ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ, ಬಂಟ್ವಾಳತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ
ದೇವಸ್ಥಾನದ ಹಿಂಬದಿಯ ನೋಟ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದ ಆಡಳಿತಕ್ಕೊಳಪಟ್ಟಿದೆ.ಸೀಮೆಯ ಮುಖ್ಯಸ್ಥರು ವಿಟ್ಲಅರಸರು.ಹಲವು ಶತಮಾನಗಳ ಇತಿಹಾಸವುಳ್ಳ ಡೊಂಬಹೆಗಡೆ ಅರಸು ಮನೆತನದವರು ವಿಟ್ಲಅರಸರು.( ಡೊಂಬಹೆಗಡೆ ಎಂಬುದು ವಿಟ್ಲಅರಸರು ಪಡೆಯುತ್ತಿದ್ದ ಬಿರುದು.ಈ ಅರಸು ವರ್ಗದವರಿಗೆ ಬಲ್ಲಾಳ ಎಂಬುದು ಉಪನಾಮ.) ಸೀಮೆಯ ಅರಸರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು.ವಿಟ್ಲಜಾತ್ರೆ ಮುಖ್ಯ ಉತ್ಸವ.ವಿಟ್ಲವು ಇಷ್ಠಕಾಪುರ ಎಂಬ ಹೆಸರಿನಿಂದಲೂ ಪ್ರಸಿಧ್ಧವಾಗಿತ್ತು.

ಸ್ಥಳೈತಿಹ್ಯ[ಬದಲಾಯಿಸಿ]

ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು.ಭೀಮ ಅವನನ್ನು ಕೊಂದುದು ಅಲ್ಲಿಯೇ.ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು.(ಕಳಂಜಿಮಲೆ ಹಾಗೂ ನೆತ್ತರುಕೆರೆ ವಿಟ್ಲದ ಆಸುಪಾಸಿನ ಸ್ಥಳಗಳು.)

ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ ಪಾಂಡವರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ಇಚ್ಛಿಸಿ,ಕಾಶಿಯಿಂದ ಲಿಂಗಗಳನ್ನು ತರಲು,ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಳುಹಿಸಿದರು.ಭೀಮನು ಲಿಂಗಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ ಲಿಂಗವೊಂದನ್ನು ಪ್ರತಿಷ್ಟಿಸಿ, ಪೂಜೆ ಮಾಡಿದರಂತೆ.(ಇನ್ನೊಂದು ಪಾಠಾಂತರದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಹಿಂದೆಯೇ ಹನುಮಂತನೂ ಹೋದನಂತೆ. ವೇಗಶಾಲಿಯಾದ ಹನುಮಂತನು ಮೊದಲಿಗೆ ತಂದ ಲಿಂಗವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ.) ಭೀಮನು ತಾನು ತಂದ ಲಿಂಗಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ ಲಿಂಗವನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಿಸಿದನಂತೆ.ನೈವೇದ್ಯಕ್ಕೆ ಬೇರೇನೂ ಇಲ್ಲದಿದ್ದುದರಿಂದ, ಅದಗಲೇ ನೈವೇದ್ಯ ಮಾಡಲಾಗಿದ್ದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ನೈವೇದ್ಯ ಮಾಡಿದನಂತೆ.ಆದುದರಿಂದ ವಿಟ್ಲದ ದೇವರಿಗೆ ತಂಗಳನ್ನ ನೈವೇದ್ಯವೆಂದು ಹೇಳುವುದಿದೆ. (ಈಗಲೂ ಬೇಯಿಸಿ ತಂದಿರಿಸಿದ ಅನ್ನಕ್ಕೆ ನೀರು ಚಿಮುಕಿಸಿ ದೀಪದ ಬೆಂಕಿಗಾದರೂ ತೋರಿಸಿ ನೈವೇದ್ಯ ಮಾಡುವುದೆಂದು ಹೇಳಲಾಗುತ್ತದೆ.) ಭೀಮನು ಕಿತ್ತೆಸೆದ ಲಿಂಗವನ್ನು ದೇವಸ್ಥಾನದ ಉತ್ತರ ಭಾಗದಲ್ಲಿರುವ ಪುಷ್ಕರಣಿಯ ನಡುವಿನ ಕಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪಂಚಲಿಂಗೇಶ್ವರ[ಬದಲಾಯಿಸಿ]

ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. ( ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ,ಅಘೋರ, ತತ್ಪುರುಷ, ಈಶಾನ)

ಮೂಲ ಪಂಚಲಿಂಗಗಳು
ಶ್ರೀ ಪಂಚಲಿಂಗೇಶ್ವರ ದೇವರು

ದೇವಸ್ಥಾನದ ಇತಿಹಾಸ[ಬದಲಾಯಿಸಿ]

ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವೆಂದು ಸಂಶೋಧಕರು ನಿರ್ಧರಿಸಿದ್ದಾರೆ.

ವಿಟ್ಲ ದೇವಸ್ಥಾನದ ಬಗ್ಗೆ ಸಿಗುವ ಮೊದಲ ಉಲ್ಲೇಖ ಕಾರ್ಕಳ ತಾಲೂಕಿನ ಹಚವೆಟ್ಟು ಶಿಲಾಶಾಸನದಲ್ಲಿದೆ. (ಸುಮಾರು ಕ್ರಿ.ಶ.೧೪೦೫ರ ಶಾಸನ.) ವಿಟ್ಲ ಡೊಂಬಹೆಗಡೆ ಮನೆತನದ ಉಲ್ಲೇಖವು ಕ್ರಿ.ಶ. ೧೨೫೭ರ ವಗೆನಾಡು ಶಾಸನದಲ್ಲಿದೆ.[ಆಧಾರ- ಡಾ.ಪುಂಡಿಕಾಯಿ ಗಣಪಯ್ಯ ಭಟ್ ರವರ ’ವಗೆನಾಡು ದೇವಾಲಯದ ಒಂದನೆಯ ವೀರಪಾಂಡ್ಯನ ಶಿಲಾಶಾಸನ’ (ಲೇಖನ) ಸ್ಕಂದ ವೈಭವ (ಸಂ.ಪಾದೇಕಲ್ಲು ವಿಷ್ಣು ಭಟ್ಟ) ೧೯೯೩.]

ಕ್ರಿ.ಶ. ೧೪೩೬, ೧೭೨೭, ೧೮೯೪ ರಲ್ಲಿ ಜೀರ್ಣೋಧ್ಧಾರವಾದ ದಾಖಲೆಗಳು ದೇಗುಲದಲ್ಲಿರುವ ಶಿಲಾಶಾಸನಗಳಲ್ಲಿವೆ. ೧೮೯೪ ರಲ್ಲಿ ಅರಮನೆಯ ಅರಸಿ ಸುಭದ್ರಮ್ಮ ಯಾನೆ ದೊಡ್ಡಮ್ಮನವರಾಗಿದ್ದಿರಬೇಕು. ಅವರ ನಂತರ ರವಿವರ್ಮ ನರಸಿಂಹ ರಾಜರು, ಆನಂತರ ಅವರ ಪುತ್ರ ರವಿವರ್ಮ ಕೃಷ್ಣರಾಜರು, ತದನಂತರ ಅವರ ತಮ್ಮ ರಾಮವರ್ಮ ರಾಜರು ಅರಸರಾದರು. ಈಗ ಅರಮನೆಯ ಹಿರಿತನದ ನೆಲೆಯಲ್ಲಿ, ಶ್ರೀ ಜನಾರ್ದನವರ್ಮರು ಅರಸರಾಗಿರುತ್ತಾರೆ.

ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ (೨೦೧೩)[ಬದಲಾಯಿಸಿ]

ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ ದೇವಾಲಯಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ,ಅಷ್ಟಮಂಗಲಪ್ರಶ್ನೆಯನ್ನಿರಿಸಿ,ದೋಷಗಳಿದ್ದರೆ ಪರಿಹರಿಸಿ,ನಂತರ ಜೀರ್ಣೋಧ್ಧಾರಕ್ಕೆ ಆರಂಭಿಸುವುದು ವಾಡಿಕೆ.ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು.ಹೊಸದಾಗಿ ಪುನರಾರಂಭಿಸುವ ದೇವಸ್ಥಾನವಾಸ್ತುಶಿಲ್ಪಿಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. ದೇವಸ್ಥಾನ ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು.ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-ವಿಟ್ಲ ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-ವಿಟ್ಲ, ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು.

ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, ಕರ್ನಾಟಕ ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚಲಿಂಗಗಳನ್ನು ಸಂಕೋಚಿಸಿ, ಏಕಲಿಂಗವನ್ನು ಹೊಸತಾಗಿ ನಿರ್ಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಗರ್ಭಗುಡಿಯ ಮುಗುಳಿಗೆ ಬಿಗಿದಹಗ್ಗವನ್ನು ಬಸವನ ಕೊಂಬಿಗೆ ಕಟ್ಟಿ ಮುಗುಳಿಯನ್ನು ತೆಗೆಯಲಾಯಿತು. ತಂತ್ರಿಯವರು ಗರ್ಭಗುಡಿಯ ತಾಮ್ರದ ತಗಡನ್ನು ತೆಗೆಯುವಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದ ಕಲ್ಲಿನಕೆತ್ತನೆಯನ್ನು ಕಾರ್ಕಳದ ಶಿಲಾಶಿಲ್ಪಿ ವಿಶ್ವನಾಥ ಅವರ ಬಳಗ ಮಾಡಿದೆ. ದಾರು ಶಿಲ್ಪವನ್ನು ತ್ರಿಶೂರ‍್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರುಶಿಲ್ಪದ ಜೋಡಣೆ ಸುಂದರವಾಗಿದೆ. ಕಬ್ಬಿಣದ ಮೊಳೆಗಳನ್ನಿಲ್ಲಿ ಉಪಯೋಗಿಸಿಲ್ಲ. ಗರ್ಭಗುಡಿಯೊಳಗೆ ವಿದ್ಯುತ್ ಸಂಪರ್ಕವನ್ನು ಮಾಡಲಿಲ್ಲ. ದೀಪಗಳ ಬೆಳಕೇ ಆಧಾರ. ಗರ್ಭಗುಡಿಯ ಒಳಗಿನ ಎರಡು ಕೆಂಪುಕಲ್ಲಿನ ಗೋಡೆಗಳಿಗೆ ಸಿಮೆಂಟ್ ಬಳಸಲಿಲ್ಲ. ಪ್ರಾಚೀನಕಾಲದಲ್ಲಿ ಬಳಕೆ ಮಾಡುತ್ತಿದ್ದ ಬೆಲ್ಲ ಕುಮ್ಮಾಯಿಯ ಜೊತೆಗೆ ಎರ್ಪೆ ಸೊಪ್ಪು, ಆಲದ ಕುರ್ಮದ ತೊಗಟೆಗಳಿಂದ ತೆಗೆದ ರಸವನ್ನು ಮಿಶ್ರಮಾಡಿ ಇಪ್ಪತ್ತು ದಿನ ನಾದಿಸಿ ತಯಾರಿಸಿದ ಮಿಶ್ರಣದಿಂದ ಕಲ್ಲುಗಳನ್ನು ಜೋಡಿಸಲಾಗಿದೆ.

೪೭೫೦ ಚದರ ಅಡಿ ವಿಸ್ತೀರ್ಣದ ಗಜಪೃಷ್ಠಾಕಾರದ ಗರ್ಭಗುಡಿಯನ್ನು ತೆರವುಗೊಳಿಸಿ ಅದೇ ಆಯ ಮತ್ತು ವಾಸ್ತುವಿನಲ್ಲಿ ಪುನಃ ನಿರ್ಮಿಸಲಾಗಿದೆ. ೪೫೦೦ ಕಿಲೋ ತೂಗುವ ಶಿಲಾಪಾಣಿಪೀಠವನ್ನು ಕೆತ್ತನೆಮಾಡಿ ಕ್ರೇನ್ ಮೂಲಕ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಈ ಪಾಣಿಪೀಠವು ೯ ಅಡಿ ಉದ್ದ, ೬ ಅಡಿ ಅಗಲ, ೪ ಅಡಿ ದಪ್ಪವಿದೆ. ಸುತ್ತುಪೌಳಿ ೩೪೭ ಕೋಲು ಸುತ್ತಳತೆಯನ್ನು ಹೊಂದಿದೆ. ಐದೂಕಾಲು ಅಡಿ ಎತ್ತರದ ಮೂರು ಚಿನ್ನದ ಲೇಪದ ಮುಗುಳಿಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ಮಂಜಯ್ಯ ಹೆಗ್ಗಡೆಯವರ (ಮಂಜಯ್ಯ ಹೆಗ್ಗಡೆಯವರು ಮೂಲತಃ ವಿಟ್ಲದವರು)ನೆನಪಿನಲ್ಲಿ ಕೊಡುಗೆಯಾಗಿ ನೀಡಿರುತ್ತಾರೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರಮಠ, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯಮಠ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದೊಂದಿಗೆ, ಸಂಘ-ಸಂಸ್ಥೆಗಳ ನೆರವು, ಊರ-ಪರವೂರ ಜನರ ತನು-ಮನ-ಧನದ ಸಹಕಾರ, ಸಾವಿರಾರು ಜನರ ಶ್ರಮದಾನ ನಿಸ್ಪೃಹ ಸೇವಾಮನೋಭಾವದೊಂದಿಗೆ ಹನ್ನೊಂದು ವರುಷಗಳಲ್ಲಿ ಸುಮಾರು ಹತ್ತು ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಮೂಲರಚನೆ, ಸೌಂದರ್ಯಕ್ಕೆ ಚ್ಯುತಿಬಾರದಂತೆ ಕೆಂಪುಕಲ್ಲು, ತಾಮ್ರ, ಮರಗಳನ್ನು ಬಳಸಿ ವಾಸ್ತುಶಿಲ್ಪವನ್ನೊಳಗೊಂಡು ಹಿಂದಿನಂತೆಯೇ ತನ್ನ ಕಲಾವೈಭವವನ್ನು ಮೆರೆಯುತ್ತಿದೆ.

೨೦೧೩ರ ಜನವರಿ ೯ರಿಂದ ೨೧ರ ತನಕ ಪುನಃಫ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರುಗಿದವು.[೧] Archived 2019-01-02 ವೇಬ್ಯಾಕ್ ಮೆಷಿನ್ ನಲ್ಲಿ.

ದೇವಸ್ಥಾನ-- ಇಂದು[ಬದಲಾಯಿಸಿ]

ದೇವಾಲಯಗಳ ಗಾತ್ರಕ್ಕನುಸಾರವಾಗಿ ಅಲ್ಪಪ್ರಾಸಾದ, ಮಧ್ಯಪ್ರಾಸಾದ, ಮಹಾಪ್ರಾಸಾದ, ಜಾತಿ, ವಿಕಲ್ಪ, ಛಂದ ಎಂಬ ಆರು ಹೆಸರುಗಳಿವೆ. ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಮಹಾಪ್ರಾಸಾದ (ಅತ್ಯಂತ ದೊಡ್ಡ ಗರ್ಭಗುಡಿ) ನಿಯಮದ ದೇವಾಲಯವಾಗಿದೆ.

ಗರ್ಭಗುಡಿಯು ಪಶ್ಚಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ. ಪಂಚಲಿಂಗಗಳ ಎದುರಿಗೆ ಒಳಾಂಗಣದಲ್ಲಿ ನಂದಿವಿಗ್ರಹ, ನವರಂಗ ಮಂಟಪ, ವಸಂತ ಮಂಟಪವಿದೆ. ೬೬ ೧/೨ ಅಡಿ ಎತ್ತರದ ೫.೫ ಅಡಿ ಸುತ್ತಳತೆಯ ಧ್ವಜ ಸ್ತಂಭವಿದೆ. ಒಳಾಂಗಣದ ವಾಯುವ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಕುಂತೀಶ್ವರ ಗುಡಿಯಿದೆ. (ಎದುರಿಗೆ ಪುಟ್ಟ ನಂದಿ ವಿಗ್ರಹ). ಪಾಂಡವಪ್ರತಿಷ್ಠೆಯೆಂಬ ಸ್ಥಳಪುರಾಣಕ್ಕೆ ಸಂಬಂಧಿಸಿದಂತೆ ಕುಂತಿ ಪೂಜಿಸಿದಲಿಂಗ ಎಂಬುದನ್ನು ಈ ಕುಂತೀಶ್ವರಲಿಂಗ ಎಂಬ ಹೆಸರು ನೆನಪಿಸುವಂತಿದೆ. ಈಶಾನ್ಯದಲ್ಲಿ ಧೌಮ್ಯೇಶ್ವರ, ಆಗ್ನೇಯದಲ್ಲಿ ಭೈರವೇಶ್ವರ ಗುಡಿಯಿದೆ. ದಕ್ಷಿಣದಿಕ್ಕಿನಲ್ಲಿ ಪೂರ‍್ವಾಭಿಮುಖವಾಗಿ ಗಣಪತಿ ಗುಡಿಯಿದೆ. ಇಲ್ಲಿರುವ ಗಣಪತಿ ವಿಗ್ರಹವು ಸುಮಾರು ಕ್ರಿ.ಶ. ಹನ್ನೊಂದನೆಯ ಶತಮಾನದ್ದೆಂದು ಡಾ.ಪಿ.ಗುರುರಾಜ ಭಟ್ಟರು ಊಹಿಸಿದ್ದಾರೆ. ನೈಋತ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಅಮ್ಮನವರ ಗುಡಿಯಿದೆ. ಒಳಾಂಗಣದ ಈ ಎಲ್ಲಾ ಸ್ಥಾಪನೆಗಳಿಗೂ ಪೂಜೆ ನಡೆಯುತ್ತದೆ. ಉತ್ತರದಿಕ್ಕಿನಲ್ಲಿ ಬಾವಿ ಹಾಗೂ ಸಣ್ಣ ಕೊಳವಿದೆ. ಸುತ್ತುಪೌಳಿಯ ಸುತ್ತಲೂ ಮರದ ದರಿಯನ್ನು ನಿರ್ಮಿಸಲಾಗಿದೆ. ಜಾತ್ರೆಯ ಸಮಯದಲ್ಲಿ ಇಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ಒಳಪ್ರಾಕಾರದಲ್ಲಿ ಉಳ್ಳಾಲ್ತಿಭಂಡಾರವನ್ನಿಡುವ ವ್ಯವಸ್ಥೆಯಿದೆ.

ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ದಕ್ಷಿಣಕ್ಕೆ ತೆರೆದಂತೆ ದೇವಾಲಯದ ಆವರಣದ ಪ್ರವೇಶದ್ವಾರವಿದೆ ನೈಋತ್ಯದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ( ಜಾತ್ರೆಯ ಸಮಯದಲ್ಲಿ ವಿಟ್ಲಅರಸರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ). ನಾಗ, ರಕ್ತೇಶ್ವರಿ, ಗುಳಿಗ, ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪಂಚಲಿಂಗ ಪುಷ್ಕರಣಿಯಿದೆ.

ಪಂಚಲಿಂಗ ಪುಷ್ಕರಣಿ
ದೇವರ ತೆಪ್ಪೋತ್ಸವ

ಸೀಮೆಯ ಮುಖ್ಯ ದೈವಸ್ಥಾನ ಕೇಪು ಎಂಬಲ್ಲಿರುವ ’ಉಳ್ಳಾಲ್ತಿ’ಯದು, ಸೀಮೆಯ ಮುಖ್ಯ ಭೂತ ’ಮಲರಾಯ’ ಎಂದು ಹೇಳಲಾಗಿದೆ.

ಉತ್ಸವಗಳು[ಬದಲಾಯಿಸಿ]

ವರ್ಷಾವಧಿ ಉತ್ಸವ ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸುಮಾರು ಹತ್ತು ದಿನಗಳ ಮೊದಲು ಗೊನೆಕಡಿಯುವ ಮುಹೂರ್ತವಿರುತ್ತದೆ. ಮಕರಸಂಕ್ರಮಣದಂದು ಮಧ್ಯಾಹ್ನ ಅರಮನೆಅರಸರು, ಗುರಿಕಾರರು, ಊರ- ಪರಊರ ಜನರ ಉಪಸ್ಥಿತಿಯಲ್ಲಿ ಧ್ವಜಾರೋಹಣವಾಗುತ್ತದೆ. [೨]


ಮೊದಲನೆಯದಿನ ಲಕ್ಷದೀಪೋತ್ಸವ ದೇವಸ್ಥಾನದ ಸುತ್ತಲೂ ಹಣತೆದೀಪಗಳನ್ನು ಬೆಳಗಿಸಲಾಗುತ್ತದೆ. ಎರಡು, ಮೂರು, ನಾಲ್ಕನೆಯ ದಿನಗಳಲ್ಲಿ ನಿತ್ಯೋತ್ಸವಗಳು ನಡೆಯುತ್ತವೆ.(ಚಪ್ಪೆ ಆಯನ) ಐದನೆಯದಿನ ಬಯ್ಯದಬಲಿ. ಅಂದು ರಾತ್ರೆ ಕೇಫುವಿನಿಂದ ಮಲರಾಯ, ಪಿಲಿಚಾಮುಂಡಿ ದೈವಗಳ ಭಂಡಾರ ಬರುತ್ತದೆ. ರಾತ್ರೆ ಉತ್ಸವ ನಡೆಯುತ್ತದೆ. ಆರನೆಯ ದಿನ ನಡುದೀಪೋತ್ಸವ ಆ ದಿನ ಬೆಳಗ್ಗೆ ದರ್ಶನ ಬಲಿ ನಡೆಯುತ್ತದೆ. ರಾತ್ರೆ ನಡುದೀಪೋತ್ಸವ ನಡೆಯುತ್ತದೆ. ಏಳನೆಯದಿನ ಹೂವಿನತೇರು. ಆದಿನ ಬೆಳ್ಳಂಬೆಳಗ್ಗೆ ದರ್ಶನಬಲಿ ಹಾಗೂ ರಾತ್ರೆ ಉತ್ಸವ ನಡೆಯುತ್ತದೆ. ದೇವಸ್ಥಾನದ ಸುತ್ತಲೂ ಹಣತೆಗಳನ್ನು ಬೆಳಗಿಸುವುದು ಈ ಉತ್ಸವದ ವಿಶೇಷತೆ. ರಾತ್ರೆ ಓಕುಳಿಕಟ್ಟೆಪೂಜೆ ನಡೆದಬಳಿಕ ಅಷ್ಟಾವಧಾನ ಕಾರ್ಯಕ್ರಮ ನಡೆಯುತ್ತದೆ. (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಶ್ಲೋಕಗಳು, ಸಂಗೀತ, ಶಂಖಧ್ವನಿ, ಚೆಂಡೆ, ವಾದ್ಯಘೋಷಗಳ ಸೇವೆ.) ಎಂಟನೆಯದಿನ ಮಹಾರಥೋತ್ಸವ.[೩] ಆದಿನ ಬೆಳಗ್ಗೆ ದರ್ಶನಬಲಿ ನಡೆದು, ರಾತ್ರೆ ದೇವರಬಲಿ ಹೊರಟು ಸಂಕ್ಷಿಪ್ತ ಉತ್ಸವ ನಡೆಯುತ್ತದೆ.[[೪]] ರಾಜಾಂಗಣದಲ್ಲಿ ಭಂಡಾರದೊಂದಿಗೆ ಮೆರವಣಿಗೆಯಾಗಿ, ದೇವಸ್ಥಾನದ ಎದುರಿನ ರಥಗದ್ದೆಯಲ್ಲಿ ಶ್ರೀದೇವರ ಮಹಾರಥೋತ್ಸವ ನಡೆಯುತ್ತದೆ. ಸುಡುಮದ್ದುಗಳ ಪ್ರದರ್ಶನ ನಡೆಯುತ್ತದೆ. ನಂತರ ವಿವಿಧ ಕಟ್ಟೆಪೂಜೆಗಳೊಂದಿಗೆ ಶ್ರೀದೇವರ ಬೀದಿಸವಾರಿ ನಡೆದು, ದೇವಾಲಯಕ್ಕೆ ಆಗಮಿಸುವ ವೇಳೆಗೆ ಆನೆಬಾಗಿಲು ಸಮೀಪ ಶಿವ-ಪಾರ್ವತಿಯರ ಭೇಟಿಯಾಗುತ್ತದೆ. ಆಬಳಿಕ ಪೆರಿಯ ಭೂತಬಲಿ ಉತ್ಸವ ನಡೆಯುತ್ತದೆ. ಆ ಬಳಿಕ ದೇವರ ಶಯನ. ಶಯನ ಸಂದರ್ಭದಲ್ಲಿ ಎಲ್ಲಾ ಬಲಿಕಲ್ಲುಗಳಿಗೆ ತೈಲವನ್ನು ಲೇಪಿಸಿ, ಯಾವಶಬ್ದವೂ ಕೇಳಿಸದಂತೆ ಗಂಟೆಗಳನ್ನು ಕಟ್ಟಲಾಗುತ್ತದೆ. ಒಂಭತ್ತನೆಯದಿನ ಅವಭೃತೋತ್ಸವ. ಅಂದು ಮಧ್ಯಾಹ್ನ ಕವಾಟೋದ್ಘಾಟನೆ. ನಗಾರಿ, ಚಂಡೆ, ವಾದ್ಯಘೋಷಗಳೊಂದಿಗೆ ಬಾಗಿಲು ತೆರೆದು ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಪೂಜೆ, ನೈವೇದ್ಯಗಳು ನಡೆಯುತ್ತವೆ. ಮಧ್ಯಾಹ್ನ ತುಲಾಭಾರ ಸೇವೆ ನಡೆಯುತ್ತದೆ. ವರ್ಷದಲ್ಲಿ ಈದಿನ ಮಾತ್ರ ಈ ಸೇವೆ ನಡೆಯುತ್ತದೆ. ರಾತ್ರೆ ಸಂಕ್ಷಿಪ್ತ ಉತ್ಸವಬಲಿ ಹೊರಟು ಆನೆಬಾಗಿಲಿನ ಹತ್ತಿರ ಬಂದಾಗ ದೈವದ ಭೇಟಿಯಾಗಿ, ಕೊಡುಂಗಾಯಿಗೆ ತೆರಳಿ ಅವಭೃತಸ್ನಾನ ಮುಗಿಸಿ, ಆನೆಬಾಗಿಲಿನ ಬಳಿ ಶಿವ-ಪಾರ್ವತಿಯರ ಭೇಟಿಯಾಗುತ್ತದೆ. ನಂತರ ಶ್ರೀದೇವರು ಒಳಾಂಗಣಕ್ಕೆ ಪ್ರವೇಶಿಸಿದ ನಂತರ ಧ್ವಜಾವರೋಹಣ ಕಾರ್ಯಕ್ರಮ ಜರುಗುತ್ತದೆ. ಹತ್ತನೆಯದಿನ ಶ್ರೀ ದೇವರಿಗೆ ೧೦೮ ಕಲಶಾಭಿಷೇಕವಿರುತ್ತದೆ. ಇದನ್ನು ಸಂಪ್ರೋಕ್ಷಣೆ ಎನ್ನುವರು. ಆದಿನ ರಾತ್ರೆ ಉತ್ಸವ ಮೂರ್ತಿ ಮತ್ತು ಆಭರಣಗಳನ್ನು ಅರಮನೆಗೆ ತಲುಪಿಸುವುದು ವಾಡಿಕೆ. ಹನ್ನೊಂದನೆಯದಿನ ಮಲರಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ವಾರ್ಷಿಕನೇಮದ ಕಾರ್ಯಕ್ರಮವಿರುತ್ತದೆ. ಊರಿನ ಗುರಿಕಾರರ, ಅರಮನೆಯ ಸಮ್ಮುಖದಲ್ಲಿ ನಡೆದು ರಾತ್ರಿ ದೈವದ ಭಂಡಾರ ಅರಮನೆಗೆ ತೆರಳುತ್ತದೆ. ಮರುದಿನ ಅರಮನೆಯಲ್ಲಿ ನೇಮ ನಡೆದಬಳಿಕ ಭಂಡಾರವು ಕೇಪುವಿಗೆ ತೆರಳುತ್ತದೆ.[೫]

ಧನುರ್ಮಾಸದಲ್ಲಿ ಧನುಪೂಜೆಯು ಪ್ರಾತಃಕಾಲದಲ್ಲಿ ಜರುಗುತ್ತದೆ. ಗಣಪತಿಹಬ್ಬ, ನವರಾತ್ರಿ, ಮಹಾಶಿವರಾತ್ರಿ ಮುಂತಾದ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆಗಳಿರುತ್ತವೆ.

ಶಿವನ ಐದು ಸ್ವರೂಪಗಳ ಪ್ರತ್ಯೇಕ ಪ್ರತ್ಯೇಕವಾದ ಬಹಳ ಪ್ರಸಿಧ್ಧವಾದ ದೇವಾಲಯಗಳು ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿವೆ. ಆದರೆ ಈ ಐದೂಮುಖಗಳು ಒಂದೇ ಪೀಠದಲ್ಲಿ ಪ್ರತಿಷ್ಠೆಯಾಗಿರುವುದನ್ನು ವಿಟ್ಲಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಾತ್ರ ನಾವು ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]


https://en.wikipedia.org/wiki/Vitla

http://www.paryaya.com/2013/01/blog-post_24.html

ಬಾಹ್ಯಸಂಪರ್ಕಗಳು[ಬದಲಾಯಿಸಿ]

https://vijaykarnataka.indiatimes.com/district/dakshinakannada/vittla-ratha/articleshow/56717319.cms

http://www.nammabhoomi.com/shree-panchalingeshwara-temple-vittla/ Archived 2019-01-02 ವೇಬ್ಯಾಕ್ ಮೆಷಿನ್ ನಲ್ಲಿ.

http://www.bantwalnews.com/2017/01/10/%E0%B2%AA%E0%B2%82%E0%B2%9A%E0%B2%B2%E0%B2%BF%E0%B2%82%E0%B2%97%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%B8%E0%B2%A8%E0%B3%8D%E0%B2%A8%E0%B2%BF%E0%B2%A7%E0%B2%BF%E0%B2%AF%E0%B2%B2%E0%B3%8D/