ಈಶ್ವರ ಚಂದ್ರ ವಿದ್ಯಾಸಾಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈಶ್ವರ ಚಂದ್ರ ವಿದ್ಯಾಸಾಗರ

ಈಶ್ವರ ಚಂದ್ರ ವಿದ್ಯಾಸಾಗರ (ಸೆಪ್ಟೆಂಬರ್ ೨೬ ೧೮೨೦ - ಜುಲೈ ೨೯ ೧೮೯೦) ಮಹಾನ್ ವಿದ್ವಾಂಸರಾಗಿದ್ದ ಈಶ್ವರಚಂದ್ರರು ಅಷ್ಟೇ ಮಹಾನ್ ದೇಶಪ್ರೇಮಿಯಾಗಿದ್ದರು.ಬಂಗಾಳದ ಲೇಖಕ, ಸಮಾಜ ಸುಧಾರಕ. ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇವರ ಜನನ. ಒಂಬತ್ತನೆಯ ವಯಸ್ಸಿನಲ್ಲಿ ಇವರನ್ನು ಕಲ್ಕತ್ತೆಗೆ ಕರೆತಂದು ಅಲ್ಲಿನ ಸಂಸ್ಕøತ ಮಹಾಪಾಠಶಾಲೆಗೆ ಸೇರಿಸಲಾಯಿತು. ಇವರು ಕಷ್ಟಗಳ ನಡುವೆಯೇ ವ್ಯಾಸಂಗ ಮುಂದುವರಿಸಿದರು. 19ನೆಯ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿದ್ಯಾಸಾಗರರೆಂಬ ಪ್ರಶಸ್ತಿ ಗಳಿಸಿದರು. ಮೂವತ್ತನೆಯ ವಯಸ್ಸಿನಲ್ಲಿ ಫೋರ್ಟ್ ವಿಲಿಯಂ ಕಾಲೇಜಿನ ಮುಖ್ಯ ಪಂಡಿತರಾದರು. ಇವರು ಇಂಗ್ಲೀಷ್ ಭಾಷೆಯನ್ನೂ ಕಲಿತಿದ್ದರು. ಬಂಗಾಳಮಿಡ್ನಾಪುರದಲ್ಲಿ ಜನಿಸಿದ ಇವರನ್ನು ಬಂಗಾಳದ ಮಹಾನ್ ಹೋರಾಟಗಾರರಲ್ಲಿ ಒಬ್ಬರೆಂದು ಗುರುತಿಸುತ್ತಾರೆ. ಶಿಕ್ಷಣ ತಜ್ಞ, ತತ್ವಜ್ಞಾನಿ, ವ್ಯಾಪಾರಿ, ಬರಹಗಾರ, ಸಮಾಜ ಸುಧಾರಕ ಮತ್ತು ದಾನಿಯೂ ಆಗಿದ್ದರು. 1820—1891.

ಜನನ[ಬದಲಾಯಿಸಿ]

ಬೇತಾಳ ಪಂಚವಿಂಶತಿ ಎಂಬ ಇವರ ಬಂಗಾಳಿ ಗದ್ಯಕೃತಿ 1846ರಲ್ಲಿ ಪ್ರಕಟವಾಯಿತು. ಶಾಕುಂತಲ 1855ರಲ್ಲೂ ಸೀತಾಪರಿತ್ಯಾಗ 1862ರಲ್ಲೂ ಬೆಳಕಿಗೆ ಬಂದುವು. ಕೊನೆಯ ಪುಸ್ತಕ ಇವರ ಅತ್ಯುತ್ಕøಷ್ಟ ಕೃತಿಯೆಂದು ಪರಿಗಣಿತವಾಗಿದೆ. ಈಶ್ವರಚಂದ್ರರು ಆ ಕಾಲಕ್ಕೆ ಕ್ರಾಂತಿಕಾರಿಯೆನಿಸಿದ್ದ ವಿಚಾರ ತಳೆದಿದ್ದರು. ಇವರು ಫೋರ್ಟ್ ವಿಲಿಯಮ್ ಕಾಲೇಜಿನ ಪ್ರಿನ್ಸಿಪಾಲರಾದಾಗ, ಅಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕøತ ವಿದ್ಯಾಭ್ಯಾಸದ ಅವಕಾಶವಿರಲಿಲ್ಲ. ಇಲ್ಲಿ ನೆಲೆಸಿದ್ದ ಕೆಲವು ಐರೋಪ್ಯರಿಗೆ ಸಂಸ್ಕøತ ಪಂಡಿತರು ಖಾಸಗಿಯಾಗಿ ಸಂಸ್ಕøತ ಪಾಠ ಹೇಳುವ ಪದ್ಧತಿ ಇತ್ತು; ಮತ್ತು ಬಂಗಾಳದ ವೈದ್ಯ (ವೈಶ್ಯ) ಜಾತಿಯವರಿಗೂ ಸಂಸ್ಕøತ ಕಲಿಯುವ ಅವಕಾಶವಿತ್ತು. ಸರ್ಕಾರ ಸ್ಥಾಪಿಸಿದ ಈ ಕಾಲೇಜಿನಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕøತ ಕಲಿಯಲು ಯಾವ ನಿಷೇಧವೂ ಇರಬಾರದೆಂದು ಈಶ್ವರಚಂದ್ರರು ತೀವ್ರವಾಗಿ ವಾದಿಸಿದರು. ತಮ್ಮ ನಿಲುವನ್ನು ಒಪ್ಪದಿದ್ದರೆ ತಮ್ಮ ಹುದ್ದೆ ಬಿಡುವುದಾಗಿಯೂ ಹೇಳಿದರು. ಹಳೆಯ ಕಾಲದ ಸಂಪ್ರದಾಯ ಶರಣರಿಂದ ಇದಕ್ಕೆ ವಿರೋಧವಿದ್ದರೂ ಈಶ್ವರಚಂದ್ರರ ದಿಟ್ಟ ನಿಲುವಿಗೆ ಜಯ ದೊರಕಿತು.

ವ್ಯಾಸಂಗ[ಬದಲಾಯಿಸಿ]

ತಾವು ವ್ಯಾಸಂಗ ಮಾಡುತ್ತಿದ್ದ ಸಂಸ್ಕøತ ಮಹಾಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರ ಜಾಗ ತೆರವಾದಾಗ ಅದಕ್ಕೆ ಈಶ್ವರಚಂದ್ರರೇ ಅರ್ಹರೆಂದು ಕಾಲೇಜಿನ ತಮ್ಮ ವ್ಯವಸ್ಥಾಪಕರು ತೀರ್ಮಾನಿಸಿ ಅವರಿಗೆ ಆಮಂತ್ರಣವನ್ನಿತ್ತರು. ಇದರಿಂದ ಮಾಸಿಕ ವೇತನ ರೂ. 50 ರಿಂದ ರೂ. 90ಕ್ಕೆ ವೃದ್ಧಿಯಾಗುವ ಅವಕಾಶವಿತ್ತು. ಆದರೆ ಈಶ್ವರಚಂದ್ರರು ಈ ಹುದ್ದೆಗೆ ತಮಗಿಂತಲೂ ತಾರಾನಾಥ ತರ್ಕವಾಚಸ್ಪತಿಯವರೇ ಹೆಚ್ಚು ಅರ್ಹರೆಂದು ಬಗೆದರು. ತಮಗೆ ಬಂದ ಆಮಂತ್ರಣವನ್ನು ನಮ್ರತೆಯಿಂದ ನಿರಾಕರಿಸಿದ್ದು ಮಾತ್ರವಲ್ಲ ತಾರಾನಾಥರು ವಾಸಿಸುತ್ತಿದ್ದ, ನೂರು ಮೈಲಿ ದೂರದಲ್ಲಿದ್ದ ಸ್ಥಳಕ್ಕೆ ತಾವೇ ಕಾಲುನಡಿಗೆಯಿಂದ ಹೋಗಿ ಅವರನ್ನು ಈ ಹುದ್ದೆಗೆ ಒಪ್ಪಿಸಿದರು. ಈಶ್ವರಚಂದ್ರರ ನಿಸ್ಪøಹತೆಗೂ ದೈಹಿಕ ಶ್ರಮಕ್ಕೆ ಹಿಂಜರಿಯದ ಸ್ವಭಾವಕ್ಕೂ ಇದೊಂದು ಉತ್ತಮ ನಿದರ್ಶನ. ತಾರಾನಾಥರೂ ಅವರ ತಂದೆಯವರೂ ಈಶ್ವರಚಂದ್ರರನ್ನು ಮಾನುಷರೂಪಿ ದೈವವೆಂದು ಹೊಗಳಿದರೆಂದು ಹೇಳಲಾಗಿದೆ.

ಭಾರತೀಯ ಮಹಿಳೆಯರ ಉದ್ಧಾರಕ್ಕಾಗಿ ಈಶ್ವರಚಂದ್ರರು ಕೈಗೊಂಡ ಕಾರ್ಯಕ್ರಮಗಳು ಅವರನ್ನು ಚಿರಸ್ಮರಣೀಯರನ್ನಾಗಿ ಮಾಡಿವೆ. ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಚಳುವಳಿ ನಡೆಸುತ್ತಿದ್ದ ಡ್ರಿಂಕ್ ವಾಟರ್ ಬೆಥೂನ್ ಎಂಬುವರೊಂದಿಗೆ ವಿದ್ಯಾಸಾಗರರೂ ಸೇರಿದ್ದರು. ಬೆಥೂನರ ಹೆಸರಿನಲ್ಲಿ ನಡೆಯುತ್ತಿದ್ದ ಬಾಲಿಕಾಶಾಲೆಯ ವ್ಯವಸ್ಥೆಯ ಹೊಣೆ 1851ರಲ್ಲಿ ಇವರ ಮೇಲೆ ಬಿತ್ತು. ರೊಸೊಮೊಯ್‍ದತ್ತರು ಕಲ್ಕತ್ತೆಯ ಸಂಸ್ಕøತ ಮಹಾಪಾಠಶಾಲೆಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯಿತ್ತಾಗ ಪ್ರಿನ್ಸಿಪಾಲರ ಹುದ್ದೆಯೊಂದು ನಿರ್ಮಿತವಾಗಿ, ಅದಕ್ಕೆ ವಿದ್ಯಾಸಾಗರರ ನೇಮಕವಾಯಿತು. 1854ರ ಕಾಯಿದೆಯನ್ವಯ ಇವರು ಬಂಗಾಳದಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿದರು. 1858ರಲ್ಲಿ ವಿದ್ಯಾಸಾಗರರು ಸರ್ಕಾರದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಲ್ಕತ್ತೆಯ ಖಾಸಗಿ ಕಾಲೇಜೊಂದರ ವ್ಯವಸ್ಥಾಪಕರಾದರು.

ಸಣ್ಣ ಪುಸ್ತಕಗಳ[ಬದಲಾಯಿಸಿ]

ಹೆಣ್ಣುಮಕ್ಕಳ ಮತ್ತೊಂದು ಸಮಸ್ಯೆ ಈಶ್ವರಚಂದ್ರರ ಮನಸ್ಸನ್ನು ಬಲವಾಗಿ ಬಾಧಿಸುತ್ತಿತ್ತು. ಬಾಲ್ಯವಿವಾಹ ಪದ್ಧತಿಯಿರುವ ಹಿಂದೂ ಜಾತಿಗಳಲ್ಲಿ ಅನೇಕರು ಎಳೆ ವಯಸ್ಸಿನಲ್ಲೇ ವಿಧವೆಯಾಗುವ ಸಂಭವವಿತ್ತು. ಬಾಲವಿಧವೆಯ ಬಾಳಿನ ನೋವನ್ನು ಈಶ್ವರಚಂದ್ರರು ಮನಗಂಡರು. ವಿಧವಾ ವಿವಾಹದ ಪರವಾಗಿ ಇವರು ತೀವ್ರವಾಗಿ ಪ್ರಚಾರ ಕೈಗೊಂಡರು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದ ಈಶ್ವರಚಂದ್ರರು ಇಂಥ ಪುನರ್ವಿವಾಹಕ್ಕೆ ಧರ್ಮಶಾಸ್ತ್ರಗಳಿಂದ ಯಾವ ಅಡ್ಡಿಯೂ ಇಲ್ಲವೆಂದು ಸಾರಿದರು. ಈ ವಿಚಾರವನ್ನು ಪ್ರಚುರಪಡಿಸಲು ಬಂಗಾಳಿ ಭಾಷೆಯಲ್ಲಿ ಸಣ್ಣ ಪುಸ್ತಕಗಳನ್ನು ಬರೆದರು: ಉಪನ್ಯಾಸಗಳನ್ನು ಕೊಟ್ಟರು; ಒಂದು ಆಂದೋಲನವನ್ನೇ ಪ್ರಾರಂಭಿಸಿದರು. ಪ್ರಾಯಶಃ ಈ ಸುಧಾರಣೆಯೇ ಈಶ್ವರಚಂದ್ರರಿಗೆ ಅಖಿಲ ಭಾರತ ಕೀರ್ತಿಯನ್ನು ಸಂಪಾದಿಸಿಕೊಟ್ಟಿತು. ಮಹರ್ಷಿ ದೇವೇಂದ್ರನಾಥ ಠಾಕೂರರು ಸ್ಥಾಪಿಸಿದ ತತ್ವ ಬೋಧಿನಿ ಪತ್ರಿಕೆಯಲ್ಲಿ ಈಶ್ವರಚಂದ್ರರು 1854ರಲ್ಲಿ ಈ ಸುಧಾರಣೆಯನ್ನು ಸಮರ್ಥಿಸಿ ಒಂದು ಲೇಖನ ಬರೆದರು. 1855ರ ಜನವರಿಯಲ್ಲಿ ಈ ವಿಷಯವಾಗಿ ಒಂದು ಸಣ್ಣ ಪುಸ್ತಕವನ್ನೇ ಪ್ರಕಟಿಸಿದರು. ಇದೊಂದು ವಾದಗ್ರಸ್ಥ ವಿಷಯವೇ ಆಯಿತು. ಅನೇಕ ಪಂಡಿತರು ಇದನ್ನು ವಿರೋಧಿಸಿ ಲೇಖನ ಬರೆದರು. 1855ರ ಅಕ್ಟೋಬರ್ ತಿಂಗಳಲ್ಲಿ ಈಶ್ವರಚಂದ್ರರು ಈ ಆಕ್ಷೇಪಣೆಗಳಿಗೆಲ್ಲ ಉತ್ತರ ಕೊಟ್ಟು ವಿದ್ವತ್ಪೂರ್ಣವೂ ಗಂಭೀರವೂ ಆದ ಮತ್ತೊಂದು ಸಣ್ಣ ಪುಸ್ತಕವನ್ನು ಪ್ರಕಟಪಡಿಸಿದರು. ಆ ತಿಂಗಳ 4ನೆಯ ದಿನಾಂಕದಂದು ಸುಮಾರು 1,000 ಜನರ ಸಹಿಯಿದ್ದ ಮನವಿಯೊಂದನ್ನು ಸರ್ಕಾರದ ಶಾಸನ ಸಭೆಯ ಕಾರ್ಯದರ್ಶಿಗಳಿಗೆ ಕಳುಹಿಸಿದರು. ಹಿಂದೂ ವಿಧವೆಯ ವಿವಾಹಕ್ಕೆ ಯಾವ ಅಡಚಣೆಯೂ ಇಲ್ಲದಂತೆ ಹಾಗೂ ವಿವಾಹಿತರ ಸಂತಾನದ ಹಕ್ಕುಬಾಧ್ಯತೆಗೆ ಧಕ್ಕೆ ಒದಗದಂತೆ ಸೂಕ್ತ ಕಾಯಿದೆ ರಚಿಸಬೇಕೆಂದು ಮನವಿಯಲ್ಲಿ ಪ್ರಾರ್ಥಿಸಲಾಗಿತ್ತು. 1855ರ ನವೆಂಬರ್ 17ನೆಯ ತಾರೀಖು ಕಲ್ಕತ್ತೆಯ ಶಾಸನಸಭೆಯಲ್ಲಿ ಈ ವಿಷಯವಾಗಿ ಜೆ.ಪಿ.ಗ್ರ್ಯಾಂಟ್ ಒಂದು ವಿಧೇಯಕ ಮಂಡಿಸಿದರು. ಇದು ಇತರ ಪ್ರಾಂತ್ಯಗಳ ಮುಖಂಡರ ಗಮನ ಸೆಳೆಯಿತು. ಪುಣೆ, ಸಿಕಂದರಾಬಾದ್, ಸತಾರಾ, ಧಾರವಾಡ, ಮುಂಬಯಿ, ಅಹಮದಾಬಾದ್, ಸೂರತ್ ಮತ್ತು ಬಂಗಾಳದ ಅನೇಕ ನಗರಗಳಿಂದ ಈ ಮಸೂದೆಯ ಪರವಾಗಿಯೂ ವಿರುದ್ಧವಾಗಿಯೂ ಸರ್ಕಾರಕ್ಕೆ ಪತ್ರಗಳು ಬಂದುವು. ವಿರುದ್ಧವಾದುವೇ ಹೆಚ್ಚು ಸಂಖ್ಯೆಯಲ್ಲಿದ್ದವೆನ್ನಬಹುದು. 1856ರ ಜುಲೈ 26ನೆಯ ತಾರೀಖು ಗೌರ್ನರ್ ಜನರಲನ ಅನುಮತಿ ಪಡೆದು ಇದು ಅಧಿನಿಯಮವಾಯಿತು. ಇದಕ್ಕನುಸಾರವಾಗಿ ಮೊದಲನೆಯ ಪುನರ್ವಿವಾಹ ಕಲ್ಕತ್ತೆಯಲ್ಲಿ ಅದೇ ಡಿಸೆಂಬರ್ 7ರಂದು ನೆರವೇರಿತು. ವಿದ್ಯಾಸಾಗರರೂ ಇತರ ಸುಧಾರಕರೂ ಈ ವಿವಾಹದಲ್ಲಿ ಬಹಳ ಆಸಕ್ತಿ ವಹಿಸಿದರು. ಅನಂತರವೂ ಒಂದೆರಡು ವಿವಾಹ ಜರುಗಿದುವು. ಈ ಸುಧಾರಣೆಯಲ್ಲಿ ನಿರ್ಭೀತರಾಗಿ ಮುಂದುವರಿದವರೆಂದರೆ ಬ್ರಹ್ಮ ಸಮಾಜದವರು. ಹಿಂದೂ ಸಮಾಜದಲ್ಲಿ ಈ ವಿವಾಹಗಳು ಕೋಲಾಹಲವನ್ನೇ ಎಬ್ಬಿಸಿದುವು. ಸುಧಾರಣಾವಾದಿಗಳೂ ವಿರೋಧಿಗಳೂ ಲೇಖನ ಬರೆದು ತೀವ್ರವಾದ ವಾದವಿವಾದಗಳಲ್ಲಿ ತೊಡಗಿದರು. ವಿರೋಧಿಗಳು ಸುಧಾರಕರನ್ನು ಹೆದರಿಸಿ, ಅವರ ಮೇಲೆ ಹಿಂಸಾಕೃತ್ಯ ನಡೆಸುವುದಕ್ಕೂ ಹಿಂಜರಿಯಲಿಲ್ಲ, ಈಶ್ವರಚಂದ್ರರು ಕಲ್ಕತ್ತೆಯಲ್ಲಿ ಸುರಕ್ಷಿತವಾಗಿ ಓಡಾಡುವುದೂ ಕಷ್ಟವಾಗಿತ್ತು. ಆದರೆ ಇದರಿಂದ ಅವರು ಭೀತರಾಗಲಿಲ್ಲ. ಸ್ಥೈರ್ಯದಿಂದ ಈ ಸುಧಾರಣಾ ಕಾರ್ಯವನ್ನು ಮುಂದುವರಿಸಿದರು. ತಮ್ಮ ಆಯುಷ್ಯದಲ್ಲಿ ತಾವು ನಡೆಸಿದ ಕಾರ್ಯಗಳಲ್ಲಿ ಇದೇ ಮಹತ್ತರವಾದದ್ದೆಂದು ಅವರ ಅಭಿಪ್ರಾಯವಾಗಿತ್ತು. ಈ ಸುಧಾರಣೆಯ ಪ್ರಭಾವ ಬಂಗಾಳದಾಚೆಗೂ ಹಬ್ಬಿತು. ಮಹಾರಾಷ್ಟ್ರದಲ್ಲಿ ರಾನಡೆ, ಮಲಬಾರಿ, ವಿಷ್ಣುಶಾಸ್ತ್ರಿ, ಕರ್ವೆ ಮುಂತಾದವರು ಇದಕ್ಕೆ ಬೆಂಬಲ ಕೊಟ್ಟರು. ವಿಧವಾ ವಿವಾಹದ ಪ್ರಚಾರಕ್ಕಾಗಿಯೇ 1861ರಲ್ಲಿ ಒಂದು ಸಂಸ್ಥೆ ಸ್ಥಾಪಿತವಾಯಿತು. 1899ರಲ್ಲಿ ಕರ್ವೆಯವರು ಹಿಂದೂ ವಿಧವೆಯರ ವಸತಿ ಗೃಹವೊಂದನ್ನು ಸ್ಥಾಪಿಸಿದರು. ಆಂಧ್ರದಲ್ಲಿ ಈ ಸುಧಾರಣೆಗಾಗಿ ಬಹಳ ಶ್ರಮಿಸಿದವರೆಂದರೆ ವೀರೇಶಲಿಂಗಂ ಪಂತುಲು. ಇವರೆಲ್ಲರಿಗೂ ಈಶ್ವರಚಂದ್ರರೇ ಸ್ಫೂರ್ತಿ ಕೇಂದ್ರ. ಇಂಥ ವಿವಾಹ ಏರ್ಪಡಿಸುವ ಸಲುವಾಗಿ ಈಶ್ವರಚಂದ್ರರು ಬಹಳ ಕಷ್ಟನಷ್ಟ ಅನುಭವಿಸಿದರು. ತಮ್ಮ ಸ್ವಂತ ಹಣವನ್ನು ಇವುಗಳಿಗಾಗಿ ಒದಗಿಸುತ್ತಿದ್ದು ಕೊನೆಗೆ ಸಾಲದ ಭಾರವನ್ನೂ ಹೊತ್ತರು.[೧] ಬಂಗಾಳದ ಕುಲೀನರೆನ್ನಿಸಿಕೊಂಡವರಲ್ಲಿದ್ದ ಬಹುಪತ್ನೀತ್ವವನ್ನು ತೊಡೆದುಹಾಕುವುದಕ್ಕ್ಕೂ ಈಶ್ವರಚಂದ್ರರು ಶ್ರಮಿಸಿದರು. ಸಾಮಾನ್ಯ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ತಮ್ಮ ಹೆಣ್ಣುಮಕ್ಕಳನ್ನು ಶ್ರೇಷ್ಠ ಕುಲದವರಿಗೆ ಕೊಡಬೇಕೆಂಬ ಹಂಬಲವೂ ಕನ್ಯಾವಿವಾಹ ನಿರ್ಬಂಧವೂ ಇದಕ್ಕೆ ಕಾರಣ. ಕುಲೀನರೆನಿಸಿಕೊಂಡ ಗಂಡಸರು ಎಷ್ಟು ಮದುವೆ ಮಾಡಿಕೊಳ್ಳುವುದಕ್ಕೂ ನಿರ್ಬಂಧವಿರಲಿಲ್ಲವಷ್ಟೇ ಅಲ್ಲ, ಅದೊಂದು ಲಾಭದಾಯಕ ವ್ಯಾಪಾರವೂ ಆಗಿತ್ತು. ಈ ವ್ಯಾಪಾರದಲ್ಲಿ ನಿರತರಾಗಿದ್ದ ದಳ್ಳಾಳಿಗಳಿಗೂ ಹೇರಳ ಲಾಭ ಸಿಗುತ್ತಿತ್ತು. ಈ ಕುಲೀನ ಗಂಡಸರು ಸತ್ತರೆ ಏಕಕಾಲಕ್ಕೆ ಅನೇಕರು ವಿಧವೆಯರಾಗುತ್ತಿದ್ದರು. ಇಂಥವರಲ್ಲಿ ಬಾಲವಿಧವೆಯರೂ ಅನೇಕ. ಆದ್ದರಿಂದ ವಿಧವಾ ವಿವಾಹದ ಸುಧಾರಣೆಗೂ ಈ ಬಹುಪತ್ನೀತ್ವ ವಿರೋಧಕ್ಕೂ ನಿಕಟ ಸಂಬಂಧವಿತ್ತು.

ಸೇವೆಗಳು[ಬದಲಾಯಿಸಿ]

ಈಶ್ವರಚಂದ್ರರು 25,000 ಜನರ ಸಹಿಯಿದ್ದ ಮನವಿಯೊಂದನ್ನು 1855ರ ಡಿಸೆಂಬರ್ 27ರಂದು ಸರ್ಕಾರಕ್ಕೆ ಸಮರ್ಪಿಸಿದರು. ಇದರ ಬಗೆಗೆ ಸರ್ಕಾರದವರು ಸಹಾನುಭೂತಿಯುಳ್ಳವರಾಗಿದ್ದರು. ಆದರೆ 1857ರಲ್ಲಿ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಂಭವಿಸಿದ್ದರಿಂದ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. 1863ರಲ್ಲಿ 21,000 ಜನರ ಸಹಿಯಿದ್ದ ಇನ್ನೊಂದು ಮನವಿಯನ್ನು ಸರ್ಕಾರಕ್ಕೆ ಒಪ್ಪಿಸಲಾಯಿತು. 1866ರಲ್ಲಿ ವಿದ್ಯಾಸಾಗರರು ಮತ್ತೊಂದು ಮನವಿಯನ್ನು ಸಿದ್ಧಗೊಳಿಸಿ, ಅದಕ್ಕೆ 21,000 ಜನರ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಕೊಟ್ಟರು. ಆ ವರ್ಷದ ಮಾರ್ಚ್ 19ರಂದು ಈಶ್ವರಚಂದ್ರರು ಇನ್ನು ಕೆಲವು ಪ್ರಮುಖರೊಂದಿಗೆ ಸರ್ಕಾರಕ್ಕೆ ನಿಯೋಗ ಹೋದರು. ಆಗ ಸರ್ಕಾರ ಈ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಒಂದು ಸಮಿತಿ ನೇಮಿಸಿತು. ಬಹುಪತ್ನೀ ವಿವಾಹವನ್ನು ಕಾಯಿದೆಯ ಮೂಲಕ ನಿಷೇಧಿಸುವ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಈ ವಿಚಾರವಾಗಿ ಕಾಯಿದೆ ಮಾಡುವುದು ಉಚಿತವಲ್ಲವೆಂದು ಇಂಗ್ಲೆಂಡ್ ಸರ್ಕಾರದ ಇಂಡಿಯಾ ಕಾರ್ಯದರ್ಶಿಯ ಅಭಿಪ್ರಾಯವಾಗಿತ್ತು. ಜನರಲ್ಲಿ ವಿದ್ಯಾಪ್ರಸಾರವಾದಂತೆಲ್ಲ ಈ ದುಷ್ಟಪದ್ಧತಿ ತಾನಾಗಿಯೇ ಮಾಯವಾಗುವುದೆಂಬ ವಿಶ್ವಾಸ ಅನೇಕರಲ್ಲಿತ್ತು. ಅಂತೂ ಈ ವಿಷಯದಲ್ಲಿ ಯಾವ ಕಾಯಿದೆ ರಚಿಸಲೂ ಕಾಲ ಒದಗಿಬರಲಿಲ್ಲ. ಈಶ್ವರಚಂದ್ರರು ಮಾತ್ರ ಸುಮ್ಮನಿರಲಿಲ್ಲ. ಮುಂದೆಯೂ ಈ ಬಗ್ಗೆ ಪ್ರಚಾರ ಮಾಡುತ್ತಲೇ ಇದ್ದರು.

1891ರ ಜುಲೈ 29ರಂದು ಈಶ್ವರಚಂದ್ರ ವಿದ್ಯಾಸಾಗರರು ಕಾಲವಾದರು.

ಉಲ್ಲೇಖಗಳು[ಬದಲಾಯಿಸಿ]