ಕವಿತಾ ಲಂಕೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕವಿತಾ ಲಂಕೇಶ್
ಜನನ(೧೯೭೪ -೧೨-೧೩)೧೩ ಡಿಸೆಂಬರ್ ೧೯೭೪
ಉದ್ಯೋಗಚಲನಚಿತ್ರ ನಿರ್ದೇಶಕಿ

ಕವಿತಾ ಲಂಕೇಶ್ (ಜನನ: ೧೩-೧೨-೧೯೭೪) ಹೊಸ ತಲೆಮಾರಿನ ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ. ಯುವ ನಿರ್ದೇಶಕ ಹಾಗೂ ಲೇಖಕ ಪಿ.ಎಲ್.ಇಂದ್ರಜಿತ್ ಇವರ ಸೋದರ, ಲಂಕೇಶ್ ಪತ್ರಿಕೆ (ಈಗ ಲಂಕೇಶ್) ಸಂಪಾದಕಿ ಗೌರಿಲಂಕೇಶ್ ಇವರ ಸೋದರಿ.

ಜೀವನ,ವೃತ್ತಿ[ಬದಲಾಯಿಸಿ]

  • ಇವರ ತಂದೆ ಕನ್ನಡದ ಹೆಸರಾಂತ ಲೇಖಕ ಪಿ.ಲಂಕೇಶ್, ತಾಯಿ ಇಂದಿರಾ. ೧೯೭೪ ಡಿಸೆಂಬರ್ ೧೩ರಂದು ಜನಿಸಿದ ಕವಿತಾ ಅವರು ಜಾಹೀರಾತು ವಿಷಯದಲ್ಲಿ ಡಿಪ್ಲೊಮಾ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಸಿನಿಮಾ ಕಲೆಯ ಬಗ್ಗೆ ಇವರಿಗೆ ವಿಶೇಷ ಆಸಕ್ತಿ. ಇವರು ಆಪ್ಲಾಜ್ ಫಿಲ್ಮ್‌ ಪ್ರಾರಂಭಿಸಿ ಅದರ ಮೂಲಕ ೩೦ಕ್ಕೂ ಹೆಚ್ಚು ಕಾರ್ಪೋರೇಟ್ ಸಂಸ್ಥೆಗಳಿಗಾಗಿ ಹಾಗೂ ಕರ್ನಾಟಕ ಸರ್ಕಾರದ ಹಲವು ಇಲಾಖೆಗಳಿಗಾಗಿ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
  • ಯಕ್ಷಗಾನ ಕುರಿತಂತೆ ‘ದಿ ಸಾಂಗ್ಸ್‌ ಆಫ್ ಏಂಜಲ್ಸ್‌’ ಎಂಬುದು ಅವುಗಳಲ್ಲೊಂದು. ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಕುರಿತಂತೆ ಇವರು ನಿರ್ದೇಶಿಸಿದ ಸಾಕ್ಷ್ಯ ಚಿತ್ರಗಳು ಇವರನ್ನು ಪ್ರಯೋಗಶೀಲ ನಿರ್ದೇಶಕಿ ಎಂಬುದನ್ನು ಋಜುವಾತು ಪಡಿಸಿವೆ. ಮೊಟ್ಟ ಮೊದಲ ಬಾರಿಗೆ ಪಿ.ಲಂಕೇಶರ ಅಕ್ಕ ಕಾದಂಬರಿ ಆಧರಿಸಿ ಇವರು ನಿರ್ದೇಶಿಸಿದ ದೇವೀರಿ ಎಳೆಯ ವಯಸ್ಸಿನ ಹುಡುಗನೊಬ್ಬನ ಭಾವನೆಗಳನ್ನು ಹಿಡಿದಿಟ್ಟಿರುವ ಚಿತ್ರ. ಇದು ಅತಿ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ ಕನ್ನಡ ವೆನಿಸಿದೆ.

ದೇವೀರಿ ಚಲನಚಿತ್ರಕ್ಕೆ ಸಂದ ಪ್ರಶಸ್ತಿಗಳು[ಬದಲಾಯಿಸಿ]

  1. ಪ್ರಥಮ ಅತ್ಯುತ್ತಮ ಚಿತ್ರವೆಂದು ಇದು ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ ಗಳಿಸಿತು (೧೯೯೯-೨೦೦೦). ಈ ಚಲನಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಮುಖ್ಯವಾದುವುದಗಳೆಂದರೆ-
  2. ಅರವಿಂದನ್ ಪುರಸ್ಕಾರದ ರಾಷ್ಟ್ರೀಯ ಉತ್ತಮ ನಿರ್ದೇಶನ ಪ್ರಶಸ್ತಿ (೧೯೯೯),
  3. ವಿಶೇಷ ರಾಷ್ಟ್ರೀಯ ಪ್ರಶಸ್ತಿ (೧೯೯೯),
  4. ಶ್ರೇಷ್ಠ ಬಾಲಾಭಿನಯ ಪ್ರಶಸ್ತಿ (೨೦೦೦),
  5. ಸುಪ್ರಭಾತ ಟೆಲಿವಿಷನ್ನ ಶ್ರೇಷ್ಠ ನಿರ್ದೇಶನ ಪ್ರಶಸ್ತಿ (೨೦೦೧),
  6. ಕಾವೇರಿ ಏಷ್ಯಾನೆಟ್ ಟೆಲಿವಿಷನ್ನ ಉತ್ತಮ ಕಥಾ ಪ್ರಶಸ್ತಿ (೨೦೦೧).

ಈ ಚಿತ್ರ ಭಾರತದ ಪ್ರಮುಖ ನಗರಗಳಲ್ಲಷ್ಟೇ ಅಲ್ಲದೆ ಲಂಡನ್, ದರ್ಬಾನ್, ಬ್ಯಾಂಕಾಕ್, ಸಿಡ್ನಿ ಮುಂತಾದೆಡೆಗಳಲ್ಲಿ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿದೇಶೀಯರ ಗಮನವನ್ನು ಸೆಳೆಯಿತು.

ನಿರ್ದೇಶನ ಮತ್ತು ಸಾಕ್ಷ್ಯಚಿತ್ರ ನಿರ್ಮಾಣ[ಬದಲಾಯಿಸಿ]

  • ಇವರು ಅಲೆಮಾರಿ, ಬಿಂಬ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಇವರು ನಿರ್ದೇಶಿಸಿದಚಿತ್ರ(೨೦೦೩). ತಾವೊಬ್ಬ ಸಮರ್ಥ ನಿರ್ದೇಶಕಿ ಎಂಬುದನ್ನು ಇವರು ತೋರಿಸಿ ಕೊಟ್ಟಿದ್ದಾರೆ. ಪರಿಸರ ತಜ್ಞೆ ತುಳಸಿಯವರ ಬಗ್ಗೆ ಇವರು ತಯಾರಿಸಿದ ಕಿರುಚಿತ್ರ ಗಂಭೀರ ಪ್ರಯತ್ನದಲ್ಲಿ ಮೂಡಿ ಬಂದಿದೆ. ಸಾಮಾಜಿಕ ಕಳಕಳಿಯನ್ನೊಳಗೊಂಡ ಚಿತ್ರವೆಂದು ಇದಕ್ಕೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಲಭಿಸಿದೆ.
  • ಕರ್ನಾಟಕದ ಸಿದ್ಧಿಜನಾಂಗದ ಸ್ಥಿತಿಗತಿಗಳ ಬಗ್ಗೆ ತಯಾರಿಸಿರುವ ಇನ್ನೊಂದು ಸಾಕ್ಷ್ಯಚಿತ್ರ ಗಮನಾರ್ಹವಾದದ್ದು. ‘ಹಸೆಕಲೆ’ ಅವನತಿ ಹೊಂದುತ್ತಿರುವ ಒಂದು ಗ್ರಾಮೀಣ ಕಲೆ. ಈ ಕಲೆ ಕುರಿತಂತೆ ಕೂಡ ಇವರು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಚಿತ್ರಕಲಾವಿದೆ ಪುಷ್ಪಮಾಲ, ನಿರ್ದೇಶಕಿ ಪ್ರೇಮಾಕಾರಂತ, ಚಿತ್ರನಟಿ ಜಯಂತಿ, ಬರೆಹಗಾರ್ತಿ ವೈದೇಹಿ ಹಾಗೂ ಸಮಕಾಲೀನ ನೃತ್ಯಗಾರ್ತಿ ತ್ರಿಪುರಾ ಕಶ್ಯಪ್ ಮುಂತಾದವರ ಬಗೆಗಿನ ಸಾಕ್ಷ್ಯಚಿತ್ರಗಳು ರಾಜ್ಯದೆಲ್ಲೆಡೆ ಪ್ರದರ್ಶಿತಗೊಂಡು ಪ್ರಶಂಸೆ ಗಳಿಸಿವೆ.