ಆರ್.ನಾಗೇಂದ್ರರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆರ್.ನಾಗೇಂದ್ರರಾಯ ಇಂದ ಪುನರ್ನಿರ್ದೇಶಿತ)
ಆರ್. ನಾಗೇಂದ್ರ ರಾವ್
ಆರ್.ನಾಗೇಂದ್ರರಾಯರು
ಜನನಜೂನ್ ೨೩, ೧೮೯೬
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ
ಮರಣಫೆಬ್ರುವರಿ ೯, ೧೯೭೭
ಉದ್ಯೋಗರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು, ನಿರ್ಮಾಪಕ, ನಿರ್ದೇಶಕರು

ಆರ್ ನಾಗೇಂದ್ರರಾವ್ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದವರು. ಕನ್ನಡ ರಂಗಭೂಮಿ, ಚಿತ್ರರಂಗಗಳಲ್ಲದೆ ಇತರ ಭಾಷೆಗಳಲ್ಲೂ ಪ್ರಸಿದ್ಧಿ ಪಡೆದವರು. ನಟನೆ, ಚಿತ್ರ ನಿರ್ಮಾಣ, ನಿರ್ದೇಶನ ಮಾತ್ರವಲ್ಲದೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಅಂತಹ ಸಂಸ್ಥೆಯನ್ನೂ ಮೂಡಿಸಿದವರು. ಅವರ ಮೂವರೂ ಮಕ್ಕಳಾದ ಆರ್ ಎನ್ ಜಯಗೋಪಾಲ್, ಕೃಷ್ಣ ಪ್ರಸಾದ್ ಮತ್ತು ಸುದರ್ಶನ್ ಕೂಡಾ ಚಿತ್ರರಂಗದಲ್ಲಿದ್ದಾರೆ.

ಜೀವನ[ಬದಲಾಯಿಸಿ]

ರಟ್ಟೆಹಳ್ಳಿ ಕೃಷ್ಣರಾವ್ ಮತ್ತು ರುಕ್ಮಿಣಿದೇವಿ ದಂಪತಿಗಳಿಗೆ ಆರ್. ನಾಗೇಂದ್ರರಾವ್ ಎರಡನೆಯ ಮಗನಾಗಿ ೧೮೯೬ನೆಯ ಇಸವಿ ಜೂನ್ ೨೩ರಂದು ಜನಿಸಿದರು. ಅವರ ಜನ್ಮಸ್ಥಳ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ. ತಂದೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. 1900ರ ಸುಮಾರಿನಲ್ಲಿ ಕೃಷ್ಣರಾಯರು ಕಾರಾಣಾಂತರದಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಬಂದರು. ನಾಗೇಂದ್ರ ರಾಯರು ಮೈಸೂರಿನಲ್ಲಿರುವಾಗ ಚಿಕ್ಕವಯಸ್ಸಿನಲ್ಲೇ ‘ಇಂದಿರಾನಂದ’ ಎಂಬ ನಾಟಕದಲ್ಲಿ ಪಾತ್ರವಹಿಸಿದ್ದರು. ಆಸ್ಥಾನ ವಿದ್ವಾಂಸರಾದ ಕರಿಗಿರಿರಾಯರಿಂದ ಸಂಗೀತ ಪಾಠವೂ ನಡೆಯಿತು. ಮುಂದೆ ತಮ್ಮ ಕುಟುಂಬ ಹೊಳೆನರಸೀಪುರಕ್ಕೆ ವಲಸೆ ಬಂದಾಗ ನಾಗೇಂದ್ರರಾವ್ ಅಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಪ್ರಭಾವಿತರಾಗಿ, ತಾವು ಕಂಡ ಪಾತ್ರಗಳನ್ನೇ ಯಥಾವತ್ತಾಗಿ ಅಭಿನಯಿಸುತ್ತಿದ್ದರು. ಇನ್ನೂ ಚಿಕ್ಕವರಿರುವಾಗಲೇ ತಂದೆ ನಿಧನರಾದರು. ತಾಯಿ ಮತ್ತು ಸಹೋದರಿಯ ಜೊತೆ ಬೆಂಗಳೂರಿಗೆ ಬಂದರು. ತಾಯಿ ಅಲ್ಲಿ ಇಲ್ಲಿ ಮನೆ ಕೆಲಸ ಮಾಡಿ ಹೊಟ್ಟೆ ತುಂಬುತ್ತಿತ್ತು.

ರಂಗಭೂಮಿಯಲ್ಲಿ[ಬದಲಾಯಿಸಿ]

ಶಾಲೆ ಓದುತ್ತಿದ್ದ ದಿನಗಳಲ್ಲೇ ನಾಟಕದಲ್ಲಿ ಅಭಿನಯಿಸುತ್ತಿದ್ದ ನಾಗೇಂದ್ರ ರಾಯರ ಪ್ರತಿಭೆ ನಾಟಕ ಸಂಸ್ಥೆಗಳನ್ನು ಆಕರ್ಷಿಸಿತು. ಶಿರಹಟ್ಟಿ, ಲಕ್ಷ್ಮೀವಿಲಾಸ ಮುಂತಾದ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿ ನಾಟಕ ಶಿರೋಮಣಿ ವರದಾಚಾರ್ಯರ ಜೊತೆ ಸೇರಿಕೊಂಡರು. ‘ಪ್ರಹ್ಲಾದ ಚರಿತ್ರೆ’, ‘ರತ್ನಾವಳಿ, ‘ಸುಗ್ರೀವ ಸಖ್ಯ’, ‘ಲಂಕಾದಹನ’, ‘ಸಂಪೂರ್ಣ ರಾಮಾಯಣ’, ‘ವಿಷ್ಣುಲೀಲಾ’, ‘ಹರಿಶ್ಚಂದ್ರ’ ಮುಂತಾದ ನಾಟಕಗಲ್ಲಿ ಅವರ ಪಾತ್ರ ಪ್ರಸಿದ್ಧಿ ಪಡೆದಿತ್ತು. ವರದಾಚಾರ್ಯರ ನಿಧನಾನಂತರ ‘ಚಾಮುಂಡೇಶ್ವರಿ ನಾಟಕ ಸಭಾ’ ದಲ್ಲಿ ‘ರಾಜಸೂಯ ಯಾಗ’, ‘ದಾನಶೂರ ಕರ್ಣ’ ‘ವೀರ ಅಭಿಮನ್ಯು’ ಮತ್ತು ‘ತುಕಾರಾಂ’ ಮುಂತಾದ ನಾಟಕಗಳನ್ನು ಸ್ವಯಂ ನಾಗೇಂದ್ರರಾಯರೇ ಬರೆದು. ನಾಟಕ ರಚನೆಯಲ್ಲಿ ಕೂಡ ಪ್ರಸಿದ್ಧರಾದರು. ‘ಮೃಚ್ಛಕಟಿಕ’ ನಾಟಕದ ಕನ್ನಡ ರೂಪ ‘ವಸಂತಸೇನಾ’ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಿದರು.

ಚಿತ್ರರಂಗಕ್ಕೆ ಪ್ರವೇಶ[ಬದಲಾಯಿಸಿ]

ಭಾರತದಲ್ಲಿ 1931ರ ಸುಮಾರಿಗೆ ಚಲನಚಿತ್ರಗಳ ಯುಗ ಆರಂಭವಾಯಿತು. ಮೊದಲು ಮೂಕಚಿತ್ರಗಳು ಅನಂತರ ಕ್ರಮೇಣ ಟಾಕಿ ಚಿತ್ರಗಳು ಬರತೊಡಗಿದ್ದವು. ನಾಗೇಂದ್ರರಾಯರಿಗೆ ಚಲನಚಿತ್ರರಂಗ ಕೈಬೀಸಿ ಕರೆಯುತ್ತಿತ್ತು. ಆಗ ಮುಂಬಯಿ ಚಲನಚಿತ್ರ ಕೇಂದ್ರವಾಗಿತ್ತು. ರಾಯರು ಅಲ್ಲಿಗೆ ಹೋಗಿ ತಮ್ಮ ಮುಂದಿನ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದರು. ಅವರದು ಸಾಹಸದ ಸ್ವಭಾವ. ಅಪರಿಚಿತವಾದ ಊರು ಭಾಷೆ ಕ್ಷೇತ್ರ ಎಂದು ಅವರು ಹಿಂಜರಿಯಲಿಲ್ಲ. ಕೆಲವರು ಹಿರಿಯರಿಂದ ಪರಿಚಯ ಪತ್ರ ತೆಗೆದುಕೊಂಡು, ಖರ್ಚಿಗೆ ಸ್ವಲ್ಪ ಹಣ ಸಂಗ್ರಹಿಸಿಕೊಂಡು ಮುಂಬಯಿಗೆ ಹೊರಟೇಬಿಟ್ಟರು. ಈ ನಿರ್ಧಾರದಿಂದ ನಾಗೇಂದ್ರರಾಯರ ಹೊಸ ಭವಿಷ್ಯದ ಬಾಗಿಲು ತೆರೆಯಿತು.

ತಮಿಳು ತೆಲುಗು ಚಿತ್ರಗಳಲ್ಲಿ ಜಯಭೇರಿ[ಬದಲಾಯಿಸಿ]

ಮುಂಬಯಿಯಲ್ಲಿ ಟಿ.ಕೆ ರಾಜಾ ಸ್ಯಾಂಡೋ ಅವರ ನೆರವಿನಿಂದ ‘ಇಂಪೀರಿಯಲ್ ಕಂಪನಿ’ ಅರ್ದೇಷಿರ್ ಇರಾನಿ ಅವರ ಪರಿಚಯವಾಯಿತು. ಮೊದಲ ಹಿಂದಿ ವಾಕ್ಚಿತ್ರ ‘ಆಲಂ ಅರಾ’ ತಯಾರಿಸಿ ಪ್ರಸಿದ್ಧರಾದವರು ಇರಾನಿ. ಅವರು ‘ಪಾರಿಜಾತ ಪುಷ್ಪಾಪಹರಣಂ’ ಎಂಬ ತಮಿಳು ಚಿತ್ರವನ್ನು ತಯಾರಿಸಲು ನಿರ್ಧರಿಸಿದರು. ನಾಗೇಂದ್ರರಾಯರಿಗೆ ಮುಖ್ಯವಾದ ನಾರದನ ಪಾತ್ರ ಕೊಟ್ಟರು. ಚಿತ್ರ ಮದರಾಸು ಮತ್ತು ಇತರ ಕೇಂದ್ರಗಳಲ್ಲಿ ಬಿಡುಗಡೆಯಾಗಿ ತುಂಬ ಯಶಸ್ವಿಯಾಯಿತು. ನಾರದನ ಪಾತ್ರಾಭಿನಯವನ್ನು ಜನ ಮೆಚ್ಚಿಕೊಂಡರು. ಹೀಗೆ ಈ ಕನ್ನಡ ಕಲಾವಿದರ ಚಲನಚಿತ್ರರಂಗ ಪ್ರವೇಶ ತಮಿಳು ಚಿತ್ರದ ಮೂಲಕ ಆಯಿತು. ಇರಾನಿಯವರು ಮುಂದಿನ ಚಿತ್ರವನ್ನು ತೆಲುಗಿನಲ್ಲಿ ತೆಗೆಯಲು ನಿರ್ಧರಿಸಿ ‘ಭಕ್ತ ರಾಮದಾಸ’ರ ಕತೆಯನ್ನು ಆರಿಸಿದರು. ರಾಯರಿಗೆ ರಾಮದಾಸನ ಪಾತ್ರ. ಈ ಚಿತ್ರವು ಯಶಸ್ವಿಯಾಯಿತು.

ಸುಬ್ಬಯ್ಯನಾಯ್ಡು ಅವರ ಸಹಯೋಗ[ಬದಲಾಯಿಸಿ]

ಮುಂದಿನ ಚಿತ್ರದ ಚಿತ್ರೀಕರಣ ಆರಂಭವಾಗಲೂ ಒಂದೆರಡು ತಿಂಗಲು ಸಮಯವಿದ್ದುದರಿಂದ ರಾಯರು ಮೈಸೂರಿಗೆ ಹಿಂದಿರುಗಿದರು. ಆ ವೇಳೆಗಾಗಲೇ ಅವರಿಗೆ ಮದುವೆಯಾಗಿತ್ತು. ಹೆಂಡತಿ ರತ್ನಾಬಾಯಿ ಮತ್ತು ಇಬ್ಬರುಮಕ್ಕಳ ತಮ್ಮ ಪುಟ್ಟ ಸಂಸಾರದಲ್ಲಿ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಲು ಅವರಿಗೆ ಅವಕಾಶವೆ ಸಿಗುತ್ತಿರಲಿಲ್ಲ. ಈಗ ಬಿಡುವಿನಲ್ಲಿ ಮಡದಿ ಮಕ್ಕಳೊಡನೆ ಸಂತೋಷವಾಗಿರಲು ಮೈಸೂರಿಗೆ ಬಂದರು. ಅವರು ಮೈಸೂರಿನಲ್ಲಿದ್ದಾಗ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯ ಸಂಸ್ಥಾಪಕ ಮತ್ತು ಪ್ರಸಿದ್ಧ ನಟರಾದ ಎಂ.ಬಿ.ಸುಬ್ಬಯ್ಯನಾಯುಡು ಅವರ ಬಂದು ನಾಗೇಂದ್ರರಾಯರನ್ನು ಭೇಟಿಮಾಡಿದರು. ತಮ್ಮೊಡನೆ ಪಾಲುದಾರರಾಗಿ ತಮ್ಮ ನಾಟಕ ಸಂಸ್ಥೆಗೆ ಸೇರುವಂತೆ ಒತ್ತಾಯಿಸಿದರು. ನಾಗೇಂದ್ರರಾಯರು ಮತ್ತೆ ತಾವು ಮುಂಬಯಿಗೆ ಹೋಗಬೇಕಾಗಿದೆಯೆಂದು ಎಷ್ಟು ಹೇಳಿದರೂ ನಾಯುಡು ಅವರು ಒಪ್ಪಲಿಲ್ಲ. ಅವರ ವಿಶ್ವಾಸಕ್ಕೆ ಮಣಿದು ಮುಂಬಯಿಯ ತಮ್ಮ ಮುಂದಿನ ಚಿತ್ರದ ಕರಾರನ್ನು ರದ್ದುಪಡಿಸಿ, ರಾಯರು ನಾಯುಡು ಅವರೊಡನೆ ಪಾಲುದಾರರಾಗಿ ಸೇರಿದರು. ಇಬ್ಬರೂ ಆಪ್ತ ಮಿತ್ರರಾದರು.

ಸತೀ ಸುಲೋಚನಾದಲ್ಲಿ ರಾವಣ[ಬದಲಾಯಿಸಿ]

ಈ ಸಮಯದಲ್ಲಿ ಬೆಂಗಳೂರಿನ ‘ಸೌತ್ ಇಂಡಿಯನ್ ಫಿಲ್ಮ್ ಕಂಪನಿ’ ಕನ್ನಡದಲ್ಲಿ ‘ಸತಿ ಸುಲೋಚನಾ’ ಚಿತ್ರ ತಯಾರಿಸಲು ಮುಂದೆ ಬಂದು, ನಾಗೇಂದ್ರರಾಯರನ್ನು ಅಭಿನಯಿಸಲು ಕೇಳಿತು. ಇದರಲ್ಲಿ ರಾಯರದು ರಾವಣನ ಪಾತ್ರ, ಜೊತೆಗೆ ಸಂಗೀತ ನಿರ್ದೇಶನದ ಹೊಣೆ.

ನಾಟಕಗಳಲ್ಲಿ ಮಹತ್ವದ ಪ್ರಯೋಗ[ಬದಲಾಯಿಸಿ]

ಚಿತ್ರ ಮುಗಿದ ನಂತರ ರಾಯರು ಮೈಸೂರಿಗೆ ಹಿಂದಿರುಗಿ, ನಾಯುಡು ಅವರೊಂದಿಗೆ ತಮ್ಮ ಹೊಸ ನಾಟಕ ಸಂಸ್ಥೆಯನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ಬೆಳಕಿನ ವ್ಯವಸ್ಥೆಯ ಬಗೆಗೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು. ಅವರು ಆರಿಸಿಕೊಂಡಿದ್ದ ನಾಟಕ ‘ಭೂಕೈಲಾಸ’, ಅದರ ಮೂಲಪ್ರತಿ ನಾಟಕಕ್ಕೆ ಆಗುವಷ್ಟು ವ್ಯಾಪಕವಾಗಿರಲಿಲ್ಲವಾದ್ದರಂದ ರಾಯರೇ ಹೊಸ ಅಂಶಗಳನ್ನು ಸೇರಿಸಿ ‘ಭೂಕೈಲಾಸ’ ನಾಟಕ ಬರೆದರು. ರಂಗದಲ್ಲಿ ದೀಪದ ವ್ಯವಸ್ಥೆ ಹೇಗಿರಬೇಕೆಂಬುದಕ್ಕೆ ಅನೇಕ ಪುಸ್ತಕಗಳನ್ನು ಓದಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಂಡರು. ಅಲೆಅಲೆಯಾದ ಬೆಳಕು, ವಿವಿಧ ವರ್ಣಗಳ ಬೆಳಕುಗಳ ಮಿಶ್ರಣ, ಅಗತ್ಯ ಪಾತ್ರದ ಮೇಲಷ್ಟೇ ಬೆಳಕನ್ನು ಕೇಂದ್ರೀಕರಿಸುವುದು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಂಡರು. ಅಗತ್ಯವಾದ ವಿದ್ಯುತ್ ಬಲ್ಬುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರಕದ ಕೆಲವು ಉಪಕರಣಗಳನ್ನು ತಾವೇ ರೂಪಿಸಿದರು. ನಾಗೇಂದ್ರರಾಯರ ಪ್ರತಿಭೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಬಲ್ಲುದಾಗಿತ್ತು. ೧೯೩೭ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ‘ಭೂ ಕೈಲಾಸ’ ನಾಟಕ ಪ್ರದರ್ಶನವಾದಾಗ ಅದರ ರಂಗ ವೈಭವ, ಬೆಳಕಿನ ಮಾಯಲೋಕ, ಅಭಿನಯ ವೈಶಿಷ್ಟ್ಯಗಳನ್ನು ನೋಡಿ ಜನ ಬೆರಗಾಗಿ ಹೋದರು. ನಾಟಕ ಪ್ರಚಂಡ ಯಶಸ್ಸುಗಳಿಸಿ ಆರುತಿಂಗಳ ಕಾಲ, ತುಂಬಿದ ನಾಟಕ ಗೃಹದಲ್ಲಿ ಪ್ರದರ್ಶಿತವಾಯಿತು. ಮುಂದೆ ತುಮಕೂರು, ಬೆಂಗಳೂರು ಮತ್ತು ಮದರಾಸಿನಲ್ಲಿಯೂ ಆರುತಿಂಗಳ ಕಾಲ ನಡೆಯಿತು.. ಮುಂದೆ ‘ಭೂಕೈಲಾಸ’ ವನ್ನು ತಮಿಳುನಲ್ಲಿಯೂ ನಾಟಕವಾಗಿ ಅಭಿನಯಿಸಿ ಮದರಾಸಿನಲ್ಲಿ ಹೆಸರು ಗಳಿಸಿದರು. ಎಚ್ಚಮನಾಯಕನ ಕಥೆಯನ್ನು ಆಧರಿಸಿದ ‘ರಾಷ್ಟ್ರವೀರ’ ನಾಟಕ ಅವರ ಕಂಪನಿಯ ಪ್ರಸಿದ್ಧ ನಾಟಕಗಳಲ್ಲಿ ಒಂದು. ಅದನ್ನೂ ತಮಿಳಿಗೆ ಅನುವಾದಿಸಿ ಆಡಿದರು. ಇದರಲ್ಲಿ ರಾಯರು ಚಾಂದಾಖಾನನ ಪಾತ್ರ ಮಾಡುತ್ತಿದ್ದರು.

ಚಿತ್ರರಂಗದಲ್ಲಿ ಮಹಾನ್ ಸಾಧನೆಗಳು[ಬದಲಾಯಿಸಿ]

ಪ್ರಗತಿ ಪಿಕ್ಜರ್ಸ್ ಅವರು ‘ಭೂಕೈಲಾಸ’ವನ್ನು ತೆಲುಗಿನಲ್ಲಿ ಚಲನಚಿತ್ರವಾಗಿ ತಯಾರಿಸಿದರು. ಅದು ಆ ವರ್ಷದ ಅತ್ಯುತ್ತಮ ತೆಲುಗು ಚಿತ್ರವೆಂದು ಹೆಸರುಗಳಿಸಿತು. ಇದರ ನಂತರ 1949ರಲ್ಲಿ ನಾಗೇಂದ್ರರಾಯರು ಪಾಲುದಾರರೊಡನೆ ತಯಾರಿಸಿದ ‘ವಸಂತಾಸೇನಾ’ ಚಲನಚಿತ್ರ ಅಪಾರ ಜನಮನ್ನಣೆಗಳಿಸಿ ಪ್ರಸಿದ್ಧಿಯಾಯಿತು ಈ ಚಿತ್ರದಲ್ಲಿ ನಾಗೇಂದ್ರರಾಯರು ಶಕಾರನ ಪಾತ್ರದ ಮೂಲಕ ನೀಡಿದ ಅಭಿನಯ ಇಂದಿಗೂ ಒಂದು ಅತ್ಯುಚ್ಚ ಮಾದರಿಯಾಗಿ ಉಳಿದಿದೆ. ಅಭಿನಯದ ಜೊತೆಗೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಾಯರೇ ಬರೆದರು. ಈ ಚಿತ್ರಕ್ಕೆ ಹೆಸರಿಗೆ ಮಾತ್ರ ಒಬ್ಬ ಕನ್ನಡ ಬಾರದ ನಿರ್ದೇಶಕರು ಇದ್ದರು. ಎಲ್ಲ ಕೆಲಸವನ್ನು ನಾಗೇಂದ್ರರಾಯರೇ ನಿರ್ವಹಿಸಿದ್ದರು. ಈ ಚಿತ್ರದಿಂದ ಮೊದಲುಗೊಂಡಂತೆ ಒಮ್ಮೆ ಚಿತ್ರಿಕರಣವಾದ ದೃಶ್ಯಕ್ಕೆ ಅನಂತರ ಹಾಡನ್ನು ಅಳವಡಿಸುವ ‘ಪೋಸ್ಟ್ ಸಿಂಕ್ರೊನೈಸೇಷನ್’ ಎಂಬ ವಿಧಾನ ರೂಢಿಗೆ ಬಂತು. ಅನಂತರ ‘ಹರಿಶ್ಚಂದ್ರ’ವನ್ನು ಬೇರೆಯ ನಿರ್ಮಾಪಕರಿಗಾಗಿ ನಾಗೇಂದ್ರರಾಯರು ಕನ್ನಡದಲ್ಲಿ ನಿರ್ದೇಶಿಸಿದರು. ಅದರಲ್ಲಿ ಅವರು ವಹಿಸಿದ ವಿಶ್ವಾಮಿತ್ರನ ಪಾತ್ರಸೃಷ್ಟಿಯೂ ಚಿತ್ರದೊಡನೆ ಹಾಸು ಹೊಕ್ಕಾಗಿ ಬರುವ ಹಾಸ್ಯವೂ ಅಪೂರ್ವವಾದವು. ಈ ಚಿತ್ರ ಅನೇಕ ಕೇಂದ್ರಗಳಲ್ಲಿ ನೂರು ದಿನಕ್ಕೂ ಹೆಚ್ಚು ಕಾಲ ಯಶಸ್ವಿಯಾಗಿ ನಡೆಯಿತು. ಈ ಚಿತ್ರವನ್ನು ತಮಿಳಿಗೆ ಡಬ್ ಮಾಡಲಾಯಿತು. ಭಾರತದಲ್ಲಿ ಇದೇ ಮೊದಲನೆಯ ಪ್ರಯತ್ನ. ಇದು ಹೊಸ ದಾಖಲೆಯಾಯಿತು. ಅದರ ಕೀರ್ತಿ ನಾಗೇಂದ್ರರಾಯರದು. ಇದರ ನಂತರ ರಾಯರು ‘ಭಕ್ತ ಕಬೀರ್’ ನಿರ್ದೇಶಿಸಿದರು, ವಿವಾದ ಉಂಟು ಮಾಡಬಹುದಾದ ಇದರ ವಸ್ತುವನ್ನು ರಾಯರು ಜಾಣತನದಿಂದ ನಿರೂಪಿಸಿದರು. ಚಿತ್ರ ಬಿಡುಗಡೆಯಾದ ಮೇಲೆ ಬಹಳ ಜನಪ್ರಿಯವಾಯಿತು. ಈ ಚಿತ್ರದ ನಂತರ ಸುಬ್ಬಯ್ಯನಾಯುಡು ಅವರಿಗೂ ನಾಗೇಂದ್ರರಾಯರಿಗೂ ಒಂದು ಸಣ್ಣ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂತು. ರಾಯರು ಪಾಲುದಾರಿಕೆಯಿಂದ ಹೊರಬಂದರು. ನಾಗೇಂದ್ರರಾಯರದು ನಿರಂತರವಾದ ಸಾಹಸ ಪ್ರವೃತ್ತಿ. ‘ಚಂದ್ರಲೇಖಾ’ ಚಿತ್ರದ ಮೂಲಕ ಅಪಾರ ಖ್ಯಾತಿಯನ್ನು ಹಣವನ್ನೂ ಸಂಪಾದಿಸಿದ್ದ ಮದರಾಸಿನ ಜೆಮಿನಿ ಸ್ಟುಡಿಯೋದ ವಾಸನ್ ಅವರನ್ನು ಭೇಟಿಮಾಡಿ ತಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಂಡು ಒಂದು ಚಿತ್ರ ತಯಾರಿಸಬೇಕೆಂದು ಕೇಳುವ ಸಾಹಸ ಮಾಡಿದರು. ರಾಯರು ಸಿದ್ಧಪಡಿಸಿದ್ದ ‘ಮೂವರು ತನಯರು’ ಚಿತ್ರ ಕಥೆಯನ್ನು ಕೇಳಿ ವಾಸನ್ ಈ ಯೋಜನೆಗೆ ಒಪ್ಪಿಕೊಂಡರು. ಆದರೆ ಬೇರೆ ಒಂದು ಚಿತ್ರದ ತಯಾರಿಕೆಯನ್ನು ತೆಗೆದುಕೊಂಡುದರಿಂದ ‘ಮೂವರು ತನಯರು’ ಕೂಡಲೇ ಸೆಟ್ ಏರಲಿಲ್ಲ. ತಮಿಳಿನಲ್ಲಿ ‘ಅಪೂರ್ವ ಸಹೋದರ್‌ಗಳ್’, ಹಿಂದಿಯಲ್ಲಿ ‘ನಿಶಾನ್’ ಎಂಬ ಹೆಸರಿನಲ್ಲಿ ತಯಾರಾದ ಒಂದು ಚಿತ್ರದಲ್ಲಿ ಖಳನಾಯಕ ಮಾರ್ತಾಂಡನ ಪಾತ್ರದಲ್ಲಿ ರಾಯರು ನೀಡಿದ ಅಭಿನಯ ಶ್ರೇಷ್ಠ ಮಟ್ಟದ್ದಾಗಿತ್ತು. ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ರಾಯರ ಅಭಿನಯವನ್ನು ಹೊಗಳಿ ‘ವರ್ಷದ ಶ್ರೇಷ್ಠ ಖಳನಾಯಕ’ ನೆಂದು ಬರೆಯಿತು. ಹೀಗೆ ನಾಗೇಂದ್ರ ರಾಯರ ಅಭಿನಯ ಅಖಿಲ ಭಾರತ ಮಟ್ಟದಲ್ಲಿ ಕೀರ್ತಿಯನ್ನು ಸಂಪಾದಿಸಿತು. ದೊಡ್ಡ ಪ್ರಮಾಣದಲ್ಲಿ ಹಣವೂ ಒದಗಿತು. 1952ರಲ್ಲಿ ರಾಯರು ತಮ್ಮದೇ ಆದ ಆರ್ ಎನ್ ಆರ್ ಲಾಂಛನದಲ್ಲಿ ಸ್ವಂತ ಚಿತ್ರಗಳನ್ನು ತಯಾರಿಸಲು ಆರಂಭಿಸಿದರು. ಹೀಗೆ ತಯಾರಿಸಿದ ಮೊದಲ ಚಿತ್ರ ‘ಜಾತಕ ಫಲ’ ಮೂರು ಭಾಷೆಗಳಲ್ಲಿ ತೆರೆಕಂಡಿತು. 1957ರಲ್ಲಿ ಕನ್ನಡದಲ್ಲಿ ತೆಗೆದ ‘ಪ್ರೇಮದ ಪುತ್ರಿ’ ಆ ವರ್ಷದ ಪ್ರಾಂತೀಯ ಭಾಷೆಯ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪತಿಗಳ ರಜತ ಪದಕ ಪಡೆಯಿತು. ಇಂಥ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಲ್ಲಿ ‘ಪ್ರೇಮದ ಪುತ್ರಿ’ಯೇ ಮೊದಲನೆಯದು. ಈ ಚಿತ್ರದಲ್ಲಿ ನಾಗೇಂದ್ರರಾಯರ ಮಕ್ಕಳಾದ ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿಯೂ, ಜಯಗೋಪಾಲ್ ಸಂಭಾಷಣೆ ಮತ್ತು ಗೀತ ರಚನೆಕಾರರಾಗಿಯೂ, ಸುದರ್ಶನ್ ನಟರಾಗಿಯೂ ಪ್ರಸಿದ್ಧರಾದರು.. ‘ಪ್ರೇಮದಪುತ್ರಿ’ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿಯೇ ರಾಯರ ಪತ್ನಿ ರತ್ನಾಬಾಯಿಯವರು ದಿವಂಗತರಾದರು. ಇದರಿಂದ ರಾಯರು ತಮ್ಮ ಸಂಸಾರವನ್ನು ಬೆಂಗಳೂರಿನಿಂದ ಮದರಾಸಿಗೆ ವರ್ಗಾಯಿಸಬೇಕಾಯಿತು. ಅನಂತರ ತಯಾರಿಸಿದ ದುಬಾರಿ ವೆಚ್ಚದ ‘ವಿಜಯ ನಗರದ ವೀರಪುತ್ರ’ ಗುಣಮಟ್ಟದಿಂದ ಉತ್ತಮವಾಗಿದ್ದರೂ ಆರ್ಥಿಕವಾಗಿ ಯಶಸ್ವಿಯಾಗಲಿಲ್ಲ. ಇದರನಂತರ ಹಲವು ಚಿತ್ರಗಳಲ್ಲಿ ರಾಯರು ನಟಿಸಿದರು. ಹಿಂದಿ, ತಮಿಳು, ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದರು. ‘ಕನ್ನಡ ಚಿತ್ರ ಹಣ್ಣೆಲೆ ಚಿಗುರಿದಾಗ’ ದಲ್ಲಿನ ರಾಯರ ಅಭಿನಯಕ್ಕೆ ಕನ್ನಡದಲ್ಲಿ 1968-69ವರ್ಷದ ಶ್ರೇಷ್ಠ ನಟ ಪ್ರಶಸ್ತಿ ದೊರೆಯಿತು. ಸರ್ಕಾರ ಅವರಿಗೆ ನಾಲ್ಕು ಸಾವಿರ ರೂಪಾಯಿಗಳನ್ನೂ, ಚಿನ್ನದ ಪದಕವನ್ನೂ ಕೊಟ್ಟು ಗೌರವಿಸಿತು. ಈ ಪಾತ್ರ ವಹಿಸಿದಾಗ ರಾಯರಿಗೆ 72ವರ್ಷ. ರಾಯರು ನಿರ್ದೇಶಿಸಿದ ‘ನಮ್ಮ ಮಕ್ಕಳು’ ನೂರು ದಿನ ನಡೆಯಿತಲ್ಲದೆ ಆ ವರ್ಷದ ದ್ವಿತೀಯ ಶ್ರೇಷ್ಠ ಚಿತ್ರವಾಗಿ ಪ್ರಶಸ್ತಿಗಳಿಸಿತು. 'ಸತಿ ಸುಲೋಚನಾ', 'ವಸಂತಸೇನಾ', 'ಗಾಳಿಗೋಪುರ', 'ವಿಜಯನಗರದ ವೀರಪುತ್ರ', 'ನಮ್ಮ ಮಕ್ಕಳು', 'ಹಣ್ಣೆಲೆ ಚಿಗುರಿದಾಗ', 'ಚಂದ್ರಹಾಸ', 'ಮದುವೆ ಮಾಡಿ ನೋಡು', 'ವೀರಕೇಸರಿ', 'ಕರುಳಿನ ಕರೆ', ನಮ್ಮ ಮಕ್ಕಳು, ಸಾಕ್ಷಾತ್ಕಾರ, ಪ್ರೊಫೆಸರ್ ಹುಚ್ಚೂರಾಯ ಹೀಗೆ ನಾಗೇಂದ್ರ ರಾಯರ ಹಲವಾರು ಚಿತ್ರಗಳ ಅಭಿನಯ ಅವರ ಅಭಿಮಾನಿಗಳಿಗೆ ನೆನಪಿಗೆ ಬರುತ್ತದೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ನಾಗೇಂದ್ರರಾಯರು ಕಲಾಜೀವನದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯಲ್ಲಿ ೧೯೬೭ರಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಬೆಂಗಳೂರು ನಗರದ ನಾಗರಿಕರು ಕರ್ನಾಟಕದ ಜನತೆಯ ಪರವಾಗಿ, ನಗರದ ಪುರಭವನದಲ್ಲಿ 1974ರಲ್ಲಿ ಸನ್ಮಾನ ಮಾಡಿ ಗೌರವಿಸಿದಿರು. ಅಂದು ನಾಗೇಂದ್ರರಾಯರ ಆತ್ಮಚರಿತ್ರೆ ‘ಇದು ನನ್ನ ಕಥೆ’ ಬಿಡುಗಡೆಯಾಯಿತು. ಇವರ ಕಲಾಸೇವೆಯನ್ನು ಗೌರವಿಸಿ ಭಾರತ ಸರ್ಕಾರ ೧೯೭೬ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಿತು.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್[ಬದಲಾಯಿಸಿ]

ರಾಯರು ಚಿತ್ರರಂಗದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಆ ರಂಗದ ವಿಷಯದಲ್ಲಿ ಕಾಳಜಿ ಇಟ್ಟುಕೊಂಡಿದ್ದರು. ಹೊಸದಾಗಿ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ‘ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು. ಚಿತ್ರರಂಗದ ವಿವಿಧ ಕಲಾಪ್ರಕಾರಗಳ ಬಗೆಗೆ ತರಬೇತಿ ಕೊಡಲು ಉದ್ದೇಶಿಸಿರುವ ಈ ಸಂಸ್ಥೆ ಇಂದೂ ನೂರಾರು ಕಲಾವಿದರನ್ನು ರೂಪಿಸುತ್ತಿದೆ.

ಕೊನೆಯ ದಿನಗಳು[ಬದಲಾಯಿಸಿ]

ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ರಾಯರು ಗಡ್ಡಮೀಸೆಗಳನ್ನು ಬಿಟ್ಟಿದ್ದರು. ಅವರ ಮುಖಕ್ಕೆ ಬಿಳಿಯ ಗಡ್ಡ ಸೊಗಸಾಗಿ ಒಪ್ಪುತ್ತಿತ್ತು. ಈ ಕಲಾ ತಪಸ್ವಿಯನ್ನು ನೋಡುತ್ತಿದ್ದಂತೆಯೇ ಯಾರಿಗಾದರೂ ಗೌರವ ಭಾವನೆ ಹುಟ್ಟುತ್ತಿತ್ತು. ರಾಯರು ಸರಸಿಗಳು. ಬಾಲ್ಯದಲ್ಲಿ ಕಷ್ಟವನ್ನೂ ಬಡತನವನ್ನೂ ಅನುಭವಿಸಿದರು. ತಮ್ಮ ಸಾಹಸಪ್ರಿಯತೆ, ಪ್ರತಿಭೆ, ಕಷ್ಟಪಟ್ಟು ಕೆಲಸ ಮಾಡುವ ಶ್ರದ್ಧೆ ಇವುಗಳಿಂದ ಪ್ರಖ್ಯಾತರಾದರು. ಜೀವನದಲ್ಲಿ ಅನೇಕ ಬಗೆಯ ನೋವುಗಳನ್ನು ಅನುಭವಿಸಿದರೂ ನಗುನಗುತ್ತಾ ಬಾಳಿದರು. ಅವರದು ತುಂಬು ವ್ಯಕ್ತಿತ್ವದ ದಿಟ್ಟ ಜೀವನ, ಉದಾರ ಬುದ್ಧಿ, ಸಹಾಯ ಪರರು. ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕರಿಗೆ ರಾಯರು ಆರಂಭದ ಅವಕಾಶ ನೀಡಿ, ತರಬೇತಿ ಕೊಟ್ಟು ಮುಂದೆ ತಂದರು. ಇಂದಿಗೂ ಅವರೆಲ್ಲಾ ರಾಯರ ಹೆಸರನ್ನು ಕೇಳಿದರೆ ಗುರುಸ್ವರೂಪರೆಂದು ಕೈ ಮುಗಿಯುತ್ತಾರೆ. ಪ್ರಾಮಾಣಿಕವಾದ ಜೀವನ ನಡೆಸಿ, ತಮ್ಮ ಪ್ರತಿಭೆಯ ಪ್ರಕಾಶಕ್ಕೆ ಎಲ್ಲ ಬಗೆಯ ಸಾಹಸ ಮಾಡಿ, ಭಾರತಾದ್ಯಂತ ಹೆಸರಾಗಿ, ಆ ಮೂಲಕ ಕನ್ನಡದ ಕೀರ್ತಿಯನ್ನು ಎತ್ತರಿಸಿದವರು ನಾಗೇಂದ್ರರಾಯರು. ಇಷ್ಟೆಲ್ಲ ಸಾಧನೆಗಳ ನಂತರವೂ ‘ನಾನಿನ್ನೂ ಕಲಿಯಬೇಕಾದುದು ಬಹಳ ಇದೆ’ ಎನ್ನುವ ವಿನಯ ಅವರದು. ಇಂಥ ಕನ್ನಡ ಚಲನಚಿತ್ರರಂಗದ ಭೀಷ್ಮರು ತಮ್ಮ ೮೧ವರ್ಷಗಳ ಸಾರ್ಥಕವಾದ ತುಂಬು ಜೀವನವನ್ನು ಮುಗಿಸಿ ೧೯೭೭ರ ಫೆಬ್ರವರಿ ೯ರಂದು ಬೆಂಗಳೂರುರಿನಲ್ಲಿ ದಿವಂಗತರಾದರು.

ನಾಗೇಂದ್ರ ರಾಯರ ವಿಶೇಷ ಪತ್ನಿ ಸೇವೆ[ಬದಲಾಯಿಸಿ]

ಆರ್,ಎನ್,ನಾಗೇಂದ್ರ ರಾವ್ ಕನ್ನಡದ ಮೊದಲ ಸಂಗೀತ ನಿರ್ದೇಶಕರು,ಕನ್ನಡ ಚಿತ್ರರಂಗಕ್ಕೆ ಹಲವು ಪ್ರಥಮಗಳನ್ನು ನೀಡಿದವರು,ಇವರ ಮೊದಲ ಮಡದಿ "ರತ್ನಾ ಬಾಯಿ" ಕ್ಯಾನ್ಸರ್ ನಿಂದ ಅಕಾಲ ಮೃತ್ಯುವಿಗೆ ಬಲಿಯಾದ ಮೇಲೆ,ಮೊದಲ ವಾಕ್ಚಿತ್ರ "ಸತಿ ಸುಲೋಚನ "ಚಿತ್ರೀಕರಣದ ವೇಳೆ ಪರಿಚಿತರಾದ ಕಲಾವಿದೆ ಕಮಲಾ ಬಾಯಿ ಅವರನ್ನು ಪ್ರೇಮ ವಿವಾಹವಾದರು,ಕಮಲಾಬಾಯಿ ಕನ್ನಡದ ಇನ್ನೊಬ್ಬ ಪ್ರಸಿದ್ದ ಅಭಿನೀತ್ರಿ ಲಕ್ಷ್ಮೀ ಬಾಯಿ ಯವರ ಸಹೋದರಿ, ಮುಂದೆ ಹಲವು ಕಾಲದ ನಂತರ ಕಮಲಾ ಬಾಯಿಯವರಿಗೆ ಶಸ್ತ್ರ ಚಿಕಿತ್ಸೆಯಾಲ್ಲದ ತಪ್ಪಿನಿಂದ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು,ನಾಗೇಂದ್ರ ರಾಯರಿಗೆ ಮೊದಲ ಹೆಂಡತಿಯಿಂದ ನಾಲ್ವರು ಮಕ್ಕಳಿದ್ದರು,ಎಲ್ಲರೂ ಸ್ಥಿತಿವಂತರಾಗಿದ್ದರು, ಆ ಹೊತ್ತಿಗೆ ನಾಗೇಂದ್ರರಾಯರು ನಟ-ನಿರ್ದೇಶಕರಾಗಿ ಹೆಸರು ಮಾಡಿದ್ದರು,ಕಮಲಾ ಬಾಯಿಯವರಿಗೆ ಮಕ್ಕಳಿರಲಿಲ್ಲ.ದತ್ತು ತೆಗೆದುಕೊಂಡ ಮಗನೂ ಅಕಾಲ ಮೃತ್ಯುವಿಗೆ ಒಳಗಾಗಿದ್ದ.ನಾಗೇಂದ್ರರಾಯರು ಎರಡನೆಯ ಯೋಚನೆಯನ್ನೇ ಮಾಡದೆ ಕಮಲಾ ಬಾಯಿಯವರ ಸೇವೆಗೆ ತಮ್ಮ ಉಳಿತದ ಜೀವನವನ್ನು ಮೀಸಲಿಟ್ಟರು.ಅಡುಗೆ ಮಾಡಿ,ಸ್ನಾನ ಮಾಡಿಸಿ ಕೊನೆಗೆ ಜಡೆ ಹಾಕುವುದರಿಂದ ಹಿಡಿದು ಸಕಲ ಸೇವೆಗಳನ್ನೂ ಮಾಡಿದರು.ಈ ಕಾಲದಲ್ಲಿಯೇ ಅಂದರೆ ೧೯೭೬ರಲ್ಲಿ ನಾಗೇಂದ್ರ ರಾಯರಿಗೆ "ಪದ್ಮಶ್ರೀ" ಗೌರವ ದೊರಕಿತು.ಆಗೆಲ್ಲ ಪದ್ಮಶ್ರೀಗೆ ಸಾಕಷ್ಟು ಬೆಲೆ ಇತ್ತು!.ಈಗಿನಂತೆ ಬಹಳ ಜನಕ್ಕೆ ಕೊಡುತ್ತಿರಲಿಲ್ಲ!. ಜೊತೆಗೆ ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ಪದ್ಮಶ್ರೀ ಗೌರವ ಅದಾಗಿತ್ತು.ಪತ್ರಿಕೆಗಳ ತುಂಬೆಲ್ಲ ಸುದ್ದಿಗಳು ಬಂದವು.ಆದರೆ ನಾಗೇಂದ್ರ ರಾಯರು ತಮ್ಮ ಸತಿ ಸೇವೆಯಿಂದ ಕಿಂಚತ್ಹೂ ವಿಚಲಿತರಾಗಲಿಲ್ಲ.ದಿನಪತ್ರಿಕೆಗಳಲ್ಲಿ "ರಾಷ್ಟ್ರ ಮಟ್ಟದಲ್ಲಿ ಹರಡಿದ ಕನ್ನಡದ ಪತಾಕೆ:ಇಂದು ನಗೆಂದರ ರಾಯರಿಗೆ ಪದ್ಮಶ್ರೀ ಗೌರವ" ಎಂಬ ಸುದ್ದಿ ಮುಖಪುಟದ ಶೀರ್ಷಿಕೆಯಾಗಿತ್ತು. ಪತ್ರಿಕೆ ಓದುತಿದ್ದ ಓದುಗರೊಬ್ಬರು ಬೆಚ್ಚಿಬಿದ್ದರು.ಏಕೆಂದರೆ ಅವರ ಕಣ್ಣೆದುರಿಗೇ ನಾಗೇಂದ್ರ ರಾಯರು ಕಂಟೋನ್ ಮೆಂಟ್ನಲ್ಲಿ ತರಕಾರಿ ಕೊಳ್ಳುತಿದ್ದರು.ಆ ಓದುಗ ಕುತೂಹಲ ತಡೆಯಲಾಗದೆ "ಸರ್ ನೀವು ಇವತ್ತು ದೆಹಲಿಯಲ್ಲಿ ಪದ್ಮಶ್ರೀ ಸ್ವೀಕರಿಸಬೇಕಿತ್ತಲ್ಲವೇ" ಎಂದಾಗ "ನನ್ನ ಪದ್ಮಶ್ರೀ ಮನೆಯಲ್ಲಿದ್ದಾಳಪ್ಪ,ಅದಕ್ಕಿಂತ ದೊಡ್ಡ ಗೌರವ ಅವರೇನು ನೀಡಿಯಾರು"ಎಂದು ಅವರು ಅರ್ಥಪೂರ್ಣವಾಗಿ ಉತ್ತರಿಸಿದ್ದರು. ಈ ಒಂದು ಉದಾಹರಣೆ ಸಾಕು ನಾಗೇಂದ್ರರಾಯರ ಉನ್ನತ ವ್ಯಕ್ತಿತ್ವವನ್ನು ತಿಳಿಸಲು..

ಆರ್.ನಾಗೇಂದ್ರರಾಯರ ನಿರ್ದೇಶನದ ಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ
೧೯೪೩ ಸತ್ಯ ಹರಿಶ್ಚಂದ್ರ
೧೯೪೭ ಮಹಾತ್ಮ ಕಬೀರ್
೧೯೫೩ ಜಾತಕ ಫಲ
೧೯೫೭ ಪ್ರೇಮದ ಪುತ್ರಿ
೧೯೬೧ ವಿಜಯನಗರದ ವೀರಪುತ್ರ
೧೯೬೩ ಆನಂದಭಾಷ್ಪ
೧೯೬೪ ಪತಿಯೇ ದೈವ
೧೯೬೭ ಪ್ರೇಮಕ್ಕು ಪರ್ಮಿಟ್ಟೆ
೧೯೬೯ ನಮ್ಮ ಮಕ್ಕಳು
೧೯೭೦ ನಾಡಿನ ಭಾಗ್ಯ

'ಆರೆನ್ನಾರ್'ರವರು, ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಚಲನಚಿತ್ರ ನಿರ್ದೇಶಕರು