ಕೊ. ಅ ಉಡುಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡತ್ತೂರು ಅನಂತ ಪದ್ಮನಾಭ ಉಡುಪ ಅಥವಾ ಕೊ.ಅ.ಉಡುಪ ಇವರು ಪ್ರಸಿದ್ಧ ಸಾಹಿತಿ. ಕಿನ್ನಿಗೋಳಿ ಮಂಗಳೂರು ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಮಂಗಳೂರಿನಿಂದ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುವ ಸುಂದರ ಗ್ರಾಮ. ಇದು ಹಲವಾರು ಸಾಂಸ್ಕೃತಿಕ ಸಾಹಿತ್ಯಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಕೇಂದ್ರ. ಈ ಪುಟ್ಟ ಗ್ರಾಮದಲ್ಲಿ ನಾಲ್ಕು ಪ್ರಕಾಶನ ಸಂಸ್ಥೆಗಳಿವೆ. ಅವುಗಳಲ್ಲಿ `ಯುಗಪುರುಷ' ಎಂಬ ಪತ್ರಿಕೆಯು ೧೯೪೭ರಂದು ನಮಗೆ ಸ್ವಾತಂತ್ರ್ಯ ಸಿಕ್ಕ ವರ್ಷ ಮೂರು ಸಾಹಸಿಗಳಿಂದ ಸ್ಥಾಪಿಸಲ್ಪಟ್ಟಿತು. ಆ ಮೂವರು ತ್ರಿಮೂರ್ತಿಗಳಂತೆ ಪತ್ರಿಕೆಯನ್ನು ಉಡುಪಿಯಲ್ಲಿ ಪ್ರಾರಂಭಿಸಿದರು. ಅವರು ಯಾರೆಂದರೆ ಕೊಡತ್ತೂರು ಅನಂತ ಪದ್ಮನಾಭ ಉಡುಪ, ಬನ್ನಂಜೆ ರಾಮಾಚಾರ್ಯರು, ಹಾಗೂ ಎಸ್. ಎಲ್. ನಾರಾಯಣ ಭಟ್ಟರು. ಆವಾಗ ಉಡುಪಿಕಲ್ಯಾಣಪುರದಲ್ಲಿ ಪತ್ರಿಕೆ ಮುದ್ರಣಗೊಳ್ಳುತ್ತಿತ್ತು. ರಾಮಾಚಾರ್ಯರು ಮತ್ತು ನಾರಾಯಣ ಭಟ್ಟರು ಸ್ವಲ್ಪ ಸಮಯದವರೆಗೆ ಮಾತ್ರ ಜೊತೆಗಿದ್ದದ್ದು. ಅನಂತರ ಅವರು ಬೇರೆ ಪತ್ರಿಕೆಯನ್ನು ಹೊರತರುವ ವಿಚಾರವನ್ನು ಮಾಡಿದುದರಿಂದ `ಯುಗಪುರುಷ' ದ ಭಾರವನ್ನು ಉಡುಪರ ಹೆಗಲಿಗೇ ಬಿಟ್ಟರು. ಮುಂದೆಲ್ಲಾ`ಯುಗಪುರುಷ'ದ ಜವಾಬ್ದಾರಿ ಉಡುಪರಿಗೇ ಉಳಿಯಿತು. ಉಡುಪರು ಅದನ್ನು ತನ್ನ `ಮಾನಸ ಪುತ್ರ' ಎಂದೇ ಬಗೆದರು. ೧೯೪೮ರಲ್ಲಿ ಸ್ಥಳೀಯ ಪಾಂಪೆ ಶಾಲೆಯಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದ ಮೇಲೆ ಉಡುಪಿಯಲ್ಲಿದ್ದ ತಮ್ಮ ಪತ್ರಿಕಾ ಕಾರ್ಯಾಲಯವನ್ನು ಹುಟ್ಟೂರಿಗೆ ತಂದರು. `ಯುಗಪುರುಷ' ಕಿನ್ನಿಗೋಳಿಗೆ ಬಂದಿತು. ಮುಂದೆ ಇದು ಗ್ರಾಮೀಣ ಪ್ರದೇಶದ ಪತ್ರಿಕೆಯಾಗಿ ಬೆಳೆಯಿತು.

ಹಿರಿಯರು[ಬದಲಾಯಿಸಿ]

ಕೊಡತ್ತೂರು ಉಡುಪರ ಹುಟ್ಟೂರು. ಅದು ದಕ್ಶಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿಗೆ ಸೇರಿದ ಕಿನ್ನಿಗೋಳಿಯ ಸಮೀಪ ಸುಮಾರು ಎರಡುವರೆ ಮೈಲಿ ಅಂತರದಲ್ಲಿದೆ. ಉಡುಪರ ಪೂರ್ವಜರು ಕುಂದಾಪುರ ಸಮೀಪದ ಕಂದಾವರದವರು. ಅವರು ಅಲ್ಲಿಂದ ಬಂದು ನಲೆಸಿದ್ದು ಕೊಡತ್ತೂರಿನ ಸಮೀಪದ ಅತ್ತೂರಿನಲ್ಲಿ. ಕೊಡತ್ತೂರಿನಲ್ಲಿ ಜೈನ ಕಾಂತರಸರಿಂದ ನಡೆದುಕೊಂಡು ಬಂದ ಒಂದು ಮಠವಿತ್ತು. ಅದರ ಹೆಸರು ದೇವಸ್ವ ಮಠ. ಅದನ್ನು ನೋಡಿಕೊಳ್ಳುವ ಒಂದು ಬ್ರಾಹ್ಮಣ ಕುಟುಂಬವಿತ್ತು. ಆ ಕುಟುಂಬ ನಶಿಸಿದ ಮೇಲೆ ಒಂದು ಉಡುಪ ಕುಟುಂಬವನ್ನು ಇಲ್ಲಿಗೆ ಕರೆಯಿಸಲಾಯಿತಂತೆ. ಇದು ಸುಮಾರು ಕ್ರಿ. ಶ. ೧೮೩೦ರ ಇಸ್ವಿಯಿರಬಹುದೆಂದು ಅಂದಾಜಿಸಲಾಗಿದೆ. ಮಾಧ್ವ ಸಂಪ್ರದಾಯಕ್ಕೆ ಸೇರಿದ ಇವರು ಉಡುಪಿಯ ಅಷ್ಟ ಮಠಗಳಲ್ಲಿ ಕೃಷ್ಣಾಪುರ ಮಠಕ್ಕೆ ಸೇರಿದವರು. ಶ್ರೀನಿವಾಸ ಮತ್ತು ಗಣಪತಿ ಇವರ ನಿತ್ಯ ಆರಾಧ್ಯ ದೇವರು. ಋಗ್ವೇದಿಗಳಾದ ಇವರು ವೇದಧ್ಯಯನ, ಸಂಸ್ಕೃತಾಭ್ಯಾಸಗಳಲ್ಲಿ ತೊಡಗಿ ಹೆಚ್ಚಿನ ಆಸಕ್ತರಾಗಿದ್ದರು. ಕೊಡತ್ತೂರಿಗೆ ಬಂದವರಲ್ಲಿ ಮೊದಲಿಗರು ಶಂಕರನಾರಾಯಣ ಉಡುಪರು. ಅಂದರೆ ಅನಂತ ಪದ್ಮನಾಭ ಉಡುಪರ ಅಜ್ಜ. ಇವರು ವೇದಧ್ಯಯನ, ಪೌರೋಹಿತ್ಯ, ಜ್ಯೋತಿಷ್ಯಗಳಲ್ಲಿ ಪಾರಂಗತರಾದ ಸುಸಂಸ್ಕೃತ ಸಭ್ಯ ವ್ಯಕ್ತಿಗಳು. ಇವರಿಗೆ ಮೂರು ಮಕ್ಕಳು. ದಾಸ ಉಡುಪರು, ನಾರಾಯಣ ಯಾನೆ ತಮ್ಮಯ್ಯ ಉಡುಪರು ಮತ್ತು ಈಶ್ವರ ಉಡುಪರು. ಎರಡನೆಯವರಾದ ತಮ್ಮಯ್ಯ ಉಡುಪರೇ ಅನಂತ ಪದ್ಮನಾಭ ಉಡುಪರ ತಂದೆಯವರು. ತಾಯಿಯವರ ಹೆಸರು ಗಂಗಮ್ಮ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಅನಂತ ಪದ್ಮನಾಭ ಉಡುಪರು ಜನಿಸಿದ್ದು ೧೯೨೫ ಜನವರಿ, ೫ರಂದು. ಅನಂತ ಪದ್ಮನಾಭ ಉಡುಪರು ಬಾಲ್ಯದಲ್ಲಿ ನಾಲ್ಕು ವರ್ಷಗಳ ಕಾಲ ಋಗ್ವೇದವನ್ನು ಅಭ್ಯಾಸ ಮಾಡಿದರು. ಅಭ್ಯಾಸ ಮಾಡಿಸಿದ ಗುರು ಅವರ ತೀರ್ಥರೂಪರೇ. ಒಂದು ವರ್ಷ ಪೌರೋಹಿತ್ಯ ಕಲಿಕೆಯು ಅವರಿಂದಲೇ ಆಯಿತು. ಉಡುಪರ ಪ್ರಾಥಮಿಕ ಶಿಕ್ಷಣವು ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅನಂತರ ೧೯೩೮ರಲ್ಲಿ ಅವರು ಉಡುಪಿಯಲ್ಲಿ ಸಂಸ್ಕೃತ ಕಾಲೇಜಿಗೆ ಸೇರಿದರು. ಅಲ್ಲಿ ಐದು ವರ್ಷಗಳ ಕಾಲ ಅವರ ಸಂಸ್ಕೃತ ಪ್ರಾರಂಭಿಕ ಅಭ್ಯಾಸ ನಡೆಯಿತು. ೧೯೪೪ರಲ್ಲಿ ಮತ್ತು ೪೫ನೆ ಇಸ್ವಿಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ಕನ್ನಡ `ಕಾವ', ಮತ್ತು `ಜಾಣ', ಈ ಎರಡು ಪರೀಕ್ಷೆಗಳಿಗೆ ಕುಳಿತುಕೊಂಡು ಸಾಹಿತ್ಯದ ಓದಿಗೆ ತೊಡಗಿಕೊಂಡರು. ೧೯೪೬ ಮತ್ತು ೪೭ನೆ ಇಸ್ವಿಯಲ್ಲಿ ಸಂಸ್ಕೃತ ಶಿರೋಮಣಿ ಪರೀಕ್ಷೆ ಪಾಸು ಮಾಡಿದರು. ಅವರ ವಿದ್ಯಾ ಆಸಕ್ತಿ ಅಪಾರ. ೧೯೪೭-೪೮ರಲ್ಲಿ ಜ್ಯೋತಿಷ್ಯದಲ್ಲಿ ಸ್ನಾತಕರಾದರು. ಅದರ ಜೊತೆಗೆ ಹಿಂದಿ ವಿಶಾರದಾ ಪರೀಕ್ಷೆಯನ್ನು ಪೂರೈಸಿದರು. ೧೯೫೦ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ `ಕನ್ನಡ ವಿದ್ವಾನ್' ಪದವಿಯನ್ನು ಪಡೆದರು. ೧೯೫೪ರಲ್ಲಿ ಹಿಂದಿ ಪ್ರವೀಣ ಮತ್ತು ಪ್ರಚಾರಕ ಈ ಎರಡೂ ಪರೀಕ್ಷೆಗಳನ್ನು ಮುಗಿಸಿದರು. ಕನ್ನಡ, ಹಿಂದಿ, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿ ಪಾರಂಗತರಾದ ಉಡುಪರು ವೃತ್ತಿಗೆ ಬೇಕಾದ ಷೈಕ್ಷಣಿಕ ಅರ್ಹತೆಯನ್ನು ಗಳಿಸಿಕೊಂಡರು.

ಉಡುಪರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ವೃತ್ತಿಯನ್ನು ಸ್ವೀಕರಿಸಿದ್ದು ೧೯೪೮ ಜೂನ್ ೧ರಲ್ಲಿ; ಸ್ಥಳೀಯ ಪಾಂಪೈ ಜೂನಿಯರ್ ಕಾಲೇಜು, ಐಕಳ-ಇಲ್ಲಿ. ಕನ್ನಡ ಹಿಂದಿ ಭಾಷಾ ಬೋಧಕರಾಗಿ ಮೂವತ್ತೆರಡು ಕಾಲ ಈ ಸಂಸ್ಥೆಯಲ್ಲಿ ದುಡಿದು ನಿವೃತ್ತರಾದರು.

ಪತ್ರಿಕೋದ್ಯಮ[ಬದಲಾಯಿಸಿ]

ಪತ್ರಿಕೋದ್ಯಮಿಯಾಗಿ ಉಡುಪರು ಮಾಡಿದ ಸಾಧನೆ ಸಾಹಸದ್ದೇ ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಒಳಗೂ ಹೊರಗೂ `ಯುಗಪುರುಷ' ಮಾಸ ಪತ್ರಿಕೆ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಇದೊಂದೇ ಪತ್ರಿಕೆ ಇಷ್ಟೊಂದು ದೀರ್ಘ ಕಾಲ ತಪ್ಪದೆ ಬರುತ್ತಿದೆ. ಉಡುಪರು ಪತ್ರಿಕೆಯನ್ನು ಒಂದು ಉದ್ಯಮ ಎಂದು ಭಾವಿಸಿದವರಲ್ಲ. ಓದುಗರಲ್ಲಿ ಉತ್ತಮ ಅಭಿರುಚಿ, ಆಸ್ಕ್ತಿ, ಸದ್ಗುಣ ಸಂಸ್ಕಾರಗಳನ್ನು ಒಡ್ಮೂಡಿಸಬೇಕೆಂಬ ಕಳಕಳಿ ಉಡುಪರಿಗೆ ಇತ್ತೇ ಹೊರತೂ ಬರೀ ಮನೋರಂಜನೆ ಅವರ ಉದ್ದೇಶವಾಗಿರಲಿಲ್ಲ. ನಾಡಿನ ಹಿರಿಯ ಸಾಹಿತಿಗಳ ಲೇಖನಗಳು, ಕವನಗಳು, ಚಿಂತನೆಗಳೆಲ್ಲವನ್ನೂ `ಯುಗಪುರುಷ'ವು ತನ್ನ ಓದುಗರಿಗೆ ಒದಗಿಸಿದೆ. `ಯುಗಪುರುಷ'ವನ್ನು ಮುಂದಿಟ್ಟುಕೊಂಡು ಉಡುಪರು ಕಿನ್ನಿಗೋಳಿಯಲ್ಲಿ ಒಂದು ಸಾಂಸ್ಕೃತಿಕ ವೇದಿಕೆಯನ್ನೇ ನಿರ್ಮಾಣ ಮಾಡಿದ್ದು ಅವರ ಬದುಕಿನ ಮಹತ್ವದ ಸಾಧನೆ ಎನ್ನಬೇಕು.

ಈ ಪತ್ರಿಕೆಯ ಮೂಲಕ ಉಡುಪರು ಮಾಡಿದ ಇನ್ನೊಂದು ಸಾಧನೆ ಅಷ್ಟೇ ಮಹತ್ವದ ಕೆಲಸವೆಂದರೆ ಉದಯೋನ್ಮುಖ ಸಾಹಿತಿಗಳನ್ನು ಗಮನಿಸಿದ್ದು, ಪ್ರೋತ್ಸಾಹಿಸಿದ್ದು. ಸಾಮಾನ್ಯವಾಗಿ ಪತ್ರಿಕಾ ಪ್ರಪಂಚದಲ್ಲಿ ಈಗ ತಾನೇ ಕಣ್ಣು ತೆರೆಯಲು ಪ್ರಯತ್ನಿಸುವ ಸಾಹಿತ್ಯ ಶಿಶುಗಳಿಗೆ ಅವಕಾಶವೇ ಇರುವುದಿಲ್ಲ. ಆ ನಿಟ್ಟಿನಲ್ಲಿ ಉಡುಪರ ತತ್ವ ಇದು: ಹುಟ್ಟುವಾಗಲೇ ಒಬ್ಬ ಸಾಹಿತಿಯಾಗಿಯೇ ಹುಟ್ಟಲಾರ. ಅದಕ್ಕೆ ಅವಕಾಶ ಸಿಗದಿದ್ದರೆ ಒಬ್ಬ ಹೊಸಬನು ಸಾಹಿತಿಯಾಗಿ ಬೆಳೆಯಲು ಹೇಗೆ ಸಾಧ್ಯ? ಇದು ಉಡುಪರ ದೃಷ್ಟಿ. ವರ್ಷಕ್ಕೊಮ್ಮೆ ವಿಶೇಷಾಂಕ ಹೊರ ತರುತ್ತಿದ್ದರು. ದಸರಾ ದೀಪಾವಳಿ ವಿಶೇಷಾಂಕ ಎಂದು ಹೊರ ಬರುತ್ತಿದ್ದ ಈ ಸಂಚಿಕೆಯನ್ನು ಪ್ರತಿ ವರ್ಷ ಒಂದೊಂದು ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಆ ವಿಷಯಕ್ಕೆ ಸಂಬಂಡಪಟ್ಟಂತೆ ನಾಡಿನ ವಿವಿಧ ಲೇಖರಿಂದ ಲೇಖ್ನಗಳನ್ನು ಆಮಂತ್ರಿಸುತ್ತಿದ್ದರು. ಗಣ್ಯ ಲೇಖಕರೆಲ್ಲ ಈ ಸಂಚಿಕೆಗೆ ಅತ್ಯಂತ ಬೆಲೆ ಬಾಳುವ ಲೇಖನಗಳನ್ನು ಬರೆದಿದ್ದಾರೆ.

ಪ್ರಕಾಶನದ ಸಾಹಸ[ಬದಲಾಯಿಸಿ]

ಉಡುಪರು ತಮ್ಮ ಪ್ರಕಾಶನದಿಂದ ಸಾಧಿಸಿದ ಮತ್ತೊಂದು ಸಾಧನೆಯಿದೆ. ಅದು ಉದಯೋನ್ಮುಖ ಲೇಖಕರ ಕೃತಿಗಳನ್ನು ಪ್ರಕಟಿಸಿ ಅವರನ್ನು ಪ್ರೋತ್ಸಾಹಿಸಿದ್ದು. ಇಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಅನೇಕ ಸಾಹಿತಿಗಳ ಪ್ರಾರಂಭಿಕ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಕೀರ್ತಿ ಉಡುಪರಿಗೆ ಸಲ್ಲುತ್ತದೆ. ಶ್ರೀಕೆ.ಗಣೇಶ ಮಲ್ಯ, ಡಾ. ಸಿ ಹೊಸಬೆಟ್ಟು, ಡಾ ನಾ ಮೊಗಸಾಲೆ, ಸುಬ್ರಾಯ ಚೊಕ್ಕಾಡಿ, ಪಳಕಳ ಸೀತಾರಾಮ ಭಟ್ಟ, ಪು. ಶ್ರೀನಿವಾಸ್ ಭಟ್, ಸುಮುಖಾನಂದ ಜಲವಳ್ಳಿ, ಹೀಗೆ ಪಟ್ಟಿಯನ್ನು ಉದ್ದ ಬೆಳೆಸಬಹುದು. ತಮ್ಮ ಪತ್ರಿಕೆ ಹೇಗೋ ಹಾಗೆ ತಮ್ಮ ಪ್ರಕಾಶನದಿಂದಲೂ ಅದೆಷ್ಟೋ ಮಂದಿ ಸಾಹಿತಿಗಳನ್ನು ಬೆಳಕಿಗೆ ತಂದದ್ದು, ಬರೆಯುವ ವಿಶ್ವಾಸ ಮೂಡಿಸಿದ್ದು ಉಡುಪರ ಸಾಧನೆಯಲ್ಲಿ ಹೆಕ್ಕಿ ಹೇಳಬೇಕಾದ ವಿಷಯವಾಗಿದೆ.

ಸಾಂಸ್ಕೃತಿಕ ಹರಿಕಾರ[ಬದಲಾಯಿಸಿ]

ಪ್ರತಿ ವರ್ಷ ಯುಗಪುರುಷ ಆಶ್ರಯದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ ದಸರಾ ಇಂಟ ರಾಷ್ಟ್ರೀಯ ಪರ್ವ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು.ನಾಟಕ, ಸಂಗೀತ, ನೃತ್ಯ ಇಂಟ ಮನೋರಂಜಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. `ಯುಗಪುರುಷ' ಪತ್ರಿಕೆಯ ರಜತೋತ್ಸವ, ತ್ರಿದಶಮಾನೋತ್ಸವ, ಚತುರ್ಥ ದ್ಶಮಾನೋತ್ಸವಗಳನ್ನು ಮೂರು ನಾಲ್ಕು ದಿನಗಳ ವರೆಗೆ ಹಮ್ಮಿಕೊಂಡು ಸಾಹಿತ್ಯಗೋಷ್ಟಿ, ಕವಿಗೋಷ್ಟಿಗಳಂತಹ ವಿವಿಧ ಗೋಷ್ಠಿಗಳನ್ನು ನಡೆಸುತ್ತಿದ್ದರು. ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸ ಸಪ್ತಾಹವನ್ನು ಏರ್ಪಡಿಸಿ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ಉಪನಿಷತ್ತುಗಳು, ಹೀಗೆ ವಿವಿಧ ದರ್ಶನ, ಪುರಾಣ, ಮಹಾಕಾವ್ಯಗಳ ಮೇಲೆ ಪ್ರವಚನ ಕೊಡಿಸುವುದರ ಮೂಲಕ ಸನಾತನ, ಧರ್ಮ-ಸಂಸ್ಕೃತಿಯ ಬಗ್ಗೆ ಜಿಜ್ನಾಸೆ ಮೂಡಿಸಿ ಈ ಪರಿಸರದ ಜನತೆಯ ಜ್ಞಾನ ದಾಹವನ್ನು ತಣಿಸಿದವರು ಉಡುಪರು. ಹನ್ನೆರಡು ವರ್ಷಗಳಿಂದ ನಡೆಯಿಸಿಕೊಂಡು ಬಂದ ಈ ಕಾರ್ಯವನ್ನು ಅವರು ಇದೊಂದು ಜ್ಞಾನ ಯಜ್ನವೆಂದೇ ಸ್ವೀಕರಿಸಿದವರು. ಅಷ್ಟೇ ಅಲ್ಲದೇ ಅದೇಸಮಯ ಭದ್ರಗಿರಿ ಅಚ್ಯುತದಾಸರನ್ನು ಬರಮಾಡಿಕೊಂಡು ಹರಿಕಥಾ ಸಪ್ತಾಹವನ್ನು ನಿರಂತರವಾಗಿ ನಡೆಯಿಸಿಕೊಂಡು ಬಂದವರು. ಅವರ ಧಾರ್ಮಿಕ ಶೃದ್ಧೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ಗೌರವ ಕಳಕಳಿ -ಇವುಗಳಿಗೆ ಬೇರೆ ಉದಾಹರಣೆ ಬೇಕಿಲ್ಲ.

ಉಡುಪರ ಸಾಹಿತ್ಯಾವಲೋಕನ[ಬದಲಾಯಿಸಿ]

ಕೊ ಅ ಉಡುಪರ ಒಟ್ಟೂ ಸಾಹಿತ್ಯವನ್ನು ಮುಖ್ಯವಾಗಿ ಪದ್ಯ ಸಾಹಿತ್ಯ, ಮತ್ತು ಗದ್ಯ ಸಾಹಿತ್ಯ ಎಂದು ವಿಂಗಡಿಸಿಕೊಳ್ಳಬಹುದು. ಕೊಡತ್ತೂರು ಅನಂತಪದ್ಮನಾಭ ಉಡುಪ ಎಂಬ ಹೆಸರಿನಲ್ಲಿ ಗ್ದ್ಯ ರಚನೆ ಮಾಡಿರುವ ಅವರು ಪದ್ಯ ರಚನೆಯಲ್ಲಿ `ಕಮಲನಾಭ' ಎಂಬ ಕಾವ್ಯನಾಮವನ್ನು ಬಳಸಿಕೊಂಡಿರುವರು. ಪದ್ಯ ಸಾಹಿತ್ಯ ಉಡುಪರ ಮೊದಲ ಕವನ ಸಂಕಲನ `ಸಮರ್ಪಣೆ' ೧೯೫೪ರಲ್ಲಿ ಮುದ್ರಿತವಾದುದು. ಇದರಲ್ಲಿ ಒಟ್ಟೂ ೧೫ ಕವನಗಳಿವೆ. ಎರಡನೆಯ ಸಂಗ್ರಹ `ಸುಮ ಸಂಚಯ' ಇದ್ಸು ೧೯೫೫ರಲ್ಲಿ ಪ್ರಕಟವಾದುದು. ೧೯೬೭ರಲ್ಲಿ ಪ್ರಕಟಿತ `ತುಂಬಿದ ತಂಬಿಗೆ' ಉಡುಪರ ಮೂರನೆ ಕವನ ಸಂಕಲನ. ೧೯೭೩ರಲ್ಲಿ `ಜೋಡಿ-ಮೋಡಿ' ಕವನ ಸಂಕಲನ ಪ್ರಕಟಗೊಂಡಿತು. ಎಸ್. ವಿ. ಪರಮೇಶ್ವರ ಭಟ್ಟರು ಮುನ್ನುಡಿ ಬರೆದಿದ್ದಾರೆ. ಉಡುಪರ ಗದ್ಯ ಸಂಕಲನದಲ್ಲಿ ಪ್ರಬಂಡ ಸಂಕಲನಗಳು, ನಾಟಕಗಳು, ಕಥೆ-ಕಾದಂಬರಿಗಳು, ಪರಿಚಯ ಕೃತಿಗಳು, ಇತರ ಕೃತಿಗಳು ಎಂದು ವಿಂಗಡಿಸಬಹುದು. `ಮೂಲದಾಳ' ಕಥಾ ಸಂಕಲನ. ಕುಟಿಲ ಕಾಲ' ಎಂಬುದು ಐತಿಹಾಸಿಕ ಕಾದಂಬರಿ. `ದೀನ-ಮಾನ'ಮೂರು ಅಂಕಗಳ ಐತಿಹಾಸಿಕ ನಾಟಕವಾಗಿದೆ. ಯೇಸುವಿನ ಮಾನವೀಯ ಅನುಕಂಪದ ಕಡೆಗೆ ಗಮನಸೆಳೆವ ಇನ್ನೊಂದು ಚಿಕ್ಕ ನಾಟಕ `ಕರುಣಾದಾತ ದೇವದೀತ' `ಧೂರ್ತೋಪಾಖ್ಯಾನ 'ಇದೊಂದು ಅನುವಾದಿತ ಕೃತಿ. ``ಕಿರುಕಂದರ ಲಾಲನೆ-ಪಾಲನೆ' ಈ ಕಿರು ಹೊತ್ತಗೆಯಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸಬಲ್ಲ ಹೊತ್ತಗೆಯಾಗಿದೆ. ಪ್ರಿಚಯ ಕೃತಿಗಳಲ್ಲಿ ಕೆಲವು ಕೃತಿಗಳು ಇವೆ. ೧೯೬೪ರಲ್ಲಿ ಪ್ರಕಟವಾದ ``ಮಂಗಲಾಂಗನೆಯರು ಹೊತ್ತಗೆಯಲ್ಲಿ ಒನಕೆ ಓಬವ್ವ, ಪನ್ನೆ, ಚಾಂದ್ ಬೀಬಿ, ದುರ್ಗಾವತಿ, ಅರಗಲ್ ರಾಣಿ, ಕಿತ್ತೂರು ಚೆನ್ನಮ್ಮ ಈ ಆರು ಮಹಿಳೆಯರ ಕುರಿತ ಹೃದ್ಯವಾದ ಪರಿಚಯ ಲೇಖನಗಳಿವೆ. ಶ್ರೀಕಟೀಲು ಕ್ಷೇತ್ರದ ಕುರಿತು ಬೇರೆ ಬೇರೆ ಸಂದರ್ಭದಲ್ಲಿ ಬರೆದ ನಾಲ್ಕು ಕೃತಿಗಳಿವೆ. ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದ ಕುರಿತು ಬರೆದ ಪಾವನ ಕೃತಿಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ರೀತಿಯ ಆರಾಧನೆಯಾದ ನಾಗಮಂಡಲದ ಕುರಿತು ಪರಿಚಯ ಹೊತ್ತಗೆಯನ್ನು ಬರೆದಿದ್ದಾರೆ. ಪ್ರಬಂಡ ಹೊತ್ತಗೆಗಳು ಚಾರು-ಚಯನ' ಮೊದಲ ಪ್ರಬಂಡ ಸಂಕಲನ. ೧೯೬೭ರಲ್ಲಿಪ್ರಕಟಗೊಂಡಿತು. ೧೯೭೨ರಲ್ಲಿ ಪ್ರಕಟವಾದ `ನಮನ' ಉಡುಪರ ಎರಡ್ನೆಯ ಪ್ರಬಂಡ ಸಂಕಲನ. ಅವರ ಮೂರ್ನೆ ಪ್ರಬಂಡ ಸಂಕಲನ `ಬಿಂದು-ಸಿಂಧು' ೧೯೭೭ರಲ್ಲಿ ಪ್ರಕಟಗೊಂಡಿತು. ೧೯೮೩ರಲ್ಲಿ ಮೂರು ಚಿಕ್ಕ ಹೊತ್ತಗೆಗಳಾದ `ಅಂತ್ರಾಳ', ಮಾನದೋ-ನಃ, ಬೆಳಕು ಇವು ಮೂರು ಚಿಕ್ಕ ಹೊತ್ತಗೆಗಳು. ಉಡುಪರ `ಜೋಡಿ-ಮೋಡಿ' ಕವನ ಸಂಗ್ರಹಕ್ಕೆ ಮುನ್ನುಡಿ ಬರೆದ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಹೀಗೆ ಬರೆಯುತ್ತಾರೆ:` ಕಮಲನಾಭ ಎನ್ನುವುದು ಕನ್ನಡ ಸಾರಸ್ವತ ಲೋಕದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕೇಳಿ ಬರುತ್ತಿರುವ ಒಂದು ಸೊಗಸಾದ ಕಾವ್ಯನಾಮ! ಈ ಕಾವ್ಯನಾಮದಿಂದ ಕೃತಿಗಳನ್ನು ಬರೆಯುತ್ತಿರುವವರು ವಿದ್ಯಾ ವಿನಯ ಸಂಪನ್ನರೂ, ಸುಸಂಸ್ಕೃತರೂ, ಆದ ಕೊಡತ್ತೂರು ಅನಂತ ಪದ್ಮನಾಭ ಉಡುಪರು. ಇಂಥಹ ಒಂದು ಮನೋಧರ್ಮದವರು ಕವಿಯಾಗಿ ಕೃತಿ ರಚನೆ ಮಾಡಿದಾಗ ಅಲ್ಲಿ ಧರ್ಮವೂ ಕಾವ್ಯ ಧರ್ಮವೂ ಕೂಡಿಯೇ ಮೂಡಿ ಮೆರಗುತ್ತಿರುವುದು ಸ್ವಾಭಾವಿಕ