ನರಕ ಚತುರ್ದಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನರಕ ಚತುರ್ದಶಿ ( ಕಾಳಿಯಾ ಚೌದಸ್ , ರೂಪ್ ಚೌದಸ್, ಛೋಟಿ ದೀಪಾವಳಿ, ನರಕ ನಿವಾರಣ ಚತುರ್ದಶಿ ಅಥವಾ ಭೂತ ಚತುರ್ದಶಿ ಎಂದೂ ಕರೆಯಲಾಗುತ್ತದೆ) ಹಿಂದೂ ಪಂಚಾಂಗದಲ್ಲಿ ಶಾಲಿವಾಹನ ಶಕೆಯ ಅಶ್ವಿನ ತಿಂಗಳಿನ ಕೃಷ್ಣ ಪಕ್ಷದಲ್ಲಿ ಚತುರ್ದಶಿ ಅಂದರೆ ೧೪ನೇ ದಿನ ಬರುವ ಹಬ್ಬವಾಗಿದೆ. ಇದು ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಎರಡನೇ ದಿನವಾಗಿದೆ. ಈ ದಿನ ಅಸುರ (ರಾಕ್ಷಸ) ನರಕಾಸುರನನ್ನು ಕೃಷ್ಣ, ಸತ್ಯಭಾಮ ಮತ್ತು ಕಾಳಿ ಕೊಂದರು ಎಂದು ಹಿಂದೂ ಸಾಹಿತ್ಯವು ಹೇಳುತ್ತದೆ. [೧] ಈ ದಿನವನ್ನು ಮುಂಜಾನೆ ಧಾರ್ಮಿಕ ವಿಧಿ ವಿಧಾನಗಳಿಂದ ಆಚರಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಅರ್ಥ[ಬದಲಾಯಿಸಿ]

ಈ ಹಬ್ಬವನ್ನು "ಕಾಲಿ ಚೌದಾಸ್" ಎಂದೂ ಕರೆಯುತ್ತಾರೆ. ಅಲ್ಲಿ ಕಾಲಿ ಎಂದರೆ ಕತ್ತಲೆ (ಶಾಶ್ವತ) ಮತ್ತು ಚೌದಸ್ ಎಂದರೆ ಹದಿನಾಲ್ಕನೆಯದು, ಇದನ್ನು ಅಶ್ವಿನ ಮಾಸದ ೧೪ ನೇ ದಿನದಂದು ಆಚರಿಸಲಾಗುತ್ತದೆ. ಭಾರತದ ಕೆಲವು ಪ್ರದೇಶಗಳಲ್ಲಿ, ಕಾಳಿ ಚೌದಸ್ ಮಹಾಕಾಳಿ ಅಥವಾ ಶಕ್ತಿಯ ಪೂಜೆಗೆ ನಿಗದಿಪಡಿಸಿದ ದಿನವಾಗಿದೆ ಮತ್ತು ಈ ದಿನ ಕಾಳಿಯು ರಾಕ್ಷಸನಾದ ನರಕಾಸುರನನ್ನು ಕೊಂದಳು ಎಂದು ನಂಬಲಾಗಿದೆ. ಆದ್ದರಿಂದ ನರಕ-ಚತುರ್ದಶಿ ಎಂದೂ ಕರೆಯುತ್ತಾರೆ, ಕಾಳಿ ಚೌದಸ್‍ವು ಸೋಮಾರಿತನವನ್ನು ಹಾಗೂ ದುಷ್ಟತನವನ್ನು ತೊಡೆದುಹಾಕಲು ಮತ್ತು ನಮ್ಮ ಜೀವನದಲ್ಲಿ ಬೆಳಕು ಚೆಲ್ಲುವ ದಿನವಾಗಿದೆ. ನರಕ ಚತುರ್ದಶಿಯನ್ನು ದೀಪಾವಳಿಗೆ ಕೇವಲ ಒಂದು ದಿನ ಮೊದಲು ಆಚರಿಸಲಾಗುತ್ತದೆ, ಇದನ್ನು ಸಣ್ಣ ದೀಪಾವಳಿ ಎಂದೂ ಕರೆಯುತ್ತಾರೆ. [೨] ಪೂಜೆಯನ್ನು ಎಣ್ಣೆ, ಹೂವುಗಳು ಮತ್ತು ಶ್ರೀಗಂಧದಿಂದ ಮಾಡಲಾಗುತ್ತದೆ. ತೆಂಗಿನಕಾಯಿಗಳನ್ನು ಹನುಮಂತನಿಗೆ ಅರ್ಪಿಸಲಾಗುತ್ತದೆ ಮತ್ತು ಎಳ್ಳಿನ ಬೀಜ, ಬೆಲ್ಲ ಮತ್ತು ತುಪ್ಪ ಮತ್ತು ಸಕ್ಕರೆಯೊಂದಿಗೆ ಅವಲಕ್ಕಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಕಾಳಿ ಚೌದಸ್ ಆಚರಣೆಗಳು ಸುಗ್ಗಿಯ ಹಬ್ಬವಾಗಿ ದೀಪಾವಳಿಯ ಮೂಲವನ್ನು ಬಲವಾಗಿ ಸೂಚಿಸುತ್ತವೆ. ಈ ದಿನ ಖಾದ್ಯಗಳನ್ನು ಪುಡಿಮಾಡಿದ ಅರೆ-ಬೇಯಿಸಿದ ಅವಲಕ್ಕಿಯಿಂದ ತಯಾರಿಸಲಾಗುತ್ತದೆ. ಈ ಅಕ್ಕಿಯನ್ನು ಆ ಸಮಯದಲ್ಲಿ ಲಭ್ಯವಿರುವ ತಾಜಾ ಕೊಯ್ಲಿನಿಂದ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಭಾರತದಲ್ಲಿ ಪ್ರಚಲಿತವಾಗಿದೆ.

ಕೃಷ್ಣ ತನ್ನ ಸುದರ್ಶನಚಕ್ರದಿಂದ ನರಕಾಸುರನ ಶಿರಚ್ಛೇದ ಮಾಡುತ್ತಾನೆ

ಈ ದಿನ, ಅಭ್ಯಂಜನ ಸ್ನಾನ ಮತ್ತು ಕಣ್ಣಿಗೆ ಕಾಡಿಗೆಯನ್ನು ಹಚ್ಚುತ್ತಾರೆ ಏಕೆಂದರೆ ದುಷ್ಟ ಕಣ್ಣುಗಳನ್ನು ದೂರವಿಡುತ್ತದೆ ಎಂದು ನಂಬಲಾಗಿದೆ. ದುಷ್ಟಶಕ್ತಿಗಳನ್ನು ತೊಡೆದುಹಾಕಲು ಈ ದೇವಿಯನ್ನು ಅವರ ಕುಲದೇವಿ ಎಂದು ಕರೆಯಲಾಗುತ್ತದೆ. ಕೆಲವು ಕುಟುಂಬಗಳು ಈ ದಿನದಂದು ತಮ್ಮ ಪೂರ್ವಜರಿಗೆ ಅನ್ನ ಪ್ರದಾನವನ್ನೂ ಮಾಡುತ್ತಾರೆ. ದೀಪಾವಳಿಯ ಎರಡನೇ ದಿನವನ್ನು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಕಾಳಿ ಚೌದಸ್ ಎಂದು ಕರೆಯಲಾಗುತ್ತದೆ.

ಈ ದಿನ ಹಿಂದೂಗಳು ಮಾಮೂಲಿಗಿಂತ ಮುಂಚೆಯೇ ಎದ್ದೇಳುತ್ತಾರೆ. ಪುರುಷರು ಸ್ನಾನ ಮಾಡುವ ಮೊದಲು ತಮ್ಮ ದೇಹಕ್ಕೆ ಸುಗಂಧ ತೈಲಗಳನ್ನು ಹಚ್ಚುತ್ತಾರೆ. ನಂತರ, ಸ್ವಚ್ಛ ಅಥವಾ ಹೊಸ ಬಟ್ಟೆಗಳನ್ನು ಧರಿಸುತ್ತಾರೆ; ಉಪಹಾರವನ್ನು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಕುಳಿತು ಮಾಡುತ್ತಾರೆ. ಮಧ್ಯಾಹ್ನದ ಊಟದ ಭಾಗವಾಗಿ ವಿಶೇಷ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ಸಂಜೆಯ ಸಮಯದಲ್ಲಿ ಮನೆಯನ್ನು ದೀಪಗಳಿಂದ ಬೆಳಗಿಸಲಾಗುತ್ತದೆ ಮತ್ತು ಪಟಾಕಿಯನ್ನು ಸಿಡಿಸುತ್ತಾರೆ.

ಗೋವಾದಲ್ಲಿ , ಹುಲ್ಲಿನಿಂದ ತುಂಬಿದ ನರಕಾಸುರನ ಕಾಗದದ ನಿರ್ಮಿತ ಪ್ರತಿಮೆಗಳನ್ನು ಮತ್ತು ದುಷ್ಟತನವನ್ನು ಸಂಕೇತಿಸುವ ಪಟಾಕಿಗಳನ್ನು ತಯಾರಿಸಲಾಗುತ್ತದೆ. ಈ ಪ್ರತಿಕೃತಿಗಳನ್ನು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸುಟ್ಟು ನಂತರ ಪಟಾಕಿಗಳನ್ನು ಸಿಡಿಸಲಾಗುತ್ತದೆ ಮತ್ತು ಜನರು ಪರಿಮಳಯುಕ್ತ ಎಣ್ಣೆ ಸ್ನಾನ ಮಾಡಲು ಮನೆಗೆ ಮರಳುತ್ತಾರೆ. ಮನೆಯ ಹೆಂಗಸರು ಪುರುಷರ ಆರತಿಯನ್ನು ಮಾಡುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ, ನರಕಾಸುರನನ್ನು ಕೊಲ್ಲುವ ಸಂಕೇತವಾಗಿ ಕರೀತ್ ಎಂಬ ಕಹಿಯನ್ನು ಪಾದದ ಕೆಳಗೆ ಪುಡಿಮಾಡಲಾಗುತ್ತದೆ, ಇದು ದುಷ್ಟತನವನ್ನು ಮತ್ತು ಅಜ್ಞಾನವನ್ನು ತೊಡೆದುಹಾಕುವುದನ್ನು ಸಂಕೇತಿಸುತ್ತದೆ. ವಿವಿಧ ವಿಧದ ಅವಲಕ್ಕಿ ಮತ್ತು ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ತಿನ್ನಲಾಗುತ್ತದೆ. [೩]

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾಳಿ ಪೂಜೆಯ ಹಿಂದಿನ ದಿನವನ್ನು ಭೂತ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಈ ದಿನ ಎರಡು ಲೋಕಗಳ ನಡುವಿನ ತೆರೆಯು ತೆಳುವಾಗಿದ್ದು ಈ ಕರಾಳ ರಾತ್ರಿಯ ಮುನ್ನಾದಿನದಂದು ಸತ್ತವರ ಆತ್ಮಗಳು ತಮ್ಮ ಆತ್ಮೀಯರನ್ನು ಭೇಟಿ ಮಾಡಲು ಭೂಮಿಗೆ ಬರುತ್ತವೆ ಎಂದು ನಂಬಲಾಗಿದೆ. ಒಂದು ಕುಟುಂಬದ ೧೪ ಪೂರ್ವಜರು ತಮ್ಮ ಜೀವಂತ ಸಂಬಂಧಿಗಳನ್ನು ಭೇಟಿ ಮಾಡುತ್ತಾರೆ ಮತ್ತು ಅವರನ್ನು ಮನೆಗೆ ಮಾರ್ಗದರ್ಶನ ಮಾಡಲು ಮತ್ತು ವಿಶೇಷವಾಗಿ ದುಷ್ಟ ಆತ್ಮಗಳನ್ನು ಓಡಿಸಲು ೧೪ ದೀಪಗಳನ್ನು ಮನೆಯ ಸುತ್ತಲೂ ಇರಿಸಲಾಗುತ್ತದೆ ಎಂದು ನಂಬಲಾಗಿದೆ. ಪ್ರತಿಯೊಂದು ಕತ್ತಲೆಯ ಮೂಲೆಯನ್ನು ಬೆಳಕಿನಿಂದ ಪ್ರಕಾಶಿಸಲಾಗುತ್ತದೆ.


[೪] ನರಕ ಚತುರ್ದಶಿ ದಿನದಂದು ಅಭ್ಯಂಗ ಸ್ನಾನವು ವ್ಯಕ್ತಿಯ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅಭ್ಯಂಗ ಸ್ನಾನವನ್ನು ಚಂದ್ರನ ಉಪಸ್ಥಿತಿಯಲ್ಲಿ, ಚತುರ್ದಶಿ ತಿಥಿಯು ಚಾಲ್ತಿಯಲ್ಲಿರುವಾಗ ಸೂರ್ಯೋದಯಕ್ಕೆ ಮುಂಚಿತವಾಗಿ ಮಾಡಲಾಗುತ್ತದೆ. ಈ ಸ್ನಾನವನ್ನು ಎಳ್ಳಿನ ಎಣ್ಣೆಯನ್ನು ಬಳಸಿ ಮಾಡಲಾಗುತ್ತದೆ. ಹೀಗೆ ಮಾಡಿದ ಸ್ನಾನವು ವ್ಯಕ್ತಿಗಳನ್ನು ಬಡತನ, ಅನಿರೀಕ್ಷಿತ ಘಟನೆಗಳು, ದುರದೃಷ್ಟ ಇತ್ಯಾದಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ  ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ನರಕ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ ಆದರೆ ಉಳಿದ ಭಾರತವು ಅದನ್ನು ಮರುದಿನ ಅಮಾವಾಸ್ಯೆಯಂದು ಆಚರಿಸುತ್ತದೆ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಇದನ್ನು ದೀಪಾವಳಿ ಭೋಗಿ ಎಂದೂ ಕರೆಯುತ್ತಾರೆ. ಜನರು ಮೊದಲೇ ಎದ್ದು ಎಣ್ಣೆ ಸ್ನಾನ, ಪೂಜೆ, ಹಬ್ಬಗಳನ್ನು ಆಚರಿಸುತ್ತಾರೆ. ಸಾಮಾನ್ಯವಾಗಿ ದೀಪಾವಳಿಯಂದು ಪಟಾಕಿ ಸಿಡಿಸಲಾಗುತ್ತದೆ. ಕೆಲವು ತಮಿಳು ಮನೆಗಳಲ್ಲಿ "ನೊಂಬು" ಆಚರಿಸುತ್ತಾರೆ ಮತ್ತು ಈ ದಿನ ಲಕ್ಷ್ಮಿ ಪೂಜೆ ಮಾಡುತ್ತಾರೆ. ಕರ್ನಾಟಕದಲ್ಲಿ ದೀಪಾವಳಿ ಹಬ್ಬವು ಇಂದಿನಿಂದ ಪ್ರಾರಂಭವಾಗುತ್ತದೆ ಅಂದರೆ ನರಕ ಚತುರ್ದಶಿ ಮತ್ತು ಬಲಿ ಪಾಡ್ಯಮಿಯವರೆಗೆ ವಿಸ್ತರಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Ray, Dipti (2007). Prataparudradeva, the Last Great Suryavamshi King of Orissa (A.D. 1497 to A.D. 1540). Northern Book Centre. p. 89. ISBN 978-8172111953. Retrieved 22 October 2014.
  2. "Narak Chaturdashi 2017". Amar Ujala. Retrieved 18 October 2017.
  3. Sakhardande, Prajal. "Diwali and the Narkasur Battle". The Navahind times. Retrieved 1 November 2013.
  4. "Narak Chaturdashi: Why Kali Chaudas or Narak Chaturdashi Puja So Important!". Vamtantra (in ಅಮೆರಿಕನ್ ಇಂಗ್ಲಿಷ್). Retrieved 2019-10-06.