ಸುಗ್ರೀವಾಜ್ಞೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಗ್ರೀವಾಜ್ಞೆ ಪದದ ಉಗಮ[ಬದಲಾಯಿಸಿ]

ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಹುಡುಕುತ್ತಿರುವಾಗ , ಅವನಿಗೆ ಸುಗ್ರೀವನ ಸ್ನೇಹವಾಗುತ್ತದೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಅವನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಲು ತನಗೆ ಸಹಾಯ ಮಾಡಬೇಕೆಂದು ರಾಮ ಸುಗ್ರೀವನನ್ನು ಕೇಳಿಕೊಂಡಿರುತ್ತಾನೆ. ಸುಗ್ರೀವನು ವಾನರರನ್ನೆಲ್ಲ ಕರೆದು ಸೀತೆಯನ್ನು ಒಂದು ತಿಂಗಳೊಳಗೆ ಹುಡುಕಿ ತರಬೇಕು. ಒಂದು ತಿಂಗಳ ಮೇಲೆ ಒಂದು ದಿನವಾದರೂ ಅವರಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಆದೇಶ ನೀಡಿ ಅವರನ್ನೆಲ್ಲ ನಾಲ್ಕೂ ದಿಕ್ಕುಗಳಿಗೆ ನಾಲ್ಕು ತಂಡಗಳಲ್ಲಿ ಕಳುಹಿಸುತ್ತಾನೆ. ಇಂಥ ಕಠಿಣವಾದ ಆದೇಶವನ್ನು ಸುಗ್ರೀವ ನೀಡಿದ್ದರಿಂದ ಅದು ಸುಗ್ರೀವಾಜ್ಞೆಯೆಂದು ಪ್ರಸಿದ್ಧವಾಯಿತು.

ಸುಗ್ರೀವಾಜ್ಞೆಯನ್ನು ಸರಳವಾಗಿ ಕಟ್ಟಪ್ಪಣೆ ಎನ್ನಲೂ ಬಹುದು.

ರಾಜಕೀಯದಲ್ಲಿ ಸುಗ್ರೀವಾಜ್ಞೆ ಬಳಕೆ[ಬದಲಾಯಿಸಿ]

ಸಂಸತ್ತಿನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಮಸೂದೆಯನ್ನು ಮಂಡಿಸದೆಯೇ ತುರ್ತಾಗಿ ಯಾವುದಾದರೂ ಆದೇಶವನ್ನು ಜಾರಿಗೆ ತರುವುದಿದ್ದರೆ ಅದನ್ನು ರಾಷ್ಟ್ರಪತಿಗಳು ಇಲ್ಲವೆ ರಾಜ್ಯಪಾಲರ ಸಹಿ ಪಡೆದು ಜಾರಿಗೆ ತರುತ್ತಾರೆ. ಇಂಥ ಆದೇಶಕ್ಕೆ ಸುಗ್ರೀವಾಜ್ಞೆ ಎನ್ನುತ್ತಾರೆ. ಈ ಸುಗ್ರೀವಾಜ್ಞೆ ೬ ತಿಂಗಳೊಳಗೆ ಶಾಸನಸಭೆಯ ಅನುಮತಿಯನ್ನು ಪಡೆಯಬೇಕು. ಇಲ್ಲದೆ ಹೋದರೆ ಅದು ತನ್ನಷ್ಟಕ್ಕೇ ಅನೂರ್ಜಿತಗೊಳ್ಳುತ್ತದೆ.