿ ಪದ್ಮಿನಿ ಪಿಕ್ಚರ್ಸ್‌ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರೂ ಅವರು ನಿರ್ಮಿಸಿದ ಚಿತ್ರಗಳನ್ನು "ಪಂತುಲು ಚಿತ್ರಗಳು"ಎಂದು ಕರೆಯುವುದೇ ವಾಡಿಕೆ.ಪಂತುಲುರವರನ್ನು ಬಹಳ ಮುಖ್ಯ ವಾಗಿ ನೆನೆಯಬೇಕಾದುದು ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದ ಧ್ಯಾನದ ಆರಂಭದಿಂದಲೇ."ಸ್ವಾಮಿ ದೇವನೆ" ಎಂಬ ಒಂದು ಹಾಡು ಸಾಕು ಪಂತುಲುರವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು.ಪಂತುಲು ಅವರು ಅದ್ಯಾಪಕರಾಗಿದ್ದಾಗ ಬಳಸುತ್ತಿದ್ದ "ಸೋಸಲೆ ಅಯ್ಯಾಶಾಸ್ತ್ರಿ"ಗಳ ಆ ಪ್ರಾರ್ಥನಾ ಗೀತೆ ಹೀಗಿದೆ- ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತುತೇ ಪ್ರೇಮದಿಂದದಿ ನೋಡು ನಮ್ಮನು ತೇ ನಮೋಸ್ತುತೇ॥ ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೇ...॥ ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನಾ ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ... ॥ ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆ ಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದೆ ಬಹು ಮುಖ್ಯವಾದ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥ ನೆಯೇ ಆಗಿ ಹೋಗಿತ್ತು. ಸ್ಕೂಲ್‌ಮಾಸ್ಟರ್’ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ವಿ.ಆರ್. ಪಂತುಲುರವರ ಮನೋಜ್ಞ ಅಭಿನಯ-ಹಾವಭಾವ, ಮೇಷ್ಟ್ರರ ಹೆಂಡತಿಯಾಗಿ (ನಿಜ ಜೀವನದಲ್ಲಿಯೂ ಹೆಂಡತಿಯಾಗಿದ್ದವರು) ಕಲಾವಿದೆ ಎಂ.ವಿ. ರಾಜಮ್ಮನವರು ಪಂತುಲುವಿಗೆ ತಕ್ಕಂತೆ ಅಭಿನಯಿಸಿದ್ದರು.೨೦೧೧ ಜುಲೈಗೆ ೨೮ಕ್ಕೆ ಕನ್ನಡ ಚಿತ್ರರಂಗ ಕಂಡ ಮರೆಯಬಾರದ ಮಹಾನ್ ನಿರ್ಮಾಪಕ- ನಿರ್ದೇಶಕರು ಹುಟ್ಟಿ ೧೦೦ ವರ್ಷಗಳು ತುಂಬುತ್ತವೆ. ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲೇಬೇಕಾದ ಕನ್ನಡ ಚಿತ್ರರಂಗ ಭೂಮಿಯ ಮುಖ್ಯ ಪರ್ವವಿದು..ಆದ್ದರಿಂದ ಬಿ.ಆರ್. ಪಂತುಲುರವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮವಾಗಿ ಕನ್ನಡದ ಕಂದಮ್ಮಗಳು ಅವರ ಸಿನಿಮಾಗಳನ್ನು ವೀಕ್ಷಿಸಿ ಬೆಳೆಯುವಂತಹ ಸದವಕಾಶವನ್ನು ನಮ್ಮ ಫಿಲಂಚೇಂಬರ್ ಹಾಗೂ ಟಿವಿ ಚಾನೆಲ್‌ಗಳು ಕಲ್ಪಿಸಬೇಕಾಗಿದೆ. ಏಕೆಂದರೆ ಇದು ಕನ್ನಡ ಚಿತ್ರರಂಗದ ಪರಂಪರೆಗೆ ದೊರಕುವ ಜಯ ಹಾಗೂ ಪ್ರಗತಿಯ ದಾರಿ.ನಮನ

ದಣಿವಿಲ್ಲದ ಧಣಿ[ಬದಲಾಯಿಸಿ]

ಬಿ.ಆರ್.ಪಂತುಲು ಕನ್ನಡದ ಮೇರು ನಿರ್ದೇಶಕ, ನಿರ್ಮಾಪಕ, ನಟ ಬಿ.ಆರ್.ಪಂತುಲು ಅವರನ್ನು ಕುರಿತಂತೆ ಲೇಖಕ ಅ.ನಾ.ಪ್ರಹ್ಲಾದರಾವ್ ರಚಿಸಿರುವ `ದಣಿವಿಲ್ಲದ ಧಣಿ` ಪುಸ್ತಕವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ್ದು. ದಿನಾಂಕ 15.11.206ರಂದುಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ . ಖ್ಯಾತ ಕಲಾವಿದೆ ಪದ್ಮಶ್ರಿ ಡಾ. ಭಾರತಿ ವಿಷ್ಣುವರ್ಧನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕ, ಪತ್ರಕರ್ತ ಶ್ರೀ ಜೋಗಿ (ಗಿರೀಶ್ ರಾವ್) ಪುಸ್ತಕ ಕುರಿತು ಮಾತನಾಡಿದರು. ನಿವೃತ್ತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಶಿಕ್ಷಣ ತಜ್ಞ ವೋಡೆ ಕೃಷ್ಣ ಪಾಲ್ಗೊಂಡಿದ್ದರು.

ಬಿ.ಆರ್. ಪಂತುಲು ನಿರ್ದೇಶನದ ಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ
೧೯೫೭ ರತ್ನಗಿರಿ ರಹಸ್ಯ
೧೯೫೮ ಸ್ಕೂಲ್ ಮಾಸ್ಟರ್
೧೯೬೦ ಮಕ್ಕಳ ರಾಜ್ಯ
೧೯೬೧ ಕಿತ್ತೂರು ಚೆನ್ನಮ್ಮ
೧೯೬೨ ಗಾಳಿಗೋಪುರ
೧೯೬೩ ಸಾಕು ಮಗಳು
೧೯೬೪ ಚಿನ್ನದ ಗೊಂಬೆ
೧೯೬೬ ದುಡ್ಡೇ ದೊಡ್ಡಪ್ಪ
೧೯೬೬ ಎಮ್ಮೆ ತಮ್ಮಣ್ಣ
೧೯೬೭ ಗಂಗೆ ಗೌರಿ
೧೯೬೭ ಬೀದಿ ಬಸವಣ್ಣ
೧೯೬೮ ಚಿನ್ನಾರಿ ಪುಟ್ಟಣ್ಣ
೧೯೬೮ ಅಮ್ಮ
೧೯೬೯ ಗಂಡೊಂದು ಹೆಣ್ಣಾರು
೧೯೭೦ ಶ್ರೀ ಕೃಷ್ಣದೇವರಾಯ
೧೯೭೧ ಅಳಿಯ ಗೆಳೆಯ
೧೯೭೧ ಮಾಲತಿ ಮಾಧವ
೧೯೭೨ ಒಂದು ಹೆಣ್ಣಿನ ಕಥೆ

ಬಿ.ಆರ್.ಪಂತುಲು ನಿರ್ಮಾಣದ ಕನ್ನಡೇತರ ಚಿತ್ರಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]