ಸದಸ್ಯ:Amritha Nairy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಪಟರಾಳ ಕೃಷ್ಣರಾವ್[ಬದಲಾಯಿಸಿ]

ಜನನ[ಬದಲಾಯಿಸಿ]

1889

ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕು ಹಾಲಗಡಲಿ ಗ್ರಾಮ

ಮರಣ[ಬದಲಾಯಿಸಿ]

1996

ಶಿಕ್ಷಣ[ಬದಲಾಯಿಸಿ]

[೧][೨]

ಬರಹಗಳು[ಬದಲಾಯಿಸಿ]

ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು ಗ್ರಂಥಗಳು

ಜೀವನ[ಬದಲಾಯಿಸಿ]

ಹೈದ್ರಾಬಾದ್ ಕರ್ನಾಟಕದ ಹಿರಿಯ ಕನ್ನಡ ಸಾಹಿತಿ ಸಂಶೋಧಕರಾದ ದಿ. ಶ್ರೀ ಕಪಟರಾಳ ಕೃಷ್ಣರಾಯರು ಕಟ್ಟಾ ಕನ್ನಡಾಭಿಮಾನಿ. ಕನ್ನಡ ಭಾಷೆ ಮತ್ತು ಸಂಸ್ಕøತಿ ಹಾಗೂ ಸಂಶೋಧನೆ ತಮ್ಮ ಬದುಕನ್ನೆ ಮುಡುಪಾಗಿಟ್ಟವರು. ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟ ಈ ಭಾಗ ಬೌದ್ಧ, ಶೈವ, ಜೈನ, ವೈಷ್ಣವ, ವೀರಶೈವ, ಇಸ್ಲಾಂ ಮುಂತಾದ ಧರ್ಮಗಳ ಸಾಮರಸ್ಯದ ಪ್ರದೇಶ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕಲ್ಬುರ್ಗಿ ಜಿಲ್ಲೆ ಬಹುಕಾಲ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು ಉರ್ದು ಮಾಧ್ಯಮದ ಮೂಲಕವಾಗಿ ಕನ್ನಡದ ಪರಿಸ್ಥಿತಿ ಅತ್ಯಂತ ದಯನೀಯವಾಗಿ, ಜೊತೆಗೆ ಮಹಾರಾಷ್ಟ್ರದ ಪ್ರಭಾವಕ್ಕೆ ಸಿಕ್ಕು ಮರಾಠಿ ಭಾಷೆ ಅತ್ಯಂತ ಪ್ರಬಲವಾಗಿರುವಾಗ ಕಲಬುರ್ಗಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಿದ ಕೆಲವು ಮಹನೀಯರಲ್ಲಿ ಕಪಟರಾಳ ಕೃಷ್ಣರಾಯರು ಒಬ್ಬರು. ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ‘ಹಾಲಗಡಲಿ’ ಎಂಬ ಗ್ರಾಮದಲ್ಲಿ 1889ರಲ್ಲಿ ಜನಿಸಿದ ಕಪಟರಾಳರು ಕಲಬುರ್ಗಿಯಲ್ಲಿ ನೆಲಸಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆರಂಭಿಕ ಅಧ್ಯಯನವು ಆ ಕಾಲದಲ್ಲಿ ಅನಿವಾರ್ಯ ಮಾಧ್ಯಮಗಳಾಗಿದ್ದ ಉರ್ದು, ಪಾರಸಿ ಭಾಷೆಯಲ್ಲಿಯೇ ಆಯಿತು. ಮರಾಠಿಯ ಪ್ರಭಾವದಿಂದಾಗಿ ಮರಾಠಿಯನ್ನು ಕಲಿಯುವುದು ಅನಿವಾರ್ಯವಾಯಿತು. ಶ್ರೀಯುತ ಕಪಟರಾಳರು ಬಹುಭಾಷಾ ಬಲ್ಲಿದರಾಗಿರುವಂತೆ ಭಾಷಾಪ್ರೇಮಿಗಳೂ ಆಗಿದ್ದರಯ. ಪುಣೆಗೆ ಹೋಗಿ ಇಂಗ್ಲೀಷ್‍ನಲ್ಲಿ ಕಾನೂನು ಅಭ್ಯಾಸ ಮಾಡಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಪ್ರಯತ್ನಿಸಿದರು. ಕಲಬುರ್ಗಿ ಜಿಲ್ಲೆಯಲ್ಲಿ ಆ ಕಾಲದಲ್ಲಿ ಆಂಗ್ಲ ಭಾಷೆಯಲ್ಲಿ ವಕೀಲ ಶಿಕ್ಷಣವನ್ನು ಪಡೆದವರು ಇವರೊಬ್ಬರೆ ಆಗಿದ್ದರೆಂಬುದು ಗಮನಿಸಬೇಕಾದ ಸಂಗತಿ. ಇಂಗ್ಲೀಷ್, ಮರಾಠಿ, ಉರ್ದು ಮತ್ತು ಫಾರಸಿ ಭಾಷೆಗಳಲ್ಲಿ ನೈಪುಣ್ಯತೆಯನ್ನು ಪಡೆದಿದ್ದರೂ ರಾಯರ ಮನಸ್ಸಿನಲ್ಲಿ ಕನ್ನಡ ಭಾಷಾಭಿಮಾನಕ್ಕೇನೂ ಕೊರತೆ ಇರಲಿಲ್ಲ. ಕನ್ನಡದ ಗಂಡುಮಟ್ಟಿನ ಸ್ಥಳವಾದ ಕಲಬುರ್ಗಿಯಲ್ಲಿ ಇತರ ಭಾಷೆಗಳ ಪ್ರಾಬಲ್ಯದಿಂದಾಗಿ ಕನ್ನಡಕ್ಕೆ ಬಂದೊದಗಿದ ಅಧೋಗತಿಗೆ ಕಪಟರಾಳರ ಮನ ಮಿಡುಕುತ್ತಿತ್ತು. ಹೀಗಾಗಿ ಅವರು ಕನ್ನಡದ ಸಂಘಟನೆ, ಸಾಂಸ್ಕøತಿಕ ಚಟುವಟಿಕೆಗಳ ಕಾರ್ಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ಕನ್ನಡ ಸಾಹಿತ್ಯ ಸಂಘದ ಕ್ರೀಯಾಶೀಲ ಸದಸ್ಯರಾಗಿ ವೈಭವದಿಂದ ನಾಡ ಹಬ್ಬಗಳನ್ನು ಸಂಘಟಿಸಿ ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಪ್ರಚೋದನೆಯನ್ನು ಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರಾಗಿ ಕನ್ನಡ ಪರ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮರಾಠಿ ಮತ್ತು ಉರ್ದು ಮಾಧ್ಯಮಗಳ ಕಪಿಮುಷ್ಠಿಯಲ್ಲಿ ಸಿಲುಕಿದ ಕನ್ನಡವನ್ನು ಹೊರತಂದ ಕೀರ್ತಿ ಕಪಟರಾಳರಿಗೆ ಸಲ್ಲುತ್ತದೆ. ಕೇವಲ, ಸಂಘ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಂದ ಕನ್ನಡಭಾಷೆ ಶ್ರೀಮಂತವಾಗಲಾರದು ಎಂಬ ಸತ್ಯವನ್ನು ಮನಗಂಡ ಕೃಷ್ಣರಾಯರು ಕನ್ನಡ ಸಾಹಿತ್ಯದ ಕೃಷಿಯಲ್ಲಿ ಅದು ಮುಖ್ಯವಾಗಿ ಸಂಶೋಧನೆಯ ಮಾರ್ಗದಲ್ಲಿ ಸಾಗುತ್ತ, ಕನ್ನಡ ಸಾಹಿತ್ಯದ ಇತಿಹಾಸದ ಮೇಲೆ ಹೊಸ ಬೆಳಕನ್ನು ಬೀರಬಲ್ಲ ಉತ್ಕøಷ್ಟವಾದ ಕೃತಿಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ನೀಡಿದರು. ಕನ್ನಡದ ಕಾರ್ಯಕ್ಕಾಗಿ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸುವುದಕ್ಕೆ ರಾಯರು ಹಿಂದೆ ಮುಂದೆ ನೋಡಿಲಿಲ್ಲ. ಆ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕರೆಕೊಟ್ಟ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿಯೂ ಕೃಷ್ಣರಾಯರು ಭಾಗವಹಿಸಿದರು. ವಕೀಲರಾಗಿ, ಬಹುಭಾಷಾ ವಿದ್ವಾಂಸರಾಗಿ, ಗಾಂಧೀವಾದಿಗಳಾಗಿ, ದೇಶಭಕ್ತರಾಗಿ, ಕನ್ನಡದ ಸೇವಕರಾಗಿ, ಕಲಬುರ್ಗಿಯ ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿ, ಹಿರಿಯ ಚಿಂತಕರಾಗಿ, ಕನ್ನಡಿಗರ ಸಂಘಟಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರಾಗಿ, ಕನ್ನಡ ಚಟುವಟಿಕೆಗಳ ಸ್ಪೂರ್ತಿ-ಪ್ರೇರಣೆಯ ಶಕ್ತಿಯಾಗಿ ಹೀಗೆ ಶ್ರೀಯುತ ಕಪಟರಾಳ ಕೃಷ್ಣರಾಯರು ವಿವಿಧ ಮುಖಗಳ ಸುಸಂಸ್ಕøತ, ಸೌಜನ್ಯಪೂರ್ಣ, ಸ್ನೇಹಪರ ಜೀವಿಯಾಗಿದ್ದರು.

ಕನ್ನಡ ಇತಿಹಾಸ ಸಂಶೋಧಕರಲ್ಲಿ ಅಗ್ರಗಣ್ಯರು ಮತ್ತು ಪ್ರಾತಃ ಸ್ಮರಣೀಯರು. ಇಂತಹ ಕನ್ನಡದ ಹಿರಿಯ ಚೇತನ ತನ್ನ ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಯನ್ನು ಮಾಡುತ್ತ 1996ರಲ್ಲಿ ನಮ್ಮಿಂದ ಅಗಲಿದರು. ಯಾವ ವರ್ಗ-ವರ್ಣ, ಲಿಂಗ ಭೇದವಿಲ್ಲದೆ ಅವರು ಮಾಡಿದ ಕಾರ್ಯ ಸಮಾಜಕ್ಕೆ ಅವರು ನೀಡಿದ ವಿಚಾರಪೂರ್ಣ ಮತ್ತು ಸಂಶೋಧನಾ ಕೃತಿಗಳು ತಮ್ಮದೆ ಆದ ಮಹತ್ವವನ್ನು ಹೊಂದಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಪಟರಾಳ ಕೃಷ್ಣರಾಯರ ಬರಹಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಒಂದು ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು. ಎರಡು: ಗ್ರಂಥಗಳು.

ಲೇಖನಗಳು[ಬದಲಾಯಿಸಿ]

ಕಪಟರಾಳರು ಮೊದಲು ತಮ್ಮ ಸಾಹಿತ್ಯ ಸೇವೆಯನ್ನು ಸಂಶೋಧನ ಕಾರ್ಯವನ್ನು ಆರಂಭ ಮಾಡಿದ್ದು ಪತ್ರಿಕೆಗಳ ಮೂಲಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಪರವಾಗಿ ಸಂಘಟನೆಯತ್ತ ಪೂರ್ಣ ಒಲವನ್ನು ಹೊಂದಿದ ರಾಯರು ಬಿಡಿ ಲೇಖನಗಳನ್ನು ಬರೆಯುವುದರ ಮೂಲಕವಾಗಿ ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸಿದರು, ಶರಣಸಾಹಿತ್ಯ ಪರಿಷತ್ ಪತ್ರಿಕೆ, ಪ್ರಬುದ್ಧ ಕರ್ನಾಟಕ, ಹೈದ್ರಾಬಾದ್ ಇಂದು, ಸಂಯುಕ್ತ ಕರ್ನಾಟಕ, ಜಯಂತಿ ಮುಂತಾದ ಪತ್ರಿಕೆಗಳ ಮೂಲಕ ತಮ್ಮ ವಿಚಾರಪೂರ್ಣ ಲೇಖನಗಳನ್ನು ಪ್ರಕಟಿಸಿದರು. ಇವರ ಹಲವು ಲೇಖನಗಳನ್ನು ಸಂಗ್ರಹ ಮಾಡಿ “ಕರ್ನಾಟಕ ಸಂಸ್ಕøತಿಯ ಸಂಶೋಧನೆ” ಎಂಬ ಹೆಸರಿನಿಂದ ಪ್ರಕಟಿಸಿದ, ಕಪಟರಾಳರ ಸ್ನೇಹಿತರಾದ ರಾಯಚೂರು ಜಿಲ್ಲೆಯ ಕುರ್ಡಿ ಹನುಮಂತಾಚಾರ್ಯರು ‘ತಮ್ಮ ಸಂಪಾದಕನ ಅರಿಕೆ’ ಎಂಬ ಲೇಖನದಲ್ಲಿ “ಶ್ರೀ ಕೃಷ್ಣರಾಯರ ವಿದ್ವತ್ಪೂರ್ಣವಾದ ಪ್ರಚೋದನಾತ್ಮಕವಾದ ಲೇಖನಗಳು ನಮ್ಮ ಪ್ರಾಂತದ ಒಂದು ಕಾಲದ ಇತಿಹಾಸ. ಸಂಸ್ಕøತಿ, ಧರ್ಮ- ದರ್ಶನಗಳ ಮೇಲೆ ಪ್ರಕಾಶ ಚೆಲ್ಲುತ್ತವೆ..... ರಾಯರ ಲೇಖನಗಳ ಸಂಗ್ರಹದ ಪ್ರಕಟಣೆಯೂ ನಮ್ಮ ಭಾಗದ ಲೇಖಕರಿಗೆ ಮಾರ್ಗದರ್ಶಕವಾಗುವುದು” ಎಂದು ಹೇಳಿರುವ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇವರ ಈ ಲೇಖನದ ಕೃತಿಗೆ ಮುನ್ನುಡಿಯನ್ನು ಬರೆದ ಬಿ.ಶಿವಮೂರ್ತಿ ಶಾಸ್ತ್ರೀಯವರು: “ಇವರ ಬರಹಗಳು ಓದುಗರ ಮನಸ್ಸಿನಲ್ಲಿ ವಿಚಾರ ಕ್ರಾಂತಿಯನ್ನುಂಟುಮಾಡುತ್ತವೆ, ಸತ್ಯದ ಬುನಾದಿಯನ್ನು ತಿಳಿಯಲು ಪ್ರಚೋದನೆಯನ್ನುಂಟುಮಾಡುತ್ತವೆ. ಹಲಲವು ಸಂದರ್ಭದಲ್ಲಿ ವಾಚಕರ ಮನಸ್ಸಿನಲ್ಲಿರುವ ಮೂಢನಂಬಿಕೆಗಳನ್ನು ಹೊಡೆದೊಡಿಸುತ್ತವೆ ಎಂದು ನಾನು ಹೇಳಬಯಸುತ್ತೇನೆ” ಎಂಬ ಮಾತುಗಳು ಕಪಟರಾಳರಲ್ಲಿದ್ದ ಸಂಶೋಧನಾ ಲೇಖನಗಳ ವೈಚಾರಿಕ ಪ್ರಖರತೆಯನ್ನು ಎತ್ತಿತೋರಿಸುತ್ತವೆ.

ಎರಡನೆಯ ಮುನ್ನುಡುಯನ್ನು ಬರೆದಿರುವ ವಿ. ಸೀತಾರಾಮಯ್ಯನವರು “ಮನಸ್ಸಿನ ಶ್ರದ್ಧೆ ಎಲ್ಲಿ ದೊಡ್ಡದಾಗುತ್ತದೆನೋ ಅಲ್ಲಿ ಬಡತನ- ಸಿರಿತನಗಳ ಲೆಕ್ಕ ಹತ್ತುವುದಿಲ್ಲ: ಅಂತಹ ಮನಸ್ಸು ಕೃಷ್ಣರಾಯರಲ್ಲಿದೆ. ಅಪಾರ ವಿದ್ಯಾ ಸಾಧನೆಯನ್ನು ಮಾಡಿದ್ದಾರೆ. ಸಂಶೋಧಕನಿಗೆ ಇರಬೇಕಾದ ಸತ್ಯದೃಷ್ಟಿ, ಸತ್ಯದ ಅನ್ವೇಷಣೆ, ಪ್ರಮಾಣ ನಡೆಸಿದಲ್ಲಿಗೆ ಹೋಗುವ ಪ್ರಾಮಾಣೀಕತೆ ಬೇಕು. ಅನವಧಾನ, ಪ್ರಮಾದ, ಹಠ, ಆಕ್ರೋಶ ಇಲ್ಲವೆ ಇನ್ನಾವುದೋ ಸಾಧನೆಗಾಗಿರುವ ಪ್ರಮಾಣ ಬೇರಿದ್ದು ಇಂಥವೆಲ್ಲ ಸತ್ಯಸಾಧನೆಗೆ ಅಪಕಾರಕ. ಕೃಷ್ಣರಾಯರ ಲೇಖನಗಳಲ್ಲಿ ಸಂಶೋಧನೆಗೆ ಇರಬೇಕಾದ ಎಲ್ಲ ಗುಣಗಳನ್ನು ಕಾಣುತ್ತೇವೆ” ಎಂಬ ಮಾತುಗಳಲ್ಲಿ ಕಪಟರಾಳರ ಲೇಖನಗಳಲ್ಲಿರುವ ಸತ್ಯದೃಷ್ಟಿಯ ಅರ್ಹತೆಯನ್ನು ಕಾಣುತ್ತೇವೆ. ಬಹುಭಾಷಾ ವಿದ್ವಾಂಸರಾದ ಕಪಟರಾಳರ ಬರವಣಿಗೆ ಆರಂಭವಾದದ್ದು 1924ರಲ್ಲಿ, ಅವರ ಪ್ರಥಮ ಸಂಶೋಧನಾತ್ಮಕ ಲೇಖನ ‘ಕರ್ಮವೀರ’ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದಾಗಿ ತಿಳಿದು ಬರುತ್ತದೆ. ಜಯಂತಿ ಮತ್ತು ತತ್ವವಾದ ಪತತ್ರಿಕೆಗಳಲ್ಲಯೂ ಅವರ ಲೇಖನಗಳು ಪ್ರಕಟವಾಗಿವೆ.

ಗ್ರಂಥಗಳು[ಬದಲಾಯಿಸಿ]

ಕೃಷ್ಣರಾಯರ ಬಹುಮಟ್ಟಿನ ಸಂಶೋಧನಾ ಲೇಖನಗಳು ”ಕರ್ನಾಟಕ ಸಂಸ್ಕøತಿ ಸಂಶೋಧನೆ” ಎಂಬ ಕೃತಿಯಲ್ಲಿ ಅಡಕವಾಗಿವೆ. ಹೆಚ್ಚಾಗಿ ಸಾಮಾಜಿಕ ಕಾರ್ಯಕರ್ತರಾಗಿ ಕಾರಣರಾದ ಕಪಟರಾಳರಿಗೆ ಹೆಚ್ಚು ಬರವಣಿಗೆ ಮಾಡಲು ಭಾಷೆಯ ಬೆಳವಣಿಗೆಗೆ ಕಾರಣರಾದ ಕಪಟರಾಳರಿಗೆ ಹೆಚ್ಚು ಬರವಣಿಗೆ ಮಾಡಲು ಸಾಧ್ಯವಾಗಲಿಲ್ಲ ಎಂಬ ವಿಷಯ ತಿಳಿದು ಬರುತ್ತದೆ. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯಿಂದಾಗಿ ಕೃತಿಗಳನ್ನು ಪ್ರಕಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇವರ ಹರಿತವಾದ ಲೇಖನಿಯನ್ನು, ದಾಖಲಿಸಬೇಕಾದ ಮಹತ್ವದ ಸಂಶೋಧನಾ ಕಾರ್ಯವನ್ನು ಗಮನಿಸಿದ ಕೆಲವು ಅಭಿಮಾನಿಗಳು ಇವರ ಕೃತಿಗಳನ್ನು ಹೊರತರುವಲ್ಲಿ ಪ್ರಯತ್ನಿಸಿದ್ದಾರೆ. ಪ್ರಕಟವಾದ ಕೃತಿಗಳು ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ನಾಲ್ಕು: 1. ಕರ್ನಾಟಕದ ಲಾಕುಳ ಶೈವರ ಇತಿಹಾಸ: (ಕನ್ನಡ ಅಧ್ಯಯನ ಸಂಸ್ಥೆ; ಮೈಸೂರು, 1958) 2. ತಂದೆ ಮಗಳಿಗೆ ಬರೆದ ಪತ್ರಗಳು: (ಭಾಷಾಂತರ ಗ್ರಂಥ) 3. ಕರ್ನಾಟಕ ಸಂಸ್ಕøತಿ ಸಂಶೋಧನೆ: (28 ಲೇಖನಗಳ ಸಂಗ್ರಹ): ಉಷಾ ಸಾಹಿತ್ಯ ಮಾಲೆ; ಮೈಸೂರು, 1970 4. ಸುರಪುರ ಸಂಸ್ಥಾನದ ಇತಿಹಾಸ: ಪ್ರಕಾಶಕರು, ಮಂಜುನಾಥ ಪ್ರಕಾಶನ, ರಾಜಾಜಿನಗರ ಬೆಂಗಳೂರು, 1977 ಈ ಪ್ರಕಟವಾದ ಕೃತಿಗಳಲ್ಲದೆ ಶರಣಸಾಹಿತ್ಯ ಸಂಪುಟ -ಸಂಚಿಕೆ- 47 ರಲ್ಲಿ ಚೈತನ್ಯ ಸಂಪ್ರದಾಯ ಮತ್ತು ಶರಣಸಾಹಿತ್ಯದ ನವೆಂಬರ್-ಡಿಸೆಂಬರ್ ಸಂಚಿಕೆಯಲ್ಲಿ ‘ಸಿದ್ಧ ಮಾರ್ಗವೂ ಮತ್ತು ವೀರಶೈವ ಸಂಪ್ರದಾಯವೂ’ ಎಂಬ ಲೇಖನಗಳು ಪ್ರಕಟವಾಗಿರುವುದಾಗಿ ತಿಳಿದು ಬರುತ್ತದೆ.

ಕರ್ನಾಟಕ ಸಂಸ್ಕøತಿಯ ಸಂಶೋಧನೆ[ಬದಲಾಯಿಸಿ]

ಕನ್ನಡ ಸಾಹಿತ್ಯದ ವಿವಿಧ ಮುಖ ದರ್ಶಿಸುವ 28 ಸಂಶೋಧನಾ ಲೇಖನಗಳು ಈ ಗ್ರಂಥದಲ್ಲಿ ಇವೆ. ಈ ಲೇಖನಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ 18 ಲೇಖನಗಳು, ಎರಡನೆಯ ಭಾಗದಲ್ಲಿ 3 ಲೇಖನಗಳು, ಮೂರನೆಯ ಭಾಗದಲ್ಲಿ 7ಲೇಖನಗಳು ಪ್ರಕಟವಾಗಿದ್ದರೂ ಕೃತಿಯ ಕೊನೆಗೆ ಪರಿಶಿಷ್ಟದಲ್ಲಿ ಆಯಾಲೇಖನಗಳು ಪ್ರಕಟವಾದ ಪತ್ರಕೆ ಮತ್ತು ವರ್ಷಗಳ ವಿವರಗಳನ್ನು ಪಟ್ಟಿಮಾಡಿಕೊಡಲಾಗಿದೆ. ಈ ಕೃತಿಗೆ ಮೊದಲನೆಯ ಮುನ್ನುಡಿಯನ್ನು ವಿ. ಸೀತಾರಾಮಯ್ಯನವರು ಬರೆದಿದ್ದಾರೆ. ಇದನ್ನು ಸಂಪಾದಿಸಿದವರು ವಿದ್ವಾನ್ ಕುರಡಿ ಹನುಮಂತಾಚಾರ್ಯರು ವಿಷ್ಣು ವಿವರಗಳ ಈಗ್ರಥದ ಬಾಹ್ಯ ದರ್ಶನವಾದರೆ, ಕೃತಿಯ ಒಳಹೊಕ್ಕಾಗ ಮೊದಲ ಭಾಗದಲ್ಲಿ ಬರುವ ಲೇಖನಗಳು-

1. ರೇವಣಸಿದ್ಧನ ಉತ್ಪತ್ತಿಯ ಕಲ್ಪನೆಯ ವಿಕಾಸ ಮತ್ತು ಅವನ ಕಾಲ. 2. ಹರಿಹರನು ನಿರೂಪಿಸಿದ ರೇವಣಸಿದ್ಧೇಶ್ವರನ ಸಮಕಾಲೀನರು. 3. ಸಿದ್ಧರಾಮೇಶ್ವರನ ಸಂಪ್ರದಾಯ ಯಾವುದು? 4. ಸಿದ್ಧರಾಮೇಶ್ವರನಿಗೆ ಚೆನ್ನಬಸವೇಶ್ವರನಿಂದ ಶಿವದೀಕ್ಷೆಯಾದುದು ಐತಿಹಾಸಿಕವೆ? 5. ಮಹಾನುಭಾವ ಪಂಥ ಶಿವಾನುಭವ ಪಂಥಗಳ ಹಿನ್ನಲೆ. 6. ವೀರಶೈವರಲ್ಲಿ ಸಾಂಪ್ರದಾಯಿಕ ಭೇದವಿಲ್ಲವೆ? 7. ಅಲ್ಲಮ ಪ್ರಭು ಮತ್ತು ನಾಥ ಸಂಪ್ರದಾಯ 8. ಅಲ್ಲಮ ಪ್ರಭು 9. ಅಲ್ಲಮನೋ-ಅಲ್ಲಮಯ್ಯನೋ? 10. ಬಸವೇಶ್ವರನು ನಾಥ -ಸಿದ್ಧ ಪಂಥ ವಿಚಾರ 12. ಬಸವೇಶ್ವರನ ವಂಶಕ್ರಮ 13. ಬಸವ- ಬಿಜ್ಜಳರ ಇತಿಹಾಸದ ಪುನರ್ ವಿಮರ್ಶೆ 14. ಬಸವೇಶ್ವರನೂ ಸ್ತ್ರೀ ಸ್ವಾಂತಂತ್ರ್ಯವೂ 15. ಸಾವಳಿ ಶಿವಲಿಂಗೇಶ್ವರ ಚರಿತ್ರೆ 16. ವೀರಶೈವ ಸಂಶೋಧನೆ 17. ಶಿವಾನುಭವ ಮಂಟಪವು ಐತಿಹಾಸಿಕವೆ? 18. ಕರ್ನಾಟಕ – ಮಹಾರಾಷ್ಟ್ರದಲ್ಲಿ ಚೈತನ್ಯ ಸಂಪ್ರದಾಯ

      ಎರಡನೆಯ ಭಾಗದಲ್ಲಿ:

19. ಹಳಗನ್ನಡ - ಹೊಸಗನ್ನಡ ಐತಿಹಾಸಿಕ ವಿಮೋಚನೆ 20. ನಮ್ಮ ನಾಡು- ನುಡಿಯ ಇತಿಹಾಸ 21. ಕನ್ನಡ ಶಾಸನಗಳ ಅಭ್ಯಾಸ

    ಮೂರನೆಯ ಭಾಗದಲ್ಲಿ:

22. ಕಂಪಿಲನೂ ಅವನ ಸ್ಥಾನಮಾನವೂ 23. ಮೊದಲನೆಯ ಹರಿಹರರಾಯ 24. ಶ್ರೀ ಚಂದ್ರಲಾ ಪರಮೇಶ್ವರಿ 25. ಪುರುಷಾರ್ಥ ಪ್ರಭೋದ 26. ಹರಿದಾಸರ ಪರಂಪರೆ 27. ಸಾವಸಿಗರು ಕಾಶ್ಮೀರ ದೇಶದ ಬ್ರಾಹ್ಮಣರು 28. ವಸ್ತು ಸಂಗ್ರಹ

ಇಲ್ಲಿ ಬರೆದಿರುವ ಒಂದೊಂದು ಸಂಶೋಧನಾ ಲೇಖನಗಳೂ ಸಹಿತ ಆಯಾ ವಿಷಯದ ಕುರಿತು ಹೊಸ ಬೆಳಕು, ಚಿಂತನೆಗೆ ಆಸ್ಪದ ನೀಡುತ್ತವೆ. ವಿಷಯ ಪ್ರತಿಪಾದನೆಗಾಗಿ  ಲೇಖಕರು ಲಭ್ಯವಿರುವ ಶಾಸನಗಳು ಮತ್ತು ಕೃತಿಗಳನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಬರಹ ಅತ್ಯಂತ ಆಳವಾಗಿದ್ದು ಸಂಶೋಧನಾ ಸೂತ್ರಗಳ ಹಿನ್ನಲೆಯಲ್ಲಿ ಹೊಸ ಆಕಾರಗಳನ್ನು ಸಂಗ್ರಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಅವರ ಹಲವು ಲೇಖನಗಳಲ್ಲಿ ವಾದ-ವಿವಾದಗಳನ್ನು ಸೃಷ್ಟಿಸುವ ವಿಷಯಗಳಿದ್ದರೂ ಯಾವ ಪೂರ್ವಾಗ್ರಹಪೀಡಿತ ದೃಷ್ಟಿಯಿಲ್ಲದೆ ಆಕರಗಳ ನಿದರ್ಶನದ ಹಿನ್ನಲೆಯಲ್ಲಿ ಚರ್ಚಿಸಲು ರಾಯರು ಹಿಂಜರಿಯಲಿಲ್ಲ. ಉದಾಹರಣೆಗೆ: ರೇವಣಸಿದ್ಧ, ಅಲ್ಲಮಪ್ರಭು, ಬಸವೇಶ್ವರ ಕುರಿತ ಲೇಖನಗಳನ್ನು ನೋಡಬಹುದು. 

 ಅದೇ ರೀತಿಯಾಗಿ, ವೀರಶೈವರಲ್ಲಿ ಸಂಪ್ರದಾಯಿಕ ಭೇದವಿಲ್ಲವೆ? ಶಿವಾನುಭವ ಮಂಟಪವು ಐತಿಹಾಸಿಕವೇ? ಬಸವ - ಬಿಜ್ಜಳರ ಇತಿಹಾಸದ ಪುನರ್ ವಿಮರ್ಶೆಗಳ, ಹರಿದಾಸರ ಪರಂಪರೆ ಮುಂತಾದ ಲೇಖನಗಳು ಅವರ ಅಪಾರ ದೂರದೃಷ್ಟಿ ಸಂಶೋಧನೆಯ ಫಲವಾಗಿ ಸೃಷ್ಟಿಗೊಂಡಿವೆ. ನಮ್ಮ ನಾಡ - ನುಡಿಯ ಇತಿಹಾಸ 1942ರಲ್ಲಿ ಪ್ರಕಟಗೊಂಡ ಲೇಖನವಾಗಿದ್ದು ರಾಯಚೂರು ಮತ್ತು ಕಲಬುರ್ಗಿ ಜಿಲ್ಲೆಗಳ ಕನ್ನಡ ಸಾಂಸ್ಕøತಿಕ ಪರಂಪರೆಯನ್ನು ವಿವರಿಸಿದ್ದಾರೆ. ಶ್ರೀ ಚಂದ್ರಲಾ ಪರಮೇಶ್ವರಿ ಲೇಖನದಲ್ಲಿ ಸನ್ನತಿ ಕ್ಷೇತ್ರದ ಪ್ರಾಚೀನ ಅವಶೇಷಗಳ ಪೂರ್ಣ ವಿವರಗಳು ಲಭ್ಯವಾಗುತ್ತವೆ. ಹೀಗೆ ಇಲ್ಲಿರುವ ಪ್ರತಿಯೊಂದು ಲೇಖನವು ಕಪಟರಾಳರಲ್ಲಿರುವ ಆಳವಾದ ಅಧ್ಯಯನ, ಐತಿಹಾಸಿಕ ಪ್ರಜ್ಞೆಯ ದ್ಯೋತಕವಾಗಿ ನಿಲ್ಲುತ್ತವೆ.
ಹಲವು ವಿಮರ್ಶಕರ ಅಭಿಪ್ರಾಯದಂತೆ ಈ ಕೃತಿಯ ಇತಿಹಾಸ ಸಂಶೋಧಕರಿಗೊಂದು ಕೈದೀವಟಿಗೆ.

ಸುರಪುರ ಸಂಸ್ಥಾನದ ಇತಿಹಾಸ[ಬದಲಾಯಿಸಿ]

 ‘ಸುರಪುರ ಸಂಸ್ಥಾನದ ಇರಿಹಾಸ’ ಕೃತಿಯು ಅತ್ಯಂತ ಮೌಲಿಕ ಸಂಶೋಧನಾ ಕೃತಿಯಾಗಿದೆ. ಈ ಪುಸ್ತಕದ ಪ್ರಕಾಶಕರು ಮಂಜುನಾಥ ಪ್ರಕಾಶಕನ, ರಾಜಾಜಿನಗರ ಬೆಂಗಳೂರು. 1977ರಲ್ಲಿ ಪ್ರಥಮ ಮುದ್ರಣ ಪ್ರಕಟವಾಗಿದೆ. ಸುರಪುರ ಸಂಸ್ಥಾನ  ವಂಶಸ್ಥರು ಮತ್ತು ಮಾಜಿ ಲೋಕಸಭಾ ಸದಸ್ಯ ರಾಜಾ ವೆಂಕಟಪ್ಪ ನಾಯಕ ಅವರು ಈ ಪುಸ್ತಕಕ್ಕೆ ಮೊದಲ ಮಾತುಗಳನ್ನು ಬರೆದು ಕಪಟರಾಳರ ಕಾರ್ಯವನ್ನು, ಅವರ ಸಂಶೋಧನಾ ರೀತಿಯನ್ನು ಪ್ರಶಂಸಿದ್ದಾರೆ. ಆಗ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮುಖ್ಯ ಇಂಜಿನಿಯರಾಗಿದ್ದ ಆರ್. ಸಿದ್ದಯ್ಯನವರು ಸುರಪುರ ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು. ಆ ಸಂಸ್ಥಾನದ ಬಗ್ಗೆ ಹೆಚ್ಚಿನ ಇತಿಹಾಸ ತಿಳಿಯುವ ಕೂತೂಹಲದಿಂದ ಕಪಟರಾಳ ಕೃಷ್ಣರಾವ್ ಅವರನ್ನು ಭೇಟಿಯಾದಾಗ ‘ಸುರಪುರ ಇತುಉಹಾಸದ’ ಹಸ್ತಪ್ರತಿಯನ್ನು ಓದಿದರು. ಇಂತಹ ಅಪೂರ್ವ ಸಂಶೋಧನಾ ಕೃತಿ 40 ವರ್ಷಗಳಿಂದ ಪ್ರಕಡವಾಗದೆ ಇದ್ದದ್ದು ಕಂಡು ಪ್ರಕಟಿಸಲು ಮುಂದಾದರು. ಕುರ್ಡಿ ಹನುಮಂತಾಚಾರ್ಯರ ಸಹಕಾರದಿಂದ ಪ್ರಕಟಿಸಿದರು. ಈ ಎಲ್ಲ ವಿಚಾರಗಳನ್ನು ಪ್ರಕಾಶಕರೇ ತಮ್ಮ ‘ಪ್ರಕಾಶನದ ನುಡಿ’ಯಲ್ಲಿ ಹೇಳಿದ್ದಾರೆ.
ಒಟ್ಟು 285 ಪುಟಗಳ ಈಪುಸ್ತಕ ಇಡಿಯಾಗಿ ‘ಸುರಪುರ ಸಂಸ್ಥಾನದ ಇತಿಹಾಸ’ ದರ್ಶನವನ್ನು ಓದುಗರಿಗೆ ಮಾಡಿಕೊಡುತ್ತದೆ. 12 ಪ್ರಕರಣಗಳ ಮೂಲಕ ಲೇಖಕರು ‘ಸುರಪುರ ಸಂಸ್ಥಾನದ ಇತಿಹಾಸವನ್ನು’ ಅಮೂಲ್ಯ ದಾಖಲೆಗಳ ಸಹಿತ ಹಿಡಿದಿದ್ದಾರೆ.
 (1) ವಂಶ ಪರಂಪರೆ (2)  ಗಡ್ಡಿ ಪಿಡ್ಡನಾಯಕ (3) ಹಸರಂಗಿ ಪಾಮನಾಯಕ (4) ಪೀತಾಂಬರ ಬಹಿರಿ ಪಿಡ್ಡನಾಯಕ (5) ಇಮ್ಮಡಿ ಪಾಮನಾಯಕ (6) ಮೊಂಡಗೈ ವೆಂಕಟಪ್ಪನಾಯಕ (7) ಮುಮ್ಮಡಿ ಪಾವiನಾಯಕ (8) ಇಮ್ಮಡಿ ವೆಂಕಟಪ್ಪನಾಯಕ (9) ಮುಮ್ಮಡಿ ಪಿಡ್ಡನಾಯಕ (10) ಮುಮ್ಮಡಿ ವೆಂಕಟಪ್ಪನಾಯಕ (11) ಕೃಷ್ಣನಾಯಕ (12) ನಾಲ್ವಡಿ ವಡಂಕಟಪ್ಪನಾಯಕ-  ಹೀಗೆ 12 ಒರಕರಣ ಅಲ್ಲದೆ ಡೋಲರನ ಅಧಿಕ ಮಾತುಗಳು, ಉಪಸಂಹಾರವಲ್ಲದೆ ಅನುಬಂಧದಲ್ಲಿ ಸುರಪುರ ಸಂಸ್ಥಾನದ ವಂಶವಾಹಿನಿಯ ಪೂರ್ಣ ವಿವರಗಳನ್ನು ಕೊಟ್ಟಿದ್ದಾರೆ.
   ‘ವಂಶ ಪರಂಪರೆ’ ಪ್ರಕರಣದಲ್ಲಿ ಸುರಪುರ ಸಂಸ್ಥಾನದ 14 ತಲೆಮಾರುಗಳ ವಂಶಸ್ಥರ ಪಟ್ಟಿಯನ್ನು ನೀಡಲಾಗಿದೆ. ಇತಿಹಾಸದ ವಿಷಯದ ವಿವರಣೆಯಲ್ಲಿ ಕಪಟರಾಳರು ಬಳಸಿದ ಭಾಷೆ, ಶೈಲಿ ಅತ್ಯಂತ ಸರಳ ಸಾಮಾನ್ಯ ಓದುಗರಿಗೂ ಅರ್ಥವಾಗುವಂತಹದ್ದು. 

ಉದಾಹರಣೆಗೆ-“ಸುರಪುರ ಸಂಸ್ಥಾನದ ಅರಸರಿಗೆ ‘ಗೋಸಲ’ವಂಶದವರೆಂದು ಕರೆಯುವ ರೂಢಿ ಇದೆ. ಗೋವುಗಳನ್ನು ಸಲಹುತ್ತಿದ್ದರಿಂದ ಇವರಿಗೆ ‘ಗೋಸಲ’ ವಂಶದವರೆಂದು ಹೆಸರು. ಈ ಅರಸರ ಪೂರ್ವಜರು ದಕ್ಷಿಣ ದಿಕ್ಕಿನಿಂದ ಬಂದವರೆಂದು ಐತಿಹ್ಯವಿದೆ. ಮೂಲಪುರುಷನು ನರಸಿಂಹನಾಯಕ. ಇವನ ಮಗ ವೀರಭೊಮ್ಮ ನಾಯಕ, ಮಗ ಸಿಂಗಪ್ಪ ನಾಯಕ, ಮಗ ಬಡೊರ ನಾಯಕ, ಇವನ ಮಗ ಕಲ್ಲಪ್ಪನಾಯಕನು. ಇವರೆಲ್ಲ ಸಾರಂಗಕೊಳ್ಳ ಮುಂತಾದ ಸ್ಥಳಗಳಲ್ಲಿ ಇರುತ್ತಿದ್ದು ಅಲ್ಲಲ್ಲಿಯ ದೇಶಗತಿಯನ್ನು ಮಾಡುತ್ತಿದ್ದರೆಂದು ಪ್ರಾಚೀನ ಕೈಫಿಯತ್ತುಗಳಿಂದ ತಿಳಿದು ಬರುತ್ತದೆ” (ಪ್ರಕರಣ 1. ವಂಶಪರಂಪರೆ, ಪುಟ.1)

ವಂಶಪರಂಪರೆ ಪ್ರಕರಣದಲ್ಲಿ ಸಂಸ್ಥಾನದ ರಾಜವಂಶದ 16 ತಲೆಮಾರುಗಳ ವಿವರಗಳಿವೆ. ಬಡೊರ ನಾಯಕನ ಮಗನಾದ ಕಲ್ಲಪ್ಪ ನಾಯಕನಿಂದ ಮನೆತನದ ಇತಿಹಾಸದ ಆರಂಭದಿಂದ ಸಂಸ್ಥಾನದ ಕೊನೆಯ ಅರಸ ವೆಂಕಟಪ್ಪನಾಯಕನ ಕಾಲದವರೆಗಿನ ವಂಶಾವಳಿ ವಿವರಗಳು ಇಲ್ಲಿವೆ. ಮುದಗಲ್ಲಿನ ಕಿಲ್ಲೇದಾರ ಮುಸ್ತಾಖಾನ್ ಎಂಬಾತನು ಕಲ್ಲಪ್ಪನಾಯಕನನ್ನು ಮುದಗಲ್ಲಿಗೆ ಕರಿಸಿದನು. ಈನಾಯಕನಿಗೆ ಏಳು ಜನ ಮಕ್ಕಳು. ಹಿರಿಯ ಮಗ ಹನುಮಪ್ಪನಾಯಕ ಕೊಡೋಕಲ್ ದೊರೆಗಳು. ಎರಡೆನೆಯ ಮಗ ಇಮ್ಮಡಿ ಹನುಮಪ್ಪನಾಯಕ ಸೊಂಡೂರು ಅಲ್ಲಿಂದ ಕೋಸಗಿ ದೇಶಗತಿ ಹೊಂದಿ ಅಲ್ಲೇ ನೆಲೆಸಿದ. ಆದವಾನಿ ಸಮೀಪದ ಕೊಸಗಿಯಲ್ಲಿ ಈಗಲೂ ಈತನ ವಂಶದವರು ಇದ್ದಾರೆ. ಮೂರನೆಯ ಮಗ ಮುಮ್ಮಡಿ ಹನುಮಪ್ಪನಾಯಕ ಬೀದರ ಕೊಡೆಯತ್ತ ಹೋಗಿದ್ದು ಈತನ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂಬುವುದನ್ನು ಲೇಖರು ಒಪ್ಪಿಕೊಂಡಿದ್ದಾರೆ 4, 5 ಮತ್ತು 6ನೆಯ ಮಕ್ಕಳು ಕೌಲಗಿ, ನಿಡಗುಂದಿ, ಕೆರೂರ ಮತ್ತು ದಕ್ಷಿಣದ ಭಾಗಕ್ಕೆ ತೆರಳಿ ನೆಲೆಸಿದರೆ ಏಳನೆಯ ಮಗ ಚಿನ್ನ ಹಣಮನಾಯಕ ಕಕ್ಕೇರಿಯಲ್ಲಿ ನೆಲೆಸಿದ. ಈತನು ವಂಶಜರೆ ಸುರಪುರ ಹಾಗೂ ಗುಡಗುಂಚಿ ಸಂಸ್ಥಾನಗಳ ಮೂಲ ಪುರಷರು. ದೊರೆತಿರುವ ಮರಾಠಿ ಕೈಫಿಯತ್ತುಗಳಿಂದ ಸುರಪುರ ಸಂಸ್ಥಾನದ ಮೂಲ, ವಿಜಾಪುರ ಬಾದಶಹ ಯುಸುಫ ಆದಿಲಶಾಹ ಮತ್ತು ಕೃಷ್ಣದೇವರಾಯನ ಕಾಲದವರೆಗೆ ಸಂಬಂಧ ಇರುವ ವಿಷಯವನ್ನು ಕಪಡರಾಳರು ಇದರಲ್ಲಿ ಬಹಿರಂಗಗೊಳಿಸಿದ್ದಾರೆ.

ಮುಂದಿನ ಪ್ರಕರಣಗಳು ಆಯಾ ದುರೆಗಳ ಬದುಕಿನ ವಿವರಗಳು, ಪ್ರಮುಖ ಘಟನೆಗಳು, ಅವರ ರಾಜಕೀಯ ಸಾಧನೆ, ಆಡಳಿತ ವೈಖರಿ ಈ ಎಲ್ಲ ವಿವರಗಳನ್ನು ಲೇಖಕರು ಇಸ್ವಿಗಳು ಸಹಿತ ನೀಡಿರುವುದು ಅವರ ಐತಿಹಾಸಿಕ ಪ್ರಜ್ಞೆಗೆ ಹಿಡಿದ ಕೈಗನ್ನಡಿಯಾಗಿದೆ.  

ಲಾಕುಳ ಶೈವರ ಇತಿಹಾಸ[ಬದಲಾಯಿಸಿ]

ಕಪಟರಾಳರ ಈ ಗ್ರಂಥವು ಲಾಕುಳ ಶೈವ ಪಂಥದ ಬಗ್ಗೆ ತಮ್ಮದೆ ಆದ ಹೊಸ ವಿಚಾರಗಳನ್ನು ಓದುಗನ ಮನಕ್ಕೆ ಮುಟ್ಟಿಸುತ್ತದೆ. ಲಾಕುಳ ಶೈವ ಪಂಥದ ಉಗಮ-ವಿಕಾಸಗಳ ವಿವರಗಳೊಂದಿಗೆ ಶೈವ ಸಂಪ್ರದಾಯಕ್ಕೂ ಲಾಕುಳಕ್ಕೂ ಇರುವ ಸಂಬಂಧದ ವಿವಿಧ ಮುಖಗಳನ್ನು ಎತ್ತಿ ತೋರಿಸುತ್ತದೆ. ಕಪಟರಾಳರ ದೃಷ್ಟಿ ಸಂಶೋಧನೆಯದು. ಆದ್ದರಿಂದ ಲಾಕುಳ ಶೈವದ ಆಳವಾದ ವಿಚಾರಗಳು ಇಲ್ಲಿ ಒಡಗೂಡಿವೆ. ಮುಂದೆ ಬರುವ ವೀರಶೈವ ಸಂಪ್ರದಾಯವು ಮೂಲತಃ ಲಾಕುಳ ಶೈವದ ಪ್ರತಿನಿಧಿಯಾಗಿದೆ ಎನ್ನುವುದನ್ನು ಅವರು ಪ್ರತಿಪಾದಿಸುತ್ತಾರೆ. ಲಾಕುಳಶೈವರಿಗೂ ಶೈವ ಸಂಪ್ರದಾಯಕ್ಕೂ ಇರುವ ಸಾಮ್ಯಗಳನ್ನು ಮತ್ತು ಭಿನ್ನತೆಗಳನ್ನು ಈ ಕೃತಿಯಲ್ಲಿ ಹಿಡಿದಿದ್ದಾರೆ. ಲಾಕುಳ ಶೈವರ ಇತಿಹಾಸ ಕುರಿತ ಕೃಷ್ಣರಾಯರ ಈ ಕೃತಿ ನಮ್ಮಿಂದ ಕಣ್ಮರೆಯಾಗುತ್ತಿರುವ ಪಂಥವೊಂದರ ವಿಸ್ತಾರವಾದ ಮುಖದರ್ಶನವನ್ನು ನಮಗೆ ಮಾಡಿ ಕೊಡುತ್ತದೆ.

 ಕೃಷ್ಣರಾಯರು ಬರೆದದ್ದು ಸಂಖ್ಯಾದೃಷ್ಟಿಯಿಂದ ಕಡಿಮೆಯಾಗಿದ್ದರೂ ಸಂಶೋಧನಾ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಬರವಣಿಗೆಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಇವರ ಕೃತಿಗಳು ಮುಂಬರುವ ಸಂಶೋಧಕರಿಗೆ ಮಾರ್ಗದರ್ಶಿಗಳಾಗಿ ಇತಿಹಾಸದ ಮೇಲೆ, ಸಂಶೋಧನೆಯ ಬಗ್ಗೆ ಇವರಿಗಿರುವ ಅಗಾಧ ಪ್ರೀತಿಯನ್ನು ನಾವು ಇವರ ಕೃತಿಗಳ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ನಿಖರವಾದ ಅಭಿಪ್ರಾಯ, ಸ್ಪಷ್ಟವಾದ ಮಾತುಗಳು ಜೊತೆಗೆ ಯಾವುದೇ ಮತಧರ್ಮಗಳ ಬಗ್ಗೆ ನಿರ್ಮತ್ಸರವಾದ ಮನೋಭಾವನ್ನು ನಾವು ಕಪಟರಾಳರ ಕೃತಿಗಳಿಂದ ಕಂಡುಕೊಳ್ಳಬಹುದಾಗಿದೆ. ಶರಣರೆ ಇರಲಿ, ಹರಿದಾಸರೆ ಇರಲಿ ಅವರ ದೃಷ್ಟಿ  ಶುದ್ಧ ಸಂಶೋಧನೆಯದು. ಆಕರ ರಹಿತವಾದ ಯಾವುದೆ ವಿಷಯವನ್ನು ಪ್ರಸ್ತಾಪಿಸಲಾಗದಂತಹ ತೀಕ್ಷ್ಣವಾದ ಮನೋಭಾವವನ್ನು ಕಾಣುತ್ತೇವೆ.
ಮೈಸೂರು ಸರಕಾರದ ವಿಶ್ರಾಂತಿ ವೇತನದ ಗೌರವ ಪ್ರಶಸ್ತಿ, ರಾಜ್ಯ ಸರಕಾರದ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರ ಸಂಶೋಧನಾ ಕೃತಿಗಳು ಸಂಶೋಧನಾಸಕ್ತರಿಗೆ ದೊರೆಯುವಂತಹ ಪರಿಸ್ಥಿತಿ ಇಲ್ಲ ಮರುಮುದ್ರಣದ ಅವಶ್ಯಕತೆ ಇದೆ. ಕಪಟರಾಳರು ಸಂಶೋಧನಾ ಕ್ಷೇತ್ರದಲ್ಲಿ ದುಡಿಯುವಾಗ ಸರಕಾರ ಮತ್ತು ಸಮಾಜದಿಂದ ಯಾವುದೆ ಅನುಕೂಲಗಳು ಇರದಂತಹ ಅವಧಿ ಎಂಬುದನ್ನು ಗಮನಿಸಿದಾಗ, ಆ ಕಾಲದಲ್ಲಿ ಕನ್ನಡ ಸಂಸ್ಕøತಿ, ಭಾಷೆ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಕೃಷ್ಣರಾಯರು ಸಲ್ಲಿಸಿದ ಸೇವೆ ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಹೇಳಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://kn.wikipedia.org/wiki/%E0%B2%95%E0%B2%B2%E0%B2%AC%E0%B3%81%E0%B2%B0%E0%B2%97%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%8697%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86 ಕಲಬುರ್ಗಿ]
  2. https://kn.wikipedia.org/wiki/%E0%B2%95%E0%B2%B2%E0%B2%AC%E0%B3%81%E0%B2%B0%E0%B2%97%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%8697%E0%B2%BF_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86