ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಜಗತ್ತು
ಜಗತ್ತಿನ ಅಸ್ತಿತ್ವ -ಭಾರತೀಯ ದರ್ಶನಗಳಲ್ಲಿ
ಜಗತ್ತು-ಅಸ್ತಿತ್ವ-ಅದು ಸತ್ಯವೇ-ಮಿಥ್ಯವೇ?
ದರ್ಶನಗಳಲ್ಲಿ ಪ್ರಧಾನವಾಗಿ ಚರ್ಚಿಸಲಾಗಿರುವ ತತ್ವಗಳಲ್ಲಿ ‘ಜಗತ್ತು‘ ಒಂದು . ಜಗತ್ತು -ಸತ್ಯವೇ- ಮಿಥ್ಯವೇ ? ಜೀವ , ಜಗತ್ತು .ಈಶ್ವರ ಇವುಗಳ ಸಂಬಂಧವೇನೆಂಬುದು -ಭಾರತೀಯ ದರ್ಶನಗಳಲ್ಲಿ -ಮುಖ್ಯ ಚರ್ಚೆ.

ದರ್ಶನಗಳಲ್ಲಿ ಜಗತ್ತು[ಬದಲಾಯಿಸಿ]

ಚಾರ್ವಾಕ ದರ್ಶನ
ಚಾರ್ವಾಕ ದರ್ಶನದ ಪ್ರಕಾರ ಜಗತ್ತು ಸತ್ಯ ಪೃಥಿವೀ ,ಜಲ, ತೇಜಸ್ಸು ಮತ್ತು ವಾಯು ಇವು ನಾಲ್ಕು ಭೂತಗಳ (೪ ಮೂಲ ತತ್ವಗಳು) ಮಿಶ್ರಣ ಸಮಷ್ಟಿ (ಒಟ್ಟಾದ ದೊಡ್ಡ ರೂಪವೇ ಸಮಷ್ಟಿ -ವ್ಯಷ್ಟಿ ಚಿಕ್ಕ ರೂಪ) ವೇ ಜಗತ್ತು. ಐದನೆಯ ತತ್ವವೆಂದು ಹೇಳುವ ಆಕಾಶವು ಚರ್ವಾಕರ ಪ್ರಕಾರ ತತ್ವವೇ ಅಲ್ಲ . ಜಗತ್ತಿನ ಉತ್ಪತ್ತಿ ರಹಸ್ಯ ತಿಳಿಯಲು ಅಸಾಧ್ಯ . ಕಾರ್ಯ-ಕಾರಣವಾದ ವ್ಯರ್ಥ.
ಜೈನರ ಜಗತ್ತು
ಜೈನರ ಜಗತ್ತು ಮೂಲ ಅಣುರೂಪೀ ವಸ್ತುಗಳು ಎಂದರೆ ಪುದ್ಗಲದಿಂದಾಗಿದೆ (ಜೈನ ಧರ್ಮ). ಅಣುಗಳ ಸಂಘಾತದಿಂದ ನಮ್ಮ ಶರೀರ , ಮನಸ್ಸು , ಜಗತ್ತಿನ ಎಲ್ಲಾವಸ್ತುಗಳೂ ಆಗಿವೆ. ಅವರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ಅನೇಕಾಂತ ವಾದ , ಸ್ಯಾದ್ವಾದ ದ ಪ್ರಕಾರ ಯಾವ ವಾದವೂ ಕೊನೆಯಲ್ಲ- ಎಲ್ಲಾ ವಾದದಲ್ಲೂ ಸತ್ಯವಿರುವ ಸಾಧ್ಯತೆ ಇದೆ.
ಬೌದ್ಧ ದರ್ಶನ ಮತ್ತು ಜಗತ್ತು
ಬೌದ್ಧರು ನಾಲ್ಕು ವಿಧವಾದ ವಾದವನ್ನಿಟ್ಟಿದ್ದಾರೆ.--ಜಗತ್ತಿನ ವಿಚಾರದಲ್ಲಿ ಅವರಲ್ಲಿ ಅಭಿಪ್ರಾಯ ಬೇಧವಿದೆ.
  • ೧. ಶೂನ್ಯವಾದಿಗಳು ಜಗತ್ತಿಗೆ ಅಸ್ತಿತ್ವವೇ ಇಲ್ಲ ಎನ್ನುತ್ತಾರೆ .
  • ೨. ಯೋಗಾಚಾರದವರು ವಿಜ್ಞಾನವೊಂದೇ ಸತ್ಯ ಉಳಿದುದೆಲ್ಲಾ ಅಸತ್ಯವೆನ್ನುತ್ತಾರೆ .
  • ೩. ಸೌತ್ರಾಂತಿಕರು ಮತ್ತು ೪. (ಸ್ವಲ್ಪ ಅಭಿಪ್ರಾಯ ಬೇಧದಲ್ಲಿ) ವೈಭಾಷಿಕರು ಜಗತ್ತಿನ ಸತ್ಯತೆಯನ್ನೊಪ್ಪುತ್ತಾರೆ. ಅದು ಅಣು ಸಂಘಾತವೆನ್ನುತ್ತಾರೆ . ಇವರು ಸಂಘಾತವಾದಿಗಳು.
ಸಾಂಖ್ಯ ಮತ್ತು ಯೋಗ ದರ್ಶನಗಳು
ಸಾಂಖ್ಯ ಮತ್ತು ಯೋಗ ದರ್ಶನಗಳು ಸತ್ವ ರಜಸ್ತಮೋ ಗುಣಗಳಿಂದ ಕೂಡಿದ ಪ್ರಕೃತಿಯೇ ಜಗತ್ತಿಗೆ ಕಾರಣೀ ಗುಣಗಳು ಸಮಾವಸ್ಥೆಯಲ್ಲಿ ಇದ್ದರೆ ಏನೂ ಇರದು . ಅವು ಏರುಪೇರಾದಾಗ ಜಗತ್ತು ತೋರಿಕೊಳ್ಳುವುದು . ಪುರುಷನ (ಚೈತನ್ಯ) ಸಾನ್ನಿಧ್ಯದಿಂದ ಪ್ರಕೃತಿಯು ಪರಿಣಾಮಗೊಳ್ಳುವುದೆನ್ನುತ್ತಾರೆ.
ಯೋಗ ದರ್ಶನವು ಜಗತ್ತಿಗೆ ಈಶ್ವರನು ನಿಮಿತ್ತ ಕಾರಣವೆನ್ನುತ್ತದೆ ಆದ್ದರಿಂದ ಇದನ್ನು ಸೇಶ್ವರ ಸಾಂಖ್ಯವೆನ್ನುತ್ತಾರೆ .
ನ್ಯಾಯ ವೈಶೇಷಿಕ
ನ್ಯಾಯ ವೈಶೇಷಿಕ ದರ್ಶನಗಳು ಜಗತ್ತಿಗೆ ಅಣುಗಳು ಕಾರಣವೆನ್ನುತ್ತವೆ . ದ್ವಣುಕ, ತ್ರ್ಯಣುಕಗಳಾಗಿ ಜಗತ್ತು ಉಂಟಾಗಿದೆ ಎನ್ನುತ್ತಾರೆ. ಅಣುಗಳ ಚಲನೆ ಜೋಡಣೆಗೆ “ಅದೃಷ್ಟವು“ ಪ್ರೇರಕವೆಂದು ಪ್ರಾಚೀನರು ಹೇಳಿದರೆ, ನಚಿತರದವರು ಈಶ್ವರನು ನಿಮಿತ್ತ ಕಾರಣವೆಂದೂ ,ಪರಮಾಣುಗಳು ಉಪಾದಾನ ಕಾರಣವೆನ್ನುತ್ತಾರೆ .
ಪೂರ್ವಮೀಮಾಂಸ
ಪೂರ್ವ ಮೀಮಾಂಸವು ಜಗತ್ತು ಅನಾದಿ ಎನ್ನುತ್ತದೆ. ಸೃಷ್ಟಿ ಸ್ಥತಿ ಲಯಗಳನ್ನು ಒಪ್ಪುವುದಿಲ್ಲ , ಕರ್ಮಗಳು ಫಲಕೊಡಲು ಪ್ರಾರಂಭವಾಗುವಾಗ ಅಣು ಸಂಯೋಗದಿಂದ ಜೀವಿಗಳು ಹುಟ್ಟುತ್ತವೆ, ಕರ್ಮಫಲ ಸಮಾಪ್ತಿಯೊಂದಿಗೆ ನಾಶವೂ ಆಗುತ್ತವೆ . ಜಗತ್ತು ಸತ್ಯ . ಹಾಗೆಯೇ ಅತೀಂದ್ರಿಯ ವಾದ , ಸ್ವರ್ಗ, ನರಕ , ಅದೃಷ್ಟ , -ವೇದಗಳು ಇವೆಲ್ಲಾ ಸತ್ಯ ಎನ್ನುತ್ತದೆ.
ಅದ್ವೈತ ದರ್ಶನ
ಅದ್ವೈತ ದರ್ಶನದ ಪ್ರಕಾರ ಜಗತ್ತು ಮಿಥ್ಯ - ಪರಿವರ್ತನಶೀಲ ಕೇವಲ ತೋರಿಕೆ ; ನಿರ್ಗುಣಬ್ರಹ್ಮ ನಿಂದ -ಮಾಯೆಯಿಂದ/ ಅವಿದ್ಯೆಯಿಂದ ಕೂಡಿದ ಈಶ್ವರನೇ ಜಗತ್ತಿಗೆ ನಿಮಿತ್ತ ಕಾರಣ ; ಆದರೆ ಜಗತ್ತು ವ್ಯವಹಾರಿಕವಾಗಿ ಸತ್ಯ . ಬ್ರಹ್ಮವು -ಜಗತ್ತಲ್ಲ; ಜಗತ್ತು ಬ್ರಹ್ಮವೇ .
ವಿಶಿಷ್ಟಾದ್ವೈತ
ವಿಶಿಷ್ಟಾದ್ವೈತದಲ್ಲಿ ಜಗತ್ತು ಸತ್ಯ - ಪರಮಾತ್ಮನ ಲೀಲೆ . ಎಲ್ಲದಕ್ಕೂ ಅವನೇ ನಿಮಿತ್ತ ಮತ್ತು ಉಪಾದಾನ ಕಾರಣ. ಜಗತ್ತು ಚೇತನ ಮತ್ತು ಅಚೇತನದಿಂದಾಗಿದೆ. ಆದರೆ ಪಂಚ ಭೂತಗಳು ಪಂಚೀಕರಣ ರೀತಿಯಲ್ಲಿ ಸೇರಿ ಜಗತ್ತಾಗಿದೆ. ಅದರಲ್ಲಿ ಪೂರ್ಣವಾಗಿ ಎಲ್ಲೆಲ್ಲೂ ಈಶ್ವರ ವ್ಯಾಪಿಸಿದ್ದಾನೆ.
ದ್ವೈತ

ಮಧ್ವಮತದ ಪ್ರಕಾರ ,ತ್ರಿಗುಣಗಳ ಪರಿಣಾಮವೇ ಜಗತ್ತು . ಪ್ರಕೃತಿಯು ಉಪಾದಾನ ಕಾರಣ. ಎಲ್ಲವೂ ಈಶ್ವರನ ಅಧೀನ . ಈಶ್ವರನು ನಿಮಿತ್ತ ಕಾರಣ . ಈ ಜಗತ್ತು ಸತ್ಯ ಹಾಗೂ ನಿತ್ಯ.

ನಿಂಬಾರ್ಕ
ನಿಂಬಾರ್ಕರು ಮಧ್ವ ಮತವನ್ನು ಒಪ್ಪಿದರೂ , ಈಶ್ವರನು ಜಗತ್ತಿಗೆ ನಿಮಿತ್ತ ಹಾಗೂ ಉಪಾದಾನ ಕಾರಣ ಎನ್ನುತ್ತಾರೆ .ಈಶ್ವರನಿಗೂ ಜಗತ್ತಿಗೂ ಬೇಧಾಬೇಧವಿದೆ ; ಸೂರ್ಯ ಮತ್ತು ರಶ್ಮಿಯಂತೆ ಎನ್ನುವುದು ಅವರ ಅಭಿಪ್ರಾಯ ಸಿದ್ಧಾಂತ.
ವಲ್ಲಭಾಚಾರ್ಯರು
ವಲ್ಲಭರು ಜಗತ್ತನ್ನು ಪರಬ್ರಹ್ಮನ ಸೃಷ್ಟಿ ಎನ್ನುತ್ತಾರೆ. ಜಗತ್ತು ಸತ್ಯ ಹಾಗೂ ಈಶ್ವರನಿಂದ ಬೇರೆ ಅಲ್ಲ. ಈಶ್ವರನು ಲೀಲಾರ್ಥವಾಗಿ ಜಗತ್ತನ್ನು ಸೃಷ್ಟಿಸಿದ್ದಾನೆ.. ಜಗತ್ತು ಬ್ರಹ್ಮನ ಸತ್ ಸ್ವರೂಪ , ಚಿತ್ ಆನಂದ ಸ್ವರೂಪಗಳು ಅದರಲ್ಲಿ ಸುಪ್ತವಾಗಿವೆ. ಆದರೆ ಅವನೇ ಜಗತ್ತಾದರೂ ,ಅವನಲ್ಲಿ ಬದಲಾವಣೆ ಇಲ್ಲ. ಅದು ಅವಿಕೃತ ಪರಿಣಾಮ. ಅನು ಜಗತ್ತಿಗೆ ನಿಮಿತ್ತ ಹಾಗೂ ಉಪಾದಾನ ಕಾರಣನಾಗಿದ್ದಾನೆ .
ಚೈತನ್ಯರು
ಚೈತನ್ಯರ ಅಚಿಂತ್ಯ ಬೇಧಾಬೇಧದ ಪ್ರಕಾರ -ಜಗತ್ತು ಸತ್ಯ; ಬ್ರಹ್ಮನು ಮಾಯಾಶಕ್ತಿಯ ಸಹಾಯದಿಂದ ಜಗತ್ತನ್ನು ಸೃಷ್ಟಿಸುತ್ತಾನೆ . ಅದರಲ್ಲಿ ಗುಣ, ಮಾಯೆ ಬ್ರಹ್ಮನ ಅಂಗ .ಜೀವ- ಮಾಯೆ ಜೀವರುಗಳಿಗೆ ಸ್ವ ಸ್ವರೂಪ ವಿಸ್ಮೃತಿಯನ್ಮ್ನಂಟುಮಾಡುತ್ತವೆ.
ಶೈವ ದರ್ಶನ
ಶೈವ ದರ್ಶನದಲ್ಲಿ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ , ಶಿವನು ಕೇವಲ ನಿಮಿತ್ತ ಕಾರಣ. ಜಗತ್ತು ಶಿವನ ಮಾಯೆ ಆಥವಾ ಶಿವನ ಶಕ್ತಿ ಕಾರಣವಾಗಿದೆ.
ಕಾಶ್ಮೀರ ಶೈವರಲ್ಲಿ , ಶಿವನ ಇಚ್ಛಾಶಕ್ತಿಯೇ ಜಗತ್ತಿಗೆ ಕಾರಣ .ಜಗತ್ತು (ಪ್ರಕೃತಿ ) ಶಿವನ ದೇಹವಿದ್ದಂತೆ. ಪ್ರತಿಯೊಂದು ವಸ್ತುವೂ ಶಿವನ ಸಚ್ಚಾ ರೂಪ -ಎಂದರೆ ಶವನ ಮತ್ತೊಂದು ರೂಪ. ಶಿವ ಮತ್ತು ಜಗತ್ತು ಬೇರೆಯಲ್ಲ - ಜಗತ್ತು ತೋರಿಕೆ ಮಾತ್ರಾ . ಜಗತ್ತಿಗೆ ಮಾಯೆ ಅಥವಾ ಶಿವನ ಶಕ್ತಿ ಉಪಾದಾನ ಕಾರಣವಾಗಿದೆ. ಜಗತ್ತು ಜೀವನಿಗೆ ಬಂಧನಕಾರಿಯಾದುದರಿಂದ ಅದನ್ನು “ಪಾಶವೆಂದು ಕರೆಲಾಗಿದೆ.
ಪಾಶುಪತ ಶೈವರಲ್ಲಿ ಕರ್ಮನಿರಪೇಕ್ಷನಾದ ಶಿವನೇ ಸೃಷ್ಟಿಗೆ ಕಾರಣನಾದರೆ , ಪ್ರತ್ಯಭಿಜ್ಞಾನ ದರ್ಶನ (ಕಾಶ್ಮೀರ ಶೈವ) ದಲ್ಲಿ ಅವನ ಇಚ್ಛಾ ಶಕ್ತಿ ಸೃಷ್ಟಿಗೆ ಕಾರಣ.

[೧] [೨]

ಉಪಸಂಹಾರ[ಬದಲಾಯಿಸಿ]

ಭಾರತದಲ್ಲಿ ಇಷ್ಟು ಬಗೆಯ ವಿಚಾರ ಬೇಧವಿದ್ದರೂ , ಅನೇಕರು ಜ್ಞಾನಿಗಳೆಂದು ತಮ್ಮ ದರ್ಶನಗಳನ್ನು ಪ್ರತಿಪಾದಿಸಿದರೂ ಹಿಂಸಾತ್ಮಕ ಪ್ರತಿಭಟನೆಗಳಿಲ್ಲದೆ ಈ ಸಾವಿರಾರು ವರ್ಷದಿಂದ ಸಹಬಾಳ್ವೆ ನಡೆಸಿದ್ದಾರೆ. ಪ್ರತಿಯೊಬ್ಬ ದಾರ್ಶನಿಕರೂ ತಾವು ಸತ್ಯವನ್ನು ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ .ಮಧ್ವರು ತಾವು ಹನುಮನ ಅವತಾರವೆಂದು ಹೇಳಿಕೊಂಡರೆ , ಚೈತನ್ಯರು ತಾವು ಶ್ರೀಕೃಷ್ಣನ ಅವತಾರವೆಂದು ಹೇಳಿಕೊಂಡಿದ್ದಾರೆ . ಆದರೆ ಸತ್ಯವೇನೆಂಬುದು ನಿಗೂಢವಾಗಿಯೇ ಇದೆ.

ಆಧಾರ[ಬದಲಾಯಿಸಿ]

೧. ವಿಕಿಪೀಡಿಯಾ ತತ್ವ ಶಾಸ್ತ್ರದ ಫೈಲುಗಳು ೨. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಗೀತೆ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು-- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ

ಉಲ್ಲೇಖ[ಬದಲಾಯಿಸಿ]

  1. ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್