ಕರ್ನಾಟಕದ ನದಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ:ಮೇಲ್ಮೈಲಕ್ಷಣ

ಕರ್ನಾಟಕದ ನದಿಗಳು[ಬದಲಾಯಿಸಿ]

ತುಂಗಾ ನದಿ

ಕರ್ನಾಟಕ ನದಿಗಳ ನೀರಾವರಿ ವ್ಯವಸ್ಥೆ[ಬದಲಾಯಿಸಿ]

  • ಕರ್ನಾಟಕದ ರಾಜ್ಯದಲ್ಲಿ ಹರಿಯುವ ಏಳು ನದಿ ಜಾಲಗಳನ್ನೂ ಅವುಗಳ ಉಪನದಿಗಳನ್ನೂ ನೀರುಪಡೆಯುವ ಪ್ರದೇಶಗಳನ್ನು (ಜಲಾಯನ) ಕೊಟ್ಟಿದೆ.
ಕ್ರ.ಸಂ. ನದಿ ವ್ಯವಸ್ಥೆ ಜಲಾನಯನ ವ್ಯವಸ್ಥೆಯುಳ್ಳ ಪ್ರದೇಶ ಕಾಲುವೆ ವ್ಯವಸ್ಥೆಯ ಪ್ರದೇಶ
1000 ಚದರ ಕಿ.ಮೀ. ಶೇಕಡಾವಾರು
1. ಗೋದಾವರಿ 4.41 2.31
2. ಕೃಷ್ಣಾ 113.29 59.48
3. ಕಾವೇರಿ 34.27 17.99
4. ಉತ್ತರ ಪಿನಾಕಿನಿ ಪೆನ್ನಾರ್ 6.94 3.64
5. ದಕ್ಷಿಣ ಪಿನಾಕಿನಿ ಪೆನ್ನಾರ್ 4.37 2.29
6. ಪಾಲಾರ 2.97 1.56
7. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು 24.25 12.73
ಒಟ್ಟು 190.50 100

ಗೋದಾವರಿ[ಬದಲಾಯಿಸಿ]

ಗೋದಾವರಿ ನದಿ ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ, ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇದು ದಕ್ಷಿಣ ಪ್ರಸ್ಥಭೂಮಿಗೆ ಅಡ್ಡಲಾಗಿ ಆಗ್ನೇಯ (ದಕ್ಷಿಣ-ಪೂರ್ವ)ಕ್ಕೆ ಹರಿಯುತ್ತದೆ. ಇದು ನಾಸಿಕ್ ಜಿಲ್ಲೆಯ 1067ಮೀ. ಎತ್ತರದಲ್ಲಿ ಹುಟ್ಟುತ್ತದೆ. ಇದು ಕರ್ಣಾಟಕದಲ್ಲಿ 4,406 ಚ.ಕಿ.ಮೀ.ಜಲಾನಯನ ಪ್ರದೇಶವನ್ನು ಹೊಂದಿದೆ.

  • ಗೋದಾವರಿಯ ಉಪನದಿ ಮಂಜ್ರಾ ಮಾತ್ರ ಗುಲ್ಬರ್ಗಜಿಲ್ಲೆಯ ಉತ್ತರ ಭಾಗದಲ್ಲಿ ಸ್ವಲ್ಪ ದೂರ ಹರಿಯುತ್ತದೆ.

ತುಂಗಭದ್ರಾ ನದಿ[ಬದಲಾಯಿಸಿ]

  • ತುಂಗಭದ್ರಾ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು. ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರ ಪ್ರದೇಶಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ಘಟಪ್ರಭಾ[ಬದಲಾಯಿಸಿ]

  • `ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ್ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿಮೀ ವಿಸ್ತಾರವಾಗಿದೆ.

ಅರ್ಕಾವತಿ[ಬದಲಾಯಿಸಿ]

ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.

ಮಲಪ್ರಭಾ ನದಿ[ಬದಲಾಯಿಸಿ]

  • ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು. ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ಲಿ ೧೩,೫೭೮ ಹೆಕ್ಟೇರುಗಳಷ್ಟು ಪ್ರದೇಶವು ಮುಳುಗಡೆಯಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ. ರೇಣುಕಾ ಜಲಾಶಯಕ್ಕೆ ಸುಮಾರು ೧೫ ಕಿಮೀ ದೂರದಲ್ಲಿ ಹೆಸರಾಂತ ಎಲ್ಲಮ್ಮ ನ ಗುಡಿ ಇರುತ್ತದೆ.

ಗುರುಪುರ ನದಿ[ಬದಲಾಯಿಸಿ]

  • ಫಾಲ್ಗುಣಿ ನದಿ ಎಂದೂ ಕರೆಯಲ್ಪಡುವ ಗುರುಪುರ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ವೇದಾವತಿ ನದಿ[ಬದಲಾಯಿಸಿ]

  • ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ.

ಭದ್ರಾ ನದಿ[ಬದಲಾಯಿಸಿ]

  • ಭದ್ರಾ ನದಿಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಭದ್ರಾ ನದಿಯು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.
  • ಮುಂದೆ ತುಂಗಭದ್ರೆಯು ಹರಿಯುತ್ತಾ, ಕರ್ನಾಟಕವನ್ನು ದಾಟಿ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ಪ್ರಮುಖ ಉಪನದಿಯಾಗಿ ಸೇರಿಕೊಂಡು ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಲಕ್ಕವಳ್ಳಿ ಬಳಿ ಭದ್ರಾ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಈ ಅಣ್ಣೆಕಟ್ಟು ಸುಮಾರು ೧೮೬ ಅಡಿ ಇದ್ದು, ೭೧.೫೩೫ ಟಿಎಂಸಿ ನೀರನ್ನು ಸಂಗ್ರಹಿಸಿಡುವ ಸಮರ್ಥ್ಯ ಹೊಂದಿದೆ.

ಶಿಂಶಾ ನದಿ[ಬದಲಾಯಿಸಿ]

ಮದ್ದೂರಿನ ವೈದ್ಯನಾಥಪುರದಲ್ಲಿ ಹರಿಯುತ್ತಿರುವ ಶಿಂಷಾ
  • ಶಿಂಶಾ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುವ ಒಂದು ನದಿಯಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಉಪನದಿಯಾಗಿದೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಉಗಮಿಸುವ ಈ ನದಿಯು ೨೨೧ ಕಿ.ಮೀ. ದೂರವನ್ನು ಕ್ರಮಿಸಿ ಕಾವೇರಿ ನದಿಯನ್ನು ಸೇರುತ್ತದೆ.

ಕೃಷ್ಣಾ ನದಿ[ಬದಲಾಯಿಸಿ]

  • ಕೃಷ್ಣಾ ನದಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ-ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ. ಇದು ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ಯನ್ನು ಸೇರುತ್ತದೆ. ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ಮತ್ತು ಘಟಪ್ರಭಾ.
  • ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು ೨,೬೦,೦೦೦ ಚದರ ಕಿ.ಮಿ. ಇರುತ್ತದೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ೬೮,೦೦೦ ಚ.ಕಿ.ಮಿ.,ಕರ್ನಾಟಕದಲ್ಲಿ ೧,೧೨,೬೦೦ ಚ.ಕಿ.ಮಿ. ಹಾಗು ಆಂಧ್ರ ಪ್ರದೇಶದಲ್ಲಿ ೭೫,೬೦೦ ಚ.ಕಿ.ಮಿ. ವ್ಯಾಪಿಸಿದೆ.

ಅದರ ಉಪನದಿಗಳು ಮತ್ತು ವಿವರ[ಬದಲಾಯಿಸಿ]

ಕ್ರ.ಸಂ. ಉಪನದಿಗಳ ಹೆಸರು ಜಲಾನಯನ ಪ್ರದೇಶ; ಚದರ ಕಿ.ಮೀ. ಮೂಲ, ಎತ್ತರ ಮತ್ತು ಉದ್ದ ಕಿರು ಉಪನದಿಗಳ ಹೆಸರು ರಾಜ್ಯದ ಹೆಸರು ಜಲಾನಯನ ಪ್ರದೇಶವು
1 ಘಟಪ್ರಭಾ 8829 ಪಶ್ಚಿಮ ಘಟ್ಟಗಳು, 884m, 283kms ಹಿರಣ್ಯಕೇಶಿ,ಮಾರ್ಕಂಡೇಯ ನದಿ ಮಹಾರಾಷ್ಟ್ರ, ಕರ್ನಾಟಕ
2 ಮಲಪ್ರಭಾ 11549 ಪಶ್ಚಿಮ ಘಟ್ಟಗಳು792.48m, 306kms ಬೆಣ್ಣೆಹಳ್ಳ,ಹಿರೇಹಳ್ಳ , ಟಿಎಎಸ್ ನದಿ ಕರ್ನಾಟಕ
3 ಭೀಮ 70,614 ಪಶ್ಚಿಮ ಘಟ್ಟಗಳು,945m, 861 ಕಿ.ಮೀ. ಮೂಲ & ಮುತ್ತ ಗೋದ್;ನೀರಾ,ಸಿನಾ ಸಂಯೋಜಿತ ನೀರುu ಮಹಾರಾಷ್ಟ್ರ, ಕರ್ನಾಟಕ
4 ತುಂಗಭದ್ರಾ 47,866 ಗಂಗಾಮೂಲದಲ್ಲಿ, 1198m, 531 ಕಿ.ಮೀ.;ಪಶ್ಚಿಮಘಟ್ಟಗಳಲ್ಲಿ ತುಂಗಾ ಮತ್ತು ಭದ್ರಾ; ವರದಾ, [[ಹಗರಿ(ವೇದಾವತಿ) ಒಟ್ಟು ನೀರು ಕರ್ನಾಟಕ & ಆಂಧ್ರ ಪ್ರದೇಶ

ಕಾವೇರಿ ನದಿ[ಬದಲಾಯಿಸಿ]

ತಲಕಾಡಿನಲ್ಲಿ ಹರಿಯುತ್ತಿರುವ ಕಾವೇರಿ ನದಿ
  • ಕಾವೇರಿ ದಕ್ಷಿಣ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸರಾಸರಿ ಸಮುದ್ರ ಮಟ್ಟದಿಂದ 4,400 ಅಡಿ ಸ್ಥಳದಲ್ಲಿ ಉಗಮಿಸುವ ಈ ನದಿ, ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ.ಜಲಾನಯನ ಪ್ರದೇಶ 81,155 km2 (31,334 sq mi)
  • ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
  • ಹರಿವು: ತನ್ನ ಮುಖ ಮೂಲದಿಂದ ಸಮುದ್ರ ಸೇರುವವರೆಗಿನ ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ. ಕರ್ನಾಟಕದಲ್ಲಿ 320 ಕಿ.ಮೀ. ಹರಿದು 416 ಕಿ.ಮೀ. ತಮಿಳುನಾಡಿನಲ್ಲಿ ಹರಿಯುವುದು. ಮತ್ತು 64 ಕಿ. ಮೀ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಾನವಾದ ಗಡಿಯನ್ನು ರೂಪಿಸುವುದು. 320+22=342 ಕಿ.ಮೀ. ಕರ್ನಾಟಕದಲ್ಲಿ; 416+32 ಕಿ,ಮೀ. ತಮಿಳುನಾಡಿನಲ್ಲಿ ಹರಿದಂತಾಯಿತು.[೧]

ಜಲಾಯನ ಪ್ರದೇಶದ ವಿವರ[ಬದಲಾಯಿಸಿ]

Sl.No. ಬೇಸಿನ್ ರಾಜ್ಯದ ಹೆಸರು ಸಂಗ್ರಹಣಾ ಪ್ರದೇಶ ಚದರkm
1 ಕರ್ನಾಟಕ 34,273
2 ಕೇರಳ 2,866
3 ತಮಿಳುನಾಡು 43,868
4 ಪಾಂಡಿಚೆರಿಯ ಕಾರೈಕಾಲ್ ಪ್ರದೇಶ 148
5 ಒಟ್ಟು 81,155

ಉಪನದಿಗಳ ವಿವರ[ಬದಲಾಯಿಸಿ]

ಕ್ರ.ಸಂ.. ಉಪನದಿ ಹೆಸರು ಚ.ಕಿ.ಮೀ.ಗಳಲ್ಲಿ ಸಂಗ್ರಹಣಾ ಪ್ರದೇಶ. ಮೂಲ, ಎತ್ತರ ಉದ್ದ ಕಿರು ಉಪನದಿಗಳು ಹೆಸರು ರಾಜ್ಯ
1 ಹಾರಂಗಿ 717 ಪಶ್ಚಿಮ ಘಟ್ಟ; ಪುಷ್ಪಗಿರಿ ಹಿಲ್ಸ್ 1,067 ಮೀಟರ್ 50 ಕಿ.ಮೀ. ಕರ್ನಾಟಕ
2 ಹೇಮಾವತಿ 5,410 ಪಶ್ಚಿಮ ಘಟ್ಟಗಳಲ್ಲಿ ಬಲ್ಲರಾಯನದುರ್ಗ, 1,219 ಮೀಟರ್, 245 ಕಿಮೀ - ಕರ್ನಾಟಕ
3 ಕಬಿನಿ 7,040 ಕೇರಳದ ಪಶ್ಚಿಮಘಟ್ಟಗಳಲ್ಲಿ ತಾರಕ, ಹೆಬ್ಬಾಳ, ನುಗು,ಗುಂದಲ್ ಕರ್ನಾಟಕ, ಕೇರಳ ಮತ್ತು ತಮಿಳುನಾಡು
4 ಸುವರ್ಣವತಿ 1,787 ನಸರೂರುರೇಂಜ್, ಉದ್ದ 88 ಕಿಮೀ ಘಾಟ್. ಕರ್ನಾಟಕ & ತಮಿಳುನಾಡು
5 ಲಕ್ಷ್ಮಣ ತೀರ್ಥ 1,690 ಪಶ್ಚಿಮ ಘಟ್ಟಗಳು, 1,950 ಮೀಟರ್, 131 ಕಿ. ರಾಮತೀರ್ಥ ಕರ್ನಾಟಕ
6 ಶಿಂಷಾ 8,469 ತುಮಕೂರು ಜಿಲ್ಲೆಯ 914 ಮೀಟರ್, 221 ಕಿ. - ಕರ್ನಾಟಕ
7 ಅರ್ಕಾವತಿ 4351 ನಂದಿದುರ್ಗ 1,480 ಮೀಟರ್ 161 ಕಿಮೀ ವೀರವೈಷ್ಣವಿ, ಕಣಿಹಳ್ಳ, ಚಿಕ್ಕಹೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ & ಕಣ್ವ ಕರ್ನಾಟಕ& ತಮಿಳುನಾಡು

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು[ಬದಲಾಯಿಸಿ]

  • ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳು:
  • ಪಶ್ಚಿಮ ಘಟ್ಟಗಳು ಅರಬ್ಬೀ ಸಮುದ್ರದ ದಿಕ್ಕಿನಿಂದ ಬರುವ ನೈರುತ್ಯ ಮಾರುತಗಳ ಮಳೆ ತರಲು ಪ್ರಧಾನ ಭೌಗೋಳಿಕ ಅಡೆತಡೆಯನ್ನು ಒದಗಿಸುತ್ತದೆ, ಮತ್ತು ಪ್ರಧಾನವಾಗಿ ಪಶ್ಚಿಮ ಕರಾವಳಿ ಭೂ ಪಟ್ಟಿಯ ಮೇಲೆ ಭಾರೀ ಮಳೆಗೆ ಕಾರಣವಾಗಿದೆ. ನೈಋತ್ಯ ಮಾರತದಿಂದ ಬರುವ ಮಳೆಗಾಲದ (ಮಾನ್ಸೂನ್` ಜೂನ್ನಿಂದ ಸೆಪ್ಟೆಂಬರ್), ಅವಧಿಯಲ್ಲಿ ಸುರಿಯುವ ವಾರ್ಷಿಕ ಮಳೆಯ 90% ಮೇಲೆ ಪಶ್ಚಿಮ ಘಟ್ಟಗಳ ಪ್ರಭಾವ ಇದೆ.
  • ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನದಿಗಳು ಸಾಮಾನ್ಯವಾಗಿ ಸರಾಸರಿ ಸಮುದ್ರ ಮಟ್ಟದಿಂದ 400 ಮೀಟರ್ 1,600 ಮೀಟರ್ ವರೆಗಿನ ಎತ್ತರದ ಪಶ್ಚಿಮ ಘಟ್ಟಗಳ ಪರ್ವತದ ಎತ್ತರದ ಕಣಿವೆಯಲ್ಲಿ ಹುಟ್ಟಿಕೊಳ್ಳುತ್ತವೆ. ಈ ನದಿಗಳಿಗೆ ಸಾಮಾನ್ಯವಾಗಿ ಪಶ್ಚಿಮ ದಿಕ್ಕಿಗೆ 50 ಕಿ.ಮೀ.ನಿಂದ 300 ಕಿ.ಮೀ ಹರಿವು ಇದ್ದು ಅಲ್ಪಾವಧಿಯಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ನದಿಗಳು ಮೇಲ್ಮಟ್ಟದಲ್ಲಿ ಬಹಳ ಕಡಿದಾದ ಪ್ರದೇಶದಲ್ಲಿ ರಭಸದ ಹರಿವಿದ್ದು, ಮಧ್ಯದಲ್ಲಿ ಸಾಧಾರಣ ಕಡಿದಾದ ಪ್ರದೇಶದಲ್ಲಿ ಕಡಿಮೆ ರಭಸದ ಹರಿವಿರುತ್ತದೆ. ಕೇವಲ ಸಮುದ್ರ ಹತ್ತಿರದ ಸಮತಲದ ಇಳಿಜಾರು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಇರುವುದು.
  • ಪಶ್ಚಿಮಕ್ಕೆ ಹರಿಯುವ ನದಿಗಳು,ಅವುಗಳ ಪ್ರಮುಖ ಉಪನದಿಗಳು ಮತ್ತು ಇವು ಹರಿಯುವ ರಾಜ್ಯಗಳ ಪಟ್ಟಿಯನ್ನು ಕೆಳಕಂಡ ಟೇಬಲ್ನಲ್ಲಿ ನೀಡಿದೆ. ಹಲವಾರು ಜಲಾಯನ ಹಳ್ಳಗಳು ಅರಬ್ಬೀ ಸಮುದ್ರಕ್ಕೆ ನೇರವಾಗಿ ಸೇರುತ್ತವೆ.ಈ ಚಿಕ್ಕ ತೊರೆಗಳು ಹೊಂದಿರುವ ಜಲಾಯನವನ್ನು ಗುರುತಿಸಲಾಗಿದೆ. ಈ ಜಲಾಯನ ಪ್ರದೇಶ ಸಮುದ್ರಕ್ಕೆ ಹತ್ತಿರ ಮತ್ತು ಕಡಿಮೆ ಎತ್ತರದಲ್ಲಿ ಇವೆ.

ಪಶ್ಚಿಮಕ್ಕೆ ಹರಿಯುವ ನದಿಗಳ ಪಟ್ಟಿ[ಬದಲಾಯಿಸಿ]

ಕ್ರ.ಸಂ. ಉಪನದಿ ಜಲಾನಯನ ಪ್ರದೇಶ: ಚ.ಕಿ.ಮೀ. ಮೂಲ:ಪಶ್ಚಿಮ ಘಟ್ಟಗಳು, ನದಿ ಹುಟ್ಟುವ ಎತ್ತರ ಉದ್ದ ಉಪ-ಉಪನದಿಗಳು ರಾಜ್ಯದ ಹೆಸರು
1 ಮಹಾದಾಯಿ / ಮಾಂಡವಿ 2,032 ಬೆಳಗಾವಿ ಜಿಲ್ಲೆ 6000 ಮೀಟರ್ 81 ಕಿ.ಮೀ. ಉದ್ದ ಮಾದೇರಿ (Maderi) ಕರ್ನಾಟಕ, ಗೋವಾ
2 ಕಾಳೀ ನದಿ 4.188 ಬೀಡಿ ಗ್ರಾಮ 600 Oಮೀಟರ್ 153 ಕಿ.ಮೀ. ಪಂಡರಿ;ತಟ್ಟಿಹಳ್ಳ; ಮತ್ತು ನಾಗಿ ಕರ್ನಾಟಕ
3 ಗಂಗವಳ್ಳಿ(ಬೇಡ್ತಿ) 3,574 ದಕ್ಷಿಣ ಧಾರವಾಡ 700 ಮೀಟರ್ 152 ಕಿ.ಮೀ. ಕರ್ನಾಟಕ
4 ಅಘನಾಶಿನಿ (ತದರಿ) 1,300 ಸಿರ್ಸಿ ಹತ್ತಿರ 500 ಮೀಟರ್ 84 ಕಿ.ಮೀ. ಕರ್ನಾಟಕ
5 ಶರಾವತಿ 3592 ಪಶ್ಚಿಮ ಘಟ್ಟ -ಹುಮಚ ಶಿವಮೊಗ್ಗ ಜಿಲ್ಲೆ 700ಮೀ. 122 ಕಿ.ಮೀ ಕರ್ನಾಟಕ,
6 ಚಕ್ರಾ ನದಿ 336 ಕೊಡಚಾದ್ರಿ ಪೂರ್ವ; 600ಮೀ. 52ಕಿ.ಮೀ. ಕೊಲ್ಲೂರು ನದಿ ಕರ್ನಾಟಕ
7 ವರಾಹಿ 759 ಪಶ್ಚಿಮ ಘಟ್ಟ - ಶಿವಮೊಗ್ಗ ಜಿಲ್ಲೆ ಕವಲೇದುರ್ಗ 600ಮೀ. 66 ಕಿ.ಮೀ. ಕರ್ನಾಟಕ,
8 ನೇತ್ರಾವತಿ 3222 ಬೆಳ್ಳರಾಯನ ದುರ್ಗ; ದ.ಕ. 1000ಮೀ. 103 ಕಿ.ಮೀ ಗಂಡೆಹೊಳೆ, ಕುಮಾರಧಾರಾ ಕರ್ನಾಟಕ
9 ಬರಪೊಳೆ (ವಾಲಪಟ್ಟಣಂ) 1,867 ಬ್ರಹ್ಮಗಿರಿ ಘಾಟ್ ರಿಸರ್ವ್ ಕೊಡಗು ಅರಣ್ಯ, 900 ಮೀಟರ್ 110 ಕಿ.ಮೀ. - ಕರ್ನಾಟಕ ಮತ್ತು ಕೇರಳ

ಕರ್ನಾಟಕ ನದಿಗಳ ಕಲುಷಿತ ಸಮಸ್ಯೆ[ಬದಲಾಯಿಸಿ]

  • MAY 13, 2016
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2015ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ದೇಶದ 302 ನದಿ ಪ್ರದೇಶಗಳು ಮಾಲಿನ್ಯದಿಂದ ಕೂಡಿವೆ ಎಂದು ಗುರುತಿಸಲಾಗಿದೆ. ಅರ್ಕಾವತಿ, ಕಾವೇರಿ, ಭದ್ರಾ ಸೇರಿ ರಾಜ್ಯದ ಪ್ರಮುಖ 15 ನದಿಗಳು ಕಲುಷಿತ ಎಂದು ಸಮೀಕ್ಷಾ ವರದಿಯಲ್ಲಿ ದಾಖಲಿಸಲಾಗಿದೆ.
  • ಸಂಸತ್ನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ಒದಗಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಲುಷಿತ ನದಿಗಳನ್ನು ಹೊಂದಿರುವ ಕರ್ನಾಟಕಕ್ಕೆ 66.25 ಕೋಟಿ ರೂ. ನೆರವು ನೀಡಲಾಗುವುದು ಎಂದಿದ್ದಾರೆ. ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ(ಎನ್ಆರ್ಸಿಪಿ)ಅಡಿ ದೇಶದ 31 ನದಿಗಳನ್ನು ಆಯ್ಕೆ ಮಾಡಿಕೊಂಡಿದ್ದು, 4,517.82 ಕೋಟಿ ರೂ. ಅನುದಾನಕ್ಕೆ ಅನುಮತಿ ದೊರಕಿದೆ. ಈ ಪೈಕಿ ಕರ್ನಾಟಕದ ಭದ್ರಾ, ಕಾವೇರಿ, ತುಂಗಭದ್ರಾ, ತುಂಗಾ ಮತ್ತು ಪೆನ್ನಾರ್ ನದಿಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ 66.25 ಕೋಟಿ ರೂ. ನಿಗದಿಪಡಿಸಲಾಗಿದೆ.

ಕರ್ನಾಟಕದ 4 ಹಾಗೂ 5ನೇ ಮಲಿನವರ್ಗ[ಬದಲಾಯಿಸಿ]

  • ದಕ್ಷಿಣ ಭಾರತದಲ್ಲೇ ಕಲುಷಿತ ನದಿಗಳ ಸಂಖ್ಯೆ ಹೆಚ್ಚಿದ್ದರೂ ಕರ್ನಾಟಕದ ಎಲ್ಲ ನದಿಗಳೂ ಕಡಿಮೆ ಮಲಿನಗೊಂಡಿರುವ 4 ಹಾಗೂ 5ನೇ ವರ್ಗದಲ್ಲಿವೆ. ಅತ್ಯಂತ ಹೆಚ್ಚು ಕಲುಷಿತವಾಗಿರುವ 1ನೇ ವರ್ಗದಲ್ಲಿ ಅಸ್ಸಾಂ(1), ದೆಹಲಿ(1), ಮಧ್ಯಪ್ರದೇಶ(4), ಮಹಾರಾಷ್ಟ್ರ(4) ತಮಿಳುನಾಡು(5), ತೆಲಂಗಾಣ(3), ಕೇರಳ(1), ಗುಜರಾತ್(2) ಮತ್ತಿತರ ರಾಜ್ಯಗಳಿವೆ
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ವರದಿ: ಕಾವೇರಿ ಸೇರಿದಂತೆ ರಾಜ್ಯದ 15 ನದಿಗಳ ತೀರ ಪ್ರದೇಶ ಕಲುಷಿತಗೊಂಡಿರುವುದೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ವರದಿಮಾಡಿದೆ.
  • ಅರ್ಕಾವತಿ, ಭದ್ರಾ, ಭೀಮಾ, ಕಾವೇರಿ, ಘಟಪ್ರಭಾ, ಕಬಿನಿ, ಕಾಗಿನಾ, ಕಾಳಿ, ಕೃಷ್ಣಾ, ಲಕ್ಷ್ಮಣತೀರ್ಥ, ಮಲಪ್ರಭಾ, ಮಂಜಿರಾ, ಶಿಂಷಾ, ತುಂಗಭದ್ರಾ, ತುಂಗಾ ನದಿಗಳ ವ್ಯಾಪ್ತಿಯ ಒಟ್ಟು 655 ಕಿ.ಮೀ ಉದ್ದದ ತೀರ ಪ್ರದೇಶ ಮಲಿನಗೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
  • ಕೃಷ್ಣಾ ನದಿಯ 200 ಕಿ.ಮೀ ಉದ್ದದ ತೀರ ಪ್ರದೇಶ ಕಲುಷಿತಗೊಂಡಿದೆ. ಭೀಮಾ, ಮಲಪ್ರಭಾ, ಶಿಂಷಾ ನದಿಯ ತಲಾ 80 ಕಿ.ಮೀ ಉದ್ದದ ತೀರ ಪ್ರದೇಶ ಮಲಿನಗೊಂಡಿದೆ. ಕಾವೇರಿ ನದಿಯ 50 ಕಿ.ಮೀ ಮತ್ತು ತುಂಗಭದ್ರಾ ನದಿಯ 60 ಕಿ.ಮೀ ಉದ್ದದ ತೀರ ಪ್ರದೇಶ ಕಲುಷಿತಗೊಂಡಿದೆ.[೨][೩]

ಮಲಿನ ನದಿಗಳ ಪಟ್ಟಿ[ಬದಲಾಯಿಸಿ]

ಕ್ರ.ಸ. ನದಿ ಮಲಿನಗೋಡಿರುವ ಪ್ರದೇಶ ಉದ್ದ ಪ್ರಭಾವಿತ/ದೂಷಿತ ನಗರಗಳು
1 ಅರ್ಕಾವತಿ ಹಳ್ಳಿ ಜಲಾಶಯ - ಕನಕಪುರ ನಗರ 35 ಬೆಂಗಳೂರು ಭದ್ರಾವತಿ
2 ಭದ್ರಾ ಹೊಳೇಹೊನ್ನೂರು -ಭದ್ರಾವತಿ 10 ಚಿಕ್ಕೋಡಿ ಕೊಪ್ಪ
3 ಭೀಮಾ ಘಾನಾಪುರ -ಯಾದಗಿರಿ 80 ಜೀವರ್ಗಿ
4 ಕಾವೇರಿ ರಂಗನತಿಟ್ಟು ಸತ್ಯಮಂಗಲಸೇತುವೆ 50 ಶ್ರೀರಂಗ ಪಟ್ಟಣ
5 ಕಬಿನಿ ನಂಜನಗೂಡು -ಹೆಜ್ಜಿಗೆ 5 ಬಸವನಪುರ-ಛತ್ರ
6 ಕಾಗಿನ ಶಹಾಬಾದು ಹೊನಗೊಂಟ 10 ಬಂಕೂರು
7 ಕಾಳಿ ವೆಸ್ಟಕೋಸ್ಟ್ ಪೇಪರ್‍ಮಿಲ್ -ಬೊಮ್ಮನಹಳ್ಳಿ ಜಲಾಶಯ 10 ದಾಂಡೇಲಿ
8 ಕೃಷ್ಣಾ ಯದುರ್‍ವಾಡಿ ತಿಂತಿಣಿಸೇತುವೆ 200 ಚಿಕ್ಕೋಡಿ- ನಾರಾಐಣ ಪುರ
9 ಲಕ್ಷ್ಮಣ ತೀರ್ಥ ಕೊಟ್ಟೇಮಲವಾಡಿ -ಹುಣಸೂರು 10 ಉಂದವಾಡಿ
10 ಮಲಪ್ರಭಾ ಖಾನಾಪುರ ಧಾರವಾಡ 80 ಎಂ.ಕೆ.ಹುಬ್ಬಳ್ಳಿ-ಕದ್ರೊಳ್ಳಿ
11 ಮಂಜಿರಾ ಬೀದರ್ ಹುಸೇನ್ ನಗರ 10 ನಿಟ್ಟೂರು-ಚಂಬೋಲ್,ಬೀದರ್`
12 ಶಿಂಷಾ ಯಡಿಯಾರ್ -ಹಲಗೂರು 80 ತಟ್ಟೀಕೆರೆ, ಮಲ್ಲೂರು,
13 ತುಂಗಭದ್ರಾ ಹರಿಹರ -ಕಾರಲಹಳ್ಳಿ 60 ಉಳ್ಳನೂರು ಹರಿಹರ
14 ತುಂಗಾ ಶಿವಮೊಗ್ಗ -ಕೂಡ್ಲಿ 10 ಶಿವಮೊಗ್ಗ್
15 ಘಟಪ್ರಭಾ ಗೋಕಾಕ ಚಿಗದೊಳ್ಳಿ 5 ಗೋಕಾಕ್

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

೧.*http://waterresources.kar.nic.in/river_systems.htm

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-09-15. Retrieved 2016-09-07.
  2. ಲಕ್ಷ್ಮಣ್ ಅಧ್ಯಕ್ಷ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ.ವರದಿ:ವಿಜಯವಾಣಿ ಸುದ್ದಿಜಾಲ;ಮೇ 13, 2016
  3. ರಾಜ್ಯದ-15-ನದಿಗಳ-ತೀರಪ್ರದೇಶ-ಕಲುಷಿತ -೧೭-೬-೨೦೧೬:ಪ್ರಜಾವಾಣಿ.