ಚಿತ್ರದುರ್ಗ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರದುರ್ಗ
ಜಿಲ್ಲೆ
ದೇಶ ಭಾರತ
ರಾಜ್ಯಕರ್ನಾಟಕ
Government
 • ಲೋಕಸಭಾ ಸದಸ್ಯಎ.ನಾರಾಯಣ ಸ್ವಾಮಿ
Area
 • Total೨೧.೫೭ km (೮.೩೩ sq mi)
Elevation
೭೩೨ m (೨,೪೦೨ ft)
Population
 (2001)
 • Total೧,೨೨,೫೯೪
 • Density೫,೬೮೩.೫೪/km (೧೪,೭೨೦.೩/sq mi)
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್ ಕೋಡ್
577 50x
ದೂರವಾಣಿ ಕೋಡ್08194
Vehicle registrationKA-16

ಚಿತ್ರದುರ್ಗ - ಕರ್ನಾಟಕದ ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ ದಾವಣಗೆರೆ ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು (ಚಿತ್ರಲಿಂಗ) ಆಳ್ವಿಕೆ ಮಾಡಿದ ಪ್ರದೇಶ. ಆ ಕಾರಣದಿಂದಲೇ ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರಕೇತು ಅಥವಾ ಚಿತ್ರಲಿಂಗನ ವಂಶದವರು ಎಂದು ಹೇಳಿಕೊಳ್ಳುವ ಕಾಡುಗೊಲ್ಲ(ಕರಡಿಗೊಲ್ಲ) ಜನಾಂಗ ಈ ಭಾಗದಲ್ಲಿ ಹೆಚ್ಚಾಗಿದೆ. ಈ ಪ್ರದೇಶ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು.[೧] ಎಂದು ಕರೆದದ್ದುಂಟು.ಚಿತ್ರದುರ್ಗ ಐತಿಹಾಸಿಕ ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿ.

ಚಿತ್ರದುರ್ಗದ ನಕ್ಷೆ

ಇತಿಹಾಸ[ಬದಲಾಯಿಸಿ]

ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.

ವಿಜಯನಗರದ ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ ಮದಕರಿ ನಾಯಕ. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.

ಇಸಿಲ - ಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.

ಸಿದ್ಧಾಪುರ ಇಲ್ಲಿ ಅಶೋಕನ ಶಾಸನ ದೊರಕಿದೆ.

ಒನಕೆ ಓಬವ್ವ[ಬದಲಾಯಿಸಿ]

ಓಬವ್ವನ ಕಿಂಡಿ, ಚಿತ್ರದುರ್ಗದ ಕೋಟೆ.

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹೆಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದು ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ [www.chitharadurga.com]

ಚಿತ್ರದುರ್ಗ ಜಿಲ್ಲೆಯ ಕುರಿತು ಮಹತ್ವದ ಮಾಹಿತಿ ಬೇಕೆ, ನೀವು ಜಿಲ್ಲೆಯವರಾಗಿದ್ದು ಎಷ್ಟು ಗೊತ್ತು...?

ಚಿತ್ರದುರ್ಗ:

ಮಧ್ಯ ಕರ್ನಾಟಕದ ಬಯಲು ಸೀಮೆಯ ಕೋಟೆ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಚಿತ್ರದುರ್ಗ ಜಿಲ್ಲೆಯ ಕೆಲವು ಮಹತ್ವದ ಮಾಹಿತಿಯನ್ನು ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆಯು ಕೃಷಿ ಹವಾಮಾನದನ್ವಯ 4ನೇ ಮಧ್ಯ ಒಣ ಹವೆ ವಲಯವಾಗಿದ್ದು ವಾಡಿಕೆಯಂತೆ ವಾರ್ಷಿಕ ಸರಾಸರಿ 540 ಮಿ.ಮೀ ಮಳೆಯಾಗುತ್ತಿದ್ದು ಇದು ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುವ ಪ್ರದೇಶವಾಗಿದೆ.

ಸದಾ ಬರಗಾಲಕ್ಕೆ ತುತ್ತಾಗುವ ಈ ಜಿಲ್ಲೆಯನ್ನು ಪ್ರಕೃತಿಯೇ ಎರಡು ಭಾಗವಾಗಿ ವಿಂಗಡಣೆ ಮಾಡಿದೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳನ್ನು ಮತ್ತು ಚಿತ್ರದುರ್ಗದ ತುರುವನೂರು ಹೋಬಳಿಯನ್ನು ಮಳೆಯಿಂದ ಮರೆಯಾದ ಪ್ರದೇಶವೆಂದು, ಹೊಸದುರ್ಗ, ಹೊಳಲ್ಕೆರೆ ಮತ್ತು ಚಿತ್ರದುರ್ಗದ ಅರ್ಧ ಭಾಗವನ್ನು ಅರೆ ಮಲೆನಾಡು ಎಂದು ವಿಗಂಡಣೆ ಮಾಡಿದೆ.

ಈ ಎರಡು ವಿಂಗಡಣೆಳೊಂದಿಗೆ ಇಲ್ಲಿನ ಜನತೆ ಪ್ರತಿ ವರ್ಷ ಪ್ರಕೃತಿ ವಿಕೋಪ, ಬರ, ಮಳೆ, ಮೋಡಗಳೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿ ಸತತ ಬರ ಎದುರಿಸುತ್ತಿದ್ದಾರೆ. ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 7,70,702 ಹೆಕ್ಟೇರ್. ಇದರಲ್ಲಿ ಒಟ್ಟು ಸಾಗುವಳಿಗೆ ಯೋಗ್ಯವಾಗಿರುವ ಭೂಮಿ 4,42,888 ಹೆಕ್ಟೇರ್, ವಿವಿ ಸಾಗರ, ಗಾಯಿತ್ರಿ ಜಲಾಶಯ, ಕೆರೆ, ಕಟ್ಟೆಗಳು, ಕೊಳವೆ ಬಾವಿಗಳು, ತೆರೆದ ಬಾವಿಗಳು ಸೇರಿದಂತೆ ಎಲ್ಲ ಜಲಮೂಲಗಳಿಂದ 1,16,423 ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿ ಭೂಮಿಯಾಗಿದೆ.

ಜಿಲ್ಲೆಯಾದ್ಯಂತ ಒಟ್ಟು 3,01,562 ಸಣ್ಣ, ಅತಿ ಸಣ್ಣ, ದೊಡ್ಡ ರೈತರಿದ್ದಾರೆ. ಇವರುಗಳ ಒಟ್ಟಾರೆ ಭೂ ಒಡೆತನದ ಭೂಮಿ 5,48,355 ಹೆಕ್ಟೇರ್ ಇದೆ. ಇದರಲ್ಲಿ 4,25,000 ಹೆಕ್ಟೇರ್ ಕೃಷಿ ಭೂಮಿಯಾಗಿದ್ದು ಈ ಪೈಕಿ ಮುಂಗಾರು ಹಂಗಾಮಿನಲ್ಲಿ 3,58,300 ಹೆಕ್ಟೇರ್ ಬಿತ್ತನೆ ಮಾಡಲಾಗುತ್ತದೆ. ಹಿಂಗಾರಿನಲ್ಲಿ 57,200 ಹೆಕ್ಟೇರ್ ಬಿತ್ತನೆ ಮಾಡಿದರೆ ಬೇಸಿಗೆ ಕಾಲದಲ್ಲಿ 9860 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತದೆ.

ಜಿಲ್ಲೆಯ ಬಹುತೇಕ ಮಳೆಯಾಶ್ರಿತ ಭೂಮಿಯಾದಗಿದೆ. ಒಂದು ಹೆಕ್ಟೇರ್ ಗಿಂತ ಕಡಿಮೆ ಇರುವ ಅತಿ ಸಣ್ಣ ರೈತರ ಸಂಖ್ಯೆ 1,19,034. ಇವರುಗಳ ಒಡೆತನದಲ್ಲಿರುವ ಭೂಮಿ 64,915 ಹೆಕ್ಟೇರ್ ಮಾತ್ರ. ಇನ್ನೂ 1 ರಿಂದ 2 ಹೆಕ್ಟೇರ್ ಒಳಗಿನ ಸಣ್ಣ ರೈತರ ಸಂಖ್ಯೆ 96,837. ಇವರುಗಳ ಭೂ ಒಡೆತನ 1,37,400 ಹೆಕ್ಟೇರ್ ಆದರೆ 2 ಹೆಕ್ಟೇರ್ ಗಿಂತ ಹೆಚ್ಚಿನ ಭೂಮಿ ಹೊಂದಿರುವ ದೊಡ್ಡ ರೈತರ ಸಂಖ್ಯೆ ಕೇವಲ 85,691. ಇವರುಗಳು ಒಡೆತನದಲ್ಲಿರುವ ಭೂಮಿ 3,46,040 ಹೆಕ್ಟೇರ್ ಪ್ರದೇಶ.

ಜಿಲ್ಲೆಯಲ್ಲಿ ಒಟ್ಟು 1063 ಹಳ್ಳಿಗಳಿವೆ. ಈ ಪೈಕಿ 948 ಚರಕ್ ಗ್ರಾಮಗಳಾದರೆ, 115 ಬೇಚರಕ್ ಗ್ರಾಮಗಳಾಗಿವೆ. 189 ಗ್ರಾಮ ಪಂಚಾಯಿತಿಗಳಿದ್ದು ಈ ವ್ಯಾಪ್ತಿಯಲ್ಲಿ 22 ರೈತ ಸಂಪರ್ಕ ಕೇಂದ್ರಗಳಿವೆ. ಚಿತ್ರದುರ್ಗ ಜಿಲ್ಲಾ ಕೇಂದ್ರವಾದರೆ 6 ತಾಲೂಕು ಕೇಂದ್ರಗಳಿವೆ. ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕು ಕೇಂದ್ರಗಳಾಗಿವೆ. ಈ ಆರು ತಾಲೂಕುಗಳಿಂದ 22 ಹೋಬಳಿ ಕೇಂದ್ರಗಳಿವೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ 16.60 ಲಕ್ಷ. ಬೆಂಗಳೂರು ವಿಭಾಗದ ಆಡಳಿತಕ್ಕೆ ಒಳಪಟ್ಟಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 305 ಕೆರೆಗಳಿವೆ. ಆ ಪೈಕಿ 147 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ, 128 ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರಲಿವೆ. ಜಿಲ್ಲೆಯಲ್ಲಿ ಸರ್ಕಾರಿ ಒಡೆತನದಲ್ಲಿ ಒಟ್ಟು 3,71,350-27 ಎಕರೆ ಭೂಮಿಯಿದೆ.

ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಪುನರ್‌ರಚನೆ  ವಿವರ:

  ಚಿತ್ರದುರ್ಗ 9 ತಾಲ್ಲೂಕುಗಳನ್ನು ಒಳಗೊಂಡಿದ್ದ ಚಿತ್ರದುರ್ಗ ಜಿಲ್ಲೆಯು 1997ರಲ್ಲಿ ದಾವಣಗೆರೆ ಜಿಲ್ಲೆ ರಚನೆ ನಂತರ ಆರು ತಾಲ್ಲೂಕುಗಳನ್ನು ಹೊಂದಿದೆ.

  ಈ ಜಿಲ್ಲೆಯ ಉತ್ತರಕ್ಕೆ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆ, ಪೂರ್ವಕ್ಕೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆ, ದಕ್ಷಿಣಕ್ಕೆ ತುಮಕೂರು ಜಿಲ್ಲೆ ಪಶ್ಚಿಮಕ್ಕೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸುತ್ತುವರೆಯಲ್ಪಟ್ಟಿದೆ.  ವೇದಾವತಿ ನದಿಯು ಮುಖ್ಯ ನದಿಯಾಗಿದೆ.

   ತಾಲ್ಲೂಕು ಪುನರ್ ವಿಂಗಡಣೆಯ ಸಂಬಂಧ ಜಿಲ್ಲೆಯಲ್ಲಿ ಹಾಲಿ ಇದ್ದ ಆರು ತಾಲ್ಲೂಕುಗಳ (ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು)  ಪುನರ್ ವಿಂಗಡಣೆ ಮಾಡುವ ಬಗ್ಗೆ ಹೆಚ್ಚುವರಿಯಾಗಿ ಚಿತ್ರದುರ್ಗ ಉತ್ತರ ಹಾಗೂ ಚಿತ್ರದುರ್ಗ ದಕ್ಷಿಣ ತಾಲ್ಲೂಕುಗಳನ್ನು ಹಾಗೂ ಪರಶುರಾಂಪುರ ಹೋಬಳಿಯನ್ನು ಹೊಸದಾಗಿ ತಾಲ್ಲೂಕುಗಳನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. 

  ಸಾರ್ವಜನಿಕರು, ಗ್ರಾಮಸ್ಥರು ಸಂಘಸಂಸ್ಥೆಗಳು, ರೈತರು ಹಾಗೂ ವಕೀಲರುಗಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ, ತುರುವನೂರು, ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಗಳನ್ನು ತಾಲ್ಲೂಕು ಕೇಂದ್ರಗಳಾಗಿ ಮಾಡಲು ಬೇಡಿಕೆ ಸಲ್ಲಿಸಿರುತ್ತಾರೆ.

ವರದಿ-ಹರಿಯಬ್ಬೆ ಹೆಂಜಾರಪ್ಪ. henjarappach@gmail.com

ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು[ಬದಲಾಯಿಸಿ]

  • ಏಳು ಸುತ್ತು ಕಲ್ಲಿನ ಕೋಟೆ
  • ಚಂದ್ರವಳ್ಳಿ ತೋಟ
  • ಮುರುಘಾ ಮಠ
  • ದೊಡ್ಡಗಟ್ಟ ತುರುವನೂರು
  • ಜೋಗಿಮಟ್ಟಿ
  • ಮಾರಿಕಣಿವೆ ಅಥವಾ ವಾಣಿವಿಲಾಸ ಸಾಗರ
  • ಹಾಲುರಾಮೇಶ್ಪರ
  • ನಾಯಕನಹಟ್ಟಿ
  • ಆಡು ಮಲ್ಲೇಶ್ವರ
  • ಗವಿ ರಂಗಾ

ಜಿಲ್ಲೆಯೆ ತಾಲ್ಲೂಕುಗಳು[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]

ಪೋಟೋಗ್ಯೇಲರಿ[ಬದಲಾಯಿಸಿ]

ದೀಪಸ್ತಂಬ
ಟಂಕೆಶಾಲೆ
ಇಸುರುಕಲ್ಲು
ಶಿಲಾಶಾಸನೆ

ಉಲ್ಲೇಖಗಳು‌‌[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಚಿತ್ರದುರ್ಗ ಜಿಲ್ಲೆಯ ಕುರಿತು ಮಹತ್ವದ ಮಾಹಿತಿ