ಹಟ್ಟಿಯಂಗಡಿ ನಾರಾಯಣ ರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಟ್ಟಿ ಅಂಗಡಿ ನಾರಾಯಣರಾಯರು
ಜನನ: ಫೆಬ್ರವರಿ ೧೧, ೧೮೬೩
ಜನನ ಸ್ಥಳ: ಮಂಗಳೂರು, ಮಂಗಳೂರು ಜಿಲ್ಲೆ, (ಮದ್ರಾಸ್ ಪ್ರಾವಿನ್ಸ್)
ನಿಧನ:ಜೂನ್ ೧೭, ೧೯೨೧
ಮುಂಬಯಿ, (ಬಾಂಬೆ ಪ್ರಾವಿನ್ಸ್)
ವೃತ್ತಿ: ಕವಿ,ಸಾಹಿತಿ,ವಕೀಲರು, ಪ್ರಾಧ್ಯಾಪಕ,ಪತ್ರಕರ್ತ,ಅನುವಾದಕಾರ, ಆಂಗ್ಲ ಪತ್ರಿಕೆಯ ಉಪಸಂಪಾದಕ, ಹಸ್ತಸಾಮುದ್ರಿಕ ಶಾಸ್ತ್ರಜ್ಞ,
ರಾಷ್ಟ್ರೀಯತೆ:ಭಾರತೀಯ
ಸಾಹಿತ್ಯದ ವಿಧ(ಗಳು):ಕಾಲ್ಪನಿಕ
ವಿಷಯಗಳು:ಇಂಗ್ಲೀಷ್ ಭಾಷೆಯ ಹುಲುಸಾದ ಕವನಗಳನ್ನು ಆರಿಸಿಕೊಂಡು ಕನ್ನಡಕ್ಕೆ ಅನುವಾದಮಾಡುವ ಕಾರ್ಯ.
ಸಾಹಿತ್ಯ ಶೈಲಿ:ನವೋದಯ ಸಾಹಿತ್ಯ
ಪ್ರಮುಖ ರಚನೆಗಳು:'ಆಂಗ್ಲ ಕವಿತಾವಳಿ,' 'ಟ್ರಾಕ್ಸ್ ಫಾರ್ ಥಿಂಕರ್ಸ್'
ಬಾಳ ಸಂಗಾತಿ:ಹೆಂಡತಿ ಮತ್ತು
ಮಕ್ಕಳು:೩ ಜನ ಮಕ್ಕಳೂ ಪ್ಲೇಗ್ ಮಹಾಮಾರಿಯಿಂದ ನಿಧನರಾದರು.

ಹಟ್ಟಿಯಂಗಡಿ ಪರಮೇಶ್ವರಯ್ಯ ನಾರಾಯಣರಾಯರು [೧] (೧೮೬೩-೧೯೨೧) ಹೊಸಗನ್ನಡ ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. ಆಂಗ್ಲ ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಹೊಸಗನ್ನಡದ ನವೋದಯಕ್ಕೆ ಅಡಿಗಲ್ಲು ಹಾಕಿದವರು. [೨] ೧೮೬೩ ಫೆಬ್ರವರಿ ೧೧ ರಂದು ಮಂಗಳೂರಿನಲ್ಲಿ ಜನಿಸಿದರು. ಕಾರ್ಕಳ ಮತ್ತು ಮದರಾಸುಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ವಕೀಲರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ ಕಾನೂನು ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ ಮುಂಬಯಿಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(೧೯೦೩) ಅಲ್ಲಿಯೇ ನೆಲೆಸಿದರು.

ಬರವಣಿಗೆ ಆರಂಭ[ಬದಲಾಯಿಸಿ]

ಇವರು ತಮ್ಮ 50ನೆಯ ವರ್ಷದಲ್ಲಿ ಕನ್ನಡದಲ್ಲಿ ಬರೆವಣಿಗೆ ಆರಂಭಿಸಿದರು.[೩] ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಆರಂಭಗೊಂಡದ್ದು ಇವರ ಬರೆವಣಿಗೆಗೆ ಸ್ಫೂರ್ತಿಯಾಯಿತು. ಇದೇ ಅವಧಿಯಲ್ಲಿ ಮಂಗಳೂರಿನ ಸ್ವದೇಶಾಭಿಮಾನಿ, ಧಾರವಾಡದ ವಾಗ್ಭೂಷಣ ಮೊದಲಾದ ಪತ್ರಿಕೆಗಳಲ್ಲಿ ಆಂಗ್ಲಕವಿತಾನುವಾದವನ್ನು ಪ್ರಕಟಿಸತೊಡಗಿದರು. ಇಂಥ ಅನುವಾದಗಳ ಸಂಕಲನವೇ ಇವರ ಆಂಗ್ಲಕವಿತಾವಳಿ(೧೯೧೯).

ಆಸಕ್ತಿಯ ವಿಷಯ[ಬದಲಾಯಿಸಿ]

ಭಾಷಾಶಾಸ್ತ್ರ ಮತ್ತು ತತ್ತ್ವಜ್ಞಾನಗಳು ಇವರ ವಿಶೇಷ ಆಸಕ್ತಿಯ ವಿಷಯಗಳಾಗಿದ್ದವು. ಇವರ ಕನ್ನಡ ಕಥಾನಕ, ಕನ್ನಡಭಾಷೆ, ಅದರ ಶಬ್ದಸಂಪತ್ತುಗಳನ್ನು ಕುರಿತು ಮಾಡಿದ ಮೌಲಿಕ ವಿವೇಚನೆಯಾಗಿದೆ. ಕನ್ನಡ ಶಬ್ದಗಳು ದೇಶ್ಯ, ಸಂಸ್ಕೃತತತ್ಸಮ-ತದ್ಭವ ಎಂಬಿಷ್ಟೇ ಪರಿಮಿತಿಯಲ್ಲಿವೆ ಎಂದು ತಿಳಿದಿದ್ದ ಆ ಕಾಲದಲ್ಲಿ, ಕನ್ನಡದಲ್ಲಿ ಪ್ರಾಕೃತದಿಂದಲೂ ಸ್ವೀಕೃತವಾಗಿರುವ ಹಲವಾರು ಶಬ್ದ, ಪದಗಳ ಕಡೆಗೆ ಎಲ್ಲರ ಗಮನವನ್ನು ವಿಸ್ತರಿಸಿದರು. ಈ ಎಲ್ಲ ಭಾಷೆಗಳೊಂದಿಗೆ ಮರಾಠಿಯನ್ನೂ ಒಳಗೊಂಡು ಮುಂಬಯಿಯ ಏಷ್ಯಾಟಿಕ್ ಸೊಸೈಟಿಯಲ್ಲಿ ನೀಡಿದ ಇವರ ಭಾಷಣ ಬಹಳ ಮಹತ್ತ್ವದ್ದಾಗಿದೆ. ಇವರ ಮಾತೃಭಾಷೆ ಕೊಂಕಣಿಯಲ್ಲೂ ಚಿಂತನೆ ನಡೆಸಿ ಕೊಂಕಣೀಚೆ ಮೂಲಾದರ್ಶೋ (೧೯೧೭) ಎಂಬ ಕೃತಿಯನ್ನು ರಚಿಸಿದ್ದಾರೆ. ಬ್ರಹ್ಮಸಮಾಜದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು ಗಾಯತ್ರಿಮಂತ್ರ, ಭಜನೆಯ ಪದಗಳನ್ನು ಕನ್ನಡದಲ್ಲಿ ತಂದದ್ದು ಮಾತ್ರವಲ್ಲ ಅವುಗಳನ್ನು ಸೊಗಸಾಗಿ ಹಾಡುತ್ತಿದ್ದರು. 'ಟ್ರಾಕ್ಸ್ ಫಾರ್ ಥಿಂಕರ್ಸ್' ಎಂಬ ಇವರ ಕಿರುಹೊತ್ತಗೆಯೂ ಈ ನಿಟ್ಟಿನದೇ ಆಗಿದೆ.

ಕೃತಿ ರಚನೆ[ಬದಲಾಯಿಸಿ]

ಇವರು ಬರೆದದ್ದು ಕಡಿಮೆಯಾದರೂ ಮೌಲ್ಯ ಹಾಗೂ ಸತ್ತ್ವದಲ್ಲಿ ಹಿರಿಯದಾಗಿದೆ. ಇವರ ಅನುವಾದಿತ ಕವಿತೆಗಳಿಗೆ ಐತಿಹಾಸಿಕ ಮಹತ್ತ್ವವಿದೆ. ಇವರ ಆಂಗ್ಲಕವಿತಾವಳಿಯ ವಿಸ್ತೃತ ಪ್ರತಿ ೧೯೮೫ ರಲ್ಲಿ ಪ್ರಕಟಗೊಂಡಿದೆ (ಪಂಡಿತಾರಾಧ್ಯ). ಇವರ ಗದ್ಯ ಲೇಖನಗಳ ಸಂಪುಟವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

ಕೃತಿಗಳು[ಬದಲಾಯಿಸಿ]

  1. ಪ್ರಸಿದ್ಧ ಹಿಂದೂದೇಶದ ಸ್ತ್ರೀಯರು (೧೮೮೭)
  2. ಆಂಗ್ಲ ಕವಿತಾವಳಿ (೧೯೧೯)
  3. ಇಂಗ್ಲೀಷ್ ಕನ್ನಡ ನಿಘಂಟು (೧೯೧೯)
  4. ಕನ್ನಡ ಕಥಾನಕ (೧೯೧೯)
  5. ಕನ್ನಡ ಕವಿತೆಯ ಭವಿತವ್ಯ
  6. ಬ್ರಾಹ್ಮ ಗೀತಾ
  7. ನಲವತ್ಮೂರು ಹಾಡುಗಳು
  8. ಕೊಂಕಣಿ ಶಬ್ದಾಂ ಸಂಸ್ಕೃತಚೆ ಮೂಲ ಸಾಂಗಚೆ,(ಕೊಂಕಣಿ ೧೯೧೮)
  9. Etymological glossary of southern Konkani (English)

ನಿಧನ[ಬದಲಾಯಿಸಿ]

ಹಟ್ಟಿಯಂಗಡಿ ನಾರಾಯಣರಾಯರು ೧೯೨೧ ಜೂನ್ ೧೭ ರಂದು ನಿಧನರಾದರು.

ಉಲ್ಲೇಖ[ಬದಲಾಯಿಸಿ]

  1. ಪ್ರಜಾವಾಣಿ ಪತ್ರಿಕೆ,ನಾರಾಯಣರಾಯರ ಆಂಗ್ಲ ಕವಿತಾವಳಿ,ಮಧುಸೂಧನ, ೦೭,ಜೂನ್,೨೦೧೫
  2. http://www.ijcrt.org/papers/IJCRT1704274.pdf
  3. https://shodhganga.inflibnet.ac.in/bitstream/10603/1878/9/09_chapter4.pdf

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. ಹಟ್ಟಿ ಅಂಗಡಿ/ಹತ್ತಂಗಡಿ,ಉಡುಪಿ ಜಿಲ್ಲೆಯ ಒಂದು ತಾಲ್ಲೂಕು, ಕುಂದಾಪುರಕ್ಕೆ ಹತ್ತಿರದಲ್ಲಿದೆ Archived 2021-05-18 ವೇಬ್ಯಾಕ್ ಮೆಷಿನ್ ನಲ್ಲಿ.
  2. ಹಟ್ಟಿ ಅಂಗಡಿಯ ಗಣಪತಿ ದೇವಾಲಯ ಪ್ರಸಿದ್ಧಿಯಾಗಿದೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: