ವಿಷಯಕ್ಕೆ ಹೋಗು

ಆಟಿ ಕಳೆಂಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಟಿಕಳಂಜ ಕುಣಿತ ಇಂದ ಪುನರ್ನಿರ್ದೇಶಿತ)
ಆಟಿ ಕಳೆಂಜ

ಆಟಿ ಕಳೆಂಜ ತುಳುನಾಡಿನ ಒಂದು ಶ್ರೇಷ್ಠ ಆಚರಣೆಯಾಗಿದೆ. ತುಳುನಾಡಿನಲ್ಲಿ ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ.[೧]

ಆಟಿ ಕಳೆಂಜನ ವೇಷ ಭೂಷಣ

[ಬದಲಾಯಿಸಿ]

ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ ‘ತೆಂಬರೆ’-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು. ಮುಖಕ್ಕೆ ಬಿಳಿ ಬಣ್ಣವನ್ನು ಬಳಿದುಕೊಳ್ಳುತ್ತಾರೆ. ತಟ್ಟಿಯಿಂದ ಹೆಣೆದು ಮಾಡಿದ ಕೊಡೆಯನ್ನು ಹೂವು-ಎಲೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳಿ ಅಲ್ಲಿ ನೃತ್ಯ ಮಾಡುತ್ತಾರೆ. ಪಾಡ್ದನ ಹೇಳಲು ಒಬ್ಬ ಸಹಾಯಕ ಜತೆಗಿರುತ್ತಾನೆ. ಆತ ತೆಂಬರೆಯನ್ನು ಬಾರಿಸುತ್ತಾ ಪಾಡ್ದನದ ಮೂಲಕ ಕಳೆಂಜದ ಕಥೆಯನ್ನು ವಿವರಿಸುತ್ತಾ ಸಾಗುತ್ತಾನೆ. ಕಳೆಂಜ ವೇಷಧಾರಿ ನೃತ್ಯ ಮಾಡುತ್ತಾನೆ.[೨]

ಆಟಿಕಳೆಂಜ ಕುಣಿತದ ಉದ್ದೇಶ

[ಬದಲಾಯಿಸಿ]

ಮನುಷ್ಯನಿಗಾಗಲಿ, ಪ್ರಾಣಿ ಪಶುಗಳಿಗಾಗಲಿ ಬಂದ ಮಾರಿಯನ್ನು ಅಥವಾ ರೋಗವನ್ನು ಓಡಿಸುವುದು ಆಟಿಕಳೆಂಜನ ಕಾರ್ಯ ಎಂಬುದಾಗಿ ತುಳು ಪಾಡ್ದನದಿಂದ ತಿಳಿದು ಬರುವುದು. ತುಳುವಿನಲ್ಲಿ ಆಷಾಡ ಆರಂಭವಾಗುವುದು ಎಂದರೆ ಮಳೆಗಾಲದ ಆರಂಭವೆಂದರ್ಥ, ಕೆಲವೊಮ್ಮೆ ಮಳೆ ಬೀಳದಿದ್ದರೆ ಬಿಸಿ ಹೆಚ್ಚಾಗಿ ಕೆರೆ-ಕುಂಟೆಗಳು ಬತ್ತಲಾರಂಭಿಸಿ ಜನ ನೀರಿಗಾಗಿ ಪರಿತಪಿಸುವರು, ಸಹಜವಾಗಿ ರೋಗ ರುಜಿನ ಹುಟ್ಟಿಕೊಳ್ಳುವುದು. ಮಳೆಗಾಲ ಆರಂಭ ಹಾಗೂ ಬೇಸಿಗೆಯ ಕೊನೆಯ ಈ ಕಾಲವು ಸಂಕ್ರಮಣದ ಸ್ಥಿತಿಯನ್ನು ತಂದೊಡ್ಡುತ್ತವೆ. ಆಟಿ ಅಥವಾ ಆಷಾಡ ತಿಂಗಳಲ್ಲಿ ಬಿಸಿಲು ಕಾದರೆ ಆನೆಯ ಬೆನ್ನೂ ಬಿರಿಯುವುದೆಂಬುದಾಗಿ ತುಳುನಲ್ಲಿ ಗಾದೆಯಿದೆ (ಆಟಿದ ದೊಂಬು ಆನೆತ ಬೆರಿ ಪುಡಪು) ಹೀಗಾಗಿ ಆಟಿಕಳೆಂಜ ಬಂದರೆ ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ಜನರಲ್ಲಿ ಇದೆ.[೩]

ಆಟಿಕಳೆಂಜನಿಗೆ ನಿಡುವ ದಾನ

[ಬದಲಾಯಿಸಿ]

ಕಳೆಂಜ ಭೇಟಿ ನೀಡುವ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ-ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ. ಈ ಮೂಲಕ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ. ನಂತರ ತೋಟದಲ್ಲಿ ಬೆಳೆದ ಬಾಳೆಗೊನೆ, ತೆಂಗಿನ ಕಾಯಿಯನ್ನು ಹೇಳದೆ ಕೇಳದೆ ಕೊಂಡೊಯ್ಯುವ ಪದ್ಧತಿ ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದರಿಂದ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ. ಮನೋವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಶ್ರೀಮಂತರಿಗೆ ಬಡತನದ ತೀವ್ರತೆಯನ್ನು ತೋರಿಸುವ ಕ್ರಮವೂ ಇರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Bantwala: ತುಳುನಾಡಿನ ವಿಶಿಷ್ಟ ಆಚರಣೆ- ಮಾರಿ ಕಳೆವ ಆಟಿ ಕಳೆಂಜ". NAMMAKUDLA NEWS - ನಮ್ಮಕುಡ್ಲ ನ್ಯೂಸ್. 29 July 2023. Retrieved 12 July 2024.
  2. "ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ". News18 ಕನ್ನಡ. 21 July 2022. Retrieved 12 July 2024.
  3. Kannada, TV9 (24 June 2024). "ತುಳುನಾಡಿನ ವಿಶಿಷ್ಟ ಸಂಪ್ರದಾಯ; ಆಷಾಢದಲ್ಲಿ ಊರಿನ ಮಾರಿ ಕಳೆಯಲು ಬರುವನು ಆಟಿ ಕಳಂಜ". TV9 Kannada. Retrieved 12 July 2024.{{cite news}}: CS1 maint: numeric names: authors list (link)