ಗಾಂಧಾರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಾಂಧಾರಿ ಎಂಬುದು ಮಹಾಭಾರತ ಮಹಾಕಾವ್ಯದಲ್ಲಿ ಬರುವ ಒಂದು ಪಾತ್ರ. ಗಾಂಧಾರ ದೇಶದ (ಈಗಿನ ಕಾಂದಹಾರ್,ಅಫ್ಘಾನಿಸ್ಥಾನ)ರಾಜನಾದ ಸುಬಲನ ಪುತ್ರಿಯಾದ ಈಕೆ ಕುರುವಂಶದ ಮಹಾರಾಜನಾದ ಧೃತರಾಷ್ಟ್ರನನ್ನು ವರಿಸುತ್ತಾಳೆ. ಹುಟ್ಟು ಕುರುಡನಾದ ತನ್ನ ಪತಿ ಧೃತರಾಷ್ಟ್ರನಿಗೆ ಕಾಣದ ಹೊರ ಜಗತ್ತು ತನಗೂ ಸಹ ಕಾಣುವುದು ಬೇಡವೆಂದು ನಿರ್ಧರಿಸಿ ತನ್ನ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾಳೆ. ದುರ್ಯೋಧನ, ದುಶ್ಯಾಸನರು ಸೇರಿದಂತೆ ೧೦೦ ಮಂದಿ ಕೌರವರು ಹಾಗೂ ದುಶ್ಯಲೆ ಈಕೆಯ ಮಕ್ಕಳು.

ಮಹಾಭಾರತದಲ್ಲಿ ಗಾಂಧಾರಿಯ ಚಿತ್ರಣ [ಬದಲಾಯಿಸಿ]

ಮಹಾಭಾರತವು ಕೌರವರನ್ನು ಖಳನಾಯಕರಂತೆ ಚಿತ್ರಿಸಿದ್ದರೂ ಗಾಂಧಾರಿಗೆ ಮಾತ್ರ ಮಹತ್ವದ ಸ್ಥಾನವನ್ನು ನೀಡಿದೆ. ತನ್ನ ಪುತ್ರರಾದ ಕೌರವರಿಗೆ ಬುಧ್ಧಿಹೇಳಿ ಯುಧ್ಧವನ್ನು ತಪ್ಪಿಸಿಪಾಂಡವರೊಂದಿಗೆ ರಾಜಿ ಮಾಡಿಸಲು ಪದೇ ಪದೇ ಯತ್ನಿಸಿ ವಿಫಲಳಾಗುತ್ತಾಳೆ. ಪುರಾಣದ ಪ್ರಕಾರ ಆಕೆ ಶಿವನ ಭಕ್ತೆಯಾಗಿದ್ದು ಪತಿಗೋಸ್ಕರ ತಾನು ಮಾಡಿದ ತ್ಯಾಗದಿಂದಾಗಿ ಆಕೆ ವಿಶೇಷವಾದ ಶಕ್ತಿಯನ್ನು ಪಡೆದಿರುತ್ತಾಳೆ. ಸದಾ ಮುಚ್ಚಿಕೊಂದೇ ಇರುವ ಆಕೆಯ ಚಕ್ಷುಗಳಿಗೆ ಅಗಾಧವಾದ ಶಕ್ತಿಯಿತ್ತು ಎಂಬುದಾಗಿ ಕಥೆ ಹೇಳುತ್ತದೆ.

ಮಹಾಭಾರತದ ಪ್ರಕಾರ ಮದುವೆಯ ನಂತರ ಕೇವಲ ಒಂದೇ ಒಂದು ಬಾರಿ ಮಾತ್ರ ಗಾಂಧಾರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚುತ್ತಾಳೆ. ಅದು ಕುರುಕ್ಷೇತ್ರ ಮಹಾಸಮರದ ಸಂದರ್ಭದಲ್ಲಿ. ವಿಶೇಷ ಶಕ್ತಿಯನ್ನು ಹೊಂದಿರುವ ತನ್ನ ಕಣ್ಣುಗಳಿಂದ ದುರ್ಯೋಧನನ ದೇಹವನ್ನು ವಜ್ರಕಾಯವನ್ನಾಗಿಸುವ ಸಲುವಾಗಿ ತನ್ನ ಮುಂದೆ ನಿರ್ವಸ್ತ್ರನಾಗಿ ಬಂದು ನಿಲ್ಲಲು ಮಗನಿಗೆ ಹೇಳುತ್ತಾಳೆ. ಇದನ್ನರಿತ ಕೃಷ್ಣನು ನಗ್ನನಾಗಿ ಹೋಗುವ ದುರ್ಯೋಧನನನ್ನು ಕಂಡು ನಕ್ಕು ಆತನು ನಾಚಿಕೆಪಡುವಂತೆ ಮಾಡುತ್ತಾನೆ. ನಾಚಿಕೆಗೊಂಡ ದುರ್ಯೋಧನನು ಸಂಪೂರ್ಣ ವಿವಸ್ತ್ರನಾಗಿ ಹೋಗುವ ಬದಲು ಸೊಂಟದಿಂದ ತೊಡೆಯವರೆಗೂ ಮುಚ್ಚಿಕೊಂಡು ಹೋಗಿ ತನ್ನ ತಾಯಿ ಗಾಂಧಾರಿಯ ಎದುರಿಗೆ ನಿಲ್ಲುತ್ತಾನೆ. ಗಾಂಧಾರಿಯು ಹಾಗಾಗಿ ಆತನ ತೊಡೆಯ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ವಿವಸ್ತ್ರವಾಗಿ ನೋಡುತ್ತಾಳೆ. ಈ ರಹಸ್ಯವನ್ನರಿತಿದ್ದ ಶ್ರೀಕೃಷ್ಣನು ಗದಾಯುಧ್ಧದ ಸಂದರ್ಭದಲ್ಲಿ ಭೀಮನಿಗೆ ತನ್ನ ತೊಡೆಯನ್ನು ತಟ್ಟಿ ತೋರಿಸಿ ಆತನು ದುರ್ಯೋಧನನ ತೊಡೆಗೆ ಪ್ರಹಾರ ಮಾಡುವಂತೆ ಮಾಡುತ್ತಾನೆ ಎಂಬುದಾಗಿ ತಿಳಿಯಲಾಗಿದೆ.


ಮಹಾಭಾರತ ಯುಧ್ದದಲ್ಲಿ ತನ್ನೆಲ್ಲಾ ಕುವರರ ಸಾವಿಗೆ ಕೃಷ್ಣನೇ ಕಾರಣನೆಂಬ ಕೋಪದಿಂದ ಗಾಂಧಾರಿಯು ಯದುವಂಶವೂ ಸಹಾ ನಾಶವಾಗಲಿ ಎಂದು ಕೃಷ್ಣನನ್ನು ಶಪಿಸುತ್ತಾಳೆ.

ಮರಣ [ಬದಲಾಯಿಸಿ]

ಕೌರವರ ಅಂತ್ಯದ ತರುವಾಯ ತನ್ನ ಪತಿ ಮತ್ತು ಕುಂತಿಯೊಡನೆ ವಾನಪ್ರಸ್ಥಕ್ಕೆ ತೆರಳುವ ಗಾಂಧಾರಿಯು ನಂತರ ಅಲ್ಲಿ ಉಂಟಾಗುವ ಕಾಳ್ಗಿಚ್ಚಿನಿಂದ ತನ್ನ ಅಂತ್ಯವನ್ನು ಕಾಣುತ್ತಾಳೆಂಬುದು ಪುರಾಣದ ಅಂಬೋಣ.

"http://kn.wikipedia.org/w/index.php?title=ಗಾಂಧಾರಿ&oldid=317503" ಇಂದ ಪಡೆಯಲ್ಪಟ್ಟಿದೆ