ಜೈನ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜಸ್ಥಾನದ ಕರೌಲಿಯಲ್ಲಿ ಇರುವ ಭಗವಾನ್ ಮಹಾವೀರನ ಬಿಂಬ
ಖಜುರಾಹೊದಲ್ಲಿರುವ ಜಿನಮಂದಿರ
ಜೈನ ಧರ್ಮದ ಪ್ರಥಮ ತೀರ್ಥಂಕರ ಋಷಭದೇವ ಹಾಗೂ ಕೊನೆಯ ತೀರ್ಥಂಕರ ವರ್ಧಮಾನ ಮಹಾವೀರನ ಶಿಲ್ಪ


ಜೈನ ಧರ್ಮ ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, ಋಷಭದೇವ ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು ತೀರ್ಥಂಕರರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವ ವರ್ಧಮಾನ ಮಹಾವೀರ.

ಶಬ್ದ ಉತ್ಪತ್ತಿ

ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ 'ಇಂದ್ರಿಯಗಳನ್ನು ಗೆದ್ದವನು' ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ 'ಜಿನರು' ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ ಧರ್ಮವೇ ಜೈನಧರ್ಮ.

ಜೈನ ತತ್ವಗಳು

ಸಂಕ್ಷಿಪ್ತ ಪರಿಚಯ

  • ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.ಜೈನ ದರ್ಶನದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ ಕರ್ಮವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ ರತ್ನತ್ರಯಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿಂದ ಮುಕ್ತರಾಗಬಹುದು.
  • ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ ಪಂಚ ಪರಮೇಷ್ಠಿಗಳ ಪೂಜೆ,ಆರಾಧನೆ ನಡೆಯುತ್ತದೆ.

ಜೈನ ದರ್ಶನ

ಭಾರತದಲ್ಲಿ ಹುಟ್ಟಿದ ಜೈನ ದರ್ಶನವು ಅವೈದಿಕ ದರ್ಶನವಾಗಿದೆ. ಅಂದರೆ ವೇದಗಳನ್ನು ಒಪ್ಪುವುದಿಲ್ಲ. ಅದು ಶ್ರಮಣ ಪಂಥವನ್ನು ಅನುಸರಿಸುವುದು.( ಸಮಣ ವಾ, ಬ್ರಾಹ್ಮಣ ವಾ). ಶ್ರಮಣ ಪರಂಪರೆಗೆ ಕ್ಷತ್ರಿಯರು ನಾಯಕರು. ಉಪನಿಷತ್ತುಗಳಲ್ಲಿಯೂ ಕ್ಷತ್ರಿಯ ಉಪದೇಶಕರು (ರಾಜರು) ಪ್ರಾವೀಣ್ಯತೆ, ಪ್ರಾಶಸ್ತ್ಯ ಪಡೆದಿದ್ದರು.

ಬ್ರಾಹ್ಮಣರು ಪಶು ಯಜ್ಞ ತ್ಯಜಿಸಿದ್ದು, ಸಸ್ಯಾಹಾರಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದು ಮೊದಲಾದವು ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವದಿಂದ ಎಂದು ಹೇಳಬಹುದು. ಜೈನ ಧರ್ಮೀಯರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ. ಇದರಲ್ಲಿ ಮುಖ್ಯವಾಗಿ ದಿಗಂಬರರು, ಶ್ವೇತಾಂಬರರು ಎಂದು ಎರಡು ಪಂಥಗಳಿವೆ.

ಇತಿಹಾಸ

ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ವರ್ತಮಾನ ಕಾಲದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಮಹಾವೀರನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೊಳಿಸಿದನು. ಒಂದು ಕಾಲದಲ್ಲಿ ಇದು ರಾಜ ಧರ್ಮವಾಗಿದ್ದು, ೮ನೇ ಶತಮಾನದ ನಂತರ ಅವನತಿ ಹೊಂದುತ್ತಾ ಬಂತು.

ಪ್ರಸ್ತುತ, ಭಾರತದಲ್ಲಿ ಜೈನಧರ್ಮೀಯರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;

  • ಅದು ೯೧.೪% (೨೦೦೧ ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ ಅರಿಷ್ಟನೇಮಿ, ಪಾರ್ಶ್ವನಾಥ , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದುಬಂದಿದೆ.

ಜೈನರ ಪ್ರಾಚೀನ ಗ್ರಂಥಗಳು

ಪೂರ್ವ ಆಗಮಗಳು, ದೇವರ್ದಿ ಎಂಬುವನಿಂದ ಸಂಗ್ರಹವಾದವುಗಳು (ಕ್ರಿ . ಶ. ೫ ನೇ ಶತಮಾನ. ) ಮತ್ತು ಅಂಗಗಳು ಇವು ಈ ದರ್ಶನದ ಪ್ರಮುಖ ಗ್ರಂಥಗಳು,- ಆದರೆ ಇವು ವಿಲುಪ್ತವಾಗಿವೆ ಎಂದು ಹೇಳುತ್ತಾರೆ. ಇವುಗಳ ಭಾಷೆ ಅರ್ಧಮಾಗಧಿ.
  • ಕ್ರಿ.ಶ. ೫ ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು - ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ. ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು.
  • ಬರವಣಿಗೆಯ ಮೂಲಕ ಅವರ ಮೂಲ ತತ್ವಗಳು ಉಳಿದು ಬಂದಿದೆ. ಮುಖ್ಯ ಗ್ರಂಥಗಳು ಧರ್ಮವಿಧಿಗಳ ಆಗಮಗಳು, ಅವು ನಲವತ್ತಾರು ಗ್ರಂಥಗಳಲ್ಲಿವೆ : ಹನ್ನೆರಡು ಅಂಗಗಳು; ಹನ್ನೆರಡು ಉಪಾಂಗ ಆಗಮಗಳು; ಆರು ಛೇದ ಸೂತ್ರಗಳು; ನಾಲ್ಕು ಮೂಲ ಸೂತ್ರಗಳು, ಹತ್ತು ಪ್ರಕಾಮಿಕ (ಪ್ರಾಥಮಿಕ) ಸೂತ್ರಗಳು ಮತ್ತು ಎರಡು ಚೂಲಿಕಾ ಸೂತ್ರಗಳು.
  • ದಿಗಂಬರ ಪಂಥದವರು ಈ ಆಗಮಗಳನ್ನು ಒಪ್ಪುತ್ತಾರಾದರೂ ಮೂಲವು ನಷ್ಟವಾಗಿರುವುದಾಗಿ ಹೇಳುತ್ತಾರೆ. ಅವರು ತಮ್ಮ ಆಧಾರ ಗ್ರಂಥವಾಗಿ ತಮ್ಮ ಮೂಲ ಆಚಾರ್ಯರು ಬರೆದ ಇಪ್ಪತ್ತೈದು ಗ್ರಂಥಗಳನ್ನು ಆಚರಣೆಗೆ ಆಧಾರವೆನ್ನುತ್ತಾರೆ. -ನಾಲ್ಕು ಪ್ರಥಮ ಅನುಯೋಗ, ನಾಲ್ಕು ಚರಣ ಅನುಯೋಗ, ನಾಲ್ಕು ಕರಣ ಅನುಯೋಗ, ಮತ್ತು ಹನ್ನೆರಡು ದ್ರವ್ಯ ಅನುಯೋಗ. ಜೈನರ ಕೈಬರೆಹದ ಗ್ರಂಥಗಳು ಪತಾನ್, ಜೈಸಲಮೇರಿ ನಲ್ಲಿ ದೊಡ್ಡ ಸಂಗ್ರವಿದೆ. (ಇಂ.ವಿಕಿ ಪೀಡಿಯಾ)
  • ಜೈನ ಧರ್ಮಕ್ಕೆ ಎರಡು ಮುಖ ; ತಾತ್ವಿಕ ವಿಚಾರ , ಮತೀಯ ಅಥವಾ ಧಾರ್ಮಿಕ ವಿಚಾರ. ಅಹಿಂಸೆ ಮುಖ್ಯವಾದ ಧಾರ್ಮಿಕ ಆಚಾರ. ಜೀವಂತವಾಗಿರುವ ಎಲ್ಲಾ ಜೀವಿಗಳಲ್ಲಿ ಬಾಂಧವ್ಯ -ಪ್ರೀತಿ ಹೊಂದಿರುವುದು ಅಥವಾ ತೋರಿಸುವುದು.

ತತ್ವ :

Epistemology - The nature of truth
  • ಅನೇಕಾಂತವಾದ :
  • ತತ್ವ : ಸಂಕ್ಷಿಪ್ತ ಪರಿಚಯ
  • ಅನೇಕಾಂತವಾದ : ಅವರ ತತ್ವದಲ್ಲಿ ಬಹಳ ಪ್ರಮುಖವಾದುದು ಆನೇಕಾಂತವಾದ.
ಸತ್ಯದ ಸ್ವರೂಪವು ಅತ್ಯಂತ ಜಟಿಲವಾದುದು. ಸಾಮಾನ್ಯರಿಗೆ (ಮನುಷ್ಯನಿಗೆ) ಸತ್ಯವನ್ನು ಅಥವಾ ಒಂದು ವಸ್ತುವಿನ ಎಲ್ಲಾ ಗುಣಗಳನ್ನೂ ಅರಿಯಲು ಸಾದ್ಯವಿಲ್ಲ.. ಸರ್ವಜ್ಞ ಮಾತ್ರಾ ಅರಿಯಬಲ್ಲ. ಕುರುಡರು ಆನೆಯನ್ನು ತಿಳಿದಂತೆ, ವಸ್ತುವಿನ ಬಗೆಗೆ ವಸ್ತುವಿನ ಸತ್ಯದ ಜ್ಞಾನ ಕುರುಡರ ಆನೆಯ ಜ್ಞಾನದಂತೆ.
ಸತ್ ಎಂದರೆ ಇರುವಿಕೆ - ಒಂದು ವಸ್ತುವಿಗೆ ಶಾಶ್ವತ ಮತ್ತು ಅಶಾಶ್ವತ ಎಂಬ ಎರಡು ಗುಣವಿದೆ. ಉದಾಹರಣೆಗೆ - ಬಂಗಾರ ಶಾಶ್ವತ; ಆಭರಣ ಅಶಾಶ್ವತ.
ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ, ಉತ್ಪತ್ತಿ , ನಾಶ, ಶಾಶ್ವತ, ಎಂಬ ಮೂರು ಗುಣಗಳಿವೆ . ದ್ರವ್ಯ, ಅರ್ಥಾತ್ ವಸ್ತುವು ಪ್ರಕೃತಿಯಲ್ಲಿ ಶಾಶ್ವತ, ಅಥವಾ ಶಾಶ್ವತವಾದ ಪ್ರಕೃತಿಯು ವಸ್ತುವಿಗೆ ದ್ರವ್ಯ ಎನ್ನುವರು .
ಪದಾರ್ಥಗಳು ಬಹು ದೇಶವ್ಯಾಪಿ (( space) . ಅವಯವಗಳುಳ್ಳದ್ದು (ಡೈಮೆನ್‌ಶನ್ಸ) . ಅವು ಅಸ್ತಿಕಾಯಗಳು. ಕಾಲ ಏಕ ದೇಶವ್ಯಾಪಿ; ಅವಯುವ (ಬಹುದೇಶ)ಇಲ್ಲದ್ದು . ವಸ್ತುವಿನ ಇರುಇತರಕೆಗೆ ಗುಣ ಅವಶ್ಯ. ದೇಶ ಕಾಲ ಪರ್ಯಾಯ. ವಸ್ತುವನ್ನು ಏಕ ಮುಖವಾಗಿನೋಡಿದರೆ ಏಕಾಂತವಾದವಾಗುತ್ತದೆ.
ಅಸ್ತಿಕಾಯ : ದ್ರವ್ಯಗಳು ಐದು ಬಗೆ. ಅಸ್ತಿಕಾಯ: ೧.ಜೀವಾಸ್ತಿಕಾಯ; ೨.ಪ್ರದ್ಗುಲಾಸ್ತಿಕಾಯ; ೩.ಆಕಾಶಾಸ್ತಿಕಾಯ; ೪.ಧರ್ಮಾಸ್ತಿಕಾಯ; ೫.ರ್ಧಮಾಸ್ತಿಕಾಯ.
ದ್ರವ್ಯ ಎರಡು ಬಗೆ : ಜೀವ; ಅಜೀವ. ಜೀವ -ಚೇತನ; ಅಜೀವ -ಜಡ.
ಜೀವ ತತ್ವ : ಚೈತನ್ಯ ಜೀವದ ಸಾಮಾನ್ಯ ಲಕ್ಷಣ. ಅದು ಪ್ರತಿಯೊಂದೂ ಅನಂತ ಜ್ಞಾನ ; ಅನಂತ ದರ್ಶನ ;ಅನಂತ ಪದಾರ್ಥ; ಎಂಬ ಮೂರು ಗುಣಭರಿತ. ಅದು ಜ್ಞಾನ ಸ್ವರೂಪಿ. (ಇತರ ಧರ್ಮಗಳಲ್ಲಿ ಆತ್ಮ ಎನ್ನುತ್ತಾರೆ) ಶುಭಾಶುಭ ಕರ್ಮಗಳನ್ನು ಮಾಡುವುದರಿಂದ ಜೀವನ ಮೇಲೆ ಆವರಣ ಉಂಟಾಗುತ್ತದೆ. ಸತ್ಕರ್ಮಗಳ ಆಚರಣೆಯಿಂದ ಆವರಣವು ಹೋಗಿ ಸ್ವಸ್ವರೂಪದ ಸಾಕ್ಷಾತ್ಕಾರವಾಗುತ್ತದೆ.
ಜೀವವೇ ಕರ್ಮಫಲವನ್ನು ಅನುಭವಿಸುವುದಾಗಿದ್ದು ಅದರ ಫಲವಾಗಿ ತನ್ನ ಶರೀರದ ಆಕಾರವನ್ನು ಪಡೆಯುವುದು. (ದೀಪದ ಬೆಳಕು ಕೊಠಡಿಯ ಆಕಾರವನ್ನು ಪಡೆದಂತೆ.)
ಜೀವಿಗಳಲ್ಲಿ ಅನೇಕ ಬಗೆ. : ಸಸ್ಯಗಳು, ಸ್ಥಾವರಜೀವಿ, ಏಕೇಂದ್ರಿಯ -ಸ್ಪರ್ಶಜ್ಞಾನ ಮಾತ್ರ, ಹಾಗೆಯೇ ದ್ವಿ-ಇಂದ್ರಿಯ ಇತ್ಯಾದಿ.
ಪುದ್ಗಲ ತತ್ವ : (ಮ್ಯಾಟರ್) ಭೌತ ವಸ್ತು; -ಎರಡು ವಿಧ ; ಪರಮಾಣು ಮತ್ತು ಸ್ಕಂದ ಅಥವಾ ಸಂಘಾತ; ಪರಮಾಣುಗಳಿಂದ ಸ್ಕಂದ ; ಎಲ್ಲಾ ಪರಮಾಣುಗಳೂ ಒಂದೇ ಬಗೆಯವು. ಅವುಗಳಿಂದ ಪೃಥ್ವಿ, ಅಪ್, ತೇಜ, ವಾಯು, ಇವು ಮೂಲ ವಸ್ತುಗಳು. ಮೊದಲ ಸೃಷ್ಠಿ ಪರಮಾಣುವೇ. ಪರಮಾಣುಗಳು ಒಂದೇ ಬಗೆಯಾದರೂ , ರೂಪ, ರಸ, ಗಂಧ ಸೇರಿಸಿಕೊಂಡು ಬೇರೆ ಬೇರ ವಸ್ತುಗಳಾಗುತ್ತವೆ. ಇವುಗಳಿಂದ ಸ್ಕಂದ -ಗೋಚರಿಸುವ (ವಸ್ತುಗಳು ಆಗುವುವು) ಪ್ರಪಂಚವಾಗುವುದು.
ಆಕಾಶ ತತ್ವ : ಅಸ್ತಿಕಾಯ ದ್ರವ್ಯಗಳಿಗೆ ಅವಕಾಶ ಒದಗಿಸುವುದು - ಆಕಾಶ. ಇದನ್ನು ಅನುಮಾನ ಪ್ರಮಾಣದಿಂದ ತಿಳಿಯಬೇಕು. ಪ್ರತ್ಯಕ್ಷ ಪ್ರಮಾಣದಿಂದ ಸಾದ್ಯವಿಲ್ಲ. ಆಕಾಶದಲ್ಲಿ ಎರಡು ಬಗೆ- ಲೋಕಾಕಾಶ, ಅಲೋಕಾಕಾಶ.

ಲೋಕಾಕಾಶದಲ್ಲಿ ಜೀವ, ಪುದ್ಗಲ, ಧರ್ಮ, ಅಧರ್ಮ ಇರುವುದು. ಇದಕ್ಕಿಂತ ಮೇಲಿರುವುದು ಅಲೋಕಾಕಾಶ. ಧರ್ಮ ಎಂದರೆ- ಜೀವಿಗಳಿಗೂ, ಪುದ್ಗಲ (ಭೌತವಸ್ತು) ಗಳಿಗೂ, ಗತಿ ಶೀಲ- ಚಲನೆಗೆ, ಇರುವಿಕೆಗೆ, ಸಹಕಾರಿಯಾದುದು. ಉದಾಹರೆಣೆಗೆ : ಮೀನಿಗೆ ನೀರು ; ಇದಕ್ಕೆ ವಿರುದ್ಧವಾದುದು ಅಧರ್ಮ- ಎಂದರೆ ಸ್ಥಿತಿ ಶೀಲಕ್ಕೆ ಸಹಕಾರಿ. ಉದಾ: ದಣಿದವನಿಗೆ ಮರದ ನೆರಳಿನಂತೆ.

ಕಾಲ ತತ್ವ : ಇದು ಪ್ರತ್ಯಕ್ಷವಲ್ಲ. ಪರಿವರ್ತನಾಶೀಲ - ಪದಾರ್ಥಗಳಿಗೆ ಕಾರಣವಾಗಿ ಇದನ್ನು ಅಂಗೀಕರಿಸಬೇಕು. ಕಾಲದ ಉಪಕಾರಗಳು, ವರ್ತನೆ, ಪರಿಣಾಮ, ಕ್ರಿಯೆ, ಪರತ್ವ, ಅಪರತ್ವ. ಲೋಕಾಕಾಶದಲ್ಲಿ ಕಾಲು ಅಣುರೂಪಿಯಾಗಿ ಆವರಿಸಿದೆ. ಅವು ಎರಡು ಬಗೆ; ವ್ಯವಹಾರಿಕ ಕಾಲ-ಆದಿ-ಅಂತ್ಯವಿಲ್ಲದ್ದು; ಕಾಲವಿಲ್ಲದೆ ವಸ್ತುವನ್ನು ಕಲ್ಪಿಸಲು ಸಾದ್ಯವಿಲ್ಲ.
ಜ್ಞಾನತತ್ವ : ಜ್ಞಾನದಲ್ಲಿ ಪ್ರತ್ಯಕ್ಷ ಪರೋಕ್ಷ ಜ್ಞಾನ ಎಂದು ಎರಡು ಬಗೆ. ಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳ ಸಹಾಯವಿಲ್ಲದೆ ಪಡೆದ ಜ್ಞಾನ, (ಇದನ್ನು ಬೇರೆಯವರು ಅಪರೋಕ್ಷ ಜ್ಞಾನವೆನ್ನುವರು). ಪರೋಕ್ಷ ಜ್ಞಾನವೆಂದರೆ ಇಂದ್ರಿಯಗಳಮೂಲಕ ಪಡೆದಿದ್ದು ಮತ್ತು ಮನಸ್ಸು ಬುದ್ಧಿಯಿಂದ ಪಡೆದಿದ್ದು. ಪ್ರತ್ಯಕ್ಷ ಜ್ಞಾನವು ಇಂದ್ರಿಯಾತೀತವಾದದ್ದು.
ಅನಂತಧರ್ಮಾತ್ಮಕಂ ವಸ್ತು ಪ್ರತಿಯೊಂದು ವಸ್ತು ಎಲ್ಲಿಯೂ ಇರಬಲ್ಲುದು; ಪ್ರತಿ ವಸ್ತುವಿಗೂ ಇರಬಹುದಾದ ಧರ್ಮಗಳಿಗೆ ಲೆಕ್ಕವಿಲ್ಲ; ಅವು ಅನಂತ. ಅನಂತವಾದ

ಪ್ರಮಾಣ ಮತ್ತು ನಯ :

ಪ್ರಮಾಣ ಮತ್ತು ನಯ :
ಜೈನ ಧರ್ಮವು -ಪ್ರತ್ಯಕ್ಷ , ಅನುಮಾನ, ಆಗಮ ಗಳೆಂಬ ಮೂರುಪ್ರಮಾಣಗಳನ್ನು ಅಂಗೀಕರಿಸುತ್ತದೆ. ವಸ್ತುವಿನ ಯಥಾರ್ಥ ಜ್ಞಾನವನ್ನು ಒದಗಿಸುವುದೇ ಪ್ರಮಾಣ. ವಸ್ತುವಿನ ಒಂದು ಅಂಶದ ಬಗೆಗೆ ತಿಳಿಸುವುದು ನಯ. ಎಂದರೆ ಅದರ ಒಂದು ದೃಷ್ಠಿಕೋನದಿಂದ ಹೇಳುವುದು ನಯ.
ಏಕ ದೇಶ ವಿಶಿಷ್ಠಾರ್ಥೋ ನಯಸ್ಯ ವಿಷಯೋ ಮತಃ.

ಸ್ಯಾದ್ವಾದ

ಸತ್ಯದ ಜಟಿಲ ಸಂಕೀರ್ಣತೆಯ ಬಗೆಗೆ ವಿಚಾರ ಮಾಡುವುದೇ ಅನೇಕಾಂತವಾದ; ಅನೇಕಾಂತವಾದವೇ -ಸ್ಯಾದ್ವಾದ. (ಎಲ್ಲಾ ಬಗೆಯ ಸಂಭಾವ್ಯತೆ ಯನ್ನು ಒಪ್ಪುವುದು)
ಸತ್ಯವು ಹೀಗೆ ಇರಬಹುದು ಎಂಬ ಸಂಭಾವ್ಯತಾ ಸಿದ್ಧಾಂತ. ವಿಶ್ವವನ್ನು ಅನೇಕ ದೃಷ್ಠಿಯಿಂದ ನೋಡಬಹುದು. ಪ್ರತ್ಯೇಕ ನಿರ್ಣಯಕ್ಕೂ ಬರಬಹುದು; ಸತ್ಯದ ಪೂರ್ಣ ಸ್ವರೂಪವನ್ನು ನಿರ್ಣಯಿಸುವುದಿಲ್ಲ. ಏಳು ಹಂತಗಳಿಂದ ಸತ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡಬಹುದು.
  1. ಸ್ಯಾದಸ್ತಿ -ಹೀಗಿರಬಹುದು.
  2. ಸ್ಯಾನ್ನಾಸ್ತಿ - ಹೀಗಿರಲಾರದು.
  3. ಸ್ಯಾದಸ್ತಿಚ ನಾಸ್ತಿಚ -ಬಹುಶಃ ಇದ್ದೀತು, ಇಲ್ಲದೆ ಇದ್ದೀತು.
  4. ಸ್ಯಾದವ್ಯಕ್ತಮ್ - ಅದನ್ನು ವಿವರಿಸಲಾಗದು.
  5. ಸ್ಯಾದ್ ಅಸ್ತಿಚ ಅವ್ಯಕ್ತಂಚ - ಬಹುಶಃ ಇದೆ -ವರ್ಣನಾತೀತವಾಗಿದೆ.
  6. ಸ್ಯಾನ್ನಾಸ್ತಿಚ ಅವ್ಯಕ್ತಂಚ - ಬಹುಶಃ ಇಲ್ಲ, ವರ್ಣನಾತೀತವೂ ಆಗಿದೆ.
  7. ಸ್ಯಾದಸ್ತಿಚ ನಾಸ್ತಿಚ ಅವ್ಯಕ್ತಂಚ.- ಬಹುಶಃ ಇದೆ, / ಬಹುಶಃ ಇಲ್ಲ ; ವರ್ಣನಾತೀತವೂ ಆಗಿದೆ.
ಈ ವಾದ ಜೈನ ಧರ್ಮದ ದೃಷ್ಠಿ ವೈಶಾಲ್ಯವನ್ನೂ ತೋರಿಸುತ್ತದೆ.

ರತ್ನ ತ್ರಯ

ಜೈನ ಶಬ್ದವು ಜಯ, ಜಯಿಸಿದವನು ಎನ್ನುವ ಶಬ್ದದಿಂದ ಬಂದಿದೆ.
ಅದರ ಅರ್ಥ , ಇಂದ್ರಿಯಗಳನ್ನು -ರಾಗ ದ್ವೇಷಗಳನ್ನು ಗೆದ್ದವನು; ಇದನ್ನು ಸಾಧಿಸಲು ರತ್ನ ತ್ರಯಗಳನ್ನು ಪಾಲಿಸಬೇಕು. ಇವು:
  1. ಸಮ್ಯಕ್ ದರ್ಶನ :(ಸಮ್ಯಕ್ ಶ್ರದ್ಧೆ) ಅವರ ಶಾಸ್ತ್ರದಲ್ಲಿ ಪೂರ್ಣ ನಂಬುಗೆ.
  2. ಸಮ್ಯಕ್ ಜ್ಞಾನ : ಜೈನ ತತ್ವಗಳಲ್ಲಿ ಸರಿಯಾದ ಜ್ಞಾನ.
  3. ಸಮ್ಯಕ್ ಚಾರಿತ್ರ್ಯ : ಅವನ್ನು ಅನುಷ್ಠಾನ ಗೊಳಿಸುವುದೇ -ಸಮ್ಯಕ್ ಚಾರಿತ್ರ್ಯ.
ನೀತಿ ನಿಯಮಗಳು : ರತ್ನತ್ರಯ ಸಾಧಿಸಲು ಪಂಚಾಣು ಮಹಾ ವ್ರತಗಳನ್ನು ಪಾಲಿಸಬೇಕು.
  1. ಅಹಿಂಸೆ : ಕಾಯಾ ವಾಚಾ ಮನಸಾ, ಹಿಂಸಿಸದಿರುವುದು.
  2. ಸತ್ಯ : ಸದಾ ಸತ್ಯ ವಾಕ್ ನ್ನು ಅನುಸರಿಸುವುದು,
  3. ಆಸ್ತೇಯ : ಕದಿಯದಿರುವುದು.
  4. ಬ್ರಹ್ಮಚರ್ಯ : ಸಂನ್ಯಾಸಿಗಳಿಗೆ ಮಾತ್ರಾ ; ಪ್ರಾಪಂಚಿಕ ವಸ್ತುಗಳ ಬಗೆಗೆ ವೈರಾಗ್ಯ.
  5. ಅಪರಿಗ್ರಹ : ಪ್ರಾಪಂಚಿಕ ವಸ್ತುಗಳ ಬಗೆಗೆ ವೈರಾಗ್ಯ. (ಇದು ಸಂನ್ಯಾಸಿಗಳಿಗೆ ಮಾತ್ರಾ; ಸಂಸಾರಿಗಳು ಪರಿಗ್ರಹಿಸಬಹುದು.)
೪.೫. ಗೃಹಸ್ಥರಿಗೆ -ಏಕ ಪತ್ನಿತ್ವ, ಮತ್ತು ಸಂತೋಷ.

ಕರ್ಮ ಸಿದ್ಧಾಂತ

ಕರ್ಮ ಸಿದ್ಧಾಂತ

ಕರ್ಮವು ಭೌತ ವಸ್ತು, ಅದು ಜೀವವನ್ನು ಆವರಿಸಿ, ಜೀವವನ್ನು ಜನ್ಮಾಂತರ ಚಕ್ರ ಅಥವಾ ಭವಾವಳಿಯಲ್ಲಿ ಮಾನವನನ್ನು ನೂಕುತ್ತದೆ. ಜೀವನು ಬದ್ಧ ಪುರುಷನಾಗುತ್ತಾನೆ.
ಈ ಕರ್ಮದಲ್ಲಿ ಮುಖ್ಯವಾಗಿ ಎಂಟು ಬಗೆ (ಒಟ್ಟು ೧೪೮ ಬೇಧಗಳಿವೆ.). ೧.ಜ್ಞಾನಾವರಣೀಯ : ೨.ದರ್ಶನಾವರಣೀಯ, ೩.ಮೋಹನೀಯ. ೪. ವೇದನೀಯ, ೫. ಆಯುಷ್ಯ ; ೬) ನಾಮ , ೭. ಗೋತ್ರ, ಅಂತರಾಯ.

ಕರ್ಮನಾಶವು ಸಂವರ (ತಡೆಯುವುದು), ನಿರ್ಜರ(ನಾಶಮಾಡುವುದು), ಈ ಅನೇಕ ಹಂತಗಳು ನಡೆದು, ಮೋಕ್ಷವನ್ನು ಪಡೆದು, - ಅನಂತ ಜ್ಞಾನ ; ಅನಂತ ವೀರ್ಯ, ಅನಂತ ಶ್ರದ್ಧಾ, ಅನಂತ ಶಾಂತಿಗಳೆಂಬ ಅನಂತ ಚತುಷ್ಟಯಗಳನ್ನು ಪಡೆದು. ಲೋಕ ಕಲ್ಯಾಣಕ್ಕೆ ಪ್ರಯತ್ನಿ ಸುತ್ತಿರುತ್ತಾರೆ.

ಮೋಕ್ಷವನ್ನು ಹಂತವಾಗಿ ಹಂತವಾಗಿ ಪಡೆಯುತ್ತಾರೆ. ಹದಿನಾಲ್ಕು ಹಂತಗಳಲ್ಲಿ ಕೊನೆಯದು ಆಯೋಗ. ಮೊದಲು ತೀರ್ಥಂಕರ-ಅರ್ಹತ,- ಅರ್ಹಂತ-ಇತ್ಯಾದಿ. ಇವರು ಜೀವನ್ಮುಕ್ತರು. ಅವರು ಅಂತಿಮ ಅವಸ್ಥೆಯಲ್ಲಿ ಲೋಕಾಕಾಶ, ಅಲೋಕಾಕಾಶದ ನಡುವೆ. ಸಿದ್ಧಶಿಲಾ ಎಂಬ ಸ್ಥಾನವನ್ನು ಪಡೆಯುತ್ತಾರೆ. ಆ ಮುಕ್ತರೆಲ್ಲಾ ಅನಂತ ಚತುಷ್ಟಯ ಸಂಪನ್ನರಾಗಿರುತ್ತಾರೆ.

ಸಮೀಕ್ಷೆ

ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ. ಆದರೆ ಜೈನರು ಆತ್ಮದ ಅಸ್ತಿತ್ವವನ್ನು ಒಪ್ಪುತ್ತಾರೆ ; ಮತ್ತು ತೀರ್ಥಂಕರನನ್ನೇ ಭಗವಂತನ ಸ್ಥಾನಕ್ಕೆ ಏರಿಸುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ಮಾನವನು ಅನುಭವಿಸುತ್ತಾನೆ ಎಂಬ ಸಿದ್ಧಾಂತ ಕ್ಕೆ ಸಹಮತವಿದೆ. ಆದರೆ ಫಲ ಕೊಡುವ ವಿಧಾತನಿಲ್ಲ ಎನ್ನುತ್ತದೆ ಅವರ ಸಿದ್ಧಾಂತ ; ಜಗತ್ತು ಜೀವಗಳು ನಿತ್ಯವೆಂದು ಹೇಳುತ್ತದೆ; ಅತೀಂದ್ರಿಯ ಅನುಭವ ಹಾಗೂ ಇಂದ್ರಿಯಾನುಭವಕ್ಕೂ ಸಮನ್ವಯ ಮತ್ತು ಪ್ರಾಮುಖ್ಯತೆ ಕೊಡುತ್ತಾರೆ. (ಪ್ಲೂರಲಿಸ್ಟಿಕ್ ರಿಯಲಿಸಮ್).
ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡುಗೆಯಾಗಿದೆ.
ಜೈನ ಧರ್ಮದ ಆಚಾರಗಳಲ್ಲಿ ಅಹಿಂಸೆಗೆ ಅತಿ ಪ್ರಾಧಾನ್ಯತೆ ಕಠೋರ ವ್ರತ ನಿಯಮಗಳು, ಜನಪ್ರಿಯತೆಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣ.
ಜೈನ ಧರ್ಮದಲ್ಲಿ ಶ್ವೇತಾಂಬರ -ದಿಗಂಬರ ಎಂಬ ಮುಖ್ಯ ಎರಡು ಪಂಥಗಳಿದ್ದರೂ, ಬೇಧವು ಆಚಾರದಲ್ಲಿ ಮಾತ್ರಾ ; ದಾರ್ಶನಿಕವಾಗಿ ತತ್ವ ವಿಚಾರದಲ್ಲಿ ಒಂದೇ. ಆದ್ದರಿಂದಜೈನಂಗೆ ವಿರೋಧಮಿಲ್ಲ,ಏಕೆಂದರೆ ದೃಷ್ಠಿಕೋನದಿಂದ ತತ್ವ ವಿಚಾರದಲ್ಲಿ ಎಲ್ಲಾ ಸಾಧ್ಯತೆಗಳುಂಟು .
[[ಓಂ]ಸತ್ಸತ್.

[೧] [೨]

ಇವನ್ನೂ ನೋಡಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಬಾಹ್ಯ ಸಂಪರ್ಕಗಳು

ಉಲ್ಲೇಖ

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]