ತಂಬೂರಿಯವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನ್ನುಡಿ[ಬದಲಾಯಿಸಿ]

ತಂಬೂರಿಯವರು ವೈಷ್ಣವ ಸಂಪ್ರದಾಯಕ್ಕೆ ಸೇರಿದಂತಹ ವೃತ್ತಿಗಾಯಕರು. ಈ ಕಲೆಯನ್ನು ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಧಾರ್ಮಿಕ ಹಾಗೂ ಲೌಕಿಕ ಕತೆಗಳೆರಡನ್ನೂ ಹೇಳಿಕೊಂಡು ಬಂದಿರುವರು. ತಂಬೂರಿ ಹಿಡಿದು ಹಾಡುವುದರಿಂದ ಇವರು ತಂಬೂರಿಯವರೆಂದೇ ಹೆಸರಾಗಿದ್ದಾರೆ. ಇವರ ಹಾಡುಗಳಲ್ಲಿ "ಜೀವನದ ನಶ್ವರ, ಆತ್ಮ ಅಮರ, ಈ ದೇಹ ಇರುವವರೆಗೂ, ಭೌತಿಕ ಭೋಗದಲ್ಲೇ ಕಾಲ ಕಳೆಯದೆ ಭಗವಂತನ ಧ್ಯಾನ ಮಾಡಿ ಮುಕ್ತಿ ಪಡೆಯಬೇಕು" ಎಂಬ ಆಧ್ಯಾತ್ಮಿಕ ವಿಚಾರಗಳೇ ಹೆಚ್ಚಾಗಿರುವುದು. ದಟ್ಟಿ, ಪಂಚೆ, ಮೇಲೊಂದು ಅಂಗಿ, ತಲೆಗೆ ಅರಿಶಿನ ಅಥವಾ ಕಾವಿ ಬಣ್ಣದ ಪೇಟ, ಕೊರಳಿಗೆ ರುದ್ರಾಕ್ಷಿ ಸರ, ಹಣೆಗೆ ನಾಮ, ಹೆಗಲಿಗೆ ಜೋಳಿಗೆ ಇವುಗಳು ತಂಬೂರಿಯವರ ವೇಷಭೂಷಣಗಳಾಗಿರುವುದು. ಇವರು ಬೆಳಗಿನ ಜಾವ ಇಷ್ಟದೇವರನ್ನು ನೆನೆದು, ತಮ್ಮ ವೇಷಭೂಷಣಗಳೊಂದಿಗೆ ಹೆಗಲಿಗೆ ತಂಬೂರಿ ಹಾಗೂ ಜೋಳಿಗೆ ತಗುಲಿ ಹಾಕಿಕೊಂಡು ಕೈಯಲ್ಲಿ ಚಿಟಿಕೆ ಹಿಡಿದು ಊರಾಡಲು ಹೋಗುತ್ತಾರೆ. ಮನೆಗಳ ಮುಂದೆ ಹಾಡುತ್ತಾ ಹೋದಂತೆ ಮನೆಯವರು ಕಾಳು ತಂದು ಜೋಳಿಗೆಗೆ ಹಾಕಿದರೆ, ಕಲಾವಿದ ಆ ಹಾಡನ್ನು ಹಾಗೆಯೇ ಮುಂದುವರೆಸಿ ಮುಂದಿನ ಮನೆಯ ಮುಂದೆ ಹಾಡುತ್ತಾನೆ. 'ಊರಾಡುವುದು' ಮುಗಿಯುವವರೆಗೂ ಅವನ ತಂಬೂರಿ ಸಣ್ಣ ದನಿಯಲ್ಲಿ ಶೃತಿ ಮಿಡಿಯುತ್ತಲೇ ಇರುತ್ತದೆ. ವಾರದ ಎಲ್ಲ ದಿನಗಳಲ್ಲೂ ಕಲಾವಿದರು ತಮ್ಮ ಕಾಯಕ ನಡೆಸಿದರೂ ಶನಿವಾರ, ಸೋಮವಾರ, ಮತ್ತು ಶುಕ್ರವಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಊರಾಡಿಕೊಂಡು ಬರುತ್ತಾರೆ. ಇವರ ತತ್ವದ ಹಾಡುಗಳನ್ನು ಕೇಳಿದ ಮನೆಯವರು ದವಸ ಧಾನ್ಯಗಳನ್ನು ಕೊಟ್ಟು ಕಳುಹಿಸುತ್ತಾರೆ.

ತಂಬೂರಿಯು ಒಂದು ಜನಪದ ಸಂಗೀತ ಸಾಧನವಾಗಿದ್ದು ನೀಲಗಾರ ಜನಾಂಗಕ್ಕೆ ತಂಬೂರಿ ಅವಶ್ಯಕವಾದುದ್ದು. ದಾಸ ಪರಂಪರೆಯನ್ನು ನೆನಪಿಸುವ ಈ ತಂಬೂರಿ ತಮಗೆ ದೊರೆತದ್ದರ ಕುರಿತು ನೀಲಗಾರರು ಹೇಳುವ ಕಥೆ ಹೀಗಿದೆ. ಇದು ಮುತ್ತತ್ತಿರಾಯರ ದೇವರು ನೀಲಗಾರ ಪರಂಪರೆಯ ಮೂಲಪುರುಷನಾದ ಸಿದ್ದಪ್ಪಾಜಿಗೆ ಕೊಟ್ಟ ಕೊಡುಗೆ. ಮುತ್ತತ್ತಿರಾಯನೆಂದರೆ ಹನುಮಂತ. ಸಿದ್ದಪ್ಪಾಜಿಯು ಹಲಗೂರಿನ ಪಾಂಚಾಳರಲ್ಲಿಗೆ ತಮಗೆಬೇಕಾದ ಸಲಕರಣೆಗಳನ್ನು ತುಂಬ ತಾತ್ಸಾರದಿಂದ ಕಂಡರು. ಆಗ ಈತನು ಹತ್ತಿರದ ಮುತ್ತತ್ತಿರಾಯನ ಕ್ಷೇತ್ರಕ್ಕೆ ಹೋಗಿ ಅವರ ನೆರವನ್ನು ಪಡೆದನು. ಈ ನೆನಪಿಗಾಗಿ ಸಿದ್ದಪ್ಪಾಜಿಯು ಅವನಿಗೆ ತಂಬೂರಿ ನುಡಿಸುತ್ತ ಮುತ್ತತ್ತಿರಾಯನ ಗುರುಮಹಿಮೆಯನ್ನು ಸಾರ ತೊಡಗಿದನು. ಸಿದ್ದಪ್ಪಾಜಿಯ ಪರಂಪರೆಯವರಾದ ನೀಲಗಾರರು ಅದನ್ನು ಮುಂದುವರಿಸಿದರು.

ಕಥನ ಶೈಲಿ[ಬದಲಾಯಿಸಿ]

ನೀಲಗಾರರ ತಂಬೂರಿ ವಿಶಿಷ್ಟವಾದದ್ದು. ತಂಬೂರಿಯು ಸುಮಾರು ಎರಡು ಮೊಳ ಉದ್ದವಿರುತ್ತದೆ. ಇದನ್ನು ಹಲಸಿನ ಮರದಿಂದ ತಯಾರು ಮಾಡುತ್ತಾರೆ. ಇದರ ಮೇಲು ತುದಿಯಲ್ಲಿ ನಾಗರಹೆಡೆ ಇಲ್ಲವೇ ಸಿಂಹದ ಮುಖವನ್ನು ಬಿಡಿಸುತ್ತಾರೆ. ನೀಲಗಾರರು ತಾವು ಪಡೆದ ಪದಕ ಮತ್ತಿತ್ತರ ಸಾಧನಗಳನ್ನು ಅದರಲ್ಲಿ ನೇತು ಹಾಕಿರುತ್ತಾರೆ. ಈಗಾಗಲೇ ಹೇಳಿರುವಂತೆ ಇವರು ಕಲಾಪ್ರದರ್ಶನದ ಸಂದರ್ಭದಲ್ಲಿ ಗಗ್ಗರ ಮತ್ತು ಢಕ್ಕೆಗಳನ್ನು ನುಡಿಸುತ್ತಾರೆ. ಒಬ್ಬನೇ ನೀಲಗಾರ ಹಾಡುವಾಗ ಚಕ್ರಾಕಾರದ ಗಗ್ಗರಗಳನ್ನು ಎಡಗೈ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ತಂಬೂರಿಯ ಮೇಲೆ ಬಡಿಯುತ್ತಾನೆ. ಬಲಗೈಯಲ್ಲಿ ತಂತಿಯನ್ನು ಮೀಟುತ್ತಾನೆ. ಮೂವರು ನೀಲಗಾರರು ಹಾಡುವಾಗ ಮುಖ್ಯಗಾಯಕರು ತಂಬೂರಿ ಗಗ್ಗರಗಳನ್ನು ಹಿಡಿದು ಕುಳಿತಿರುತ್ತಾನೆ. ಅವನ ಅಕ್ಕಪಕ್ಕದಲ್ಲಿ ಶಿಷ್ಯರು ಕುಳಿತು ಅವರಲೊಬ್ಬ ತಾಳ ನುಡಿಸುತ್ತಾನೆ. ಮತ್ತೊಬ್ಬ ಢೆಕ್ಕೆಯನ್ನು ಬಡಿಯುತ್ತಾ ಇವರು ಹಿಮ್ಮೇಳ ಕೊಡುತ್ತಾರೆ.

ಹಾಡಿನ ರೀತಿ[ಬದಲಾಯಿಸಿ]

ನೀಲಗಾರರ ಹಾಡಿನ ರೀತಿ ಇತರೆ ವೃತ್ತಿಗಾಯಕರಿಗಿಂತ ತುಂಬ ಭಿನ್ನ. ಅಬ್ಬರವಿಲ್ಲದ ಆದರೆ ಸುಕೋಮಲರಾಗದ ಈ ಹಾಡುಗಳು ಕೇಳುಗರನ್ನು ಬೇರೊಂದು ಜಗತ್ತಿಗೆ ಕರೆದೊಯ್ಯುವ ಶಕ್ತಿ ಪಡೆದಿವೆ. ಆರಂಭದ ಪಲ್ಲವಿಗಳು, ಕಥೆಯ ನಿರೂಪಣೆಯ ಸಂದರ್ಭದಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಬಳಸುವ ವಿವಿಧ ರಾಗಗಳು, ಆ ಸಂದರ್ಭದಲ್ಲಿ ಏರಿಳಿತ ಪಡೆಯುವ ಹಲವು ಸಂಗತಿಗಳು ಮಹತ್ವದ ಸುಕೋಮಲ ಕಂಠ ಮತ್ತು ಆ ಕಂಠದ ಸಿರಿಯನ್ನು ಅವರು ಕಾಪಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಇದರ ಕಾವ್ಯ ಹೆಚ್ಚಾಗಿ ಹಾಡಿನ ರೂಪದಲ್ಲಿರುತ್ತದೆ. ನಡುನಡುವೆ ಮಾತ್ರ ಗದ್ಯ ಇರುತ್ತದೆ. ಕುಣಿತವಿಲ್ಲದ ಇವರ ಮೇಳಕ್ಕೆ ನಿರ್ದಿಷ್ಟವಾದ ರಂಗಸ್ಥಳಬೇಕಾಗಿಲ್ಲ.

ಕಾವ್ಯದ ವಿಧ[ಬದಲಾಯಿಸಿ]

ನೀಲಗಾರರು ಹಾಡುವ ಕಾವ್ಯಗಳನ್ನು ಧಾರ್ಮಿಕ ಕಾವ್ಯ ಹಾಗೂ ತಾರ್ಕಿಕ ಕಾವ್ಯಗಳೆಂದು ವಿಭಾಗಿಸಲಾಗಿದೆ. ಧಾರ್ಮಿಕ ಕಾವ್ಯದಲ್ಲಿ "ಮಂಟೇಸ್ವಾಮಿ ಕಾವ್ಯ" ಸೇರುತ್ತದೆ. ತಾರ್ಕಿಕ ಕಾವ್ಯದಲ್ಲಿ ಕುಶ-ಲವರ ಕಥೆ, ಅರ್ಜುನ ಜೋಗಿ ಹಾಡು, ಪಿರಿಯಾಪಟ್ಟಣದ ಕಾಳಗ, ಲಿಂಗಾರಾಜಮ್ಮ, ಚೆನ್ನಿಗರಾಮ, ಸಾರಂಗಧರ, ಗುಂಡುಬ್ರಹ್ಮಯ್ಯ, ಅಕ್ಕನಾಗಮ್ಮ, ಭುಜನಮ್ಮ, ಚೆನ್ನಬಸಣ್ಣ, ಚೆಲುವರಾಯ, ಬಿಳಿಗಿರಿರಂಗ, ನಂಜುಡೇಶ್ವರ, ಕಾರುಗಹಳ್ಳಿ, ಬಾಲನಾಗಮ್ಮ, ಕತ್ತಲರಾಯನ ಕಥೆ, ಮುಡುಕು ತೊರೆಮಲ್ಲಿಕಾರ್ಜುನ, ಮೈದುನರಾಮಣ್ಣ, ಮಡಿವಾಳ ಮಾಚಯ್ಯ, ಬಂಜೆ ಹೊನಮ್ಮ, ಹರಳಯ್ಯನವರು ಕಥೆ, ಮಾತಾಂಗಿಕಾಳಗ, ಬಾಣಾಸುರವಧೆ, ಸತ್ಯವ್ರತ ಮೊದಲಾದ ಕಥೆಗಳು ಸೇರುತ್ತವೆ.

ತಂಬೂರಿಯವರು[ಬದಲಾಯಿಸಿ]

ತಂಬೂರಿಯವರು ವೈಷ್ಣವ ಸಂಪ್ರದಾಯಕ್ಕೆ ಸೇರಿದಂತಹ ವೃತ್ತಿಗಾಯಕರು. ಈ ಕಲೆಯನ್ನು ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಧಾರ್ಮಿಕ ಹಾಗೂ ಲೌಕಿಕ ಕಥೆಗಳೆರಡನ್ನೂ ಹೇಳಿಕೊಂಡು ಬಂದಿರುವರು. ತಂಬೂರಿ ಹಿಡಿದು ಹಾಡುವುದರಿಂದ ಇವರು ತಂಬೂರಿಯವರೆಂದೇ ಹೆಸರಾಗಿದ್ದಾರೆ. ಇವರ ಹಾಡುಗಳಲ್ಲಿ "ಜೀವನದ ನಶ್ವರ, ಆತ್ಮ ಅಮರ, ಈ ದೇಹ ಇರುವವರೆಗೂ, ಭೌತಿಕ ಭೋಗದಲ್ಲೇ ಕಾಲ ಕಳೆಯದೆ ಭಗವಂತನ ಧ್ಯಾನ ಮಾಡಿ ಮುಕ್ತಿ ಪಡೆಯಬೇಕು" ಎಂಬ ಆಧ್ಯಾತ್ಮಿಕ ವಿಚಾರಗಳೇ ಹೆಚ್ಚಾಗಿರುವುದು. ದಟ್ಟಿ, ಪಂಚೆ, ಮೇಲೊಂದು ಅಂಗಿ,ತಲೆಗೆ ಅರಿಶಿನ ಅಥವಾ ಕಾವಿ ಬಣ್ಣದ ಪೇಟ, ಕೊರಳಿಗೆ ರುದ್ರಾಕ್ಷಿ ಸರ, ಹಣೆಗೆ ನಾಮ, ಹೆಗಲಿಗೆ ಜೋಳಿಗೆ ಇವುಗಳು ತಂಬೂರಿಯವರ ವೇಷಭೂಷಣಗಳಾಗಿರುವುದು. ಇವರು ಬೆಳಗಿನ ಜಾವ ಇಷ್ಟದೇವರನ್ನು ನೆನೆದು, ತಮ್ಮ ವೇಷಭೂಷಣಗಳೊಂದಿಗೆ ಹೆಗಲಿಗೆ ತಂಬೂರಿ ಹಾಗೂ ಜೋಳಿಗೆ ತಗುಲಿ ಹಾಕಿಕೊಂಡು ಕೈಯಲ್ಲಿ ಚಿಟಿಕೆ ಹಿಡಿದು ಊರಾಡಲು ಹೋಗುತ್ತಾರೆ. ಮನೆಗಳ ಮುಂದೆ ಹಾಡುತ್ತಾ ಹೋದಂತೆ ಮನೆಯವರು ಕಾಳುತಂದು ಜೋಳಿಗೆಗೆ ಹಾಕಿದರೆ, ಕಲಾವಿದ ಆ ಹಾಡನ್ನು ಹಾಗೆಯೇ ಮುಂದುವರೆಸಿ ಮುಂದಿನ ಮನೆಯ ಮುಂದೆ ಹಾಡುತ್ತಾನೆ. 'ಊರಾಡುವುದು' ಮುಗಿಯುವವರೆಗೂ ಅವನ ತಂಬೂರಿ ಸಣ್ಣ ದನಿಯಲ್ಲಿ ಶೃತಿ ಮಿಡಿಯುತ್ತಲೇ ಇರುತ್ತದೆ. ವಾರದ ಎಲ್ಲ ದಿನಗಳಲ್ಲೂ ಕಲಾವಿದರು ತಮ್ಮ ಕಾಯಕ ನಡೆಸಿದರೂ ಶನಿವಾರ, ಸೋಮವಾರ ಮತ್ತು ಶುಕ್ರವಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಊರಾಡಿಕೊಂಡು ಬರುತ್ತಾರೆ. ಇವರ ತತ್ವದ ಹಾಡುಗಳನ್ನು ಕೇಳಿದ ಮನೆಯವರು ದವಸ ಧಾನ್ಯಗಳನ್ನು ಕೊಟ್ಟು ಕಳುಹಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೭.