ಜಮ್ಶೆಡ್‌ಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಮ್ಶೆಡ್‌ಪುರ
Jamshedpur(TataNagar)
Steel City/Green City
CITY
Population
 (2001)
 • Total೧೧,೩೪,೭೮೮
Websitewww.jamshedpur.nic.in

ಜಮ್ಶೆಡ್‌ಪುರ pronunciation  (ದೇವನಾಗರಿಯಲ್ಲಿ जमशेदपुर ) 1.1 ದಶಲಕ್ಷ ಜನಸಂಖ್ಯೆ (2001ರ ಜನಗಣತಿಯ ಪ್ರಕಾರ) ಹೊಂದಿರುವ ಜಾರ್ಖಂಡ್ ರಾಜ್ಯದಲ್ಲಿರುವ (ಹಿಂದೆ ಬಿಹಾರ್‌ ರಾಜ್ಯ) ಅತೀದೊಡ್ಡ ಪಟ್ಟಣ. ದಿವಂಗತ ಜಮ್ಶೆಡ್‌ಜಿ ನಸರ್ವಾನ್‌ಜಿ ಟಾಟಾರವರಿಂದ ಸ್ಥಾಪಿಸಲ್ಪಟ್ಟ ಜಮ್ಶೆಡ್‌ಪುರವು ಉತ್ತಮ ರೀತಿಯಲ್ಲಿ-ಯೋಜಿಸಿದ ಭಾರತದ ಮೊದಲ ಕೈಗಾರಿಕಾ ನಗರ, ಇದು 35 ದಶಲಕ್ಷಕ್ಕಿಂತಲೂ ಹೆಚ್ಚಿನ ನಗರಗಳಲ್ಲಿ 28ನೇ ಸ್ಥಾನದಲ್ಲಿದೆ ಹಾಗೂ 2001ರ ಜನಗಣತಿಯ ಪ್ರಕಾರ ಭಾರತದಲ್ಲಿ ನಗರೀಕರಣದಿಂದ ಒಟ್ಟುಗೂಡಿಸಿದ 32ನೇ ನಗರ ಸಂಘಟನೆಯಾಗಿದೆ. ಇದು ಜಾರ್ಖಂಡ್‌ಪೂರ್ವ ಸಿಂಗ್ಬುಮ್ ಜಿಲ್ಲೆಯಲ್ಲಿ ಛೋಟಾ ನಾಗ್ಪುರ್ ಪ್ರಸ್ಥಭೂಮಿಯಲ್ಲಿದೆ. ಜಿಲ್ಲಾ ಕೇಂದ್ರ ಕಾರ್ಯಾಲಯವಾಗಿರುವ ಈ ನಗರ ಸುಂದರವಾದ ದಾಲ್ಮಾಬೆಟ್ಟಗಳಿಂದ ಆವರಿಸಲ್ಪಟ್ಟಿದೆ. ನಗರದ ಉತ್ತರ ಮತ್ತು ಪಶ್ಚಿಮಕ್ಕೆ ಅನುಕ್ರಮವಾಗಿ ಸುಬರ್ಣರೇಖಾ ಮತ್ತು ಖಾರ್ಕೈ ನದಿಗಳು, ಇದರ ಎಲ್ಲೆಯಾಗಿವೆ.

ಹೆಸರು[ಬದಲಾಯಿಸಿ]

ನಗರದ ಸ್ಥಾಪಕರಾದ ಜಮ್ಶೆಡ್‌ಜಿ ನಾಶರ್ವಾನ್‌ಜಿ ಟಾಟಾರವರ ಗೌರವಾರ್ಥ 1919ರಲ್ಲಿ ಲಾರ್ಡ್ ಕೆಮ್ಸ್‌ಫೋರ್ಡ್ ಜಮ್ಶೆಡ್‌ಪುರ ಎಂದು ಈ ಪ್ರದೇಶಕ್ಕೆ ಹೆಸರು ನೀಡಿದನು. ಮಾರ್ಚ್ 3ರ ಅವರ ಜನ್ಮದಿನವನ್ನು ಸ್ಥಾಪಕರ ದಿನ ಎಂದು ಆಚರಿಸಲಾಗುತ್ತದೆ. J. N. ಟಾಟಾ, ಅವರ ಪುತ್ರ ದೋರಾಬ್‌ಜಿ ಟಾಟಾಗೆ ಬರೆದ ಪತ್ರವೊಂದರಲ್ಲಿ ಈ ಪ್ರದೇಶದಲ್ಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸುವ ಅತ್ಯುತ್ತಮ ನಗರವನ್ನು ಇಲ್ಲಿ ಕಟ್ಟುವ ಬಗೆಗಿನ ತಮ್ಮ ಕನಸಿನ ಕಲ್ಪನೆಯ ಬಗ್ಗೆ ಬರೆದರು. ಸ್ಥಾಪಕರ ದಿನದಂದು225-acre (0.91 km2) ಜುಬಿಲಿ ಪಾರ್ಕ್ಅನ್ನು ಒಂದು ವಾರದವರೆಗೆ ಥಳಥಳಿಸುವ ಬೆಳಕಿನಿಂದ ದೀಪಾಲಂಕಾರ ಮಾಡಿರಲಾಗುತ್ತದೆ.ರಾಷ್ಟ್ರದ ಎಲ್ಲಾ ಭಾಗಗಳಿಂದ ಜನರನ್ನು ಆಕರ್ಷಿಸುವ ರೀತಿಯಲ್ಲಿ ಇದನ್ನು ಅಲಂಕರಿಸಲಾಗುತ್ತದೆ.

ನಗರವು ಹಲವಾರು ಪ್ರದೇಶಗಳಿಗೆ ಟಾಟಾ ಎಂಬ ಉಪನಾಮವನ್ನು ಹೊಂದಿದೆ.'ಉಕ್ಕಿನ ನಗರ' (TATA ಉಕ್ಕಿ‌ನ 'ಗ್ರೀನ್ ಸಿಟಿ - ಕ್ಲೀನ್ ಸಿಟಿ - ಸ್ಟೀಲ್ ಸಿಟಿ' ಚಳವಳಿಯ ಸಂದರ್ಭದಲ್ಲಿ ಈ ಉಲ್ಲೇಖ ಬಂದಿದೆ), ರೈಲು ನಿಲ್ದಾಣದ ನಂತರ 'ಟಾಟಾನಗರ' ಅಥವಾ ನಗರದಲ್ಲಿರುವ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿರುವ ಪ್ರಮುಖ ಟಾಟಾ ಕಂಪನಿಗಳಿಗೆ ಮಾನ್ಯತೆ ಕೊಟ್ಟು ಬರಿಯ 'ಟಾಟಾ' ಮೊದಲಾದ ಹಲವಾರು ಉಪನಾಮಗಳನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

ಇಪ್ಪತ್ತನೇ ಶತಮಾನದ ಸಂದರ್ಭದಲ್ಲಿ ಟಾಟಾರವರು ಭಾರತದಲ್ಲಿ ಉಕ್ಕಿನ ಸ್ಥಾವರವೊಂದನ್ನು ನಿರ್ಮಿಸಲು ಬಯಸಿದರು. ಜಮ್ಶೆಡ್‌ಜಿ ಟಾಟಾ ಪಿಟ್ಟುಸ್‌ಬರ್ಘ್‌ಗೆ ಹೋಗಿ ಭೂವಿಜ್ಞಾನಿ ಚಾರ್ಲ್ಸ್ ಪೇಜ್ ಪೆರಿನ್ ಅವರನ್ನು ಭೇಟಿ ಮಾಡಿ ಅವರ ಕನಸಿನ -ಭಾರತದ ಮೊದಲ- ಉಕ್ಕಿನ ಸ್ಥಾವರವನ್ನು ಕಟ್ಟಲು ಸ್ಥಳ ಹುಡುಕುವುದಕ್ಕಾಗಿ ಸಹಾಯ ಕೇಳಿದರು. ಸ್ಥಾವರಕ್ಕೆ ಅವಶ್ಯಕ ಕಬ್ಬಿಣ, ಕಲ್ಲಿದ್ದಲು, ಸುಣ್ಣಕಲ್ಲು ಮತ್ತು ನೀರು ಮೊದಲಾದ ಕಚ್ಚಾವಸ್ತುಗಳು ಸಮೃದ್ಧವಾಗಿರುವ ಜಾಗದ ಹುಡುಕಾಟವು 1904ರ ಎಪ್ರಿಲ್‌ನಲ್ಲಿ ಇಂದಿನ ಮಧ್ಯ ಪ್ರದೇಶದಲ್ಲಿ ಆರಂಭವಾಯಿತು.

C. M. ವೆಲ್ಡ್ , ದೋರಬ್ ಟಾಟಾ ಮತ್ತು ಶಾಪುರ್ಜಿ ಸಕ್ಲಾತ್ವಾಲಾ ಮೊದಲಾದ ಅನ್ವೇಷಕರು ವಿಸ್ತಾರವಾದ ಕಾಡುಮೇಡುಗಳಿಂದ ಬೆಟ್ಟಪ್ರದೇಶಗಳಿಂದ ಕೂಡಿದ ಅಸುರಕ್ಷಿತ ನಿರಾಶ್ರಯ ಭೂಪ್ರದೇಶದಲ್ಲಿ ಸೂಕ್ತ ಜಾಗಕ್ಕಾಗಿ, ಇಂತಹ ಕಠಿಣ, ಶ್ರಮದಾಯಕ ಕೆಲಸಕ್ಕೆ ಸುಮಾರು ಮ‌ೂರು ವರ್ಷ ತೆಗೆದುಕೊಂಡರು. ಒಂದು ದಿನ, ಅವರು ಆಕಸ್ಮಿಕವಾಗಿ ದಟ್ಟ ಅರಣ್ಯವಿರುವ ಛೋಟಾ ನಾಗ್ಪುರ್ ಪ್ರಸ್ಥಭೂಮಿ ಚಾಚಿರುವ ಹಾಗೂ ಸುಬರ್ಣರೇಖಾ ಮತ್ತು ಖಾರ್ಕೈ ನದಿಗಳ ಸಂಗಮ ಸ್ಥಾನದ ಹತ್ತಿರ ಸಕ್ಚಿ ಎಂಬ ಒಂದು ಹಳ್ಳಿ (ಈಗ ಟಾಟಾನಗರದ ಭಾಗವಾಗಿದೆ)ಯನ್ನು ಕಂಡರು. ಅದನ್ನೇ ಅತ್ಯುತ್ತಮ ಆಯ್ಕೆ ಎಂದು ಭಾವಿಸಿ, ಸ್ಥಾವರದ ಸ್ಥಾಪನೆಗೆ ಜಾಗವನ್ನು ಆರಿಸಿದರು.

ಆರಂಭಿಕ ಅಭಿವೃದ್ಧಿ ಕೆಲಸಗಳು ಲಾರೆನ್ಸ್ ಸಾಮ್ಯುಯೆಲ್ ಡ್ಯುರೆಲ್ ಒಡೆತನದ ಸಿವಿಲ್ ಎಂಜಿನಿಯರಿಂಗ್ ಸಂಸ್ಥೆ ಡ್ಯುರೆಲ್ & Co, ಪ್ರಕೃತಿಶಾಸ್ತ್ರಜ್ಞರ ಪಿತಾಮಹ ಗೆರಾಲ್ಡ್ ಡ್ಯುರೆಲ್ (ಇವನು ಇಲ್ಲೇ ಜನಿಸಿದುದು) ಮತ್ತು ಕಾದಂಬರಿಕಾರ ಲಾರೆನ್ಸ್ ಡ್ಯುರೆಲ್ ಮೊದಲಾದವರಿಂದ ನೆರವೇರಲ್ಪಟ್ಟವು. ಟಾಟಾ ಕುಟುಂಬದ ನಿರ್ದೇಶನದಂತೆ 1920ರಲ್ಲಿ ಡ್ಯುರೆಲ್ ತಗಡಿಗೆ ತವರ ಲೇಪನ ಮಾಡುವ ಒಂದು ಕಾರ್ಖಾನೆ, ಒಂದು ಇಟ್ಟಿಗೆ-ತಯಾರಿಸುವ ಕಾರ್ಖಾನೆ, ಕಛೇರಿ ಕಟ್ಟಡ, ಆಸ್ಪತ್ರೆ ಹಾಗೂ 400 ಕಾರ್ಮಿಕರಿಗಾಗಿ ವಸತಿಯನ್ನು ನಿರ್ಮಿಸಿದ.

ಜಮ್ಶೆಡ್‌ಜಿಯವರ ನಗರದ ಯೋಜನೆಯ ಕನಸು ಸ್ಫಷ್ಟವಾಗಿ ಕೈಗೂಡಿತು. ಕಾರ್ಮಿಕರ ಗುಡಿಸಲುವಾಸದ ಬಗ್ಗೆ ಅವರು ಹೆಚ್ಚು ಚಿಂತಿತರಾದರು. ನಗರವೊಂದಕ್ಕೆ ಅಗತ್ಯವಿರುವ ಎಲ್ಲಾ ಸುಖಸೌಕರ್ಯ ಮತ್ತು ಅನುಕೂಲಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಪಡಿಸಿದರು. ಅದರ ಫಲವಾಗಿ, ನಗರದಲ್ಲಿನ ಹೆಚ್ಚಿನ ಪ್ರದೇಶಗಳು ಉತ್ತಮ ಯೋಜನೆಯಂತೆ ಅಚ್ಚುಕಟ್ಟಾಗಿ ರೂಪಗೊಂಡವು ಹಾಗೂ ಜುಬಿಲಿ ಪಾರ್ಕ್‌ನಂತಹ ಉತ್ತಮ ಸಾರ್ವಜನಿಕ ವಿರಾಮ ಸ್ಥಳಗಳ ನಿರ್ಮಾಣವಾಯಿತು.

ಈ ಸುಂದರ ನಗರವನ್ನು ನಿರ್ಮಿಸುವಾಗ ಜಮ್ಶೆಡ್‌ಜಿ ಟಾಟಾ ಹೀಗೆ ಹೇಳಿದರು ...

"ಬೀದಿ ಬದಿಗಳಲ್ಲಿ ನೆರಳು ನೀಡುವ, ವೇಗವಾಗಿ ಬೆಳೆಯುವ ತಳಿಯ ಮರಗಳಿರುವ ಅಗಲವಾದ ರಸ್ತೆಗಳಿರುವಂತೆ ನೋಡಿಕೊಳ್ಳಿ. ಹುಲ್ಲುಹಾಸಿನ ವಿಹಾರ ಸ್ಥಳ ಮತ್ತು ಉದ್ಯಾನಗಳಿಗೆ ಸಾಕಷ್ಟು ಸ್ಥಳಾವಕಾಶ ಇರುವಂತೆ ಖಚಿತಪಡಿಸಿಕೊಳ್ಳಿ; ಫುಟ್ಬಾಲ್, ಹಾಕಿ ಮತ್ತು ಉದ್ಯಾನವನಗಳಿಗೆ ವಿಶಾಲ ಪ್ರದೇಶಗಳನ್ನು ಉಳಿಸಿಕೊಳ್ಳಿ; ಹಿಂದೂ ದೇವಸ್ಥಾನ, ಮಹಮ್ಮದರ ಮಸೀದಿ ಮತ್ತು ಕ್ರಿಶ್ಚಿಯನ್ನರ ಚರ್ಚ್‌ಗಳಿಗೆ ಜಾಗಗಳನ್ನು ಮೀಸಲಿರಿಸಿ."

ಇಂದು ನಗರ ಕಾಣಿಸಿಕೊಳ್ಳುವ ರೀತಿಯು ಅವರ ಒಂದು ಕನಸಿನ ಯೋಜನೆಯ ಸಾಕ್ಷಿಭೂತ ಪುರಾವೆಯಾಗಿದೆ. . ಭಾರತದಲ್ಲಿ ಪುರಸಭೆಯ ಆಡಳಿತವಿಲ್ಲದ ಏಕೈಕ ನಗರ ಜಮ್ಶೆಡ್‌ಪುರ. ಅದರ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಟಾಟಾ ಉಕ್ಕಿನ ಸಂಸ್ಥೆಯು ವಹಿಸಿಕೊಂಡಿದೆ, ಇದು ಪ್ರಪಂಚದಲ್ಲೇ ಅನನ್ಯವಾದ ವ್ಯವಸ್ಥೆಯಾಗಿದೆ.

ಇಸವಿ 1980ರ ಉತ್ತರಾರ್ಧದಲ್ಲಿ, ರಾಜ್ಯ ಸರಕಾರವು ಟಾಟಾದ ಜಮ್ಶೆಡ್‌ಪುರ ನಿರ್ವಹಣೆಯ ಕಾರ್ಯವನ್ನು ಕೊನೆಗೊಳಿಸಿ ನಗರವನ್ನು ಪುರಸಭೆಯಡಿಯಲ್ಲಿ ತರುವಂತೆ ಮಾಡಲು ಒಂದು ಕಾನೂನನ್ನು ಪ್ರಸ್ತಾಪಿಸಿದಾಗ, ಸ್ಥಳೀಯ ಜನರು ಪ್ರತಿಭಟಿಸಿ ಸರಕಾರದ ಈ ಪ್ರಸ್ತಾಪವನ್ನು ವಿಫಲಗೊಳಿಸಿದರು. ನಂತರ 2005ರಲ್ಲಿ ಅಂತಹುದೇ ಇನ್ನೊಂದು ಪ್ರಸ್ತಾಪವು ಪ್ರಭಾವಿ ರಾಜಕಾರಣಿಗಳಿಂದ ಮತ್ತೊಮ್ಮೆ ಸೂಚಿಸಲ್ಪಟ್ಟಿತು. ಕಾರ್ಮಿಕ ವರ್ಗವು ಇದರ ಮುಖ್ಯವಾದ ಗುರಿಯಾಗಿತ್ತು. ಇವರು ಬಹುಸಂಖ್ಯೆಯಲ್ಲಿ ಸರಕಾರದ ಪರವಹಿಸಿ, ಪೂರ್ವ-ಸಿಂಗ್ಬುಮ್ ಜಿಲ್ಲಾಧಿಕಾರಿ ಕಛೇರಿ ಹೊರಗೆ ಪ್ರತಿಭಟನಾ ಸಭೆ ಸೇರಿದರು. ಆದರೂ ಪುರಸಭೆ ಮಾಡಬೇಕೆನ್ನುವವರ ಉದ್ಧೇಶ ನೆರವೇರಲಿಲ್ಲ ಹಾಗೂ ಜಮ್ಶೆಡ್‌ಪುರ ಇಂದಿನವರೆಗೆ ಪುರಸಭೆಯಿಲ್ಲದೆಯೇ ಉಳಿದಿದೆ ಮತ್ತು ಉತ್ತಮ ಮಟ್ಟದ ನಿರ್ವಹಣಾ ಕಾರ್ಯಗಳೂ ಮುಂದುವರಿಯುತ್ತಿವೆ.

ಆರ್ಥಿಕತೆ[ಬದಲಾಯಿಸಿ]

ಭಾರತದ ಮೊದಲ ಖಾಸಗಿ ಕಬ್ಬಿಣ ಮತ್ತು ಉಕ್ಕಿನ ಕಂಪನಿ (ಪ್ರಪಂಚದಲ್ಲಿ ಆರನೇ ಅತೀದೊಡ್ಡ ಕಂಪನಿ) 'ಟಾಟಾ ಸ್ಟೀಲ್' ನೆಲೆಗೊಂಡಿರುವ ಜಮ್ಶೆಡ್‌ಪುರವನ್ನು ಸಾಮಾನ್ಯವಾಗಿ ಕಂಪನಿಯ ಪ್ರಭಾವೀ ಅಸ್ತಿತ್ವದಿಂದಾಗಿ "ಟಾಟಾ ನಗರ" ಎಂದು ಕರೆಯುತ್ತಾರೆ. ಜಮ್ಶೆಡ್‌ಪುರದ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಕಬ್ಬಿಣದ ಅದಿರು, ಕಲ್ಲಿದ್ದಲು, ಮ್ಯಾಂಗನೀಸ್ ಬಾಕ್ಸೈಟ್ ಮತ್ತು ಸುಣ್ಣದ ಕಲ್ಲು ಮೊದಲಾದ ಖನಿಜಗಳು ಹೇರಳವಾಗಿ ಸಿಗುತ್ತವೆ.

ಇದೊಂದು ಆಧುನಿಕ ಕೈಗಾರಿಕಾ ನಗರ; ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಂತಹ ಪ್ರಮುಖ ಕೈಗಾರಿಕೆಗಳು, ಟ್ರಕ್ಕು ಉತ್ಪಾದನೆ, ತವರ ಲೇಪಿತ ತಗಡಿನ ತಯಾರಿಕೆ, ಸಿಮೆಂಟ್ ಮತ್ತಿತರ ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳೂ ಸೇರಿಕೊಂಡಿವೆ. ಅದರಲ್ಲಿ ಅತೀದೊಡ್ಡ ಕಾರ್ಖಾನೆ ಟಾಟಾ ಸ್ಟೀಲ್ (ಹಿಂದಿನ ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಂಪನಿ ಅಥವಾ TISCO), ಇದು ಹೆಚ್ಚುಕಡಿಮೆ ನಗರದ ಕೇಂದ್ರಭಾಗದಲ್ಲಿದೆ. ಟಾಟಾ ಸ್ಟೀಲ್ ಭಾರತದಲ್ಲಿ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಬೃಹತ್ ಸ್ಥಾವರ, ಅಲ್ಲದೆ ಇದು ಬಹುಹಳೆಯದು. ಉತ್ಪಾದನೆಯ ಸಾಮರ್ಥ್ಯವನ್ನು ಪ್ರತಿ ವರ್ಷಕ್ಕೆ 7 ದಶಲಕ್ಷ ಟನ್‌ಗಳಿಂದ 10 ದಶಲಕ್ಷಕ್ಕೆ ಹೆಚ್ಚಿಸಲು ಜಮ್ಶೆಡ್‌ಪುರದಲ್ಲಿರುವ ಟಾಟಾ ಸ್ಟೀಲ್‌ನ ವಿಸ್ತರಣೆಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಪ್ರಪಂಚದಲ್ಲೇ 10 ದಶಲಕ್ಷ ಟನ್‌ನಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿರುವ ಏಕೈಕ ಮತ್ತು ಮೊದಲ ಸ್ಥಾವರವಾಗುತ್ತದೆ.

ಉಕ್ಕಿನ ಸ್ಥಾವರವು ಸಾಕಷ್ಟು ವಿಶಾಲವಾಗಿದೆ ಹಾಗೂ ಜಮ್ಶೆಡ್‌ಪುರ ಪ್ರದೇಶದ ಒಟ್ಟು ವ್ಯಾಪ್ತಿಯ ನಾಲ್ಕನೇ ಒಂದರಷ್ಟು ಜಾಗವನ್ನು ಆವರಿಸುತ್ತದೆ, ಒಳನಾಡಿನಲ್ಲಿ ಎರಡು ನೀರಿನ ಸರೋವರಗಳನ್ನು ಹೊಂದಿದೆ.

ನಗರದಲ್ಲಿರುವ ಮತ್ತೊಂದು ಪ್ರಮುಖ ಕಾರ್ಖಾನೆಯೆಂದರೆ - ಟಾಟಾ ಮೋಟಾರ್ಸ್, ಇದು ದೊಡ್ಡ ವಾಹನಗಳನ್ನು ಮತ್ತು ಭಾರೀ ಪ್ರಮಾಣದ ನಿರ್ಮಾಣ/ಮಣ್ಣಿನ ಕೆಲಸ ಮಾಡುವ ಸಾಧನ ಸಾಮಗ್ರಿಗಳನ್ನು ತಯಾರಿಸುತ್ತದೆ. ಟಾಟಾ ಮೋಟಾರ್ಸ್ ಹಿಂದೆ ರೈಲು ಲೋಕೊಮೋಟಿವ್‌ಗಳನ್ನು (ಟ್ರೇನುಗಳನ್ನು ಎಳೆಯಲು ಬಳಸುವ ಎಂಜಿನು) ತಯಾರಿಸಿದರಿಂದ ಟಾಟಾ ಎಂಜಿನಿಯರಿಂಗ್ ಆಂಡ್ ಲೋಕೊಮೋಟಿವ್ ಕಂಪನಿ (ಟೆಲ್ಕೊ) ಎಂದು ಕರೆಯುತ್ತಿದ್ದರು.

ಟಾಟಾ ಟಿನ್‌ಪ್ಲೇಟ್ (ಹಿಂದಿನ ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್) ತವರ ಲೇಪಿತ ತಗಡುಗಳನ್ನು ಉತ್ಪಾದಿಸುತ್ತದೆ. ಗೋಲ್ಮುರಿಯಲ್ಲಿ ನಿರ್ಮಾಣಗೊಂಡ ಇದು ಮ‌ೂಲತಃ ಬ್ರಿಟಿಷರ ಕಂಪನಿ, ನಂತರ ಟಾಟಾರವರು ಸ್ವಾಧೀನಪಡಿಸಿಕೊಂಡರು. ಟಾಟಾ ಮೋಟಾರ್ಸ್‌ನ ಹತ್ತಿರವಿರುವ ಇನ್ನೊಂದು ಕಾರ್ಖಾನೆ ಇಂಡಿಯನ್ ಸ್ಟೀಲ್ ಆಂಡ್ ವೈರ್ ಪ್ರೋಡಕ್ಟ್ಸ್(ISWP). ISWP ಐದಕ್ಕಿಂತಲೂ ಹೆಚ್ಚು ವರ್ಷದ ತರುವಾಯ ಎಲ್ಲಾ ಕಾನೂನು ಅಡ್ಡಿ ಮತ್ತು BFIR-ಸಂಬಂಧಿತ ಅಡಚಣೆಗಳಿಂದ ಪಾರಾದ ನಂತರ ಟಾಟಾ ಸ್ಟೀಲ್‌ನಿಂದ ಪುನರಾರಂಭವಾಯಿತು. ಟಾಟಾ ಸ್ಟೀಲ್ ಒಡೆತನ ಪಡೆದುಕೊಂಡ ನಂತರ ISWP 2004ರ ಜನವರಿ 2ರಲ್ಲಿ ಅದರ ತಂತಿ ಕಾರ್ಖಾನೆಯಲ್ಲಿ ಉತ್ಪಾದನೆ ಕಾರ್ಯವನ್ನು ಮತ್ತೆ ಶುರುಮಾಡಿಕೊಂಡಿತು.

ಬೃಹತ್ ಸಾಮಗ್ರಿ ನಿರ್ವಹಣೆ ಮತ್ತು ಸಂಸ್ಕರಣೆ ಮಾಡುವ ಯಂತ್ರಗಳನ್ನು ಮತ್ತು ಇತರ ಎಂಜಿನಿಯರಿಂಗ್ ಸರಕುಗಳನ್ನು ಉತ್ಪಾದಿಸುವ TRF ಲಿಮಿಟೆಡ್ (ಟಾಟಾ ರಾಬಿನ್ಸ್ ಫ್ರೇಸರ್)ನಂತಹ ಹಲವಾರು ಹೆಸರಾಂತ ಕೈಗಾರಿಕೆಗಳು ಜಮ್ಶೆಡ್‌ಪುರದಲ್ಲಿವೆ. ಟಾಟಾ ಸ್ಟೀಲ್‌ನ ಅಂಗಸಂಸ್ಥೆ ಅಗ್ರಿಕೊ ಕೃಷಿ ಸಲಕರಣೆಗಳನ್ನು ತಯಾರಿಸುತ್ತದೆ. ಟಾಟಾ ಯೋದೊಗಾವ ಲಿಮಿಟೆಡ್ ರೋಲಿಂಗ್ ಕಾರ್ಖಾನೆಗಳಿಗೆ ತಂತಿ ಉರಳೆ ಮತ್ತು ಅಚ್ಚುಗಳನ್ನು ಉತ್ಪಾದಿಸುತ್ತದೆ. ಪ್ರಾಕ್ಸೈರ್ ಆಂಡ್ ಬ್ರಿಟಿಷ್ ಆಕ್ಸಿಜನ್ ಕಂಪನಿ (BOC) ದ್ರವೀಕರಿಸಿದ ಆಮ್ಲಜನಕ, ಜಲಜನಕ ಮತ್ತು ಇತರ ಅನಿಲಗಳನ್ನು ಉತ್ಪಾದನೆ ಮಾಡುತ್ತವೆ, ಇವೆರಡು ಸ್ಥಾವರಗಳೂ ಉಕ್ಕಿನ ಕಾರ್ಖಾನೆಯ ಸನಿಹದಲ್ಲೇ ಇವೆ.

ಹಿಂದೆ ಟಾಟಾ ಸಿಮೆಂಟ್ ಎಂದು ಕರೆಯುತ್ತಿದ್ದ ಲಫಾರ್ಜ್ ಸಿಮೆಂಟ್ ಟಾಟಾ ಮೋಟಾರ್ಸ್‌ಗೆ ಹತ್ತಿರದಲ್ಲಿದೆ. ಎತ್ತರವಾದ ಹೊಗೆಕೊಳವೆಯನ್ನು ಹೊಂದಿರುವ,ಕಲ್ಲಿದ್ದಲನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ವಿದ್ಯುತ್ ಕೇಂದ್ರ ಟಾಟಾ ಪವರ್‌, ನಗರದ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ. ಇದು ಜಮ್ಶೆಡ್‌ಪುರಕ್ಕೆ ರೈಲಿನಿಂದ ಬರುವಾಗ ಕಾಣಸಿಗುತ್ತದೆ.

ABB, TCS, L&T, S&L, SMS, ಡೇನಿಯೆಲ್ಲೆ, ಇಟ್ಲಾನಿಯಂ ಪೈಂಟಿ ಮೊದಲಾದ ಕಂಪನಿಗಳಿರುವುದು ನಗರದ ಜನರಿಗೆ ವಿಶೇಷ ಸವಲತ್ತೆನಿಸಿದೆ.

ಹೆಚ್ಚಿನ ಪ್ರಮಾಣದ (ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು)ಸ್ಮಾಲ್ ಮೀಡಿಯಂ ಎಂಟರ್‌ಪ್ರೈಸ್‌ಗಳು (SME) 'ಆದಿತ್ಯಾಪುರ ಕೈಗಾರಿಕಾ ಎಸ್ಟೇಟಿ'ನಲ್ಲಿವೆ, ಇದು NOIDAಕ್ಕಿಂತ ಮೊದಲು ಏಷ್ಯಾದ ಅತೀದೊಡ್ಡ ಕೈಗಾರಿಕಾ ಕೇಂದ್ರವಾಗಿತ್ತು.

ಆಡಳಿತ ನಿರ್ವಹಣೆ[ಬದಲಾಯಿಸಿ]

ನಗರದ ಎಲ್ಲಾ ಪ್ರದೇಶಗಳಲ್ಲಿ 24 ಗಂಟೆಗಳೂ ವಿದ್ಯುತ್ ಮತ್ತು ನೀರು ಸರಬರಾಜು ಇರುವುದರೊಂದಿಗೆ (ಭಾರತದ ಪಟ್ಟಣಗಳಲ್ಲಿ ಅಸಮಾನ್ಯವಾದುದು) ಇಲ್ಲಿನ ಜೀವನಮಟ್ಟವು ತುಂಬಾ ತೃಪ್ತಿದಾಯಕವಾದುದು. ನೀರಿನ ಗುಣಮಟ್ಟದ ಬಗೆಗಿನ ಅಂತಾರಾಷ್ಟ್ರೀಯ ಹೇಳಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ ಹಾಗೂ ಪುರಸಭೆಯು ಒಂದು ಸಂಸ್ಥೆಯಿಂದ ನಿರ್ವಹಿಸಲ್ಪಡುವ ಏಕೈಕ ನಗರ ಇದಾಗಿದೆ. ರಸ್ತೆಗಳ ಗುಣಮಟ್ಟವು ಇತರ ನಗರಗಳಿಗಿಂತ ಇದನ್ನು ಪ್ರತ್ಯೇಕಿಸುವ ರೀತಿಯಲ್ಲಿ ಅತ್ಯುತ್ತಮವಾಗಿವೆ. ಈ ಎಲ್ಲಾ ಸೌಕರ್ಯಗಳನ್ನು ಜಮ್ಶೆಡ್‌ಪುರ್ ಯುಟಿಲಿಟೀಸ್ ಆಂಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (JUSCO) ನಿರ್ವಹಿಸುತ್ತದೆ, ಇದು ಟಾಟಾ ಸ್ಟೀಲ್ ಒಡೆತನದ ‌ 100% ಸ್ವಂತ ಅಂಗಸಂಸ್ಥೆಯಾಗಿದೆ.

JUSCOದ ಆಡಳಿತವಿರದ ಪ್ರದೇಶಗಳು ಭಾರತದ ಇತರ ನಗರಗಳಲ್ಲಿರುವಂತೆ ಅನಿಯಮಿತ ವಿದ್ಯುತ್ ಕಡಿತ, ಕಳಪೆ ರಸ್ತೆಗಳು ಮತ್ತು ಸರಕಾರದ ನಿರಾಸಕ್ತಿ ಮೊದಲಾದವುಗಳನ್ನು ಅನುಭವಿಸುತ್ತವೆ. ಜಮ್ಶೆಡ್‌ಪುರವು ಭಾರತದ ಹಚ್ಚಹಸಿರಿನ ನಗರಗಳಲ್ಲಿ ಒಂದಾಗಿದೆ. ಕ್ರಿಯಾಶೀಲ ಅರಣ್ಯದ ಪುನರಾಭಿವೃದ್ಧಿ ಮತ್ತು ಸಸ್ಯ ನೆಡುವ ಚಟುವಟಿಕೆಗಳು ಹವಾಮಾನ ಮತ್ತು ಉತ್ತಮ ಗಾಳಿ ಸೇವನೆಗೆ, ಗುಣಮಟ್ಟ ಕಾಪಾಡುವಲ್ಲಿ ಸಹಾಯ ಮಾಡುತ್ತವೆ, ಇಲ್ಲದಿದ್ದರೆ ಅತೀ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳಿರುವುದರಿಂದ ಪರಿಸರ ಕಲುಷಿತಗೊಳ್ಳುವ ಸಾಧ್ಯತೆ ಇದೆ. ಜಮ್ಶೆಡ್‌ಪುರ ಸ್ವಚ್ಛಗೊಳಿಸುವ ಮತ್ತು ಹಸಿರಾಗಿಸುವ ಟಾಟಾ ಸ್ಟೀಲ್‌ನ ಬದ್ಧತೆಗೆ ಮತ್ತಷ್ಟು ಮಹತ್ವ ನೀಡಲು ಪ್ರತೀ ವರ್ಷ ಹೆಚ್ಚಿನ ಮತ್ತು ಪ್ರೊತ್ಸಾಹಕರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಗತಿಯಲ್ಲಿರುವ ಸಸ್ಯ ನೆಡುವ ಕಾರ್ಯಕ್ರಮವು 'ಗ್ರೀನ್ ಮಿಲೆನಿಯಮ್' ಕೌಂಟ್‌ಡೌನ್‌ನ ಮ‌ೂಲಕ ಗಮನಾರ್ಹ ಮೆಚ್ಚುಗೆ ಪಡೆದುಕೊಂಡಿದೆ. ಈ ಸಹಸ್ರಮಾನದಲ್ಲಿ ಇಂತಹ ಅನನ್ಯ ಕಾರ್ಯವು ಕಂಪನಿಯ ವ್ಯಾಪ್ತಿಯಲ್ಲಿ ಒಂದೂವರೆ ದಶಲಕ್ಷದಷ್ಟು ಹೆಚ್ಚುವರಿ ಆರೋಗ್ಯವಂತ ಸಸಿಗಳನ್ನು ನೆಡಲು ನೆರವು ನೀಡಿದೆ.

ನಗರವು ಅತಿ ವಿರಳವಾಗಿ ಬಂದ್‌ಗಳ (ಪ್ರತಿಭಟನೆಗಳ) ಪ್ರಭಾವಕ್ಕೊಳಗಾಗುತ್ತದೆ ಹಾಗೂ ರಾಷ್ಟ್ರದ ಇತರ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಪ್ರಾಂತೀಯ ಮತ್ತು ಧರ್ಮೀಯ ದಂಗೆಗಳಿಂದ ದೂರವಿರುತ್ತದೆ. ನಗರದ ಸಮರ್ಥ ನಿರ್ವಹಣೆಯಿಂದಾಗಿ ಜೀವನ ಶೈಲಿಯು ಸೌಹಾರ್ದಯುತ ಮತ್ತು ಬಹುಸಮರಸದಿಂದ ಕೂಡಿದೆ. ಇದು ಭಾರತದಲ್ಲಿ ISO 9005 ಪ್ರಮಾಣೀಕೃತವನ್ನು ಗಳಿಸಿದ ಮೊದಲ ನಗರ.

ಇದು 6ನೆಯ ಅಂತಾರಾಷ್ಟ್ರೀಯ ಉತ್ತಮ ನಗರಗಳಲ್ಲಿ ಒಂದು ಎಂದು - ವಿಶ್ವ ಸಂಸ್ಥೆಯಿಂದ 2004ರ ಗ್ಲೋಬಲ್ ಕೋಂಪಾಕ್ಟ್ ಸಿಟಿ ಪ್ರಶಸ್ತಿಗೆ ಆಯ್ಕೆಯಾದಾಗ ಅಂತಾರಾಷ್ಟ್ರೀಯ ಮಟ್ಟದ ಪ್ರಶಂಸೆ ಗಳಿಸಿಕೊಂಡಿತು. ಬೆಂಗಳೂರು, ಪುಣೆ ಮತ್ತು ಚಂಡಿಗರ್‌ನಂತಹ ಭಾರತದ ಇತರ ಪ್ರತಿಸ್ಪರ್ಧಿ ಮಹಾನಗರಗಳನ್ನು ಮೀರಿಸಿದೆ. ಇದು ಉತ್ತಮ ಮೂಲಭೂತ ಸೌಕರ್ಯಗಳು,ವಿಶ್ವಪ್ರಜೆಗಳಿಗೆ ಸಮಾನ ಅವಕಾಶ ಒದಗಿಸುವ ಕಾಸ್ಮೊಪೊಲಿಟಿನ ಲಕ್ಷಣಯುಳ್ಳ ಮತ್ತು ಬಲಿಷ್ಠ ಕೈಗಾರಿಕೆಗಳ ತಾಣವೆನಿಸಿದೆ. ಪ್ರಪಂಚದ ಕೇವಲ 6 ನಗರಗಳು ಮಾತ್ರ ಈ ಸೌಭಾಗ್ಯ ಪಡೆದಿವೆ- ಮೆಲ್ಬರ್ನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊಗಳು ಸಹ ಅವುಗಳಲ್ಲಿ ಸೇರಿವೆ. ಉಕ್ಕಿನ ನಗರದಲ್ಲಿನ ಅತ್ಯುತ್ತಮ ಜನಜೀವನ ಮಟ್ಟಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ.

ಭೂಗೋಳಶಾಸ್ತ್ರ[ಬದಲಾಯಿಸಿ]

ಜಮ್ಶೆಡ್‌ಪುರನ 22°48′N 86°11′E / 22.8°N 86.18°E / 22.8; 86.18ನೆಲೆವಾಸ ಹೀಗಿದೆ[೧]. ಇದು ಸರಾಸರಿ 135 ಮೀಟರ್(442 ಅಡಿ) ಎತ್ತರದಲ್ಲಿದೆ. ಜಮ್ಶೆಡ್‌ಪುರವು ಗುಡ್ಡ-ಬೆಟ್ಟ ಪ್ರದೇಶದಲ್ಲಿದ್ದು, ಇದರ ಭೂಮೇಲ್ಮೈ ಪ್ರದೇಶವು ಒಂದೇ ಮಟ್ಟವಾಗಿಲ್ಲದೆ ಏರುಪೇರು ಅಸಮವಾಗಿದೆ. ಇದು (ಜಮ್ಶೆಡ್‌ಪುರ)ಜಾರ್ಖಂಡ್‌ನ ಒಟ್ಟು ಪ್ರದೇಶದ ಸುಮಾರು 2.03%ನಷ್ಟು ಆವರಿಸಿದೆ. ಜಮ್ಶೆಡ್‌ಪುರವು 230.59 ಚದರ ಕಿಮೀನಷ್ಟು ಒಟ್ಟು ಭೌಗೋಳಿಕ ಪ್ರದೇಶವನ್ನು ಆವರಿಸಿದೆ. ಇಲ್ಲಿ ಪ್ರತಿ ವರ್ಷ 1200 ಮಿಮೀನಷ್ಟು ಮಳೆ ಬೀಳುತ್ತದೆ.

ಜನಸಂಖ್ಯಾ ವಿಚಾರಗಳು[ಬದಲಾಯಿಸಿ]

ಭಾರತದ 2001ರ ಜನಗಣತಿಯ ಪ್ರಕಾರ,[೨] ಜಮ್ಶೆಡ್‌ಪುರವು 1,134,788 ಜನಸಂಖ್ಯೆ ಹೊಂದಿದೆ. ನಗರ ಪ್ರದೇಶಗಳ 2001ರ ಜನಗಣತಿಯಂತೆ ಇದು ಭಾರತದಲ್ಲಿನ 35 ದಶಲಕ್ಷಕ್ಕಿಂತಲೂ ಹೆಚ್ಚಿನ ನಗರಗಳಲ್ಲಿ 28ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ 53% ಪುರುಷರೂ ಮತ್ತು 47% ಮಹಿಳೆಯರೂ ಇದ್ದಾರೆ. ಜಮ್ಶೆಡ್‌ಪುರದಲ್ಲಿ ಸರಾಸರಿ 82%ನಷ್ಟು ಸಾಕ್ಷರತೆ ಇದೆ, ಇದು ರಾಷ್ಟ್ರೀಯ ಸರಾಸರಿ 59.5%ಗಿಂತ ಹೆಚ್ಚು. ಇಲ್ಲಿ 11%ನಷ್ಟು ಮಂದಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಮಾತುಕತೆಗೆ ಬಳಸುವ ಆಡುಭಾಷೆ ಹಿಂದಿ. ಸಂತಲಿ ಮತ್ತು ಹೊ ದಂತಹ ಬುಡಕಟ್ಟಿನ ಭಾಷೆಗಳನ್ನೂ ನಗರದ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಇಲ್ಲಿನ ಜನರು ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ, ಇದರಿಂದಾಗಿ ನಗರದಲ್ಲಿರುವ ಅಸಂಖ್ಯಾತ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ರಾಷ್ಟ್ರದಾದ್ಯಂತದ ಜನರು ಇಲ್ಲಿಗೆ ವಲಸೆ ಬರುತ್ತಾರೆ.ಹಾಗಾಗಿ ಇದು ವಿಶ್ವ ಬಂಧುತ್ವಕ್ಕೆ ಸಾಕ್ಷಿಯಾಗಿದೆ.

ಇಲ್ಲಿ ಸ್ಥಳೀಯ ಬುಡಕಟ್ಟು ಜನರನ್ನು ಹೊರತು ಪಡಿಸಿ, ಬಂಗಾಳಿ, ಬಿಹಾರಿ, ಪಂಜಾಬಿ, ಒರಿಯ, ಗುಜರಾತಿ, ಮಾರ್ವಾರಿ ಮತ್ತು ಮುಸಲ್ಮಾನ ಮೊದಲಾದ ಪ್ರಮುಖ ಕುಲ-ಧರ್ಮಗಳ ಅನೇಕ ಸಮೂಹಗಳಿವೆ. ಸ್ವಲ್ಪ ಪ್ರಮಾಣದಲ್ಲಾದರೂ ಗಮನಾರ್ಹ ಸಂಖ್ಯೆಯಲ್ಲಿ ದಕ್ಷಿಣ ಭಾರತದವರೂ ಪ್ರಧಾನವಾಗಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದವರು ಇಲ್ಲಿ ನೆಲೆಸಿದ್ದಾರೆ.

ಇಲ್ಲಿ ಮಕರ ಸಂಕ್ರಾಂತಿ, ದುರ್ಗಾ ಪೂಜೆ, ದೀಪಾವಳಿ, ಹೋಳಿ, ಕ್ರಿಸ್‌ಮಸ್, ಈದ್-ಉಲ್-ಫಿತರ್ ಮತ್ತು ಛಾತ್ ಇತ್ಯಾದಿ ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ.

ನಗರದ ಉಪವಿಭಾಗಗಳು ಅಥವಾ ಉಪನಗರಗಳು[ಬದಲಾಯಿಸಿ]

  • ಸಕ್ಚಿ : ಪ್ರಮುಖ ಮಾರುಕಟ್ಟೆಗಳು ಮತ್ತು ಕೆಲವು ನಿವಾಸಗಳಿರುವ ನಗರದ ಹೃದಯಭಾಗ. ಇದು ಜನವಸತಿ ಮತ್ತು ಮಾರುಕಟ್ಟೆ ಸ್ಥಳ. ಈ ನಗರದ ಹಳೆಯ ಭಾಗದಲ್ಲಿ ಪ್ರಾಚೀನ ವಾಸ್ತುಶಿಲ್ಪ ಶೈಲಿ ಹೊಂದಿರುವ ವಸತಿ ಪ್ರದೇಶ ಮತ್ತು ಇನ್ನೂ ಅನೇಕ ಕಟ್ಟಡಗಳಿವೆ. ಅಲ್ಲದೆ ಇಲ್ಲಿ ದಿನಬಳಕೆವಸ್ತುಗಳ ವ್ಯಾಪಾರದ ದೊಡ್ಡ ಮಾರಾಟಮಳಿಗೆಗಳೂ ಇವೆ. ಈಗ ಜಮ್ಶೆಡ್‌ಪುರ ಇರುವ ಪ್ರದೇಶವನ್ನು ಮೂಲತಃ ಸಕ್ಚಿ ಗ್ರಾಮಪ್ರದೇಶ ಎನ್ನುತ್ತಿದ್ದರು.
  • ಪರ್ಸುದಿಹ್ : ಜಮ್ಶೆಡ್‌ಪುರದ ದಕ್ಷಿಣ ಭಾಗದಲ್ಲಿರುವ ಇದು ನಗರದ ಅತೀ ದೊಡ್ಡ ವಸತಿಪ್ರದೇಶಗಳಲ್ಲಿ ಒಂದು. ಜಮ್ಶೆಡ್‌ಪುರದ ಹಳೆಯ ಮತ್ತು ಹೆಚ್ಚು ಜನರು ಭೇಟಿನೀಡುವ ಗೋಲ್ಪಹಾರಿ ದೇವಾಲಯವಿರುವ ಸ್ಥಳ.
  • ಮಂಗೊ : ಸುಬರ್ಣರೇಖಾ ನದಿಯ ಗುಂಟ ನೇರ ವ್ಯಾಪಿಸಿರುವ, ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ವಸತಿ ಪ್ರದೇಶ. ಹಿಂದೆ ಉಪನಗರವಾಗಿದ್ದ ಮಂಗೊ ಈಗ ಸ್ಥಿರಾಸ್ತಿ ವಹಿವಾಟುಗಳಿಗೆ ಪ್ರಶಸ್ತ ಸ್ಥಳವಾಗಿದೆ. ಯಾಕೆಂದರೆ ಕಟ್ಟಡ ವಿನ್ಯಾಸಗಾರರ ವಾಣಿಜ್ಯೋದ್ಯಮಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಇದು ಸಾಧ್ಯವಾಗಿದೆ. ದಿಮ್ಮನಾ ಸರೋವರದ ಸುತ್ತಮುತ್ತಲಿನ ಪ್ರದೇಶಗಳು ನಗರದಲ್ಲೇ ಆಕರ್ಷಕ ಪ್ರಕೃತಿ ದೃಶ್ಯಾವಳಿ ವೀಕ್ಷಣೆಗೆ ಪ್ರಶಸ್ತ ಜಾಗವಾಗಿವೆ.
  • ಬಿಸ್ತುಪುರ : ಮಧ್ಯ/ಉನ್ನತ-ಮಧ್ಯ ವರ್ಗದವರಿಗೆ ಹೆಚ್ಚು ಆಶ್ರಯನೀಡಿದ, ದುಬಾರಿ ವಾಣಿಜ್ಯೋದ್ಯಮದ ಬಿರುಸಿನ ಚಟುವಟಿಕೆಯ ಪ್ರದೇಶ ಮತ್ತು ಹೆಚ್ಚು ವಸತಿಯ ಜನನಿಬಿಡ ಪಟ್ಟಣ. ನಗರದ ಹೆಚ್ಚಿನ ವ್ಯಾಪಾರ ಮಳಿಗೆಗಳು, ಮಾರಾಟ ಸಂಕೀರ್ಣಗಳು, ಪ್ರಖ್ಯಾತ ರೆಸ್ಟಾರೆಂಟುಗಳು ಮತ್ತು ಅತ್ಯಂತ ಸುಖವಿಲಾಸಿ ಹೋಟೆಲ್‌ಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿವೆ. ಬಿಸ್ತುಪುರದಲ್ಲಿ ಅತೀ ಹೆಚ್ಚಿನ ಸ್ಥಿರಾಸ್ತಿ ಬೆಲೆಗಳು ದುಬಾರಿ ಮತ್ತು ಗಗನಕ್ಕೇರಿವೆ. ಇಲ್ಲಿ ರಿಯಲ್ ಎಸ್ಟೇಟ್ ವಹಿವಾಟಿಗೆ ಚುರುಕಿನ ಪ್ರತಿಕ್ರಿಯೆ ಇದೆ.
  • ಕಾದ್ಮ : ಸೋನಾರಿಗೆ ಹತ್ತಿರದಲ್ಲಿರುವ ವಸತಿ ಪ್ರದೇಶ, ನಗರದಲ್ಲಿನ ಅತೀ ದೊಡ್ಡ ವಾಸಗೃಹಗಳಿರುವ ಪ್ರದೇಶಗಳಲ್ಲಿ ಇದೂ ಒಂದು. ಇಲ್ಲಿ ವೃತ್ತಿಗೆ ಸಂಬಂಧಿಸಿದವರ ನಿವಾಸಗಳು, ದಿಂಡ್ಲಿ ಎಂಕ್ಲೇವ್ ಮತ್ತು ವಿದೇಶೀಯ ಕೈಸರ್ ಬಂಗಲೆಗಳು ಟಾಟಾ ಸ್ಟೀಲ್ ಉದ್ಯೋಗಿಗಳಿಗಿರುವ ವಸತಿಗೃಹಗಳು ಪ್ರಮುಖವಾಗಿವೆ.
  • ನಮ್ದಾ ಪ್ರದೇಶ  : ನಗರದ ಕೇಂದ್ರಭಾಗದಲ್ಲಿರುವ ವಸತಿಗೃಹಗಳನ್ನೊಳಗೊಂಡ ಪ್ರದೇಶ.
  • ಸೋನಾರಿ : ವಾಸಕ್ಕೆ ಯೋಗ್ಯ ಬಡಾವಣೆಗಳನ್ನು ಮತ್ತು ನಗರದ ವಿಮಾನನಿಲ್ದಾಣವನ್ನು ಹೊಂದಿದೆ, ನದಿಗಳ (ಕಾರ್ಖೈ ಮತ್ತು ಸುಬರ್ಣರೇಖಾ) ನದಿಗಳ ಸಂಗಮ ಸ್ಥಾನಕ್ಕೆ ಸಮೀಪದಲ್ಲಿದೆ. ಭಾರತ್ ಸೇವಾ ಆಶ್ರಮಕ್ಕೆ ನೆಲೆಯಾಗಿದೆ. ಪ್ರಾದೇಶಿಕ ಭಾರತೀಯ ಸೇನೆಯ ಶಿಬಿರವೊಂದು ಇಲ್ಲಿದೆ.
  • ಟೆಲ್ಕೊ : ಈ ನಗರ ವಸತಿ ಪಟ್ಟಣಪ್ರದೇಶವು ಟಾಟಾ ಮೋಟಾರ್ಸ್ ಸ್ವಾಮ್ಯದಲ್ಲಿದೆ ಹಾಗೂ ಅದನ್ನು ತಾನೇ ನಿರ್ವಹಿಸುತ್ತದೆ. ಟೆಲ್ಕೊ ಅಧಿಕಾರಿಗಳು ಮತ್ತು ಉದ್ಯೋಗಿಗಳು ವೈದ್ಯಕೀಯ ಸೌಲಭ್ಯದಿಂದ ಹಿಡಿದು ಮನರಂಜನೆಯವರೆಗೆ ಆರೋಗ್ಯ ಕೇಂದ್ರ, ಕ್ರೀಡೆ ಮತ್ತು ಶಿಕ್ಷಣವನ್ನೂ ಒಳಗೊಂಡ ಎಲ್ಲಾ ಸೌಲಭ್ಯಗಳನ್ನು ಈ ಪ್ರದೇಶದೊಳಗಡೆಯೇ ಆಸ್ವಾದಿಸುತ್ತಾರೆ. ಇಲ್ಲಿ ಒಂದು ಈಜು ಕೊಳ ಮತ್ತು ಅದರ ಮುಂದಿರುವ ಉತ್ತಮವಾದ ಒಂದು ಕ್ರಿಕೆಟ್ ಮೈದಾನವನ್ನು 'ಟೆಲ್ಕೊ ಕ್ಲಬ್' ಹೊಂದಿದೆ.
  • ಬರಿ ನಗರ : ಆರಾಧಿಕ ನಗರಕ್ಕೆ ಹತ್ತಿರದಲ್ಲಿರುವ ಮತ್ತು ಟೆಲ್ಕೊ ಗಡಿಯ ಅಂಚಿನಲ್ಲಿರುವ, ಹೆಚ್ಚು ಮುಸಲ್ಮಾನರಿರುವ ಪ್ರದೇಶ. ಹೆಚ್ಚಿನ ಜನರು ಟಾಟಾ ಮೋಟಾರ್ಸ್‌ನಲ್ಲಿ ಉದ್ಯೋಗಿಗಳಾಗಿದ್ದಾರೆ.
  • ಕೈಲಾಶ್ ನಗರ  : TATA FOUNDARY ಮುಚ್ಚಿದ ನಂತರ ಆ ಕಂಪನಿಯ ಮಾಲೀಕರಿಂದ ಜಾಗ ಖರೀದಿಸಿ ದಶಕಗಳಿಂದ ಜನರು ಇಲ್ಲಿ ಜೀವಿಸುತ್ತಿದ್ದಾರೆ, ಇದು NML ಪೈಲಟ್ ಪ್ಲಾಂಟ್‌[೩] ಮತ್ತು ಟಾಟಾಸ್ ಟ್ಯೂಬ್ಸ್ ಡಿವಿಜನ್[೪] ಗೆ ಹತ್ತಿರದಲ್ಲಿದೆ.
  • ಗೋವಿಂದಪುರ : ಇದು ಟಾಟಾ ಮೋಟಾರ್ಸ್, ಸುಮಂತ್ ಮುಲ್ವಾಕರ್ ಪಾರ್ಕ್, ಟಾಟಾ ಪವರ್ ಸ್ಥಾವರ ಮತ್ತು ಲಫಾರ್ಜ್ ಸಿಮೆಂಟ್ ಸ್ಥಾವರಕ್ಕೆ ಸಮೀಪದಲ್ಲಿದೆ ಹಾಗೂ ರಾಖಾ ಕಾಪರ್ ಪ್ರಾಜೆಕ್ಟ್ ಮತ್ತು ಜಾದುಗೊರ ಯುರೇನಿಯಂ ಮೈನ್ಸ್ (ಗಣಿ) ದಾರಿಯಲ್ಲಿದೆ.
  • ಜುಗ್ಸಲೈ : ಟಾಟಾನಗರ ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿರುವ ಪ್ರದೇಶ. ಬಟ್ಟೆ, ದಿನಸಿ ಇತ್ಯಾದಿಗಳ ಬೃಹತ್ ಮಾರುಕಟ್ಟೆ ಸ್ಥಳ.
  • ಸಿಧ್ಗೋರ : ಟಾಟಾ ಸ್ಟೀಲ್ ಉದ್ಯೋಗಿಗಳು ವಾಸವಿರುವ ಪ್ರದೇಶ. ನಗರದ ಅತೀ ದೊಡ್ಡ ನೀರು ಸಂಗ್ರಹ ಟ್ಯಾಂಕ್ ಇಲ್ಲಿದೆ.
  • ಗೋಲ್ಮುರಿ : ಗೋಲ್ಮುರಿಯ ವಾಸಗೃಹಗಳಿರುವ ಮತ್ತು ವ್ಯಾಪಾರ ಸ್ಥಳಗಳು ನಗರದ ದವಸಧಾನ್ಯಗಳ ಬೃಹತ್ ವ್ಯಾಪಾರ ಮಳಿಗೆಗಳನ್ನು ಒಳಗೊಂಡಿದೆ. ದೂರದರ್ಶನ ಟೆಲಿವಿಶನ್ ಗೋಪುರವು ಇಲ್ಲಿದೆ ಹಾಗೂ ಸಂಚಾರಿ ಸರ್ಕಸ್‌ಗಳು ಬಿಡಾರ ಹೂಡುವ ಮೈದಾನ್ (ಬಯಲು ಪ್ರದೇಶ) ಹತ್ತಿರದಲ್ಲಿದೆ. ಭಾರೀ ಆಕಾಶ್ ದೀಪ್ ಪ್ಲಾಜಾ ಮಾರಾಟ ಸಂಕೀರ್ಣಕ್ಕೆ ನೆಲೆಯಾಗಿದೆ.
  • ಬಿರ್ಸಾನಗರ : ಭಾರತ ಸ್ವಾತಂತ್ರ್ಯಾ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಹೋರಾಟಗಾರ ಬಿರ್ಸಾ ಮುಂಡಾಅವರನ್ನು ಜೇಲಿನಿಂದ ಬಿಡುಗಡೆ ಮಾಡಿದ ನಂತರದ ಸ್ಮರಣೆಗಾಗಿ ನಗರಕ್ಕೆ ಈ ಹೆಸರು ಬಂದಿತು. ಜಮ್ಶೆಡ್‌ಪುರದಲ್ಲಿ ಈ ನಗರವು ಜನವಸತಿ ಇರುವ ಅತೀದೊಡ್ಡ ಪ್ರದೇಶ. ಇದು ಆರಂಭದಲ್ಲಿ ಅಕ್ರಮ ವಸತಿದಾರರ ಗ್ರಾಮೀಣ ರೆವೆನ್ಯೂ ಭೂಕಂದಾಯ ಪ್ರದೇಶ ಹೊಂದಿತ್ತು, ನಂತರ ಇದು ಕಾನೂನುಸಮ್ಮತವಾಯಿತು. ಈ ಪ್ರದೇಶದಲ್ಲಿನ ವಸತಿಗೃಹಗಳನ್ನು ಖಾಸಗಿಯಾಗಿ ನಿರ್ಮಿಸಿದುದರಿಂದ, ಇಲ್ಲಿನ ಕಟ್ಟಡಗಳ ವಿನ್ಯಾಸಗಳು ಕ್ರಮವಾಗಿಲ್ಲ.
  • ಆದಿತ್ಯಾಪುರ : ಇದು ಉಕ್ಕಿನ ನಗರಕ್ಕೆ ಖಾರ್ಕೈ ಸೇತುವೆಯ ಮ‌ೂಲಕ ಸಂಪರ್ಕ ಹೊಂದಿದೆ ಹಾಗೂ ಒಂದು ಕಾಲದಲ್ಲಿ ಏಷ್ಯಾದ ಅತೀದೊಡ್ಡ ಕೈಗಾರಿಕಾ ವಸಾಹತು,ಎಸ್ಟೇಟು ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಟಾಟಾ ಮೋಟಾರ್ಸ್ ಮತ್ತು ಟಾಟಾ ಕ್ಯುಮಿನ್ಸ್‌ಗಳಿಗೆ ಸಹಾಯಕವಾಗಿರುವ ಹೆಚ್ಚಿನ ಪೂರಕ ಉದ್ಯಮ ವ್ಯವಹಾರಗಳು ಇಲ್ಲಿವೆ. ಜಮ್ಶೆಡ್‌ಪುರ ಇರುವ (ಪೂರ್ವ ಸಿಂಗ್ಬುಮ್) ಜಿಲ್ಲೆಯಲ್ಲಿರದೆ ಬೇರೆ ಜಿಲ್ಲೆಯಲ್ಲಿದ್ದರೂ (ಸರೈಕೆಲಾ-ಖಾರ್ಸಾವನ್), ಇದನ್ನು ಈ ನಗರದ ಭಾಗವೆಂದು ಪರಿಗಣಿಸಲಾಗುತ್ತದೆ. ಆಲ್ ಇಂಡಿಯಾ ರೇಡಿಯೊ(ಆಕಾಶವಾಣಿ) ಹೈ ಪವರ್ ಪ್ರಸಾರ ಕೇಂದ್ರ ಈ ಪ್ರದೇಶದಲ್ಲಿದೆ.
  • ನಿಲ್ದಿಹ್ : ಟಾಟಾ ಸ್ಟೀಲ್‌ನ ಕೊಳವೆಗಳ ತಯಾರಿಕಾ ವಿಭಾಗಕ್ಕೆ ಮತ್ತು ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಬಂಗಲೆಗಳಿಗೆ ಇದು ನೆಲೆಯಾಗಿದೆ.
  • ಭಾಲುಬಾಸ : ಇದು ಖಾಸಗಿ ವಸತಿಗಳನ್ನು ಹೊಂದಿರುವ ಪ್ರದೇಶ. ಸಕ್ಚಿ ಮತ್ತು ಅಗ್ರಿಕೊ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮೇಲುಸೇತುವೆಯು ಇದರ ಪ್ರಮುಖ ಹೆಗ್ಗುರುತಾಗಿದೆ.
  • ಧಾಟ್ಕಿದಿಹ್ : ಬಿಸ್ತುಪುರ, ಕಾದ್ಮ ಮತ್ತು ಸಕ್ಚಿಗೆ ಹತ್ತಿರದಲ್ಲಿದೆ. ಈ ಪ್ರದೇಶವು ಅದರ ಬೇಕರಿವಸ್ತುಗಳಿಗೆ ಬಹುಪ್ರಸಿದ್ಧ.
  • ಆಂಬಗಾನ್ : ಇದೊಂದು ವಿಶಾಲವಾದ ಬಯಲು ಮೈದಾನ. ಆಯಾ ಋತುಮಾನಕ್ಕೆ ಸಂಭಂದಿಸಿದಂತೆ ಇಲ್ಲಿ ನಡೆಯುವ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನಗಳಿಗೆ ಅನುಕೂಲ ಒದಗಿಸಿದೆ. ಸಕ್ಚಿ ಮತ್ತು ಬಾರದ್ವರಿಗೆ ಸಮೀಪದಲ್ಲಿದೆ, ಇದು ಕೇಂದ್ರಭಾಗದಲ್ಲಿರುವುದರಿಂದ ಹೆಚ್ಚು ಅನುಕೂಲಕರವಾಗಿದೆ.
  • ಪಾರ್ದಿಹ್ : ರಾಷ್ಟ್ರೀಯ ಹೆದ್ದಾರಿ 33ರ ಹತ್ತಿರದ ನಗರ ಹೊರಭಾಗಕ್ಕೆ ಹೊಂದಿಕೊಂಡಿದೆ. ನಗರವು ಸುಬರ್ಣರೇಖಾದ ಉತ್ತರ ಭಾಗಕ್ಕೆ ಇನ್ನಷ್ಟು ವಿಸ್ತರಿಸಲ್ಪಡುವುದರಿಂದ, ಅಭಿವೃದ್ಧಿ ಕಾರ್ಯ ಮತ್ತು ಜನಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಗಮನಿಸಲಾಗಿದೆ.
  • ಆಜಾದ್‌ನಗರ : ಇದನ್ನು ಆಜಾದ್ ಬಸ್ತಿ ಎಂದು ಕರೆಯುತ್ತಾರೆ ಅಥವಾ ಉಪವಿಭಾಗ ಎಂಬರ್ಥವೂ ಇದೆ. ಮಂಗೊದಲ್ಲಿರುವ ಇದು ಬಹುಸಂಖ್ಯಾತ ಮುಸ್ಲಿಮ್ ಜನಾಂಗವಿರುವ ಪ್ರದೇಶ. ಸಾವಿರಾರು ಜನರು ಮಧ್ಯಪೂರ್ವ ಮತ್ತು ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ.ಲಕ್ಷಾಂತರ ಮೊತ್ತದ ವಿದೇಶಿ ಹಣವನ್ನು ನಗರಕ್ಕೆ ಕಳುಹಿಸುವುದು ಸಾಮಾನ್ಯವಾಗಿದೆ.ಈ ನಗರದ ನಿವಾಸಿಗಳಲ್ಲಿ ವಿದೇಶ ಹಣವಿರುವುದಕ್ಕೆ ಪ್ರಮುಖ ಕಾರಣ ಇದಾಗಿದೆ,ಎಂದು ನಂಬಲಾಗಿದೆ. ಯಾವುದೇ ಮ‌ೂಲಭೂತ ವ್ಯವಸ್ಥೆ ಮತ್ತು ಸವಲತ್ತುಗಳಿಂದ ಇದು ವಂಚಿತವಾಗಿದೆ.
  • ಗಮಾರಿಯ : ಇದೊಂದು ಪ್ರಮುಖ ಕೈಗಾರಿಕಾ ಕೇಂದ್ರ ಹಾಗೂ ಇದು ಜಮ್ಶೆಡ್‌ಪುರಕ್ಕೆ ಖಾರ್ಖೈ ನದಿಯ ಮ‌ೂಲಕ ಸಂಪರ್ಕ ಕಲ್ಪಿಸುತ್ತದೆ. ಸರೈಕೆಲಾ-ಖಾರ್ಸಾವನ್ ಜಿಲ್ಲೆಯಡಿಯಲ್ಲಿ ಬರುತ್ತದೆ ಆದರೆ ಜಮ್ಶೆಡ್‌ಪುರದ ಭಾಗವೆಂದು ಪರಿಗಣಿಸಲಾಗುತ್ತದೆ. ಟಯೊ ರೋಲ್ಸ್ ಮತ್ತು ಟಿಸ್ಕೊ ಗ್ರೋತ್ ಶಾಪ್ ಎಂಬ ಟಾಟಾ ಸ್ಟೀಲ್‌ನ ಎರಡು ಪೂರಕ ಉದ್ದಿಮೆಗಳು, ಉಷಾ ಮಾರ್ಟಿನ್‌ನಂತಹ ಕಂಪನಿಗಳು, ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕ್ಯಾಪರೊ ಗ್ರೂಪ್ ಆಫ್ ಇಂಡಸ್ಟ್ರೀಸ್ ಹಾಗೂ ಇನ್ನಿತರ ಕೈಗಾರಿಕೆಗಳು ಈ ಪ್ರದೇಶದಲ್ಲಿವೆ.

ಪ್ರಮುಖ ಮಾರುಕಟ್ಟೆಗಳು[ಬದಲಾಯಿಸಿ]

  • ಬಿಸ್ತುಪುರ : ಫ್ಯಾಶನ್ ಮಳಿಗೆಗಳು, ಕಾರು ಪ್ರದರ್ಶನ ಮಳಿಗೆಗಳು, ಅತ್ಯಾಧುನಿಕ ಶೈಲಿಯ ಹೋಟೆಲ್‌ಗಳು ಮತ್ತು ಉತ್ತಮ ಭೋಜನಶಾಲೆಗಳು, ರೆಸ್ಟಾರೆಂಟುಗಳು ಇಲ್ಲಿವೆ. ಬಹುತೇಕ ವ್ಯಾಪಾರೀ ಸಂಸ್ಥೆಗಳು ಇಲ್ಲಿ ನೆಲೆಯೂರಿವೆ. ಇದು ಟಾಟಾನಗರ ರೈಲು ನಿಲ್ದಾಣ ಮತ್ತು ಸೋನಾರಿ ವಿಮಾನನಿಲ್ದಾಣಕ್ಕೆ ಹತ್ತಿರದಲ್ಲಿರುವ, ವ್ಯಾಪಾರದ ಕೇಂದ್ರಬಿಂದುವಾಗಿರುವ ಪ್ರದೇಶ.
  • ಸಕ್ಚಿ : ಇದು ನಗರದ "ಕೇಂದ್ರಭಾಗ" ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಪೆನ್ಸರ್, ರಿಲಯನ್ಸ್ ಫ್ರೆಶ್ ಮತ್ತು ಶಾಪರ್ಸ್ ಸ್ಕ್ವೇರ್ ಮೊದಲಾದ ಸೂಪರ್ ಮಾರುಕಟ್ಟೆಯ ಮಹಾಮಳಿಗೆಗಳು ಇಲ್ಲಿವೆ.
  • ಬಿಸ್ತುಪುರದ ಅಮರ್ ಮಾರುಕಟ್ಟೆ : ಯುವಜನರ ಆಧುನಿಕ ಶೈಲಿ ಮತ್ತು ಪಾದರಕ್ಷೆಗಳ ಅತ್ಯಾಧುನಿಕ ಸಂಗ್ರಹವನ್ನು ಹೊಂದಿದೆ.
  • ಬಿಸ್ತುಪುರದ ಜವಾಹರ್ ಮಾರುಕಟ್ಟೆ : ಎಲೆಕ್ಟ್ರಾನಿಕ್ಸ್, CD, ವೀಡಿಯೊ ಗೇಮ್ಸ್ ಮತ್ತು ಫ್ಯಾಶನ್ ಪರಿಕರಗಳನ್ನು ಹೊಂದಿರುವ ಕಟ್ಟಡಗಳು.
  • ಜುಗ್ಸಲೈ  : ಬಟ್ಟೆ, ದಿನಸಿ ಸಾಮಾನು ಇತ್ಯಾದಿಗಳ ಬೃಹತ್ ಸಗಟು ವ್ಯಾಪಾರದ ಮಾರುಕಟ್ಟೆ.
  • ಸಂಜಯ್ ಫ್ಯಾನ್ಸಿ ಮಾರುಕಟ್ಟೆ : ವಿದೇಶಿ ಸರಕು ಮತ್ತು ಫ್ಯಾನ್ಸಿ ವಸ್ತುಗಳ ಮಾರುಕಟ್ಟೆ.

ವ್ಯಾಪಾರ ಮಳಿಗೆಗಳು[ಬದಲಾಯಿಸಿ]

  • ಶಾಪರ್ಸ್ ಸ್ಕ್ವೇರ್  : ದೆಹಲಿ ದರ್ಬಾರ್ ರೆಸ್ಟಾರೆಂಟಿನ ನಂತರದ ಸಾಲಿನಲ್ಲಿದೆ; ಸಕ್ಚಿಯಲ್ಲಿರುವ ಜಮ್ಶೆಡ್‌ಪುರದ ಮೊದಲ ವ್ಯಾಪಾರ ಮಳಿಗೆ. ಮಳಿಗೆಯು ಬೋಸ್ಸಿನಿ, ದಾಮಸ್, ಸ್ಪೈಕರ್, ರೀಬಕ್, ಲೆವಿಸ್ ಇತ್ಯಾದಿ ಅಸಂಖ್ಯಾತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡುಗಳ ಮಾರಾಟ ಹೊಂದಿದೆ.

ಜಮ್ಶೆಡ್‌ಪುರವು ಸ್ಥಿರಾಸ್ತಿ ವಹಿವಾಟಿನ ಧ್ಯೇಯೋದ್ದೇಶದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದಲ್ಲಿನ ಒಂದು ಪ್ರಮುಖ ನಗರ. ಈ ಅಂಶ ಇದೀಗ ಸ್ಪಷ್ಟವಾಗಿದೆ ಏಕೆಂದರೆ ಉಕ್ಕಿನ ನಗರವು ಇನ್ನೂ 5 ಜಾಗತಿಕಮಟ್ಟದ ವ್ಯಾಪಾರ ಮಳಿಗೆಗಳ ಕೇಂದ್ರ ಸ್ಥಾಪನೆಗೆ ತಯಾರಾಗುತ್ತಿದೆ, ಅದರಲ್ಲಿ 3 ಕೇಂದ್ರಗಳು ಸ್ವಲ್ಪದರಲ್ಲೇ ಕಾರ್ಯರೂಪಕ್ಕೆ ಬರುತ್ತವೆ. ಅವುಗಳೆಂದರೆ -

  • PM ವ್ಯಾಪಾರ ಮಳಿಗೆ
  • ಸೆಂಟೆನರಿ ಮಳಿಗೆ
  • IT ಪಾರ್ಕ್ ಜೊತೆಗೇ ವ್ಯಾಪಾರ ಮಳಿಗೆ
  • ಫೋರಮ್ ಮಳಿಗೆ[೫]

ನಗರದಲ್ಲಿ ಪ್ರಸ್ತುತ ಕೇವಲ 4 ಚಲನಚಿತ್ರ ಮಂದಿರಗಳು ಮಾತ್ರ ಇವೆ (ಅವುಗಳೆಂದರೆ - G.T. ಸಿನೆಮಾ, ಪಾಯಲ್ ಟಾಕೀಸ್, ಸ್ಟಾರ್ ಟಾಕೀಸ್). ಚಲನಚಿತ್ರದ ಬಗೆಗಿನ ಗೀಳು ನಗರದಲ್ಲಿ ಮಿತಿ ಇಲ್ಲದೇ ವಿಪರೀತ ಹೆಚ್ಚುತ್ತಿರುವುದರಿಂದ, ಆದಷ್ಟು ಬೇಗ ಮಲ್ಟಿಪ್ಲೆಕ್ಸ್‌ಗಳನ್ನು ನಿರ್ಮಿಸುವುದಕ್ಕಾಗಿ ಆಡ್‌ಲ್ಯಾಬ್ಸ್, INOX ಮತ್ತು PVRನಂತಹ ಚಲನಚಿತ್ರ ಕ್ಷೇತ್ರದ ಪ್ರಬಲ ವ್ಯಕ್ತಿಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ.

ಮಹಾಮಳಿಗೆಗಳು[ಬದಲಾಯಿಸಿ]

ಮಾಧ್ಯಮ[ಬದಲಾಯಿಸಿ]

ಹಿಂದಿ, ಬಂಗಾಳಿ, ಉರ್ದು ಮತ್ತು ಇಂಗ್ಲಿಷ್ ಹೀಗೆ ಹಲವಾರು ಭಾಷೆಯ ಸುದ್ದಿಪತ್ರಿಕೆಗಳು ನಗರದಿಂದ ಪ್ರಕಟಗೊಳ್ಳುತ್ತವೆ. ಇವುಗಳಲ್ಲದೆ, ಹಿಂದುಸ್ಥಾನ್ , ದೈನಿಕ್ ಜಾಗರಣ್ ಮತ್ತು ಪ್ರಭಾತ್ ಖಬರ್ ಮೊದಲಾದವುಗಳು ಅತೀಹೆಚ್ಚು ಸಂಖ್ಯೆಯಲ್ಲಿ ಓದುಗರ ಪಡೆದು ಪ್ರಸಿದ್ಧವಾದವುಗಳು.

ನಗರದ ಪ್ರಮುಖ TV ಕಾರ್ಯಕ್ರಮಗಳನ್ನು 24 ಗಂಟೆ ಸುದ್ಧಿ ಪ್ರಸಾರ ಮಾಡುವ ಚಾನೆಲ್ 'ಸಹಾರ ಸಮಯ್' ಹಾಗೂ ಅನೇಕ ಇತರ ವೀಡಿಯೊ ಮ್ಯಾಗಜೀನ್ ದೂರದರ್ಶನ ಕಾರ್ಯಕ್ರಮಗಳನ್ನು ಸ್ಥಳೀಯ ಕೇಬಲ್ ನಿರ್ವಾಹಕರು ಒದಗಿಸುತ್ತಾರೆ.

ಜಮ್ಶೆಡ್‌ಪುರವು 24x7ನಲ್ಲಿ ಸಂಗೀತ ಪ್ರಸಾರ ಮಾಡುವ ಈ ಕೆಳಗಿನ FM ಬಾನುಲಿ ಕೇಂದ್ರಗಳನ್ನು ಹೊಂದಿದೆ -

ಇವುಗಳನ್ನು ಹೊರತುಪಡಿಸಿ, ವಿವಿಧ್ ಭಾರತಿ (ಆಲ್ ಇಂಡಿಯಾ ರೇಡಿಯೊ) 100.8 FMನಲ್ಲಿ ಪ್ರಸಾರವಾಗುತ್ತದೆ.

ಸಾರಿಗೆ[ಬದಲಾಯಿಸಿ]

ಟಾಟಾನಗರ ಜಂಕ್ಷನ್‍ನಲ್ಲಿ ನಿಂತಿರುವ ಜಬಲ್ಪುರ್ - ಹೌರಾಹ್ ಎಕ್ಸ್‌ಪ್ರೆಸ್ ರೈಲು
  • ವಾಯುಮಾರ್ಗ : ನಗರದ ವಿಮಾನ ನಿಲ್ದಾಣವು ಸೋನಾರಿಯಲ್ಲಿದೆ.
  • ರೈಲು : ಟಾಟಾನಗರವು (ಜಮ್ಶೆಡ್‌ಪುರದ) ಒಂದು ಪ್ರಮುಖ ರೈಲ್ವೆ ಜಂಕ್ಷನ್, ಇದು ಆಗ್ನೇಯ ರೈಲ್ವೆಯಲ್ಲಿಯೇ ಮಾದರಿ ರೈಲುನಿಲ್ದಾಣವಾಗಿದೆ. ಭಾರತಕೋಲ್ಕತ್ತಾ, ಮುಂಬಯಿ, ದೆಹಲಿ, ಚೆನ್ನೈ, ಬೆಂಗಳೂರು, ಅಹಮದಾಬಾದ್, ಅಮೃತ್‌ಸರ್, ಪಾಟ್ನಾ, ನಾಗ್ಪುರ್, ಕಾನ್ಪುರ್, ರಾಂಚಿ, ಪುಣೆ, ಜಮ್ಮು, ವಿಶಾಖಪಟ್ಟಣಂ, ಗುವಾಹಟಿ, ಭುಬನೇಶ್ವರ್ ಇತ್ಯಾದಿ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಹೊಂದಿರುವುದರಿಂದ ಇದು ಜಾರ್ಖಂಡ್ ರಾಜ್ಯದಲ್ಲೇ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ಟಾಟಾನಗರ ಜಂಕ್ಷನ್ ನಗರದ ಪ್ರಮುಖ ರೈಲುನಿಲ್ದಾಣ ಹಾಗೂ ಆದಿತ್ಯಾಪುರ ಮತ್ತು ಗಮಾರಿಯ ಇತ್ಯಾದಿ.
  • ರಸ್ತೆ : ಜಮ್ಶೆಡ್‌ಪುರವು ಭಾರತದ ಹೆಚ್ಚಿನ ಪ್ರಮುಖ ನಗರಗಳೊಂದಿಗೆ ರಸ್ತೆಯ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 33 (NH33) ನಗರದ ಮ‌ೂಲಕ ಹಾದು, ಕೋಲ್ಕತ್ತಾ ಮತ್ತು ದೆಹಲಿಯೊಂದಿಗೆ ಸಂಪರ್ಕ ಕಲ್ಪಿಸುವ NH32ಅನ್ನು ಸೇರುತ್ತದೆ. NH32 ಜಮ್ಶೆಡ್‌ಪುರವನ್ನು ಧಾನ್ಬಾದ್‌ನ ಮ‌ೂಲಕ ಗೋಬಿಂದ್‌ಪುರಕ್ಕೆ ಸೇರಿಸುತ್ತದೆ. ಜಮ್ಶೆಡ್‌ಪುರದಿಂದ ರಾಂಚಿ (131 ಕಿಮೀ), ಪಾಟ್ನಾ, ಗಯಾ, ಕೋಲ್ಕತ್ತಾ (300 ಕಿಮೀ)ಕ್ಕೆ ಬಹಾರಗೊರ, ಹಜಾರಿಬಾಗ್, ಪುರಿ, ಭುಬನೇಶ್ವರ್, ಅಸನ್ಸೋಲ್, ಬೊಕಾರೊ, ಧಾನ್ಬಾದ್ ಇತ್ಯಾದಿಗಳ ಮ‌ೂಲಕ ಹಾದುಹೋಗುವ ಕಾಯಂ ಬಸ್ ಸೌಲಭ್ಯವಿದೆ. ಆದಿತ್ಯಾಪುರ ಮತ್ತು ನಗರದೊಂದಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥವು (ಸಂಪೂರ್ಣ ಪೂರ್ವ ಪ್ರದೇಶದಲ್ಲಿರುವುದರಲ್ಲಿ ಒಂದು ಪ್ರಕಾರದ) 2009ರ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ.
  • ಬಸ್ ಸೌಲಭ್ಯಗಳು : JUSCOದಿಂದ ಸಾರಿಗೆ ಸೇವೆ ಒದಗಿಸುತ್ತಿರುವ ಜಮ್ಶೆಡ್‌ಪುರ ಸಿಟಿ ರೈಡ್ ಬಸ್, ನೂತನ ರಸ್ತೆ ಸಾರಿಗೆ ವ್ಯವಸ್ಥೆಯಾಗಿದೆ. ಇದನ್ನು 2009ರ ಮಾರ್ಚ್ 3ರ ಸ್ಥಾಪನಾ ದಿನದಂದು ಜಾರಿಗೆ ತರಲಾಯಿತು. ಟಾಟಾ ಸ್ಟಾರ್ ಬಸ್‌ಗಳ ಸಮೂಹವು ತ್ವರಿತ ಸಾರಿಗೆ ಸೌಲಭ್ಯ ಒದಗಿಸುತ್ತವೆ. ಇದು ನಗರದ ಹೆಚ್ಚಿನ ಪ್ರದೇಶಗಳಿಗೆ ಮಾರ್ಗ ಕಲ್ಪಿಸುವ ವಿಶೇಷ ಸೇವೆ ಹೊಂದಿರುವ ಸಾರಿಗೆ. ಪ್ರತಿಯೊಂದು ಬಸ್ GPS, ಎಲೆಕ್ಟ್ರಾನಿಕ್ ಚಿಹ್ನೆ ಫಲಕ ಮತ್ತು ಕಂಪ್ಯೂಟರೀಕೃತ ಟಿಕೆಟ್ ಮಾರಾಟ ಯಂತ್ರಗಳಿಂದ ಸಜ್ಜುಗೊಂಡಿರುತ್ತದೆ.

ಆಟೊ ರಿಕ್ಷಾಗಳು ಮತ್ತೊಂದು ಜನಪ್ರಿಯ,ಸುಲಭ ಸ್ಥಳೀಯ ಸಾರಿಗೆ ವ್ಯವಸ್ಥೆ. ಇದರಲ್ಲಿ ಪ್ರಯಾಣಿಸುವ ಮೊದಲು ಬಾಡಿಗೆಯನ್ನು ಖಚಿತಪಡಿಸಿಕೊಳ್ಳಬೇಕು. ಆಟೊ ರಿಕ್ಷಾಗಳು ಇಲ್ಲಿ ಸಾಮಾನ್ಯವಾಗಿ 'ಪರಸ್ಪರ ಹಂಚಿಕೊಳ್ಳುವ' ನೀತಿಯ ಆಧಾರದಲ್ಲಿ ಬಾಡಿಗೆ ನಿಗದಿ ಮಾಡಿ ಪಡೆಯುತ್ತವೆ, ಅಂದರೆ ಅನೇಕ ಪ್ರಯಾಣಿಕರು ಒಂದೇ ಸ್ಥಳಕ್ಕೆ ಹೋಗಲು ನಿಗದಿತ ದರವನ್ನು ಪಾವತಿಸಿ ಆಟೊವನ್ನು ಹಂಚಿಕೊಳ್ಳುವುದು.

ಆಸಕ್ತಿಯ ಸ್ಥಳಗಳು[ಬದಲಾಯಿಸಿ]

  • ಟಾಟಾ ಸ್ಟೀಲ್  : ಈ ನಗರದ ಆಧಾರಸಂಸ್ಥೆಯಾದ ಉಕ್ಕಿನ ಕಂಪನಿಯು ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅದರ ದೋಷರಹಿತ ಗುಣಮಟ್ಟ ಮತ್ತು ಯೋಜನೆಯಿಂದಾಗಿ ಕೆಂಪು ಸಮುದ್ರದಿಂದ ಪೂರ್ವಭಾಗಕ್ಕಿರುವ ಪ್ರದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿತ್ತು. ಈಗ ಪ್ರಪಂಚದ ಆರನೇ ಅತೀದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಕವಾಗಿದೆ. ಈ ಸಂಸ್ಥೆಯು ಅದರ ಹೆಚ್ಚಿನ ಉದ್ಯೋಗಿಗಳಿಗೆ ಸಾಮಾಜಿಕ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.
  • ಜುಬಿಲಿ ಪಾರ್ಕ್ : ಈ ಪಾರ್ಕ್ ಜಮ್ಶೆಡ್‌ಪುರದ ನಾಗರಿಕರಿಗೆ ನಗರವು 50 ವರ್ಷಗಳನ್ನು ಪೂರೈಸಿದುದಕ್ಕಾಗಿ ಟಾಟಾ ಸ್ಟೀಲ್‌ ನೀಡಿದ ಸುವರ್ಣ ವರ್ಷದ ಉಡುಗೊರೆಯಾಗಿದೆ. ಇದನ್ನು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು 1956ರಲ್ಲಿ ಉದ್ಘಾಟಿಸಿದರು. ಈ 225-acre (0.91 km2) ಪಾರ್ಕ್ ವಿಶೇಷವಾದ ಒಂದು ಗುಲಾಬಿ ಉದ್ಯಾನ ಮತ್ತು ಒಂದು ಸರೋವರವನ್ನು ಹೊಂದಿದೆ. ಇದು ವಿಶೇಷವಾಗಿ ಕತ್ತರಿಸಿ ಒಪ್ಪಗೊಳಿಸಿದ ಅಶೋಕ ಮರಗಳಿರುವ ಹಾಗೂ ರಾತ್ರಿ ವೇಳೆಯ ನೀರಿನ ಕಾರಂಜಿ ಮತ್ತು ಕಿರುಜಲಪಾತವಿರುವ ಸಾಲು ಮರದ ವಿಶಾಲ ಬೀದಿಗೆ ಪ್ರವೇಶ ದ್ವಾರವಾಗಿದೆ. ವಾಯು ವಿಹಾರಕ್ಕಾಗಿ ಬೆಳಗ್ಗೆ ಬರುವವರಿಗೆ, ಜಾಗಿಂಗ್, ಸೈಕ್ಲಿಂಗ್ ಮತ್ತು ಹವ್ಯಾಸಿ ಮೀನುಗಾರರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ಜುಬಿಲಿ ಪಾರ್ಕ್‌ನೊಳಗೆ ಅಥವಾ ಹತ್ತಿರದಲ್ಲಿ ಕೆಲವು ಮನರಂಜನೆಯ ಕೇಂದ್ರಗಳೂ ಇವೆ.
  • ಲೇಸರ್ ಶೊ : ರಾಷ್ಟ್ರದಲ್ಲಿರುವ ಇದೇ ತೆರನಾದ ಪ್ರಮುಖ ಲೇಸರ್ ಶೊ ಮತ್ತು ಸಂಗೀತ ಕಾರಂಜಿಗಳು ಅನನ್ಯ, ಶಿಕ್ಷಣ ಹಾಗೂ ಮನರಂಜನೆ ನೀಡುವ ಸಾರ್ವಜನಿಕ ಮನಮೋಹಕ ದೃಶ್ಯವಾಗಿದೆ. ಲೇಸರ್ ಶೊ ನವ ಸಹಸ್ರಮಾನದ ಸ್ವರ್ಣಯುಗ ಆಚರಣೆಗೆ ಭಾರತದಲ್ಲಿ ಪ್ರಥಮ ಬಾರಿ ರೂಢಿಗೆ ತಂದ ಕಾರ್ಯಕ್ರಮವಾಗಿದೆ.
  • ಟಾಟಾ ಸ್ಟೀಲ್ ಜೂವಲಾಜಿಕಲ್ ಪಾರ್ಕ್ : ವ್ಯವಸ್ಥಿತ ಉಸ್ತುವಾರಿಯಲ್ಲಿರುವ ಮೃಗಾಲಯವೊಂದು ಜುಬಿಲಿ ಪಾರ್ಕ್‌ನ ಒಂದು ಮ‌ೂಲೆಯಲ್ಲಿದೆ. ಸ್ವಚ್ಛಂದ ಪ್ರಾಣಿಗಳು ಬಂಧನವಿಲ್ಲದೆ ಸ್ವತಂತ್ರವಾಗಿ ತಿರುಗಾಡುವವರಿಗೆ, ಗಿಡಮರ ತುಂಬಿದ ಪ್ರದೇಶದಲ್ಲಿ ಒಂದು ಸುತ್ತು ಬರಲು ಪಾರ್ಕ್‌ನಲ್ಲಿರುವ 'ಸಫಾರಿ ಪಾರ್ಕ್' ಅವಕಾಶ ಮಾಡಿಕೊಡುತ್ತದೆ. ನೇಚರ್ ಎಜುಕೇಶನ್ ಸೆಂಟರ್‍‌ಗೆ ಭೇಟಿ ನೀಡುವುದು, ಜುಬಿಲಿ ಸರೋವರದಲ್ಲಿ ದೋಣಿ ವಿಹಾರ ಮಾಡುವುದು ಅಥವಾ ನೇಚರ್ ಟ್ರೈಯಲ್‌ನ ಉದ್ದಕ್ಕೂ ನಡೆದಾಡುವುದು ವಿಶ್ರಾಂತಿ ಪಡೆವ ಅನನ್ಯ ಮಾರ್ಗಗಳು. ಉಕ್ಕಿನ ಸ್ಥಾವರದೊಂದಿಗಿನ ವನ್ಯಜೀವಿಗಳ ಸಹಜೀವನವು ಕೈಗಾರಿಕೆ ಮತ್ತು ನಿಸರ್ಗದ ನಡುವಿನ ಅತ್ಯುತ್ತಮ ಸಮತೋಲನ ಸಂಬಂಧಕ್ಕೆ ಸಾಕ್ಷಿಯಾಗಿದೆ.
  • ಜುಬಿಲಿ ನಿಕ್ಕೊ ಅಮ್ಯೂಸ್‌ಮೆಂಟ್ ಪಾರ್ಕ್ : ಈ ಪಾರ್ಕ್ ಉಕ್ಕಿನ ನಗರದಲ್ಲೇ ಅತ್ಯಂತ ತಾಜಾ ಮನರಂಜನೆ ನೀಡುವ ವಿಶಿಷ್ಟ ಜಾಗೆ ಎನಿಸಿದೆ. ಜಮ್ಶೆಡ್‌ಪುರದ ಮಕ್ಕಳಿಗೆ ವಿಶೇಷ ವರದಾನವಾಗಿರುವ ಈ ಮನೋಲ್ಲಾಸದ ವಿಹಾರಿ ಉದ್ಯಾನವು ಮನರಂಜನೆ ನೀಡುತ್ತದೆ, ಇದು ಮೊದಲು ಮೆಟ್ರೊ ನಗರಗಳಲ್ಲಿ ಮಾತ್ರ ಈ ಸೌಲಭ್ಯ ದೊರಕುತಿತ್ತು. ಹಸಿರು ದಿಬ್ಬಗಳು ಮತ್ತು ಜಲಾಗಾರಗಳು ವಿಹಾರಕ್ಕೆ ಅತ್ಯದ್ಭುತ ಪರಿಸರ ಒದಗಿಸುತ್ತವೆ, ಇಲ್ಲಿ ಗಾಳಿಯಲ್ಲಿ ತಿರುಗುವುದು, ಕಾರ್‌ಗಳನ್ನು ಮೋಜಿಗಾಗಿ ಡಿಕ್ಕಿ ಹೊಡೆಸುವುದು, ರೋಲಿಂಗ್ ಟಿಲ್ ದ ಮ‌ೂನ್, ಕುದುರೆ ಸವಾರಿ, ಕ್ಯಾಟರ್‌ಪಿಲ್ಲರ್ ಸವಾರಿ ಮತ್ತು 75-ಮೀಟರ್ ಉದ್ದದ ಜಾರುಬಂಡಿ ಮೊದಲಾದ ಆಟಗಳನ್ನೂ ಲಘುವಿಹಾರಿಗಳು ಆನಂದಿಸಬಹುದು.
  • ದಿಮ್ನಾ ಸರೋವರ : ದಾಲ್ಮಾಬೆಟ್ಟಗಳ ಬುಡದಲ್ಲಿರುವ ಬೀಡುಬಿಟ್ಟಿರುವ ದಿಮ್ನಾ ಸರೋವರವೊಂದು ಕೃತಕ ಜಲಾಶಯ ಹಾಗೂ ಇದು ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ಮ‌ೂಲಗಳಲ್ಲಿ ಒಂದಾಗಿದೆ. ಈ ಸರೋವರವು ಜೆಟ್‌ಸ್ಕೈಯಿಂಗ್, ದೋಣಿ ಸ್ಪರ್ಧೆ(ರೋಯಿಂಗ್ ) ಮತ್ತು ವಾಟರ್ ಸ್ಕೂಟಿಂಗ್ ಮೊದಲಾದ ಜಲ ಕ್ರೀಡೆಗಳ ಸೌಲಭ್ಯ ಹೊಂದಿದೆ.
  • ನದಿಗಳ ಸಂಗಮ : 'ದೋಮುಹನಿ' - ಖಾರ್ಕೈ ಮತ್ತು ಸುಬರ್ಣರೇಖಾ ನದಿಗಳ ಸುಂದರವಾದ ಸಂಗಮ ಸ್ಥಳ. ನಗರದ ವಾಯುವ್ಯ ಭಾಗದಲ್ಲಿರುವ ದೋಮುಹನಿಯು ಜನಪ್ರಿಯ ಪ್ರವಾಸಿ ಸ್ಥಳವಾಗಿದೆ.
  • ದಾಲ್ಮಾಬೆಟ್ಟಗಳು : ಇವು ಸುಬರ್ಣರೇಖಾ ನದಿಯ ಉತ್ತರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 16ಕಿಮೀನಷ್ಟು ಉದ್ದಕ್ಕೆ ಚಾಚಿಕೊಂಡಿವೆ. ರಸ್ತೆ ಇವುಗಳ ಪ್ರಮುಖ ಸಂಪರ್ಕ ಸಾಧನ ಇದರ ಮೂಲಕ ಇಲ್ಲಿ ತಲುಪಬಹುದು. ಕಾಡಾನೆಗಳ ಹಿಂಡಿಗೆ ಇದು ಅತ್ಯಂತ ಹೆಸರುವಾಸಿ. ದಾರಿಮಾಡಿಕೊಂಡು ಸಾಗುವುದಕ್ಕೆ(ಟ್ರೆಕಿಂಗ್) ಮತ್ತು ಬೆಟ್ಟ ಹತ್ತುವ ಸಾಹಸಗಳಿಗೆ ಸೌಕರ್ಯ ಕಲ್ಪಿಸಲಾಗಿದೆ.
  • ಹುಡ್ಕೊ ಸರೋವರ : ಕೃತಕ ಜಲಪಾತ ಮತ್ತು ಮಾನವನಿರ್ಮಿತ ಸರೋವರವನ್ನು ಹೊಂದಿರುವ, ಟೆಲ್ಕೊ ಕಾಲನಿಯಲ್ಲಿರುವ ಒಂದು ಸುಂದರ ಉದ್ಯಾನವನ ಮತ್ತು ವನಭೋಜನದೊಂದಿಗಿನ ವಿಹಾರಿ ಪ್ರದೇಶ. ಸಮೀಪದಲ್ಲಿರುವ ಸಣ್ಣ ಗುಡ್ಡವು ಸುತ್ತಮುತ್ತಲಿನ ಪ್ರದೇಶಗಳ ನಿಸರ್ಗದ ಅದ್ಭುತ ದೃಶ್ಯಾವಳಿವೊಂದಿಗೆ ಮನಸೆಳೆಯುಸುತ್ತದೆ..
  • ಸರ್ ದೋರಾಬ್‌ಜಿ ಟಾಟಾ ಪಾರ್ಕ್ : ಇದು ಕೀನನ್ ಕ್ರೀಡಾಂಗಣದ ಹತ್ತಿರದಲ್ಲಿದೆ. ಇಲ್ಲಿ ಡಿಸೆಂಬರ್‌ನಲ್ಲಿ ಜಮ್ಶೆಡ್‌ಪುರದ ವಾರ್ಷಿಕ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಸಿಂಗರಿಸಿದ ಹುಲ್ಲುಮೈದಾನಗಳು, ಹೂವಿನ ಹಾಸಿಗೆಗಳು ಮತ್ತು ಕಾಂತಿಮಯವಾಗಿ ಬೆಳಗುವ ನೀರಿನ ಕಾರಂಜಿಗಳು ಪಾರ್ಕ್‌ಗೆ ಆಕರ್ಷಣೀಯ ಮೆರುಗನ್ನು ನೀಡುತ್ತವೆ.
  • ಭಾಟಿಯಾ ಪಾರ್ಕ್ : ಶಾಸ್ತ್ರಿ ನಗರದಲ್ಲಿರುವ ಇದು ಸುಬರ್ಣರೇಖಾ ನದಿಯ ದಂಡೆಯುದ್ದಕ್ಕೆ ಚಾಚಿಕೊಂಡಿದೆ. ಇದು ಕಾದ್ಮಾದ ಉಳಿಯಾನ್‌ನಲ್ಲಿ ನೆಲೆಗೊಂಡಿದೆ.
  • ಕೀನನ್ ಕ್ರೀಡಾಂಗಣ : ಬಹುಪ್ರಸಿದ್ಧ ಕ್ರೀಡಾಂಗಣ, ಇಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ. ಮೊಹಾಲಿ ಅಸ್ತಿತ್ವಕ್ಕೆ ಬರುವವರೆಗೆ ಕೀನನ್ ಕ್ರೀಡಾಂಗಣ ಭಾರತದ ಅತಿ ಸುಂದರ ಕ್ರಿಕೆಟ್ ಕ್ರೀಡಾಂಗಣ ಎಂದು ಹೆಸರು ಪಡೆದಿತ್ತು. ಹಲವಾರು ಏಕದಿನ ಪಂದ್ಯ ODIಗಳನ್ನು ಇಲ್ಲಿ ಆಡಲಾಗಿದೆ, ದುರದೃಷ್ಟವಶಾತ್ ಹೆಚ್ಚಿನವುಗಳಲ್ಲಿ ಭಾರತ ಸೋತಿತ್ತು.
  • JRD ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ : ಈ ಭವ್ಯ ಸಂಕೀರ್ಣವು ಒಂದು ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್ಬಾಲ್ ಮೈದಾನ ಹಾಗೂ ಒಂದು ದ್ವಿ-ಪಥದ ಕೃತಕ ಓಟದ ಟ್ರಾಕ್ ಹೊಂದಿದೆ. ಹ್ಯಾಂಡ್ ಬಾಲ್, ಟೆನ್ನಿಸ್, ವಾಲಿಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಬಾಕ್ಸಿಂಗ್ ಮತ್ತು ಟೇಬಲ್ ಟೆನ್ನಿಸ್ ಮೊದಲಾದ ಇತರ ಕ್ರೀಡೆಗಳಲ್ಲದೆ ಆಧುನಿಕ ವ್ಯಾಯಾಮಶಾಲೆಗಳೂ ಈ ಸಂಕೀರ್ಣದಲ್ಲಿ ಲಭ್ಯ ಇವೆ, ಇದು ಭಾರತದಲ್ಲೇ ಮೊದಲನೆಯದಾಗಿದೆ.
  • ರಸ್ಸಿ ಮೋಡಿ ಸೆಂಟರ್ ಆಫ್ ಎಕ್ಸೆಲೆನ್ಸ್ (RMCE) : ಜುಬಿಲಿ ಪಾರ್ಕ್‌ ಪಕ್ಕದಲ್ಲಿರುವ, ಹಫೀಜ್ ಕಂಟ್ರ್ಯಾಕ್ಟರ್ ವಿನ್ಯಾಸಗೊಳಿಸಿದ ಅನನ್ಯ ರಚನೆ, ಇದು ಜಮ್ಶೆಡ್‌ಪುರದ ಅನೇಕ ವೃತ್ತಿಕಲಾ ಸಂಸ್ಥೆಗಳಿಗೆ ನೆಲೆಯಾಗಿದೆ. ಇದು ಸ್ಟೀಲ್ ಕಂಪನಿ ಮತ್ತು ನಗರದ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನಿರಿಸುವ ಟಾಟಾ ಸ್ಟೀಲ್ ಆರ್ಕಿವ್ಸ್‌ಗೂ ಎಡೆನೀಡಿದೆ.
  • ಗೋಲ್ ಪಹಾರಿ ಮಂದಿರ : ನಗರದ ಪಕ್ಕದಲ್ಲಿರುವ ಇದು ಪಹಾರಿ ಮಂದಿರಕ್ಕೆ ಹೆಸರುವಾಸಿಯಾಗಿದೆ, ಪಹಾರಿ ಮಾ (ಪಹಾರಿ ಮಾತೆ)ಸದ್ಯ ಅಗ್ರಸ್ಥಾನದಲ್ಲಿರುವ ದೇವತೆ. ಈ ದೇವಾಲಯವನ್ನು (ಮಂದಿರ) ಟಾಟಾನಗರ ರೈಲು ನಿಲ್ದಾಣಕ್ಕೆ ಹತ್ತಿರದ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಪಹಾರಿ ಮಾ ದೇವಿಯನ್ನು ಆರಾಧಿಸುವ ಹಬ್ಬವನ್ನು ರೈಲ್ವೆ ಲೋಕೊ ಕಾಲನಿಯಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.
  • ಭುವನೇಶ್ವರಿ ಮಂದಿರ : ಇದು ಟೆಲ್ಕೊ ಕಾಲನಿಯಲ್ಲಿ VBCV ಶಾಲೆಗೆ ಹತ್ತಿರದಲ್ಲಿದೆ. ಗುಡ್ಡದ ತುದಿಯಲ್ಲಿರುವ ಈ ಮಂದಿರದಲ್ಲಿ ನಿಂತು ನಗರದ ಆಗ್ನೇಯ ಭಾಗವನ್ನೆಲ್ಲಾ ನೋಡಬಹುದು. ಇದರ ವೀಕ್ಷಣೆಯು ತುಂಬಾ ಸುಂದರವಾಗಿರುತ್ತದೆ.
  • ಘಟ್ಶಿಲ : ಪ್ರಸಿದ್ಧ ತಾಮ್ರದ ಕಾರ್ಖಾನೆ ಇರುವ, ಜಮ್ಶೆಡ್‌ಪುರದ ಪಶ್ಚಿಮಕ್ಕೆ 37 ಕಿಮೀ ದೂರದಲ್ಲಿರುವ ಜನವಸತಿ ಪ್ರದೇಶ. ಮನಮೋಹಕ ದೃಶ್ಯಗಳಿಗೆ ಹೆಸರುವಾಸಿಯಾಗಿರುವ ಒಂದು ಸುಂದರ ಪಟ್ಟಣ.
  • ಪಾರ್ದಿಹ್ ಕಾಳಿ ಮಂದಿರ : ಮಂಗೊಗೆ ತುಂಬಾ ಹತ್ತಿರದಲ್ಲಿರುವ ಪ್ರಖ್ಯಾತ ಕಾಳಿ ಮಂದಿರ.

ತಿಂಡಿ-ತಿನುಸುಗಳಿಗೆ ಉತ್ತಮ ತಾಣಗಳು[ಬದಲಾಯಿಸಿ]

ನಗರವು ಅನೇಕ ಉತ್ತಮ ದರ್ಜೆಯ ಮತ್ತು ಆದಾಯಕ್ಕೆ ಹೊಂದುವ ಬಜೆಟ್‌ನ ರೆಸ್ಟಾರೆಂಟುಗಳನ್ನು ಹೊಂದಿದೆ. ಅವುಗಳಲ್ಲಿ ಅತ್ಯುತ್ತಮ ಮತ್ತು ಹೆಚ್ಚು ಪ್ರಸಿದ್ಧ ರೆಸ್ಟಾರೆಂಟುಗಳೆಂದರೆ:

  • ವೈಟ್ ರೋಸ್ - ತಾಜ್ ಕಟ್ಟಡದಲ್ಲಿದೆ
  • ಇಕ್ವಿನಾಕ್ಸ್ - ಜಮ್ಶೆಡ್‌ಪುರದ ಅತ್ಯಂತ ದುಬಾರಿ ರೆಸ್ಟಾರೆಂಟು, ಇದು ದ ಸೋನೆಟ್ ಹೋಟೆಲ್‌ನ ಒಂದು ಭಾಗ.
  • ಕಿನ್ನಮೋನ್ - ದ ಸೋನೆಟ್ ಹೋಟೆಲ್‌ನ ಉತ್ತಮ ದರ್ಜೆಯ ಮತ್ತೊಂದು ರೆಸ್ಟಾರೆಂಟು.
  • ದೀಪ್ ಪರ್ಪಲ್ - ಸಕ್ಚಿಯಲ್ಲಿನ ಸ್ಮಿತಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿರುವ ಸ್ವಲ್ಪ ಮಟ್ಟಿಗೆ ದುಬಾರಿಯಾಗಿರುವ ಹೊಸ ರೆಸ್ಟಾರೆಂಟು.
  • ಗೋದಾವರಿ - ಉತ್ತಮ ಸಸ್ಯಾಹಾರಿ ರೆಸ್ಟಾರೆಂಟು, ಇದು ಗಂಗಾ ಇಂಟರ್‌ನ್ಯಾಷನಲ್ ಹೋಟೆಲ್‌ನ ಒಂದು ಭಾಗ.
  • ದೆಹಲಿ ದರ್ಬಾರ್ - ಮಾಂಸಾಹಾರಕ್ಕೆ ಅತ್ಯುತ್ತಮ ಸ್ಥಳವಾದ ಇದು ಸಕ್ಚಿಯಲ್ಲಿ ಶಾಪರ್ಸ್ ಸ್ಕ್ವೇರ್ ಮಾರಾಟಮಳಿಗೆಯ ಹತ್ತಿರದಲ್ಲಿದೆ.
  • ಫ್ರಾಂಕ್ಸ್ - ಚೈನೀಸ್ ಮತ್ತು ಥೈ ಆಹಾರ ಪ್ರಿಯರಿಗೆ ಉತ್ತಮ ಜಾಗ.
  • ದಾವತ್ - ಏಷ್ಯಿಯನ್ ಇನ್ ಹೋಟೆಲ್‌ನ ಭಾಗವಾಗಿರುವ ಇದು ಧಾಟ್ಕಿದಿಹ್‌ನಲ್ಲಿದೆ. ಇಲ್ಲಿ ನೀವು ಇದುವರೆಗೆ ಊಹಿಸದ ಮೊಘಲರ ಉತ್ತಮ ಆಹಾರಪದಾರ್ಥಗಳನ್ನು ಪಡೆಯಬಹುದು, ಅವಕಾಶ ಸಿಕ್ಕರೆ ಖಂಡಿತ ಕಳೆದುಕೊಳ್ಳಬೇಡಿ!.
  • ಕಂಟ್ರಿ ಕ್ಲಬ್ -ಹೆದ್ದಾರಿಯಲ್ಲಿರುವ ರೆಸ್ಟಾರೆಂಟ್-ಬಾರ್.
  • ಲಿಟಲ್ ಇಟಲಿ - ಇದು ತಾರಸಿ ಮಾಡಿನ ರೆಸ್ಟಾರೆಂಟು. (ಸೆಂಟರ್ ಪಾಯಿಂಟ್
  • ಫುಡ್ ಜಂಕ್ಷನ್ ಇಂಟರ್‌ನ್ಯಾಷನಲೆ - ಭಾರತ, ಚೀನಾ, ಮೆಕ್ಸಿಕೊ ಮೊದಲಾದ ರಾಷ್ಟ್ರಗಳ ಬಹುಆಹಾರ ಪ್ರಕಾರಗಳನ್ನು ನೀಡುತ್ತದೆ. ಇದು ಬಿಸ್ತುಪುರದ ಸೇಂಟ್ ಮೇರಿಸ್ ಚರ್ಚ್‌ನ ಎದುರು, N. ರಸ್ತೆಯಲ್ಲಿದೆ.

ಶಿಕ್ಷಣ[ಬದಲಾಯಿಸಿ]

ರಾಷ್ಟ್ರಮಟ್ಟದಲ್ಲಿ ಹೋಲಿಸಿದರೆ ಜಮ್ಶೆಡ್‌ಪುರವು ಹೆಚ್ಚಿನ ಸಾಕ್ಷರತಾ ಪ್ರಮಾಣ ಹೊಂದಿದೆ. ಉಕ್ಕಿನ ನಗರದಲ್ಲಿ ಸುಮಾರು 183 ಶಾಲೆಗಳು ಹಾಗೂ 13 ಕಾಲೇಜುಗಳೂ ಇವೆ. ಇವುಗಳಲ್ಲಿ 25 ಶಾಲೆಗಳು ಮತ್ತು ಒಂದು ಅಂತರ್-ಕಾಲೇಜು JUSCO ಶಿಕ್ಷಣ ವಿಭಾಗದಿಂದ ನಿರ್ವಹಿಸಲ್ಪಡುತ್ತವೆ. ಅವು ರಿಯಾಯಿತಿ ದರದ ಶುಲ್ಕದೊಂದಿಗೆ ಸುಮಾರು ಮ‌ೂವತ್ತು ಸಾವಿರ ಮಕ್ಕಳಿಗೆ ನೆರವು ನೀಡುತ್ತಿವೆ. ಟಾಟಾ ಸ್ಟೀಲ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯವಾಗುವಂತಹ ಅನೇಕ ವಿದ್ಯಾರ್ಥಿವೇತನಗಳನ್ನು ನೀಡುತ್ತದೆ. ಇದರಲ್ಲಿ ಪ್ರಮುಖವಾದುದು ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ, ಇದನ್ನು ಹಲವಾರು ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಜಮ್ಶೆಡ್‌ಪುರದಲ್ಲಿ ಹೆಚ್ಚು ಪ್ರಖ್ಯಾತ ಸಂಸ್ಥೆಗಳೆಂದರೆ - XLRI (ಕ್ಸೇವಿಯರ್ ಲೇಬರ್ ರಿಲೇಶನ್ಸ್ ಇನ್‌ಸ್ಟಿಟ್ಯೂಟ್), ಇದು ರಾಷ್ಟ್ರದಲ್ಲೇ ಅತ್ಯುತ್ತಮವಾದವುಗಳಲ್ಲಿ ಒಂದು ನಿರ್ವಹಣಾ ಸಂಸ್ಥೆ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಮ್ಶೆಡ್‌ಪುರ, ಇದು ಎಂಜಿನಿಯರಿಂಗ್/ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡ ಸಂಸ್ಥೆ.

ಜಮ್ಶೆಡ್‌ಪುರವು ಭಾರತದಲ್ಲೇ ಉತ್ಯುತ್ತಮ ಶಾಲೆಗಳನ್ನು ಹೊಂದಿರುವುದರಿಂದ, ಇಲ್ಲಿ ಶಿಕ್ಷಣ ಪಡೆಯುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಜಮ್ಶೆಡ್‌ಪುರದಲ್ಲಿರುವ ಶಾಲೆಗಳ ಮತ್ತು ಕಾಲೇಜುಗಳ ಪಟ್ಟಿಗಾಗಿ ಇಲ್ಲಿರುವ ಶೈಕ್ಷಣಿಕ ಸಂಸ್ಥೆಗಳನ್ನು ನೋಡಿ.

ಹೆಚ್ಚಿನ ಶಾಲೆಗಳು ICSE/ISC ಮಾದರಿಯನ್ನು ಅನುಸರಿಸುತ್ತವೆ, ಇನ್ನು ಕೆಲವು CBSE ಅಂಗೀಕೃತ ಅಂಗಸಂಸ್ಥೆಯ ಪರೀಕ್ಷಾಮಂಡಳಿ ಹೊಂದಿವೆ.

ಕ್ರೀಡೆ[ಬದಲಾಯಿಸಿ]

ಟಾಟಾ ಸ್ಟೀಲ್ ಮತ್ತು ಜಮ್ಶೆಡ್‌ಪುರದ ಪ್ರಖ್ಯಾತಿಯಲ್ಲಿ ಕ್ರೀಡೆಗಳು ಪ್ರಮುಖ ಪಾತ್ರವಹಿಸುತ್ತವೆ, ಜಾರ್ಖಂಡ್‌ನ ಕ್ರೀಡಾ ರಾಜಧಾನಿ ಇದರ ಮೂಲ ಸ್ಪೂರ್ತಿಯಾಗಿದೆ. ಕ್ರೀಡಾಪಟುಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರತಿಭೆ ಮೆರೆಯಲು ಪರಿಣಿತ ತರಬೇತುದಾರರ ಮೇಲ್ವಿಚಾರಣೆಯಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಆರಂಭವನ್ನು ಮುಖ್ಯವಾಗಿ ನಗರದ ಸಂಘಟಿತ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಕತ್ವದಿಂದ ಮಾಡಲಾಗುತ್ತದೆ.

ಕ್ರೀಡಾ ಚಟುವಟಿಕೆಗಳನ್ನು ಪ್ರೇರೇಪಿಸುವುದು ಟಾಟಾ ಸ್ಟೀಲ್‌ನ ನಿರಂತರ ಪ್ರಯತ್ನವಾಗಿದೆ. ಜಮ್ಶೆಡ್‌ಪುರದ ಅಸಂಖ್ಯಾತ ಖಾಸಗಿ ಕ್ಲಬ್‌ಗಳು ಗಾಲ್ಫ್, ಟೆನ್ನಿಸ್, ಸ್ಕ್ವಾಶ್, ಬಿಲ್ಯರ್ಡ್ಸ್, ಕುದುರೆ ಸವಾರಿ, ನೀರಿನ ಸ್ಕೂಟರಿಂಗ್ ಮೊದಲಾದ ಕ್ರೀಡೆಗಳಿಗೆ ಅವಕಾಶ ಒದಗಿಸುತ್ತವೆ.

ಜಮ್ಶೆಡ್‌ಪುರದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವುದಕ್ಕಾಗಿ ಅನೇಕ ಕ್ಲಬ್‌/ಕ್ರೀಡಾಂಗಣಗಳನ್ನು ಮಾಡಲಾಗಿದೆ -

ಕೀನನ್ ಕ್ರೀಡಾಂಗಣ - ದಾಲ್ಮಾಬೆಟ್ಟಗಳನ್ನು ಮತ್ತು ಟಾಟಾ ಸ್ಟೀಲ್ ಕಾರ್ಖಾನೆಗಳ ಹೊಗೆಕೊಳವೆಗಳನ್ನು ಹಿಂದೆರೆಯಾಗಿ ಹೊಂದಿರುವ ಈ ಕ್ರೀಡಾಂಗಣ ಕ್ರಿಕೆಟ್‌ಗೆ ಆಕರ್ಷಕವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಟಾಟಾ ಸ್ಟೀಲ್‌ನ ನಿವೃತ್ತ ಮುಖ್ಯ ನಿರ್ವಾಹಕ ಜಾನ್ ಲಾರೆನ್ಸ್ ಕೀನನ್‌ನ ಹೆಸರನ್ನು ಈ ಕ್ರೀಡಾಂಗಣಕ್ಕೆ ಇಡಲಾಗಿದೆ. ಇದನ್ನು ಭಾರತ ತಂಡಕ್ಕೆ ಇದು 'ಮಸಣ' ಎಂದೂ ಕರೆಯುತ್ತಾರೆ, ಈ ಕ್ರೀಡಾಂಗಣದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು 1983ರಲ್ಲಿ ನಡೆಯಿತು, ಅದರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಸೋಲು ಕಂಡಿತು. ಹಲವಾರು ಪಂದ್ಯಗಳನ್ನು ಇಲ್ಲಿ ಆಡಲಾಗಿದೆ, ಆದರೆ ದುರದೃಷ್ಟವಶಾತ್ ಭಾರತವು 1999-00ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ.ಯುವರಾಜ್ ಸಿಂಗ್ 2000ರ ICC ನಾಕ್-ಔಟ್‌ನಲ್ಲಿ ಆಡಲು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೊದಲು ಬಿಹಾರ್ ವಿರುದ್ಧದ ಪಂದ್ಯದಲ್ಲಿ ಅವನ ಮೊದಲ ಅತೀಹೆಚ್ಚಿನ 358 ಸ್ಕೋರ್‌ ಈ ಮೈದಾನದಲ್ಲಿ ಆಯಿತು.

ಟಾಟಾ ಫುಟ್ಬಾಲ್ ಅಕಾಡೆಮಿ (TFA) - ಈ ಅಕಾಡೆಮಿಯು ಭಾರತದ ಫುಟ್ಬಾಲ್ ಆಟಗಾರರಿಗೆ ವೈಜ್ಞಾನಿಕ ತರಬೇತಿ ನೀಡಲು ಹಾಗೂ ಭಾರತೀಯ ಫುಟ್ಬಾಲ್‌ನ್ನು ಸಮಗ್ರ ಅಭಿವೃದ್ಧಿ ಕಾರ್ಯಕ್ಕೊಳಪಡಿಸುವುದು 1987ರಲ್ಲಿ ಆರಂಭಗೊಂಡಿತು.

ಟಾಟಾ ಆರ್ಕೆರಿ ಆಕಾಡೆಮಿ - ಇದು ಛೋಟಾನಗರ ಮತ್ತು ಸಂತಲ್ ಪರ್ಗಾನದ ಬುಡಕಟ್ಟು ಜನರ ಕ್ರೀಡಾ ಸ್ಥಳವಾಗಿದೆ.(ಬಿಲ್ಲು ವಿದ್ಯೆ. ಟಾಟಾ ಸ್ಟೀಲ್ ಈ ಆರ್ಕೆರಿಯಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡಿ ಪ್ರಗತಿ ತಂದಿದೆ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಗುಣಮಟ್ಟಕ್ಕೆ ತರುವಂತಹ ಅವಶ್ಯ ಸೌಲಭ್ಯ ಮತ್ತು ಶಿಕ್ಷಣ ಒದಗಿಸಿದೆ.

ನಗರದಲ್ಲಿನ ಕೆಲವು ಪ್ರಮುಖ ಕ್ರೀಡಾಂಗಣಗಳೆಂದರೆ - JRD ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಸುಮಂತ್ ಮ‌ೂಲ್ಗಾವಂಕರ್ ಕ್ರೀಡಾಂಗಣ . ಹಲವಾರು ಒಳಾಂಗಣ ಕ್ರೀಡಾಂಗಣಗಳು ಹಾಗೂ ಇತರ ಉತ್ತಮ ಗುಣಮಟ್ಟದ ಕ್ರೀಡಾ ಮೈದಾನಗಳೂ ಇಲ್ಲಿವೆ.

ಜಮ್ಶೆಡ್‌ಪುರವು ಎರಡು ಗಾಲ್ಫ್ ಕೋರ್ಸುಗಳಿಗೂ ಪ್ರಸಿದ್ಧವಾಗಿದೆ.

ಹೋಟೆಲ್‌ಗಳು[ಬದಲಾಯಿಸಿ]

ನಗರದಲ್ಲಿನ ಉತ್ತಮ ಹೋಟೆಲ್‌ಗಳಲ್ಲಿ ಪ್ರಮುಖವಾದವುಗಳು:

  • ITC ಫೋರ್ಚೂನ್ ಪಾರ್ಕ್ ಸೆಂಟರ್ ಪಾಯಿಂಟ್
  • ದ ಸೋನೆಟ್
  • ಜಿಂಜರ್ ಹೋಟೆಲ್
  • ಹೋಟೆಲ್ ಮೆರಿಡಿಯನ್
  • ದ ಸಿಟಿ ಇನ್
  • ಯಶ್ವೀ ಇಂಟರ್‌ನ್ಯಾಷನಲ್
  • ಹೋಟೆಲ್ B.S. ಪಾರ್ಕ್ ಪ್ಲಾಜ
  • ದ ವೇವ್ ಇಂಟರ್‌ನ್ಯಾಷನಲ್
  • ಹೋಟೆಲ್ ಗಂಗಾ ರಿಜೆನ್ಸಿ
  • ಹೋಟೆಲ್ ಸ್ಮಿತಾ
  • ಹೋಟೆಲ್ ಗಂಗಾ ಇಂಟರ್‌ನ್ಯಾಷನಲ್

ಜಂಟಿ/ಜೋಡಿ/ಸಹೋದರಿ (ಅವಳಿ)ನಗರಗಳು[ಬದಲಾಯಿಸಿ]

ಜಮ್ಶೆಡ್‌ಪುರದ ಪ್ರಖ್ಯಾತರು[ಬದಲಾಯಿಸಿ]

  • ಭಾರತೀಯ ಸಿನಿಮಾ ತಾರೆ R. ಮಾಧವನ್ ಜನಿಸಿದ್ದು ಮತ್ತು ಬೆಳೆದದ್ದು ಜಮ್ಶೆಡ್‌ಪುರದಲ್ಲಿ.
  • ಮಿಸ್ ಇಂಡಿಯಾ ವರ್ಲ್ಡ್ 2000; 2000ರ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇಲ್ಲೇ ಹುಟ್ಟಿದ್ದು.
  • 2004ರ ಭುವನ ಸುಂದರಿ ಮತ್ತು ಬಾಲಿವುಡ್ ನಟಿ ತನುಶ್ರೀ ದತ್ತಾ ಜನಿಸಿದ್ದು ಮತ್ತು ಬೆಳೆದದ್ದು ಇಲ್ಲೇ.
  • ಸಿಖ್-ಬಂಗಾಳಿ ದಂಪತಿಗಳಿಗೆ ಜನಿಸಿದ ಪ್ರಸಿದ್ಧ ಭಾರತೀಯ TV ತಾರೆ ಸಿಮೋನ್ ಸಿಂಗ್ ಹುಟ್ಟಿ ಬೆಳೆದದ್ದು ಜಮ್ಶೆಡ್‌ಪುರದಲ್ಲಿ.
  • ಇಮ್ತಿಯಾಜ್ ಆಲಿ- ಹಿಂದಿ ಚಲನಚಿತ್ರ ನಿರ್ದೇಶಕ (ಅವನ ಪ್ರಮುಖ ಸಾಧನೆಗಳು - ಸೋಚಾ ನ ಥಾ, ಜಬ್ ವಿ ಮೆಟ್ ಮತ್ತು ಲವ್ ಆಜಾ ಕಲ್)
  • ಸಿದ್ಧಾರ್ಥ ಬಸು - ಹೆಸರಾಂತ ಕ್ವಿಸ್ ಮಾಸ್ಟರ್ ಮತ್ತು ಮಾಧ್ಯಮ ಪ್ರಸಿದ್ಧ ವ್ಯಕ್ತಿ
  • ಶಿಲ್ಪಾ ರಾವ್ - ಅಮಿರ್, ಬಚ್ನಾ ಹೈ ಹಸೀನೊ ಮತ್ತು ದೇವ್ ಡಿ ಮೊದಲಾದ ಹಿಂದಿ ಚಿತ್ರಗಳ ಹಿನ್ನಲೆ ಗಾಯಕಿಇತ್ಯಾದಿ.
  • ಮಹೇಶ್ ಅನೆಯ್ - 1971ರಲ್ಲಿ ಲೊಯೋಲ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದ (ISC) ಇವನು ಸ್ವದೇಶ್ ಚಿತ್ರದ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದನು.
  • ನವೀನ್ ಶುಕ್ಲ - ಚಲನಚಿತ್ರದ 'ದೃಶ್ಯ ಪರಿಣಾಮದ ಕಲಾವಿದ', ಇವನು ಜಮ್ಶೆಡ್‌ಪುರದಲ್ಲಿ ಜನಿಸಿ, ಬೆಳೆದನು (ರಾಕ್ ಆನ್ ಮತ್ತು ಜಾನೆ ತು ಯಾ ಜಾನೇನಾ) ಮೊದಲಾದ ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ)
  • ಅಭಿನವ್ ಕುಮಾರ್ - 1998ರ IIT-JEEಯಲ್ಲಿ ಮೊದಲ ರ‌್ಯಾಂಕ್ ವಿಜೇತ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ Ph.D. ಮಾಡಿ ಪ್ರಸ್ತುತ MITಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದಾರೆ.
  • ಪರಿಸರವಾದಿ ಅಜಿತ್ ಕುಮಾರ್ ಸಿಂಗ್ ಹುಟ್ಟಿ ಬೆಳೆದದ್ದು ಜಮ್ಶೆಡ್‌ಪುರದಲ್ಲಿ. ನಿಸರ್ಗಕ್ಕಾಗಿ ಮತ್ತು "ಗೈಯಾ" ಭೂತಾಯಿಗಾಗಿ ಕೆಲಸ ಮಾಡುತ್ತಾರೆ[೬].
  • ಅಲ್ಮಾಮ ಅರ್ಶಾದುಲ್ ಕ್ವಾದ್ರಿ - ಹೆಸರಾಂತ ಉರ್ದು ಇಸ್ಲಾಮಿಕ್ ಬರಹಗಾರ ಮತ್ತು ಧಾರ್ಮಿಕ ಮುಖಂಡ. ಅವರ ಪ್ರಸಿದ್ಧ ಪುಸ್ತಕಗಳೆಂದರೆ - ಝಾಲ್ಝಲಾ, ಜೆರ್-ಒ-ಜಬರ್, ಲಾಲಜರ್.
  • ಡಾ. ಸುಹಾಸ S. ಪಾಟೀಲ್ - ಜಮ್ಶೆಡ್‌ಪುರದಲ್ಲಿ ಜನಿಸಿದ ಇವನು ಸಿಲಿಕಾನ್ ವ್ಯಾಲಿ ವಾಣಿಜ್ಯೋದ್ಯಮಿ, ಸಾಹಸಿ ಬಂಡವಾಳಗಾರ ಮತ್ತು ಲೋಕೋಪಕಾರಿ. ಸರ್ಕಸ್ ಲಾಜಿಕ್ ಕಂಪನಿಯನ್ನು ಸ್ಥಾಪಿಸಿದವನು ಇವನು.
  • ಪದ್ಮಶ್ರೀಅಸ್ತಾದ್ ದೆಬೊ - ಆಧುನಿಕ ನೃತ್ಯಗಾರ್ತಿ ಮತ್ತು ನೃತ್ಯಸಂಯೋಜಕಿ.
  • ಡಾ. ಯಶ್ವಂತ್ ಗುಪ್ತ - ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರೊಫಿಸಿಕ್ಸ್‌ನ ನಿರ್ದೇಶಕ
  • ಅತುಲ್ ಕೊಚ್ಚಾರ್ - ಜಾಗತಿಕವಾಗಿ ಪ್ರಶಂಸೆ ಗಳಿಸಿದ ಮುಖ್ಯ ಬಾಣಸಿಗ ಮತ್ತು ಮೈಕೆಲಿನ್ ಸ್ಟಾರ್ ಮೆಚ್ಚುಗೆ ಸ್ವೀಕೃತ ವ್ಯಕ್ತಿ.
  • ಶುಮೋನೆ ಚಟರ್ಜಿ - ಲೆವಿ ಸ್ಟ್ರಾಸ್ & Co. ಇಂಡಿಯಾದ MD
  • ಸೌರಭ್ ಸಿನ್ಹ - ಇಂಡಿಆಡ್ಸ್ ನೆಟ್ವರ್ಕ್‌ನ ರಾಷ್ಟ್ರ ಮುಖಂಡ
  • ಪ್ರಾವಲ್ ರಾಮನ್ (ಹಿಂದಿನ ಪಾಂಡಿ) -ಡರ್ನಾ ಮನಾ ಹೈ ಮತ್ತು ಗಾಯಬ್ ಮೊದಲಾದ ಹಿಂದಿ ಚಿತ್ರಗಳ ನಿರ್ದೇಶಕ.
  • ರಾಜ್‌ದೀಪ್ ಚಟರ್ಜಿ - ಇಂಡಿಯನ್ ಐಡಲ್ 4 ಫೈನಲ್ ಪ್ರವೇಶಿಸಿದ ಆಟಗಾರ. ಪ್ರಮುಖ 4ಸ್ಪರ್ಧಿಗಳಲ್ಲಿ ಗೆದ್ದನು.
  • ಗೆರಾಲ್ಡ್ ಡ್ಯುರೆಲ್ (1925 – 1995) - ನಿಸರ್ಗವಾದಿ, ಖಗ-ಮೃಗಗಳನ್ನು ರಕ್ಷಿಸುವವನು, ಪಾಲಕ, ಬರಹಗಾರ ಮತ್ತು ದೂರದರ್ಶನ ನಿರೂಪಕ.
  • ಡಾ. ಸೋಮನಾಥ್ ದಾಸ್‌ಗುಪ್ತ (1983--) - ಇಂಡಿಯನ್ ಪೋಲಿಷ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್‌([೧])ನ ‌ಹಿರಿಯ ಉಪಾಧ್ಯಕ್ಷ ಹಾಗೂ ಯುರೋಪ್‌ನ 3ನೇ ಅತೀದೊಡ್ಡ ಫ್ಯಾಶನ್ ಸಂಸ್ಥೆ ಪನಾಶೆ([೨] Archived 2009-03-03 ವೇಬ್ಯಾಕ್ ಮೆಷಿನ್ ನಲ್ಲಿ.)ಯ ಅಧ್ಯಕ್ಷ, ಇವರು ಹುಟ್ಟಿ-ಬೆಳೆದದ್ದು ನಗರದ ಅಗ್ರಿಕೊ ಪ್ರದೇಶದಲ್ಲಿ.
  • ಡಾ. ಮನ್ಜಾರ್ ಕಾಜ್ಮಿ - ಕರಿಮ್ ಸಿಟಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಉರ್ದು ಸಾಹಿತ್ಯದ ಹೆಸರಾಂತ ಬರಹಗಾರ. ಅವರ ಸಣ್ಣಕಥೆಗಳ ಸಂಗ್ರಹ "ತೋತೆ ಬೋಲ್ತೆ ಹೈ (ಗಿಳಿಗಳು ಮಾತನಾಡುತ್ತವೆ)" ಉರ್ದು ಸಾಹಿತ್ಯದಲ್ಲೇ ಪ್ರಸಿದ್ಧವಾದುದು.
  • ಅಬ್ರಾರ್ ಮೊಜೀಬ್ (b-1964) - ಉರ್ದು ಮತ್ತು ಹಿಂದಿ ಲೇಖಕ, ಕವಿ ಮತ್ತು ನಾಟಕಗಾರ, ಚಿತ್ರಕಥೆ ಬರಹಗಾರ. ಇವರ ಲೇಖನಗಳು, ಸಣ್ಣಕಥೆಗಳು ಮತ್ತು ಕಾವ್ಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಹಿತ್ಯದ ಮ್ಯಾಗಜಿನ್‌ಗಳಲ್ಲಿ ನಿಯತವಾಗಿ ಪ್ರಕಟಗೊಂಡಿವೆ.
  • ವಿಕಿ ತುಲ್ಸಿಯಾನ್ - ಜಮ್ಶೆಡ್‌ಪುರದಲ್ಲಿ ಬೆಳೆದ ಅಂತಾರಾಷ್ಟ್ರೀಯ ಮಟ್ಟದ ಕಲಾವಿದ.
  • V. ಸುದರ್ಶನ್ - CA, CS, ICWA, ಇವರು ಜನಿಸಿದುದು ಜಮ್ಶೆಡ್‌ಪುರದಲ್ಲಿ
  • ಸೌರಭ್ ತಿವಾರಿ - ಕಿರಿಯರ ವಿಶ್ವ ಕಪ್ ಪಂದ್ಯ ಗೆದ್ದ ಭಾರತದ ತಂಡ ಪ್ರತಿನಿಧಿಸಿದವನು, ಪ್ರಸ್ತುತ ಜಾರ್ಖಂಡ್ ರಣಜಿ ಕ್ರಿಕೆಟ್ ತಂಡದ ನಾಯಕನಾಗಿರುವ ಈತ ಭಾರತ ತಂಡದ ಭರವಸೆಯ ಆಟಗಾರ.
  • ಆರ್ಬಿಂದ್ ಕುಮಾರ್ (1984--) -ಹೆಲ್ತ್ ಕೇರ್ ಗ್ಲೋಬಲ್‌ನ (ದಕ್ಷಿಣ ಏಷ್ಯಾದ ಅತೀದೊಡ್ಡ ಕ್ಯಾನ್ಸರ್ ಕೇರ್ ನೆಟ್ವರ್ಕ್) ನಿರ್ವಹಣಾಧಿಕಾರಿ ಮತ್ತು ಮಿಶನ್ 5([2])ರ ಸದಸ್ಯ, ಇವರು ಹುಟ್ಟಿ ಬೆಳೆದದ್ದು ನಗರದ ಬರಿಗೊರ ಪ್ರದೇಶದಲ್ಲಿ.

ಆಕರಗಳು[ಬದಲಾಯಿಸಿ]

  1. ಫಾಲಿಂಗ್ ರೈನ್ ಗಿನಾಮಿಕ್ಸ್, ಇಂಕ್- ಜಮ್ಶೆಡ್‌ಪುರ
  2. GRIndia
  3. "ಆರ್ಕೈವ್ ನಕಲು". Archived from the original on 2011-05-03. Retrieved 2010-02-04.
  4. "ಆರ್ಕೈವ್ ನಕಲು". Archived from the original on 2010-07-28. Retrieved 2010-02-04.
  5. http://www.forumprojects.in www.forumprojects.in
  6. ಅಜಿತ್ ಕುಮಾರ್ ಸಿಂಗ್, ಲ್ಯಾಂಡ್ ಯ‌ೂಸ್, ಎನ್ವೈರ್ನ್‌ಮೆಂಟ್ ಆಂಡ್ ಎಕಾನಮಿಕ್ ಗ್ರೋತ್ ಇನ್ ಇಂಡಿಯಾ M.D. ಪ್ರಕಟಿತಗಳು (1997) ISBN 81-7533-025-2

ಹೊರಗಿನ ಕೊಂಡಿಗಳು[ಬದಲಾಯಿಸಿ]