ದೀನ್‍ದಯಾಳ್ ಉಪಾಧ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ
ಜನನ
ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ

೨೫ ಸೆಪ್ಟೆಂಬರ್ ೧೯೧೬
ನಗ್ಲಾ ಚಂದ್ರಬಾನ್ , ಮಥುರಾ, ಉತ್ತರಪ್ರದೇಶ, ಭಾರತ
ಮರಣ೧೧ ಫೆಬ್ರುವರಿ ೧೯೬೮ (ವಯಸ್ಸು ೫೧)
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಬಿ.ಎ
ಉದ್ಯೋಗಪತ್ರಕರ್ತ, ಸಮಾಜ ಸೇವಕ,ಚಿಂತಕ,ರಾಜಕಾರಣಿ
ಇದಕ್ಕೆ ಖ್ಯಾತರುಸಮಾಜ ಸೇವೆ

ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ (೨೫ ಸೆಪ್ಟೆಂಬರ್ ೧೯೧೬- ೧೧ ಫೆಬ್ರುವರಿ ೧೯೬೮) (ಸಂಸ್ಕೃತ - दीनदयाल उपाध्याय) ಇವರು ಭಾರತೀಯ ರಾಜಕಾರಣಿ, ಬಲಪಂಥೀಯ ಚಿಂತಕರು ಹಾಗೂ ಭಾರತೀಯ ಜನಸಂಘದ ನೇತಾರರು. ಭಾರತೀಯ ಜನಸಂಘವು ಬಳಿಕ ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿತು. ದೀನ್‍ದಯಾಳ್ ಉಪಾಧ್ಯಾಯರು ಏಕಾತ್ಮ ಮಾನವ ವಾದದ ಪ್ರವರ್ತಕರು.

ದೀನ್ ದಯಾಳ್ ಉಪಾಧ್ಯಾಯರು ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದು, ಬಳಿಕ ಭಾರತೀಯ ಜನಸಂಘದ ಸದಸ್ಯರಾಗಿ ನಿಯುಕ್ತರಾದರು. ೧೯೬೭-೧೯೬೮ರ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೬೮ರಲ್ಲಿ ಮೊಘಲ್‌ಸಾರಾಯ್ ರೈಲ್ವೆ ನಿಲ್ದಾಣದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ನಿಧನರಾದರು.[೧]

ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ದೀನ್ ದಯಾಳರು ೧೯೧೮ರಲ್ಲಿ ಉತ್ತರಪ್ರದೇಶಮಥುರಾ ಜಿಲ್ಲೆಯ ನಗ್ಲಾ ಚಂದ್ರಬಾನ್ ಎನ್ನುವ ಹಳ್ಳಿಯಲ್ಲಿ ಹುಟ್ಟಿದರು. ಇವರ ತಂದೆ ಭಗವತೀಪ್ರಸಾದ್ ಉಪಾಧ್ಯಾಯರು, ವಿದ್ವಾಂಸರು ಹಾಗೂ ಜ್ಯೋತಿಷರಾಗಿದ್ದರು. ತಾಯಿ ರಾಮ್ ಪ್ಯಾರಿ ಇವರು ಗೃಹಿಣಿಯಾಗಿದ್ದರು. ಎಂಟು ವರ್ಷದ ಪ್ರಾಯದಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಉಪಾಧ್ಯಾಯರು, ಸೋದರ ಮಾವನ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ರಾಜಸ್ಥಾನಪಿಲಾನಿಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರೈಸಿ, ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದರು.ಆಗ್ರಾದ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸೇರಿಕೊಂಡರು[೨][೩]

ವೃತ್ತಿ ಮತ್ತು ಸಮಾಜ ಸೇವೆ[ಬದಲಾಯಿಸಿ]

೧೯೩೭ರಲ್ಲಿ ಸನಾತನ ಧರ್ಮ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯದಲ್ಲಿ ತಮ್ಮ ಸಹಪಾಠಿ ಬಾಲೂಜೀ ಮಹಾಶಬ್ದೆ ಎನ್ನುವವರ ಮುಖಾಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರರನ್ನು ಭೇಟಿಯಾದರು. ಭೇಟಿಯಿಂದ ಸ್ಪೂರ್ತಿಯನ್ನು ಪಡೆದ ಉಪಾಧ್ಯಾಯರು ಸ್ವಯಂ ಸೇವಕನಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು ಹಾಗೂ ೧೯೪೨ರಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ನಿಯುಕ್ತರಾದರು.

೧೯೪೦ರಲ್ಲಿ ರಾಷ್ಟ್ರಧರ್ಮ ಪತ್ರಿಕೆಯನ್ನು ಪ್ರಾರಂಭಿಸಿದರು. ಬಳಿಕ ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳನ್ನು ಪ್ರಾರಂಭಿಸಿದರು.

ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳ ಸಂಪಾದಕರಾಗಿದ್ದ ದೀನ್ ದಯಾಳರು ಲೇಖಕರೂ ಹೌದು. ಚಂದ್ರಗುಪ್ತ ಮೌರ್ಯ ಎಂಬ ನಾಟಕ, ಶಂಕರಾಚಾರ್ಯಜೀವನಚರಿತ್ರೆಯನ್ನು ಬರೆದರು. ಡಾ. ಕೇಶವ ಬಲಿರಾಮ್ ಹೆಡ್ಗೆವಾರಜೀವನಚರಿತ್ರೆಯನ್ನು ಮರಾಠಿ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು.

ರಾಜಕೀಯ ಜೀವನ[ಬದಲಾಯಿಸಿ]

೧೯೫೧ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘವನ್ನು ಕಟ್ಟಿದರು. ದೀನ್ ದಯಾಳರು ಜನಸಂಘಕ್ಕೆ ನಿಯುಕ್ತಿಗೊಂಡು, ಪಕ್ಷದ ಉತ್ತರ ಪ್ರದೇಶ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಬಳಿಕ ೧೫ ವರ್ಷಗಳ ಕಾಲ ಪಕ್ಷದ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಸಂಘಟಿಸಿದರು. ಈ ನಡುವೆ ೧೯೬೩ರ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

೧೯೬೭-೬೮ರ ಅವಧಿಯಲ್ಲಿ ಜನಸಂಘದ ಅಧ್ಯಕ್ಷರಾಗಿದ್ದರು.[೪]

೧೯೫೨-೧೯೬೭ರ ಮಧ್ಯೆ ಭಾರತೀಯ ಜನ ಸಂಘದ ಬೆಳವಣಿಗೆ
೧೯೫೨ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ
೧೯೫೨ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ 
೧೯೫೭ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ
೧೯೫೭ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ 
೧೯೬೨ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ
೧೯೬೨ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ 
೧೯೬೭ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ
೧೯೬೭ರಲ್ಲಿ ಭಾರತೀಯ ಜನ ಸಂಘದ ರಾಷ್ಟ್ರೀಯ ಸ‍್ಥಿತಿ 

ಏಕಾತ್ಮ ಮಾನವ ದರ್ಶನ: ತತ್ವ ಮತ್ತು ಆದರ್ಶ[ಬದಲಾಯಿಸಿ]

ದೀನ್ ದಯಾಳರು ಏಕಾತ್ಮ ಮಾನವ ದರ್ಶನ ಅಥವಾ ಏಕಾತ್ಮ ಮಾನವ ವಾದವನ್ನು ಪ್ರತಿಪಾದಿಸಿದರು. ಏಕಾತ್ಮ ಮಾನವತಾ ವಾದವು ಮಾನವನ ಜೀವನ ಹಾಗೂ ಸಮಸ್ತ ಸೃಷ್ಟಿಯ ಏಕಾತ್ಮ ಸಂಬಂಧದ ವಾದವಾಗಿದೆ.

ಪಾಶ್ಚ್ಯಾತ್ಯ ಮೂಲದಿಂದ ಬಂದಂತಹ ಸಾಮ್ಯವಾದ, ಸಮಾಜವಾದ ಹಾಗೂ ಬಂಡವಾಳಶಾಹಿ ವಾದಗಳ ಪ್ರಕಾರ ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಾಜ ನಿರ್ಮಾಣ, ಇವು ಪೂರಕವಾಗದೆ, ವಿರೋಧ ದಿಕ್ಕಿನಲ್ಲಿ ಇರುವಂತಹುದು. ಏಕಾತ್ಮ ಮಾನವ ವಾದವು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜ ನಿರ್ಮಾಣದ ಪೂರಕತೆಯನ್ನು ಬೋಧಿಸುತ್ತದೆ. ಈ ದರ್ಶನ ಕೇಂದ್ರಬಿಂದುವಾಗಿರುವವನು ವ್ಯಕ್ತಿ, ವ್ಯಕ್ತಿಗಳ ಸಮೂಹವೇ ಪರಿವಾರ, ಪರಿವಾರಗಳ ಸಮೂಹವೇ ಸಮಾಜ, ಸಮಾಜಗಳ ಸಮೂಹವೇ ರಾಷ್ಟ್ರ, ರಾಷ್ಟ್ರಗಳ ಸಮೂಹವೇ ವಿಶ್ವ, ಹೀಗೆ ಅನಂತ ಬ್ರಹ್ಮಾಂಡವು ಎಲ್ಲವನ್ನೂ ಒಳಗೊಂಡಿದ್ದು, ಒಂದು ಇನ್ನೊಂದಕ್ಕೆ ಪೂರಕವೇ ಹೊರತು ವಿರೋಧಿಯಲ್ಲ.[೫][೬][೭][೮][೯][೧೦]

೧೯೬೫ರಲ್ಲಿ ಆಂಧ್ರ ಪ್ರದೇಶವಿಜಯವಾಡದಲ್ಲಿ ನಡೆದ ಭಾರತೀಯ ಜನಸಂಘದ ರಾಷ್ಟ್ರೀಯ ಅಧಿವೇಶನದಲ್ಲಿ ಏಕಾತ್ಮ ಮಾನವ ದರ್ಶವನ್ನು ಪಕ್ಷದ ಮೂಲ ತತ್ವವಾಗಿ ಸ್ವೀಕರಿಸಲಾಯಿತು.

ನಿಧನ[ಬದಲಾಯಿಸಿ]

ಭಾರತೀಯ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಪಾಧ್ಯಾಯರು ೧೦ ಫೆಬ್ರುವರಿ ೧೯೬೮ರಂದು ಲಕ್ನೋನಿಂದ ಪಾಟ್ನಾಗೆ ತೆರಳಲು ಸಿಯಾಲ್ದಾ ಎಕ್ಸ್ಪ್ರೆಸ್ ರೈಲನ್ನು ಹತ್ತಿದರು. ೧೧ ಫೆಬ್ರವರಿ ೧೯೬೮ರ ಮುಂಜಾವ ೨:೧೦ರ ಹೊತ್ತಿಗೆ, ಮೊಘಲ್‌ಸಾರಾಯ್ ರೈಲ್ವೆ ನಿಲ್ದಾಣವನ್ನು ರೈಲು ತಲುಪಿದಾಗ ದೀನ್ ದಯಾಳರು ಪತ್ತೆಯಾಗಲಿಲ್ಲ. ರೈಲು ನಿಲ್ದಾಣದ ಹತ್ತಿರದಲ್ಲಿ ದೀನ್ ದಯಾಳ್ ಉಪಾಧ್ಯಾಯರ ಪಾರ್ಥಿವ ಶರೀರವು ದೊರೆಯಿತು.[೧೧]

ಕೇಂದ್ರೀಯ ತನಿಖಾ ದಳದ ತನಿಖೆಯ ಪ್ರಕಾರ, ಡಕಾಯಿತರ ತಂಡವೊಂದು ದೀನ್ ದಯಾಳರ ಮೇಲೆ ಆಕ್ರಮಣವನ್ನು ಮಾಡಿ ಅವರನ್ನು ರೈಲಿನಿಂದ ಕೆಳ ತಳ್ಳಿತು. ಕೇಂದ್ರೀಯ ತನಿಖಾ ದಳವು ಭರತ್ ಲಾಲ್ ಮತ್ತು ರಾಮ್ ಅವಧ್ ಎನ್ನುವ ಇಬ್ಬರನ್ನು ಬಂಧಿಸಿತು, ಆದರೆ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಈರ್ವರೂ ಕೂಡ ಬಂಧಮುಕ್ತರಾದರು.

ಕೃತಿಗಳು[ಬದಲಾಯಿಸಿ]

ಪತ್ರಿಕೆಗಳು[ಬದಲಾಯಿಸಿ]

  1. ರಾಷ್ಟ್ರಧರ್ಮ
  2. ಪಾಂಚಜನ್ಯ
  3. ಸ್ವದೇಶ

ನಾಟಕಗಳು[ಬದಲಾಯಿಸಿ]

  1. ಸಾಮ್ರಾಟ ಚಂದ್ರಗುಪ್ತ
  2. ಜಗದ್ಗುರು ಶಂಕರಾಚಾರ್ಯ

ಪ್ರಬಂಧಗಳು[ಬದಲಾಯಿಸಿ]

  1. ಭಾರತೀಯ ಅರ್ಥನೀತಿ- ವಿಕಾಸ್ ಕಿ ಏಕ್ ದಿಶಾ
  2. ಪೊಲಿಟಿಕಲ್ ಡೈರಿ
  3. ರಾಷ್ಟ್ರ ಚಿಂತನ್
  4. ಅಖಂಡ ಭಾರತ್ ಕ್ಯೂನ್?
  5. ಏಕಾತ್ಮ್ ಮಾನವ್ ವಾದ್
  6. ರಾಷ್ಟ್ರ ಜೀವನ್ ಕೀ ದಿಶಾ

ಸ್ಮಾರಕಗಳು[ಬದಲಾಯಿಸಿ]

ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ

೨೦೧೭ರಲ್ಲಿ ಉತ್ತರಪ್ರದೇಶ ಸರ್ಕಾರವು ಮೊಘಲ್‌ಸಾರಾಯ್ ರೈಲ್ವೆ ನಿಲ್ದಾಣವನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಜಂಕ್ಷನ್ ಎಂದು ಮರು-ನಾಮಕರಣಗೊಳಿಸಿತು.[೧೨] ೧೬ ಫೆಬ್ರವರಿ ೨೦೨೦ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದೀನ್ ದಯಾಳ್ ಉಪಾಧ್ಯಾಯ್ ಸ್ಮಾರಕ ಕೇಂದ್ರವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ, ದೀನ್ ದಯಾಳ್ ಉಪಾಧ್ಯಾಯರ ೬೩ ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.[೧೩][೧೪]

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಗೌರವಾರ್ಥವಾಗಿ, ಭಾರತ ಸರ್ಕಾರವು ಪ್ರಕಟಿಸಿರುವ ಅಂಚೆ ಚೀಟಿಗಳು.
೧೯೭೮ ಇಸವಿಯ ಅಂಚೆ ಚೀಟಿ
೧೯೭೮ ಇಸವಿಯ ಅಂಚೆ ಚೀಟಿ 
೨೦೧೫ ಇಸವಿಯ ಅಂಚೆ ಚೀಟಿ
೨೦೧೫ ಇಸವಿಯ ಅಂಚೆ ಚೀಟಿ 
೨೦೧೬ ಇಸವಿಯ ಅಂಚೆ ಚೀಟಿ
೨೦೧೬ ಇಸವಿಯ ಅಂಚೆ ಚೀಟಿ 
೨೦೧೮ ಇಸವಿಯ ಅಂಚೆ ಚೀಟಿ
೨೦೧೮ ಇಸವಿಯ ಅಂಚೆ ಚೀಟಿ 

ಉಲ್ಲೇಖಗಳು[ಬದಲಾಯಿಸಿ]

  1. "ದೀನ ದಯಾಳ ಉಪಾಧ್ಯಾಯರ ಸಂದೇಹಾಸ್ಪದ ಮರಣ". deendayalupadhyay.org. Archived from the original on 26 ಮಾರ್ಚ್ 2020. Retrieved 9 May 2020.{{cite web}}: CS1 maint: bot: original URL status unknown (link)
  2. "ದೀನ್ ದಯಾಳ್ ಉಪಾಧ್ಯಾಯರ ಬಾಲ್ಯ ಮತ್ತು ವಿದ್ಯಾಭ್ಯಾಸ". deendayalupadhyay.org. Archived from the original on 26 ಮಾರ್ಚ್ 2020. Retrieved 9 May 2020.{{cite web}}: CS1 maint: bot: original URL status unknown (link)
  3. "ದೀನ ದಯಾಳ ಉಪಾಧ್ಯಾಯರ ಬಾಲ್ಯ ಮತ್ತು ವಿದ್ಯಾಭ್ಯಾಸ". www.indiatoday.in. Archived from the original on 2020-05-02. Retrieved 9 May 2020.{{cite web}}: CS1 maint: bot: original URL status unknown (link)
  4. "ಸಮಾಜ ಸೇವೆ, ರಾಜಕೀಯ ಪ್ರವೇಶ ಹಾಗೂ ಜನಸಂಘ". www.indianexpress.com. Archived from the original on 12 ಏಪ್ರಿಲ್ 2020. Retrieved 9 May 2020.{{cite web}}: CS1 maint: bot: original URL status unknown (link)
  5. "ಏಕಾತ್ಮ ಮಾನವ ವಾದ". www.mea.gov.in. Archived from the original on 15 ಜೂನ್ 2019. Retrieved 9 May 2020.{{cite web}}: CS1 maint: bot: original URL status unknown (link)
  6. "ಏಕಾತ್ಮ ಮಾನವ ವಾದ". www.swarajyamag.com/. Archived from the original on 29 ಸೆಪ್ಟೆಂಬರ್ 2017. Retrieved 9 May 2020.{{cite web}}: CS1 maint: bot: original URL status unknown (link)
  7. "ಏಕಾತ್ಮ ಮಾನವ ವಾದ". www.deendayalupadhyay.org. Archived from the original on 28 ಅಕ್ಟೋಬರ್ 2019. Retrieved 10 May 2020.{{cite web}}: CS1 maint: bot: original URL status unknown (link)
  8. "ಏಕಾತ್ಮ ಮಾನವ ವಾದ". www.deendayalupadhyay.org/. Archived from the original on 3 ನವೆಂಬರ್ 2019. Retrieved 10 May 2020.{{cite web}}: CS1 maint: bot: original URL status unknown (link)
  9. "ಏಕಾತ್ಮ ಮಾನವ ವಾದ". www.deendayalupadhyay.org. Archived from the original on 3 ನವೆಂಬರ್ 2019. Retrieved 10 May 2020.{{cite web}}: CS1 maint: bot: original URL status unknown (link)
  10. "ಏಕಾತ್ಮ ಮಾನವ ವಾದ". www.deendayalupadhyay.org. Archived from the original on 3 ನವೆಂಬರ್ 2019. Retrieved 10 May 2020.{{cite web}}: CS1 maint: bot: original URL status unknown (link)
  11. "ದೀನ್ ದಯಾಳ್ ಉಪಾಧ್ಯಾಯರ ಸಂದೇಹಾಸ್ಪದ ಮರಣ". www.indianexpress.com. Archived from the original on 12 ಏಪ್ರಿಲ್ 2020. Retrieved 9 May 2020.{{cite web}}: CS1 maint: bot: original URL status unknown (link)
  12. "ಮೊಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ್ ನಿಲ್ದಾಣ ಎಂದು ಮರುನಾಮಕರಣಗೊಳಿಸಲಾಯಿತು". www.indianexpress.com. Archived from the original on 22 ಫೆಬ್ರವರಿ 2020. Retrieved 9 May 2020.{{cite news}}: CS1 maint: bot: original URL status unknown (link)
  13. "ದೀನ್ ದಯಾಳ್ ಉಪಾಧ್ಯಾಯರ ಪ್ರತಿಮೆ ಅನಾವರಣ". www.hindustantimes.com. Archived from the original on 17 ಏಪ್ರಿಲ್ 2020. Retrieved 9 May 2020.{{cite web}}: CS1 maint: bot: original URL status unknown (link)
  14. "ದೀನ್ ದಯಾಳ್ ಉಪಾಧ್ಯಾಯರ ಪ್ರತಿಮೆ ಅನಾವರಣ". www.navbharattimes.indiatimes.com. Archived from the original on 9 ಮೇ 2020. Retrieved 9 May 2020.{{cite news}}: CS1 maint: bot: original URL status unknown (link)