ಕಾರ್ಗಿಲ್ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding gu:કારગિલ યુદ્ધ
೩೪೧ ನೇ ಸಾಲು: ೩೪೧ ನೇ ಸಾಲು:
[[nn:Kargilkrigen]]
[[nn:Kargilkrigen]]
[[no:Kargilkrigen]]
[[no:Kargilkrigen]]
[[pa:ਕਾਰਗਿਲ ਦੀ ਲੜਾਈ]]
[[pa:ਕਾਰਗਿਲ ਯੁੱਧ]]
[[pnb:کارگل دی لڑائی 1999]]
[[pnb:کارگل دی لڑائی 1999]]
[[pt:Guerra de Kargil]]
[[pt:Guerra de Kargil]]

೦೫:೪೧, ೨೦ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

Kargil War
Part of the Indo-Pakistani Wars
ಚಿತ್ರ:Kargil Bofors.jpg
An Indian Bofors 155 mm howitzer field gun being repositioned during the war.
ದಿನಾಂಕMay-July 1999
ಸ್ಥಳKargil district, Kashmir
ಫಲಿತಾಂಶ India retook Pakistani occupied ridges. Pakistan withdrew from Indian-controlled Kashmir to pre-war Line of Control.
Territorial
changes
Status quo ante bellum
ಯುದ್ಧಾಕಾಂಕ್ಷಿಗಳು
ಭಾರತ
India
ಪಾಕಿಸ್ತಾನ
Pakistan,
Mujahideen, Foreign volunteers
ದಂಡನಾಯಕರು ಮತ್ತು ನಾಯಕರು
ಭಾರತ Ved Prakash Malik ಪಾಕಿಸ್ತಾನ Pervez Musharraf
ಸಂಖ್ಯಾಬಲ
30,000 5,000
ಸಾವುನೋವುಗಳು ಮತ್ತು ನಷ್ಟಗಳು
Indian Official Figures:
527 killed,[೧][೨][೩]
1,363 wounded[೪]
1 POW

Pakistani Estimates:
357-4,000 killed[೫][೬] (Pakistan troops)
665+ soldiers wounded[೫]

8 POW.[೭]


ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ದವುಟೆಂಪ್ಲೇಟು:Fn ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಉಭಯ ರಾಷ್ಟ್ರಗಳ ನಡುವಿನ de facto ಗಡಿಯಾಗಿರುವ ನಿಯಂತ್ರಣ ರೇಖೆಯಲ್ಲಿ(LOC)ರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣ.[೮] ಯುದ್ಧದ ಆರಂಭದ ಹಂತಗಳಲ್ಲಿ, ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು, ಆದರೆ ಯುದ್ಧಾನಂತರದ ಸಾವು ನೋವುಗಳ ದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು, ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು.[೯][೧೦][೧೧][೧೨] ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು LoCಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತಾರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು LOCಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು.


ಅತೀ ಎತ್ತರದ ಪರ್ವತಚ್ಛಾದಿತ ಪ್ರದೇಶದಲ್ಲಿ ಕಾದಾಟ ಮಾಡಿದಕ್ಕೆ ಈ ಯುದ್ಧ ಇತ್ತೀಚಿನ ಉದಾಹರಣೆಯಾಗಿದ್ದು, ಉಭಯ ಕಡೆಗಳೂ ಗಣನೀಯವಾಗಿ ಸೈನ್ಯ ವ್ಯವಸ್ಥಾಪನಾ ತಂತ್ರದ ಸಮಸ್ಯೆಗಳನ್ನು ಎದುರಿಸಬೇಕಾಯಿತು.1969ರಲ್ಲಿ ಚೀನಾ-ಸೋವಿಯಟ್ ಗಡಿ ಸಂಘರ್ಷದ ನಂತರ, ಯಾವುದೇ ಎರಡು ರಾಷ್ಟ್ರಗಳು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಅವುಗಳ ನಡುವೆ ನಡೆದ ಎರಡನೇ ನೇರ ಭೂ-ಯುದ್ಧವಾಗಿದೆ, ಅಲ್ಲದೆ ಬಹು ಇತ್ತೀಚೆಗೆ ನಡೆದ ಯುದ್ಧ ಕೂಡ ಇದೇ ಆಗಿದೆ. (1974ರಲ್ಲೇ ಭಾರತ ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರೂ, ಭಾರತ ಮತ್ತು ಪಾಕಿಸ್ತಾನವೆರಡೂ 1998ರ ಮೇನಲ್ಲಿ ವಿದಳನ ಸಾಧನಗಳ ಸ್ಫೋಟ ಪರೀಕ್ಷೆಗಳನ್ನು ನಡೆಸಿತು). ಈ ಸಂಘರ್ಷ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಳಕ್ಕೆ ಕಾರಣವಾಯಿತು, ಮತ್ತು ಇದರಿಂದಾಗಿ ಭಾರತದ ರಕ್ಷಣಾ ವೆಚ್ಚವೂ ಹೆಚ್ಚಿತು.[ಸೂಕ್ತ ಉಲ್ಲೇಖನ ಬೇಕು]


ಸ್ಥಳ

ಸಂಘರ್ಷದ ಸ್ಥಳ

1947ರಲ್ಲಿ ಭಾರತದ ವಿಭಜನೆಗೆ ಮೊದಲು ವಿಶ್ವದ ಕೆಲವು ಉನ್ನತ ಶಿಖರಗಳಿಂದ ಬೇರ್ಪಟ್ಟ ಪ್ರತ್ಯೇಕ ಕಣಿವೆಗಳಲ್ಲಿ ವಾಸಿಸುವ ವೈವಿಧ್ಯಮಯ ಭಾಷಿಕ, ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳೊಂದಿಗೆ ವಿರಳ ಜನಸಂಖ್ಯೆ ಹೊಂದಿದ ಪ್ರದೇಶ ಕಾರ್ಗಿಲ್ ಲಡಕ್ ಜಿಲ್ಲೆಯ ಬಾಲ್ಟಿಸ್ತಾನ್ ಭಾಗವಾಗಿತ್ತು. ಭಾರತದ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಲಡಕ್ ಉಪ ವಿಭಾಗದ ಕಾರ್ಗಿಲ್ ಪಟ್ಟಣ ಮತ್ತು ಜಿಲ್ಲೆ ಭಾರತದ ಬದಿಯಲ್ಲೇ ಉಳಿದುಕೊಳ್ಳುವುದರ ಜತೆಗೆ, ಬಾಲ್ಟಿಸ್ತಾನ್ ಜಿಲ್ಲೆಯನ್ನು ನಿಯಂತ್ರಣ ರೇಖೆ(LOC)ಯು ಇಬ್ಭಾಗಿಸುವುದರೊಂದಿಗೆ ಪ್ರಥಮ ಕಾಶ್ಮೀರ ಕದನ (1947–48) ಮುಕ್ತಾಯವಾಗಿತ್ತು.[೧೩] 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೋಲನುಭವಿಸಿದ ಬಳಿಕ ಗಡಿಗೆ ಸಂಬಂಧಿಸಿದಂತೆ ಸಶಸ್ತ್ರ ಸಂಘರ್ಷ ನಡೆಸದಿರುವ ಭರವಸೆಯೊಂದಿಗೆ ಸಿಮ್ಲಾ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.[೧೪]


ಕಾರ್ಗಿಲ್ ಪಟ್ಟಣವು ಶ್ರೀನಗರದಿಂದ 205 ಕಿ.ಮೀ(120 ಮೈಲುಗಳು)ದೂರದಲ್ಲಿದ್ದು,[೧೫]LOCಯಲ್ಲಿ ಉತ್ತರದ ಪ್ರದೇಶಗಳಿಗೆ ಅಭಿಮುಖವಾಗಿದೆ. ಹಿಮಾಲಯದ ಇತರೆ ಪ್ರದೇಶಗಳಲ್ಲಿರುವಂತೆ ಕಾರ್ಗಿಲ್ ಸಮಶೀತೋಷ್ಣ ಹವಾಗುಣ ಹೊಂದಿದೆ. ಬೇಸಿಗೆಗಳಲ್ಲಿ ತಂಪು ಹವೆ ಮತ್ತು ರಾತ್ರಿ ಕಡುಶೀತ ವಾತಾವರಣ, ಚಳಿಗಾಲಗಳು ಸುದೀರ್ಘ,ಮೈಕೊರೆಯುವ ವಾತಾವರಣವಿದ್ದು, ಉಷ್ಣಾಂಶ ಆಗಾಗ್ಗೆ −48 °C (−54 °F)ಗೆ ಕುಸಿಯುತ್ತದೆ.[೧೬]


ಶ್ರೀನಗರದಿಂದ ಲೆಹ್‌ಗೆ ಸಂಪರ್ಕಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ NH 1D ಕಾರ್ಗಿಲ್ ಮ‌ೂಲಕ ಹಾದುಹೋಗುತ್ತದೆ. ಅತಿಕ್ರಮಣ ಮತ್ತು ಬಳಿಕ ಹೋರಾಟ ಕಂಡ ಈ ಪ್ರದೇಶ 160 ಕಿ.ಮೀ ಉದ್ದಕ್ಕೂ ವಿಸ್ತರಿಸಿರುವ ಪರ್ವತಶ್ರೇಣಿಯಾಗಿದ್ದು, ಮೇಲಿನಿಂದ ಕೆಳಗೆ ವೀಕ್ಷಿಸಿದಾಗ ಶ್ರೀನಗರ ಮತ್ತು ಲೆಹ್‌ಗಳನ್ನು ಸಂಪರ್ಕಿಸುವ ಏಕೈಕ ರಸ್ತೆ ಗೋಚರಿಸುತ್ತದೆ.[೮] ಹೆದ್ದಾರಿಯ ಮೇಲಿನ ಪರ್ವತಶ್ರೇಣಿಗಳಲ್ಲಿ ಅಂದೆ ಸಾಮಾನ್ಯವಾಗಿ 5000 ಮೀಟರ್(16,000 ಅಡಿ)ಎತ್ತರದಲ್ಲಿ ಸೇನೆ ಶಿಬಿರಗಳಿರುತ್ತವೆ, ಕೆಲವು ಶಿಬಿರಗಳು 5485 ಮೀಟರ್‌(18,000 ಅಡಿ)ಎತ್ತರದಲ್ಲೂ ಇವೆ.[೧೭] ಜಿಲ್ಲಾ ರಾಜಧಾನಿ ಕಾರ್ಗಿಲ್ ಸೇರಿದಂತೆ ಜನಸಾಂದ್ರತೆಯ ಪ್ರದೇಶಗಳಾದ ಮುಷ್ಕೊ ಕಣಿವೆ ಮತ್ತು ಕಾರ್ಗಿಲ್ ಆಗ್ನೇಯಕ್ಕಿರುವ ಡ್ರಾಸ್ ಪಟ್ಟಣ ಹಾಗೂ ಕಾರ್ಗಿಲ್ ಈಶಾನ್ಯಕ್ಕಿರುವ ಬಟಾಲಿಕ್ ವಲಯ ಮತ್ತಿತರ ಪ್ರದೇಶಗಳು ಸಂಘರ್ಷದ ವೇಳೆ ಮುಂಚೂಣಿಯಲ್ಲಿದ್ದವು.

ಕಾರ್ಗಿಲ್ ಪ್ರದೇಶವನ್ನು ಸುತ್ತುವರಿದ ಭೂಪ್ರದೇಶ ಮತ್ತು ಅಲ್ಲಿ ಸೇನಾ ವಾಸ್ತವ್ಯ ಇಲ್ಲದೇ ಇದ್ದುದು ಕಾರ್ಗಿಲ್ ಮೇಲೆ ಗುರಿಯಿರಿಸಲು ಮತ್ತು ಪೂರ್ವ ನಿಯೋಜಿಸಿದಂತೆ ವಶಕ್ಕೆ ತೆಗೆದುಕೊಳ್ಳಲು ಎಡೆಮಾಡಿಕೊಟ್ಟಿತು. [೧೮]

ಶಿಖರದ ತುದಿಗಳಲ್ಲಿ ಯುದ್ಧ ತಂತ್ರಗಾರಿಕೆಗೆ ಬೇಕಾಗುವ ಮುಖ್ಯ ಲಕ್ಷಣಗಳು ಮತ್ತು ಸನ್ನದ್ಧ ಸ್ಥಿತಿಯಲ್ಲಿ ರಕ್ಷಣಾ ನೆಲೆಗಳಿರುವುದರಿಂದ, ಎತ್ತರ ಪ್ರದೇಶದ ರಕ್ಷಣೆಗೆ ನಿಂತವರಿಗೆ ಕೋಟೆಗೆ ಸಮನಾದ ಅನುಕೂಲತೆಗಳನ್ನು ಈ ಪರ್ವತಶ್ರೇಣಿಗಳು ಕಲ್ಪಿಸುತ್ತವೆ.


ಪರ್ವತ ಕಾಳಗದಲ್ಲಿ ಎತ್ತರ ಪ್ರದೇಶದ ರಕ್ಷಣೆಗೆ ನಿಂತವರನ್ನು ಕದಲಿಸಲು ರಕ್ಷಕರಿಗಿಂತ ಹೆಚ್ಚಿನ ಪ್ರಮಾಣದ ದಾಳಿಕೋರರ ಅಗತ್ಯವಿರುತ್ತದೆ.[೧೯] ಅತೀ ಎತ್ತರದ ಜಾಗ ಮತ್ತು ಮೈಕೊರೆಯುವ ಚಳಿಯಿಂದ ಸಂಕಷ್ಟಗಳು ಮತ್ತಷ್ಟು ಉಲ್ಬಣಿಸುತ್ತವೆ.[೨೦]


ಕಾರ್ಗಿಲ್ ಪ್ರದೇಶ ಪಾಕಿಸ್ತಾನ ನಿಯಂತ್ರಿತ ಪ್ರದೇಶ ಸ್ಕಾರ್ಡು ಪಟ್ಟಣದಿಂದ ಕೇವಲ 173 ಕಿಮೀ(108 ಮೈಲು)ದೂರದಲ್ಲಿದ್ದು, ಪಾಕಿಸ್ತಾನಿ ಯೋಧರಿಗೆ ಯುದ್ಧತಂತ್ರ ಮತ್ತು ಫಿರಂಗಿ ಬೆಂಬಲ ಒದಗಿಸುವ ಸಾಮರ್ಥ್ಯ ಹೊಂದಿದೆ.


ಹಿನ್ನೆಲೆ

ಆಯಕಟ್ಟಿನ ಸ್ಥಳದಲ್ಲಿರುವ ಕಾರ್ಗಿಲ್ ಪಟ್ಟಣ

1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಬಳಿಕ, ಉಭಯ ರಾಷ್ಟ್ರಗಳು ಸುತ್ತಲಿನ ಶಿಖರಗಳಲ್ಲಿ ಸೇನೆ ಶಿಬಿರಗಳನ್ನು ನಿರ್ಮಿಸುವ ಮ‌ೂಲಕ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ಹಿಡಿತ ಹೊಂದಲು ಪ್ರಯತ್ನಗಳು ನಡೆಸಿಯೇ ಇದ್ದವು, ಅದರ ಫಲವಾಗಿ 1980ರಲ್ಲಿ ಸೇನೆ ಚಕಮಕಿಗಳ ನಡೆಯಿತು, ಆದರೆ ನೆರೆಯ ಎರಡು ರಾಷ್ಟ್ರಗಳ ಸೇನೆ ಪಡೆಗಳ ನಡುವೆ ನೇರ ಇಷ್ಟು ಸುದೀರ್ಘ ಸಶಸ್ತ್ರ ಸಂಘರ್ಷ ನಡೆದಿರಲಿಲ್ಲ.[೨೧] ಆದಾಗ್ಯೂ 1990ರಲ್ಲಿ, ಕಾಶ್ಮೀರದಲ್ಲಿ ಪ್ರತ್ಯೇಕತವಾದಿ ಚಟುವಟಿಕೆಗಳಿಂದ, ಅವುಗಳಲ್ಲಿ ಕೆಲವಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡಿದ್ದರಿಂದ ಉದ್ವಿಗ್ನತೆ ಮತ್ತು ಸಂಘರ್ಷ ಹೆಚ್ಚುವ ಜೊತೆಗೆ 1998ರಲ್ಲಿ ಉಭಯ ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಯುದ್ಧದ ವಾತಾವರಣ ಸ್ಫೋಟಿಸಲು ದಾರಿ ಕಲ್ಪಿಸಿತು. ಉದ್ವಿಗ್ನ ಪರಿಸ್ಥಿತಿ ಶಮನದ ಪ್ರಯತ್ನವಾಗಿ 1999ರ ಫೆಬ್ರವರಿಯಲ್ಲಿ ಲಾಹೋರ್ ಘೋಷಣೆಗೆ ಉಭಯ ರಾಷ್ಟ್ರಗಳು ಅಂಕಿತ ಹಾಕಿ, ಕಾಶ್ಮೀರ ಸಂಘರ್ಷಕ್ಕೆ ಶಾಂತಿಯುತ ಮತ್ತು ದ್ವಿಪಕ್ಷೀಯ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದವು.

1998-1999ರ ಚಳಿಗಾಲದ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯ ಕೆಲವು ಶಕ್ತಿಗಳು ಪಾಕಿಸ್ತಾನಿ ಪಡೆಗಳು ಮತ್ತು ಅರೆಸೇನೆ ಪಡೆಗಳಿಗೆ ಗೋಪ್ಯ ತರಬೇತಿ ನೀಡಿ, ಕೆಲವರನ್ನು ಮುಜಾಹಿದ್ದೀನ್ ಸೋಗಿನಲ್ಲಿ ಭಾರತದ LOC ಪ್ರದೇಶಗಳಿಗೆ ನುಸುಳಿಸಿತು.

ಈ ಅತಿಕ್ರಮಣಕ್ಕೆ "ಆಪರೇಷನ್ ಬದ್ರ್" ಎಂಬ ಸಂಕೇತ ನಾಮವನ್ನು ಇಡಲಾಗಿತ್ತು.[೨೨] ಕಾಶ್ಮೀರ ಮತ್ತು ಲಡಕ್ ನಡುವೆ ಸಂಪರ್ಕವನ್ನು ಕಡಿದು,ಸಿಯಾಚಿನ್ ನೀರ್ಗಲ್ಲು ಪ್ರದೇಶದಿಂದ ಭಾರತದ ಪಡೆಗಳು ಕಾಲುಕೀಳುವಂತೆ ಮಾಡುವ ಗುರಿಯನ್ನು ಅದು ಹೊಂದಿತ್ತು. ಹೀಗೆ ಮಾಡುವ ಮ‌ೂಲಕ ಅತ್ಯಂತ ಕ್ಲಿಷ್ಟವಾಗಿರುವ ಕಾಶ್ಮೀರ ವಿವಾದ ಬಗೆಹರಿಸುವ ಮಾತುಕತೆಗೆ ಭಾರತದ ಮೇಲೆ ಒತ್ತಡ ಹೇರುವ ತಂತ್ರವಾಗಿತ್ತು. ಈ ವಲಯದಲ್ಲಿನ ಯಾವುದೇ ಉದ್ವಿಗ್ನಕಾರಿ ಪರಿಸ್ಥಿತಿ ಕಾಶ್ಮೀರ ವಿಷಯದಲ್ಲಿ ಅಂತಾರಾಷ್ಟ್ರೀಯ ಗಮನ ಸೆಳೆದು, ಕಾಶ್ಮೀರ ವಿವಾದದ ಶೀಘ್ರ ಇತ್ಯರ್ಥಕ್ಕೆ ನೆರವಾಗುತ್ತದೆಂದು ಪಾಕಿಸ್ತಾನ ನಂಬಿತ್ತು. ಭಾರತದ ಆಡಳಿತದಲ್ಲಿರುವ ಕಾಶ್ಮೀರದ ವಿಷಯದಲ್ಲಿ ತಾನಾಗೀಯೇ ಮುನ್ನಡಿಯಿಡುವುದರೊಂದಿಗೆ, ದಶಕದ ಕಾಲದ ಬಂಡಾಯಕ್ಕೆ ನೈತಿಕ ಸ್ಥೈರ್ಯ ತುಂಬುವ ಗುರಿಯನ್ನು ಅದು ಹೊಂದಿದ್ದಿರಲೂಬಹುದು. 1984ರಲ್ಲಿ ಭಾರತ ಮೇಘದೂತ್ ಕಾರ್ಯಾಚರಣೆ ನಡೆಸಿ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಬಹುಭಾಗ ವಶಪಡಿಸಿಕೊಂಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು ಕೂಡ ಪಾಕಿಸ್ತಾನ ಕಾರ್ಯಾಚರಣೆ ಕೈಗೊಂಡ ಉದ್ದೇಶವಿರಬಹುದು ಎಂದು ಕೆಲವು ಲೇಖಕರು ಊಹಿಸಿದ್ದಾರೆ.[೨೩]


ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಮತ್ತು ಅನೇಕ ಇತರೆ ಪರಿಣತರ ಪ್ರಕಾರ, [೨೪][೨೫]ಸೈನ್ಯ ಸರಬರಾಜು ಮಾರ್ಗ ನಿರ್ಮಾಣ ಸೇರಿದಂತೆ ಬಹುತೇಕ ಪೂರ್ವ ಯೋಜನೆಯನ್ನು ಸಾಕಷ್ಟು ಮುಂಚಿತವಾಗಿಯೇ ಕೈಗೊಳ್ಳಲಾಗಿತ್ತು. 1980ಮತ್ತು 1990ರ ದಶಕಗಳ ಅನೇಕ ಸಂದರ್ಭಗಳಲ್ಲಿ, ಜಿಯಾ ಉಲ್ ಹಕ್ ಮತ್ತು ಬೇನಜೀರ್ ಭುಟ್ಟೊ ಮುಂತಾದ ಪಾಕಿಸ್ತಾನಿ ಮುಖಂಡರಿಗೆ ಕಾರ್ಗಿಲ್ ಪ್ರದೇಶದೊಳಕ್ಕೆ ನುಸುಳಿಸುವ ಇದೇ ರೀತಿಯ ಪ್ರಸ್ತಾವನೆಗಳನ್ನು ಸೇನೆಯು ಮಂಡಿಸಿತ್ತು, ಆದರೆ ಪರಿಪೂರ್ಣ ಯುದ್ಧಕ್ಕೆ ಉಭಯ ರಾಷ್ಟ್ರಗಳನ್ನು ಎಳೆಯಬಹುದೆಂಬ ಭಯದಿಂದ ಯೋಜನೆಗಳನ್ನು ಕೈಬಿಡಲಾಗಿತ್ತು.[೨೬][೨೭][೨೮]


ಅಕ್ಚೋಬರ್ 1998ರಲ್ಲಿ ಪರ್ವೇಜ್ ಮುಷರಫ್ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ದಾಳಿಯ ನೀಲಿ ನಕ್ಷೆಯನ್ನು ಶೀಘ್ರದಲ್ಲೇ ಪುನಃ ಕ್ರಿಯಾಶೀಲಗೊಳಿಸಲಾಗಿದೆ ಎಂಬುದು ಕೆಲವು ವಿಶ್ಲೇಷಕರ ಅಂಬೋಣ.[೨೯][೨೨] ಕಾರ್ಗಿಲ್ ಪಿತೂರಿಗಳ ಬಗ್ಗೆ ತಮಗೆ ತಿಳಿದೇ ಇರಲಿಲ್ಲವೆಂದೂ, ಭಾರತದಲ್ಲಿ ತಮ್ಮ ಸಹಯೋಗಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ತುರ್ತು ಫೋನ್ ಕರೆ ಸ್ವೀಕರಿಸಿದಾಗಲೇ ಈ ಪರಿಸ್ಥಿತಿಯ ಬಗ್ಗೆ ಮೊದಲಿಗೆ ಅರಿವಾಯಿತು ಎಂದು ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ನವಾಜ್ ಶರೀಫ್ ಯುದ್ಧದ ಬಳಿಕ ಹೇಳಿಕೆ ನೀಡಿದ್ದಾರೆ.[೩೦] ಮುಷರಫ್ ಮತ್ತು ಅವರ ಇಬ್ಬರು ಅಥವಾ ಮ‌ೂವರು ಆಪ್ತರು ಈ ಯೋಜನೆ ರೂಪಿಸಿದರೆಂದು ಷರೀಫ್ ಹೇಳಿದ್ದಾರೆ.[೩೧]ಈ ಅಭಿಪ್ರಾಯವನ್ನು ಕೆಲವು ಪಾಕಿಸ್ತಾನಿ ಲೇಖಕರು ಹಂಚಿಕೊಂಡಿದ್ದು, ಮುಷರಫ್ ಸೇರಿದಂತೆ ಕೇವಲ ನಾಲ್ಕು ಜನರಲ್‌ಗಳಿಗೆ ಮಾತ್ರ ಯೋಜನೆಯ ಬಗ್ಗೆ ತಿಳಿದಿತ್ತು ಎಂದು ಹೇಳಿಕೆ ನೀಡಿದ್ದಾರೆ.[೩೨][೨೮] ಆದಾಗ್ಯೂ, ವಾಜಪೇಯಿ ಅವರು ಫೆಬ್ರವರಿ 20ರಂದು ಲಾಹೋರ್‌‌ಗೆ ಪ್ರಯಾಣಿಸುವುದಕ್ಕೆ 15 ದಿನಗಳು ಮುಂಚಿತವಾಗಿಯೇ ಕಾರ್ಗಿಲ್ ಕಾರ್ಯಾಚರಣೆ ಕುರಿತು ಷರೀಫ್‌ಗೆ ಮಾಹಿತಿ ನೀಡಲಾಗಿತ್ತೆಂದು ಮುಷರಫ್ ಹೇಳಿಕೊಂಡಿದ್ದಾರೆ.[೩೩]


ಯುದ್ಧದ ಪ್ರಗತಿ

ಕಾರ್ಗಿಲ್ ಯುದ್ಧಕ್ಕೆ ಮೂರು ಪ್ರಮುಖ ಹಂತಗಳಿದ್ದವು. ಮೊದಲಿಗೆ, ಭಾರತ ನಿಯಂತ್ರಿತ ಕಾಶ್ಮೀರ ಭಾಗಕ್ಕೆ ಪಾಕಿಸ್ತಾನ ತನ್ನ ಪಡೆಗಳನ್ನು ನುಸುಳಿಸಿತು ಮತ್ತು ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು ತನ್ನ ಫಿರಂಗಿ ದಾಳಿಯ ವ್ಯಾಪ್ತಿಯೊಳಗೆ NH1 ತರಲು ಅನುಕೂಲ ಮಾಡಿಕೊಂಡಿತು. ಎರಡನೇ ಹಂತದಲ್ಲಿ ಪಾಕಿಸ್ತಾನದ ಅತಿಕ್ರಮಣವನ್ನು ಪತ್ತೆಹಚ್ಚಿದ ಭಾರತ, ಅದಕ್ಕೆ ಪ್ರತಿಕ್ರಿಯಿಸಲು ತನ್ನ ಪಡೆಗಳನ್ನು ಸಜ್ಜುಗೊಳಿಸಿತು. ಅಂತಿಮ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಮುಖ ಯುದ್ಧ ನಡೆದು, ಪಾಕಿಸ್ತಾನಿ ಪಡೆಗಳು ಅತಿಕ್ರಮಿಸಿಕೊಂಡ ಕೆಲವು ಪ್ರದೇಶಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತ ಫಲಶ್ರುತಿ ಕಂಡಿತು, ಮತ್ತು ತರುವಾಯ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ನಿಯಂತ್ರಣ ರೇಖೆಯಾಚೆಗೆ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು.


ಪಾಕಿಸ್ತಾನದ ಆಕ್ರಮಣ

ಅತಿಕ್ರಮಣ ಮತ್ತು ಸೇನೆ ಸ್ಥಾಪನೆ

ಚಳಿಗಾಲದ ಋತುವಿನ ಸಂದರ್ಭದಲ್ಲಿ, ಕಾಶ್ಮೀರದ ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿಯ ಕಾರಣದಿಂದ,LOCಯ ಆಯಾ ಬದಿಗಳಲ್ಲಿರುವ ಕೆಲವು ಮುಂಚೂಣಿ ಶಿಬಿರಗಳನ್ನು ತ್ಯಜಿಸುವುದು ಮತ್ತು ಅತಿಕ್ರಮಣಕ್ಕೆ ದಾರಿಯಾಗಬಹುದಾದ ಪ್ರದೇಶಗಳ ಗಸ್ತನ್ನು ಕುಂಠಿತಗೊಳಿಸುವುದು ಭಾರತ ಮತ್ತು ಪಾಕಿಸ್ತಾನದ ಎರಡೂ ಸೇನೆಗಳ ಸಾಮಾನ್ಯ ವಾಡಿಕೆಯಾಗಿತ್ತು. ಚಳಿಯ ತೀವ್ರತೆ ಕಡಿಮೆಯಾದ ಬಳಿಕ, ಮುಂಚೂಣಿ ಪ್ರದೇಶಗಳನ್ನು ಮರುವಶಕ್ಕೆ ತೆಗೆದುಕೊಂಡು ಪಹರೆಯನ್ನು ಆರಂಭಿಸಲಾಗುತ್ತದೆ.


1999ರ ಫೆಬ್ರವರಿ ತಿಂಗಳಲ್ಲಿ, ಪಾಕಿಸ್ತಾನದ ಸೇನೆಯು ಕಾರ್ಗಿಲ್ ಪ್ರದೇಶದ LOCಯ ತನ್ನ ಬದಿಯಲ್ಲಿ ತ್ಯಜಿಸಿದ್ದ ಶಿಬಿರಗಳನ್ನು ಮರು ಆಕ್ರಮಿಸಿಕೊಳ್ಳಲು ಆರಂಭಿಸಿತು, ಇದರ ಜೊತೆಗೆ LOCಯ ಭಾರತದ ಬದಿಯಲ್ಲಿರುವ ಶಿಬಿರಗಳ ಮೇಲೆ ಆಕ್ರಮಣಕ್ಕೆ ಕೂಡ ತನ್ನ ಪಡೆಗಳನ್ನು ಕಳಿಸಿತು.[೩೪] ಉನ್ನತ ವಿಶೇಷ ಸೇವೆ ಗುಂಪಿನ ಪಡೆಗಳು ಮತ್ತು ನಾರ್ಥರ್ನ್ ಲೈಟ್ ಇನ್‌ಫೇಂಟ್ರಿದ ನಾಲ್ಕರಿಂದ ಏಳು ತುಕಡಿಗಳು[೩೫][೩೬](ಆ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ಖಾಯಂ ಭಾಗವಾಗಿರದ ಅರೆಸೇನೆ ಪಡೆ)ಭಾರತದ ನಿಯಂತ್ರಿತ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ರಹಸ್ಯವಾಗಿ ಮತ್ತು ಬಹಿರಂಗವಾಗಿ ಶಿಬಿರಗಳನ್ನು ಸ್ಥಾಪಿಸಿದವು. ಕೆಲವು ವರದಿಗಳ ಪ್ರಕಾರ, ಈ ಪಾಕಿಸ್ತಾನಿ ಪಡೆಗಳಿಗೆ ಕಾಶ್ಮೀರದ ಬಂಡುಕೋರರು ಮತ್ತು ಅಫ್ಘಾನ್ ಬಾಡಿಗೆ ಹಂತಕರ ಬೆಂಬಲವಿತ್ತು.[೩೭]

ಕೆಳ ಮುಷೋಖ್ ಕಣಿವೆಯ ಶಿಖರಗಳು, ಡ್ರಾಸ್‌‍ನ ಮಾರ್ಪೋ ಲಾ ಪರ್ವತ ಶ್ರೇಣಿಗಳು, ಕಾರ್ಗಿಲ್ ಬಳಿಯ ಕಕ್ಸಾರ್‌, ಸಿಂಧು ನದಿಯ ಪೂರ್ವಕ್ಕಿರುವ ಬಟಾಲಿಕ್ ವಲಯ, LOC ಉತ್ತರಕ್ಕೆ ತಿರಗುವ ಚೋರ್‌ಬಾಟ್ಲಾ ವಲಯದ ಶಿಖರಗಳು, ಮತ್ತು ಸಿಯಾಚಿನ್ ಪ್ರದೇಶದ ದಕ್ಷಿಣಕ್ಕಿರುವ ಟರ್ಟೊಕ್ ವಲಯದಲ್ಲಿ ಪಾಕಿಸ್ತಾನಿ ಸೇನೆಯ ಅತಿಕ್ರಮಣ ನಡೆಯಿತು.


ಪಾಕಿಸ್ತಾನದ ಅತಿಕ್ರಮಣ ಪತ್ತೆ ಮತ್ತು ಭಾರತದ ಸೇನೆ ಸಜ್ಜು

ಈ ಅತಿಕ್ರಮಣಗಳನ್ನು ಆರಂಭದಲ್ಲೇ ಗುರುತಿಸಲು ಸಾಧ್ಯವಾಗದೇ ಇರುವುದಕ್ಕೆ ಅನೇಕ ಕಾರಣಗಳಿವೆ: ಪಾಕಿಸ್ತಾನದ ಪಡೆಗಳು ಅತಿಕ್ರಮಿಸಿದ ಕೆಲವು ಪ್ರದೇಶಗಳಿಗೆ ಭಾರತ ತನ್ನ ಗಸ್ತುಪಡೆಗಳನ್ನು ಕಳಿಸಿರಲಿಲ್ಲ ಮತ್ತು ಕೆಲವು ಪ್ರದೇಶಗಳಲ್ಲಿ ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿಗಳನ್ನು ನಡೆಸುವ ಮ‌ೂಲಕ ಅತಿಕ್ರಮಣಕಾರರಿಗೆ ರಕ್ಷಣೆ ಒದಗಿಸಿತು. ಆದರೆ ಬಟಾಲಿಕ್ ವಲಯದ ಸ್ಥಳೀಯ ಕುರುಬನೊಬ್ಬ ನೀಡಿದ ಸುಳಿವನ್ನು ಆಧರಿಸಿ, ಮೇ ಎರಡನೇ ವಾರದಲ್ಲಿ ಕ್ಯಾಪ್ಟನ್ ಸೌರಬ್ ಕಾಲಿಯ ನೇತೃತ್ವದ ಭಾರತದ ಗಸ್ತು ಪಡೆ ಹೊಂಚು ಹಾಕಿದ ಬಳಿಕ[೩೮] ಪಾಕಿಸ್ತಾನ ಪಡೆಗಳ ಅತಿಕ್ರಮಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ, ಅತಿಕ್ರಮಣದ ಸ್ವರೂಪದ ಬಗ್ಗೆ ತುಸು ಮಾಹಿತಿ ಮಾತ್ರ ಗೊತ್ತಿದ್ದ ಆ ಪ್ರದೇಶದ ಭಾರತೀಯ ಪಡೆಗಳು, ಅತಿಕ್ರಮಣಕಾರರು ಜಿಹಾದಿಗಳಾಗಿದ್ದು ಕೆಲವೇ ದಿನಗಳಲ್ಲಿ ಅವರನ್ನು ತೆರವು ಮಾಡಬಹುದೆಂದು ವಾದಿಸಿದ್ದರು. ಆದರೆ LOCಯ ಇನ್ನೂ ಕೆಲವು ಕಡೆಗಳಲ್ಲಿ ಅತಿಕ್ರಮಣವನ್ನು ಪತ್ತೆಹಚ್ಚಿದ್ದು ಮತ್ತು ಅತಿಕ್ರಮಣಕಾರರು ಯೋಜಿಸಿದ ಭಿನ್ನ ತಂತ್ರಗಳಿಂದಾಗಿ ಒಟ್ಟು ದಾಳಿಯ ಯೋಜನೆ ಅತೀ ದೊಡ್ಡ ಪ್ರಮಾಣದಲ್ಲಿರುವುದು ಭಾರತೀಯ ಸೇನೆಗೆ ಮನದಟ್ಟಾಯಿತು. ಈ ನುಸುಳುವಿಕೆಯಿಂದ ವಶಪಡಿಸಿಕೊಂಡ ಒಟ್ಟುಪ್ರದೇಶ 130 km² - 200 km² ನಡುವೆಯಿದೆಯೆಂಬ ಸಾಮಾನ್ಯ ಅಭಿಪ್ರಾಯವಿದೆ.[೩೯][೩೨] ಆದಾಗ್ಯೂ, ಭಾರತದ 500 ಚದರ ಮೈಲು (1,300 km²)ಪ್ರದೇಶವನ್ನು ಆಕ್ರಮಿಸಲಾಗಿತ್ತೆಂದು ಮುಷರಫ್ ಹೇಳಿಕೆ ನೀಡಿದ್ದಾರೆ.[೩೬]

ಭಾರತ ಸರ್ಕಾರ 2,00,000 ಭಾರತೀಯ ಪಡೆಗಳನ್ನು ಸಜ್ಜುಗೊಳಿಸಿ ಆಪರೇಷನ್ ವಿಜಯ್ ಮ‌ೂಲಕ ಸೂಕ್ತ ಉತ್ತರ ನೀಡಿತು. ಆದಾಗ್ಯೂ, ಭೂಪ್ರದೇಶದ ಸ್ವರೂಪದಿಂದಾಗಿ ಡಿವಿಷನ್ ಮತ್ತು ಕಾರ್ಪ್ಸ್ ಪಡೆಗಳ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಲಿಲ್ಲ. ರೆಜಿಮೆಂಟ್ ಅಥವಾ ಪದಾತಿದಳದ ಮಟ್ಟದಲ್ಲೇ ಬಹುತೇಕ ಹೋರಾಟವನ್ನು ನಡೆಸಲಾಯಿತು. ವಸ್ತುಶಃ 20,000 ಮಂದಿ ಸೈನಿಕರಿದ್ದ ಭಾರತೀಯ ಸೇನೆಯ ಎರಡು ವಿಭಾಗಗಳು,[೪೦] ಇದರೊಂದಿಗೆ ಭಾರತದ ಅರೆಸೇನೆ ಪಡೆಯ ಅನೇಕ ಸಾವಿರ ಮಂದಿ ಮತ್ತು ವಾಯುಪಡೆಯನ್ನು ಯುದ್ಧ ವಲಯದಲ್ಲಿ ನಿಯೋಜಿಸಲಾಯಿತು. ಕಾರ್ಗಿಲ್-ಡ್ರಾಸ್ ವಲಯದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಭಾರತೀಯ ಸೈನಿಕರ ಒಟ್ಟು ಸಂಖ್ಯೆ 30,000ಕ್ಕೆ ಸಮೀಪದಲ್ಲಿತ್ತು. ಪಾಕಿಸ್ತಾನದ ಸೇನೆ ಶಸ್ತ್ರಗಳನ್ನು ಸರಬರಾಜು ಮಾಡಿದವರು ಸೇರಿದಂತೆ ಅತಿಕ್ರಮಣಕಾರರ ಸಂಖ್ಯೆ ಸುಮಾರು 5,000ವೆಂದು ಯುದ್ಧ ಅಂತಿಮ ಹಂತದಲ್ಲಿ ಅಂದಾಜು ಮಾಡಲಾಗಿತ್ತು.[೩೭][೩೨][೮] ಹೆಚ್ಚುವರಿ ಫಿರಂಗಿ ಬೆಂಬಲ ನೀಡಿದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪಡೆಗಳು ಕೂಡ ಈ ಅಂಕಿಅಂಶದಲ್ಲಿ ಸೇರಿವೆ.


ಭಾರತದ ಭೂಸೇನೆಯ ಜಮಾವಣೆಗೆ ಬೆಂಬಲವಾಗಿ ಭಾರತೀಯ ವಾಯುಪಡೆ ಆಪರೇಷನ್ ಸೇಫ್ಡ್ ಸಾಗರ್ ಕಾರ್ಯಾಚರಣೆ ಆರಂಭಿಸಿತು, ಆದರೆ ಎತ್ತರದ ಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ಯುದ್ಧದ ಸಂದರ್ಭದಲ್ಲಿ ಅದರ ಪರಿಣಾಮಕಾರತ್ವ ಸೀಮಿತಗೊಂಡಿತು, ಇದರಿಂದಾಗಿ ಬಾಂಬ್ ಲೋಡ್‌ಗಳ ಸಂಖ್ಯೆ ಸೀಮಿತಗೊಂಡವು, ಅಲ್ಲದೆ ಬಳಸಬಹುದಾದ ವಾಯುನೆಲೆಗಳ ಸಂಖ್ಯೆ ಕೂಡ ಸೀಮಿತಗೊಂಡಿತು.


ಪಾಕಿಸ್ತಾನ ಬಂದರುಗಳಿಗೆ(ಮುಖ್ಯವಾಗಿ ಕರಾಚಿ ಬಂದರಿಗೆ) ತಡೆ ವಿಧಿಸುವ ಪ್ರಯತ್ನದ ಮ‌ೂಲಕ[೪೧] ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿ ಭಾರತೀಯ ನೌಕಾಪಡೆ ಕೂಡ ಸ್ವತಃ ಯುದ್ಧ ಸಿದ್ಧತೆ ಮಾಡಿಕೊಂಡಿತು.[೪೨] ಬಳಿಕ, ಪೂರ್ಣ ಸ್ವರೂಪದ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದಲ್ಲಿ ಕೇವಲ 6 ದಿನಗಳಿಗೆ ಸಾಕಾಗುವಷ್ಟು ಇಂಧನ ದಾಸ್ತಾನು ಉಳಿದುಕೊಂಡಿದೆಯೆಂದು ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಬಹಿರಂಗಪಡಿಸಿದ್ದರು.[೮]


ಪಾಕಿಸ್ತಾನದ ನೆಲೆಗಳ ಮೇಲೆ ಭಾರತದ ದಾಳಿ

ಕಾಶ್ಮೀರದ ಭೂಪ್ರದೇಶ ಪರ್ವತಮಯವಾಗಿದ್ದು, ಅತೀ ಎತ್ತರದಲ್ಲಿದೆ; ಲೆಹ್‌ನಿಂದ ಶ್ರೀನಗರದವರೆಗಿನ ರಾಷ್ಟ್ರೀಯ ಹೆದ್ದಾರಿ 1D ಮುಂತಾದ ಅತ್ಯುತ್ತಮ ರಸ್ತೆಗಳಿಗೆ ಎರಡು ಪಥಗಳು ಮಾತ್ರ ಇವೆ. ಕಡಿದಾದ ಭೂಪ್ರದೇಶ ಮತ್ತು ಇಕ್ಕಾಟದ ರಸ್ತೆಗಳು ಸೇನಾಪಡೆಯ ಸಂಚಾರವನ್ನು ನಿಧಾನಗೊಳಿಸಿತು ಮತ್ತು ಎತ್ತರ ಪ್ರದೇಶಗಳು ವಿಮಾನದಲ್ಲಿ ಸರಕುಗಳನ್ನು ಸಾಗಿಸುವ ಸಾಮರ್ಥ್ಯಕ್ಕೆ ಅಡ್ಡಿಯಾದ್ದರಿಂದ NH1 Dಯನ್ನು(ಪಾಕಿಸ್ತಾನದ ಗುಂಡಿನ ದಾಳಿಯ ಅಡಿಯಲ್ಲಿರುವ ಹೆದ್ದಾರಿಯ ವಾಸ್ತವ ವ್ಯಾಪ್ತಿ) ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಭಾರತದ ಆದ್ಯತೆಯಾಗಿತ್ತು. ತಮ್ಮ ವೀಕ್ಷಣಾ ನೆಲೆಗಳಿಂದ ಪರೋಕ್ಷವಾಗಿ NH 1D ಮೇಲೆ ಫಿರಂಗಿ ಗುಂಡಿನ ದಾಳಿ ನಡೆಸಿ ಭಾರತೀಯ ಪಡೆಗಳಲ್ಲಿ ಅಪಾರ ಸಾವುನೋವು ಉಂಟು ಮಾಡುವುದಕ್ಕಾಗಿ ಪಾಕಿಸ್ತಾನದ ಪಡೆಗಳು ಸ್ಪಷ್ಟವಾಗಿ ನೋಡಬಹುದಾದ ಮಾರ್ಗವಿತ್ತು.[೪೩] ಭಾರತದ ಸೇನೆಗೆ ಸೈನ್ಯ ಜಮಾವಣೆ ಮತ್ತು ಸರಬರಾಜಿಗೆ ಹೆದ್ದಾರಿಯೇ ಪ್ರಮುಖ ಮಾರ್ಗವಾದ್ದರಿಂದ ಗಂಭೀರ ಸಮಸ್ಯೆ ತಲೆದೋರಿತು.[೪೪] ಮುಖ್ಯ ಮಾರ್ಗದ ಮೇಲೆ ಪಾಕಿಸ್ತಾನ ಶೆಲ್ ದಾಳಿ ನಡೆಸುವುದರಿಂದ ಲೆಹ್ ಪ್ರತ್ಯೇಕವಾಗುವ ಆತಂಕವಿತ್ತು, ಆದರೂ ಹಿಮಾಚಲಪ್ರದೇಶದ ಮ‌ೂಲಕ ಲೆಹ್‌ಗೆ ಪರ್ಯಾಯ(ಉದ್ದದ)ರಸ್ತೆಯೊಂದು ಅಸ್ತಿತ್ವದಲ್ಲಿತ್ತು.


ಅತಿಕ್ರಮಣಕಾರರು ಸಣ್ಣ ಶಸ್ತ್ರಗಳು ಮತ್ತು ಗ್ರೆನೇಡ್ ಲಾಂಚರ್‌ಗಳನ್ನು ಹೊಂದಿದ್ದರಲ್ಲದೆ, ಮೋರ್ಟಾರ್‌ಗಳು, ಫಿರಂಗಿಗಳು ಮತ್ತು ವಿಮಾನ ನಿಗ್ರಹ ಬಂದೂಕುಗಳಿಂದ ಸಜ್ಜಿತರಾಗಿದ್ದರು. ಅನೇಕ ಶಿಬಿರಗಳಲ್ಲಿ ಭಾರೀ ನೆಲಬಾಂಬ್‌ಗಳನ್ನು ಹೂತಿಡಲಾಗಿತ್ತು,ICBL ವರದಿ ಪ್ರಕಾರ, ಯುದ್ಧಾನಂತರ ಭಾರತ 8,000ಕ್ಕೂ ಹೆಚ್ಚು ಸಿಬ್ಬಂದಿ ನಿಗ್ರಹ ನೆಲಬಾಂಬ್‌ಗಳನ್ನು ಪತ್ತೆ ಮಾಡಿದ್ದಾಗಿ ಹೇಳಿದೆ.[೪೫] ಅಮೆರಿಕ ಪೂರೈಸಿದ [೪೬]ಮಾನವರಹಿತ ವಿಮಾನಗಳು ಮತ್ತು [೪೭]AN/TPQ-36 ಫೈರ್‌ಫೈಂಡರ್ ರೆಡಾರ್‌ ಮ‌ೂಲಕ ಭಾರತದ ಪಡೆಗಳ ಮೇಲೆ ಪಾಕಿಸ್ತಾನ ಕಣ್ಗಾವಲು ನಡೆಸಿತ್ತು.[೪೮] NH 1Dಯನ್ನು ನೇರವಾಗಿ ನೋಡಬಹುದಾದ ಪರ್ವತಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಭಾರತದ ಆರಂಭಿಕ ದಾಳಿಗಳ ಗುರಿಯಾಗಿತ್ತು ಮತ್ತು ಕಾರ್ಗಿಲ್ ಪಟ್ಟಣದ ಹೆದ್ದಾರಿಯ ಚಾಚಿದ ಪ್ರದೇಶಗಳಿಗೆ ಅತೀ ಪ್ರಾಶಸ್ತ್ಯ ನೀಡಲಾಗಿತ್ತು. ನಿಯಂತ್ರಣ ರೇಖೆಯಲ್ಲಿರುವ ಬಹುತೇಕ ಶಿಬಿರಗಳು ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ, ಹೆಚ್ಚುಕಡಿಮೆ ಪ್ರತಿಯೊಂದು ಅತಿಕ್ರಮಿತ ಶಿಬಿರಗಳ ಮರುವಶ ಪ್ರಾದೇಶಿಕ ಮತ್ತು ಹೆದ್ದಾರಿಯ ಭದ್ರತೆಗಳೆರಡನ್ನೂ ಹೆಚ್ಚಿಸಿದವು. ಯುದ್ಧದುದ್ದಕ್ಕೂ ಈ ಮಾರ್ಗದ ರಕ್ಷಣೆ ಮತ್ತು ಮುಂಚೂಣಿ ಶಿಬಿರಗಳ ಮರುವಶ ಕಾರ್ಯಾಚರಣೆ ಉದ್ದೇಶ ಗಳಾಗಿದ್ದವು.

NH 1Dಗೆ ಅತೀ ಸಮೀಪದಲ್ಲಿರುವ ಬೆಟ್ಟಗಳ ಮರುವಶ ಭಾರತದ ಸೇನಾಪಡೆಯ ಪ್ರಥಮ ಆದ್ಯತೆಯಾಗಿತ್ತು. ಇದರ ಫಲವಾಗಿ ಶ್ರೀನಗರ-ಲೆಹ್ ಮಾರ್ಗವನ್ನು ಆವರಿಸಿಕೊಂಡಿರುವ ಟೈಗರ್ ಹಿಲ್ ಮತ್ತು ಡ್ರಾಸ್‌ನ ಟೋಲೊಲಿಂಗ್ ಕಾಂಪ್ಲೆಕ್ಸ್ ಮೇಲೆ ಭಾರತೀಯ ಪಡೆಗಳು ಮೊದಲಿಗೆ ಗುರಿಯಿರಿಸಿದವು.[೪೯] ಇದರ ಹಿಂದೆಯೇ ತಕ್ಷಣವೇ ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಪ್ರವೇಶ ಕಲ್ಪಿಸುವ ಬಟಾಲಿಕ್-ಟರ್ಟೊಕ್ ಉಪ-ವಲಯ ಸೇನಾಪಡೆಗಳ ಗುರಿಯಾದವು. ಪಾಕಿಸ್ತಾನದ ರಕ್ಷಣಾತ್ಮಕ ಪಡೆಗಳಿಗೆ ಪಾಯಿಂಟ್ 4590 ಮತ್ತು ಪಾಯಿಂಟ್ 5353 ಮುಖ್ಯ ಆಯಕಟ್ಟಿನ ಸ್ಥಾನಗಳಲ್ಲಿರುವ ಕೆಲವು ಪರ್ವತಗಳಾಗಿತ್ತು. NH 1Dಯನ್ನು ಅತೀ ಸಮೀಪದಿಂದ ನೋಡಬಹುದಾದ ಸ್ಥಳವೆಂದರೆ ಪಾಯಿಂಟ್ 4590. ಪಾಯಿಂಟ್ 5353 ಡ್ರಾಸ್ ವಲಯದ ಅತ್ಯುನ್ನತ ಮೇಲ್ಮೈ ಲಕ್ಷಣದಿಂದ ಕೂಡಿದ್ದು, ಪಾಕಿಸ್ತಾನ ಪಡೆಗಳಿಗೆ NH 1D ಸರಾಗ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದವು.[೫೦] ಜೂನ್ 14ರಂದು ಪಾಯಿಂಟ್ 4590ನ್ನು ಭಾರತದ ಪಡೆಗಳು ಮರುವಶಕ್ಕೆ ತೆಗೆದುಕೊಂಡಿದ್ದು ಗಮನಾರ್ಹವೆನಿಸಿದರೂ, [೫೧] ಯುದ್ಧದ ವೇಳೆ ನಡೆದ ಏಕೈಕ ಚಕಮಕಿಯಲ್ಲಿ ಪಾಯಿಂಟ್ 4590ರಲ್ಲೇ ಭಾರತೀಯ ಸೇನೆ ಅತ್ಯಧಿಕ ಸಾವುನೋವು ಅನುಭವಿಸಿದ್ದು ಅಷ್ಟೇ ಸತ್ಯ. ಹೆದ್ದಾರಿಯ ಸಮೀಪದ ಬಹುತೇಕ ಶಿಬಿರಗಳನ್ನು ಜೂನ್ ಮಧ್ಯಾವಧಿಯಲ್ಲಿ ತೆರವುಗೊಳಿಸಲಾಯಿತಾದರೂ, ಡ್ರಾಸ್ ಬಳಿ ಹೆದ್ದಾರಿಯ ಕೆಲವು ಭಾಗಗಳು ಯುದ್ಧ ಅಂತ್ಯಗೊಳ್ಳುವ ತನಕ ವ್ಯಾಪಕ ಶೆಲ್ ದಾಳಿಗಳಿಗೆ ಸಾಕ್ಷಿಯಾದವು.


ಚಿತ್ರ:IAFshotdown.PNG
ಪಾಕಿಸ್ತಾನದ ಕ್ಷಿಪಣಿ ದಾಳಿಗೆ ತುತ್ತಾದ ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನದ ಹಿಂಭಾಗದ ಬಾಲ.ಪೈಲಟ್ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಹತ್ಯೆ

NH 1D ನೋಡಬಹುದಾದ ಶಿಖರಗಳ ಮೇಲೆ ಒಂದೊಮ್ಮೆ ಭಾರತ ಹಿಡಿತ ಮರುಸ್ಥಾಪಿಸಿದ ಬಳಿಕ, ಭಾರತದ ಸೇನೆಯು ಆಕ್ರಮಿತ ಸೇನೆಯನ್ನು ನಿಯಂತ್ರಣ ರೇಖೆಯ ಆಚೆಗೆ ಹಿಂದಕ್ಕೆ ದೂಡಲು ಕಾರ್ಯಾಚರಣೆ ಆರಂಭಿಸಿತು. ಇತರೆ ಪ್ರಹಾರಗಳೊಂದಿಗೆ, ಟೋಲೊಲಿಂಗ್ ಯುದ್ಧದ ನಂತರದ ಹೋರಾಟ ನಿಧಾನವಾಗಿ ಭಾರತದ ಪರವಾಗಿ ವಾಲಿತು. ಟೊಲೊಲಿಂಗ್‌ನಲ್ಲಿ ಕಾಶ್ಮೀರಕ್ಕೆ ಸೇರಿದ ಪಾಕಿಸ್ತಾನ ಪರ ಹೋರಾಟಗಾರರು ಪಾಕಿಸ್ತಾನಿ ಪಡೆಗಳಿಗೆ ನೆರವು ನೀಡಿದರು. ಯುದ್ಧಾಂತ್ಯದಲ್ಲಿ ಕೈವಶವಾದ ಟೈಗರ್ ಹಿಲ್(ಪಾಯಿಂಟ್ 5140) ಸೇರಿದಂತೆ ಅತಿಕ್ರಮಣಕಾರರ ಕೆಲವು ಶಿಬಿರಗಳು ತೀವ್ರ ಪ್ರತಿರೋಧ ಒಡ್ಡಿದವು. ಟೈಗರ್‌ಹಿಲ್ಸ್‌ನಲ್ಲಿ ಭಾರತದ ಪಡೆಗಳು ಭದ್ರವಾಗಿ ಬೇರೂರಿದ ಪಾಕಿಸ್ತಾನದ ಪಡೆಗಳನ್ನು ಕಂಡವು, ಮತ್ತು ಇಲ್ಲಿ ನಡೆದ ಹೋರಾಟದಲ್ಲಿ ಎರಡೂ ಪಡೆಗಳು ಸಾಕಷ್ಟು ಸಾವುನೋವು ಅನುಭವಿಸಿತು. ಟೈಗರ್ ಹಿಲ್‌ ಮೇಲೆ ನಡೆದ ಅಂತಿಮ ಪ್ರಹಾರದಲ್ಲಿ 10 ಪಾಕಿಸ್ತಾನಿ ಸೈನಿಕರು ಹತರಾಗಿ ಟೈಗರ್ ಹಿಲ್ ಭಾರತದ ಕೈವಶವಾಯಿತು, ಈ ಕಾರ್ಯಾಚರಣೆಯಲ್ಲಿ ಭಾರತ ಕೂಡ ತನ್ನ ಐವರು ಯೋಧರನ್ನು ಕಳೆದುಕೊಂಡಿತು. ಇದುವರೆಗೂ ಕೇಳಿರದ, ಕೆಲವೇ ಕೆಲವು ಪಾಯಿಂಟ್ ಸಂಖ್ಯೆಯ ವ್ಯತ್ಯಾಸಗಳಿರುವ ಬಹುತೇಕ ಹೆಸರಿಲ್ಲದ ಪರ್ವತಗಳಲ್ಲಿ ಕೆಲವು ಭೀಕರ ಕೈಮಿಸಲಾಯಿಸಿದ ಘಟನೆಗಳೂ ಸಂಭವಿಸಿವೆ.

ಕಾರ್ಯಾಚರಣೆ ಪೂರ್ಣಸ್ವರೂಪ ಪಡೆಯುತ್ತಿದ್ದಂತೆ ಕಾಣುವಂತಿದ್ದ ಶಿಬಿರಗಳಲ್ಲಿನ ಅತಿಕ್ರಮಣಕಾರರನ್ನು ತೆರವುಗೊಳಿಸಲು ಸುಮಾರು 250 ಫಿರಂಗಿ ಬಂದೂಕುಗಳನ್ನು ತರಲಾಯಿತು. ಇಂತಹ ಭೂಪ್ರದೇಶದಲ್ಲಿ ದಾಳಿ ನಡೆಸಲು ಸಹಕಾರಿಯಾಗುವ ಬೋಫೋರ್ಸ್ ಫೀಲ್ಡ್ ಹೋವಿಟ್ಜರ್ ಬಂದೂಕು(ಬೋಫೋರ್ಸ್ ಹಗರಣದ ಮ‌ೂಲಕ ಭಾರತದಲ್ಲಿ ಕುಖ್ಯಾತ)ಗಳನ್ನು ಭಾರತದ ಸೈನಿಕರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರು, ಈ ಬಂದೂಕುಗಳು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದವು. ಆದರೆ ಭೋಫೋರ್ಸ್ ಬಂದೂಕುಗಳ ನಿಯೋಜನೆಗೆ ಬೇಕಾಗುವ ಸ್ಥಳ ಮತ್ತು ಆಳ ಪ್ರದೇಶದ ಕೊರತೆಯಿಂದ ಬೇರೆ ಕಡೆಗಳಲ್ಲಿ ಅದರ ಯಶಸ್ಸು ಸೀಮಿತಗೊಂಡಿತು.


ಈ ರೀತಿಯ ಭೂಪ್ರದೇಶಗಳಲ್ಲಿ ವೈಮಾನಿಕ ದಾಳಿಗಳನ್ನು ಸೀಮಿತ ಪರಿಣಾಮದೊಂದಿಗೆ ಬಳಸಲಾಗುತ್ತದೆ. ದಾಳಿ ವಿಮಾನ MiG-27ಅನ್ನು ಎಂಜಿನ್ ವೈಫಲ್ಯದಿಂದಾಗಿ ಭಾರತದ IAF ಕಳೆದುಕೊಂಡರೆ, MiG-21 ಯುದ್ಧ ವಿಮಾನವನ್ನು ಪಾಕಿಸ್ತಾನ ಗುಂಡಿಕ್ಕಿ ಉರುಳಿಸಿತು; ಆರಂಭದಲ್ಲಿ ತನ್ನ ಪ್ರದೇಶದೊಳಕ್ಕೆ ಅತಿಕ್ರಮಿಸಿದ ಎರಡೂ ಜೆಟ್‌ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಮತ್ತು ಒಂದು Mi-8ಹೆಲಿಕಾಪ್ಟರ್‌ನ್ನು ಸ್ಟಿಂಗರ್ SAMಗಳಿಂದ ಉರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಕೆಲವು ವರ್ಷಗಳ ನಂತರ, MiG-27 ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಯಿತು ಎಂದು ನಿವೃತ್ತ ಪಾಕಿಸ್ತಾನಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ದಾಳಿಗಳ ಸಂದರ್ಭದಲ್ಲಿ ಪಾಕಿಸ್ತಾನ ಪಡೆಗಳ ಭದ್ರವಾಗಿ ಬೇರೂರಿದ ನೆಲೆಗಳ ನಾಶಕ್ಕಾಗಿ ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು IAF ಬಳಸಿತು.[೮]


ಮೇ 27, 1999ರಲ್ಲಿ ಫ್ರೈಟ್ ಲೆಫ್ಟಿನೆಂಟ್ ನಚಿಕೇತ ಅವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಬಳಿಕ ಅವರು ವಿಮಾನದಿಂದ ಸುರಕ್ಷಿತವಾಗಿ ಪಾರಾದರು, ಆದರೆ ತಮ್ಮ ಸಹೋದ್ಯೋಗಿ ಪತ್ತೆಗೆ ದಾರಿ ಬಿಟ್ಟು ತೆರಳಿದ ಸ್ಕ್ವಾ. ಲೀ.ಅಜಯ್ ಅಹುಜಾ ಅವರನ್ನು ಕೈಯಿಂದ ಹಾರಿಸುವ ಸ್ಟಿಂಜರ್ ಕ್ಷಿಪಣಿಯಿಂದ ಹೊಡೆದುರುಳಿಸಲಾಯಿತು. ದಾಳಿಗೀಡಾದ ವಿಮಾನದಿಂದ ಅವರು ಸುರಕ್ಷಿತವಾಗಿ ಪಾರಾದರೂ, ಹಿಂತಿರುಗಿಸಿದ ಅವರ ದೇಹದಲ್ಲಿ ಗುಂಡುಗಳ ಗಾಯಗಳಿದ್ದ ಕಾರಣ ಅವರನ್ನು ಸೆರೆಹಿಡಿದವರೇ ಹತ್ಯೆ ಮಾಡಿದ್ದು ಸ್ಪಷ್ಟವಾಗಿತ್ತು ಎಂದು ವರದಿಗಳು ತಿಳಿಸಿವೆ.[೮]


ಚಿತ್ರ:Tiger hill capture.jpg
IAFನಿಂದ ಟೈಗರ್ ಹಿಲ್‌ನಲ್ಲಿ ಯಶಸ್ವಿ ದಾಳಿ ಕಾರ್ಯಾಚರಣೆಯ ವಿಡಿಯೊ ಚಿತ್ರ

ಅನೇಕ ಪ್ರಮುಖ ಸ್ಥಳಗಳಲ್ಲಿ ಕಣ್ಣಿಗೆ ನಿಲುಕದಂತಿದ್ದ ಪಾಕಿಸ್ತಾನದ ಸೈನಿಕರ ನೆಲೆಗಳನ್ನು ಫಿರಂಗಿಗಳಿಂದ ಅಥವಾ ವೈಮಾನಿಕ ಬಲದಿಂದ ನಾಶಪಡಿಸುವುದು ಸುಲಭದ ಮಾತಾಗಿರಲಿಲ್ಲ. 18,000 ಅಡಿ(5,500 ಮೀ.)ಯಷ್ಟು ಎತ್ತರದ ಕಡಿದಾದ ಶಿಖರಗಳನ್ನು ಏರುವುದಕ್ಕಾಗಿ ದಾರಿ ಸುಗಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ಸೇನೆಯು ನೇರ ನೆಲದಾಳಿಗಳನ್ನು ನಿಧಾನವಾಗಿ ಕೈಗೊಂಡಿದ್ದರಿಂದ ಭಾರೀ ಸಾವುನೋವಿಗೆ ಗುರಿಯಾಯಿತು. ಹಗಲು ಬೆಳಕಿನಲ್ಲಿ ದಾಳಿ ನಡೆಸುವುದು ಆತ್ಮಹತ್ಯಾಕಾರಿಯಾದ್ದರಿಂದ, ರಾತ್ರಿಯ ಕತ್ತಲಿನ ಮರೆಯಲ್ಲಿಯೇ ಸೇನೆ ಮುನ್ನಡೆದರೂ ಹಿಮದ ಕೊರೆತಕ್ಕೆ ಮೈಹೆಪ್ಪುಗಟ್ಟುವ ಅಪಾಯ ಹೆಚ್ಚಿತ್ತು. ಶಿಖರಗಳಲ್ಲಿನ ಶೀತಲ ಹವೆಯಿಂದಾಗಿ ಉಷ್ಣಾಂಶ ಆಗಾಗ್ಗೆ −11 °C ಯಿಂದ −15 °C (12 °F ಯಿಂದ 5 °F) ಕಡಿಮೆ ಮಟ್ಟಕ್ಕೆ ಕುಸಿಯುತ್ತಿತ್ತು. ಸೇನಾ ತಂತ್ರಗಳ ಆಧಾರದಲ್ಲಿ ವಿರೋಧಿ ಪಡೆಗಳ ಸರಬರಾಜು ಮಾರ್ಗಕ್ಕೆ ತಡೆಯೊಡ್ಡಿ ವಸ್ತುಶಃ ಮುತ್ತಿಗೆಯ ಸ್ಥಿತಿ ಸೃಷ್ಟಿಸುವುದನ್ನು ಭಾರತೀಯ ಸೇನೆ ಆಯ್ಕೆಮಾಡಿಕೊಂಡಿದ್ದಲ್ಲಿ, ದುಬಾರಿಯಾಗಿ ಪರಿಣಮಿಸಿದ ಮುಂಚೂಣಿ ಪ್ರಹಾರಗಳನ್ನು ಸಾಕಷ್ಟು ತಡೆಯಬಹುದಿತ್ತು. ಇಂತಹ ಕ್ರಮದಲ್ಲಿ ಭಾರತದ ಸೇನಾ ಪಡೆಗಳು LoCಯನ್ನು ದಾಟುವುದಲ್ಲದೇ, ಪಾಕಿಸ್ತಾನದ ನೆಲದ ಮೇಲೆ ವೈಮಾನಿಕ ದಾಳಿಗಳನ್ನು ಆರಂಭಿಸುವುದನ್ನು ಕೂಡ ಒಳಗೊಳ್ಳಬೇಕಿತ್ತು, ಆದರೆ ಯುದ್ಧದ ಕಾಲಾವಧಿ ವಿಸ್ತರಣೆಯಾಗುವ ಸಾಧ್ಯತೆ ಮತ್ತು ತನ್ನ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಿಗದು ಎಂಬ ಭಯದಿಂದ ಈ ವ್ಯೂಹ ಕಾರ್ಯಗತಗೊಳಿಸಲು ಭಾರತ ಇಚ್ಛಿಸಲಿಲ್ಲ.


ಸಂಘರ್ಷದ ಎರಡು ತಿಂಗಳ ಬಳಿಕ, ಅತಿಕ್ರಮಣಕಾರರು ಆಕ್ರಮಿಸಿಕೊಂಡ ಅನೇಕ ಶಿಖರಗಳನ್ನು ಭಾರತದ ಪಡೆಗಳು ನಿಧಾನವಾಗಿ ಮರುವಶಕ್ಕೆ ತೆಗೆದುಕೊಂಡವು.[೫೨][೫೩] ಅಧಿಕೃತ ಎಣಿಕೆಯ ಅಂಕಿ ಅಂಶಗಳ ಪ್ರಕಾರ, ಆಕ್ರಮಿತ ಪ್ರದೇಶದ ಅಂದಾಜು ಶೇ.75-ಶೇ.80 ಮತ್ತು ಬಹುತೇಕ ಎಲ್ಲ ಎತ್ತರದ ಪ್ರದೇಶಗಳು ಮತ್ತೆ ಭಾರತದ ಸ್ವಾಧೀನವಾದವು.[೨೨]


ವಾಪಸಾತಿ ಮತ್ತು ಅಂತಿಮ ಯುದ್ಧಗಳು

ಸಶಸ್ತ್ರ ಹೋರಾಟ ಭುಗಿಲೆದ್ದ ಹಿನ್ನೆಲೆಯಲ್ಲಿ, ಸಂಘರ್ಷದ ಶಮನಕ್ಕೆ ಅಮೆರಿಕದ ನೆರವು ಪಡೆಯಲು ಪಾಕಿಸ್ತಾನ ಕೋರಿಕೆ ಸಲ್ಲಿಸಿತು. ಕಾರ್ಗಿಲ್ ಶತ್ರುತ್ವದಿಂದ ಉಭಯ ರಾಷ್ಟ್ರಗಳ ನಡುವೆ ವ್ಯಾಪಕ ಯುದ್ಧ ಉಲ್ಬಣಿಸಬಹುದೆಂಬ ಆತಂಕದಲ್ಲಿ ಪಾಕಿಸ್ತಾನ ತನ್ನ ಮುಂಚೂಣಿ ಪ್ರದೇಶಗಳಿಗೆ ನಿಯೋಜನೆಗಾಗಿ ಅಣ್ವಸ್ತ್ರಗಳನ್ನು ಸಾಗಿಸುತ್ತಿದ್ದುದನ್ನು ಅಮೆರಿಕದ ಬೇಹುಗಾರಿಕೆ ಪತ್ತೆ ಹಚ್ಚಿದ್ದಾಗಿ ಆಗಿನ ಅಧ್ಯಕ್ಷ ಕ್ಲಿಂಟನ್ ಸಹಾಯಕರು ವರದಿ ಮಾಡಿದ್ದರು. ಹೀಗಿದ್ದೂ ನಿಯಂತ್ರಣ ರೇಖೆಯ ಭಾರತದ ಬದಿಯಿಂದ ತನ್ನ ಎಲ್ಲ ಪಡೆಗಳನ್ನು ಪಾಕಿಸ್ತಾನ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಮಧ್ಯಸ್ಥಿಕೆ ವಹಿಸಲು ಅಧ್ಯಕ್ಷ ಬಿಲ್ ಕ್ಲಿಂಟನ್ ನಿರಾಕರಿಸಿದರು.[೫೪] ಜುಲೈ 4ರಂದು ವಾಷಿಂಗ್ಟನ್ ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಡೆಗಳನ್ನು ಹಿಂತೆಗೆದುಕೊಳ್ಳಲು ಪ್ರಧಾನಿ ನವಾಜ್ ಷರೀಫ್ ಒಪ್ಪಿದ್ದರಿಂದ ಬಹುತೇಕ ಹೋರಾಟ ಕ್ರಮೇಣ ಸ್ಥಗಿತಗೊಂಡಿತು, ಆದರೆ ಕೆಲವು ಪಾಕಿಸ್ತಾನಿ ಪಡೆಗಳು LOCಯ ಭಾರತದ ಬದಿಯಲ್ಲಿರುವ ನೆಲೆಗಳಲ್ಲಿ ಹಾಗೇ ಉಳಿದಿದ್ದವು. ಇದರ ಜತೆಗೆ, ಯುನೈಟೆಡ್ ಜೆಹಾದಿ ಕೌನ್ಸಿಲ್‌(ಉಗ್ರಗಾಮಿ ಸಂಘಟನೆಗಳ ಒಕ್ಕೂಟ) ಸೇನೆಯನ್ನು ತೆರವು ಮಾಡುವ ಪಾಕಿಸ್ತಾನದ ಯೋಜನೆಯನ್ನು ತಳ್ಳಿ ಹಾಕಿ, ಬದಲಿಗೆ ಭಾರತದ ವಿರುದ್ಧ ಹೋರಾಟ ಮುಂದುವರಿಸಲು ನಿರ್ಧರಿಸಿದವು.[೫೫]


ಜುಲೈ ಕೊನೆಯ ವಾರದಲ್ಲಿ ಭಾರತದ ಸೇನೆ ಅಂತಿಮ ದಾಳಿಗಳನ್ನು ಆರಂಭಿಸಿತು. ಡ್ರಾಸ್ ಉಪವಲಯವನ್ನು ಪಾಕಿಸ್ತಾನಿ ಪಡೆಗಳು ತೆರವು ಮಾಡಿದ ಕೂಡಲೇ ಜುಲೈ 26ರಂದು ಹೋರಾಟ ಸ್ಥಗಿತಗೊಂಡಿತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಆ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ (ಕಾರ್ಗಿಲ್ ವಿಜಯೋತ್ಸವದ ದಿನ) ಎಂದು ಭಾರತದಲ್ಲಿ ಗುರುತಿಸಲಾಗಿದೆ. ಯುದ್ಧದ ಅಂತ್ಯದಲ್ಲಿ, ಜುಲೈ 1972ರಲ್ಲಿ ರಚನೆಯಾದ ಸಿಮ್ಲಾ ಒಪ್ಪಂದದ ಅನ್ವಯ ನಿಯಂತ್ರಣ ರೇಖೆಯ ದಕ್ಷಿಣ ಮತ್ತು ಪೂರ್ವಕ್ಕಿರುವ ಎಲ್ಲ ಪ್ರದೇಶಗಳ ಮೇಲೆ ಭಾರತ ತನ್ನ ನಿಯಂತ್ರಣ ಸಾಧಿಸಿತು.


ವಿಶ್ವದ ಅಭಿಪ್ರಾಯ

ನಿಯಂತ್ರಣ ರೇಖೆಯನ್ನು ದಾಟಲು ತನ್ನ ಅರೆಸೇನೆ ಪಡೆಗಳಿಗೆ ಮತ್ತು ಉಗ್ರಗಾಮಿಗಳಿಗೆ ಅವಕಾಶ ಕಲ್ಪಿಸಿದ್ದಾಗಿ ಪಾಕಿಸ್ತಾನ ಇತರೆ ರಾಷ್ಟ್ರಗಳ ಕಟು ಟೀಕೆಗೆ ಗುರಿಯಾಯಿತು.[೫೬] ಪಾಕಿಸ್ತಾನ ಆರಂಭದಲ್ಲಿ, ಅತಿಕ್ರಮಣವನ್ನು ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರ ಕದನಕ್ಕೆ ತಳಕು ಹಾಕಿ ಅಧಿಕೃತವಾಗಿ ಪ್ರತಿಕ್ರಿಯಿಸುವ ಮ‌ೂಲಕ ತೋರಿಕೆಯ ನಿರಾಕರಣೆ ಮಾಡಿದ್ದು ಕೊನೆಗೂ ಅದಕ್ಕೆ ಯಶಸ್ಸು ನೀಡಲಿಲ್ಲ.[೫೭] ಮೈಕೊರೆಯುವ ಚಳಿಯಲ್ಲಿ ಕೂಡ ಕಾರ್ಯಾಚರಣೆ ನಡೆಸಲು ತರಬೇತಿ ಪಡೆದ ಪಡೆಗಳು ಮಾತ್ರ ಬದುಕುಳಿಯಲು ಸಾಧ್ಯವಾಗುವ ಎತ್ತರದ ಪ್ರದೇಶದಲ್ಲಿ ಈ ಯುದ್ಧ ನಡೆದಿದ್ದು, ಕಳಪೆ ಶಸ್ತ್ರಗಳನ್ನು ಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ನೆಲವನ್ನು ಕಬಳಿಸುವ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಾಗಲೀ, ಅನುಕೂಲವಾಗಲೀ ಎರಡೂ ಇರಲಿಲ್ಲವೆಂದು ಹಿರಿಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲದೇ ಪಾಕಿಸ್ತಾನ ಸೇನೆಯು ಈ ಅತಿಕ್ರಮಣದಲ್ಲಿ ತನ್ನ ಪಡೆಗಳ ಪಾತ್ರವನ್ನು ಆರಂಭದಲ್ಲಿ ನಿರಾಕರಿಸಿದ್ದರೂ, ತನ್ನ ಇಬ್ಬರು ಸೈನಿಕರಿಗೆ ನಿಶಾನ್-ಎ-ಹೈದರ್(ಪಾಕಿಸ್ತಾನದ ಅತ್ಯುನ್ನತ ಸೇನಾ ಗೌರವ) ಪ್ರಶಸ್ತಿ ನೀಡಿತ್ತು. ಇನ್ನೂ 90 ಸೈನಿಕರಿಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿಗಳನ್ನು ನೀಡಿತ್ತು, ಇದರೊಂದಿಗೆ ಕಾರ್ಗಿಲ್ ವಿದ್ಯಮಾನದಲ್ಲಿ ಪಾಕಿಸ್ತಾನ ಪಾಲ್ಗೊಂಡಿದ್ದು ಅಧಿಕೃತವಾಗಿ ದೃಢವಾಯಿತು. ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಮತ್ತು ಹಿರಿಯ ಪಾಕಿಸ್ತಾನಿ ಜನರಲ್ ನಡುವಿನ ಧ್ವನಿಮುದ್ರಿತ ದೂರವಾಣಿ ಸಂಭಾಷಣೆಯನ್ನು ಕೂಡ ಭಾರತ ಬಿಡುಗಡೆ ಮಾಡಿದೆ, ಅದರಲ್ಲಿ "ಉಗ್ರಗಾಮಿಗಳ ಕುತ್ತಿಗೆಗಳ ಹಿಂಭಾಗದ ಚರ್ಮ ನಮ್ಮ ಕೈಗಳಲ್ಲಿದೆಯೆಂದು"[೫೮] ಪಾಕಿಸ್ತಾನಿ ಜನಲರ್ ಹೇಳಿದ್ದನ್ನು ದಾಖಲಿಸಲಾಗಿದ್ದು, ಪಾಕಿಸ್ತಾನ ಇದನ್ನು "ಸಂಪೂರ್ಣ ಕಟ್ಟುಕತೆ"ಯೆಂದು ತಳ್ಳಿಹಾಕಿದೆ. ಇದರ ಜತೆಯಲ್ಲಿ ಪಾಕಿಸ್ತಾನ ಹಲವಾರು ವೈರುಧ್ಯದ ಹೇಳಿಕೆಗಳನ್ನು ನೀಡಿ, ಕಾರ್ಗಿಲ್‌ ಯುದ್ಧದಲ್ಲಿ ತನ್ನ ಪಾತ್ರವನ್ನು ದೃಢಪಡಿಸಿತು. LOC ಸ್ವತಃ ವಿವಾದಿತ ಎಂದು ಹೇಳುವ ಮ‌ೂಲಕ ಅತಿಕ್ರಮಣಗಳನ್ನು ಸಮರ್ಥಿಸಿಕೊಂಡಿತು.[೫೯] ಕಾರ್ಗಿಲ್ ಬಿಕ್ಕಟ್ಟನ್ನು ವಿಶಾಲ ಕಾಶ್ಮೀರ ಹೋರಾಟಕ್ಕೆ ತಳಕು ಹಾಕಿ ಕಾಶ್ಮಿರ ಸಂಘರ್ಷದ ಬಗ್ಗೆ ಅಂತಾರಾಷ್ಟ್ರೀಯ ಗಮನ ಸೆಳೆಯಲು ಕೂಡ ಪಾಕಿಸ್ತಾನ ಪ್ರಯತ್ನಿಸಿತು. ಆದರೆ ಅಂತಹ ರಾಜತಾಂತ್ರಿಕ ನಿಲುವಿಗೆ ವಿಶ್ವವೇದಿಕೆಯಲ್ಲಿ ಕೆಲವೇ ಮಂದಿಯ ಬೆಂಬಲ ಮಾತ್ರ ದೊರಕಿತು.[೬೦]


ಭಾರತದ ಪ್ರತಿದಾಳಿಗಳ ರಭಸ ತೀವ್ರಗೊಳ್ಳುತ್ತಿದ್ದಂತೆ, ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅಮೆರಿಕದ ಬೆಂಬಲ ಗಳಿಸುವ ಸಲುವಾಗಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರನ್ನು ಭೇಟಿ ಮಾಡಲು ಜುಲೈ 4ರಂದು ವಿಮಾನವೇರಿದರು. ಆದರೆ ಕ್ಲಿಂಟನ್ ಕಾರ್ಗಿಲ್ ತಪ್ಪಿಗಾಗಿ ಷರೀಫ್ ಅವರನ್ನು ಖಂಡಿಸಿದರು. ಆದಾಗ್ಯೂ, ಉಗ್ರಗಾಮಿಗಳನ್ನು ಹತೋಟಿಗೆ ತರಲು ಅವರ ಸಂಪರ್ಕಗಳನ್ನು ಬಳಸಿಕೊಳ್ಳುವಂತೆ ಮತ್ತು ಭಾರತದ ನೆಲದಿಂದ ಪಾಕಿಸ್ತಾನದ ಸೈನಿಕರನ್ನು ಹಿಂತೆಗೆದುಕೊಳ್ಳುವಂತೆ ಸಲಹೆಯಿತ್ತರು. ಷರೀಫ್ ಕ್ರಮಗಳು ಗೊಂದಲಮಯ ಯಾಗಿದ್ದವು ಎಂದು ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಲ್ಲಿ ನಂತರ ಹೇಳಿಕೊಂಡಿದ್ದಾರೆ. ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಗುರಿಯಿಂದ ದ್ವಿಪಕ್ಷೀಯ ಮಾತುಕತೆಗಳನ್ನು ಉತ್ತೇಜಿಸಲು ಭಾರತದ ಪ್ರಧಾನಮಂತ್ರಿಯವರು ಲಾಹೋರ್‌ಗೆ ಪ್ರಯಾಣಿಸಿದ್ದರು, ಆದರೆಪಾಕಿಸ್ತಾನ ನಿಯಂತ್ರಣ ರೇಖೆಯನ್ನು ದಾಟುವ ಮ‌ೂಲಕ ದ್ವಿಪಕ್ಷೀಯ ಮಾತುಕತೆಗೆ ಹಾನಿಯುಂಟುಮಾಡಿದೆ ಎಂದು ಕ್ಲಿಂಟನ್ ಟೀಕಿಸಿದ್ದರು.[೬೧] ಇನ್ನೊಂದು ಕಡೆ, ಸಂಘರ್ಷ ಉಲ್ಬಣಿಸಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಆಸ್ಪದವಾಗದಂತೆ LoCಯನ್ನು ದಾಟದಿರುವ ಭಾರತದ ಸಂಯಮವನ್ನು ಅವರು ಶ್ಲಾಘಿಸಿದರು.[೬೨]


ಜಿ8 ರಾಷ್ಟ್ರಗಳು ಕೂಡ ಭಾರತವನ್ನು ಬೆಂಬಲಿಸಿದವು ಮತ್ತು ಕೊಲೊಗ್ನೆ ಶೃಂಗಸಭೆಯಲ್ಲಿ ಪಾಕಿಸ್ತಾನ LOC ಉಲ್ಲಂಘಿಸಿದ್ದನ್ನು ಖಂಡಿಸಿದವು. ಐರೋಪ್ಯ ಒಕ್ಕೂಟ ಕೂಡ ಪಾಕಿಸ್ತಾನ LOC ಉಲ್ಲಂಘಿಸಿದ್ದನ್ನು ವಿರೋಧಿಸಿತು.[೬೩] LoCಯ ಸಂಘರ್ಷ ಪೂರ್ವನೆಲೆಗಳಿಗೆ ಪಡೆಗಳನ್ನು ವಾಪಸ್ ಕರೆಸಿಕೊಂಡು, ಗಡಿ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನದ ಸುದೀರ್ಘಕಾಲದ ಮಿತ್ರ ರಾಷ್ಟ್ರ ಚೀನಾ ಕೂಡ ಪಾಕಿಸ್ತಾನವನ್ನು ಒತ್ತಾಯಿಸಿತು. LOCಯನ್ನು ಉಲ್ಲಂಘಿಸದಿರುವ ಭಾರತದ ನಿಲುವನ್ನು ಏಸಿಯಾನ್ ಪ್ರಾದೇಶಿಕ ವೇದಿಕೆ ಮುಂತಾದ ಸಂಘಟನೆಗಳು ಕೂಡ ಬೆಂಬಲಿಸಿದವು.[[]]

ಅಂತಾರಾಷ್ಟ್ರೀಯವಾಗಿ ತೀವ್ರ ಒತ್ತಡ ಎದುರಿಸಿದ ಷರೀಫ್, ಭಾರತದ ನೆಲದಲ್ಲಿದ್ದ ಉಳಿದ ಸೈನಿಕರನ್ನು ಹಿಂತೆಗೆದುಕೊಳ್ಳುವುದನ್ನು ಯಶಸ್ವಿಯಾಗಿ ನಿಭಾಯಿಸಿದರು. ಕ್ಲಿಂಟನ್ ಮತ್ತು ಷರೀಫ್ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ, ನಿಯಂತ್ರಣ ರೇಖೆಯನ್ನು ಗೌರವಿಸುವ ಅಗತ್ಯದ ಬಗ್ಗೆ ಮತ್ತು ಎಲ್ಲ ವಿವಾದಗಳ ಇತ್ಯರ್ಥಕ್ಕೆ ದ್ವಿಪಕ್ಷೀಯ ಮಾತುಕತೆ ಆರಂಭವೇ ಉತ್ತಮ ವೇದಿಕೆಯೆಂಬ ಸಂದೇಶ ರವಾನಿಸಲಾಯಿತು.[೬೪][೬೫]


ಶೌರ್ಯ ಪ್ರಶಸ್ತಿಗಳು

ಕಾರ್ಗಿಲ್ ಹೋರಾಟದಲ್ಲಿ ತೋರಿದ ಶೌರ್ಯ ಪರಾಕ್ರಮಗಳಿಗಾಗಿ ಅನೇಕ ಯೋಧರು ಶೌರ್ಯ ಪ್ರಶಸ್ತಿಗಳನ್ನು ಗಳಿಸಿದರು.[೬೬]

ಇಬ್ಬರು ಪಾಕಿಸ್ತಾನಿ ಸೈನಿಕರು ನಿಷಾನ್-ಎ-ಹೈದರ್ ಪ್ರಶಸ್ತಿ ಸ್ವೀಕರಿಸಿದರು.[೬೭]


ಮಾಧ್ಯಮದ ಪರಿಣಾಮ ಮತ್ತು ಪ್ರಭಾವ

ಉಭಯ ರಾಷ್ಟ್ರಗಳಲ್ಲಿ ಸಾರ್ವಜನಿಕ ಅಭಿಪ್ರಾಯದ ಮೇಲೆ ಸಮ‌ೂಹ ಮಾಧ್ಯಮದ ಪರಿಣಾಮ ಮತ್ತು ಪ್ರಭಾವ ಕುರಿತಂತೆ ಕಾರ್ಗಿಲ್ ಯುದ್ಧ ಗಮನಾರ್ಹವಾಗಿದೆ. ವಿದ್ಯುನ್ಮಾನ ಪತ್ರಿಕೋದ್ಯಮದಲ್ಲಿ ಸ್ಫೋಟಕಕಾರಿ ಬೆಳವಣಿಗೆ ಸಂದರ್ಭದಲ್ಲೇ ಬಂದ ಕಾರ್ಗಿಲ್ ಸುದ್ದಿ ಲೇಖನಗಳು ಮತ್ತು ಯುದ್ಧದ ದೃಶ್ಯಗಳನ್ನು ಟಿವಿಯಲ್ಲಿ ಆಗಾಗ್ಗೆ ನೇರ ಪ್ರಸಾರ ಮಾಡಲಾಯಿತು [೬೮]ಮತ್ತು ಅನೇಕ ಜಾಲತಾಣಗಳು ಯುದ್ಧವನ್ನು ಕುರಿತು ಆಳವಾದ ವಿಶ್ಲೇಷಣೆ ಮಾಡಿದವು. ಕಾರ್ಗಿಲ್ ಸಂಘರ್ಷವು ದಕ್ಷಿಣ ಏಷ್ಯಾದಲ್ಲಿ ಪ್ರಥಮ "ಜೀವಂತ" ಯುದ್ಧವೆನಿಸಿತು.[೬೯] ಅದಕ್ಕೆ ಮಾಧ್ಯಮಗಳು ಕೂಡ ವಿಸ್ತ್ರತ ಪ್ರಚಾರ ನೀಡಿದ್ದರಿಂದ ಉಂಟಾದ ಒಂದು ಪರಿಣಾಮವೆಂದರೆ ಜನರಲ್ಲಿ ದೇಶಭಕ್ತಿಯ ಭಾವನೆಗಳು ಉದ್ದೀಪನಗೊಂಡವು.


ಕಾರ್ಗಿಲ್ ಸಂಘರ್ಷ ಶೀಘ್ರದಲ್ಲೇ ಸುದ್ದಿ ಪ್ರಚಾರ ಯುದ್ಧವಾಗಿ ತಿರುಗಿತು, ಆಯಾ ರಾಷ್ಟ್ರದ ಸರ್ಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿಗಳಲ್ಲಿ ವೈರುಧ್ಯದ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳನ್ನು ನೀಡಿದರು. ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಚಾನೆಲ್ PTV ಪ್ರಸಾರವನ್ನು ನಿಷೇಧಿಸಿ, [೭೦] ಅಲ್ಲಿಂದ ಬರುವ ಮಾಹಿತಿಗಳಿಗೆ ಭಾರತ ಸರ್ಕಾರ ತಾತ್ಕಾಲಿಕ ಸುದ್ದಿ ನಿರ್ಬಂಧ ವಿಧಿಸಿತು, ಮತ್ತು ಡಾನ್ ಸುದ್ದಿಪತ್ರಿಕೆಯ ಆನ್‌ಲೈನ್ ಪ್ರಕಟಣೆಗಳ ಪ್ರವೇಶವನ್ನು ತಡೆಹಿಡಿಯಿತು.[೭೧] ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣವನ್ನು ಪಾಕಿಸ್ತಾನ ಮಾಧ್ಯಮ ಟೀಕಿಸಿತು, ಆದರೆ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಈ ನಿಲುವು ಕೈಗೊಳ್ಳಲಾಗಿದೆ ಎಂದು ಭಾರತದ ಮಾಧ್ಯಮಗಳು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡವು. ಭಾರತ ಸರ್ಕಾರ ತನ್ನ ನಿಲುವಿಗೆ ರಾಜಕೀಯ ಬೆಂಬಲ ಗಳಿಸುವ ಯತ್ನವಾಗಿ ಪಾಕಿಸ್ತಾನ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುವಲ್ಲಿ ವಹಿಸಿದ ಪಾತ್ರವನ್ನು ವಿಸ್ತೃತವಾಗಿ ವಿವರಿಸುತ್ತಾ, ದಿ ಟೈಮ್ಸ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ವಿದೇಶಿ ಪತ್ರಿಕೆಗಳಲ್ಲಿ ಜಾಹೀರಾತು ಗಳನ್ನು ನೀಡಿತು.

ಯುದ್ಧ ಮುಂದುವರಿದಂತೆ, ಭಾರತದಲ್ಲಿ ಸಂಘರ್ಷ ಕುರಿತ ಮಾಧ್ಯಮ ಪ್ರಸಾರ ಪಾಕಿಸ್ತಾನಕ್ಕಿಂತ ಹೆಚ್ಚು ತೀವ್ರತೆ ಪಡೆದಿತ್ತು.[೭೨] ಕೊಲ್ಲಿ ಯುದ್ದವನ್ನು CNN ಪ್ರಸಾರ ಮಾಡಿದ್ದನ್ನು ನೆನಪಿಸುವ ಶೈಲಿಯಲ್ಲಿ ಅನೇಕ ಭಾರತೀಯ ಚಾನೆಲ್‌ಗಳು ಯುದ್ಧ ವಲಯದ ದೃಶ್ಯಗಳನ್ನು ತೋರಿಸಿದವು.(ಸುದ್ದಿ ಪ್ರಸಾರ ಮುಂದುವರಿದಾಗಲೇ ಕಾರ್ಗಿಲ್‌ನಲ್ಲಿ ಪಾಕಿಸ್ತಾನ ಪಡೆಗಳು ಹಾರಿಸಿದ ಶೆಲ್‌ಗಳಲ್ಲೊಂದು ದೂರದರ್ಶನ ಪ್ರಸಾರ ಕೇಂದ್ರಕ್ಕೆ ಕೂಡ ಬಡಿದಿತ್ತು).[೭೩] ಪಾಕಿಸ್ತಾನಕ್ಕೆ ಹೋಲಿಸಿದರೆ ಖಾಸಗಿ ಒಡೆತನದ ವಿದ್ಯುನ್ಮಾನ ಮಾಧ್ಯಮ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿರುವುದು ಮತ್ತು ಭಾರತದ ಮಾಧ್ಯಮದಲ್ಲಿ ಹೆಚ್ಚಿನ ಪಾರದರ್ಶಕತೆಯಿರುವುದರಿಂದ ಭಾರತದಲ್ಲಿ ಕಾರ್ಗಿಲ್ ಯುದ್ಧಕ್ಕೆ ಹೆಚ್ಚು ಪ್ರಸಾರ ಸಿಕ್ಕಿತು. ಮಾಧ್ಯಮ ಮತ್ತು ಜನತೆಯನ್ನು ಭಾರತ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಪಾಕಿಸ್ತಾನ ತೆಗೆದುಕೊಳ್ಳಲಿಲ್ಲವೆಂಬ ವಿಷಯವನ್ನು ಕರಾಚಿವಿಚಾರ ಸಂಕಿರಣವೊಂದರಲ್ಲಿ ಸ್ವತಃ ಪಾಕಿಸ್ತಾನಿ ಪತ್ರಕರ್ತರೇ ಒಪ್ಪಿಕೊಂಡಿದ್ದಾರೆ.[೭೪]

ಭಾರತದ ನಿಲುವಿಗೆ ಭಾರತ ಮತ್ತು ವಿದೇಶಗಳ ಪತ್ರಿಕಾ ಮಾಧ್ಯಮ ಹೆಚ್ಚು ಸಹಾನುಭೂತಿ ಹೊಂದಿದ್ದವು. ಪಶ್ಚಿಮ ದೇಶಗಳು ಮತ್ತಿತರ ತಟಸ್ಥ ರಾಷ್ಟ್ರಗಳ ಮ‌ೂಲದ ಸುದ್ದಿಪತ್ರಿಕೆಗಳ ಸಂಪಾದಕೀಯಗಳಲ್ಲಿ ಸಂಘರ್ಷಕ್ಕೆ ಪಾಕಿಸ್ತಾನವೇ ಹೆಚ್ಚು ಜವಾಬ್ದಾರಿಯೆಂದು ಅಭಿಪ್ರಾಯಪಡಲಾಗಿತ್ತು. ಸಂಖ್ಯೆಯಲ್ಲಿ ಹೆಚ್ಚು ದೊಡ್ಡದಾದ ಮತ್ತು ವಿಶ್ವಾಸಾರ್ಹವಾದ ಭಾರತದ ಮಾಧ್ಯಮ ಕಾರ್ಗಿಲ್‌ನಲ್ಲಿ ಭಾರತದ ಸೇನೆ ಕಾರ್ಯಾಚರಣೆ ಕೈಗೊಂಡ ವೇಳೆ ಸೇನೆಯ ವರ್ಧಕವಾಗಿ ಕಾರ್ಯನಿರ್ವಹಿಸಿತು ಮತ್ತು ನೈತಿಕ ಸ್ಥೈರ್ಯ ಉದ್ದೀಪಿಸುವ ಕೆಲಸ ಮಾಡಿತೆಂದು ಭಾರತದ ಕೆಲವು ವಿಶ್ಲೇಷಕರು ನಂಬಿದ್ದಾರೆ.[೭೫] ಹೋರಾಟ ತೀವ್ರತೆ ಪಡೆಯುತ್ತಿದ್ದಂತೆ, ವಿಶ್ವ ವೇದಿಕೆಯಲ್ಲಿ ವಿದ್ಯಮಾನಗಳ ಕುರಿತು ಪಾಕಿಸ್ತಾನಿ ದೃಷ್ಟಿಕೋನಕ್ಕೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಇದು ಭಾರತಕ್ಕೆ ತನ್ನ ನಿಲುವಿನಲ್ಲಿ ಮೌಲ್ಯಯುತ ರಾಜತಾಂತ್ರಿಕ ಮನ್ನಣೆ ಪಡೆಯಲು ನೆರವಾಯಿತು.


WMDಗಳು ಮತ್ತು ಅಣ್ವಸ್ತ್ರ ಅಂಶ

ಪಾಕಿಸ್ತಾನ ಮತ್ತು ಭಾರತ ಎರಡೂ ಸಮೂಹ ವಿನಾಶಕ ಅಸ್ತ್ರಗಳನ್ನು ಹೊಂದಿರುವುದರಿಂದ ಕಾರ್ಗಿಲ್ ಸಂಘರ್ಷ ತೀವ್ರ ಸ್ವರೂಪ ತಾಳಿದರೆ ಅಣ್ವಸ್ತ್ರ ಯುದ್ಧಕ್ಕೆ ತಿರುಗಬಹುದೆಂದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅನೇಕ ಮಂದಿ ಕಳವಳ ವ್ಯಕ್ತಪಡಿಸಿದ್ದರು. ಉಭಯ ರಾಷ್ಟ್ರಗಳು ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು 1998ರಲ್ಲಿ ಪರೀಕ್ಷೆ ನಡೆಸಿದ್ದವು.(ಭಾರತ ತನ್ನ ಪ್ರಥಮ ಅಣ್ವಸ್ತ್ರ ಪರೀಕ್ಷೆಯನ್ನು 1974ರಲ್ಲಿ ನಡೆಸಿದರೆ, ಪಾಕಿಸ್ತಾನಕ್ಕೆ ಮೊದಲ ಅಣ್ವಸ್ತ್ರ ಪರೀಕ್ಷೆಯಾಗಿತ್ತು.) ಅಣ್ವಸ್ತ್ರ ಪರೀಕ್ಷೆಗಳು ದಕ್ಷಿಣ ಏಷ್ಯಾದ ಸನ್ನಿವೇಶದಲ್ಲಿ ಅಪಾಯಗಳ ಹೆಚ್ಚಳದ ಲಕ್ಷಣಗಳಾಗಿದೆಯೆಂದು ಅನೇಕ ಪಂಡಿತರು ಅಭಿಪ್ರಾಯಪಟ್ಟರು. ಅಣ್ವಸ್ತ್ರ ಪರೀಕ್ಷೆಗಳ ಬಳಿಕ ಕೇವಲ ಒಂದು ವರ್ಷದಲ್ಲೇ ಕಾರ್ಗಿಲ್ ಸಂಘರ್ಷ ಆರಂಭಗೊಂಡಿದ್ದರಿಂದ, ಅದು ತೀವ್ರ ಸ್ವರೂಪ ಪಡೆಯುವ ಮುನ್ನ ಅಂತ್ಯಗೊಳಿಸಲು ಅನೇಕ ರಾಷ್ಟ್ರಗಳು ಇಚ್ಛಿಸಿದ್ದವು.

ಈ ಸೀಮಿತ ಸಂಘರ್ಷ ತೀವ್ರ ಸ್ವರೂಪ ಪಡೆದರೆ ಪಾಕಿಸ್ತಾನ ತನ್ನ ಶಸ್ತ್ರಾಗಾರದಿಂದ "ಯಾವುದೇ ಅಸ್ತ್ರ" ಬಳಸಲು ಹಿಂಜರಿಯದೆಂದು ಮೇ 31ರಂದು ಪಾಕಿಸ್ತಾನಿ ವಿದೇಶಾಂಗ ಸಚಿವ ಶಮ್ಶೇದ್ ಅಹ್ಮದ್ ಹೇಳಿಕೆ ನೀಡಿ ಎಚ್ಚರಿಸಿದ್ದರಿಂದ ಅಂತಾರಾಷ್ಟ್ರೀಯ ಕಳವಳಗಳು ಹೆಚ್ಚಿತು.[೭೬] ಯುದ್ಧ ವಿಸ್ತರಣೆಯಾದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಅಣ್ವಸ್ತ್ರ ಪ್ರತಿದಾಳಿಯ ಬೆದರಿಕೆಯಿರುವುದನ್ನು ತಕ್ಷಣವೇ ವ್ಯಾಖ್ಯಾನಿಸಲಾಯಿತು ಮತ್ತು ಪಾಕಿಸ್ತಾನದ ಸೆನೆಟ್‌ ಹೇಳಿಕೆಯಿಂದ ಈ ನಂಬಿಕೆ ಬಲಗೊಂಡಿತು. ಅಗತ್ಯಬಿದ್ದಾಗ ಅಸ್ತ್ರಗಳನ್ನು ಬಳಸದಿದ್ದರೆ ಅಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವೇ ಅರ್ಥಹೀನವೆನಿಸುತ್ತದೆ ಎಂದು ಸೆನೆಟ್‌ನಲ್ಲಿ ಹೇಳಿಕೆ ನೀಡಲಾಗಿತ್ತು.[೭೭] ಉಭಯ ರಾಷ್ಟ್ರಗಳ ಅಧಿಕಾರಿಗಳ ಇಂತಹ ದ್ವಂದ್ವ ಹೇಳಿಕೆಗಳು ಅಣ್ವಸ್ತ್ರ ಬಿಕ್ಕಟ್ಟು ಸನ್ನಿಹಿತವಾಗಿರುವ ಎಚ್ಚರಿಕೆಯೆಂದೇ ಅಭಿಪ್ರಾಯಪಡಲಾಯಿತು. ಅಮೆರಿಕ ಮತ್ತು USSR ನಡುವೆ ಸಂಭವಿಸಬಹುದಾಗಿದ್ದ ಅಣ್ವಸ್ತ್ರ ಸಂಘರ್ಷದ ರೀತಿಯಲ್ಲಿ ಪರಸ್ಪರ ಖಾತರಿಯ ವಿನಾಶದಲ್ಲಿ ಅಂತ್ಯಗೊಳ್ಳದೆಂಬ ನಂಬಿಕೆಯಿಂದ ಯುದ್ಧಾಳುಗಳು ತಂತ್ರೋಪಾಯದ ಅಣ್ವಸ್ತ್ರ ಯುದ್ಧದಲ್ಲಿ ತಮ್ಮ ಸೀಮಿತ ಪರಮಾಣು ಅಸ್ತ್ರಗಳ ಬಳಕೆಯನ್ನು ಪರಿಗಣಿಸುತ್ತಾರೆ. ಉಭಯ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ಬಳಿಕ, ಪಾಕಿಸ್ತಾನ ಸೇನೆ ತನ್ನ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯಿಂದ ಉತ್ಸಾಹಗೊಂದು, ಭಾರತದ ಮೇಲೆ ಗಮನಾರ್ಹ ಒತ್ತಡ ಹೇರಿತೆಂದು ಅನೇಕ ತಜ್ಞರು ನಂಬಿದ್ದಾರೆ.[೭೮]


ಪಾಕಿಸ್ತಾನ ತನ್ನ ಅಣ್ವಸ್ತ್ರ ಸಿಡಿತಲೆಗಳನ್ನು ಗಡಿಯ ಸಮೀಪ ಸಾಗಿಸುತ್ತಿದೆಯೆಂದು U.S.ಬೇಹುಗಾರಿಕೆ ಮಾಹಿತಿ ಸ್ವೀಕರಿಸಿದಾಗ ಭಾರತ-ಪಾಕಿಸ್ತಾನ ಸಂಘರ್ಷದ ಸ್ವರೂಪ ಹೆಚ್ಚು ಕೆಡುಕಿನ ರೂಪಕ್ಕೆ ತಿರುಗಿತು. ಅಣ್ವಸ್ತ್ರ ಯುದ್ಧದ ಬೆದರಿಕೆ ತಂತ್ರ ಬಳಸದಂತೆ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರನ್ನು ತಡೆಯಲು ಬಿಲ್ ಕ್ಲಿಂಟನ್ ಪ್ರಯತ್ನಿಸಿದರು, ಮತ್ತು ಒಂದು ವೇಳೆ ಎಚ್ಚರಿಕೆ ಮೀರಿದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಕೂಡ ಹಾಕಿದರು. ಶ್ವೇತ ಭವನದ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಕ್ಷಿಪಣಿಯ ಚಲನವಲನದ ಸಾಧ್ಯತೆ ಬಗ್ಗೆ ಷರೀಫ್ ನಿಜವಾಗಲೂ ಆಶ್ಚರ್ಯಚಕಿತರಾದಂತೆ ಕಂಡರು ಮತ್ತು ಭಾರತ ಬಹುಶಃ ಇದೇ ರೀತಿ ಯೋಜಿಸಿರಬಹುದೆಂದು ಪ್ರತಿಕ್ರಿಯಿಸಿದರು. ಭಾರತ ಕೂಡ ಕನಿಷ್ಠ ಐದು ಅಣ್ವಸ್ತ್ರ ಸಜ್ಜಿತ ಖಂಡಾಂತರ ಕ್ಷಿಪಣಿಗಳಿಂದ ಸಿದ್ಥವಾಗಿತ್ತೆಂದು ಮೇ 2000ದಲ್ಲಿ ಡಾ.ಸಂಜಯ್ ಬದ್ರಿ-ಮಹಾರಾಜ್ ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದರೂ, ತಮ್ಮ ವಾದಕ್ಕೆ ಬೆಂಬಲಿಸುವ ಯಾವುದೇ ಅಧಿಕೃತ ಪುರಾವೆ ನೀಡಿರಲಿಲ್ಲ.[೭೯]

ಹದಗೆಡುತ್ತಿರುವ ಸೇನಾ ಪರಿಸ್ಥಿತಿ, ರಾಜತಾಂತ್ರಿಕವಾಗಿ ಏಕಾಂಗಿತನ ಮತ್ತು ದೊಡ್ಡ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಯುದ್ಧದ ಅಪಾಯಗಳನ್ನು ಗಮನಿಸಿದ ಷರೀಫ್, ಕಾರ್ಗಿಲ್ ಶಿಖರಗಳನ್ನು ತೆರವು ಮಾಡುವಂತೆ ಪಾಕಿಸ್ತಾನದ ಸೇನೆಗೆ ಆದೇಶ ನೀಡಿದರು. ಜನರಲ್ ಪರ್ವೇಜ್ ಮುಷರಫ್ ತಮಗೆ ಮಾಹಿತಿ ನೀಡದೆಯೇ ಅಣ್ವಸ್ತ್ರ ಸಿಡಿತಲೆಗಳನ್ನು ಸಾಗಿಸಿದರೆಂದು ಷರೀಫ್ ಬಳಿಕ ತಮ್ಮ ಅಧಿಕೃತ ಜೀವನಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.[೮೦] ಆದಾಗ್ಯೂ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಸರಬರಾಜು ವ್ಯವಸ್ಥೆ ಕಾರ್ಯನಿರತವಾಗಿರಲಿಲ್ಲ, ಮತ್ತು ಸಂಘರ್ಷ ಅಣ್ವಸ್ತ್ರ ಯುದ್ಧದ ಸ್ವರೂಪ ಪಡೆದಿದ್ದರೆ ಪಾಕಿಸ್ತಾನ ಗಂಭೀರ ಅಪಾಯಕ್ಕೆ ತುತ್ತಾಗುತ್ತಿತ್ತು ಎಂದು ಪರ್ವೇಜ್ ಮುಷರಫ್ ತಮ್ಮ ಜೀವನ ವೃತ್ತಾಂತದಲ್ಲಿ ಬಹಿರಂಗಪಡಿಸಿದ್ದಾರೆ.[೩೬]


WMDಯ ಬೆದರಿಕೆಯಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳು ಕೂಡ ಸೇರಿತ್ತು. ಭಾರತವು ಕಾಶ್ಮೀರಿ ಹೋರಾಟಗಾರರ ವಿರುದ್ಧ ರಾಸಾಯನಿಕ ಅಸ್ತ್ರಗಳು ಮತ್ತು ನಪಾಲ್ಮ್ ಮುಂತಾದ ಅಗ್ನಿಸ್ಪೋಟಕ ಅಸ್ತ್ರಗಳನ್ನು ಕೂಡ ಬಳಸಿತೆಂದು ಪಾಕಿಸ್ತಾನ ಆರೋಪಿಸಿತು. ಪಾಕಿಸ್ತಾನ ಅಸಂಪ್ರದಾಯಿಕ ಅಸ್ತ್ರಗಳ ಬಳಕೆಗೂ ಸಿದ್ಧವಾಗಿದ್ದಿರಬಹುದೆಂಬುದಕ್ಕೆ ಸಾಕ್ಷಿಯಾಗಿ ಇತರೆ ಬಂದೂಕುಗಳ ಜೊತೆಯಲ್ಲಿ ಅನಿಲ ಮುಖ ಗವಸುಗಳ ರಹಸ್ಯ ಸ್ಥಳವನ್ನು ಭಾರತ ಪ್ರದರ್ಶಿಸಿತು. ಭಾರತ ತನ್ನ ಬಾಂಬ್‌ಗಳಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಸುತ್ತಿದೆಯೆಂಬ ಪಾಕಿಸ್ತಾನದ ಆರೋಪಗಳು ನಿರಾಧಾರವೆಂದು ಅಮೆರಿಕ ಅಧಿಕಾರಿ ಮತ್ತು OPCW ತೀರ್ಮಾನಿಸಿದವು.[೮೧]


ಯುದ್ಧದ ಪರಿಣಾಮಗಳು

ಭಾರತ

ಚಿತ್ರ:Vajpayee Victory.jpg
ಸಂಸತ್ತಿನ ಚುನಾವಣೆಗಳ ಬಳಿಕ ವಿಜಯದ V ಸಂಕೇತ ತೋರಿಸುತ್ತಿರುವ ಭಾರತದ PM ಎ.ಬಿ.ವಾಜಪೇಯಿ, ಅವರ ನೇತೃತ್ವದ ಸಮ್ಮಿಶ್ರ ಕೂಟ ವಿಜಯಶಾಲಿಯಾಗಿ ಹೊರಹೊಮ್ಮಿತ್ತು.ಕಾರ್ಗಿಲ್ ಬಿಕ್ಕಟ್ಟನ್ನು ಅವರು ನಿಭಾಯಿಸಿದ ರೀತಿ ಮತಗಳನ್ನು ಸಂಚಯಿಸುವಲ್ಲಿ ದೊಡ್ಡ ಪಾತ್ರವಹಿಸಿತೆಂದು ನಂಬಲಾಗಿದೆ.

ಯುದ್ಧದ ಅಂತ್ಯದಿಂದ ಫೆ.2000ದವರೆಗೆ, ಭಾರತೀಯ ಷೇರುಪೇಟೆ 30% ಏರಿಕೆ ಕಂಡಿತು. ಮುಂದಿನ ಭಾರತೀಯ ರಾಷ್ಟ್ರೀಯ ಬಜೆಟ್‌ನಲ್ಲಿ ಸೇನೆ ವೆಚ್ಚಕ್ಕೆ ಪ್ರಮುಖ ಹೆಚ್ಚಳಗಳು ಸೇರಿದ್ದವು. ದೇಶಭಕ್ತಿಯು ಉಕ್ಕೇರಿತು ಮತ್ತು ಕಾರ್ಗಿಲ್ ಹೋರಾಟಕ್ಕೆ ಅನೇಕ ಗಣ್ಯ ವ್ಯಕ್ತಿಗಳು ಬೆಂಬಲ ವ್ಯಕ್ತಪಡಿಸಿದರು.[೮೨] ಪೈಲಟ್ ಅಜಯ್ ಅಹುಜಾ ಅವರನ್ನು ಹತ್ಯೆ ಮಾಡಿ ಪಾಕಿಸ್ತಾನ ಪಡೆಗಳು ಅವರ ದೇಹವನ್ನುಛಿದ್ರಗೊಳಿಸಿತ್ತೆಂದು ಭಾರತೀಯ ಅಧಿಕಾರಿಗಳು ವರದಿ ಮಾಡಿದ ಬಳಿಕ ಪೈಲಟ್ ಅಜಯ್ ಅಹುಜಾ ಸಾವಿನ ಬಗ್ಗೆ ಮಾಧ್ಯಮದ ವರದಿಗಳು ಭಾರತೀಯರನ್ನು ಕೆರಳಿಸಿತು. ಯುದ್ಧವು ಭಾರತದ ಸೇನೆಗೆ ನಿರೀಕ್ಷೆಗಿಂತ ಹೆಚ್ಚು ಸಾವುನೋವುಗಳನ್ನು ಉಂಟುಮಾಡಿತು. ಸತ್ತವರಲ್ಲಿ ನೂತನವಾಗಿ ನೇಮಕಗೊಂಡ ಅಧಿಕಾರಿಗಳೇ ಗಣನೀಯ ಪ್ರಮಾಣದಲ್ಲಿದ್ದರು. ಕಾರ್ಗಿಲ್ ಯುದ್ದ ಪೂರ್ಣಗೊಂಡ ಒಂದು ತಿಂಗಳ ಬಳಿಕ, ಪಾಕಿಸ್ತಾನ ನೌಕಾಪಡೆಯ ವಿಮಾನವನ್ನು ಭಾರತ ಹೊಡೆರುಳಿಸಿದ ಅಟ್ಲಾಂಟಿಕ್ ಘಟನೆಯು ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಕಿಡಿಯನ್ನು ಪುನಃ ಹೊತ್ತಿಸುವ ಆತಂಕ ಸ್ವಲ್ಪ ಸಮಯ ಇತ್ತು.

ಯುದ್ಧದ ಬಳಿಕ ಭಾರತೀಯ ಸರ್ಕಾರ ಪಾಕಿಸ್ತಾನದ ಜೊತೆ ಸಂಬಂಧ ಕಡಿದುಕೊಂಡಿತು ಮತ್ತು ತನ್ನ ರಕ್ಷಣಾ ಸಿದ್ಧತೆಯನ್ನು ಬಲಪಡಿಸಿತು. ಸ್ವದೇಶೀ ಅಸ್ತ್ರಗಳನ್ನು ಸಂಪಾದಿಸಲು ಭಾರತ ತನ್ನ ರಕ್ಷಣಾ ಬಜೆಟ್ ವೆಚ್ಚವನ್ನು ಹೆಚ್ಚಿಸಿತು.[೮೩] ಸೇನಾ ಖರೀದಿಯಲ್ಲಿ ಅಕ್ರಮಗಳು ನಡೆದ ಬಗ್ಗೆ ಮಾಧ್ಯಮಗಳು ವರದಿ ಮಾಡಿದವು[೮೪] ಮತ್ತು ಯುದ್ಧದ ಸಂದರ್ಭದಲ್ಲಿ ಅತಿಕ್ರಮಣಗಳನ್ನು ಊಹಿಸುವಲ್ಲಿ ಮತ್ತು ನುಸುಳುಕೋರರ ಗುರುತು/ಸಂಖ್ಯೆ ಪತ್ತೆ ಮಾಡುವಲ್ಲಿ ವಿಫಲವಾದ RAW ಮುಂತಾದ ಗುಪ್ತಚರ ಸಂಸ್ಥೆಗಳು ಟೀಕೆಗೆ ಗುರಿಯಾದವು. ಭಾರತದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಸಶಸ್ತ್ರ ಪಡೆಗಳ ಆಂತರಿಕ ಅಂದಾಜು ವರದಿಯಲ್ಲಿ ಅನೇಕ ವೈಫಲ್ಯಗಳನ್ನು ಬೊಟ್ಟು ಮಾಡಲಾಯಿತು.ಅಣ್ವಸ್ತ್ರ ವಾದದಿಂದ ಶಾಂತಿ ಸ್ಥಾಪನೆಯಾಗುತ್ತದೆ ಎಂಬ ನಂಬಿಕೆಯಿಂದ ಸಾಂಪ್ರದಾಯಿಕ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳದ ಮತ್ತು "ಆತ್ಮತೃಪ್ತಿ"ಯ ಪ್ರಜ್ಞೆ ಸೇರಿದಂತೆ ಅನೇಕ ವೈಫಲ್ಯಗಳು ವರದಿಯಲ್ಲಿ ಸೇರಿದ್ದವು. ಆದೇಶ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ದೋಷಗಳು, ಸಾಕಷ್ಟಿಲ್ಲದ ಸೇನಾಪಡೆ ಮತ್ತು ಬೋಫೋರ್ಸ್ ರೀತಿಯ ದೊಡ್ಡ ಒಳವ್ಯಾಸದ ಕೊಳವೆಯ ಬಂದೂಕುಗಳ ಅಭಾವದ ಬಗ್ಗೆ ಲೇಖನ ಗಮನಸೆಳೆಯಿತು.[೮೫] 2006ರಲ್ಲಿ, ಭಾರತೀಯ ಭೂಸೇನೆ ಅತಿಕ್ರಮಣಗಳ ಬಗ್ಗೆ ಸರ್ಕಾರಕ್ಕೆ ಪೂರ್ಣವಾಗಿ ಮಾಹಿತಿ ನೀಡಲಿಲ್ಲವೆಂದು ನಿವೃತ್ತ ಏರ್ ಚೀಫ್ ಮಾರ್ಷಲ್ ಎ.ವೈ.ಟಿಪ್ನಿಸ್ ಆರೋಪಿಸಿದರು. ಭಾರತೀಯ ವಾಯುಪಡೆಯ ಪೂರ್ಣದಾಳಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಅವರಿಗೆ ಆರಂಭದಲ್ಲಿ ಇಷ್ಟವಿರಲಿಲ್ಲ, ಬದಲಿಗೆ ಹೆಲಿಕಾಪ್ಟರ್ ಗನ್‌ಶಿಪ್ ನೆರವಿಗೆ ಮಾತ್ರ ಕೋರಿಕೆ ಸಲ್ಲಿಸಿದ್ದರೆಂದು ಟಿಪ್ನಿಸ್ ಆರೋಪಿಸಿದ್ದಾರೆ.[೮೬] ಸಂಘರ್ಷದ ಬಳಿಕ ಕೂಡಲೇ, LOCಗೆ ಸಂಪೂರ್ಣವಾಗಿ ಬೇಲಿ ಹಾಕುವ ಪಾಕಿಸ್ತಾನದ ಅಡ್ಡಿಯಿಂದಾಗಿ ಸ್ಥಗಿತಗೊಂಡಿದ್ದ ತನ್ನ ಈ ಹಿಂದಿನ ಯೋಜನೆಯನ್ನು ಪೂರ್ಣಗೊಳಿಸಲು ಭಾರತ ನಿರ್ಧರಿಸಿತು.[೮೭]

ಕಾರ್ಗಿಲ್ ಸಂಘರ್ಷದ ಅಂತ್ಯಗೊಂಡ ಹಿಂದೆಯೇ ಲೋಕಸಭೆಗೆ ನಡೆದ 13ನೇ ಭಾರತೀಯ ಸಾರ್ವತ್ರಿಕ ಚುನಾವಣೆಗಳು NDA ಸರ್ಕಾರಕ್ಕೆ ಬಹುಮತದ ಜನಾದೇಶವನ್ನು ತಂದುಕೊಟ್ಟವು. ಲೋಕಸಭೆಯ 545 ಸ್ಥಾನಗಳ ಪೈಕಿ 303 ಸ್ಥಾನಗಳನ್ನು ಪಡೆಯುವುದರೊಂದಿಗೆ ಸೆಪ್ಟೆಂಬರ್-ಅಕ್ಟೋಬರ್ 1999ರಲ್ಲಿ ಅದು ಮತ್ತೆ ಅಧಿಕಾರಕ್ಕೆ ಬಂತು. ಸಂಘರ್ಷವನ್ನು ಸೀಮಿತ ಬೌಗೋಳಿಕ ಪ್ರದೇಶಕ್ಕೆ ಒಳಪಡಿಸಿದ ಭಾರತದ ಪ್ರಯತ್ನಗಳ ಬಗ್ಗೆ ಅಮೆರಿಕ ಮೆಚ್ಚಿಗೆ ಸೂಚಿಸಿದ್ದರಿಂದ ರಾಜತಾಂತ್ರಿಕ ರಂಗದಲ್ಲಿ ಭಾರತ-ಅಮೆರಿಕ ಸಂಬಂಧಗಳು ಸುಧಾರಿಸಿದವು.[೮೮] ಭಾರತಕ್ಕೆ ವಿವೇಚನಾಯುಕ್ತವಾಗಿ ಫಿರಂಗಿ ಸರಬರಾಜು ಮತ್ತು ಮಾನವರಹಿತ ವಿಮಾನಗಳು,ಲೇಸರ್ ನಿರ್ದೇಶಿತ ಬಾಂಬ್‌ಗಳು ಮತ್ತು ಉಪಗ್ರಹ ಚಿತ್ರಗಳು ಮುಂತಾದ ಸಾಮಗ್ರಿ ಇತ್ಯಾದಿಗಳ ನೆರವು ನೀಡಿದ ಇಸ್ರೇಲ್ ಜತೆಗಿನ ಬಾಂಧವ್ಯಗಳು ಮತ್ತಷ್ಟು ಗಟ್ಟಿಗೊಂಡಿತು.[೮೯]

ಕಾರ್ಗಿಲ್ ಪರಾಮರ್ಶೆ ಸಮಿತಿ

ಯುದ್ಧದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, ಯುದ್ಧದ ಪರಿಣಾಮಗಳ ಬಗ್ಗೆ ಮತ್ತು ಗ್ರಹಿಸಬಹುದಾದ ಭಾರತದ ಗುಪ್ತಚರ ವೈಫಲ್ಯಗಳ ಪರಮಾರ್ಶೆಗಾಗಿ ತನಿಖಾ ಸಮಿತಿಯನ್ನು ಸ್ಥಾಪಿಸಿತು. ಉನ್ನತಾಧಿಕಾರ ಹೊಂದಿದ್ದ ಈ ಸಮಿತಿಗೆ ಪ್ರಮುಖ ವ್ಯೂಹಾತ್ಮಕ ವ್ಯವಹಾರಗಳ ವಿಶ್ಲೇಷಕ ಕೆ.ಸುಬ್ರಮಣ್ಯಂ ಅಧ್ಯಕ್ಷತೆ ವಹಿಸಿದ್ದರು ಮತ್ತು ಮಾಜಿ ಪ್ರಧಾನಮಂತ್ರಿಗಳು ಸೇರಿದಂತೆ ಭಾರತದ ಭದ್ರತೆ ಜೊತೆ ಪ್ರಸಕ್ತ ಅಥವಾ ಹಿಂದೆ ಸಂಬಂಧಗಳನ್ನು ಹೊಂದಿದ್ದ ಯಾರನ್ನಾದರೂ ಸಂದರ್ಶಿಸುವ ಅಧಿಕಾರವನ್ನು ಅವರಿಗೆ ನೀಡಲಾಯಿತು. ಸಮಿತಿಯ ಅಂತಿಮ ವರದಿ ('ಸುಬ್ರಮಣ್ಯಂ ವರದಿ'ಯೆಂದು ಕೂಡ ಉಲ್ಲೇಖಿಸಲಾಗಿದೆ)[೯೦]ದೊಡ್ಡ ಮಟ್ಟದಲ್ಲಿ ಭಾರತದ ಗುಪ್ತಚರ ಸೇವೆಯ ಪುನರ್ರಚನೆಗೆ ದಾರಿ ಕಲ್ಪಿಸಿತು.[೯೧] ಆದಾಗ್ಯೂ, ಸುಬ್ರಮಣ್ಯಂ ವರದಿ ಕಾರ್ಗಿಲ್ ಅತಿಕ್ರಮಣಗಳನ್ನು ಗುರುತಿಸುವಲ್ಲಿನ ವೈಫಲ್ಯಗಳಿಗಾಗಿ ಯಾರ ಮೇಲೂ ನಿರ್ದಿಷ್ಟ ಹೊಣೆ ವಹಿಸದೇ ಜಾರಿಕೊಂಡಿದ್ದು ಕಂಡುಬಂದಿದ್ದರಿಂದ ಭಾರತದ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.[೯೨] ಸಕಾಲದಲ್ಲಿ ಶತ್ರುಗಳ ನುಸುಳುವಿಕೆಗಳನ್ನು ವರದಿ ಮಾಡುವಲ್ಲಿ ವಿಫಲರಾದ ಮತ್ತು ತರುವಾಯದ ನಡುವಳಿಕೆಗಾಗಿ ಭಾರತೀಯ ಸೇನೆಬ್ರಿಗೇಡಿಯರ್ ಸುರೀಂದರ್ ಸಿಂಗ್ ವಿರುದ್ಧ ದೋಷಾರೋಪ ಹೊರಿಸಿದ್ದಕ್ಕಾಗಿ ಕೂಡ ಸಮಿತಿಯು ವಿವಾದದ ಸುಳಿಯಲ್ಲಿ ಸಿಲುಕಿತು. ಅನೇಕ ಪತ್ರಿಕಾ ವರದಿಗಳಲ್ಲಿ ಸುರೀಂದರ್ ಸಿಂಗ್‌ ಮೇಲೆ ದೋಷಾರೋಪ ಹೊರಿಸಿದ್ದನ್ನು ಪ್ರಶ್ನಿಸಿ, ಅದಕ್ಕೆ ವ್ಯತಿರಿಕ್ತ ವರದಿಗಳು ಪ್ರಕಟವಾದವು. ವಾಸ್ತವವಾಗಿ ಸಿಂಗ್ ನುಸುಳುವಿಕೆಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆಗಳನ್ನು ನೀಡಿದ್ದರೂ ಕೂಡ ಹಿರಿಯ ಸೇನೆ ಕಮಾಂಡರ್‌ಗಳು ಮತ್ತು ಅಂತಿಮವಾಗಿ ಸರ್ಕಾರದ ಉನ್ನತಾಧಿಕಾರಿಗಳು ನಿರ್ಲಕ್ಷಿಸಿದರೆಂದು ಪತ್ರಿಕೆಗಳು ವಾದ ಮಂಡಿಸಿದವು.[೯೩][೯೪][೯೫]


ಹಿಂದಿನ ವಾಡಿಕೆಯಿಂದ ಹೊರಬಂದು, ಅಂತಿಮ ವರದಿಯನ್ನು ಪ್ರಕಟಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು.[೯೬] ಕೆಲವು ಅಧ್ಯಾಯಗಳು ಮತ್ತು ಎಲ್ಲ ಉಪಭಾಗಗಳು ಸರ್ಕಾರವರ್ಗೀಕೃತ ಮಾಹಿತಿ ಮಾತ್ರ ಹೊಂದಿರುವಂತೆ ಕಂಡುಬಂದಿದ್ದು, ಬಿಡುಗಡೆ ಮಾಡಿರಲಿಲ್ಲ. ವರದಿಯ ಉಪಭಾಗಗಳಲ್ಲಿ ಭಾರತಅಣ್ವಸ್ತ್ರಗಳ ಕಾರ್ಯಕ್ರಮದ ಅಭಿವೃದ್ಧಿ ಮತ್ತು ಪ್ರಧಾನಮಂತ್ರಿಗಳಾಗಿದ್ದ ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್ ಮತ್ತು ವಿ.ಪಿ.ಸಿಂಗ್ ವಹಿಸಿದ ಪಾತ್ರಗಳ ಕುರಿತು ವಿವರಣೆಗಳಿತ್ತು ಎಂದು ಕೆ.ಸುಬ್ರಮಣ್ಯಂ ಬಳಿಕ ಬರೆದಿದ್ದಾರೆ.[೯೭][೯೮]

ಪಾಕಿಸ್ತಾನ

ಅಂತಾರಾಷ್ಟ್ರೀಯ ಏಕಾಂಗಿತನ ಎದುರಿಸುವ ಸಾಧ್ಯತೆಯೊಂದಿಗೆ, ಅದಾಗಲೇ ಚೂರಾಗಿದ್ದ ಪಾಕಿಸ್ತಾನದ ಅರ್ಥ ವ್ಯವಸ್ಥೆ ಮತ್ತಷ್ಟು ದುರ್ಬಲವಾಯಿತು.[೯೯][೧೦೦] ನಾರ್ಥರ್ನ್ ಲೈಟ್ ಇನ್‌ಫೇಂಟ್ರಿಯ ಅನೇಕ ಘಟಕಗಳು ಭಾರೀ ಸಾವು ನೋವನ್ನು ಅನುಭವಿಸಿದ್ದರಿಂದ ವಾಪಸಾತಿ ಬಳಿಕ ಪಾಕಿಸ್ತಾನದ ಪಡೆಗಳ ನೈತಿಕ ಸ್ಥೈರ್ಯ ಕುಸಿಯಿತು.[೧೦೧][೧೭] ಅನೇಕ ಅಧಿಕಾರಿಗಳ ಮೃತದೇಹಗಳನ್ನು ಸ್ವೀಕರಿಸಲು ಸರ್ಕಾರ ನಿರಾಕರಿಸಿತು,[೧೦೨][೧೦೩] ಈ ವಿಷಯದಿಂದ ಪಾಕಿಸ್ತಾನದ ಉತ್ತರದ ಪ್ರದೇಶಗಳಲ್ಲಿ ಆಕ್ರೋಶ ಮತ್ತು ಪ್ರತಿಭಟನೆಗಳು ಭುಗಿಲೆದ್ದವು.[೧೦೪][೧೦೫] ಪಾಕಿಸ್ತಾನ ಆರಂಭದಲ್ಲಿ ತನ್ನ ಕಡೆಯ ಸಾವು ನೋವನ್ನು ದೃಢಪಡಿಸದಿದ್ದರೂ, ಕಾರ್ಯಾಚರಣೆಯಲ್ಲಿ 4,000ಕ್ಕೂ ಹೆಚ್ಚು ಪಾಕಿಸ್ತಾನಿ ಪಡೆಗಳು ಹತರಾಗಿದ್ದಾರೆ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ ಸೋಲನುಭವಿಸಿದೆ ಎಂದು ಷರೀಫ್ ಬಳಿಕ ಹೇಳಿದ್ದಾರೆ.[೬] "ಮಾಜಿ ಪ್ರಧಾನಮಂತ್ರಿ ತಮ್ಮ ಪಡೆಗಳ ಸ್ಥೈರ್ಯ ಕುಗ್ಗಿಸಿದರೆ ತಮಗೆ ನೋವಾಗುತ್ತದೆ" ಎಂದು ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್, ಭಾರತದ ಕಡೆ ಸಾವು ನೋವುಗಳು ಪಾಕಿಸ್ತಾನಕ್ಕಿಂತ ಹೆಚ್ಚಿತ್ತೆಂದು ಹೇಳಿದ್ದಾರೆ.[೧೦೬]

ಯುದ್ಧ ಕುರಿತ ಪಾಕಿಸ್ತಾನ ಅಧಿಕಾರಿಗಳ ವರದಿಗಳ ಪ್ರಕಾರ, ಭಾರತದ ಸೇನೆ ವಿರುದ್ಧ ಜಯಸಾಧಿಸುವುದೆಂದು ಪಾಕಿಸ್ತಾನದಲ್ಲಿ ಅನೇಕ ಮಂದಿ ನಿರೀಕ್ಷಿಸಿದ್ದರು,[೧೦೦] ಆದರೆ ಘಟನೆಗಳ ತಿರುವಿನಿಂದ ನಿರಾಶರಾಗಿದ್ದರು ಮತ್ತು ತರುವಾಯ ಸೇನೆಯನ್ನು ವಾಪಸ್ ಪಡೆದಿದ್ದನ್ನು ಪ್ರಶ್ನಿಸಿದ್ದರು.[೧೦೭][೨೮] ಭಾರತದ ನೆಲದಲ್ಲಿದ್ದ ಇನ್ನುಳಿದ ಹೋರಾಟಗಾರರ ವಾಪಸಾತಿಗೆ ಪ್ರಧಾನಮಂತ್ರಿ ಷರೀಫ್ ಆದೇಶಿಸಿದ್ದರಿಂದ ಸೇನೆ ನಾಯಕತ್ವದಲ್ಲಿ ತಮ್ಮನ್ನು ಕಡೆಗಣಿಸಿದ ಭಾವನೆ ಕೆಲವು ಪಾಕಿಸ್ತಾನದ ಅಧಿಕಾರಿಗಳಿಗೆ ಬಂದಿತ್ತೆಂದು ಭಾವಿಸಲಾಗಿದೆ. ಆದಾಗ್ಯೂ, ಪಾಕಿಸ್ತಾನದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಷರೀಫ್ ಅವರಿಗೆ ಮನವಿ ಮಾಡಿದ್ದು ಜನರಲ್ ಮುಷರಫ್ ಎಂದು ಮಾಜಿ CENTCOM ಕಮಾಂಡರ್ ಆಂಥೋನಿ ಜಿನ್ನಿ, ಮಾಜಿ PM ನವಾಜ್ ಷರೀಫ್ ಸೇರಿದಂತೆ ಕೆಲವು ಲೇಖಕರು ಹೇಳಿದ್ದಾರೆ.[೧೦೮][೧೦೯] ಷರೀಫ್ ಅವರು ಕಾರ್ಗಿಲ್ ದಾಳಿಗಳ ಹೊಣೆಯನ್ನು ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಮೇಲೆ ನೇರವಾಗಿ ವಹಿಸಿದ್ದರಿಂದ, ಉಭಯತ್ರರ ನಡುವೆ ಅಹಿತಕರ ವಾತಾವರಣ ಉಂಟಾಯಿತು. ಅಕ್ಬೋಬರ್ 12, 1999ರಂದು ಜನರಲ್ ಮುಷರಫ್ ಅವರು ರಕ್ತರಹಿತ ಕ್ಷಿಪ್ರ ಕ್ರಾಂತಿ ಯಲ್ಲಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಿದರು.


ಪ್ರತಿಪಕ್ಷದ ನಾಯಕಿ ಮತ್ತು ಮಾಜಿ ಪ್ರಧಾನಮಂತ್ರಿ ಬೇನಜಿರ್ ಭುಟ್ಟೊ ಕಾರ್ಗಿಲ್ ಯುದ್ಧವನ್ನು "ಪಾಕಿಸ್ತಾನದ ಮಹಾನ್ ಪ್ರಮಾದ" ಎಂದು ಬಣ್ಣಿಸಿದರು.[೧೧೦] "ಕಾರ್ಗಿಲ್ ಯುದ್ಧದ ಸಮಯ ವ್ಯರ್ಥ ಮತ್ತು ಕಾಶ್ಮೀರದ ವಿಶಾಲ ತಳಹದಿಯ ವಿಷಯದ ಬಗ್ಗೆ ಯಾವುದೇ ಅನುಕೂಲದ ಫಲಿತಾಂಶ ಸಿಗುತ್ತಿರಲಿಲ್ಲವೆಂದು" ಸೇನೆಯ ಅನೇಕ ಮಾಜಿ ಅಧಿಕಾರಿಗಳು ಮತ್ತು ISI(ಪಾಕಿಸ್ತಾನದ ಮುಖ್ಯ ಗುಪ್ತಚರ ದಳ)ಕೂಡ ಭಾವಿಸಿತ್ತು.[೧೧೧] "ಪೂರ್ವ ಪಾಕಿಸ್ತಾನ ದುರಂತಕ್ಕಿಂತ ಈ ಯುದ್ಧವು ದೊಡ್ಡ ಹಾನಿ" ಎಂದು ನಿವೃತ್ತ ಪಾಕಿಸ್ತಾನಿ ಸೇನಾ ಜನರಲ್, ಲೆಫ್ಟಿನೆಂಟ್ ಜನರಲ್ ಆಲಿ ಕುಲಿ ಖಾನ್ ಕಟುವಾಗಿ ಖಂಡಿಸಿದ್ದಾರೆ.[೧೧೨] "ಯೋಜನೆಯ ಪರಿಕಲ್ಪನೆ, ತಂತ್ರೋಪಾಯದ ಯೋಜನೆ ಮತ್ತು ಜಾರಿಗೆ ಸಂಬಂಧಪಟ್ಟಂತೆ ಲೋಪವಿದ್ದು,ಅನೇಕ ಮಂದಿ ಸೈನಿಕರ ಪ್ರಾಣತ್ಯಾಗದಲ್ಲಿ ಅಂತ್ಯಗೊಂಡಿತು" ಎಂದು ವಿಷಾದಿಸಿದ್ದಾರೆ.[೧೧೩][೧೧೨] ಇಡೀ ಯೋಜನೆ ಮತ್ತು ಕಾರ್ಗಿಲ್ ಶಿಖರಗಳಿಂದ ವಾಪಸಾಗಿದ್ದನ್ನು ಟೀಕಿಸಿದ ಪಾಕಿಸ್ತಾನದ ಮಾಧ್ಯಮಗಳು, ಕೊನೇ ಪಕ್ಷ ಪ್ರಾಣತ್ಯಾಗ ಮಾಡಿದ್ದಕ್ಕೂ ಯಾವುದೇ ಬೆಲೆ ಸಿಗಲಿಲ್ಲ, ಕೇವಲ ಅಂತಾರಾಷ್ಟ್ರೀಯ ಖಂಡನೆ ಮಾತ್ರ ಸಿಕ್ಕಿತು ಎಂದು ಜರೆಯಿತು.[೧೧೪]

ಸಂಘರ್ಷದ ಆರಂಭಕ್ಕೆ ಕಾರಣರಾದ ಜನರ ಬಗ್ಗೆ ತನಿಖೆ ನಡೆಸುವಂತೆ ಅನೇಕ ಮಂದಿ ಒತ್ತಾಯಿಸಿದರಾದರೂ, ಪಾಕಿಸ್ತಾನ ಸರ್ಕಾರ ಯಾವುದೇ ಸಾರ್ವಜನಿಕ ತನಿಖಾ ಸಮಿತಿಯನ್ನು ನೇಮಿಸಲಿಲ್ಲ. ನವಾಜ್ ಷರೀಫ್ ರಚಿಸಿದ ತನಿಖಾ ಸಮಿತಿಯು ಜನರಲ್ ಪರ್ವೇಜ್ ಮುಷರಫ್ ಅವರ ವಿರುದ್ಧ ಸೇನೆ ಕೋರ್ಟ್ ವಿಚಾರಣೆಗೆ ಶಿಫಾರಸು ಮಾಡಿದೆಯೆಂದು ವಿವರಿಸಿರುವ ಶ್ವೇತ ಪತ್ರವನ್ನು 2006ರಲ್ಲಿ PML(N)ಪ್ರಕಟಿಸಿತು, ಆದರೆ ಮುಷರಫ್ ಸ್ವತಃ ತಮ್ಮ ರಕ್ಷಣೆ ಸಲುವಾಗಿ ಸರ್ಕಾರವನ್ನು ಉರುಳಿಸಿದ ಬಳಿಕ ಆ ವರದಿಯನ್ನು ಕದ್ದರು. ಕಾರ್ಗಿಲ್ ದಾಳಿ ಆರಂಭವಾಗುವುದಕ್ಕಿಂತ 11 ತಿಂಗಳು ಮೊದಲೇ ಭಾರತಕ್ಕೆ ಇದರ ಬಗ್ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಭಾರತಕ್ಕೆ ಸೇನೆ, ರಾಜತಾಂತ್ರಿಕತೆ ಮತ್ತು ಆರ್ಥಿಕ ರಂಗಗಳಲ್ಲಿ ಅದಕ್ಕೆ ಸಂಪೂರ್ಣ ಜಯ ಪ್ರಾಪ್ತಿಯಾಯಿತು ಎಂದು ಕೂಡ ವರದಿಯಲ್ಲಿ ಹೇಳಲಾಗಿತ್ತು.[೧೧೫] ಕಾರ್ಗಿಲ್ ದಾಳಿಯ ಬಗ್ಗೆ ಷರೀಫ್ ಅವರ ಗಮನಕ್ಕೆ ಸೇನೆ ತರಲೇ ಇಲ್ಲವೆಂದು ಪಾಕಿಸ್ತಾನದ ಮಾಜಿ ಸೇನಾ ಕಾರ್ಪ್ಸ್ ಕಮಾಂಡರ್ ಜೂನ್ 2008ರಲ್ಲಿ ನೀಡಿದ ಹೇಳಿಕೆಯಿಂದ[೧೧೬], ಕಾರ್ಗಿಲ್ ವಿದ್ಯಮಾನದ ತನಿಖೆ ನಡೆಸಬೇಕೆಂಬ ಕಾನೂನು ಮತ್ತು ರಾಜಕೀಯ ಗುಂಪುಗಳ ಒತ್ತಾಯಕ್ಕೆ ಪುನಃ ಕಿಡಿ ಹೊತ್ತಿಕೊಂಡಿತು.[೧೧೭][೧೧೮]


ಕಾರ್ಗಿಲ್ ಸಂಘರ್ಷವು ಪಾಕಿಸ್ತಾನದ ಗುರಿಗಳಲ್ಲಿ ಒಂದಾಗಿದ್ದ ಕಾಶ್ಮೀರ ವಿವಾದದ ಬಗ್ಗೆ ಅಂತಾರಾಷ್ಟ್ರೀಯ ಗಮನ ಸೆಳೆದರೂ ಕೂಡ, ಅದು ನಡೆದುಕೊಂಡ ಸಂದರ್ಭ ಸಕಾರಾತ್ಮಕವಾಗಿಲ್ಲದ್ದರಿಂದ ಅದರ ವಿಶ್ವಾಸಾರ್ಹತೆಗೆ ಧಕ್ಕೆಯಾಯಿತು. ಏಕೆಂದರೆ ಉಭಯ ರಾಷ್ಟ್ರಗಳ ನಡುವೆ ಶಾಂತಿ ಪ್ರಕ್ರಿಯೆ ನಡೆದ ಬಳಿಕ ಸ್ವಲ್ಪ ಸಮಯದಲ್ಲೇ ಕಾರ್ಗಿಲ್ ಅತಿಕ್ರಮಣ ಘಟಿಸಿತ್ತು. LOCಯ ಪಾವಿತ್ರ್ಯತೆ ಕೂಡ ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು. ಭಾರತದ ಆಡಳಿತ ವ್ಯಾಪ್ತಿಯ ಕಾಶ್ಮೀರದಿಂದ ನೂರಾರು ಸಶಸ್ತ್ರ ಉಗ್ರಗಾಮಿಗಳನ್ನು ಹಿಂತೆಗೆದುಕೊಳ್ಳಬೇಕೆಂದು ಇಸ್ಲಾಮಾಬಾದ್‌ಗೆ ಅಧ್ಯಕ್ಷ ಕ್ಲಿಂಟನ್ ನೀಡಿದ ಆದೇಶವು ಪಾಕಿಸ್ತಾನದ ವಿರುದ್ಧ US ನೀತಿಯಲ್ಲಿ ಸ್ಪಷ್ಟ ಬದಲಾವಣೆಯ ಸಂಕೇತವೆಂದು ಪಾಕಿಸ್ತಾನದಲ್ಲಿ ಅನೇಕ ಮಂದಿ ಅಭಿಪ್ರಾಯಪಟ್ಟರು.[೧೧೯]

ಯುದ್ಧದ ಬಳಿಕ, ಪಾಕಿಸ್ತಾನ ಸೇನೆಗೆ ಕೆಲವು ಮಾರ್ಪಾಟುಗಳನ್ನು ಮಾಡಲಾಯಿತು. ಭಾರತದ ನಿವೃತ್ತ ಲೆಫ್ಟಿನೆಂಟ್ ಜನರಲ್ ಅವರ ಶ್ಲಾಘನೆಗೆ ಒಳಗಾಗಿದ್ದ ನಾರ್ಥರ್ನ್ ಲೈಟ್ ಇನ್‌ಫೇಂಟ್ರಿಯ ಸಾಧನೆಯನ್ನು ಗುರುತಿಸಿ-ದಳವನ್ನು ಖಾಯಂ ಸೇನೆಯಲ್ಲಿ ಸೇರ್ಪಡೆ ಮಾಡಲಾಯಿತು.[೪೩] ಕಾರ್ಗಿಲ್ ಯುದ್ಧವು ಅಚ್ಚರಿಯ ತಂತ್ರೋಪಾಯದೊಂದಿಗೆ ಭದ್ರ ಯೋಜನೆಯನ್ನು ಹೊಂದಿದ್ದರೂ ಕೂಡ, ರಾಜಕೀಯ-ರಾಜತಾಂತ್ರಿಕ ಪರಿಣಾಮಗಳನ್ನು ಅಳೆಯುವಲ್ಲಿ ಸಾಕಷ್ಟು ಕೆಲಸ ನಡೆದಿಲ್ಲ ಎನ್ನುವುದನ್ನು ನಂತರದ ಘಟನೆಗಳು ರುಜುವಾತು ಮಾಡಿದವು.[೧೨೦] 1965ರ ಯುದ್ಧದ ಕಿಡಿ ಹೊತ್ತಿಸಿದ ಗಿಬ್ರಾಲ್ಟರ್ ಕಾರ್ಯಾಚರಣೆ ಮುಂತಾದ ಈ ಹಿಂದಿನ ಯಶಸ್ವಿಯಾಗದ ಅತಿಕ್ರಮಣ ಪ್ರಯತ್ನಗಳಂತೆಯೇ, ಈ ಬಾರಿಯೂ ಪಾಕಿಸ್ತಾನ ಸೇನೆಯ ವಿಭಾಗಗಳಲ್ಲಿ ಸಮನ್ವಯತೆ ಅಥವಾ ಮಾಹಿತಿ ಹಂಚಿಕೆ ಕಡಿಮೆ ಪ್ರಮಾಣದಲ್ಲಿತ್ತು.[[]] ಒಂದು U.S.ಗುಪ್ತಚರ ವರದಿಯು; ಪಾಕಿಸ್ತಾನದ ಮಹೋನ್ನತ ಕಾರ್ಯತಂತ್ರದ ಕೊರತೆ, ಹಿಂದಿನ ಯುದ್ಧಗಳ ಅವಿವೇಕಗಳ ಪುನರಾವರ್ತನೆಯನ್ನು ರುಜುವಾತು ಮಾಡಲು ಕಾರ್ಗಿಲ್ ಇನ್ನೊಂದು ಉದಾಹರಣೆ ಎಂದು ಹೇಳಿಕೆ ನೀಡಿತು.[೧೨೧]

ಸಾವುನೋವುಗಳು

ಆಪರೇಷನ್ ವಿಜಯ್ ಸ್ಮಾರಕ

ಉಭಯ ಕಡೆಗಳಲ್ಲೂ ಭಾರೀ ಸಾವುನೋವುಗಳಾಯಿತು. ಸಾವುನೋವಿನ ವರದಿಯಲ್ಲಿ ಪಾಕಿಸ್ತಾನ ಎರಡು ರೀತಿಯ ಅಂಕಿಅಂಶಗಳನ್ನು ನೀಡಿತು. 357 ಸೈನಿಕರು ಸತ್ತಿರುವ ಅಂಕಿಅಂಶವನ್ನು ಕೆಲವು ಪಾಕಿಸ್ತಾನಿ ಅಧಿಕಾರಿಗಳು ಪ್ರಶ್ನಿಸಿ, ಸಂಘರ್ಷದಲ್ಲಿ 4,000 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆಂದು ವಾದಿಸಿದರು. 665ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದು, 8 ಮಂದಿ ಸೆರೆಸಿಕ್ಕಿದ್ದಾರೆಂದು ಕೂಡ ಪಾಕಿಸ್ತಾನ ದೃಢಪಡಿಸಿತು. ಭಾರತದ ಪ್ರಕಾರ, 527 ಸೈನಿಕರು ಹತರಾಗಿದ್ದು, 1,363 ಸೈನಿಕರಿಗೆ ಗಾಯ ಮತ್ತು ಒಬ್ಬರು ಸೆರೆಸಿಕ್ಕಿದ್ದು ಭಾರತಕ್ಕಾದ ನಷ್ಟಗಳಾಗಿವೆ.

ಪಾಕಿಸ್ತಾನದ ಸೇನೆಯ ನಷ್ಟಗಳನ್ನು ನಿರ್ಧರಿಸುವುದೇ ಕಷ್ಟವಾಯಿತು, ಏಕೆಂದರೆ ನಿಜವಾಗಿ ಪಾಕಿಸ್ತಾನ ಯಾವುದೇ ಅಧಿಕೃತ ಸಾವುನೋವಿನ ಪಟ್ಟಿಯನ್ನು ಪ್ರಕಟಿಸಿರಲಿಲ್ಲ. US ವಿದೇಶಾಂಗ ಇಲಾಖೆಯು ಆಸುಪಾಸು 700 ಸೈನಿಕರ ಸಾವಿನ ಬಗ್ಗೆ ಪೂರ್ವ, ಆಂಶಿಕ ಅಂದಾಜು ಮಾಡಿತು. ನವಾಜ್ ಷರೀಫ್ ಹೇಳಿಕೆ ನೀಡಿದ ಸಂಖ್ಯೆಗಳ ಪ್ರಕಾರ 4,000+ ಸೈನಿಕರು ಸಾವಪ್ಪಿದ್ದರು. ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ಯುದ್ಧ ಕುರಿತ ತನ್ನ "ಶ್ವೇತಪತ್ರ"ದಲ್ಲಿ 3,000ಕ್ಕೂ ಹೆಚ್ಚು ಮುಜಾಹಿದ್ದೀನ್‌ಗಳು,ಅಧಿಕಾರಿಗಳು ಮತ್ತು ಸೈನಿಕರು ಸತ್ತಿದ್ದಾರೆಂದು ವಿವರಿಸಿದೆ.[೧೨೨] "ಸಾವಿರಾರು" ಸೈನಿಕರು ಮತ್ತು ಅನಿಯತ ಸೈನಿಕರು ಹತರಾಗಿದ್ದಾರೆಂದು ಪಾಕಿಸ್ತಾನದ ಇನ್ನೊಂದು ಪ್ರಮುಖ ರಾಜಕೀಯ ಪಕ್ಷ PPP}ಕೂಡ ತಿಳಿಸಿದೆ.[೧೨೩] ಭಾರತದ ಅಂದಾಜಿನ ಪ್ರಕಾರ 1,042 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ.[೧೨೪] ಮುಷರಫ್‌ರ "ಅಗ್ನಿಪಥ್" ಶಿರೋನಾಮೆಯ ಜೀವನ ವೃತ್ತಾಂತದ ಹಿಂದಿ ಆವೃತ್ತಿಯಲ್ಲಿನ ಸಾವಿನ ಅಂದಾಜು ಎಲ್ಲ ಅಂದಾಜುಗಳಿಗಿಂತ ಭಿನ್ನವಾಗಿದ್ದು, 357 ಸೈನಿಕರು ಹತರಾಗಿದ್ದಾರೆ ಮತ್ತು 665 ಜನರು ಗಾಯಗೊಂಡಿದ್ದಾರೆಂದು ಹೇಳಲಾಗಿದೆ.[೫] ಗಾಯಗೊಂಡ ಪಾಕಿಸ್ತಾನಿಗಳ ಸಂಖ್ಯೆ ಕುರಿತು ಜನರಲ್ ಮುಷರಫ್ ತಿಳಿಸಿದ ಅಂಕಿಅಂಶ ಬಿಟ್ಟರೆ, ಪಾಕಿಸ್ತಾನ ಶಿಬಿರದಲ್ಲಿ ಗಾಯಗೊಂಡ ಜನರ ಸಂಖ್ಯೆ ಇನ್ನೂ ಪೂರ್ಣವಾಗಿ ತಿಳಿದಿಲ್ಲ. ಹೋರಾಟದ ಸಂದರ್ಭದಲ್ಲಿ ಒಬ್ಬ ಭಾರತೀಯ ಪೈಲಟ್ ಅಧಿಕೃತವಾಗಿ ಸೆರೆಹಿಡಿಯಲ್ಪಟ್ಟರು. 8 ಪಾಕಿಸ್ತಾನಿ ಸೈನಿಕರು ಹೋರಾಟದಲ್ಲಿ ಸೆರೆಸಿಕ್ಕಿದ್ದು, 1999ಆಗಸ್ಟ್ 13ರಂದು ಅವರನ್ನು ಸ್ವದೇಶಕ್ಕೆ ವಾಪಸು ಕಳಿಸಲಾಗಿದೆ.[೭]

ಕಲೆಗಳಲ್ಲಿ ಕಾರ್ಗಿಲ್ ಯುದ್ಧ

ಸಂಕ್ಷಿಪ್ತ ಸಂಘರ್ಷವು ಭಾರತದ ಚಿತ್ರನಿರ್ಮಾಪಕರಿಗೆ ಮತ್ತು ಲೇಖಕರಿಗೆ ಗಮನಾರ್ಹ ನಾಟಕೀಯ ವಸ್ತುವನ್ನು ಒದಗಿಸಿತು. ಈ ವಿಷಯ ಕುರಿತು ಸೆರೆಹಿಡಿದ ಕೆಲವು ಸಾಕ್ಷ್ಯಚಿತ್ರಗಳನ್ನು ಬಿಜೆಪಿ ನೇತೃತ್ವದ ಆಡಳಿತಾರೂಢ ಸಮ್ಮಿಶ್ರ ಪಕ್ಷಗಳ ಒಕ್ಕೂಟ, ಯುದ್ಧದ ಬೆನ್ನಲ್ಲೇ ನಡೆದ ಜರುಗಿದ ಚುನಾವಣೆ ಪ್ರಚಾರಕ್ಕಾಗಿ ಬಳಸಿಕೊಂಡಿತು. ಕಾರ್ಗಿಲ್ ಯುದ್ಧದ ವಿಷಯವನ್ನು ಆಧರಿಸಿ ತಯಾರಾದ ಪ್ರಮುಖ ಚಲನಚಿತ್ರಗಳು ಮತ್ತು ನಾಟಕಗಳ ಪಟ್ಟಿ ಕೆಳಗಿನಂತಿದೆ.

  • ಯುದ್ಧದ ಅನೇಕ ಘಟನೆಗಳನ್ನು ಬಿಂಬಿಸುವ LOC: ಕಾರ್ಗಿಲ್ (2003),ಹಿಂದಿ ಚಲನಚಿತ್ರವು ಭಾರತದ ಚಲನಚಿತ್ರ ಇತಿಹಾಸದಲ್ಲೇ ಸುದೀರ್ಘಾವಧಿಯ ಚಿತ್ರಗಳಲ್ಲಿ ಒಂದಾಗಿದ್ದು, ನಾಲ್ಕು ಗಂಟೆಗಳ ಕಾಲಾವಧಿಯದ್ದಾಗಿದೆ.[೧೨೫]
  • ಲಕ್ಷ್ಯಾ (2003)ಇನ್ನೊಂದು ಹಿಂದಿ ಚಲನಚಿತ್ರ ಸಂಘರ್ಷದ ಕಾಲ್ಪನಿಕ ಕಾರಣಗಳನ್ನು ಬಿಂಬಿಸುತ್ತದೆ. ಪಾತ್ರಗಳ ನೈಜ ಚಿತ್ರಣಕ್ಕೆ ಚಿತ್ರ ವಿಮರ್ಶಕರು ಸಾಮಾನ್ಯವಾಗಿ ಮೆಚ್ಚುಗೆ ಸೂಚಿಸಿದ್ದಾರೆ.[೧೨೬] ಎರಡೂ ಕಡೆಗಳನ್ನು ನ್ಯಾಯಯುತವಾಗಿ ಬಿಂಬಿಸಿದ್ದರಿಂದ ಪಾಕಿಸ್ತಾನದಲ್ಲಿ ಈ ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಸಿಕ್ಕಿದವು.[೧೨೭]
  • ಮಹೇಶ್ ಸುಖ್‌ಧರೆ ನಿರ್ದೇಶನದ ಸೈನಿಕನ ಜೀವನ ಚಿತ್ರವನ್ನು ಬಿಂಬಿಸುವ ಸೈನಿಕ (2002)[೧೨೮] ಚಿತ್ರದ ಘಟನಾವಳಿಗಳಲ್ಲಿ ಕಾರ್ಗಿಲ್ ಯುದ್ಧದ ಘಟನೆಯ‌ೂ ಸೇರಿದೆ. ಪಾತ್ರವರ್ಗದಲ್ಲಿಸಿ.ಪಿ.ಯೋಗೀಶ್ವರ್, ಸಾಕ್ಷಿ ಶಿವಾನಂದ್ಇದ್ದಾರೆ.
  • ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಶ್ವಿನಿ ಚೌಧರಿ ನಿರ್ದೇಶನದ ಧೂಪ್ (2003)[೧೨೯]ಅನುಜ್ ನಾಯರ್ ಸಾವಿನ ಬಳಿಕ ಅವರ ತಂದೆತಾಯಿಗಳ ಜೀವನವನ್ನು ಬಿಂಬಿಸುತ್ತದೆ. ಭಾರತೀಯ ಸೇನೆಯ ಕ್ಯಾಪ್ಟನ್ ಅನುಜ್ ನಾಯರ್ ಅವರಿಗೆ ಮಹಾ ವೀರ್ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು. ಅನುಜ್ ತಂದೆ ಎಸ್.ಕೆ.ನಾಯರ್ ಪಾತ್ರವನ್ನು ಓಮ್ ಪುರಿ ವಹಿಸಿದ್ದಾರೆ.
  • ಸಹರಾ ಚಾನೆಲ್‌ನಲ್ಲಿ ಪ್ರಸಾರವಾದ ಮಿಷನ್ ಫಟೇ-ಕಾರ್ಗಿಲ್ ಹೀರೊಗಳ ನೈಜ ಕಥೆಗಳನ್ನಾಧರಿಸಿದ TV ಧಾರಾವಾಹಿಗಳು ಭಾರತದ ಸೇನೆಯ ಕಾರ್ಯಾಚರಣೆಗಳನ್ನು ನಿರೂಪಿಸಿದವು.
  • ಫಿಫ್ಟಿ ಡೇ ವಾರ್‌ -ಯುದ್ಧ ಕುರಿತ ನಾಟಕೀಯ ನಿರ್ಮಾಣ, ಶೀರ್ಷಿಕೆಯು ಕಾರ್ಗಿಲ್ ಸಂಘರ್ಷ ನಡೆದ ಅವಧಿಯನ್ನು ಸೂಚಿಸುತ್ತದೆ. ಈ ಚಿತ್ರವನ್ನು ಏಷ್ಯಾದಲ್ಲೇ ಅತೀದೊಡ್ಡ ಚಿತ್ರ ನಿರ್ಮಾಣವೆಂದು ಹೇಳಲಾಗಿದ್ದು, ಹೊರಾಂಗಣದ ಸನ್ನಿವೇಶ ನಿರ್ಮಾಣದ ವೇಳೆ ನೈಜ ವಿಮಾನ ಮತ್ತು ಸ್ಫೋಟಕಗಳನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.
  • ಕುರುಕ್ಷೇತ್ರ (2008)-ಕಾರ್ಗಿಲ್ ಯುದ್ಧದ ವಾಸ್ತವಿಕ ಅನುಭವ ಆಧರಿಸಿ ಭಾರತೀಯ ಸೇನೆ ಮಾಜಿ ಮೇಜರ್-ಮೇಜರ್ ರವಿ(ನಿವೃತ್ತ)ನಿರ್ದೇಶಿಸಿದ ಮಲೆಯಾಳಂ ಚಿತ್ರ.

ಕಾರ್ಗಿಲ್ ವಿದ್ಯಮಾನದ ಸುತ್ತ ಕಥೆಯನ್ನು ಹೆಣೆದಿರುವಟಾಂಗೊ ಚಾರ್ಲೀ ಮತ್ತಿತರ ಚಲನಚಿತ್ರಗಳು[೧೩೦], ಮಲೆಯಾಳಂ ಚಿತ್ರ ಕೀರ್ತಿ ಚಕ್ರ ಸೇರಿದಂತೆ ಜತೆಯಲ್ಲಿ ಮುಖ್ಯವಾಹಿನಿಯ ಚಲನಚಿತ್ರಗಳಿಗೆ ಇನ್ನೂ ಕಥಾವಸ್ತುವಾಗಿ ಮುಂದುವರಿದಿದೆ.[೧೩೧] ಕಾರ್ಗಿಲ್ ಕಾಲಾವಧಿಗೆ ಹೊಂದಿಕೊಂಡ 1999ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನದ ನಡುವಿನ ಪಂದ್ಯದ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕೂಡ ಯುದ್ಧದ ಪರಿಣಾಮ ಗೋಚರವಾಯಿತು. ಈ ಪಂದ್ಯವು ಸರಣಿಯಲ್ಲೇ ಅತೀ ಹೆಚ್ಚು ಜನರು ವೀಕ್ಷಿಸಿದ ಪಂದ್ಯಗಳಲ್ಲಿ ಒಂದಾಗಿ ಜನರನ್ನು ಬಾವೋದ್ರೇಕಗೊಳಿಸಿದ್ದು ಕಂಡುಬಂತು.

ಟಿಪ್ಪಣಿಗಳು

ಟೆಂಪ್ಲೇಟು:Fnbಸಂಘರ್ಷದ ಹೆಸರುಗಳು: ಸಂಘರ್ಷ ವಿವಿಧ ಹೆಸರುಗಳಿಂದ ಕೂಡಿದೆ. ಕಾರ್ಗಿಲ್ ವಾಸ್ತವ ಹೋರಾಟದ ಸಂದರ್ಭದಲ್ಲಿ "ಯುದ್ಧ" ಪದ ಬಳಸದಂತೆ ಎಚ್ಚರಿಕೆ ವಹಿಸಿದ ಭಾರತ ಸರ್ಕಾರ, "ಯುದ್ಧದ ರೀತಿಯ ಪರಿಸ್ಥಿತಿ" ಎಂದು ಕರೆಯಿತಾದರೂ, ಉಭಯ ರಾಷ್ಟ್ರಗಳು ತಾವು "ಯುದ್ಧದ ಸ್ಥಿತಿ"ಯಲ್ಲಿರುವ ಸೂಚನೆ ನೀಡಿದವು. ಕಾರ್ಗಿಲ್ "ಸಂಘರ್ಷ", ಕಾರ್ಗಿಲ್ "ಘಟನೆ" ಅಥವಾ ಅಧಿಕೃತ ಸೇನೆ ಪ್ರಹಾರ "ಆಪರೇಷನ್ ವಿಜಯ್" ಮುಂತಾದ ಪದಗಳ ಬಳಕೆಗೆ ಹೀಗೆ ಆದ್ಯತೆ ನೀಡಲಾಯಿತು. ಯುದ್ಧವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲದಿದ್ದರೂ, ಯುದ್ಧದ ಅಂತ್ಯದಲ್ಲಿ ಭಾರತ ಸರ್ಕಾರ "ಕಾರ್ಗಿಲ್ ಯುದ್ಧ"ವೆಂದೇ ಹೆಚ್ಚಾಗಿ ಕರೆಯಿತು. "ಮ‌ೂರನೇ ಕಾಶ್ಮೀರ ಯುದ್ಧ" ಮತ್ತು ಅತಿಕ್ರಮಣಕ್ಕೆ ಪಾಕಿಸ್ತಾನದ ಸಂಕೇತನಾಮ "ಆಪರೇಷನ್ ಬದರ್" ಸೇರಿದಂತೆ ಇನ್ನು ಕೆಲವು ಹೆಚ್ಚು ಜನಪ್ರಿಯವಲ್ಲದ ಹೆಸರುಗಳು ಬಳಕೆಯಲ್ಲಿವೆ.
  1. Government of India site mentioning the Indian casualties, Statewise break up of Indian casualties statement from Indian Parliament
  2. "Breakdown of casualties into Officers, JCOs, and Other Ranks". Parliament of India Website. Retrieved 2009-05-20.
  3. "Complete Roll of Honour of Indian Army's Killed in Action during Op Vijay". Indian Army. Retrieved 2009-05-20.
  4. "Official statement giving breakdown of wounded personnel". Parliament of India Website. Retrieved 2009-05-20.
  5. ೫.೦ ೫.೧ ೫.೨ "President Musharaffs disclosure on Pakistani Casualties in his book". Indian Express. Retrieved 2009-05-20.
  6. ೬.೦ ೬.೧ "Over 4000 soldier's killed in Kargil: Sharif". The Hindu. Retrieved 2009-05-20.
  7. ೭.೦ ೭.೧ "Tribune Report on Pakistani POWs". Retrieved 2009-05-20.
  8. ೮.೦ ೮.೧ ೮.೨ ೮.೩ ೮.೪ ೮.೫ "1999 Kargil Conflict". GlobalSecurity.org. Retrieved 2009-05-20.
  9. ನವಾಜ್,ಶೂಜಾ, ಕ್ರಾಸ್ಡ್ ಸ್ವೋರ್ಡ್ಸ್: ಪಾಕಿಸ್ತಾನ್, ಇಟ್ಸ್ ಆರ್ಮಿ, ಅಂಡ್ ದಿ ವಾರ್ಸ್ ವಿತಿನ್, , p. 420 (2007)
  10. "Sharif admits he let down Vajpayee on Kargil conflict". 2007-09-10. Retrieved 2007-10-06.
  11. "Pak commander blows the lid on Islamabad's Kargil plot". June 12, 2009. Retrieved 2009-06-13.
  12. Tom Clancy, Gen. Tony Zinni (Retd) and Tony Koltz (2004). Battle Ready. Grosset & Dunlap. ISBN 0-399-15176-1.
  13. Hussain, Javed (2006-10-21). "Kargil: what might have happened". Dawn. Retrieved 2009-05-20.
  14. Cheema, Pervaiz Iqbal (2003). The Armed Forces of Pakistan. Allen & Unwin. ISBN 1865081191. Pg 4
  15. ಪ್ರೊಫೈಲ್ ಆಫ್ ಕಾರ್ಗಿಲ್ ಡಿಸ್ಟ್ರಿಕ್ಟ್ ಕಾರ್ಗಿಲ್ ಜಿಲ್ಲೆಯ ಅಧಿಕೃತ ಜಾಲತಾಣ
  16. "Climate & Soil conditions". Official website of Kargil District. Retrieved 2009-05-20.
  17. ೧೭.೦ ೧೭.೧ "War in Kargil - The CCC's summary on the war" (PDF). Retrieved 2009-05-20.
  18. Chandran, Suba (2004). "Limited War with Pakistan: Will It Secure India's Interests?". ACDIS Occasional Paper. Program in Arms Control, Disarmament, and International Security (ACDIS), University of Illinois. Retrieved 2009-05-20.
  19. ದಾಳಿ ಮಾಡುವ ಪಡೆಗಳು vs ರಕ್ಷಿಸುವ ಪಡೆಗಳಿಗೆ ಅಂಗೀಕಾರ್ಹ 3:1 ಅನುಪಾತದ ವಿರುದ್ಧ ಪರ್ವತಾಚ್ಛಾದಿತ ಪ್ರದೇಶದಲ್ಲಿ ಅನುಪಾತ 6:1 ಎಂದು ಅಂದಾಜು ಮಾಡಲಾಗಿದೆ. ಇಂಡಿಯಾ ಟುಡೆ[೧]
  20. ಅಕೋಸ್ಟಾ, ಮಾರ್ಕಸ್ P., CPT, U.S. ಆರ್ಮಿ, ಹೈ ಆಲ್ಟಿಟ್ಯೂಡ್ ವಾರ್‌‌ಫೇರ್- ದಿ ಕಾರ್ಗಿಲ್ ಕಾನ್‌ಫ್ಲಿಕ್ಟ್ & ದಿ ಫ್ಯೂಚರ್, ಜೂನ್ 2003. ಪರ್ಯಾಯ ಕೊಂಡಿ
  21. "The Coldest War". Outside Magazine. Retrieved 2009-05-20.
  22. ೨೨.೦ ೨೨.೧ ೨೨.೨ ಕಾರ್ಗಿಲ್: ವೇರ್ ಡಿಫೆನ್ಸ್ ಮೆಟ್ ಡಿಪ್ಲೋಮಸಿ-ವಿಜಯ್ ಕಾರ್ಯಾಚರಣೆ ಕುರಿತು ಆಗಿನ ಭಾರತದ ಸೇನಾ ಸಿಬ್ಬಂದಿ ಮುಖ್ಯಸ್ಥ ವಿ.ಪಿ.ಮಲಿಕ್ ಅವರ ಅಭಿಪ್ರಾಯಗಳು. ಡೇಲಿ ಟೈಮ್ಸ್‌ ನಲ್ಲಿ ಬಳಸಲಾಗಿದೆ; ದಿ ಫೇಟ್ ಆಫ್ ಕಾಶ್ಮೀರ್ ಬೈ ವಿಕಾಸ್ ಕಪೂರ್ ಅಂಡ್ ವಿಪಿನ್ ನಾರಂಗ್ ಅಂತಾರಾಷ್ಟ್ರೀಯ ಸಂಬಂಧಗಳ ಸ್ಟಾನ್‌ಪೋರ್ಡ್ ಜರ್ನಲ್;ಬುಕ್ ರಿವ್ಯೂವ್ ಆಫ್ "ದಿ ಇಂಡಿಯಾನ್ ಆರ್ಮಿ:ಎ ಬ್ರೀಫ್ ಹಿಸ್ಟರಿ ಬೈ ಮೇಜರ್ ಜನರಲ್ ಐಯಾನ್ ಕಾರ್ಡೊಜೊ"-IPCS ನಲ್ಲಿ ಬಳಸಲಾಗಿದೆ.
  23. Robert G. Wirsing (2003). Kashmir in the Shadow of War: regional rivalries in a nuclear age. M.E. Sharpe. ISBN 0-7656-1090-6. Pg 38
  24. Ludra, Kuldip S. (2001). Operation Badr:Mussharef's contribution to Pakistan's thousand years war against India. Institute for Strategic Research and Analysis Chandigarh. {{cite book}}: Cite has empty unknown parameter: |coauthors= (help)
  25. ಲೋ ಇನ್ಟೆನ್‌ಸಿಟಿ ಕಾನ್ಫ್ಲಿಕ್ಟ್ಸ್ ಇನ್ ಇಂಡಿಯಾಾ ಬೈ ವಿವೇಕ್ ಛಾಡಾ,ಯುನೈಟೆಡ್ ಸರ್ವೀಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯ ಪ್ರಕಟಣೆ SAGE, 2005, ISBN 0-7619-3325-5
  26. ಕ್ರಾಸ್ಡ್ ಸ್ವೋರ್ಡ್ಸ್: ಪಾಕಿಸ್ತಾನ್, ಇಟ್ಸ್ ಆರ್ಮಿ, ಅಂಡ್ ದಿ ವಾರ್ಸ್ ವಿತಿನ್ ಬೈ ಶೂಜಾ ನವಾಜ್ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್
  27. ಮುಷರಫ್ ಅಡ್ವೈಸಡ್ ಎಗೇನಸ್ಟ್ ಕಾರ್ಗಿಲ್, ಸೇಸ್ ಬೆನಜೀರ್,'ತಾವು PM ಆಗಿದ್ದಾಗ ಮುಷರಫ್ ಕಾರ್ಗಿಲ್ ಯೋಜಿಸಿದರು: ಭುಟ್ಟೊ- ಹಿಂದುಸ್ತಾನ್ ಟೈಮ್ಸ್‌ಗೆ ನವೆಂಬರ್ 30,2001ರಲ್ಲಿ ನೀಡಿದ ಮುಂಚಿನ ಸಂದರ್ಶನ.
  28. ೨೮.೦ ೨೮.೧ ೨೮.೨ Hassan Abbas (2004). Pakistan's Drift Into Extremism: Allah, the Army, and America's War on Terror. M.E. Sharpe. ISBN 0-7656-1497-9.
  29. Kapur, S. Paul (2007). Dangerous Deterrent. Stanford University Press. p. 118. ISBN 0804755507. {{cite book}}: Cite has empty unknown parameter: |coauthors= (help)
  30. "Nawaz blames Musharraf for Kargil". The Times of India. 2006-05-28. Retrieved 2009-05-20.
  31. "I learnt about Kargil from Vajpayee, says Nawaz". Dawn. 2006-05-29. Retrieved 2006-05-29.
  32. ೩೨.೦ ೩೨.೧ ೩೨.೨ Qadir, Shaukat (April 2002). "An Analysis of the Kargil Conflict 1999" (PDF). RUSI Journal. Retrieved 2009-05-20.
  33. "Kargil planned before Vajpayee's visit: Musharraf". Indian Express. 2006-07-13. Retrieved 2009-05-20.
  34. "How I Started A War". Time. 1999-07-12. Retrieved 2009-05-20.
  35. "The Northern Light Infantry in the Kargil Operations". Retrieved 2009-05-20. ಬೈ ರವಿ ರಿಕ್ಯೆ 1999 ಆಗಸ್ಟ್ 25, 2002 - ORBAT
  36. ೩೬.೦ ೩೬.೧ ೩೬.೨ Pervez Musharraf (2006). In the Line of Fire: A Memoir. Free Press. ISBN 0-7432-8344-9.
  37. ೩೭.೦ ೩೭.೧ ಮುಷರಫ್ ಪಾಕಿಸ್ತಾನದ ದಿ ನ್ಯೂಸ್‌ ಗೆ ಜುಲೈ 6, 1999ರಲ್ಲಿ ತಿಳಿಸಿರುವಂತೆ ಸುಮಾರು 2000 ಮುಜಾಹಿದ್ದೀನ್ ಭಾಗಿಗಳಾಗಿದ್ದರೆಂದು ಅಂದಾಜು ಮಾಡಲಾಗಿದೆ; ಅಂದಾಜನ್ನು ಉಲ್ಲೇಖಿಸಿ ಏಷ್ಯಾ ಟೈಮ್ಸ್‌ನಲ್ಲಿ ಆನ್‌ಲೈನ್ ಲೇಖನ. ಭಾರತದ ಮೇಜರ್ ಜನರಲ್(ನಿವೃತ್ತ) ಕೂಡ NLI ಪದಾತಿದಳ ಪಡೆಯಲ್ಲದೇ ಬಂಡುಕೋರರ ಸಂಖ್ಯೆ 2000ವೆಂದು ಹೇಳಿದ್ದಾರೆ.
  38. ಸೌರಬ್ ಕೈಲಾ ಹೆತ್ತವರು ಯುದ್ಧಾಪರಾದಗಳ ಬಗ್ಗೆ ಗಮನಸೆಳೆಯಲು ನಡೆಸುತ್ತಿರುವ ಏಕಾಂಗಿ ಹೋರಾಟ
  39. ವಾರ್ ಇನ್ ಕಾರ್ಗಿಲ್ PDF ಇಸ್ಲಾಮಾಬಾದ್ ಪ್ಲೇಯಿಂಗ್ ವಿತ್ ಫೈರ್ ಬೈ ಪ್ರಫುಲ್ ಬಿದ್ವಾಯಿ- ದಿ ಟ್ರಿಬ್ಯೂನ್, 7 ಜೂನ್, 1999
  40. Gen VP Malik. "Lessons from Kargil". Retrieved 2009-05-20.
  41. Grare, Frédéric. "The Resurgence of Baluch nationalism" (PDF). Carnegie Endowment for International Peace. Retrieved 2009-05-20.
  42. "Exercise Seaspark—2001". Defence Journal. April 2001. Retrieved 2009-05-20. {{cite web}}: |first= missing |last= (help)
  43. ೪೩.೦ ೪೩.೧ "Indian general praises Pakistani valour at Kargil". Daily Times, Pakistan. 2003-05-05. Retrieved 2009-05-20.
  44. ಕಾಶ್ಮೀರ್ ಇನ್ ದಿ ಶಾಡೊ ಆಫ್ ವಾರ್ ಬೈ ರಾಬರ್ಟ್ ವಿರ್‌ಸಿಂಗ್ ಪಬ್ಲಿಷ್ಡ್ ಬೈ M.E.ಶಾರ್ಪ್‌, 2003 ISBN 0-7656-1090-6 pp36
  45. ಲ್ಯಾಂಡ್‌ಮೈನ್ ಮಾನಿಟರ್ - ಇಂಡಿಯಾ
  46. ಇಂಡಿಯಾನ್ ಆರ್ಮಿ ಗೆಟ್ಸ್ ಹಾಸ್ಟೈಲ್ ವೆಪನ್ ಲೊಕೇಟಿಂಗ್ ಕೆಪೇಬಿಲಿಟಿ[ಮಡಿದ ಕೊಂಡಿ]
  47. ಇಂಡಿಯಾನ್ ಆರ್ಮಿ ಗೆಟ್ಸ್ ಹಾಸ್ಟೈಲ್ ವೆಪನ್ ಲೊಕೇಟಿಂಗ್ ಕೆಪೇಬಿಲಿಟಿ[ಮಡಿದ ಕೊಂಡಿ]
  48. ಇಂಡಿಯಾನ್ ಆರ್ಮಿ ಗೆಟ್ಸ್ ಹಾಸ್ಟೈಲ್ ವೆಪನ್ ಲೊಕೇಟಿಂಗ್ ಕೆಪೇಬಿಲಿಟಿ[ಮಡಿದ ಕೊಂಡಿ]
  49. ಮ್ಯಾನೇಜಿಂಗ್ ಆರ್ಮ್ಡ್ ಕಾನ್ಫ್ಲಿಕ್ಟ್ಸ್ ಇನ್ ದಿ 21 ಸೆಂಚುರಿ, ಅಡೆಕಿಯೆ ಅಡೆಬಾಜೊ ಅವರಿಂದ, ಚಂದ್ರಲೇಖ ಶ್ರೀರಾಮ್, ರೂಟ್‌ಲೆಡ್ಜ್ pp192,193 ಪ್ರಕಟಣೆ.
  50. Swami, Praveen (2004-06-30). "Commander ordered capture of Point 5353 in Kargil war". The Hindu. Retrieved 2009-05-20.
  51. ದಿ ಸ್ಟೇಟ್ ಆಫ್ ವಾರ್ ಇನ್ ಸೌತ್ ಏಷ್ಯಾ, ಪ್ರದೀಪ್ ಬರುವಾ ಅವರಿಂದ, U ಆಫ್ ನೆಬ್ರಾಸ್ಕಾ ಪ್ರೆಸ್, ಪುಟ 261.
  52. "Bitter Chill of Winter". Tariq Ali, London Review of Books. Retrieved 2009-05-20.
  53. Colonel Ravi Nanda (1999). Kargil : A Wake Up Call. Vedams Books. ISBN 81-7095-074-0. ಆನ್ ಲೈನ್ ಸಮ್ಮರಿ ಆಫ್ ದಿ ಬುಕ್
  54. ಪಾಕಿಸ್ತಾನ್ 'ಪ್ರಿಪೇರ್ಡ್ ನ್ಯೂಕ್ಸಿಯರ್ ಸ್ಟ್ರೈಕ್'
  55. "Pakistan and the Kashmir militants". BBC News. Retrieved 2009-05-20.
  56. Hassan Abbas (2004). Pakistan's Drift Into Extremism: Allah, The Army, And America's War On Terror. M.E. Sharpe. ISBN 0-7656-1497-9. ಪುಟ 173; ರಿವಿಸಿಟಿಂಗ್ ಕಾರ್ಗಿಲ್: ವಾಸ್ ಇಟ್ ಎ ಫೈಲ್ಯೂರ್ ಫಾರ್ ಪಾಕಿಸ್ತಾನ್ಸ್ ಸೇನೆ?, IPCS
  57. "Lesson learnt?". dawn. 2006-07-24. Retrieved 2009-08-02.
  58. "Transcripts of conversations between Lt Gen Mohammad Aziz, Chief of General Staff and Musharraf". India Today. Retrieved 2009-05-20.
  59. U.S. ಬ್ರೋಕರ್ಸ್ ಕಾರ್ಗಿಲ್ ಪೀಸ್ ಬಟ್ ಪ್ರಾಬ್ಲಮ್ಸ್ ರಿಮೇನ್
  60. "ASEAN backs India's stand". The Tribune. 2006-07-24. Retrieved 2009-05-20.
  61. Bill Clinton (2004). My Life. Random House. ISBN 0-375-41457-6., ಪುಟ 865
  62. ಡೈಲಾಗ್ ಕಾಲ್ ಅಮಿಡ್ ಫ್ರೆಷ್ ಫೈಟಿಂಗ್- - BBC ನ್ಯೂಸ್
  63. "India encircles rebels on Kashmir mountaintop". CNN. Retrieved 2009-05-20.CNN
  64. "Text of joint Clinton-Sharif statement". CNN. Retrieved 2009-05-20.
  65. "Disarmament Diplomacy - Complete texts of Indian and Pakistani statements following Pakistan's decision to withdraw its troops in Kargil". Retrieved 2009-05-20.
  66. ಭಾರತೀಯ ಸೇನೆಯ ಪರಮ ವೀರ ಚಕ್ರ ವಿಜೇತರು
  67. http://www.shaheedfoundation.org/NishaneHaider.asp
  68. ಇಂಡಿಯಾಾಸ್ ನ್ಯೂಕ್ಸಿಯರ್ ಬಾಂಬ್ ಬೈ ಜಾರ್ಜ್ ಪರ್ಕೋವಿಕ್ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೆಸ್, 2002 ISBN 0-520-23210-0, ಪುಟ 473
  69. Sachdev, A.K. "Media Related Lessons From Kargil - Strategic Analysis: January 2000 (Vol. XXIII No. 10)". Retrieved 2009-05-20.
  70. "Centre bans PTV". Retrieved 2009-05-20.ಇಂಡಿಯಾನ್ ಎಕ್ಸ್‌ಪ್ರೆಸ್ ಜೂನ್ 3, 1999
  71. ಡೆಲ್ಲಿ ಲಿಫ್ಟ್ಸ್ ಬ್ಯಾನ್ ಆನ್ ಡಾನ್ ವೆಬ್‌ಸೈಟ್, PTV ಬ್ರಾಡ್‌ಕ್ಯಾಸ್ಟ್ಸ್ ಡಾನ್ ವೈರ್ ಸರ್ವಿಸ್ 17 ಜುಲೈ 1999
  72. ಎ ಡಿಫರೆಂಟ್ ವ್ಯೂ ಆಫ್ ಕಾರ್ಗಿಲ್ ಬೈ ರಷೀದಾ ಭಗತ್ ಸಂಪುಟ 16 - ಇಷ್ಯೂ 19, ಸೆ. 11 - 24, 1999 ದಿ ಫ್ರಂಟ್‌ಲೈನ್
  73. ಪಾಕ್ TV ಬ್ಯಾನ್ ಗೆಟ್ಸ್ ಗುಡ್ ರೆಸ್ಪಾನ್ಸ್
  74. ಪಾಕ್ ಮೀಡಿಯ ಲ್ಯಾಮೆಂಟ್ ಲಾಸ್ಟ್ ಅಪಾರ್ಚ್ಯುನಿಟಿ - ಪಾಕಿಸ್ತಾನದ ಸಂಪಾದಕೀಯ ಹೇಳಿಕೆಗಳು ಮತ್ತು ಸುದ್ದಿ ಶೀರ್ಷಿಕೆಗಳು Rediff.com
  75. ದಿ ರೋಲ್ ಆಫ್ ಮೀಡಿಯ ಇನ್ ವಾರ್-ಸುಲ್ತಾನ್ M ಹಾಲಿ, ಪ್ರೆಸ್ ಇನ್ಫರ್‌ಮೇಷನ್ ಬ್ಯೂರೊ,ಇಂಡಿಯಾ
  76. ಕ್ಯೋಟೆಡ್ ಇನ್ ನ್ಯೂಸ್ ಡೆಸ್ಕ್, “ಪಾಕಿಸ್ತಾನ್ ಮೆ ಯ್ಯೂಸ್ ಎನಿ ವೆಪನ್,” ದಿ ನ್ಯೂಸ್, ಮೇ 31, 1999.
  77. ಪಾಕಿಸ್ತಾನ್ಸ್ ನ್ಯೂಕ್ಲಿಯರ್ ವೆಪನ್ಸ್ ಪ್ರೋಗ್ರಾಂ (PDF)
  78. ಆಪ್ಶನ್ಸ್ ಅವೈಲೆಬಲ್ ಟು ದಿ ಯುನೈಟೆಡ್ ಸ್ಟೇಟ್ಸ್ ಟು ಕೌಂಟರ್ ಎ ನ್ಯೂಕ್ಲಿಯರ್ ಇರಾನ್ - ಜಾರ್ಜ್ ಪರ್ಕೊವಿಕ್- ಹೌಸ್ ಆರ್ಮ್‌ಡ್ ಸರ್ವಿಸಸ್ ಸಮಿತಿ ಎದುರು ಜಾರ್ಜ್ ಪರ್ಕೊವಿಕ್ ಸಾಕ್ಷ್ಯ,[೨]ಫೆಬ್ರವರಿ 1,2006
  79. ಇಂಡಿಯಾ ಹ್ಯಾಡ್ ಡಿಪ್ಲೋಯ್ಡ್ ಅಗ್ನಿ ಡ್ಯೂರಿಂಗ್ ಕಾರ್ಗಿಲ್, , "ಇಂಡಿಯನ್ ಎಕ್ಸ್‌ಪ್ರೆಸ್" ಲೇಖನ 19/6/2000
  80. "Musharraf moved nuclear weapons in Kargil war". The Nation. Archived from the original on 2007-12-23. Retrieved 2009-05-27.
  81. NTI: ಕಂಟ್ರಿ ಓವರ್‌ವಿವ್ - ನ್ಯೂಕ್ಸಿಯರ್ ತ್ರೀಟ್ ಇನ್ಫಿಯೇಟಿವ್
  82. ದಿ ಸ್ಪಾಯಿಲ್ಸ್ ಆಫ್ ವಾರ್, ಇಂಡಿಯಾ ಬ್ಯಾಕ್ಸ್ ಇಟ್ಸ್ 'ಬಾಯ್ಸ್'
  83. ಸೆಂಟರ್ ಫೈಲ್ಸ್ ಸೆಕೆಂಡ್ ಅಫಿಡವಿಟ್ ಇನ್ ಕಾರ್ಗಿಲ್ ಸ್ಕ್ಯಾಮ್ ದಿ ಫೈನಾನ್ಫಿಯಲ್ ಎಕ್ಸ್‌ಪ್ರೆಸ್ ಏಪ್ರಿಲ್ 14, 2005
  84. ಕಾರ್ಗಿಲ್ ಕಫಿನ್ ಸ್ಕಾಮ್
  85. ವಾರ್ ಎಗೇನಸ್ಟ್ ಎರರ್ , ಕವರ್ ಸ್ಟೋರಿ ಆನ್ ಔಟ್‌ಲುಕ್, ಫೆಬ್ರವರಿ 28, 2005,(ಆನ್‌ಲೈನ್ ಎಡಿಷನ್)
  86. ಆರ್ಮಿ ವಾಸ್ ರಿಲಕ್ಟೆಂಟ್ ಟು ಟೆಲ್ ಗವರ್ನಮೆಂಟ್ ಎಬೌಟ್ ಕಾರ್ಗಿಲ್: ಟಿಪ್ನಿಸ್ 7 ಅಕ್ಟೋಬರ್ 2006 - ದಿ ಟೈಮ್ಸ್ ಆಫ್ ಇಂಡಿಯಾ
  87. ಫೆನ್ಸಿಂಗ್ ಡ್ಯುಯಲ್ - ಇಂಡಿಯಾಾ ಟುಡೆ
  88. ಇಂಡಿಯಾ ಚೇಂಜಸ್ ಕೋರ್ಸ್ ಪಾಲ್ ಆರ್.ಡೆಟ್‌ಮ್ಯಾನ್ ಅವರಿಂದ, ಗ್ರೀನ್‌ವುಡ್ ಪಬ್ಲಿಷಿಂಗ್, 2001, ISBN 0-275-97308-5, ಪುಟ 117-118
  89. ನ್ಯೂಸ್ ರಿಪೋರ್ಟ್ಸ್ ಫ್ರೊಮ್ ಡೇಲಿ ಟೈಮ್ಸ್ (ಪಾಕಿಸ್ತಾನ್) ಮತ್ತು BBC ಸಂಘರ್ಷದ ಸಂದರ್ಭದಲ್ಲಿ ಭಾರತಕ್ಕೆ ಇಸ್ರೇಲಿ ಸೇನೆ ಬೆಂಬಲದ ಪ್ರಸ್ತಾಪ
  90. "Kargil : Subrahmanyam Committee's Report". Indian News. Retrieved 2009-10-20.
  91. "Kargil report shows the way". Indian Express. Retrieved 2009-10-20.
  92. ಪುಟ 56-60 ದೀಕ್ಷಿತ್, JN, " ಇಂಡಿಯಾ-ಪಾಕಿಸ್ತಾನ್ ಇನ್ ವಾರ್ & ಪೀಸ್", ರೂಟ್‌ಲೆಡ್ಜ್, 2002
  93. "Army's Kargil inquiry indicts Brig Surinder Singh". Rediff. Retrieved 2009-10-20.
  94. "Scapegoat for the system". The Hindu. Retrieved 2009-10-20.
  95. "The sacking of a Brigadier". Frontline. Retrieved 2009-10-20.
  96. "THE KARGIL STORY". The Hindu. Retrieved 2009-10-20.
  97. "Narasimha Rao and the Bomb". informaworld. Retrieved 2009-10-20.
  98. "P.V. Narasimha Rao and the Bomb". The Tribune. Retrieved 2009-10-20.
  99. ಮಲ್ಟಿಪಲ್ ವ್ಯೂಸ್ ಅಂಡ್ ಒಪೀನಿಯನ್ಸ್ ಆನ್ ದಿ ಸ್ಟೇಟ್ ಆಫ್ ಪಾಕಿಸ್ತಾನ್ಸ್ ಎಕಾನಮಿ, ದಿ ಕಾಶ್ಮೀರ್ ಕ್ರೈಸಿಸ್ ಅಂಡ್ ದಿ ಸೇನೆ ಕೂಪ್, ದಿ ಪ್ರಾಮಿಸ್ ಆಫ್ ಕಂಟೆಂಪರಿ ಪಾಕಿಸ್ತಾನ್ ಬೈ ಫೈಸಾಲ್ ಚೀಮಾ
  100. ೧೦೦.೦ ೧೦೦.೧ ಸಮೀನ ಅಹ್ಮದ್. "ಡಿಪ್ಲೋಮಾಟಿಕ್ ಫಿಯಾಸ್ಕೊ: ಪಾಕಿಸ್ತಾನ್ಸ್ ಫೇಲೂರ್ ಆನ್ ದಿ ಡಿಪ್ಲೋಮಾಟಿಕ್ ಫ್ರಂಟ್ ನಲ್ಲಿಫೈಸ್ ಇಟ್ಸ್ ಗೇನ್ಸ್ ಆನ್ ಬಾಟಲ್‌ಫೀಲ್ಡ್" (ಅಂತಾರಾಷ್ಟ್ರೀಯ ವ್ಯವಹಾರಗಳ ಬೆಲ್ಫರ್ ಸೆಂಟರ್ ಕೆನಡಿ ಸ್ಕೂಲ್ ಆಫ್ ಗವರ್ನ್‌ಮೆಂಟ್)
  101. ಸಮೀನಾ ಅಹ್ಮದ್. "ಎ ಫ್ರೆಂಡ್ ಫಾರ್ ಆಲ್ ಸೀಸನ್ಸ್." (ಅಂತಾರಾಷ್ಟ್ರೀಯ ವ್ಯವಹಾರಗಳ ಬೆಲ್ಫರ್ ಕೇಂದ್ರ, ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್)
  102. "ಪ್ರೆಸ್ ರಿಲೀಸ್ ಇಶ್ಯೂಡ್ ಇನ್ ನ್ಯೂಡೆಲ್ಲಿ ರಿಗಾರ್ಡಿಂಗ್ ಬಾಡೀಸ್ ಆಫ್ ಟು ಪಾಕಿಸ್ತಾನ್ ಆರ್ಮಿ ಆಫೀಸರ್ಸ್"
  103. "ಪಾಕಿಸ್ತಾನ್ ರಿಫ್ಯೂಸಸ್ ಟು ಟೇಕ್ ಈವನ್ ಆಫೀಸರ್ಸ್ ಬಾಡೀಸ್"
  104. ಮುಷರಫ್ ಅಂಡ್ ದಿ ಟ್ರೂಥ್ ಎಬೌಟ್ ಕಾರ್ಗಿಲ್ - ದಿ ಹಿಂದು 25 ಸೆಪ್ಟೆಂಬರ್ 2006
  105. ಸೆಕಂಡ್-ಕ್ಲಾಸ್ ಸಿಟಿಜನ್ಸ್ ಎಂ. ಇಲ್ಯಾಸ್ ಖಾನ್ ಅವರಿಂದ, ದಿ ಹೆರಾಲ್ಡ್(ಪಾಕಿಸ್ತಾನ್), ಜುಲೈ 2000. ಲೇಖನದ ಆನ್‌ಲೈನ್ ಸ್ಕ್ಯಾನಡ್ ಆವೃತ್ತಿ PDF
  106. ಪ್ರೆಸಿಡೆಂಟ್ ಮುಷರಫ್ ರಿಯಾಕ್ಟ್ಸ್ ಟು ನವಾಜ್ ಷರೀಫ್ಸ್ ಪಾಕಿಸ್ತಾನ್ಸ್ ಕ್ಯಾಶುಯಲ್ಟ್ ಕ್ಲೇಮ್ಸ್ ಇನ್ ಕಾರ್ಗಿಲ್
  107. ಪಾಕಿಸ್ತಾನ್ ಅಪೋಸಿಷನ್ ಪ್ರೆಸಸ್ ಫಾರ್ ಷರೀಫ್ಸ್ ರಿಸೈನೇಷ್ ಕೆ.ರತ್ನಾಯಕೆ ಅವರಿಂದ 7 ಆಗಸ್ಟ್ 1999, ಕ್ಯಾನ್ ಷರೀಫ್ ಡೆಲಿವರ್?, ಮೈಕೇಲ್ ಕ್ರೆಪಾನ್. "ದಿ ಸ್ಟೆಬಿಲಿಟಿ-ಇನ್‌ಸ್ಟೆಬಿಲಿಟಿ ಪ್ಯಾರಾಡಕ್ಸ್ ಇನ್ ಸೌತ್ ಏಷ್ಯಾ" ಹೆನ್ರಿ L.ಸ್ಟಿಮ್‌ಸನ್ ಕೇಂದ್ರದಿಂದ ಬಳಕೆ
  108. ಮುಷರಫ್ Vs. ಷರೀಫ್: ಹೂ ಇಸ್ ಲೈಯಿಂಗ್?
  109. Tom Clancy, Gen. Tony Zinni (Retd) and Tony Koltz (2004). Battle Ready. Grosset & Dunlap. ISBN 0-399-15176-1.
  110. ಕಾರ್ಗಿಲ್ ವಾಸ್ ಸಕ್ಸಸ್ ಓನ್ಲಿ ಫಾರ್ ಪರ್ವೇಜ್
  111. ಸೆಲೆಕ್ಟ್ ಮೀಡಿಯಾ ರಿಪೋರ್ಟ್ಸ್ ಫ್ರಂ ಉರ್ದು ಮೀಡಿಯ ಇನ್ ಪಾಕಿಸ್ತಾನ್ (PDF)
  112. ೧೧೨.೦ ೧೧೨.೧ ಕಾರ್ಗಿಲ್ ವಾಸ್ ಎ ಬಿಗ್ಗರ್ ಡಿಸ್ಯಾಸ್ಟರ್ ದ್ಯಾನ್ 1971 - ಲೆಫ್ಟಿನೆಂಟ್ ಜನರಲ್ ಆಲಿ ಕುಲಿ ಖಾನ್ ಅವರ ಸಂದರ್ಶನ
  113. ರಿವ್ಯೂವ್ ಆಫ್ ಮುಷರಫ್ ಮೆಮೈರ್ಸ್ ಬೈ ಎಸ್.ಎ. ಹಲೀಮ್ ಜಾಂಗ್, ಅಕ್ಟೋಬರ್ 19,2006
  114. ವಿಕ್ಟರಿ ಇನ್ ರಿವರ್ಸ್: ದಿ ಗ್ರೇಟ್ ಕ್ಲೈಂಬ್‌ಡೌನ್, ಫಾರ್ ದಿಸ್ ಸಬ್‌ಮಿಷನ್ ವಾಟ್ ಗೇನ್? ಅಯಾಜ್ ಅಮೀರ್ ಅವರಿಂದ - ಡಾನ್(ಸುದ್ದಿಪತ್ರಿಕೆ)
  115. ಇಲ್ ಕನ್ಸೀವ್ಡ್ ಪ್ಲಾನಿಂಗ್ ಬೈ ಮುಷರಫ್ ಲೆಡ್ ಟು ಸೆಕೆಂಡ್ ಮೇಜರ್ ಸೇನೆ ಡಿಫೀಟ್ ಇನ್ ಕಾರ್ಗಿಲ್: PML-N ಪಾಕ್ ಟ್ರಿಬ್ಯೂನ್, ಆಗಸ್ಟ್ 6, 2006
  116. ಕಾಲ್ ಫಾರ್ ಮುಷರಫ್ ಟ್ರೆಸನ್ ಟ್ರಯಲ್ ಬೈ ಎಂ.ಇಲಿಯಾಸ್ ಖಾನ್ BBC ನ್ಯೂಸ್‍‌ ಜೂನ್ 3, 2008
  117. ಲಾಮೇಕರ್ಸ್ ಡಿಮ್ಯಾಂಡ್ ಪ್ರೋಬ್ ಇಂಟು ಕಾರ್ಗಿಲ್ ಡಿಬ್ಯಾಕಲ್ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ್, ಜೂನ್ 3, 2008 ,
  118. MNAS ಸೀಕ್ ಪ್ರೋಬ್ ಇಂಟು ಕಾರ್ಗಿಲ್ ಡಿಬ್ಯಾಕಲ್ ಬೈ ನವೀದ್ ಭಟ್ ದಿ ನೇಷನ್
  119. ಅನಾಲಿಸಿಸ್:ಶಿಫ್ಟ್ ಇನ್ US ಕಾಶ್ಮೀರ್ ಸ್ಟಾನ್ಸ್ ?, BBC 1999-06-17
  120. ಕಾರ್ಗಿಲ್: ದಿ ಮಾರ್ನಿಂಗ್ ಆಫ್ಟರ್ ಬೈ ಇರ್ಫಾನ್ ಹುಸೇನ್ 29 ಏಪ್ರಿಲ್ 2000 ಡಾನ್
  121. EDITORIAL: ಕಾರ್ಗಿಲ್: ಎ ಬ್ಲೆಸಿಂಗ್ ಇನ್ ಡಿಸ್‌ಗ್ಯೂಸ್? ಜುಲೈ 19,2004, ಡೇಲಿ ಟೈಮ್ಸ್, ಪಾಕಿಸ್ತಾನ್
  122. ಇಲ್-ಕನ್ಸೀವ್ಡ್ ಪ್ಲಾನಿಂಗ್ ಬೈ ಮುಷರಫ್ ಲೆಡ್ ಟು ಸೆಕೆಂಡ್ ಮೇಜರ್ ಸೇನೆ ಡಿಫೀಟ್ ಇನ್ ಕಾರ್ಗಿಲ್ : PML-N,ಆಗಸ್ಟ್ 6,2006, ಪಾಕ್ ಟ್ರಿಬ್ಯೂನ್
  123. "Indo-Pak summit 2001". Pakistan Peoples Party. 2007-10-12. Archived from the original on 2007-10-12. Retrieved 2009-05-27.
  124. ಇಂಡಿಯಾನ್ ಆರ್ಮಿ ರಬಿಷನ್ ಮುಷರಫ್ಸ್ ಕಾರ್ಗಿಲ್ ಕ್ಲೇಮ್[ಮಡಿದ ಕೊಂಡಿ]
  125. LOC: ಕಾರ್ಗಿಲ್ ಮೇನ್ ಪೇಜ್ ಆನ್ ದಿ ವೆಬ್‌ಸೈಟ್IMDb.
  126. ಎ ಕಲೆಕ್ಷನ್ ಆಫ್ ಸಮ್ ರಿವ್ಯೂಸ್ ಆನ್ ದಿ ಮ‌ೂವಿ "ಲಕ್ಷ್ಯ" ಎಟ್ ರಾಟನ್ ಟೊಮೇಟೊಸ್
  127. ಬಾಲಿವುಡ್ಸ್ ಕಾರ್ಗಿಲ್ —ಇಹಸಾನ್ ಅಸ್ಲಾಂ ಡೇಲಿ ಟೈಮ್ಸ್
  128. [೩]
  129. Dhoop @ ಐ ಎಮ್ ಡಿ ಬಿ
  130. Tango Charlie @ ಐ ಎಮ್ ಡಿ ಬಿ
  131. Keerthi Chakra @ ಐ ಎಮ್ ಡಿ ಬಿ

ಉಲ್ಲೇಖಗಳು


ಮತ್ತಷ್ಟು ಓದಿಗೆ

  • M. K. Akbar (1999). Kargil Cross Border Terrorism. South Asia Books. ISBN 81-7099-734-8.
  • Amarinder Singh (2001). A Ridge Too Far: War in the Kargil Heights 1999. Motibagh Palace, Patiala. ASIN: B0006E8KKW.
  • Jasjit Singh (1999). Kargil 1999: Pakistan's Fourth War for Kashmir. South Asia Books. ISBN 81-86019-22-7.
  • J. N. Dixit (2002). India-Pakistan in War & Peace. Books Today. ISBN 0-415-30472-5.
  • Muhammad Ayub. An Army; Its role and Rule (A History of the Pakistan Army From Independence to Kargil 1947–1999). Rosedog Books, Pittsburgh. Pennsylvania, USA. ISBN 0-8059-9594-3.


ಬಾಹ್ಯ ಕೊಂಡಿಗಳು

ಟೆಂಪ್ಲೇಟು:Link FA