ವಿಷಯಕ್ಕೆ ಹೋಗು

ಪಂಜುರ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಜುರ್ಲಿ ದೈವದ ಮುಖವಾಡ

ಪಂಜುರ್ಲಿಯು(ಉಚ್ಚಾರಣೆ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಕೆಲ ಭಾಗಗಳಲ್ಲಿ ಪೂಜಿಸಲ್ಪಡುವ, ಹಂದಿಯ ಮುಖದ ಒಂದು ದೈವವಾಗಿದೆ.[] ಮೂಲ ಮೈಸಂದಾಯ(ಮಹಿಷ), ನಂದಿಗೋಣೆ(ಹೋರಿ), ಪಿಲ್ಚಂಡಿ(ಹುಲಿ), ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ತುಳುನಾಡಿನಲ್ಲಿ ಪೂಜೆ ಪಡೆಯುತ್ತಿವೆ.[] ಅದೇ ರೀತಿ ಮೂಲದಲ್ಲಿ ಪಂಜುರ್ಲಿ(ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.[]

ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ “ಪಂಜಿದ ಕುರ್ಲೆ” ಎಂಬ ಪದದಿಂದ ಬಂದಿದೆ.[] ಇದರರ್ಥ ತುಳು ಭಾಷೆಯಲ್ಲಿ ಎಳೆಯ ಕಾಡುಹಂದಿ ಎಂದಾಗಿದೆ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಒಂದಾಗಿರುವ ಪಂಜುರ್ಲಿಯನ್ನು ತುಳುನಾಡಿನಾದ್ಯಂತ ವರಾಹ ರೂಪದಲ್ಲಿ ಪೂಜಿಸಲಾಗುತ್ತದೆ. ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು.[]

ದೈವದ ಹುಟ್ಟು

[ಬದಲಾಯಿಸಿ]

ತುಳುನಾಡಿನ ಪಕ್ಕದ ಘಟ್ಟದ ರಾಜ್ಯದಲ್ಲಿ ಎರಡು ಕಾಡು ಹಂದಿಗಳು ವಾಸಿಸುತ್ತಿದ್ದವು. ಆ ಕಾಡು ಹಂದಿಗಳು ಕಾಡಿನಲ್ಲಿ ಅಣ್ಣ ತಂಗಿಯರಾಗಿ ಬಾಳುತ್ತಿದ್ದವು. ಈ ಹಂದಿಗಳಿಗೆ ಮುಂದೆ ಸತಿಪತಿಗಳಾಗಿ ಸಂತಾನ ವೃದ್ಧಿಗಳಿಸಬೇಕೆಂಬ ಇಚ್ಛೆಯಾಯಿತು. ಗಂಡು ಹೆಣ್ಣು ಹಂದಿಗಳು ತಮ್ಮೊಳಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದವು. ಅವು ನೇರವಾಗಿ ಕುಕ್ಕೆಯ ಕ್ಷೇತ್ರಕ್ಕೆ ತೆರಳಿದವು. ಅಲ್ಲಿ ಸುಬ್ರಾಯ ದೇವರನ್ನು(ಕುಕ್ಕೆಯಲ್ಲಿರುವ ಮೂಲದ ನಾಗದೇವರು) ಭೇಟಿ ಆದವು. ಸುಬ್ರಾಯ ದೇವರಲ್ಲಿ ತಮ್ಮಲ್ಲಿಯ ಸಹೋದರ ಭಾವವವನ್ನು ಕಡಿದು ಗಂಡ- ಹೆಂಡತಿಯಾಗಿ ಬಾಳುವಂತೆ ಕರುಣಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡವು. ಅವುಗಳ ಇಚ್ಛೆಯನ್ನು ಕೇಳಿ ಸುಬ್ರಾಯ ದೇವರಿಗೆ ಕರುಣೆ ಬಂದು, ಆ ಹಂದಿಗಳ ಅಣ್ಣ-ತಂಗಿಯರ ಭಾವವನ್ನು ಕಡಿದು ಸತಿಪತಿಗಳಾಗುವಂತೆ ವರ ನೀಡಿದರು. ಹಂದಿಗಳು ಇದರಿಂದ ಸಂತಸಗೊಂಡು ಕಾಡನ್ನು ಪ್ರವೇಶಿಸಿದವು. ಅವುಗಳ ಅನ್ಯೋನ್ಯ ಬದುಕಿನ ಸಂಕೇತವಾಗಿ ಆ ಹಂದಿಗಳಿಗೆ ನಾಲ್ಕು ಮರಿಗಳು ಹುಟ್ಟಿಕೊಂಡವು. ಹಂದಿ ಮರಿಗಳಲ್ಲಿ ಒಂದು ಮರಿಯು ಈಶ್ವರ ದೇವರ ಹೂದೋಟವನ್ನು ಪ್ರವೇಶಿಸಿತು. ಆ ಹಂದಿ ಮರಿಯ ಅಂದ ಚೆಂದದ ರೂಪವನ್ನು ಕಂಡು ಈಶ್ವರ ದೇವರ ಪತ್ನಿಯಾದ ಪಾರ್ವತಿ ದೇವಿ ಮೋಹಗೊಂಡರು. ಅದನ್ನು ಪ್ರೀತಿಯಿಂದ ಸಲಹತೊಡಗಿದರು.[] ಆ ಮರಿಯು ಬೆಳೆಯತೊಡಗಿದಂತೆ ಎಲ್ಲೆಂದರಲ್ಲಿ ತಿರುಗಾಡತೊಡಗಿತು. ಕೊನೆಗೆ ತನ್ನ ದಾಡೆಯಿಂದ ಈಶ್ವರ ದೇವರ ಹೂದೋಟವನ್ನು ಹಾಳುಗೆಡವಲು ಪ್ರಾರಂಭಿಸಿತು. ಹಂದಿಯ ಉಪಟಳವು ಸಹಿಸಲು ಅಸಾಧ್ಯವಾಯಿತು. ಕೊನೆಗೆ ಪರಮೇಶ್ವರ(ಶಿವ/ಈಶ್ವರ) ಕುಪಿತರಾಗಿ ಅದನ್ನು ಕೊಂದು ಬಿಟ್ಟರು. ಈ ವಿಷಯ ತಿಳಿದಾಗ ಪಾರ್ವತಿದೇವಿ ಬಹಳ ದುಃಖ ಪಟ್ಟರು. ತಾನೇ ಪ್ರೀತಿಯಿಂದ ಸಾಕಿ ಸಲಹಿದ ಹಂದಿಮರಿಗೆ ಜೀವದಾನ ಮಾಡುವಂತೆ ಬಹುವಾಗಿ ಪ್ರಾರ್ಥಿಸಿಕೊಂಡರು. ಮಡದಿಯ ಇಚ್ಛೆಯಂತೆ ಪರಮೇಶ್ವರ ಹಂದಿಗೆ ಜೀವದಾನ ಮಾಡಿದರು.[][]

ಆ ಬಳಿಕ ಶಿವ ದೇವರು ಆ ಹಂದಿಯ ಮರಿಗೆ ದೈವಶಕ್ತಿಯನ್ನು ಕರುಣಿಸಿದರು. "ನೀನು ವರಾಹರೂಪಿಯಾದ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸು. ಅಲ್ಲಿ ಸತ್ಯ, ಧರ್ಮ, ನ್ಯಾಯವನ್ನು ರಕ್ಷಿಸುವ ದೈವವಾಗಿ ಮೆರೆದಾಡಿಕೊಂಡಿರು. ಭೂಲೋಕದಲ್ಲಿ ಮಾನವರು ನಿನಗೆ ಅರ್ಪಿಸುವ ನೈವೇದ್ಯಾದಿಗಳನ್ನು ಸ್ವೀಕರಿಸು. ಅವರ ಬೆಳೆಯನ್ನು ರಕ್ಷಣೆ ಮಾಡುವ, ಕಷ್ಟ, ಕಾರ್ಪಣ್ಯಗಳನ್ನು, ರೋಗರುಜಿನಗಳನ್ನು ಪರಿಹರಿಸಿ ಕಾಯುವ ರಕ್ಷಣೆಯ ದೈವವಾಗಿ ಕೀರ್ತಿಯನ್ನು ಬೆಳಗಿಕೊಂಡಿರು. ಅದೇ ರೀತಿ ನಿನ್ನನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ, ಸರಿದಾರಿಗೆ ತಿರುಗಿಸಿ ನಿನ್ನಲ್ಲಿ ಭಕ್ತಿ ಹುಟ್ಟುವಂತೆ ಮಾಡು" ಎಂದು ವರಪ್ರಧಾನ ಮಾಡಿ ಕಳುಹಿಸಿದರು. ದೇವರ ಅಪ್ಪಣೆ ಪ್ರಕಾರ ಪಂಜುರ್ಲಿಯು ದೈವಶಕ್ತಿಯಾಗಿ ಭೂಲೋಕ ಪ್ರವೇಶಿಸಿತು.[][]

ಪಂಜುರ್ಲಿಯ ಪ್ರಭೇದಗಳು

[ಬದಲಾಯಿಸಿ]

ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರದ(ಈಗಿನ ಧರ್ಮಸ್ಥಳ) ಅಣ್ಣಪ್ಪ ಸ್ವಾಮಿಯ ಜೊತೆ ನಿಕಟವಾಗಿ ಹೊಂದಿಕೊಂಡಿದೆ.[] ತಾನು ನೆಲೆ ನಿಂತ ಊರಿಗೆ ಅನುಗುಣವಾಗಿ ಪಂಜುರ್ಲಿಯ ಹೆಸರು ಬದಲಾಗುತ್ತಾ ಹೋಗುವುದು ಒಂದು ವಿಶೇಷವಾಗಿದೆ. ಅಣ್ಣಪ್ಪ ಪಂಜುರ್ಲಿ(ಅಣ್ಣಪ್ಪಂಜುರ್ಲಿ ಎಂದೂ ಕರೆಯುತ್ತಾರೆ), ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಲತ್ತಂಡೆ ಪಂಜುರ್ಲಿ ಹೀಗೆ ಪಂಜುರ್ಲಿ ದೈವದ ಪ್ರಭೇದಗಳ ಪಟ್ಟಿ ಬೆಳೆಯುತ್ತದೆ.[]

ಪಂಜುರ್ಲಿ ದೈವದ ವಿಧಗಳು

[ಬದಲಾಯಿಸಿ]
  • ಅಂಗಣತ್ತಾಯ
  • ಅಲೇರ ಪಂಜುರ್ಲಿ
  • ಅಂಬಾಡಿ ಪಂಜುರ್ಲಿ
  • ಅಂಬಡಾಡಿ/ಅಮ್ಟಾಡಿ ಪಂಜುರ್ಲಿ
  • ಅಣ್ಣಪ್ಪ ಪಂಜುರ್ಲಿ
  • ಉಡುಪಿಯ ಪಂಜುರ್ಲಿ
  • ಉರಿಮರ್ಲೆ ಪಂಜುರ್ಲಿ
  • ಒಡ್ತೆ ಪಂಜುರ್ಲಿ
  • ಒರ್ನರ ಪಂಜುರ್ಲಿ
  • ಒರಿಬಂಟೆ ಪಂಜುರ್ಲಿ
  • ಕಡಬದ ಪಂಜುರ್ಲಿ
  • ಕಡೆಕ್ಕಾರ ಪಂಜುರ್ಲಿ
  • ಕಾಡಬೆಟ್ಟು ಪಂಜುರ್ಲಿ
  • ಕುಂಟಾಲ ಪಂಜುರ್ಲಿ
  • ಕುಡುಮೊದ ಪಂಜುರ್ಲಿ
  • ಕುಪ್ಪೆಟ್ಟಿ ಪಂಜುರ್ಲಿ
  • ಕುಪ್ಪೆ ಪಂಜುರ್ಲಿ
  • ಕೂಳೂರು ಪಂಜುರ್ಲಿ
  • ಕೊಟ್ಯದ ಪಂಜುರ್ಲಿ
  • ಕೋರೆದಂಡ್ ಪಂಜುರ್ಲಿ
  • ಗೂಡುಪಂಜುರ್ಲಿ
  • ಗ್ರಾಮದ ಪಂಜುರ್ಲಿ
  • ಚಾವಡಿ ಪಂಜುರ್ಲಿ
  • ನಾಡ ಪಂಜುರ್ಲಿ
  • ಪಂಬತ್ತಾಜೆ ಪಂಜುರ್ಲಿ
  • ಪಂಜಣತ್ತಾಯ ಪಂಜುರ್ಲಿ
  • ಪಟ್ಟೊದ ಪಂಜುರ್ಲಿ
  • ಪಾರೆಂಕಿ ಪಂಜುರ್ಲಿ
  • ಪೊಟ್ಟ ಪಂಜುರ್ಲಿ
  • ಮನಿಪನ ಪಂಜುರ್ಲಿ
  • ಮಲರಾಯ
  • ಮಲಾರ ಪಂಜುರ್ಲಿ
  • ಮುಗೇರ ಪಂಜುರ್ಲಿ
  • ರುದ್ರ ಪಂಜುರ್ಲಿ
  • ವರ್ಣರೊ ಪಂಜುರ್ಲಿ
  • ಸೇಮಕಲ್ಲ್ ಪಂಜುರ್ಲಿ
  • ಜೋಡು ಪಂಜುರ್ಲಿ
  • ಉದ್ದಿದ ಪಂಜುರ್ಲಿ

ದೈವದ ಮಣೆ ಮತ್ತು ಸನ್ನಿಧಿ

[ಬದಲಾಯಿಸಿ]

ಸಾಮಾನ್ಯವಾಗಿ ಎಲ್ಲಾ ತರದ ಜುಮಾದಿ(ಧೂಮಾವತಿ ದೈವ), ಪಿಲ್ಚಂಡಿ, ಪಂಜುರ್ಲಿ, ಜಾರಂದಾಯ ಮೊದಲಾದ ದೈವಗಳ ಮಣೆ-ಮಂಚದಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ. ಇಲ್ಲಿ ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಂಚದ ಗಾತ್ರವು ೫ ೧/೨(ಐದು ವರೆ) ಅಡಿ ಉದ್ದ, ೨ ೧/೪(ಎರಡು ಕಾಲು) ಅಡಿ ಅಗಲ, ೨ ೧/೪(ಎರಡು ಕಾಲು) ಅಡಿ ಎತ್ತರವಿರುತ್ತದೆ. ಹಲಸು, ಸಾಗುವಾನಿ, ಮೊದಲಾದ ದೀರ್ಘ ಬಾಳಿಕೆ ಬರುವ ಹಲಗೆಗಳನ್ನು ಇದರ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಈ ಮಂಚವನ್ನು ಅಪರೂಪಕ್ಕೆಂಬಂತೆ ಮನೆಯ ಚಾವಡಿಯ ಮಾಡಿನ ತೊಲೆಯ ಸರಪಳಿಗೆ ಆಧಾರದಲ್ಲಿ ತೂಗು ಹಾಕುವುದು ಇದೆ. ಮದನಕೈಗಳನ್ನು(ಗೋಡೆಯಲ್ಲಿ ಹಲಗೆಯನ್ನು ಜೋಡಿಸಲು ಇಕ್ಕೆಲಗಳಲ್ಲಿ ಆಧಾರಕ್ಕೆ ಜೋಡಿಸುವ ರೀಪುಗಳು) ಗೋಡೆಗೆ ಜೋಡಿಸಿ ಅದರ ಮೇಲೆ ಒಂದು ಹಲಗೆಯನ್ನಿಟ್ಟು ಪೂಜಿಸುವುದು ಹಿಂದಿನ ಕಾಲದಲ್ಲಿ ತುಳುವರಲ್ಲಿ ಸಾಮಾನ್ಯವಾಗಿ ನಡೆದುಬಂದ ಆಚರಣೆಯಾಗಿದೆ. ಈಗ ಕ್ರಮೇಣ ಬದಲಾವಣೆಯೂ ಕಂಡು ಬಂದಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.

ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ, ಮೂಲ ಮೈಸಂದಾಯ(ಮಹಿಷ ದೈವ) ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ದೈವಗಳ ಕೋಲ ನಡೆಯುವಾಗಲೂ ಮೂಲ ಮೈಸಂದಾಯನಿಗೆ ಪ್ರಥಮ ಗೌರವ ಸಲ್ಲಿಸಬೇಕು. ಪಂಜುರ್ಲಿಯ ಜೊತೆಯಲ್ಲಿ ವರ್ತೆಯಿದ್ದಲ್ಲಿ(ಹೆಣ್ಣು ಶಕ್ತಿ) ಒಂದೇ ಮಣೆ-ಮಂಚದಲ್ಲಿ ದೈವವನ್ನು ನಂಬುತ್ತಾರೆ. ಕೋಲ ಕಟ್ಟುವುದು ಕೂಡ ಜೊತೆಯಲ್ಲಿಯೇ ನಡೆಯುತ್ತದೆ. ಪಂಜುರ್ಲಿ ರಕ್ತಾಹಾರದ ದೈವ. ಆದುದರಿಂದ ಭೋಗ/ತಂಬಿಲ ಪಸರ್ನೆಗಳಲ್ಲಿ(ದೈವಗಳಿಗೆ ಕಜ್ಜಾಯ ಸೇವೆ) ವ್ಯತ್ಯಾಸವಿರುವುದಿಲ್ಲ. ಕೋಲ ಕಟ್ಟುವ ಸಮಯದಲ್ಲಿ ತುಳುನಾಡಿನ ಬಡಗು ಭಾಗದಲ್ಲಿ ತೆಂಕಣ ಪ್ರದೇಶಕ್ಕಿಂತ ಸ್ವಲ್ಪ ಮಟ್ಟಿನ ವ್ಯತ್ಯಾಸವಿರುತ್ತದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ.

ಕೋಲ ಮತ್ತು ತಂಬಿಲ

[ಬದಲಾಯಿಸಿ]

ತುಳುನಾಡು, ಪಂಜುರ್ಲಿ ದೇವರನ್ನು ಊರಿನ ಸ್ಥಳೀಯ ದೇವತೆಯಾಗಿ ಮತ್ತು ಅವರ ಕುಟುಂಬದ ದೈವವಾಗಿ ಪೂಜಿಸುತ್ತಾರೆ. ತುಳುನಾಡಿನ ಕೆಲವು ಕುಟುಂಬಗಳು ತಮ್ಮ ಪೂರ್ವಜರ ಮನೆಯಲ್ಲಿ ಪಂಜುರ್ಲಿಯನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಅವರು ಕೋಲ ಅಥವಾ ತಂಬಿಲವನ್ನು ಮಾಡುತ್ತಾರೆ ಮತ್ತು ಇದು ಇಡೀ ಕುಟುಂಬವನ್ನು ಒಟ್ಟುಗೂಡಿಸುತ್ತದೆ. ಹೆಚ್ಚುವರಿಯಾಗಿ, ತುಳುನಾಡಿನ ಕೆಲವು ಸ್ಥಳೀಯ ಪಟ್ಟಣಗಳು ​​ಪಂಜುರ್ಲಿ ದೇವರನ್ನು ಪಟ್ಟಣ ರಕ್ಷಕ ಎಂದು ಗೌರವಿಸುವ ವಾರ್ಷಿಕ ಕೋಲಗಳನ್ನು ನಡೆಸುತ್ತವೆ. ಈ ಸಂದರ್ಭಗಳಲ್ಲಿ, ಪಟ್ಟಣದ ನಿವಾಸಿಗಳೆಲ್ಲರೂ ದೈವ ಪಂಜುರ್ಲಿಯನ್ನು ಪೂಜಿಸಲು ಸೇರುತ್ತಾರೆ.[]

ತಂಬಿಲ ಎಂದರೆ ಮನೆಯವರು ಕೋಲವನ್ನು ಮಾಡದಿದ್ದಾಗ, ಮಾಡಬೇಕಾದ ಆಚರಣೆಯಾಗಿದೆ. ಕುಟುಂಬದ ಸದಸ್ಯರು ದೈವಗಳನ್ನು ಪೂಜಿಸಲು ತಂಬಿಲ ಆಚರಣೆಗೆ ಒಟ್ಟುಗೂಡಿದಾಗ ಯಾವುದೇ ಸಂಗೀತ ಅಥವಾ ಕೋಲ ಶೈಲಿಯ ನೃತ್ಯ ಇರುವುದಿಲ್ಲ. ಅವರು ಕೇವಲ ದೈವ ಪ್ರಾರ್ಥನೆಗಳನ್ನು ಮಾಡುತ್ತಾರೆ.[]

ತೆಂಕಣ ರಾಜ್ಯದಲ್ಲಿ

[ಬದಲಾಯಿಸಿ]

ತೆಂಕಣ ಮಂಗಳೂರು ಮೊದಲಾದೆಡೆ ಪಂಜುರ್ಲಿಯು ಪ್ರಧಾನ ದೈವಗಳಾಗಿರುವ ಮನೆತನಗಳಲ್ಲಿ ಕೋಲ ನಡೆಯುವ ಸಮಯದಲ್ಲಿ ಬಡಗಣ ಪ್ರದೇಶಕ್ಕಿಂತ ಕೆಲ ಭಿನ್ನ ಆಚರಣೆಗಳುನ್ನು ಮಾಡುತ್ತಿರುವುದು ತಿಳಿದು ಬಂದಿದೆ. ತೆಂಕಣ ಪ್ರದೇಶದಲ್ಲಿ ಉಳ್ಳಾಲ್ತಿ ಶಕ್ತಿಗೆ ಅಗ್ರಮಾನ್ಯ ಗೌರವ ಸಲ್ಲುವುದು(ಬಪ್ಪನಾಡು ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಇತ್ಯಾದಿ ಈ ಶಕ್ತಿಗಳನ್ನು ಉಳ್ಳಾಲ್ತಿ ಎಂದು ಸಂಭೋದಿಸುತ್ತಾರೆ). ಕೋಲ ನಡೆಯುವ ಗ್ರಾಮದಲ್ಲಿ ಉಳ್ಳಾಲ್ತಿ ದೇವಸ್ಥಾನ ಇರದಿದ್ದರೆ, ಕೋಲದ ಚಪ್ಪರದಲ್ಲಿ ದೈವಗಳನ್ನು ಪ್ರತಿಷ್ಟಾಪಿಸುವ ಮತ್ತರ್ನೆಯಲ್ಲಿ ಉಳ್ಳಾಲ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವಿರುತ್ತದೆ. "ಮತ್ತರ್ನೆ"ಯ ಬಲ ಪಾರ್ಶ್ವದಲ್ಲಿ ಉಳ್ಳಾಲ್ತಿಗೆ ಪ್ರತಿರೂಪವಾಗಿ ಅಮ್ನೂರು (ಅಮ್ಮನವರು ಅಥವಾ ದೇವಿ) ಶಕ್ತಿಯನ್ನು ಕಲಶ ರೂಪದಲ್ಲಿ ಸ್ಥಾಪಿಸುವರು. ಕೆಂಪು ಪಟ್ಟಿಯಿಂದ ಅಲಕಂರಿಸಿ ಗದ್ದಿಗೆ"(ದೇವಿಯನ್ನು ಆರಾಧಿಸುವ ವಿಧಾನ) ರೂಪದಲ್ಲಿ ಹೂ, ಪಿಂಗಾರ(ಅಡಿಕೆಯ ಹೂ)ಗಳಿಂದ ಶೃಂಗರಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. 1 2 3 "PIALATOTO - LINK SITUS SABUNG AYAM ONLINE PROVIDER SV388 MUDAH MENANG". www.thebeautifullifeplan.com.
  2. "Daivaradhane - Ritual of Tulunadu".
  3. 1 2 "PANJURLI". The Antique Story.
  4. 1 2 3 4 5 https://kannada.news18.com/news/astrology/interesting-and-untold-story-about-panjurli-daiva-vdd-863663.html
  5. 1 2 3 "ನಮ್ಮ - ನಾಡು : Namma Naadu, Koteshwara, Kundapura TQ: Sri Annappa Panjurli".
  6. ತುಳುನಾಡ ದೈವಗಳು ಪುಸ್ತಕ- ಬನ್ನಂಜೆ ಬಾಬು ಅಮೀನ್, ಕೆಮ್ಮಲಜೆ ಜಾನಪದ ಪ್ರಕಾಶನ ಉಡುಪಿ, ೨೦೧೦