ಮೈಸೂರು
Wikipedia ಇಂದ
|
|
|
| ರಾಜ್ಯ | ಕರ್ನಾಟಕ |
| ಜಿಲ್ಲೆ | ಮೈಸೂರು |
| ಪ್ರಮುಖ ಭಾಷೆ | ಕನ್ನಡ |
| ಮೇಯರ್ | ಭಾರತಿ |
| ವಿಸ್ತೀರ್ಣ | ೪೦ ಚ. ಕಿಮೀ |
| ಜನಸಂಖ್ಯೆ | ೭,೯೯,೨೨೮ (ನಗರ) |
| ಜನಸಂಖ್ಯೆ | ೧೦,೩೮,೪೯೦ (ನಗರ ಮತ್ತು ಗ್ರಾಮೀಣ) |
| ಸಾಕ್ಷರತೆ | ಶೇ. ೭೬.೫ (೨೦೦೧) |
| ಹತ್ತಿರದ ವಿಮಾನ ನಿಲ್ದಾಣ | ಬೆಂಗಳೂರು |
| ಹತ್ತಿರದ ರೈಲ್ವೇ ನಿಲ್ದಾಣ | ಮೈಸೂರು |
ಮೈಸೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನ ಮೈಸೂರು ಸಂಸ್ಥಾನದ ಮಾಜಿ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಾಲಾಗುತ್ತದೆ.
ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ಇತ್ಯಾದಿ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ಇತ್ಯಾದಿ.
ಪರಿವಿಡಿ |
[ಬದಲಾಯಿಸಿ] ಇತಿಹಾಸ
ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ ನೆಯ ಶತಮಾನದ ಕೊನೆಯ ಹೊತ್ತಿಗೆ ವೊಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು ವಿಜಯ ಅಥವಾ ದೇವರಾಯ. ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ವೊಡೆಯರ ಈ ಸಂಸ್ಥಾನವನ್ನು ಹಿಗ್ಗಿಸಿದವರಲ್ಲಿ ಮುಖ್ಯ ರಾಜ.
೧೮ ನೆಯ ಶತಮಾನದಲ್ಲಿ ವೊಡೆಯರ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ರ ಆಡಳಿತ ನಡೆಯಿತು. ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. ಮೈಸೂರು ಸಂಸ್ಥಾನ ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತು. ೧೭೯೯ ರಲ್ಲಿ ಟೀಪೂ ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ವೊಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು, ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ಹಿಗ್ಗಿ ಕರ್ನಾಟಕ ಎಂಬ ಹೆಸರು ಪಡೆಯಿತು.
[ಬದಲಾಯಿಸಿ] ಮೈಸೂರು ನಗರ
ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ ಬೆಂಗಳೂರು ನಗರದಿಂದ ೧೪೦ ಕಿಮೀ ದೂರದಲ್ಲಿದೆ. ಮೈಸೂರಿಗೆ ಭೇಟಿ ನೀಡಲು ಉತ್ತಮ ಕಾಲ ಎಂದರೆ ವಾರ್ಷಿಕವಾಗಿ ಹತ್ತು ದಿನ-ಒಂಬತ್ತು ರಾತ್ರಿಗಳ ವರೆಗೆ ನಡೆಯುವ ದಸರಾ ಅಥವಾ ನವರಾತ್ರಿ ಹಬ್ಬದ ಸಮಯ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು.
ಭಾರತದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಇದೇ ನಗರದಲ್ಲಿದೆ. ಇತರ ಸಂಶೋಧನಾ ಸಂಸ್ಥೆಗಳೆಂದರೆ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಸಿಎಫ್ಟಿಆರ್ಐ), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್).
[ಬದಲಾಯಿಸಿ] ಆಕರ್ಷಣೆಗಳು
ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು:
- ಮುಖ್ಯ ಮೈಸೂರು ಅರಮನೆ: ಮುಖ್ಯ ಮೈಸೂರು ಅರಮನೆ, ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ ನೀಡುವ ಅರಮನೆ.
- ರಾಜೇಂದ್ರ ವಿಲಾಸ್: ಬೇಸಿಗೆ ಅರಮನೆ ಎಂದೂ ಹೆಸರು, ಚಾಮುಂಡಿ ಬೆಟ್ಟದ ಮೇಲೆ ಇದೆ.
- ಜಗನ್ಮೋಹನ ಅರಮನೆ: ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿ ವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಕೃತಿಗಳನ್ನು ಇಲ್ಲಿ ಕಾಣಬಹುದು.
- ಜಯಲಕ್ಷ್ಮಿ ವಿಲಾಸ್: ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿದೆ.
- ಲಲಿತ ಮಹಲ್: ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.
ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.
ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು ಚಾಮುಂಡಿ ಬೆಟ್ಟ. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ.
ಮೈಸೂರಿನ ಚಾಮರಾಜೇಂದ್ರ ವನ್ಯ ಮೃಗಾಲಯ, ಅಥವಾ "ಮೈಸೂರು ಜೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು.
ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ (ಮೈಸೂರು ವಿಶ್ವವಿದ್ಯಾಲಯದ ಆವರಣ). ಇನ್ನು ಕೆಲವು ಸ್ಥಳಗಳೆಂದರೆ ನೈಸರ್ಗಿಕ ಚರಿತ್ರೆ ಮ್ಯೂಸಿಯಮ್, ರೈಲ್ವೇ ಮ್ಯೂಸಿಯಮ್, ಕಲಾ ಮಂದಿರ, ಕುಕ್ಕರಹಳ್ಳಿ ಕೆರೆ, ಪುಷ್ಪಕಾಶಿ (ಪುಷ್ಪೋದ್ಯಾನ), ಕಾರಂಜಿ ಕೆರೆ, ಮೈಸೂರು ರೇಷ್ಮೆ ಕಾರ್ಖಾನೆ ಮುಂತಾದವು.
[ಬದಲಾಯಿಸಿ] ಮೈಸೂರು ನಗರ ಪ್ರದೇಶಗಳು
ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು
- ಸಂತೇಪೇಟೆ (ಶಿವರಾಮಪೇಟೆ)
- ಕೃಷ್ಣರಾಜ ಮೊಹಲ್ಲ
- ನಜರ್ಬಾದ್
- ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ)
- ಲಷ್ಕರ್ ಮೊಹಲ್ಲ
- ಇಟ್ಟಿಗೆಗೂಡು
- ಅಶೋಕಪುರ
- ಶ್ರೀರಾಮಪುರ
- ಜಯನಗರ
- ಕುವೆಂಪುನಗರ
- ಸರಸ್ವತಿಪುರ
- ಸಿದ್ದಾರ್ಥನಗರ
- ವಿವೇಕಾನಂದನಗರ
- ರಾಮಕೃಷ್ಣನಗರ
- ತೊಣಚಿಕೊಪ್ಪಲು
- ಮಾನಸಗಂಗೋತ್ರಿ
- ಜಯಲಕ್ಷ್ಮಿಪುರ
- ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ)
- ಗೋಕುಲಂ
- ಯಾದವಗಿರಿ
- ಬೃಂದಾವನ ಬಡಾವಣೆ
- ಹೆಬ್ಬಾಳು
- ವಿಜಯನಗರ
- ಜೆ. ಪಿ. ನಗರ
[ಬದಲಾಯಿಸಿ] ಸಮೀಪದ ಸ್ಥಳಗಳು
ಗೋಸಾಯಿ ಘಾಟ್, ಸಂಗಮ
- ಶ್ರೀರಂಗಪಟ್ಟಣ, ಕೆಲಕಾಲ ಮೈಸೂರು ಸಂಸ್ಥಾನದ ರಾಜಧಾನಿ. ಇಲ್ಲಿರುವ ಕೋಟೆ, ರಂಗನಾಥಸ್ವಾಮಿಯ ದೇವಾಲಯ, ಹಾಗೂ ದರಿಯಾ ದೌಲತ ನಂಥ ಸ್ಮಾರಕಗಳಿಗೆ ಇದು ಹೆಸರಾಗಿದೆ.
- ಕಾವೇರಿ ನದಿಗೆ ಕಟ್ಟಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಸಮೀಪದ ಬೃಂದಾವನ ಉದ್ಯಾನ.
- ನೀಲಗಿರಿ ಬೆಟ್ಟಗಳು
- ತಲಕಾಡು
- ಬಂಡಿಪುರ ಅಭಯಾರಣ್ಯ
- ಮದುಮಲೈ ಕಾಡುಗಳು
- ನಾಗರಹೊಳೆ ಅಭಯಾರಣ್ಯ
- ರಂಗನತಿಟ್ಟು ಪಕ್ಷಿಧಾಮ
- ಕಬಿನಿ: ಟಾಟ್ಲರ್ ಪ್ರವಾಸಿ ಬೋಧೆಯಲ್ಲಿ ಪ್ರಪಂಚದ ಐದು ಅತ್ಯುತ್ತಮ ವನ್ಯಧಾಮಗಳಲ್ಲಿ ಒಂದೆಂದು ಗುರುತಿಸಲಾಗಿದೆ
- ಸೋಮನಾಥಪುರ: ಚಾರಿತ್ರಿಕ ಹಾಗೂ ಪುರಾತತ್ವಶಾಸ್ತ್ರದ ಪ್ರಾಮುಖ್ಯತೆಯಿರುವ ದೇವಾಲಯ ಇಲ್ಲಿದೆ
- ಬಲಮುರಿ ಮತ್ತು ಎಡಮುರಿ
- ಹಿಮವದ್ಗೋಪಾಲಸ್ವಾಮಿಬೆಟ್ಟ
- ಬಿಳಿಗಿರಿರಂಗನ ಬೆಟ್ಟ
- ಕುಂತಿ ಬೆಟ್ಟ
- ಮೇಲುಕೋಟೆ
[ಬದಲಾಯಿಸಿ] ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು
| ಮೈಸೂರಿನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪಟ್ಟಿ | |
|---|---|
| ವಿಶ್ವವಿದ್ಯಾಲಯಗಳು | ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ |
| ಸಂಶೋಧನಾ ಸಂಸ್ಥೆಗಳು | ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಶನಾ ಸಂಸ್ಥೆ (ಸಿ ಎಫ್ ಟಿ ಆರ್ ಐ), ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿ ಐ ಐ ಎಲ್), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ ಆರ್ ಎಲ್) |
| ಇಂಜಿನಯರಿಂಗ್ ಕಾಲೇಜುಗಳು | ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ (ಎನ್ ಐ ಇ), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಅಫ್ ಇಂಜಿನಿಯರಿಂಗ್ (SJCE), ವಿದ್ಯಾವರ್ಧಕ ಕಾಲೇಜ್ ಆಫ್ ಇ೦ಜಿನಿಯರಿ೦ಗ್ (VVCE), ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಅ೦ಡ್ ಎಜ್ಯುಕೇಸನಲ್ ಟೆಕ್ನೊಲಜಿ (VVIET), ಗೀತ ಶಿಶು ಶಿಕ್ಷಣ(ಹುದುಗಿಯರು ಮಾತ್ರ)(GSS) |
| ವೈದ್ಯಕೀಯ ಕಾಲೇಜುಗಳು | ಮೈಸೂರು ಮೆಡಿಕಲ್ ಕಾಲೇಜು (MMC), ಜೆ ಎಸ್ ಎಸ್ ಮೆಡಿಕಲ್ ಕಾಲೇಜು |
| ದಂತ ವೈದ್ಯಕೀಯ ಕಾಲೇಜುಗಳು | ಜೆ ಎಸ್ ಎಸ್ ಡೆಂಟಲ್ ಕಾಲೇಜು, ಫಾರೂಕಿಯಾ ಡೆಂಟಲ್ ಕಾಲೇಜು |
| ಕಾನೂನು | ಜೆ ಎಸ್ ಎಸ್ ಲಾ ಕಾಲೇಜು, ವಿದ್ಯಾವರ್ಧಕ, ಶಾರದಾ ವಿಲಾಸ |
| ಕಲೆ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜುಗಳು | ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾಜನ ಕಾಲೇಜು, ಮರಿಮಲ್ಲಪ್ಪ ಕಾಲೇಜು |
[ಬದಲಾಯಿಸಿ] ಸಾರಿಗೆ ವ್ಯವಸ್ಥೆ
ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಉತ್ತರಪೂರ್ವ ದಿಕ್ಕಿನಲ್ಲಿ), ಉತ್ತರಪಶ್ಚಿಮಕ್ಕೆ ಹಾಸನಕ್ಕೆ ಮತ್ತು ದಕ್ಷಿಣಪೂರ್ವದಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ.
ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ.
[ಬದಲಾಯಿಸಿ] ಜಿಲ್ಲೆಯ ಪ್ರಮುಖರು
- ಮೋಕ್ಷಗುಂಡಂ ವಿಶ್ವೇಶ್ವರಯ್ಯ: ಕೃಷ್ಣರಾಜಸಾಗರದ ನಿರ್ಮಾತೃ. ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರಾಗಿಯೂ ಮುಂದೆ ದಿವಾನರಾಗಿಯೂ ಅವರು ಮಾಡಿದ ಕೆಲಸ ಅನನ್ಯ.
- ಸರ್ವೆಪಲ್ಲಿ ರಾಧಾಕೃಷ್ಣನ್: ಭಾರತದ ಎರಡನೆಯ ಅಧ್ಯಕ್ಷರು. ಬಹುಕಾಲ ಮೈಸೂರಿನ ಮಹಾರಾಜರ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
- ಬಿ ಎಂ ಶ್ರೀ: "ಶ್ರೀ" ಎಂದೇ ಖ್ಯಾತನಾಮರಾದ ಬಿ. ಎಂ. ಶ್ರೀಕಂಠಯ್ಯನವರು ಮೈಸೂರು ಮಹಾರಾಜರ ಕಾಲೇಜಿನಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗಳ ಪಾಧ್ಯಾಪಕರಾಗಿದ್ದರು. ಕನ್ನಡ ಸಾಹಿತ್ಯದ ನವೋದಯದ ಹಾಗೂ ಆಧುನಿಕ ಕನ್ನಡ ಸಾಹಿತ್ಯದ ಮೂಲಪುರುಷರು.
- ಆರ್ ಕೆ ನಾರಾಯಣ್: ಇಂಗ್ಲಿಷ್ ಕಾದಂಬರಿಕಾರರು. ಹುಟ್ಟು ಮೈಸೂರಿಗರು. ಇಂಗ್ಲಿಷ್ ಕಾದಂಬರಿಕಾರರಾದ ನಾರಾಯಣ್ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ ತಮ್ಮ.
- ಕೆ ವಿ ಪುಟ್ಟಪ್ಪ (ಕುವೆಂಪು ಎಂಬ ಕಾವ್ಯನಾಮದಿಂದ ಚಿರಪರಿಚಿತರು): "ರಾಷ್ಟ್ರಕವಿ" ಕುವೆಂಪು ಆಧುನಿಕ ಕನ್ನಡದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ನಂತರ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು.
- ಸಿ ಡಿ ನರಸಿಂಹಯ್ಯ,
- ಜಾವಗಲ್ ಶ್ರೀನಾಥ್: ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ ೨೩೬ ಮತ್ತು ಏಕದಿನ ಪಂದ್ಯಗಳಲ್ಲಿ ೩೧೫ ವಿಕೆಟ್ಗಳನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ 'ಐಸಿಸಿ ಮ್ಯಾಚ್ ರೆಫರಿ' ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ವೀಣೆ ಶೇಷಣ್ಣ
- ವೀಣೆ ಸುಬ್ಬಣ್ಣ
- ಪಿಟೀಲು ಚೌಡಯ್ಯ
- ಎಂ.ವಿ.ಗೋಪಾಲಸ್ವಾಮಿ
- ಜಿ.ಟಿ. ನಾರಾಯಣ ರಾವ್
- ದೇ. ಜವರೇಗೌಡ (ದೇಜಗೌ)
- ಹಾ.ಮಾ. ನಾಯಕ (ಹಾಮಾನಾ)
- ಡಾ. ಎಸ್. ಎಲ್. ಭೈರಪ್ಪ
- ಸುಬ್ರಮಣ್ಯ ರಾಜೇ ಅರಸ್ (ಚದುರಂಗ)
- ಆರ್. ಶಾಮಾ ಶಾಸ್ತ್ರಿ
- ಮೈಸೂರು ಅನಂತಸ್ವಾಮಿ
- ಬಿಡಾರಂ ಕೃಷ್ಣಪ್ಪ
- ಹೆಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್
- ಎನ್. ಆರ್. ನಾರಾಯಣ ಮೂರ್ತಿ
- ಸರ್ ಮಿರ್ಜಾ ಇಸ್ಮಾಯಿಲ್
- ನಜೀರ್ ಸಾಬ್
- ದಿವಾನ್ ಪೂರ್ಣಯ್ಯ
- ಡಾ. ಎಸ್. ಚಂದ್ರಶೇಖರ್
- ಎಂ. ಎನ್. ಶ್ರೀನಿವಾಸ್
- ತ್ರಿವೇಣಿ(ಕನ್ನಡ ಕಾದಂಬರಿಗಾರ್ತಿ-ಇವರ ಅನೇಕ ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿವೆ)
[ಬದಲಾಯಿಸಿ] ಮೈಸೂರು ಜಿಲ್ಲೆ
ಮೈಸೂರು ಜಿಲ್ಲೆಯ ಉತ್ತರಪೂರ್ವಕ್ಕೆ ಮಂಡ್ಯ ಜಿಲ್ಲೆ, ದಕ್ಷಿಣಪೂರ್ವಕ್ಕೆ ಚಾಮರಾಜನಗರ ಜಿಲ್ಲೆ, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ದಕ್ಷಿಣಪಶ್ಚಿಮಕ್ಕೆ ಕೇರಳ ರಾಜ್ಯ, ಪಶ್ಚಿಮಕ್ಕೆ ಕೊಡಗು ಜಿಲ್ಲೆ ಮತ್ತು ಉತ್ತರಕ್ಕೆ ಹಾಸನ ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ.
ಮೈಸೂರು ಜಿಲ್ಲೆ ದಖ್ಖನ ಪ್ರಸ್ತಭೂಮಿಯ ಮೇಲಿದೆ, ಮತ್ತು ಅದರ ಉತ್ತರಪಶ್ಚಿಮ ಮತ್ತು ಪೂರ್ವ ಭಾಗಗಳ ಮೂಲಕ ಹರಿಯುವ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಇದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಅಣೆಕಟ್ಟು ಜಿಲ್ಲೆಯ ಉತ್ತರದಲ್ಲಿ ಇದೆ. ಬಂಡಿಪುರ ಅಭಯಾರಣ್ಯ ಮೈಸೂರು ಜಿಲ್ಲೆಯಲ್ಲಿ ಇದ್ದರೆ ನಾಗರಹೊಳೆ ಅಭಯಾರಣ್ಯ ಭಾಗಶಃ ಮೈಸೂರು ಜಿಲ್ಲೆಯಲ್ಲಿ ಮತ್ತು ಭಾಗಶಃ ಪಕ್ಕದ ಕೊಡಗು ಜಿಲ್ಲೆಯಲ್ಲಿ ಇದೆ.
ಜಿಲ್ಲೆಯ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈರ್ವರು ಕನ್ನಡ ಕಾದಂಬರಿಕಾರ್ತಿಯರ ಹೆಸರುಗಳನ್ನು ಇಲ್ಲಿ ನಾವು ಉಲ್ಲೇಖಿಸಬಹುದಾಗಿದೆ. ಓರ್ವರು, ಕಾದಂಬರಿಕಾರ್ತಿಯಷ್ಟೇ ಅಲ್ಲದೆ ರಾಜ್ಯಮಟ್ಟದ ನೋಂದಾಯಿಸಲ್ಪಟ್ಟ ಮಹಿಳಾ ಸಂಘಟನೆಯಾದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ತ್ ನ ಸ್ಥಾಪಕರೂ ಹಾಗೂ ಪ್ರಧಾನ ಅಧ್ಯಕ್ಷರೂ ಆದ ಶ್ರೀಮತಿ ಎಸ್. ಮಂಗಳಾ ಸತ್ಯನ್. ಇವರು ಈವರೆಗೆ ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ನೂರಾರು ಲೇಖನಗಳು, ನಾಟಕಗಳನ್ನೂ ರಚಿಸಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿದ್ದಾರೆ. ಅಲ್ಲದೆ, ಶ್ರೀಮತಿ ಮಂಗಳಾ ಸತ್ಯನ್ ೨೦೦೨ ರ ಮೇ ೨೫ ಮತ್ತು ೨೬ ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆದ ೬ ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಮತಿ ಮಂಗಳಾ ಸತ್ಯನ್ ರವರ "ಭಾಗ್ಯ ಜ್ಯೋತಿ", "ಮುಗ್ಧ ಮಾನವ", "ಬಿಸಿಲು ಬೆಳದಿಂಗಳು" (ಕಾದಂಬರಿಯ ಹೆಸರು "ಆ ಮುಖ"), ಮತ್ತು "ಮುರಳಿಗಾನ ಅಮೄತಪಾನ" ಕಾದಂಬರಿಗಳು ಚಲನಚಿತ್ರಗಳಾಗಿವೆ. ಅಲ್ಲದೆ, ಇವರು "ಹೂವೊಂದು ಬೇಕು ಬಳ್ಳಿಗೆ" ಮತ್ತು "ಸ್ವಾತಿ" ಚಲನಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆ ಯನ್ನು ರಚಿಸಿದ್ದಾರೆ. ಅಷ್ಟೇ ಜನಪ್ರಿಯರಾಗಿರುವ ಮತ್ತೋರ್ವ ಕಾದಂಬರಿಕಾರ್ತಿ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು. ಆರ್ಯಾಂಬ ಅವರ ಕೆಲವು ಕಾದಂಬರಿಗಳೂ ಕನ್ನಡ್ ಚಲನಚಿತ್ರಗಳಾಗಿ ರೂಪುಗೊಂಡಿವೆ.
[ಬದಲಾಯಿಸಿ] ಇವನ್ನೂ ನೋಡಿ
- ವರ್ಗ ಮೈಸೂರು
[ಬದಲಾಯಿಸಿ] ಬಾಹ್ಯ ಅಂತರಜಾಲ ತಾಣಗಳು
- ಮೈಸೂರು ನಗರಪಾಲಿಕೆ
- ಮೈಸೂರು ಸಿಟಿ ಕಾರ್ಪೋರೇಶನ್
- ಮೈಸೂರು ದಸರ
- ಮೈಸೂರು ವಿಶ್ವವಿದ್ಯಾಲಯ
- ಸ್ಟಾರ್ ಆಫ್ ಮೈಸೂರ್, ಇಂಗ್ಲಿಷ್ನಲ್ಲಿ ಸಂಜೆ ಪತ್ರಿಕೆ.
- ಬಿಎಸ್ಎನ್ಎಲ್
- ಮೈಸೂರು ಸಮಾಚಾರ
- ಮೈಸೂರು ಅರಮನೆ
- ಮೈಸೂರಿನ ಭೂಪಟ

