ಜನೋಪಕಾರಿ ದೊಡ್ಡಣ್ಣ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನೋಪಕಾರಿ
ದೊಡ್ಡಣ್ಣ ಶೆಟ್ಟಿ
ಜನೋಪಕಾರಿ ದೊಡ್ಡಣ್ಣ ಶೆಟ್ಟಿ ಯವರ ಭಾವಚಿತ್ರ
ವೈಯಕ್ತಿಕ ಮಾಹಿತಿ
ಜನನ (೧೮೪೦-೦೨-೦೩)೩ ಫೆಬ್ರವರಿ ೧೮೪೦
ಬೆಂಗಳೂರು, ಮೈಸೂರು ಸಂಸ್ಥಾನ (ಈಗಿನ ಕರ್ನಾಟಕ)
ಮರಣ 5 August 1921(1921-08-05) (aged 81)
ಬೆಂಗಳೂರು
ರಾಷ್ಟ್ರೀಯತೆ ಭಾರತೀಯ
ಉದ್ಯೋಗ ವ್ಯಾಪಾರಿ, ಲೋಕೋಪಕಾರಿ
ಧರ್ಮ ಹಿಂದೂ


ಜನೋಪಕಾರಿ ದೊಡ್ಡಣ್ಣ ಶೆಟ್ಟಿ, (1840–1921), ಬೆಂಗಳೂರಿನ ಕರ್ನಾಟಕ, ಭಾರತದ ಒಬ್ಬ ಭಾರತೀಯ ವ್ಯಾಪಾರಿ ಮತ್ತು ಲೋಕೋಪಕಾರಿಯಾಗಿದ್ದರು. ಅವರು 1906 ರಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹಾಗೂ ಉಚಿತ ಶಿಕ್ಷಣ ನೀಡಲು ಶ್ರೀ ಲಕ್ಷ್ಮೀ ನರಸಿಂಹ ಸಂಸ್ಥೆಯನ್ನು (SLN ಸಂಸ್ಥೆ) ಪ್ರಾರಂಭಿಸಿದರು. ಇವರು 1905 ರಲ್ಲಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಚಟುವಟಿಕೆಗಳನ್ನು ಆಯೋಜಿಸಲು "ದೊಡ್ಡಣ್ಣ ಸಭಾಂಗಣ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಾರ್ವಜನಿಕ ಸಭಾಂಗಣವನ್ನು ನಿರ್ಮಿಸಿದರು, ನಂತರ ಅದು ಪ್ಯಾರಾಮೌಂಟ್ ಟಾಕೀಸ್ ಆಗಿ ಪರಿವರ್ತನೆಯಾಯಿತು. [೧] [೨][೩]

ದೊಡ್ಡಣ್ಣ ಶೆಟ್ಟಿಯವರ ಸಾಮಾಜಿಕ ಸೇವೆಗಳಿಗಾಗಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು "ಜನೋಪಕಾರಿ" ಎಂಬ ಬಿರುದನ್ನು ನೀಡಿದರು. [೪]

ಆರಂಭಿಕ ವರ್ಷಗಳು[ಬದಲಾಯಿಸಿ]

ದೊಡ್ಡಣ್ಣ ಶೆಟ್ಟಿಯವರು ಫೆಬ್ರವರಿ 3, 1840 ರಂದು ಬೆಂಗಳೂರಿನಲ್ಲಿ ನಂಜುಂಡಪ್ಪ ಮತ್ತು ಸಿದ್ದಮ್ಮ ದಂಪತಿಗಳಿಗೆ ಜನಿಸಿದರು. ಅವರು ಅಡಿಗೆಗೆ ಬಳಸುವ ಎಣ್ಣೆಯನ್ನು ತೆಗೆಯುವ ಮತ್ತು ವ್ಯಾಪಾರ ಮಾಡುವ ಗಾಣಿಗ ಸಮುದಾಯಕ್ಕೆ ಸೇರಿದವರು. 1830 ರ ದಶಕದಲ್ಲಿ, ಅವರು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಕಂಟೋನ್ಮೆಂಟ್ ಪ್ರದೇಶದ ಬಳಿ ವಾಸಿಸುತ್ತಿದ್ದರು. ಅವರ ತಂದೆ ಯಜಮಾನ್ ಎಂದು ಜನಪ್ರಿಯರಾಗಿದ್ದರು. ದೊಡ್ಡಣ್ಣ ಅವರು ಕುಟುಂಬದ ವ್ಯಾಪಾರಕ್ಕೆ ಅಗತ್ಯವಾದ ಶಿಕ್ಷಣವನ್ನು ಪಡೆದರು. ಅವರ ತಂದೆಯ ಮರಣದ ನಂತರ ಯಜಮಾನ್ ಸ್ಥಾನ ಪಡೆದು ಕೌಟುಂಬಿಕ ವ್ಯಾಪಾರ ಮುಂದುವರಿಸಿದರು. [೧]

ದೊಡ್ಡಣ್ಣರವರು ಒಬ್ಬರ ಹಿಂದೆ ಒಬ್ಬರಂತೆ ಮೂವರು ಹೆಂಡತಿಯರನ್ನು ಕಳೆದುಕೊಂಡರು. ನಾಲ್ಕನೇ ಹೆಂಡತಿ ಎರಡು ಮಕ್ಕಳಿಗೆ ಜನ್ಮ ನೀಡಿದರೂ ಆಕೆಯೂ ಅಕಾಲಿಕ ಮರಣ ಹೊಂದಿದ್ದಳು. 1898 ರಲ್ಲಿ ಬೆಂಗಳೂರಿನಲ್ಲಿ ತೀವ್ರವಾದ ಪ್ಲೇಗ್ ದಾಳಿ ಸಂಭವಿಸಿದಾಗ ಅವರ ಮೊದಲ ಮಗ ಲಕ್ಷ್ಮೀನಾರಾಯಣನು ಸಾಂಕ್ರಾಮಿಕ ರೋಗಕ್ಕೆ ಬಲಿಯಾದನು. ಕೆಲವು ವರ್ಷಗಳ ನಂತರ, ಅವರ ಎರಡನೇ ಮಗ ಲಕ್ಷ್ಮೀನರಸಿಂಹ ಕೂಡ ನಿಧನರಾದನು. [೧]

ಸಾಮಾಜಿಕ ಕೆಲಸ[ಬದಲಾಯಿಸಿ]

ತಮ್ಮ ಜೀವನದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಕಳೆದುಕೊಂಡ ನಂತರ, ದೊಡ್ಡಣ್ಣ ಶೆಟ್ಟಿಯವರು ತಮ್ಮ ಸಂಪತ್ತನ್ನು ಜನರಿಗೆ ಸಹಾಯ ಮಾಡಲು ಮತ್ತು ಬಡ ಮಕ್ಕಳಿಗೆ ಉಚಿತ ಆಹಾರ, ವಸತಿ ಮತ್ತು ಶಿಕ್ಷಣವನ್ನು ನೀಡಲು ನಿರ್ಧರಿಸಿದರು.

ಎಸ್‌.ಎಲ್‌.ಎನ್‌ ಧರ್ಮಪಾಠ ಶಾಲೆ[ಬದಲಾಯಿಸಿ]

ಎಸ್‌.ಎಲ್‌.ಎನ್ ಸಂಸ್ಥೆಯ ಪ್ರವೇಶದ್ವಾರ, ಬೆಂಗಳೂರು

ದೊಡ್ಡಣ್ಣ ಶೆಟ್ಟಿಯವರು ಬಾಲ್ಯದಿಂದಲೂ ತಾತ್ವಿಕ ಮತ್ತು ಚಿಂತನಶೀಲರಾಗಿದ್ದರು, ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಅವರ ಆಳವಾದ ಆಸಕ್ತಿಯಿಂದಾಗಿ, ಎಲ್ಲಾ ಹಿನ್ನೆಲೆಯ ಮಕ್ಕಳಿಗೆ ಶಿಕ್ಷಣ ನೀಡಲು ಶ್ರೀ ಲಕ್ಷ್ಮೀ ನರಸಿಂಹ ಧರ್ಮಪಾಠಶಾಲೆ (ಎಸ್‌.ಎಲ್‌.ಎನ್ ಚಾರಿಟೀಸ್) ಅನ್ನು ಸ್ಥಾಪಿಸಲು ನಿರ್ಧರಿಸಿದರು. ಆಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ದಾನವಾಗಿ ನೀಡಿದ 5.5 ಎಕರೆ (2.2 ಹೆಕ್ಟೇರ್) ಭೂಮಿಯಲ್ಲಿ ಧರ್ಮಪಾಠಶಾಲೆ ಆವರಣದ ಗೋಡೆಯನ್ನು ನಿರ್ಮಿಸಲಾಯಿತು. ಮಾರ್ಚ್ 11, 1906 ರಂದು, ನಾಲ್ವಡಿ ಕೃಷ್ಣರಾಜ ಒಡೆಯರು ಅವರು ಇದನ್ನು ಉದ್ಘಾಟಿಸಿದರು. 1909 ರಲ್ಲಿ, ನಗರ ಪುರಸಭೆಯು ಅಚಾತುರ್ಯದಿಂದ ಗೋಡೆಯನ್ನು ಕೆಡವಲಾಯಿತು, ಇದನ್ನರಿತ ಮಹಾರಾಜರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಹಿಂದಿನ ಭೂಮಿಯನ್ನು ದೊಡ್ಡಣ್ಣ ಅವರಿಗೆ ನೀಡಿದರು. ಅಸಮವಾದ ಭೂಪ್ರದೇಶವನ್ನು ತುಂಬಾ ಶ್ರಮ ಪಟ್ಟು ಹಾಗೂ ಅತಿ ವೆಚ್ಚದೊಂದಿಗೆ ನೆಲಸಮಗೊಳಿಸಲಾಯಿತು. 1915 ರಲ್ಲಿ, ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸ್ಥಾಪಿಸಲಾಯಿತು. [೫] 1917 ರಲ್ಲಿ, ಇದನ್ನು ಥಿಯೊಸಾಫಿಕಲ್ ಸೊಸೈಟಿ ಶಾಲೆಯನ್ನು ಮುಂದುವರಿಸಲು ಜವಬ್ಧಾರಿ ವಹಿಸಿಕೊಂಡಿತು. ಅನ್ನಿ ಬೆಸೆಂಟ್ ಅವರ ಮಾರ್ಗದರ್ಶನದಲ್ಲಿ ಇದನ್ನು SLN ನ್ಯಾಷನಲ್ ಹೈಸ್ಕೂಲ್ ಆಗಿ ಅಭಿವೃದ್ಧಿಪಡಿಸಲಾಯಿತು. ನಂತರ ಇದು ಚಾಮರಾಜಪೇಟೆಗೆ ಸ್ಥಳಾಂತರಗೊಂಡು ನಂತರ ಬಸವನಗುಡಿಗೆ ಸ್ಥಳಾಂತರಗೊಂಡಿತು, ಅಲ್ಲಿ ಇದನ್ನು ಪ್ರಸ್ತುತ ನ್ಯಾಷನಲ್ ಹೈಸ್ಕೂಲ್ ಎಂದು ಕರೆಯಲಾಗುತ್ತದೆ. ದೊಡ್ಡಣ್ಣ ಶೆಟ್ಟಿಯವರು 1918 ರಲ್ಲಿ ಎಸ್‌.ಎಲ್‌.ಎನ್ ಧರ್ಮಪಾಠಶಾಲೆಯನ್ನು ಪುನಃ ತಾವೇ ಮುಂದುವರಿಸಲು ಆರಂಭಿಸಿದರು. ಮಕ್ಕಳು ಶ್ರದ್ಧೆಯಿಂದ ಓದಬೇಕು ಮತ್ತು ಉತ್ತಮ ಸಾಧನೆ ಮಾಡಿದವರು ಬೆಂಗಳೂರಿನ ಮಿಷನರಿ ಶಾಲೆಗಳಿಗೆ ಪ್ರವೇಶ ಪಡೆಯಬೇಕು ಎಂಬುದು ಅವರ ಉದ್ದೇಶವಾಗಿತ್ತು. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ರಾತ್ರಿ ತರಗತಿಗಳನ್ನು ಆಯೋಜಿಸಲಾಗುತ್ತಿತ್ತು. SLN ಚಾರಿಟಿಯು ತನ್ನ ಸೇವೆಯನ್ನು ಮುಂದುವರೆಸಿ 1966 ರಲ್ಲಿ, SLN ಧರ್ಮಪಾಠ ಶಾಲೆ ಆವರಣದಲ್ಲಿ SLN ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಪ್ರಾರಂಭಿಸಿತು, ಅದು ಪ್ರಸ್ತುತವೂ ಕಾರ್ಯನಿರ್ವಹಿಸುತ್ತಿದೆ. [೩]

ದೊಡ್ಡಣ್ಣ ಸಭಾಂಗಣ[ಬದಲಾಯಿಸಿ]

1900 ರ ದಶಕದ ಆರಂಭದಲ್ಲಿ ದೊಡ್ಡಣ್ಣ ಸಭಾಂಗಣ, ಬೆಂಗಳೂರು

ದೊಡ್ಡಣ್ಣ ಶೆಟ್ಟಿಯವರು ನೆಲದ ಸಂಸ್ಕೃತಿ ಮತ್ತು ನೈತಿಕತೆಯನ್ನು ಪ್ರತಿನಿಧಿಸುವ ರಚನೆಯನ್ನು ನಿರ್ಮಾಣ ಮಾಡಲು ಬಯಸಿದ್ದರು, ಧರ್ಮ ಛತ್ರ, ಶಾಲೆ, ರಂಗಮಂದಿರ ಮತ್ತು ಅಸೆಂಬ್ಲಿ ಹಾಲ್‌ನ ಉದ್ದೇಶವನ್ನು ಪೂರೈಸುವಷ್ಟು ದೊಡ್ಡದಾಗಿರಬೇಕು ಎಂಬುದು ಅವರ ಇಚ್ಚೆಯಾಗಿತ್ತು. ಅವರು 1905 ರಲ್ಲಿ ಕಲಾಸಿಪಾಳ್ಯದ, ಕೆಆರ್ ಮಾರ್ಕೆಟ್ನಲ್ಲಿ ಸಭಾಂಗಣ ಕಟ್ಟಡವನ್ನು ನಿರ್ಮಿಸಿದರು, ಈ ಕಟ್ಟಡವು "ದೊಡ್ಡಣ್ಣ ಸಭಾಂಗಣ" ಎಂದು ನಗರದಲ್ಲಿ ಹೆಗ್ಗುರುತಾಗಿತ್ತು. ದೊಡ್ಡಣ್ಣ ಸಭಾಂಗಣವು ಹಗಲಿನಲ್ಲಿ ಶಾಲೆಯಾಗಿ, ಸಂಜೆ ಸಾರ್ವಜನಿಕ ಸಭಾಂಗಣವಾಗಿ ಮತ್ತು ರಾತ್ರಿ ಚಲನಚಿತ್ರ ಮಂದಿರವಾಗಿ ಕಾರ್ಯನಿರ್ವಹಿಸುತ್ತಿತ್ತು. 1935 ರಲ್ಲಿ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿಯವರು ಟೌನ್ ಹಾಲ್ ಅನ್ನು ನಿರ್ಮಿಸುವವರೆಗೆ, ಇದು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ನಗರದ ಏಕೈಕ ದೊಡ್ಡ ಒಳಾಂಗಣ ಸ್ಥಳವಾಗಿತ್ತು. ಈ ಸಭಾಂಗಣದಲ್ಲಿ ಸಂಗೀತ, ನಾಟಕ, ನೃತ್ಯ, ಸಂಗೀತ ಕಛೇರಿಗಳು ಮತ್ತು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. [೬]

ದೊಡ್ಡಣ್ಣ ಸಭಾಂಗಣವನ್ನು ಬೆಂಗಳೂರಿನ ಪ್ಯಾರಾಮೌಂಟ್ ಥಿಯೇಟರ್ ಆಗಿ ಮೇಲ್ದರ್ಜೆಗೇರಿಸಲಾಗಿದೆ

ಮೂಕ ಚಲನಚಿತ್ರಗಳ ಯುಗ ಪ್ರಾರಂಭವಾದಾಗ, ದೊಡ್ಡಣ್ಣ ಸಭಾಂಗಣವನ್ನು ಚಲನಚಿತ್ರ ಮಂದಿರವಾಗಿ ಮಾರ್ಪಡು ಮಾಡಲಾಯಿತು. 1913 ರಲ್ಲಿ, ದೊಡ್ಡಣ್ಣ ಸಭಾಂಗಣದಲ್ಲಿ ಭಾರತದ ಮೊದಲ ಮೂಕಿ ಚಿತ್ರ ರಾಜಾ ಹರಿಶ್ಚಂದ್ರ ಪ್ರದರ್ಶನಗೊಂಡಿತು. ವೈವಿಧ್ಯತೆಯಿಂದ ಕೂಡಿದ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದ ಕಾರಣ, ನಿರ್ವಹಾಕರು ದೊಡ್ಡಣ್ಣ ಸಭಾಂಗಣದ ಹೆಸರನ್ನು "ಪ್ಯಾರಾಮೌಂಟ್ ಥಿಯೇಟರ್" ಎಂದು ಬದಲಾಯಿಸಿದರು. ಕನ್ನಡ ಭಾಷೆಯ ಮೊದಲ ಟಾಕಿ ಚಿತ್ರ ಸತಿ ಸುಲೋಚನಾ (1934) ಇಲ್ಲಿಯೇ ಪ್ರದರ್ಶನಗೊಂಡಿತು. ಇದು ಮೈಸೂರು ಸಂಸ್ಥಾನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಚಲನಚಿತ್ರ. ಹಲವಾರು ಪಾತ್ರಗಳನ್ನು ನಿರ್ವಹಿಸಿದ ನಂತರ, ಪ್ಯಾರಾಮೌಂಟ್ ಥಿಯೇಟರ್ (ದೊಡ್ಡಣ್ಣ ಹಾಲ್) ಅನ್ನು 1974 ರಲ್ಲಿ ಕೆಡವಲಾಯಿತು ಮತ್ತು 1976 ರಲ್ಲಿ ಅದೇ ಸ್ಥಳದಲ್ಲಿ ಪ್ರದೀಪ್ ಮತ್ತು ಪರಿಮಳ ಎಂಬ ಅವಳಿ ಥಿಯೇಟರ್‌ಗಳನ್ನು ನಿರ್ಮಿಸಲಾಯಿತು [೨]

ಭಕ್ತಿ ಸೇವೆಗಳು[ಬದಲಾಯಿಸಿ]

ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಶಿವಾಜಿ ನಗರ, ಬೆಂಗಳೂರು

1910 ರಲ್ಲಿ, ದೊಡ್ಡಣ್ಣ ಶೆಟ್ಟಿಯವರು 19 ನೇ ಶತಮಾನದ ಸಣ್ಣದಾಗಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು (OPH ರಸ್ತೆಯಲ್ಲಿ ಜುಮ್ಮಾ ಮಸೀದಿಯ ಪಕ್ಕದಲ್ಲಿದೆ) ಪೂರ್ಣ ಪ್ರಮಾಣದ ದೇವಾಲಯವಾಗಿ ಸಂಪೂರ್ಣವಾಗಿ ನವೀಕರಿಸಿದರು. ತಮ್ಮ ಕೊನೆಯ ದಿನಗಳಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಆಶ್ರಮವನ್ನು ಆರಂಭಿಸಿದರು. [೩]

ಬಿರುದುಗಳು[ಬದಲಾಯಿಸಿ]

  • ಅಕ್ಟೋಬರ್ 18, 1907, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ದೊಡ್ಡಣ್ಣ ಶೆಟ್ಟಿಗೆ "ಜನೋಪಕಾರಿ" ಎಂಬ ಬಿರುದನ್ನು ನೀಡಿದರು [೪]
  • ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಬಳಿಯಿರುವ ಒಂದು ಹೆಗ್ಗುರುತನ್ನು "ಜನೋಪಕಾರಿ ದೊಡ್ಡಣ್ಣ ಶೆಟ್ಟಿ ವೃತ್ತ" ಎಂದು ಹೆಸರಿಸಲಾಗಿದೆ. [೨]

ನಿಧನ[ಬದಲಾಯಿಸಿ]

ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರು ಆಗಸ್ಟ್ 5, 1921 ರಂದು ತಮ್ಮ 81 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಗೌರವಾರ್ಥವಾಗಿ SLN ಇನ್ಸ್ಟಿಟ್ಯೂಟ್ ಆವರಣದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. [೩]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "The Big Brother of Bangalore". The Hindu. 1 October 2020. Retrieved 25 February 2023.
  2. ೨.೦ ೨.೧ ೨.೨ "Doddanna Hall to Paramount theatre". The Hindu. 18 December 2020. Retrieved 25 February 2023.
  3. ೩.೦ ೩.೧ ೩.೨ ೩.೩ "Resident Rendezvoyeur: Giving One's All". bangaloremirror.indiatimes.com. 10 January 2016. Retrieved 25 February 2023.
  4. ೪.೦ ೪.೧ "Mysore Gazetteer Chapter 15" (PDF). gazetteer.karnataka.gov.in. 1 January 1930. Retrieved 25 February 2023.
  5. "History of the SLN Institution". SLN College, Bangalore. Retrieved 25 February 2023.
  6. C. Hayavadana Rao (1 January 1930). "Mysore Gazetteer,vol.5". Mysore Gazetteer. Retrieved 25 February 2023.