ವಿಷಯಕ್ಕೆ ಹೋಗು

ಕಠೋಪನಿಷತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಕಠೋಪನಿಷತ್ಅತ್ಯಂತ ಪ್ರಮುಖವಾದ ಉಪನಿಷತ್ತು.ಪಾಶ್ಚಾತ್ಯ ವಿದ್ವಾಂಸರು ಭಾರತೀಯ ಅಧ್ಯಾತ್ಮ ರಹಸ್ಯಗಳನ್ನು ವಿವರಿಸುವಾಗ ಇದನ್ನು ಪರಮಾದರ್ಶವಾಗಿ ಉಲ್ಲೇಖಿಸುತ್ತಾರೆ.,[] ಇದು ಕೃಷ್ಣಯಜುರ್ವೇದದ ಕಾಠಕ ಶಾಖೆಗೆ ಸೇರಿದೆ.ಇದರಲ್ಲಿ ಮೂರು ವಲ್ಲಿಗಳನ್ನೊಳಗೊಂಡ ಎರಡು ಅಧ್ಯಾಯಗಳಿವೆ.ನಚಿಕೇತನು ಯಮಲೋಕಕ್ಕೆ ಹೋಗಿ ಯಮನಿಂದ ಆತ್ಮಜ್ಞಾನವನ್ನು ಹೊಂದಿದ ಕಥೆ ಇದರ ಮುಖ್ಯವಸ್ತು.

ಇದು ಎರಡು ಅಧ್ಯಾಯಗಳಿಂದ ಕೂಡಿದೆ. ಬ್ರಹ್ಮವಿದ್ಯೆಯನ್ನು ಬೇಡಿದ ನಚಿಕೇತನಿಗೆ ಯಮದೇವ ಪ್ರಲೋಭನಗಳನ್ನು ಒಡ್ಡಿದರೂ ಆತ ಅದಾವುದನ್ನೂ ಲಕ್ಷಿಸದೆ ಬ್ರಹ್ಮವಿದ್ಯೆಯನ್ನೇ ವರವಾಗಿ ಪಡೆದ ರೋಮಾಂಚನಕಾರಿ ಕಥೆ ಇರುವುದರಿಂದ ಅತ್ಯಂತ ಪ್ರಸಿದ್ಧವಾಗಿದೆ. ಜನ್ಮ, ಪುನರ್ಜನ್ಮಗಳು, ಮರಣಾನಂತರ ಆತ್ಮದ ಸ್ಥಿತಿ, ಇಂದ್ರಿಯನಿಗ್ರಹ ದಿಂದ ಪರಮಾತ್ಮಪ್ರಾಪ್ತಿ, ಶ್ರದ್ಧೆ, ಧೈರ್ಯಗಳಿಂದ ಪರಮಾತ್ಮ ಸ್ವರೂಪಜ್ಞಾನ, ಶಾಶ್ವತಸುಖ ಶಾಂತಿಗಳ ಪ್ರಾಪ್ತಿ-ಇವನ್ನು ಯಮ ಪ್ರಣವದಿಂದ ಸಂಗ್ರಹವಾಗಿ ನಚಿಕೇತನಿಗೆ ಉಪದೇಶಿಸಿ ದ್ದಾನೆ. ತಂದೆಯಾದ ವಾಜಶ್ರವಸ್ ಯಾಗ ಸಂದರ್ಭದಲ್ಲಿ ಕುಪಿತನಾಗಿ ತನ್ನನ್ನು ಯಮನಿಗೆ ಒಪ್ಪಿಸಿದರೂ ಧೈರ್ಯಗೆಡದೆ ಮಗನಾದ ನಚಿಕೇತ ಯಮನೊಂದಿಗೆ ವಾದಮಾಡಿ ಅಮೃತತ್ವವನ್ನು ಪಡೆಯುತ್ತಾನೆ. ತಂದೆಯ ಪ್ರಸನ್ನತೆಯೊಂದಿಗೆ ಅಗ್ನಿವಿದ್ಯೆಯನ್ನೂ ವರವಾಗಿ ಪಡೆಯುತ್ತಾನೆ. ಈ ಆಖ್ಯಾನವನ್ನು ಹೇಳಿದರೂ ಕೇಳಿದರೂ ಬ್ರಹ್ಮಲೋಕಪ್ರಾಪ್ತಿಯೆಂದು ಫಲಶ್ರುತಿ ಇದೆ. ಇದರಲ್ಲಿ ಮಾನವನ ಹುಟ್ಟು ಸಾವುಗಳ ಪ್ರಶ್ನೆಗೂ ಅವನ ಸುಖಕ್ಕೆ ಶ್ರೇಯ ಪ್ರೇಯಗಳಾವುವು ಎಂಬ ಪ್ರಶ್ನೆಗೂ ಉತ್ತರವಿದೆ. ನಿತ್ಯರಲ್ಲಿ ನಿತ್ಯನೂ ಚೇತನರಲ್ಲಿ ಚೇತನನೂ ಆಗಿ ಸಮಸ್ತಕ್ಕೂ ಏಕೈಕ ಕಾರಣನಾದ ಪರಮಾತ್ಮನನ್ನು ನಚಿಕೇತನಂಥ ಅಸಾಧಾರಣ ಧೀರನಾದವ ಮಾತ್ರ ಹೃದಯಗಹ್ವರದಲ್ಲಿ ಕಂಡುಕೊಳ್ಳುವನೆಂದು ಸ್ಪಷ್ಟಪಡಿಸಲಾಗಿದೆ. ಕೆಲವು ಸ್ವಾರಸ್ಯವಾದ ಅಂಶಗಳೂ ಇದರಲ್ಲಿ ಕಂಡುಬಂದಿವೆ. ಪರಲೋಕದಲ್ಲಿ ನಂಬಿಕೆ ಇಲ್ಲದವರು ಆ ಕಾಲದಲ್ಲೂ ಇದ್ದರೆಂದು ಸೂಚಿಸಲಾಗಿದೆ. ‘ಆಶ್ಚರ್ಯೋ ವಕ್ತಾ’. ‘ಅಣೋರಣೀಯಾನ್’, ‘ಅಜೋ ನಿತ್ಯಃ ಶಾಶ್ವತೋಯ ಪುರಾಣಃ’ ಎಂಬ ಉಕ್ತಿಗಳನ್ನು ಗೀತೆಯಲ್ಲಿ ತೆಗೆದುಕೊಳ್ಳಲಾಗಿದೆ. ಸಾಂಖ್ಯ ಮತ್ತು ಯೋಗದರ್ಶನಗಳಿಗಿಂತ ಈ ಉಪನಿಷತ್ ಹಿಂದಿನದೆಂದು ಕೆಲವು ವಾಕ್ಯಗಳು ಸೂಚಿಸುತ್ತವೆ: `ತದ್ವಿಷ್ಣೋಃ ಪರಮಂ ಪದಮ್’ ಎಂಬ ವಾಕ್ಯ ವಿಷ್ಣುವೇ ಪರಬ್ರಹ್ಮನೆಂದು ಈ ಉಪನಿಷತ್ತಿನ ನಿರ್ಣಯವೆಂದು ತೋರಿಸುತ್ತದೆ. ‘ಮೃತ್ಯೋಃ ಸಮೃತ್ಯುಮಾಪ್ನೋತಿ ಯ ಇಹ ನಾನೇವಪಶ್ಯತಿ’ ಎಂಬ ವಾಕ್ಯದಲ್ಲಿ ಅದ್ವೈತ ತತ್ತ್ವದ ಅಭಿಪ್ರಾಯವಿದೆ.

ಈ ಉಪನಿಷತ್ತಿನ ಪ್ರರ್ಥನಾ ಶ್ಲೋಕ ಇಂತಿದೆ.

    ಹರಿಃ ಓಂ
ಸಹ ನಾವವತು|ಸಹ ನೌ ಭುಜಕ್ತು|ಸಹ ವೀರ್ಯಂ ಕರವಾವಹೈ|
ತೇಜಸ್ವಿ ನಾವಧೀತಮಸ್ತು| ಮಾ ವಿದ್ವಿಷಾವಹೈ||
ಓಂ ಶಾಂತಿಃ   ಶಾಂತಿಃ  ಶಾಂತಿಃ

(ಭಗವಂತನು)ಗುರುಶಿಷ್ಯರಾದ ನಮ್ಮಿಬ್ಬರನ್ನೂ ಜೊತೆಯಲ್ಲಿ ಕಾಪಾಡಲಿ;ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ;(ನಾವು)ಜೊತೆಯಲ್ಲಿ ಸಾಮರ್ಥ್ಯವಂತರಾಗುವಂತೆ ಮಾಡಲಿ;ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ;(ನಾವು ಪರಸ್ಪರ)ದ್ವೇಷಮಾಡದೆ ಇರುವಂತಾಗಲಿ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ

[ಬದಲಾಯಿಸಿ]
Yama teaches Atma vidya to Nachiketa

ಇದು ಅತ್ಯಂತ ಪ್ರಸಿದ್ಧವೂ ಆದರಣೀಯವೂ ಆಗಿದೆ. ಪಾಶ್ಚಾತ್ಯ ಪಂಡಿತರು ಭಾರತೀಯ ಅಧ್ಯಾತ್ಮರಹಸ್ಯವನ್ನು ವಿವರಿಸುವಾಗ ಕಠೋಪನಿಷತ್ತನ್ನು ಪರಮಾದರ್ಶವಾಗಿ ಉಲ್ಲೇಖಿಸಿರುತ್ತಾರೆ. ಇದು ಸಾಮವೇದಕ್ಕೆ ಸೇರಿದುದೆಂದೂ ಅಥರ್ವಣ ಉಪನಿಷತ್ತೆಂದೂ ಬೇರೆ ಬೇರೆ ಮತಗಳಿದ್ದರೂ ಮುಕ್ತಿಕೋಪನಿಷತ್ತಿನಲ್ಲಿ ಕೊಟ್ಟಿರುವ ಕೃಷ್ಣ ಯಜುರ್ವೇದೀಯ ಉಪನಿಷತ್ತುಗಳ ಪಟ್ಟಿಯಲ್ಲಿ ಇದಕ್ಕೆ ಪ್ರಥಮ ಸ್ಥಾನವಿದೆ. ಇದನ್ನು ಒಳಗೊಂಡಿರುವ ಸಾಮವೇದದ ಅಥವಾ ಅಥರ್ವ ವೇದದ ಭಾಗಗಳು ಸಿಕ್ಕಿಲ್ಲ. ತೈತ್ತಿರೀಯ ಬ್ರಾಹ್ಮಣದಲ್ಲಿ ಬರುವ ನಚಿಕೇತನ ಕಥೆಯನ್ನು ಈ ಉಪನಿಷತ್ತಿನಲ್ಲಿ ರೋಮಾಂಚಕಾರಿಯಾಗಿ ನಿರೂಪಿಸಲಾಗಿದೆ. ಈ ಕಥೆಯ ಕುರುಹನ್ನು ಋಗ್ವೇದದ ಹತ್ತನೆಯ ಮಂಡಲದ 135ನೆಯ ಸೂಕ್ತದಲ್ಲಿ ಕಾಣಬಹುದು. ಅಲ್ಲಿ ಉಲ್ಲೇಖಿತನಾಗಿರುವ ಕುಮರನೇ ನಚಿಕೇತನೆಂದು ಸಾಯಣಾಚಾರ್ಯರ ಅಭಿಪ್ರಾಯ.

ಮೊದಲನೆಯ ಅಧ್ಯಾಯ

[ಬದಲಾಯಿಸಿ]

ಮೊದಲನೆಯ ಅಧ್ಯಾಯದಲ್ಲಿ ತಂದೆಯ ಆಜ್ಞೆಯಂತೆ ನಚಿಕೇತ ಯಮನಲ್ಲಿಗೆ ಹೋಗಿ ಅವನಿಗಾಗಿ ಮೂರು ದಿನಗಳು ಉಪವಾಸ ಮಾಡಿ ಅವನಿಂದ ಮೂರು ವರಗಳನ್ನು ಪಡೆದನೆಂದು ನಿರೂಪಿಸಲಾಗಿದೆ. ನಚಿಕೇತ ಮೊದಲನೆಯ ವರವಾಗಿ ತನ್ನ ವಿಷಯದಲ್ಲಿ ತಂದೆಯ ಪ್ರಸನ್ನತೆಯನ್ನು ಕೇಳಿದ. ಎರಡನೆಯ ವರ ಸ್ವರ್ಗಕ್ಕೆ ಸಾಧನವಾದ ಅಗ್ನಿವಿದ್ಯೆ, ಮೂರನೆಯದು ಆತ್ಮತತ್ತ್ವಕ್ಕೆ ಸಂಬಂಧಪಟ್ಟದ್ದು. ನಚಿಕೇತ ಆತ್ಮತತ್ತ್ವವನ್ನು ತಿಳಿದುಕೊಳ್ಳಲು ಯೋಗ್ಯನೋ ಅಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ಯಮ ನಾನಾ ವಿಧವಾದ ಭೋಗದ ಆಸೆಗಳಿಂದ ಪ್ರಲೋಭನಗಳನ್ನು ಒಡ್ಡಿದ. ಆದರೆ ನಚಿಕೇತ ಈ ಯಾವ ಸುಖಗಳನ್ನೂ ಬಯಸಲಿಲ್ಲ. ಎರಡನೆಯ ವಲ್ಲಿಯಲ್ಲಿ ನಚಿಕೇತ ಬ್ರಹ್ಮವಿದ್ಯೆಗೆ ಅಧಿಕಾರಿಯೆಂದು ಅರಿತು ಯಮ ಆತನಿಗೆ ಉಪದೇಶಮಾಡುತ್ತಾನೆ. (ಇದನ್ನು ಉಪದೇಶ ಮಾಡಿದ ಗುರುವೂ ತಿಳಿದುಕೊಳ್ಳುವ ಶಿಷ್ಯನೂ ಅದ್ಚುತ ವ್ಯಕ್ತಿಗಳೇ ಆಗಿದ್ದಾರೆ.) ಬ್ರಹ್ಮದ ವಾಚಕವೂ ಪ್ರತೀಕವೂ ಆದ ಪ್ರಣವದ ಮೂಲಕ ಬ್ರಹ್ಮದ ಸ್ವರೂಪವನ್ನು ಯಮ ಉಪದೇಶ ಮಾಡುತ್ತಾನೆ. ಪ್ರೇಯಸ್ಸನ್ನು ಬಯಸಿ ಅವಿವೇಕಿ ಪುರುಷಾರ್ಥದಿಂದ ಚ್ಯುತನಾಗುತ್ತಾನೆ. ಧೀಮಂತ ಶ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ. ಆಗ ಅವನಿಗೆ ಪರಮಾತ್ಮ ಪ್ರಾಪ್ತಿಯಾಗುತ್ತದೆ. ನಿಷ್ಕಾಮರಾಗಿ ಆತ್ಮನನ್ನೇ ಬಯಸುವವರಿಗೆ ಅವನು ಲಭಿಸುತ್ತಾನೆ. ಸದಾಚಾರ ಮತ್ತು ಇಂದ್ರಿಯನಿಗ್ರಹಗಳು ಆತ್ಮಪ್ರಾಪ್ತಿಗೆ ಆವಶ್ಯಕ-ಎಂಬ ಯಮನ ಉಪದೇಶದಿಂದ ವಲ್ಲಿ ಸಮಾಪ್ತವಾಗುತ್ತದೆ. ಮೂರನೆಯ ವಲ್ಲಿಯಲ್ಲಿ ಶರೀರವೇ ರಥ, ಆತ್ಮನೇ ಒಡೆಯ ಅಂದರೆ ರಥಿ, ಬುದ್ಧಿ ಸಾರಥಿ, ಮನಸ್ಸು ಕಡಿವಾಣ, ಇಂದ್ರಿಯಗಳು ಕುದುರೆಗಳು, ಶಬ್ದಾದಿ ವಿಷಯಗಳು ಆ ಕುದುರೆಗಳು ಹೋಗುವ ರಸ್ತೆಗಳು ಎಂಬ ರೂಪಕ ಕಲ್ಪನೆಯಿಂದ ವಿವೇಕಿಗೆ ಮಾತ್ರ ಇಂದ್ರಿಯಗಳು ವಶವಾಗಿ ಆತ ಪರಮಪದವನ್ನು ಮುಟ್ಟುತ್ತಾನೆ-ಎಂದು ಹೇಳಲಾಗಿದೆ.

ಎರಡನೆಯ ಅಧ್ಯಾಯ

[ಬದಲಾಯಿಸಿ]

ಎರಡನೆಯ ಅಧ್ಯಾಯದ ಮೊದಲನೆಯ ವಲ್ಲಿಯಲ್ಲಿ ಅಂಗುಷ್ಟ ಮಾತ್ರ ಪ್ರಮಾಣದ ಪರಮಾತ್ಮನನ್ನು, ಅಮೃತತ್ತ್ವವನ್ನು ಬಯಸುವ ಯಾವನೋ ಒಬ್ಬ ಧೀರ ಸ್ವಭಾವತಃ ಹೊರಗೆ ಹೋಗುವ ಇಂದ್ರಿಯಗಳನ್ನು ಆಂತರ್ಯಕ್ಕೆ ಹಿಂತಿರುಗಿಸಿ ಶುದ್ಧವಾದ ನೀರಿನಲ್ಲಿ ಶುದ್ಧವಾದ ನೀರನ್ನು ಚೆಲ್ಲಿದರೆ ಹೇಗೋ ಹಾಗೆ ನೋಡುವನೆಂದು ಬೋಧಿಸಲಾಗಿದೆ. ಎರಡನೆಯ ವಲ್ಲಿಯಲ್ಲಿ ಬ್ರಹ್ಮನ ಅಂತರ್ಯಾಮಿತ್ವವನ್ನು ವಿಸ್ತಾರವಾಗಿ ಉಪದೇಶಿಸಲಾಗಿದೆ. ಸರ್ವವ್ಯಾಪಕನಾದ ಆತ್ಮನನ್ನು ಯಾರೂ ಮೀರಲಾಗುವುದಿಲ್ಲವೆಂದೂ ಅವನನ್ನು ತಿಳಿದರೆ ಶೋಕದಿಂದ ಮುಕ್ತಿಯೆಂದೂ ಮರಣಾನಂತರ ಮಾನವರು ಕರ್ಮಕ್ಕೆ ಮತ್ತು ಜ್ಞಾನಕ್ಕೆ ಅನುಸಾರವಾಗಿ ಗತಿಯನ್ನು ಹೊಂದುತ್ತಾರೆಂದೂ ಉಪದೇಶಿಸಲಾಗಿದೆ. ಮೂರನೆಯ ವಲ್ಲಿಯಲ್ಲಿ ಸಂಸಾರಸ್ವರೂಪವನ್ನು ನಿಶ್ಚಯಿಸುವುದರ ಮೂಲಕ ಬ್ರಹ್ಮಸ್ವರೂಪವನ್ನು ನಿರ್ಧರಿಸಲಾಗಿದೆ. ಈ ಸಂಸಾರ ಸನಾತನವಾದ ಒಂದು ಅಶ್ವತ್ಥವೃಕ್ಷ. ಇದರ ಬೇರುಗಳು ಮೇಲೆ, ಟೊಂಗೆಗಳು ಕೆಳಗೆ ಬೆಳೆದಿವೆ. ಇದೇ ಶುದ್ದವಸ್ತು, ಇದೇ ಬ್ರಹ್ಮ. ಕಣ್ಣಿನಿಂದ ನೋಡಲಾಗದ ಬ್ರಹ್ಮನನ್ನು ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ ಮನನರೂಪವಾದ ಸಮ್ಯಗ್ದರ್ಶನದಿಂದ ತಿಳಿದುಕೊಳ್ಳಬಹುದು. ಸ್ಥಿರವಾದ ಇಂದ್ರಿಯ ಧಾರಣೆಯೇ ಯೋಗ ಎಂಬ ಸಂದೇಶವಿದೆ. ಈ ಉಪನಿಷತ್ತಿನಲ್ಲಿ ಜನನ ಮರಣಗಳ ರಹಸ್ಯವನ್ನು ಬೋಧಿಸಿರುವುದರಿಂದ ಈ ಆಖ್ಯಾನವನ್ನು ಕೇಳಿದವರಿಗೆ ಹೇಳಿದವರಿಗೆ ನಚಿಕೇತ ಹೊಂದಿದ ಬ್ರಹ್ಮಲೋಕ ಪ್ರಾಪ್ತಿಯಾಗುವುದೆಂದು ಫಲಶ್ರುತಿ ಇದೆ

  • Max Muller:sacred Books of the east.
  • ಕಠೋಪನಿಷತ್:ಸ್ವಾಮೀ ಆದಿದೇವಾನಂದ
Recitation
ಅನುವಾದಗಳು
ಪಠ್ಯ

ಉಲ್ಲೇಖಗಳು

[ಬದಲಾಯಿಸಿ]
  1. Max Muller:sacred Books of the east


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: