ಅಲಿ ಅಕ್ಬರ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಅಲಿ ಅಕ್ಬರ್ ಖಾನ್'

ಉಸ್ತಾದ್ ಅಲಿ ಅಕ್ಬರ್ ಖಾನ್(ಎಪ್ರಿಲ್ ೧೪, ೧೯೨೨ – ಜೂನ್ ೧೮, ೨೦೦೯), ಇವರು ಪ್ರಖ್ಯಾತ ಸರೋದ್ ವಾದಕರು. ಜಗತ್ತಿನಾದ್ಯಂತ ಇವರು ನೀಡಿರುವ ಸಂಗೀತ ಕಛೇರಿಗಳಿಂದ ಭಾರತೀಯ ಸಂಗೀತ ಪದ್ಧತಿ ಮತ್ತು ಸರೋದಗಳ ಬಗ್ಗೆ ಸಾಕಷ್ಟು ಪ್ರಚಾರ ಮತ್ತು ತಿಳುವಳಿಕೆಯನ್ನು ನೀಡಿದ್ದಾರೆ.

ಹಿನ್ನೆಲೆ, ಶಿಕ್ಷಣ[ಬದಲಾಯಿಸಿ]

ಅಲಿ ಅಕ್ಬರ್ ಖಾನರು ೧೪ ಎಪ್ರಿಲ್ ೧೯೨೨ರಂದು ಬಾಂಗ್ಲಾದೇಶದ ಶಿವಪುರ ಜಿಲ್ಲೆಯ ಕೊಮಿಲ್ಲಾ ಎಂಬಲ್ಲಿ ಅಲ್ಲಾವುದ್ದೀನ್ ಖಾನ್ ಮತ್ತು ಮದೀನಾ ಬೇಗಮ್ ಇವರ ಪುತ್ರರಾಗಿ ಜನಿಸಿದರು. ಇವರ ತಂದೆಯಾದ ಬಾಬಾ ಅಲ್ಲವುದ್ದೀನ್ ಖಾನರು ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು, ತಮ್ಮ ಜೀವಿತಾವಧಿಯಲ್ಲಿ ಸೇನಿಯಾ ಮೈಹರ್ ಘರಾಣೆಯ ರೂಪರೇಷೆಯನ್ನೇ ಬದಲಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಇವರ ತಂದೆಯವರ ಹತ್ತಿರ ಗಾಯನ ಮತ್ತು ವಾದ್ಯ ವಾದನದ ಶಿಕ್ಷಣವನ್ನು ಪ್ರಾರಂಭಿಸಿದರು. ಚಿಕ್ಕಪ್ಪನಾದ ಫಕೀರ್ ಅಫ್ತಾಬುದ್ದೀನರ ಹತ್ತಿರ ತಬಲಾ ವಾದನವನ್ನು ಕೂಡಾ ಕಲಿತರು. ಮೊದಲು ಅಲ್ಲಾವುದ್ದೀನ್ ಖಾನರು ಅಲಿ ಅಕ್ಬರರಿಗೆ ಅನೇಕ ವಾದ್ಯ ವಾದನವನ್ನು ಕಲಿಸಿದರು, ನಂತರ ಕೇವಲ ಸರೋದನ್ನು ಅತ್ಯುತ್ತಮ ರೀತಿಯಲ್ಲಿ ಕಲಿಯಲು ತಿಳಿಸಿದರು. ಅನೇಕ ವರ್ಷಗಳ ಕಠಿಣ ತರಬೇತಿಯ ನಂತರ ಅಲಿ ಅಕ್ಬರ್ ಖಾನರು ಸುಮಾರು ಇಪ್ಪತ್ತನೆಯ ವಯಸ್ಸಿನ ಆಸುಪಾಸಿನಲ್ಲಿ ತಮ್ಮ ಮೊದಲ ಸಂಗೀತ ಕಛೇರಿಯನ್ನು ನೀಡಿದರು. ಇವರು ತಮ್ಮ ೨೨ನೇಯ ವಯಸ್ಸಿನಲ್ಲಿ ಜೋಧಪುರದ ಮಹಾರಾಜರ ಆಸ್ಥಾನದಲ್ಲಿ ಆಸ್ಥಾನ ಸಂಗೀತ ವಿದ್ವಾಂಸರಾಗಿ ನೇಮಕಗೊಂಡರು.

ಸಂಗೀತ ಪ್ರಸಾರ, ಸಂಗೀತ ಶಿಕ್ಷಣ, ವಿದೇಶವಾಸ[ಬದಲಾಯಿಸಿ]

ಭಾರತದ ಉದ್ದಗಲವಲ್ಲದೆ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಪ್ರಪಂಚದಾದ್ಯಂತ ಸರೋದ್ ವಾದ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.೧೯೫೬ರಲ್ಲಿ ಕಲ್ಕತ್ತಾದಲ್ಲಿ 'ಅಲಿ ಅಕ್ಬರ್ ಖಾನ್ ಕಾಲೇಜ್ ಆಫ್ ಮ್ಯೂಸಿಕ್'ನ್ನು ಸ್ಥಾಪಿಸಿದರು.೧೯೫೮ರಲ್ಲಿ ಅಮೆರಿಕದಲ್ಲಿ ಹಾಗೂ ೧೯೮೫ರಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿಯೂ ಶಾಖೆಗಳನ್ನು ತೆರೆದು ಸಂಗೀತ ಪ್ರಸಾರ ಮಾಡಿದರು.

ಸಂಗೀತ ಶೈಲಿ[ಬದಲಾಯಿಸಿ]

ಸರೋದ್ ವಾದನೆದಲ್ಲಿ ಒಂದು ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಖಾನರು, ಭಾರತೀಯ ಸಂಗೀತದ ಪ್ರಥಮ ಎಲ್.ಪಿ ರೆಕಾರ್ಡನ್ನು ಪಾಶ್ಚಾತ್ಯ ದೇಶದಲ್ಲಿ ದ್ವನಿ ಮುದ್ರಿಸಿದವರೆಂಬ ಖ್ಯಾತಿ ಪಡೆದವರು.

ಜುಗಲ್ ಬಂಧಿ[ಬದಲಾಯಿಸಿ]

ತಮ್ಮ ಸಮಕಾಲೀನರಾದ ಪಂಡಿತ್ ರವಿಶಂಕರ್,ಪಂಡಿತ್ ನಿಖಿಲ್ ಬ್ಯಾನರ್ಜಿ,ಡಾ.ಎಲ್.ಸುಬ್ರಹ್ಮಣ್ಯಂ ಮುಂತಾದವರೊಂದಿಗೆ ನಡೆಸಿದ ಜುಗಲ್ ಬಂದಿಕಾರ್ಯಕ್ರಮಗಳು ಅತ್ಯಂತ ಪ್ರಸಿದ್ಧವಾಗಿವೆ.

ಪ್ರಶಸ್ತಿಗಳು[ಬದಲಾಯಿಸಿ]

೧೯೮೯ರಲ್ಲಿ ಪದ್ಮ ವಿಭೂಷಣ, ೧೯೯೧ ರಲ್ಲಿ ಮೆಕಾರ್ಥರ್ ಫೆಲೋಷಿಪ್,೧೯೯೧-೯೨ರಲ್ಲಿ ಕಾಳಿದಾಸ ಸಮ್ಮಾನ್ ಇವರಿಗೆ ದೊರೆತ ಗೌರವಗಳಲ್ಲಿ ಕೆಲವು.