ಮಂಡೋದರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಡೋದರಿ
ರಾವಣನನ್ನು ಕೊಲ್ಲಲು ಉಪಯೋಗಿಸಿದ ಬಾಣವನ್ನು ಮಂಡೋದರಿಯಿಂದ ಅಪಹರಿಸುತ್ತಿರುವ ಹನುಮಾನ್.
ರಾವಣನನ್ನು ಕೊಲ್ಲಲು ಉಪಯೋಗಿಸಿದ ಬಾಣವನ್ನು ಮಂಡೋದರಿಯಿಂದ ಅಪಹರಿಸುತ್ತಿರುವ ಹನುಮಾನ್.
ದೇವನಾಗರಿमंदोदरी
ಸಂಬಂಧರಾಕ್ಷಸ, ಪಂಚಕನ್ಯೆ
ನೆಲೆಲಂಕೆ
ಹೆಂಡತಿರಾವಣ, ವಿಭೀಷಣ

ಮಂಡೋದರಿ ರಾಮಾಯಣದ ಅನುಸಾರ ರಾವಣನ ಪತ್ನಿ ಹಿಂದೂ ಆಚರಣೆಯ ಅನುಸಾರ ನಿತ್ಯವೂ ಪ್ರಾರ್ಥನೆ ಸಲ್ಲಿಸಬೇಕಾದ ಐದು ಜನ ಪತಿವ್ರತಾ ಮಹಿಳೆಯರಲ್ಲಿ ಒಬ್ಬಳು. ರಾಮಾಯಣವು ಅವಳನ್ನು ಸುಂದರಿ, ಧಾರ್ಮಿಕಳು ಹಾಗೂ ನೀತಿವಂತಳು ಎಂದು ಚಿತ್ರಿಸುತ್ತದೆ.

ಇವಳು ಮಯಾಸುರ ಮತ್ತು ಗಂಧರ್ವ ಕನ್ಯೆ ಹೇಮಾ ಇವರ ಮಗಳು.ಇವಳಿಗೆ ಮೇಘನಾದ ಮತ್ತು ಅಕ್ಷ ಕುಮಾರ ಎಂಬ ಇಬ್ಬರು ಮಕ್ಕಳು. ಕೆಲವು ರಾಮಾಯಣಗಳ ಪ್ರಕಾರ ಸೀತೆಯು ಈಕೆಯ ಮಗಳು. ರಾವಣನು ಅನೇಕ ಕೆಟ್ಟ ಕೆಲಸಗಳನ್ನು ಮಾಡಿದರೂ ಕೂಡ ಅವನನ್ನು ಪ್ರೀತಿಸುವವಳು, ಆದರೆ ಅವನನ್ನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಸಲಹೆ ಕೊಡುವವಳು. ಅವನು ಅಪಹರಿಸಿದ ಸೀತೆಯನ್ನು ರಾಮನಿಗೆ ಮರಳಿಸುವಂತೆ ಸಲಹೆಯನ್ನು ಮತ್ತೆ ಮತ್ತೆ ಕೊಟ್ಟಳಾದರೂ ರಾವಣ ಅದಕ್ಕೆ ಕಿವಿಗೊಡಲಿಲ್ಲ. .

ಸೀತೆಯನ್ನು ಕೊಲ್ಲಲು ಸಿದ್ಧನಾದ ರಾವಣನನ್ನು ಮಂಡೋದರಿ ತಡೆದದ್ದು.

ರಾಮಾಯಣದ ಕೆಲವು ಆವೃತ್ತಿಗಳಲ್ಲಿ ವಾನರರು ಅವಳ ಜತೆ ಕೆಟ್ಟ ರೀತಿಯಿಂದ ವರ್ತಿಸಿದಂತೆ ಚಿತ್ರಿಸಿವೆ. ವಾನರರು ಅವಳ ಪಾವಿತ್ರ್ಯಭಂಗ ಮಾಡಿದಂತೆಯೂ ರಾವಣನ ಸಾವಿಗೆ ಅದುವೇ ಕಾರಣವಾದಂತೆಯೂ ಚಿತ್ರಿಸಿವೆ. ರಾಮನು ರಾವಣನನ್ನು ಕೊಲ್ಲಲು ಬಳಸಿದ ಬಾಣವನ್ನು ಹನುಮಂತನು ಅವಳಿಂದ ಅಪಹರಿಸಿದನಂತೆ.

ರಾವಣನ ಸಾವಿನ ನಂತರ ರಾಮನ ಸಲಹೆಯಂತೆ ರಾವಣನ ತಮ್ಮ ವಿಭೀಷಣ ಅವಳನ್ನು ಮರುಮದುವೆಯಾದನಂತೆ .

ವಾಲ್ಮೀಕಿರಾಮಾಯಣದಲ್ಲಿ[ಬದಲಾಯಿಸಿ]

ಮಯನು ಹೇಮೆಯೊಂದಿಗೆ ಒಂದು ಸಾವಿರ ವರ್ಷ ಪರ್ಯಂತ ಸಂಸಾರ ನಡೆಸಿದ. ಅವಳಿಗೋಸ್ಕರ ತನ್ನ ಮಾಯಾಶಕ್ತಿಯಿಂದ ವಜ್ರವೈಡೂರ್ಯ ಖಚಿತವಾದ ಸುವರ್ಣ ನಗರವನ್ನೇ ನಿರ್ಮಿಸಿದ. ಕೊನೆಯಲ್ಲಿ ಹೇಮ ಮಯನನ್ನು ತೊರೆದು ಹೊರಟು ಹೋದಳು. ಅಷ್ಟರಲ್ಲಿ ಇವರಿಗೆ ಮಾಯಾವಿ, ದುಂದುಭಿ ಎಂಬ ಇಬ್ಬರು ಗಂಡುಮಕ್ಕಳೂ ಮಂಡೋದರಿ ಎಂಬ ಒಬ್ಬ ಹೆಣ್ಣುಮಗಳೂ ಹುಟ್ಟಿದ್ದರು. ಮಯ ಹೇಮೆಯ ವಿರಹದಿಂದ ದುಃಖಿತನಾಗಿ ತನ್ನ ಮಗಳು ಮಂಡೋದರಿಯನ್ನು ಕರೆದುಕೊಂಡು ಕಾಡಿಗೆ ಬಂದುಬಿಟ್ಟ. ರಾವಣ ಒಮ್ಮೆ ಆಕಸ್ಮಿಕವಾಗಿ ಮಯನಿಗೆ ಭೇಟಿಯಾದ. ತನ್ನ ಮಗಳನ್ನು ಮದುವೆಯಾಗುವಂತೆ ಮಯ ರಾವಣನನ್ನು ಕೇಳಿದಾಗ ರಾವಣ ಒಪ್ಪಿಕೊಂಡ. ಆ ಕೂಡಲೇ ಮಯ ಅಗ್ನಿಯನ್ನು ಪ್ರತಿಷ್ಠಾಪಿಸಿ ವಿಧ್ಯುಕ್ತವಾಗಿ ಮಂಡೋದರಿಯನ್ನು ರಾವಣನಿಗೆ ಪಾಣಿಗ್ರಹಣಮಾಡಿಕೊಟ್ಟ. ಅದ್ಭುತವೂ ಅಮೋಘವೂ ಆದ ಒಂದು ಶಕ್ತ್ಯಾಯುಧವನ್ನೂ ರಾವಣನಿಗೆ ಕೊಟ್ಟ. ಅದು ಪರಮ ತಪೋಬಲದಿಂದ ಮಯನಿಗೆ ಲಭಿಸಿತ್ತು.

ಮಂಡೋದರಿಗೆ ಮಂಡೋಪರಿ ಎಂಬುದು ಇನ್ನೊಂದು ಹೆಸರು. ಮಂದ ಉಪರೀ ಎಂದರೆ ಕೃಶವಾದ ಉದರವುಳ್ಳವಳು ಎಂದರ್ಥ. ಮಂಡ ಉದರೀ ಎಂದರೆ ಸುಂದರವಾದ ಉದರವುಳ್ಳವಳು ಎಂದು ಅರ್ಥ. ರಾವಣನನ್ನು ಮದುವೆಯಾದ ಮೇಲೆ ಇಂದ್ರಜಿತು, ಅಕ್ಷಯಕುಮಾರ ಎಂಬ ಮಹಾವೀರರನ್ನು ಮಕ್ಕಳಾಗಿ ಪಡೆದಳು. ಅನಂತರ ರಾವಣ ರಾಮಚಂದ್ರನ ಪತ್ನಿ ಸೀತೆಯನ್ನು ಅಪಹರಿಸಿಕೊಂಡು ತಂದ. ರಾಮಲಕ್ಷ್ಮಣರು ವಾನರ ಸೈನ್ಯವನ್ನು ಕಟ್ಟಿಕೊಂಡು ರಾವಣನ ಮೇಲೆ ಯುದ್ಧಕ್ಕೆ ಬಂದರು. ಆ ಯುದ್ದದಲ್ಲಿ ರಾವಣ ಕುಂಭಕರ್ಣ ಇಂದ್ರಜಿತು ಎಲ್ಲರೂ ಸತ್ತುಹೋದರು. ಇಂದ್ರಾದಿಗಳಿಗೂ ಅಜೇಯರಾದ ಇವರು ನಾಶವಾಗಬೇಕಾದರೆ ರಾಮ ಮಾನವನಲ್ಲ ದೇವಾಂಶ ಸಂಭೂತನೇ ಆಗಿರಬೇಕೆಂದು ಮಂಡೋದರಿ ಊಹಿಸಿದಳು.

ಅದ್ಭುತ ರಾಮಾಯಣದಲ್ಲಿ[ಬದಲಾಯಿಸಿ]

ಈಕೆ ರಾಕ್ಷಸರ ಶಿಲ್ಪಿಯಾದ ಮಯಾಸುರನ ಮಗಳು. ಈಕೆಯ ತಾಯಿ ಹೇಮೆಯೆಂಬ ಅಪ್ಸರೆ. ಮಂಡೋದರಿಯನ್ನು ರಾವಣ ಮದುವೆಯಾದ. ಒಬ್ಬ ಮುನಿ ಲಕ್ಷ್ಮಿಯನ್ನು ಮಗಳಾಗಿ ಪಡೆಯಬೇಕೆಂದು ಬಯಸಿ ಮಂತ್ರ ಸಿದ್ಧ ರಕ್ತವನ್ನು ಒಂದು ಕಲಶದಲ್ಲಿಟ್ಟಿದ್ದ. ದಿಗ್ವಿಜಯಕ್ಕೆ ಹೋಗಿದ್ದ ರಾವಣ ಅದನ್ನು ಹೊತ್ತು ತಂದು ಮಂಡೋದರಿಗೆ ಕೊಟ್ಟು ಇದನ್ನು ಕುಡಿಯಬೇಡ ಎಂದ. ರಾವಣಪರಸ್ತ್ರೀಗಮನನಾದುದನ್ನು ಕಂಡು ಸಹಿಸಲಾರದೆ ಆ ಕಲಶದಲ್ಲಿದ್ದ ರಕ್ತವನ್ನು ವಿಷವೆಂದು ಭಾವಿಸಿ ಮಂಡೋದರಿ ಕುಡಿದುಬಿಟ್ಟಳು. ಇದರ ಪರಿಣಾಮವಾಗಿ ಮಂಡೋದರಿ ಗರ್ಭಧರಿಸಿದಳು. ಕುರುಕ್ಷೇತ್ರದ ಬಳಿ ವಿಮಾನದಲ್ಲಿ ಬರುತ್ತಿದ್ದಾಗ ಅಲ್ಲೇ ಪ್ರಸವವೇದನೆಯಿಂದ ಒಂದು ಹೆಣ್ಣು ಮಗುವನ್ನು ಹೆತ್ತಳು. ನಾಚಿಕೆಯಿಂದ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಮುಚ್ಚಿ, ಅಲ್ಲಿಯೆ ಹುಗಿದುಬಿಟ್ಟು ತಾನು ಲಂಕೆಗೆ ಹಿಂತಿರುಗಿದಳು. ಈ ಮಗುವೇ ಜನಕರಾಜನಿಗೆ ಭೂಮಿಯಲ್ಲಿ ದೊರೆತ ಸೀತೆ ಎನ್ನಲಾಗಿದೆ.

ದೇವಿಭಾಗವತ ಮತ್ತು ಜೈನರಾಮಾಯಣಗಳಲ್ಲಿ[ಬದಲಾಯಿಸಿ]

ರಾವಣನು ತನ್ನ ಸಾವಿಗೆ ತನ್ನ ಮೊದಲ ಮಗುವೇ ಕಾರಣವಾಗುವುದಾಗಿ ಭವಿಷ್ಯವಾಣಿಗಳನ್ನು ಕೇಳಿದ್ದನು. ಆ ಕಾರಣದಿಂದಾಗಿ ತನಗೆ ಮಂಡೋದರಿಯಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ಕೊಲ್ಲುವ ಬದಲು ಒಂದು ಪೆಟ್ಟಿಗೆಯಲ್ಲಿಟ್ಟು ಜನಕನ ಪಟ್ಟಣದಲ್ಲಿ ನೆಲದಲ್ಲಿ ಹೂಳಿದ್ದನು. ಆ ಮಗುವೆ ಮುಂದೆ ಜನಕನಿಗೆ ಸಿಕ್ಕಿ ಸೀತೆಯಾಗಿ ರಾವಣನ ಸಾವಿಗೆ ಕಾರಣವಾದಳು.

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮಂಡೋದರಿ&oldid=1074718" ಇಂದ ಪಡೆಯಲ್ಪಟ್ಟಿದೆ