ಮಹಾಭಾರತದಲ್ಲಿ ದ್ರೋಣ (ಸಂಸ್ಕೃತ: द्रोण) ಅಥವ ದ್ರೋಣಾಚಾರ್ಯ (ಸಂಸ್ಕೃತ: द्रोणाचार्य) ಒಂದು ಪ್ರಮುಖ ಪಾತ್ರ. ದ್ರೋಣರ ಜನನ ಮಡಕೆಯಲ್ಲಾದ ಕಾರಣ ಅವರಿಗೆ ಕುಂಬೋದ್ಭವ ಎಂದೂ ಹೆಸರಿದೆ. ದ್ರೋಣ - ದ್ರುಪದರ ಸ್ನೇಹ - ದ್ವೇಷದ ಕಥೆ ಕುತೂಹಲಕಾರಿಯಾಗಿದೆ. ಚಿಕ್ಕಂದಿನಿಂದಲೂ ಜೊತೆಯಾಗಿ ಬೆಳೆದ ಇಬ್ಬರೂ ಜೀವದ ಗೆಳೆಯರು. ಆಗ ಯುವರಾಜನಾಗಿದ್ದ ದ್ರುಪದ, ಬಡವನಾದ ದ್ರೋಣನಿಗೆ ತಾನು ಮುಂದೆ ರಾಜನಾದರೆ ನಿನಗೂ ಅರ್ಧ ರಾಜ್ಯ ಕೊಡುವೆನೆಂದು ಮಾತು ಕೊಟ್ಟಿರುತ್ತಾನೆ. ಕಾಲಾನಂತರ ದ್ರುಪದ ರಾಜನಾಗುತ್ತಾನೆ. ದ್ರೋಣನಿಗೆ ಕೃಪಾಚಾರ್ಯರ ತಂಗಿ ಕೃಪಿಯೊಂದಿಗೆ ವಿವಾಹವಾಗಿ ಅಶ್ವತ್ಥಾಮನೆಂಬ ಮಗನೂ ಜನಿಸುತ್ತಾನೆ. ಆಗ ತೀವ್ರ ಬಡತನದ ಕಾರಣ ಮನೆಯಲ್ಲಿ ಮಗುವಿಗೆ ಕೊಡಲು ಹಾಲೂ ಇರದೆ ಕೃಪಿ ಮಗನಿಗೆ ಅಕ್ಕಿಹಿಟ್ಟನ್ನು ನೀರಲ್ಲಿ ಕದಡಿ ಅದನ್ನೆ ಹಾಲೆಂದು ಕೊಡುತ್ತಿರುತ್ತಾಳೆ. ಒಂದು ದಿನ ಓರಗೆಯ ಹುಡುಗರೆಲ್ಲ ಇದನ್ನು ನೋಡಿ ಅಶ್ವತ್ಥಾಮನನ್ನು ಛೇಡಿಸುತ್ತಾರೆ. ಆಗ ಮನನೊಂದ ದ್ರೋಣ, ದ್ರುಪದನ ಬಳಿ ಹೋಗಿ ಹಿಂದೆ ನೀಡಿದ ವಚನವನ್ನು ನೆನಪಿಸುತ್ತಾರೆ. ಆದರೆ ಅಧಿಕಾರದ ಮದದಿಂದ ದ್ರುಪದ, ಸ್ನೇಹಿತ ಎಂಬುದನ್ನೂ ಮರೆತು ದ್ರೋಣನನ್ನು ಅವಮಾನಿಸುತ್ತಾನೆ. ಆಗ ಸಿಟ್ಟಿನಿಂದ ದ್ರೋಣ ಮುಂದೊಂದು ದಿನ ನಿನ್ನ ತಲೆ ನನ್ನ ಕಾಲ ಬಳಿ ಬೀಳುವಂತೆ ಮಾಡುತ್ತೇನೆ ಎಂದು ಶಪಥ ಮಾಡುತ್ತಾರೆ. ಮುಂದೆ ತಮ್ಮ ಪ್ರಿಯ ಶಿಷ್ಯ ಅರ್ಜುನನಿಂದಲೆ ತಮ್ಮ ಪ್ರತಿಙ್ನೆ ಪೂರೈಸಿಕೊಳ್ಳುತ್ತಾರೆ.