ಬಿಜಾಪುರ ಲೋಕ ಸಭೆ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತಿದ ಈ ಬಾವಿ ಈಗಲೂ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾಖಂಡಕಿ ಗ್ರಾಮದಲ್ಲಿ ಮಹಿಪತಿದಾಸರ ವೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.

ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸಗಿ-ತಂಗಡಗಿಯಲ್ಲೇ. ತಾಳಿಕೋಟಿ ಸಮೀಪದ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ.

ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 8 ಬಾರಿ ವಿಜಯಿಯಾಗಿದೆ.
  • ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ರಾಜಾರಾಂ ಗಿರಿಧರಲಾಲ್ ದುಬೆಯವರು ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಆಯ್ಕೆಯಾದರು.
  • ರಾಜಾರಾಂ ಗಿರಿಧರಲಾಲ್ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು.
  • ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರವಾಗಿ ಆಯ್ಕೆಯಾದರು. ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿದ್ದರು. ನಂತರ 1967ರಲ್ಲಿ ಉತ್ತರ ಕನ್ನಡ (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ ದಿನಕರ ದೇಸಾಯಿ(ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು.
  • 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು.
  • 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ, 1984ರಲ್ಲಿ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಕಾಂಗ್ರೆಸ್‍ಯೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.
  • 1999ರಲ್ಲಿ ಬಸನಗೌಡ ಪಾಟೀಲ(ಯತ್ನಾಳ)ರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಮಂತ್ರಿಮಂಡಳದಲ್ಲಿ 2002-2003ರಲ್ಲಿ ರಾಜ್ಯ ಜವಳಿ ಸಚಿವ ಹಾಗೂ 2003-2004ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು.
  • 2009 ಮತ್ತು 2014ರಲ್ಲಿ ರಮೇಶ್ ಜಿಗಜಿಣಗಿಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ನರೇಂದ್ರ ಮೋದಿ ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು.
  • 1999ರಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ.
  • ರಾಜಾರಾಮ ಗಿರಿಧರಲಾಲ ದುಬೆ, ಕಾಳಿಂಗಪ್ಪ ಭೀಮಣ್ಣ ಚೌಧರಿ, ಬಿ.ಕೆ.ಗುಡದಿನ್ನಿ, ಬಸನಗೌಡ ಪಾಟೀಲ(ಯತ್ನಾಳ) ಮತ್ತು ರಮೇಶ್ ಜಿಗಜಿಣಗಿಯವರು ಎರಡೆರಡು ಬಾರಿ ಆಯ್ಕೆಯಾಗಿದ್ದಾರೆ.
  • ಕಾಂಗ್ರೆಸ್‍ನ ಎಂ.ಬಿ.ಪಾಟೀಲ ಮತ್ತು ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಸ್ವತಂತ್ರ ಪಕ್ಷದ ಗುರುಲಿಂಗಪ್ಪ ದೇವಪ್ಪ ಪಾಟೀಲ, ಭಾರತೀಯ ಜನತಾ ಪಕ್ಷದ ಬಸನಗೌಡ ಪಾಟೀಲ(ಯತ್ನಾಳ) ಹಾಗೂ ರಮೇಶ ಜಿಗಜಿಣಗಿಯವರು ಸಂಸದರಾಗುವ ಮುಂಚೆ ಶಾಸಕರಾಗಿದ್ದರು.

ವಿಧಾನಸಭಾ ಚುನಾವಣಾ ಕ್ಷೇತ್ರಗಳು[ಬದಲಾಯಿಸಿ]

ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆ(ಶಾಸಕರು)ಗೆ, ಒಬ್ಬರು ಲೋಕಸಭೆ(ಸಂಸದರು)ಗೆ ಮತ್ತು ಒಬ್ಬರು ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುತ್ತಾರೆ.

ಪ್ರಮುಖ ರಾಜಕೀಯ ಪಕ್ಷಗಳು[ಬದಲಾಯಿಸಿ]

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು

  • ಜನತಾ ದಳ (JD)
  • ಸ್ವತಂತ್ರ ಪಕ್ಷ(SWA)
  • ಭಾರತೀಯ ಲೋಕ ದಳ (BLD)
  • ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP)
  • ಪಕ್ಷೇತರ(IND)

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ಸಂಸತ್ತಿನ ಸದಸ್ಯರ ವಿವರಣೆ

ವರ್ಷ ಲೋಕ ಸಭಾ ಕ್ಷೇತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಕರ್ನಾಟಕ ರಾಜ್ಯ
2014 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ ಬಿಜೆಪಿ 471757 ಪ್ರಕಾಶ ರಾಠೋಡ ಕಾಂಗ್ರೇಸ್ 401938
2009 ವಿಜಯಪುರ ಲೋಕಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ ಬಿಜೆಪಿ 308939 ಪ್ರಕಾಶ ರಾಠೋಡ ಕಾಂಗ್ರೇಸ್ 266535
2004 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) ಬಿಜೆಪಿ 344905 ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ 307372
1999 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) ಬಿಜೆಪಿ 348816 ಲಕ್ಷ್ಮಿಬಾಯಿ ಗುಡದಿನ್ನಿ ಕಾಂಗ್ರೇಸ್ 312177
1998 ವಿಜಯಪುರ ಲೋಕಸಭಾ ಕ್ಷೇತ್ರ ಎಂ.ಬಿ.ಪಾಟೀಲ ಕಾಂಗ್ರೆಸ್ 261623 ಬಸನಗೌಡ ಲಿಂಗನಗೌಡ ಪಾಟೀಲ ಬಿಜೆಪಿ 208801
1996 ವಿಜಯಪುರ ಲೋಕಸಭಾ ಕ್ಷೇತ್ರ ಬಸನಗೌಡ ರುದ್ರಗೌಡ ಪಾಟೀಲ ಜನತಾ ದಳ 185504 ಬಸನಗೌಡ ಪಾಟೀಲ(ಯತ್ನಾಳ) ಬಿಜೆಪಿ 154911
1991 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ ಕಾಂಗ್ರೆಸ್ 207887 ರಾಜಶೇಖರ ಪಟ್ಟಣಶೆಟ್ಟಿ ಬಿಜೆಪಿ 140233
1989 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ ಕಾಂಗ್ರೆಸ್ 306050 ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ ಜನತಾ ದಳ 182717
1984 ವಿಜಯಪುರ ಲೋಕಸಭಾ ಕ್ಷೇತ್ರ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ ಜನತಾ ಪಕ್ಷ 206737 ರಾಯನಗೌಡ ಭೀಮಪ್ಪ ಚೌಧರಿ ಕಾಂಗ್ರೆಸ್ 204318
1980 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ ಕಾಂಗ್ರೆಸ್(ಐ) 167091 ನಿಂಗಪ್ಪ ಸಿದ್ದಪ್ಪ ಖೇಡ ಜೆಎನ್‌ಪಿ 156529
1977 ವಿಜಯಪುರ ಲೋಕಸಭಾ ಕ್ಷೇತ್ರ ಕೆ.ಬಿ.ಚೌಧರಿ ಕಾಂಗ್ರೆಸ್ 173700 ಈರಪ್ಪ ಚನ್ನಮಲ್ಲಪ್ಪ ನಾಗಠಾಣ ಬಿಎಲ್‌ಡಿ 152026
ಮೈಸೂರು ರಾಜ್ಯ
1971 ವಿಜಯಪುರ ಲೋಕಸಭಾ ಕ್ಷೇತ್ರ ಭೀಮಪ್ಪ ಎಲ್ಲಪ್ಪ ಚೌಧರಿ ಕಾಂಗ್ರೆಸ್ 131486 ಬಿ.ಕೆ.ಗುಡದಿನ್ನಿ ಕಾಂಗ್ರೆಸ್(ಓ) 83798
ಉಪಚುನಾವಣೆ 1967
1967 ವಿಜಯಪುರ ಲೋಕಸಭಾ ಕ್ಷೇತ್ರ ಬಿ.ಕೆ.ಗುಡದಿನ್ನಿ ಕಾಂಗ್ರೆಸ್ 107997 ಆರ್.ಬಿ.ಪಾಟೀಲ ಸ್ವತಂತ್ರ ಪಕ್ಷ 59089
1967 ವಿಜಯಪುರ ಲೋಕಸಭಾ ಕ್ಷೇತ್ರ ಗುರುಲಿಂಗಪ್ಪ ದೇವಪ್ಪ ಪಾಟೀಲ ಸ್ವತಂತ್ರ ಪಕ್ಷ 113208 ರಾಜಾರಾಮ ಗಿರಿಧರಲಾಲ ದುಬೆ ಕಾಂಗ್ರೆಸ್ 111104
1962 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ ಕಾಂಗ್ರೆಸ್ 105452 ಮುರಿಗಪ್ಪ ಸಿದ್ದಪ್ಪ ಸುಗಂಧಿ ಸ್ವತಂತ್ರ ಪಕ್ಷ 63456
1957 ವಿಜಯಪುರ ಲೋಕಸಭಾ ಕ್ಷೇತ್ರ ಮುರಿಗಪ್ಪ ಸಿದ್ದಪ್ಪ ಸುಗಂಧಿ ಪಕ್ಷೇತರ 88209 ರಾಜಾರಾಮ ಗಿರಿಧರಲಾಲ ದುಬೆ ಕಾಂಗ್ರೆಸ್ 77273
ಬಾಂಬೆ ರಾಜ್ಯ
1951 ವಿಜಯಪುರ ಲೋಕಸಭಾ ಕ್ಷೇತ್ರ ರಾಜಾರಾಮ ಗಿರಿಧರಲಾಲ ದುಬೆ ಕಾಂಗ್ರೆಸ್ 119895 ಮುರಿಗಪ್ಪ ಸಿದ್ದಪ್ಪ ಸುಗಂಧಿ ಕೆ‍ಎಂಪಿಪಿ 44095

ಉಲ್ಲೇಖಗಳು[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]