ಪಲ್ಕುರಿಕಿ ಸೋಮನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪಾಲ್ಕುರಿಕೆ ಸೋಮನಾಥ ಇಂದ ಪುನರ್ನಿರ್ದೇಶಿತ)

ಪಾಲ್ಕುರಿಕೆ ಸೋಮನಾಥ 12 ಮತ್ತು 13 ನೇ ಶತಮಾನದ ಅತ್ಯಂತ ಪ್ರಸಿದ್ಧ ತೆಲುಗು ಭಾಷೆ ಬರಹಗಾರರಲ್ಲಿ ಒಬ್ಬರು. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಒಬ್ಬ ಯಶಸ್ವಿ ಬರಹಗಾರರಾಗಿದ್ದರು ಮತ್ತು ಆ ಭಾಷೆಗಳಲ್ಲಿ ಹಲವು ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಅವನು ನಂಬಿಕೆಯಿಂದ ಶೈವ (ಹಿಂದೂ ದೇವತೆ ಶಿವ ಭಕ್ತ) ಮತ್ತು 12 ನೇ ಶತಮಾನದ ಸಾಮಾಜಿಕ ಸುಧಾರಕ ಬಸವಣ್ಣನವರ ಮತ್ತು ಅವರ ಬರಹಗಳ ಅನುಯಾಯಿಯಾಗಿದ್ದನು ಈ ನಂಬಿಕೆಯನ್ನು ಪ್ರಚಾರ ಮಾಡುವ ಉದ್ದೇಶವಾಗಿತ್ತು. ಅವರು ಚೆನ್ನಾಗಿ ಶ್ಲಾಘಿತ ಶಿವಾವ ಕವಿಯಾಗಿದ್ದರು.[೧].[೨] [೩]

ಪಲ್ಕುರಿಕಿ ಸೋಮನಾಥ
Statue of Palkuriki Somanatha
ಜನನತೆಲಂಗಾಣ ಅಥವಾ ಕರ್ನಾಟಕ, ಭಾರತ
ವೃತ್ತಿಕವಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಧರ್ಮ (ವೀರಶೈವ )
ಪ್ರಮುಖ ಕೆಲಸ(ಗಳು)ಬಸವ ಪುರನಾ (ತೆಲುಗು), ಸಿಲಸಂಪದನೆ (ಕನ್ನಡ), ಸೋಮನಾಥಭಶ್ಯ (ಸಂಸ್ಕೃತ)

ಪ್ರಭಾವಗಳು
  • Self-taught

ಪ್ರಭಾವಿತರು

ಜೀವನ[ಬದಲಾಯಿಸಿ]

ಅವರು ಜನ್ಮದಿಂದ ಶೈವರಾಗಿಲ್ಲವೆಂಬುದು ಅವನ ಮೂಲತೆಯಲ್ಲಿ ಅವನ ಹೆತ್ತವರ ಹೆಸರುಗಳನ್ನು ಉಲ್ಲೇಖಿಸುತ್ತದೆ ಎಂಬ ಅಂಶದಿಂದ ಬರುತ್ತದೆ, ಬಸವ ಪುರಾಣ, ಶೈವ ಬರಹಗಾರರ ಸಾಮಾನ್ಯ ಅಭ್ಯಾಸವನ್ನು ಉಲ್ಲಂಘಿಸುತ್ತದೆ, ಅವರು ತಮ್ಮ ನಿಜವಾದ ಹೆತ್ತವರನ್ನು ಉಲ್ಲೇಖಿಸದೆ ದೇವರನ್ನು ಶಿವನನ್ನಾಗಿ ಮತ್ತು ಅವರ ಪತ್ನಿ ಪಾರ್ವತಿಯನ್ನು ತಾಯಿಯಾಗಿ ಪರಿಗಣಿಸುತ್ತಾರೆ. ಆದಾಗ್ಯೂ, ವಿದ್ವಾಂಸ ಬಂದರು ತಮ್ಮಯ್ಯ ಅವರು ಜಂಗಮಾ (ದೇವಿಯ ಶಿವ ಭಕ್ತ) ದಂಪತಿಯಾಗಿ ಜನಿಸಿದರು ಎಂದು ವಾದಿಸಿದ್ದಾರೆ. ವಿದ್ವಾಂಸ ಶೇಷಾಯ 13 ನೇ ಶತಮಾನದ ಉತ್ತರಾರ್ಧದಿಂದ 14 ನೇ ಶತಮಾನದ ಆರಂಭದಲ್ಲಿ ಇದ್ದಾರೆ ಮತ್ತು ಕಾಕತೀಯ ರಾಜ ಪ್ರತಾಪರುದ್ರ II ರ ಕಾಲದಲ್ಲಿ ಬರಹಗಾರ ಬದುಕಿದ್ದಾನೆ ಎಂದು ಸೂಚಿಸುತ್ತದೆ,

ಕನ್ನಡ ವಿದ್ವಾಂಸ ಆರ್. ನರಸಿಂಹಚಾರ್ಯ ಅವರು ತಮ್ಮ ಬರಹಗಳನ್ನು 12 ನೇ ಶತಮಾನದವರೆಗೆ ಹೇಳಿದ್ದಾರೆ ಮತ್ತು ಸೋಮನಾಥವನ್ನು ಕಾಕತೀಯ ರಾಜ ಪ್ರತಾಪರುದ್ರ I (1140-1196) ಪೋಷಿಸಿದರು ಎಂದು ಹೇಳಿದ್ದಾರೆ. ಅವರ ಹುಟ್ಟಿದ ಸ್ಥಳವು ಅನಿಶ್ಚಿತವಾಗಿದೆ ಏಕೆಂದರೆ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಪಾಲ್ಕುರಿಕೆ ಎಂಬ ಹೆಸರಿನ ಗ್ರಾಮವೂ ಕನ್ನಡ ಮಾತನಾಡುವ ಪ್ರದೇಶದಲ್ಲಿ (ಕರ್ನಾಟಕ) ಇದೆ..[೪][೫][೬][೭]

ಸೋಮನಾಥ ಕವಿ ಮಾತ್ರನಲ್ಲದೆ ಭೃಂಗಿಯ ಅವತಾರನೇ ಆದ ಕಾರಣ ಪುರುಷನೆಂದು ಅನೇಕ ಪವಾಡಗಳನ್ನು ಮೆರೆದ ಮಹಿಮಾವಂಥನೆಂದೂ ವೀರಶೈವ ಪುರಾಣಗಳು ಹೇಳುತ್ತವೆ. ಓರುಗಲ್ಲಿಗೆ ಹೋದಾಗ ಸೋಮನಾಥ ಕುಳಿತಿದ್ದ ಗಾಡಿಯ ಎತ್ತುಗಳು ಏನು ಮಾಡಿದರೂ ಊರ ಬಾಗಿಲನ್ನು ಪ್ರವೇಶಿಸದೆ ಮೊಂಡು ಹಿಡಿದುವಂತೆ. ಆಗ ಪರಿಶೀಲಿಸಿ ನೋಡಿದರೆ ಆ ಊರಿನ ಹೆಬ್ಬಾಗಿಲ ಮೇಲೆ ವೈಷ್ಣವ ಪ್ರತಿಮೆಗಳನ್ನು ಕೆತ್ತಿದ್ದುದು ಕಾಣಿಸಿತು. ಆ ಪ್ರತಿಮೆಗಳ ಕಾಲ ಕೆಳಗೆ ಹೋಗಲು ಆ ಬಸವಣ್ಣಗಳು ನಿರಾಕರಿಸಿದ್ದುದು ಸಹಜವೇ. ಇದನ್ನು ತಟ್ಟನೆ ಗ್ರಹಿಸಿದ ಸೋಮನಾಥ ಕೆಲವು ಶಿವ ಮಂತ್ರಗಳನ್ನು ತಾಳೆಗರಿಗಳ ಮೇಲೆ ಬರೆದು ಅವುಗಳನ್ನು ಆ ಪ್ರತಿಮೆಗಳ ಇದಿರಿನಲ್ಲಿ ಹಿಡಿಯಲು ಆ ಶಿಲಾಪ್ರತಿಮೆಗಳು ಸೀಳಿ ಕೆಳಕ್ಕೆ ಬಿದ್ದವು; ಆಗ ಆ ಗಾಡಿಯ ಎತ್ತುಗಳು ಸುಲಭವಾಗಿ ಓರಗಲ್ಲು ನಗರದೊಳಕ್ಕೆ ಪ್ರವೇಶ ಮಾಡಿದವು. ಅಂದಿನಿಂದ ಪಾಲ್ಕುರಿಕೆ ಸೋಮನಾಥ ಅನ್ಯ ದೈವ ಕೋಲಾಹಲನೆನ್ನಿಸಿಕೊಂಡ. ಇವನ ಕಥೆಯನ್ನೇ ವಸ್ತುವಾಗಿ ಉಳ್ಳ ಪಾಲ್ಕುರಿಕೆ ಸೋಮೇಶ್ವರ ಪುರಾಣವೆಂಬ ಒಂದು ಕನ್ನಡ ಗ್ರ್ರಂಥವೇ ಇದೆ. ಇವನಿಗೆ ಅನ್ಯವಾದಕೋಲಾಹಲ, ಅನ್ಯದೈವಕೋಲಾಹಲ, ತತ್ತ್ವವಿದ್ಯಾಕಲಾಪ, ಕವಿತಾಸಾರ ಎಂಬ ಹಲವು ಬಿರುದುಗಳಿವೆ.

ಸೋಮನಾಥ ಬಸವೇಶ್ವರನ ಅವಿಚ್ಛಿನ್ನ ಭಕ್ತ. ಬಸವೇಶಸ್ಯ ತನಯಃ ಎಂದು ತನ್ನ ಒಂದು ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ಇವನು ಪಾಲ್ಕುರಿಕೆಯಿಂದ ಹೊರಟು ಕನ್ನಡನಾಡಿನ ಕಳ್ಳೆಯವೆಂಬ ಗ್ರಾಮಕ್ಕೆ ಬಂದು ಅಲ್ಲಿ ನೆಲೆಸಿದನೆಂದು ಐತಿಹ್ಯ. ಅಲ್ಲಿ ಈತ ಬಸವಣ್ಣನನ್ನು ಗದ್ಯಪದ್ಯಗಳಿಂದ ಸೃತಿಸುತ್ತಾ ಕಾಲಕ್ಷೇಪ ಮಾಡುತ್ತಿದ್ದ. ಇವನ ಅನೂನಭಕ್ತಿಯನ್ನು ಬಹಳವಾಗಿ ಮೆಚ್ಚಿಕೊಂಡ ಪರಮೇಶ್ವರ ಕೈಲಾಸಕ್ಕೆ ಬರಬೇಕೆಂದು ಕರೆದರೂ ಹೋಗಲೊಲ್ಲದೆ ಬಸವೇಶ್ವರನ ಕೀರ್ತಿ ಹಬ್ಬಿರುವ ಮತ್ರ್ಯಲೋಕವೇ ತನಗೆ ಪ್ರಿಯವೆಂದು ಹೇಳಿ ಕಳ್ಳ್ಳೆಯದಲ್ಲಿಯೇ ನಿಂತು ಕಡೆಗೆ ಅಲ್ಲಿಯೇ ಬಯಲಾದನೆಂದು ಕಥೆ.

ಈತನ ತಂದೆ ವಿಷ್ಣುರಾಮೀದೇವ, ತಾಯಿ ಶ್ರೀಯಾದೇವಿ. ಬಹುಶಃ ಇವರು ಆರಾಧ್ಯ ಬ್ರಾಹ್ಮಣರಾಗಿರಬೇಕು. ಸೋಮನಾಥ ಬಸವೇಶ್ವರನ ಉಪದೇಶ ಸಾರವನ್ನು ಕರ್ಣಾಕರ್ಣಿಕೆಯಾಗಿ ಕೇಳಿ ಹಾರ್ದಿಕವಾಗಿ ಮೆಚ್ಚಿಕೊಂಡು ವೀರಮಾಹೇಶ್ವರಚಾರವನ್ನು ಕೈಕೊಂಡವ. ತಾನು ಕಟ್ಟಿಕೂರಿನ ಪೋತಿದೇವರ ಶಿಷ್ಯನೆಂದು ತನ್ನ ಬಸವ ಪುರಾಣದಲ್ಲಿ ಹೇಳಿಕೊಂಡಿದ್ದಾನೆ.

ಈತ ಕನ್ನಡದಲ್ಲಿ ಸಹಸ್ರಗಣನಾಮ, ಸದ್ಗುರು ರಗಳೆ, ಶೀಲಸಂಪಾದನೆ, ಚನ್ನಬಸವ ಸ್ತೋತ್ರದ ರಗಳೆ, ಶರಣು ಬಸವ ರಗಳೆ ಎಂಬ ಕೃತಿಗಳನ್ನು ರಚಿಸಿದ್ದಾನೆ. ಇವೆಲ್ಲ ವೀರಶೈವ ಮತ ತತ್ತ್ವಪ್ರಚಾರಕ್ಕೆ ಮೀಸಲಾದಂಥವು. ಇವುಗಳಲ್ಲಿ ಅಷ್ಟಾಗಿ ಪ್ರಶಂಸೆ ಮಾಡಬಹುದಾದ ಹಿರಿಯ ಕಾವ್ಯಸತ್ತ್ವ ಕಾಣಿಸದು. ಸೋಮೇಶ್ವರಶತಕ ಎಂಬ ಇನ್ನೊಂದು ಚಿಕ್ಕ ಕೃತಿ ಪ್ರಸಿದ್ಧವಾಗಿದೆಯಾದರೂ ಅದನ್ನು ಬರೆದವ ಪುಲಿಗೆರೆಯ ಸೋಮೇಶ್ವರನೇ ಹೊರತು ಪಾಲ್ಕುಣಿಕೆ ಸೋಮನಾಥನಲ್ಲ.

ಸೋಮನಾಥ ಸಂಸ್ಕೃತದಲ್ಲಿಯೂ ಉದ್ದಾಮ ಪಂಡಿತನಾಗಿದ್ದು ಆ ಭಾಷೆಯಲ್ಲಿ ರುದ್ರಭಾಷ್ಯಂ, ಬಸವೋದಾಹರಣಂ ಮೊದಲಾದ ಕೃತಿಗಳನ್ನು ರಚಿಸಿದ್ದಾನೆ. ಆದರೆ ಈತನ ಕವಿಕೀರ್ತಿ ಶಾಶ್ವತವಾಗಿ ನಿಲ್ಲಲು ಪ್ರಸಿದ್ಧವಾದ ಈತನ ತೆಲುಗು ಕೃತಿಗಳೇ ಆಧಾರ. ಈತ ತೆಲುಗಿನಲ್ಲಿ ಬಸವಪುರಾಣಮು, ಪಂಡಿತಾರಾಧ್ಯಚರಿತ್ರ, ಅನುಭವ ಸಾರಾಮು ಎಂಬ ಮೂರು ದೊಡ್ಡ ಗ್ರಂಥಗಳನ್ನು ರಚಿಸಿದ್ದಾನೆ. ಇವಲ್ಲದೆ ವೃಷಾಧಿಪಶತಕಮ್ ಮೊದಲಾದ ಕೆಲವು ಚಿಕ್ಕ ಕೃತಿಗಳೂ ಈತನ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಬಸವಪುರಾಣ ಲೋಕ ಪ್ರಸಿದ್ಧವಾದ ದ್ವೀಪದಕಾವ್ಯ. ಆ ಕಾಲದ ಪಂಡಿತಕವಿಗಳು ಅಪ್ರಮಾಣ ಬಸವದ್ವೀಪದ ಪುರಾಣವೆಂದು ಅಲ್ಲಗಳೆದು ಅಪಹಾಸ್ಯ ಮಾಡಿದರೂ ಈತ ಅದನ್ನು ಸ್ವಲ್ಪವೂ ಸಡ್ಡೆ ಮಾಡದೆ ಪಂಡಿತಾರಾಧ್ಯ ಚರಿತ್ರ ಎಂಬ ತನ್ನ ಇನ್ನೊಂದು ಬೃಹದ್ಗ್ರಂಥವನ್ನೂ ಆ ಛಂದಸ್ಸಿನಲ್ಲಿಯೇ ರಚಿಸಿ ಕೀರ್ತಿವಂತನಾದ. ಅದುವರೆಗೆ ತೆಲುಗಿನಲ್ಲಿ ಸಂಸ್ಕøತ ಭಾಷಾಸಾಹಿತ್ಯಗಳ ಪ್ರಭಾವಕ್ಕೆ ಒಳಗಾಗಿದ್ದ ಮಾರ್ಗ ಸಾಹಿತ್ಯದಲ್ಲಿ ದ್ವಿಪದಿಗೆ ಸ್ವಲ್ಪವೂ ಮನ್ನಣೆ ಇರಲಿಲ್ಲ. ಅದು ಜನಪದ ಸಾಹಿತ್ಯಕ್ಕೆ ಸೇರಿದ ಹಲವು ಗೇಯ ಕಾವ್ಯಗಳಲ್ಲಿ ಮಾತ್ರ ಬಳಕೆಯಲ್ಲಿತ್ತು. ಆ ಛಂದಸ್ಸಿನಲ್ಲಿ ಒಂದು ಇಡೀ ಕಾವ್ಯವನ್ನು ರಚಿಸುವ ಮಹಾ ಸಾಹಸವನ್ನು ಕೈಕೊಂಡ ಈತನ ಧೈರ್ಯ ಕೊಂಡಾಡತಕ್ಕದ್ದೇ ಸರಿ. ಈತ ಕಾಲಪ್ರವಾಹಕ್ಕೆ ಎದುರಾಗಿ ಈಜಿ ದಡ ಹತ್ತಿದ ಸಮರ್ಥ ಕವಿ. ಈತನಿಂದ ತೆಲುಗುಸಾಹಿತ್ಯದಲ್ಲಿ ದ್ವಿಪದೀ ಛಂದಸ್ಸಿನ ಮಹಿಮೆ ಹೆಚ್ಚಿತು. ಅದರ ಸೊಬಗು, ಉಪಯುಕ್ತತೆಗಳು ಇತರ ಪಂಥಗಳ ಕವಿಗಳಿಗೂ ವೇದ್ಯವಾಗಿ ಅವರೂ ಅದನ್ನು ಮೆಚ್ಚಿಕೊಂಡು ಅದರಲ್ಲಿಯೇ ಕೃತಿ ರಚನೆ ಮಾಡುವಂತಾಯಿತು. ಅಂತವುಗಳಲ್ಲಿ ವಿಶೇಷ ಜನಪ್ರೀತಿಯನ್ನು ಪಡೆದ ರಂಗನಾಥ ರಾಮಾಯಣ ಸ್ಮರಣಾರ್ಹವಾಗಿದೆ. ಕನ್ನಡದಲ್ಲಿ ರಗಳೆಗೆ ಹರಿಹರ ಆದ್ಯಪ್ರವರ್ತಕನಾಗಿ ಕ್ರಾಂತಿಕಾರನಾದಂತೆ ಈತ ತೆಲುಗಿನಲ್ಲಿ ದ್ವಿಪದಿಗೆ ಆದ್ಯಪ್ರವರ್ತಕನಾಗಿದ್ದಾನೆ.

ಈತನ ಬಸವಪುರಾಣ ಈಗ ಲಭಿಸಿರುವ ಬಸವೇಶ್ವರ ಕಥೆಗಳಲ್ಲಿ ಎರಡನೆಯದು. ಮೊದಲನೆಯದು ಕನ್ನಡ ಕವಿ ಹರಿಹರನ ಬಸವರಾಜ ದೇವರ ರಗಳೆ. ಆದರೆ ಅದು ಅಪೂರ್ಣ ಕೃತಿ. ಬಸವಣ್ಣನವರ ಜೀವನ ಚರಿತ್ರೆ ಅದರಲ್ಲಿ ಪೂರ್ತಿಯಾಗಿ ರೂಪುಗೊಂಡಿಲ್ಲ. ಸೋಮನಾಥ ಬಸವೇಶ್ವರನ ಅವತಾರ ಕಥೆಯಿಂದ ಹಿಡಿದು ನಿರ್ಯಾಣದವರೆಗಿನ ಸಂಪೂರ್ಣ ವೃತ್ತಾಂತವನ್ನು ಮನೋಜ್ಞವಾಗಿ ನಿರೂಪಿಸಿದ್ದಾನೆ. ಬಸವಣ್ಣನ ಸಮಕಾಲೀನರಾದ ಅನೇಕ ಶಿವಶರಣರ ಪುಣ್ಯಕಥೆಗಳೂ ಅದರಲ್ಲಿ ಅಡಕವಾಗಿವೆ. ಈ ಕೃತಿಯೇ 1369 ರಲ್ಲಿ ಕೃತಿರಚನೆ ಮಾಡಿದ ಕನ್ನಡ ಭೀಮಕವಿಗೆ ಆಧಾರಗ್ರಂಥ. ಆ ವೇಳೆಗಾಗಲೇ ಹರಿಹರನ ಬಸವರಾಜದೇವರ ರಗಳೆ ಪ್ರಸಿದ್ಧವಾಗಿದ್ದರೂ ಅದನ್ನು ಅನುಸರಿಸದೇ ಭೀಮಕವಿ ತೆಲುಗು ಕಾವ್ಯವನ್ನೇ ಅವಲಂಬಿಸಿರುವುದನ್ನು ನೋಡಿದರೆ ಆ ಕಾಲಕ್ಕೆ ಪಾಲ್ಕುರಿಕೆ ಸೋಮನಾಥನ ಕೃತಿಯೇ ವೀರಶೈವ ಭಕ್ತ ಜನಕ್ಕೆ ಹೆಚ್ಚು ಪ್ರಿಯವೂ ಆದರಣೀಯವೂ ಆಗಿದ್ದಿತೆಂಬುದು ಸ್ಪಷ್ಟವಾಗುತ್ತದೆ. ಈ `ಕವಿ ಬಸವೇಶ್ವರನನ್ನು ಪ್ರತ್ಯಕ್ಷವಾಗಿ ಕಂಡವನಲ್ಲ: ಅವನ ಸಮಕಾಲೀನನೂ ಆಗಿರಲಾರ. ಪ್ರಸ್ತುತಿಕೆಕ್ಕಿನ ಬಸವನೀಚರಿತ 1 ಜೆಪ್ಪಿತಿ ಭಕ್ತುಲ ಚೇವಿನ್ನ ಮಾಡ್ಕಿದಪ್ಪ ಕುಂಡಗನು ಯಥಾಶಕ್ತಿ ಎಂದು ತನ್ನ ಬಸವಪುರಾಣದ ಕೊನೆಯಲ್ಲಿ ಈತ ಹೇಳಿಕೊಂಡಿದ್ದಾನೆ. ನಾಡಿನಲ್ಲಿ ವಿಶೇಷ ಸ್ತೋತ್ರಪಾತ್ರನಾಗಿದ್ದ ಬಸವನ ಚರಿತ್ರೆಯನ್ನು ಭಕ್ತರಿಂದ ಕೇಳಿದ ರೀತಿಯಲ್ಲಿ ಯಥಾಶಕ್ತಿ ಹೇಳಿದೆ ಎಂದಿರುವುದರಿಂದ ಬಸವಣ್ಣನ ಪ್ರತ್ಯಕ್ಷದರ್ಶಿಗಳು, ಶಿಷ್ಯರು ಹೇಳಿದ ಅನೇಕ ಕಥೆಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಅವನ ಹಿರಿಮೆಯನ್ನು ಮನಗಂಡು, ಮೆಚ್ಚಿ ಭಕ್ತಿಪ್ರೇರಿತನಾಗಿ ಅವನ ಚರಿತ್ರೆಯನ್ನು ಲೋಕಾಹಿತಾರ್ಥವಾಗಿ ಜನಪದ ಕಾವ್ಯದ ಧಾಟಿಯಲ್ಲಿ ಹೇಳಿ ಪ್ರಚಾರಮಾಡಿದ ಕೀರ್ತಿ ಈತನದು.

ಸೋಮನಾಥನ ಹೇಳಿಕೆಯ ಪ್ರಕಾರ ಬಸವಣ್ಣ ನಂದಿಕೇಶ್ವರನ ಅವತಾರ; ಭೂಲೋಕದಲ್ಲಿ ಶೈವಮತವನ್ನು ಉದ್ಧಾರ ಮಾಡುವುದಕ್ಕೆ ಹುಟ್ಟಿದವ. ಹಂಪೆಯ ಹರಿಹರ ಹೇಳಿರುವಂತೆ ಅವನು ವೃಷಭಮುಖನೆಂಬ ಪ್ರಮಥನೊಬ್ಬನ ಅವತಾರ. ವೃಷಭಮುಖ ಕೈಲಾಸದಲ್ಲಿ ಶಿವಪ್ರಸಾದ ಹಂಚುವಾಗ ತಪ್ಪು ಮಾಡಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ಹಟ ಮಾಡಿದ್ದರಿಂದ ಶಿವನ ಅಪ್ಪಣೆಯ ಮೇರೆಗೆ ಭೂಲೋಕದಲ್ಲಿ ಬಸವಣ್ಣನಾಗಿ ಹುಟ್ಟಿದ.

ಬಸವಪುರಾಣ ಏಳು ಆಶ್ವಾಸಗಳಿಂದ ಕೂಡಿದ್ದು ಬಸವಣ್ಣವ ಜೀವನ ಕಥೆಯನ್ನೇ ಅಲ್ಲದೆ ಪ್ರಾಸಂಗಿಕವಾಗಿ ಅನೇಕ ಪ್ರಾಚೀನ ಮತ್ತು ನೂತನ ಶಿವಶರಣರ ಚರಿತ್ರೆಗಳನ್ನೊಳಗೊಂಡಿದೆ. ಒಟ್ಟು ಕಾವ್ಯದ ಗಾತ್ರದಲ್ಲಿ ಬಸವಣ್ಣನ ಕಥೆ ಬಹಳ ಸ್ವಲ್ಪವೇ ಭಾಗವನ್ನಾಕ್ರಮಿಸಿಕೊಂಡಿದೆ. ಉಳಿದ ಕಥೆಗಳೇ ಹೆಚ್ಚುಭಾಗ. ತಮಿಳುನಾಡಿನ ನಾಯನಾರುಗಳ ಕಥೆಗಳೂ ಇಲ್ಲಿ ಬಂದಿವೆ; ತಿರುನಾವುಕ್ಕರಸು, ಇರುತ್ತಾಂಡಿ, ಇರುಪಾದಾಂಡಾರಿ, ಸಿರಿಯಾಳ ಮೊದಲಾದವರ ವೃತ್ತಾಂತಗಳನ್ನೂ ಈತ ಹೇಳಿದ್ದಾನೆ. ಅನುಭವಸಾರಮು ಈತ ರಚಿಸಿದ ಚಂಪುಶೈಲಿಯ ಗ್ರಂಥ. ಪಂಡಿತಾರಾಧ್ಯನ ಶಿವತತ್ವ ಸಾರಕ್ಕೂ ಈ ಕೃತಿಗೂ ಬಹಳ ಹೋಲಿಕೆಯಿದೆ. ತಾನೂ ಮಾರ್ಗಶೈಲಿಯಲ್ಲಿ ಬರೆಯಬಲ್ಲೆನೆಂದು ತೋರಿಸಿಕೊಳ್ಳುವುದಕ್ಕೆಂದೇ ಇದನ್ನು ಬರೆದನೋ ಎಂದೆನಿಸುತ್ತದೆ. ಪಂಡಿತಾರಾಧ್ಯ ಚರಿತ್ರೆ, ವೃಷಾಧಿಪ ಶತಕವೇ ಮೊದಲಾದ ಚಿಕ್ಕ ಕೃತಿಗಳೂ ಸೋಮನಾಥನ ವೀರ್ಯವತ್ತಾದ ಶೈಲಿ, ಗಂಡು ಭಾಷೆ ನಿರರ್ಗಳವಾದ ವಾಗ್ಧಾರೆಗಳಿಂದ ಶೋಭಿಸುತ್ತಾ ತೆಲುಗು ಸಾಹಿತ್ಯದಲ್ಲಿ ಜನಪ್ರೀತಿಗೂ ಪಂಡಿತ ಮನ್ನಣೆಗೂ ಪಾತ್ರವಾಗಿವೆ.

ತೆಲುಗಿನಲ್ಲಿ ವೀರಶೈವ ವಾಙ್ಮಯದ ಪ್ರಚಾರಕ್ಕೆ ಪಾಲ್ಕುರಿಕೆ ಸೋಮನಾಥ ಬಹಳ ಮಟ್ಟಿಗೆ ಕಾರಣನಾಗಿದ್ದಾನೆ. thumb

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • Various (1992) [1992]. Encyclopaedia of Indian literature – vol 5. Sahitya Akademi. ISBN 81-260-1221-8.
  • Sastri, Nilakanta K. A. (2002) [1955]. A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.
  • Narasimhacharya, R (1988) [1988]. History of Kannada Literature. New Delhi, Madras: Asian Educational Services. ISBN 81-206-0303-6.

ಉಲ್ಲೇಖಗಳು[ಬದಲಾಯಿಸಿ]

  1. South Asian arts www.britannica.com
  2. Sahitya Akademi (1992), p. 4133
  3. "T votaries cry foul over 'neglect' of T contribution to Telugu pride". The Times Of India. 13 March 2011. Archived from the original on 2012-11-05. Retrieved 2017-08-06.
  4. Bandaru Tammayya in Sahitya Akademi (1992), p. 4133
  5. Seshayya in Sahitya Akademi (1992), p. 4133
  6. Narasimhacharya (1988), p. 20, p. 68
  7. Shastri (1955), p. 362