ಸೃಷ್ಟಿ ಮತ್ತು ಗ್ರೀಕ್ ಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೃಷ್ಟಿ ಮತ್ತು ಗ್ರೀಕ್ ಪುರಾಣ.

ಗ್ರೀಕ್ ಪುರಾಣದ ಕಾಲ[ಬದಲಾಯಿಸಿ]

ಗ್ರೀಕ್ ಪುರಾಣವು ಸುಮಾರು ಕ್ರಿ. ಪೂ. ೨೪೦೦ -೨೦೦೦ ರ ಕಾಲದ್ದು ಆದರೆ ಅದು ದಾಖಲೆಗೆ ಬಂದಿದ್ದು ಕ್ರಿ. ಪೂ. ೮೦೦ರ ಸುಮಾರಿಗೆ ಆಗಿದೆ. ಅಲ್ಲಿಯವರೆಗೆ ಅದು ಮೂರು ಹಂತಗಳನ್ನು ದಾಟಿದೆ.

  • ಒಂದು ಕಂಚಿನ ಯುಗದ ಆರಂಭ ಕಾಲ;
  • ಎರಡು ಕಬ್ಬಿಣದ ಯುಗ;
  • ಮೂರನೆಯದು ಕಬ್ಭಿಣ ಯುಗದ ಅಂತ್ಯ-ಯುಗ -ವ್ಯವಸಾಯ-ಕೈಗಾರಿಕೆ-ವ್ಯಾಪಾರಕಾಲ.

ಸೃಷ್ಟಿಯ ಪುರಾಣ ಕಥೆ ಆರಂಭವಾಗುವುದು ಮೊದಲ ಯುಗದಲ್ಲಿ.

ಗ್ರೀಕ್ ಪುರಾಣದ ದಾಖಲೆ

  • ಪುರಾಣವನ್ನು ಮೊದಲು ದಾಖಲಿಸಿದವನು ,ಕ್ರಿ.ಪೂ. ಎಂಟನೇ ಶತಮಾನದ ಕೊನೆಯಲ್ಲಿ ಬದುಕಿದ್ದ ಹೆಸಿಯೋಡ್ ಎನ್ನುವವನು. ಅವನು ತನ್ನಕಾಲಕ್ಕೆ ಪೂರ್ವದಲ್ಲೇ ಇದ್ದ, ಮೌಖಿಕವಾಗಿ ಬಂದಿದ್ದ ಪುರಾಣಗಳನ್ನು ಸಂಗ್ರಹಿಸಿ ದಾಖಲಿಸಿದವನು. ಅದಾಗಲೇ ಹೋಮರನು ಇಲಿಯಡ್ ಮತ್ತು ಒಡೆಸ್ಸೀ, ಮಹಾಕಾವ್ಯಗಳನ್ನು ರಚಿಸಿದ್ದ. ಟ್ರೋಜಾನ್ ಯುದ್ಧವು ಹೋಮರನ ಕಾಲಕ್ಕಿಂತ ಸುಮಾರು ೪೦೦ ವರ್ಷಗಳ ಹಿಂದಿನದೆಂದು ಇತಿಹಾಸಕಾರರ ಅಭಿಪ್ರಾಯ.

ಸೃಷ್ಟಿಯ ಆರಂಭ-ಮೊದಲ ಹಂತ[ಬದಲಾಯಿಸಿ]

ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ: ಪ್ರೇಮದ ದೇವರಾದ ಈರೋಸ್‌ನ ವರ್ಣನೆ. (ಚಿತ್ರ ರಚನೆ: ಮೈಖೇಲೇಂಜೆಲೋ- ಮೆರಿಸಿ ಡಾ ಕಾರಾವ್ಯಾಗ್ಗಿಯೊ, ಸಿರ್ಕೋ 1601–1602)
  • ಗೇಯಾ (Gaea.):(ಭೂಮಿಯ ದೇವತೆ -ಜಗನ್ಮಾತೆ): ಆರಂಭದಲ್ಲಿ ಜಗತ್ತೇ ಇರಲಿಲ್ಲ . ಅಂಧಕಾರ ಅಥವಾ ಕರಾಳ ಶೂನ್ಯ ಮಾತ್ರಾ ಇತ್ತು. ಆ ಶೂನ್ಯ ಅಂಧಕಾರದಿಂದ ಆದಿ ಮಾತೆ ಗೇಯಾ ಜನಿಸಿದಳು. ಅವಳು ಮೊದಲು ಹುಟ್ಟುವವಳು ಶೂನ್ಯ ಜಾತೆ -ಆದಿ ಮಾತೆ.
  • ಟಾರ್ಟರಸ್ (ತಾರ್ತರಸ್- ಕೂರ್ಮ-ಆಮೆ) : ಗೇಯಾ ಜೊತೆಯಲ್ಲಿ ಹುಟ್ಟಿ ಅತ್ಯಂತ ಕೆಳಗಿನ ಲೋಕದ (ಪಾತಾಳ) ಒಡೆಯನಾಗುತ್ತಾನೆ. ಗೇಯಾಳ ಕೆಳಗಡೆ ಇದ್ದು ಅವಳಿಗೆ ಆಧಾರವಾಗಿರುತ್ತಾನೆ.
  • ಇರೋಸ್ : ಅನಂತರ ಇರೋಸ್‌ಳ ಜನನವಾಗುತ್ತದೆ. ಅಂದರೆ ಮೋಹಿನಿ - ಮೋಹದ ರೂಪ -ಸುಂದರ (ಭಾರತದ ಕಲ್ಪನೆಯಲ್ಲಿ ಮಾಯೆ ಎನ್ನಬಹುದು.)
  • ಯುರೇನಸ್ (Urenus) (ಆಕಾಶದ ತತ್ವ-ಆಕಾಶ) ಗೇಯಾಳಿಗೆ ಯಾವ ಪುರುಷ ದೇವತೆಯ ಸಂಪರ್ಕವೂ ಇಲ್ಲದೆ ಒಬ್ಬ ಮಗ -ಪುರುಷ ಜನಿಸುತ್ತಾನೆ -ಅವನೇ ಯರೇನಸ್ -ಆಕಾಶದ ಒಡೆಯ. ಗೇಯಾ ಅವನನ್ನು ತನ್ನ ಸಮಾನನ್ನಾಗಿ ಮಾಡುತ್ತಾಳೆ. (ಭೂಮಿಗೆ ಸಮನಾಗಿ) ಅವನು ಪ್ರೀತಿಯಿಂದ ಗೇಯಾಳನ್ನು ಸುತ್ತ ಆವರಿಸಿಕೊಂಡು ತನ್ನ ಪತಿಯಾಗಿ ಇರುವಂತೆ ಮಾಡುತ್ತಾಳೆ.(ಆಕಾಶ-ಭೂಮಿಯನ್ನುಸುತ್ತುವರಿದು ಆವರಿಸಿದ್ದು-ದ್ಯಾವಾ-ಪೃಥ್ವೀ:ವೇದ) (ತನ್ನ ಮಗನನ್ನೇ ವರಿಸುತ್ತಾಳೆ . ಅದೇ ಸಮಯದಲ್ಲಿ ಯುರೇನಸ್` ನ ನಂತರ ಗೇಯಾ ಪರ್ವತಕ್ಕೂ ಸಮುದ್ರಕ್ಕೂ ಜನ್ಮವೀಯುತ್ತಾಳೆ.; ಅವು ಓರಿಯಾ (ಪರ್ವತ) ; ಮತ್ತು ಪೋಂಟೋಸ್(ಸಮುದ್ರ) ; ಇವರಿಬ್ಬರೂ ಯುರಾನಸ್ ನಂತೆ ತಂದೆಯಿಲ್ಲದೆ ಹುಟ್ಟಿದವರು.

ಗೇಯಾ ಮತ್ತು ಯುರೇನಸ್ ಮಕ್ಕಳು[ಬದಲಾಯಿಸಿ]

  • ಗೇಯಾ ಮತ್ತು ಯುರೇನಸ್‌ಗೆ ಮೂವರು-ತ್ರಿವಳಿಗಳಾದ ಶತಬಾಹು ದೈತ್ಯರು ಜನಿಸುತ್ತಾರೆ. ಇವರಲ್ಲಿ ಪ್ರತಿಯೊಬ್ಬನಿಗೂ ೫೦ ತಲೆ ೧೦೦ ಕೈಗಳು. ಇವರು ಬ್ರಿಯಾರಿಸ್ ಎಂಬ ಹೆಸರಿನಲ್ಲಿ ಪ್ರಖ್ಯಾತರಾದರು.
  • ಇವರ ನಂತರ ಪುನಃ ಮೂವರು -ತ್ರಿವಳಿಗಳ ಜನನವಾಗುತ್ತದೆ; ಇವರು ಸೈಕ್ಲೋಪರು, (ಸಿಕ್ಲೋಸ್ ಅಥವಾ ಕುಕ್ಲೋಸ್ ಎಂದರೆ ಗ್ರೀಕ್ ಭಾಷೆಯಲ್ಲಿ ವೃತ್ತ ;ಅಪ್ಸು ಎಂದರೆ ಕಣ್ಣು) ;ವೃತ್ತಾಕಾರದ ಒಂದೇ ಕಣ್ಣುಳ್ಳವರು-ಸೈಕ್ಲೋಪರು. ಇವರು ಲೋಹಕಾರರೂ ಕುಶಲಕರ್ಮಿಗಳೂ ಆಗಿದ್ದು ಮುಂದೆ ಒಲಿಂಪಸ್ ಶಿಖರದಲ್ಲಿ ದೇವತೆಗಳಿಗೆ ಅರಮನೆಯನ್ನು ಕಟ್ಟಿದರು. ಇವರು ಮುಂದೆ ಜೀಯಸನ ಸೇವಕರಾಗುತ್ತಾರೆ.

ಹುಟ್ಟಿದ ಆರು ದೈತ್ಯರು ಭೂಗರ್ಭದಾಳಕ್ಕೆ[ಬದಲಾಯಿಸಿ]

ಯುರಾನಸ್ ತಾನೊಬ್ಬನೇ ದೇವಮಾತೆಗೆ ಮಗನೂ ಪತಿಯೂ ಆಗಿದ್ದು ಇಡೀ ಜಗತ್ತಿಗೆ ಒಡೆಯನಾಗಿ ಉಳಿಯಲು ಈ ಆರು ದೈತ್ಯರನ್ನು ನಿವಾರಿಸಬೇಕೆಂದು ಯೋಚಿಸುತ್ತಾನೆ. ಅವರು ಬೆಳೆದು ದೊಡ್ಡವರಾದರೆ ಬಲಾಢ್ಯರಾಗಿ ತನಗೆ ಪ್ರತಿಸ್ಪರ್ಧಿಯಾಗಬಹುದು-ಗೇಯಾಳಿಗೆ ಅವರ ಮೇಲೆ ಹೆಚ್ಚು ಪ್ರೀತಿ ಬರಬಹುದು -ಎಂದು ಯೋಚಿಸಿ ಆ ಮೂವರು ಶತಬಾಹು ದೈತ್ಯರನ್ನೂ, ಮೂವರು ಸೈಕ್ಲೋಪರನ್ನೂ, ತಾಯಿಯ ಮಡಿಲಿನಿಂದ ಸೆಳದು ಹೆಡೆಮುರಿಕಟ್ಟಿ ಭೂಗರ್ಭದಾಳಕ್ಕೆ (ಭೂಮಿತಾಯಿಯಾದ ಗೇಯಾಳ ಗರ್ಭದಾಳಕ್ಕೆ) ಟಾರ್ಟರಸ್ ನ ಲೋಕಕ್ಕೆ -ಪಾತಾಳಕ್ಕೆ ತಳ್ಳಿ ಬಿಡುತ್ತಾನೆ -ಅವರು ಅಲ್ಲಿಂದ ದೈತ್ಯ ಶಕ್ತಿಶಾಲಿ ಮಕ್ಕಳು ಮೇಲಕ್ಕೆ ಬಂದಾಗ ಅವರನ್ನು ಪುನಃ ಭೂಗರ್ಭಕ್ಕೆ ತಳ್ಳಬಿಡುತ್ತಾನೆ. ಅವರು ಬೆಳೆದು ತನ್ನನ್ನು ಮೂಲೆಗೆತಳ್ಳಿ ಗೇಯಾಳನ್ನು ಒಲಿಸಿಕೊಂಡರೆ -ಎಂಬ ಭಯ ಯುರಾನಸ್‌ಗೆ. ಹಾಗೆ ಎಸೆದ ಮಕ್ಕಳು ಒಂಭತ್ತು ಹಗಲು- ಒಂಭತ್ತು ರಾತ್ರಿ ಉರುಳುತ್ತಾ ಉರುಳುತ್ತಾ ಹತ್ತನೆಯ ದಿನ ಟಾರ್ಟರಸ್ ನ ಲೋಕಕ್ಕೆ ತಲುಪುತ್ತಾರೆ. ಅಲ್ಲಿ ಕಗ್ಗತ್ತಲು, ಸೂರ್ಯನ ಕಿರಣದ ಒಂದು ಎಳೆಯೂ ಇಲ್ಲ. ಅಲ್ಲಿ ಸೆರೆಯಾಳಾಗಿ, ಆ ಆರು ದೈತ್ಯರೂ ಕಾಲ ತಳ್ಳುತ್ತರುತ್ತಾರೆ. ಯುರಾನಸ್‌ಗೆ ತನ್ನ ಶತ್ರುಗಳನ್ನು ನಿವಾರಿಸಿದೆನೆಂಬ ಸಂತಸ. ಆದರೆ ಗೇಯಾಳಿಗೆ ಮಕ್ಕಳನ್ನು ಕಳೆದುಕೊಂಡ ಸಂಕಟ ಮತ್ತು ಗಂಡನ ಮೇಲೆ ಕೋಪ, ಆದರೆ ಅಸಹಾಕಳಾಗಿ ಸಹಿಸಿಕೊಳ್ಳುತ್ತಾಳೆ.

ದೈತ್ಯ ಟೈಟಾನರ ಜನನ[ಬದಲಾಯಿಸಿ]

ಗೇಯಾ ಪುನಃ ಗರ್ಭಿಣಿಯಾದಳು . ನಂತರ ಒಂದೊಂದಾಗಿ ಹದಿಮೂರು ಮಕ್ಕಳಿಗೆ ಜನ್ಮ ನೀಡಿದಳು. ಇವರೆಲ್ಲಾ ಟೈಟಾನರು -ದೈತ್ಯರು. (ಗ್ರೀಕಿನಲ್ಲಿ ಟೈಟಾನ್ ಎಂದರೆ ಲೋಹದ ವಸ್ತುಗಳು/ಹೊಳೆಯುವ ಲೋಹಗಳು- ಎಂದು ಅರ್ಥ.). ದೇವತೆಗಳಿಗಿಂತ ಹಿಂದೆ ಈ ಜಗತ್ತನ್ನು ಆಳುತ್ತಿದ್ದ ದೈತ್ಯರು ಇವರು. ( ಪುರುಷರು: {ಹಿಲಿಯೋಸ್(ಸೂರ್ಯ)}+ ಕೋಅಸ್, ಕ್ರೀಅಸ್, ಕ್ರೋನಸ್, ಹೈಪಿರೀಯಾನ್, ಟೇಪ್ಟಸ್, ಮತ್ತು ಓಸೀಯಾನಸ್; ಮತ್ತು ಆರು ಹೆಣ್ಣುಗಳು: ಮ್ನಿಮೋಸಿನ್, ಫೋಬಿ, ರಿಯಾ, ಥಿಯಾ, ಥೆಮಿಸ್ ಮತ್ತು ಟೆಥಿಸ್ :ಗ್ರೀಕ್ ಪುರಾಣ ಕಥೆ)

  • ಟೈಟಾನ್‌ರಲ್ಲಿ ಹೀಲಿಯೋಸ್ ಎಂಬುವವಹು ರಥಾರೂಢನಾದ ಸೂರ್ಯಾಧಿಪತಿ. ಸೆಲೆನ್ ಚಂದ್ರ ದೇವತೆ. ಓಸಿಯಾನ್ ಭೂಮಿಯನ್ನು ಸುತ್ತುವರಿದ ನದೀ ದೇವತೆ. ಥೆಮಿಸ್ ಕಣಿ ಹೇಳುವ ಕೊರವಂಜಿ .
  • ರಿಯಾ(Rhea) ಎನ್ನುವವಳು ಮೂರುಮೊಳ ಗಂಟಿನ ಉಷ್ಟ್ರಪಕ್ಷಿಯಂತಿರುವವಳು; ತನ್ನ ತಾಯಿ ಗೇಯಾಳಂತೆಯೇ ಪೃಥ್ವೀ ದೇವತೆ ನಂತರ ಮಹಾಮಾತೆಯಾಗುತ್ತಾಳೆ. ತನ್ನ ಕಿರಿಯ ಸಹೋದರನಾದ ಕ್ರೋನಸ್‌ನನ್ನು ಪತಿಯಾಗಿ ಸ್ವೀಕರಿಸುತ್ತಾಳೆ. (ಮದುವೆಯಾಗುತ್ತಾಳೆ.). ಕ್ರೋನಸ್ ದೈತ್ಯರಲ್ಲಿ ಎಲ್ಲರಿಗಿಂತ ಕಿರಿಯನು. (ಕುಟುಂಬದಲ್ಲಿ ಸ್ತ್ರೀ ಪ್ರಧಾನತೆ ಇದ್ದುದರಿಂದ ಯೌವನವಂತನೂ ಸುಂದರನೂ ಆದ ಕ್ರೋನಸನನ್ನು ರ‍್ಹೇಯಾ ಆರಿಸಿಕೊಂಡಳು). ಅವನಿಗಿಂತ ಹಿರಿಯರಾದ ಹಿಲಿಯೋಸ್(ಸೂರ್ಯ), ಅಟ್ಲಾಸ್, ಪ್ರೊಮಿಥಿಯಸ್, ಎಪಿಮಿಥಿಯಸ್, ರನ್ನು ಕಡೆಗಣಿಸಿದಳು.(ಇಂದಿಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಹಿರಿಯಳಾದ ಪತ್ನಿಯನ್ನು ಹೊಂದುವುದು ನಿಶಿದ್ಧವಲ್ಲ.)
  • ರಿಯಾ ಮತ್ತು ಕ್ರೋನಸ್`ರ ನಂತರ ಅವರಿಂದ ದೇವ-ಸಂತಾನವು ಹುಟ್ಟಿಕೊಳ್ಳವುದು. ಅದು ಇವಳ ಗರ್ಭದಲ್ಲಾದ ಕಾರಣ ದೇವಮಾತೆಯೂ ಇವಳೇ ಈ ದೇವ ಸಂತಾನವು ಇವಳು ಮತ್ತು ಕ್ರೋನಸ್ (ಇಬ್ಬರೂ ದೈತ್ಯರೇ) ಗೆ ಜನಿಸಿದವರು. ಜೀಯಸ್, ಪೋಸಿಡಿಯನ್, ಹೇಡ್ಸ್ , ಹೆರಾ, ಡೆಮೆಟರ್ , ಮತ್ತು ಹೆಸ್ತಿಯಾ ಇವರೇ ಆ ದೈತ್ಯ ದಂಪತಿಗಳಿಗೆ ಜನಿಸಿದ ಆರು ದೇವತೆಗಳು.
  • ನಂತರ ಕ್ರೋನಸ್‌ನು ಉತ್ತರಾಧಿಕಾರಿಯಾದನು ; ರಿಯಾ ಮಂದಿನ ಪೀಳಿಗೆಗೆ ಮಹಾಮಾತೆಯಾಗುತ್ತಾಳೆ ; ತಾಯಿಯ ಸ್ಥಾನದಲ್ಲಿ ಮುಂದುವರಿಯುತ್ತಾಳೆ. ಆಕೆಯ ಅಕ್ಕಂದಿರು ಬದಿಗೆ ಸರಿಯುವರು.

ಟೈಟಾನರ ಕಥೆ -ಮಾನವರ ಸೃಷ್ಟಿ[ಬದಲಾಯಿಸಿ]

ಅಟ್ಲಾಸ್ :

  • ಅಟ್ಲಾಸ್ ಟೈಟಾನರಲ್ಲೆಲ್ಲಾ ಬಲಿಷ್ಟನಾದವನು. ಈತನು ಆಕಾಶವನ್ನು ತನ್ನ ಭೀಮ ಬಾಹುಗಳಿಂದ ಎತ್ತಿ ಹಿಡಿದು ,ಅದು ಭೂಮಿಚಿi ಮೇಲೆ ಬೀಳದಂತೆ ನೋಡಿಕೊಳ್ಳುವವ. ಮುಂದಿನ ದಿನಗಳಲ್ಲಿನ ಬೆಳುವಣಿಗೆಯಲ್ಲಿ, ಇವನಿಗೆ ಈ ಕೆಲಸವನ್ನು ಕ್ರೋನಸ್-ರ‍್ಹೀಯಾರ ಮಗ ಜೀಯಸ್ ಶಿಕ್ಷಯ ರೂಪದಲ್ಲಿ ಕೊಡುತ್ತಾನೆ. ಜೀಯಸ್ ಮತ್ತು ಕ್ರೋನಸ್ ಯುದ್ಧದಲ್ಲಿ ಅಟ್ಲಾಸ್‌ನ ತಂದೆ ಕ್ರೋನಸ್‌ನ ಪಕ್ಷವಹಿಸಿದ್ದ.

ಮಾನವರ ಸೃಷ್ಟಿ : ಪ್ರೊಮಿಥಿಯಸ್ನಿಂದ:

ಪ್ರೊಮಿಥಿಯಸ್ ಕ್ರೋನಸ್‌ನ ಹಿರಿಯ ಸೋದರ. ಇವನು (ಪ್ರೊಮಿಥಿಯಸ್) ,ಮರ್ತ್ಯರಾದ ಮಾನವರನ್ನು ಆವೆಮಣ್ಣು ಮತ್ತು ನೀರಿನಿಂದ ಮಾಡಿ ಅವರಿಗೆ ಜೀವ ಕೊಟ್ಟವನು (ಕುಂಬಾರ). ಗ್ರೀಕರ ನಂಬುಗೆಯ ಪ್ರಕಾರ ಮಾನವರು ಮಣ್ಣು ಮತ್ತು ನೀರಿನಿಂದ ಮಾಡಲ್ಪಟ್ಟವರು.
  • ಎಪಿಮಿಥಿಯಸ್ ಇನ್ನೊಬ್ಬ ಟೈಟಾನ. ಈತ ನು ಮೊಟ್ಟ ಮೊದಲಿಗೆ ಮರ್ತ್ಯ (ಮಾನವ) ಹೆಂಗಸು ಪಂಡೋರಾಳನ್ನು ಮದುವೆಯಾಗುತ್ತಾನೆ. (ಎಪಿಮಿಥಿಯಸ್ ಎಂದರೆ ಉಲ್ಕಾ ಸಂಬಂಧ ಲೋಹ- ಪಂಡೋರಾ ಎಂದರೆ ತಂತಿಯ ವಾದ್ಯ- ಇವೆರಡರ ಸಂಯೋಜನೆ ಇವರ ಸಂಕೇತವಿರಬಹುದು)

ಕ್ರೋನಸ್‌ನು ಜಗತ್ತಿನ ಒಡೆಯನಾದ[ಬದಲಾಯಿಸಿ]

  • ಟೈಟಾನ್ ದೈತ್ಯ ಕ್ರೋನಸ್‌ನು ಜಗತ್ತಿನ ಒಡೆಯ
  • ಗೇಯಾಳ ಸೇಡು
  • ಗೇಯಾ ಈ ಟೈಟಾನರು ಜನಿಸಿದಾಗ ,ತನ್ನ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಅಣಿಯಾಗುತ್ತಾಳೆ. ದೊಡ್ಡ ಅಗ್ನಿಶಿಲೆಯ ಚಕ್ಕೆಯಿಂದ ಹರಿತವಾದ ಖಡ್ಗವನ್ನು ಸಿದ್ಧಗೊಳಿಸಿಟ್ಟುಕೊಳ್ಮ್ಳತ್ತಾಳೆ. ಅವಳು ಯೌವನಕ್ಕೆ ಬಂದ ಎಲ್ಲಾ ಮಕ್ಕಳನ್ನೂ ಕರೆದು, "ಯುರೇನಸ್‌ನು ನಿಮ್ಮ ಹಿರಿಯ ಸೋದರರಾದ ಶತಬಾಹುಗಳನ್ನೂ , ಸೈಕ್ಲೋಪರನ್ನೂ, ಟಾರ್ಟರಸ್ಸನ ಪಾತಾಳಲೋಕಕ್ಕೆ ತಳ್ಳಿದ್ದಾನೆ. ಅವನನ್ನು ನೀವು ಶಿಕ್ಷಿಸಬೇಕು ಮತ್ತು ಅವರನ್ನು ಕರೆತರಬೇಕು", ಎನ್ನುತ್ತಾಳೆ. ಆಗ ಯಾರೂ ಉರೇನಸನ್ನು ಎದುರಿಸುವ ಧೈರ್ಯ ಮಾಡಲಿಲ್ಲ. ಆದರೆ ಕೊನೆಯ ಮಗ, ದೈರ್ಯ ಸಾಹಸಕ್ಕೆ ಹೆಸರಾದ ಕ್ರೋನಸನು ಒಪ್ಪಿಕೊಳ್ಳತ್ತಾನೆ. ಒಬ್ಬನಾದರೂ ನನ್ನ ದುಃಖವನ್ನು ನೀಗಿಸುವ ಮಗ ಹುಟ್ಟದನಲ್ಲ ಎಂದು ಸಂತಸದಿಂದ ಅವನನ್ನು ಕರೆದು ತಾನು ಸಿದ್ಧಮಾಡಿದ ಶಿಲೆಯ Pತ್ತಿಯನ್ನು ಕೊಡುತ್ತಾಳೆ-ಅದು ಹರಿತವಾಗಿದೆಯೆಂದು ಎಚ್ಚರ ಹೇಳುತ್ತಾಳೆ. (ಇದು ನವಶಿಲಾಯುಗದ ಕಾಲದಲ್ಲಿ ಬರೆದಿರಬೇಕೆಂದು ಇತಿಹಾಸ ಕಾರರು ಭಾವಿಸುತ್ತಾರೆ.)
  • ಯುರೇನಿಸನು ಅಡಗಿರುತ್ತಾನೆ . ಆ ಸ್ಥಳವನ್ನು ಹೇಳುತ್ತಾಳೆ. ಅವನು ಹೊರಬರುವ ಸಮಯ ತನ್ನೊಡನೆ ಸೇರುವ ಸಮಯ ತಿಳಿಸಿ, ಕ್ರೋನಸನು ಅಡಗಿ ಹೊಂಚುಹಾಕುವ ತಾಣ ತೋರಿಸುತ್ತಾಳೆ.
  • ಹಿಲೋಯಿಸ್ -ಸೂರ್ಯದೇವತೆ ತನ್ನ ಪಯಣ ಮುಗಿಸಿ ಪಶ್ಚಿಮದಲ್ಲಿ ವಿರಮಿಸುತ್ತಾನೆ. ಕತ್ತಲೆ ಆವರಿಸುತ್ತದೆ. ಸಮುದ್ರ ತೀರದಲ್ಲಿ ಯುರೇನಸನು ಅಡಗು ತಾಣದಿಂದ ಹೊರಬಂದು ಗೇಯಾಳ ಜೊತೆ ಕೂಡಿಕೊಳ್ಳುತ್ತಾನೆ.(ಸಂಕೇತ :-ಆಕಾಶ ಭೂಮಿ ಸಂಜೆಯ/ರಾತ್ರಿಯ ಮಬ್ಬು ಬೆಳಕಿನಲ್ಲಿ ಕೂಡಿದಂತೆ ಕಾಣುವುದು.)

ಆಗ ಸೆಲೀನ್ ಚಂದ್ರದೇವತೆ ಯುರೇನಸ್ ಮೇಲೆ ಬೆಳದಿಂಗಳು ಚೆಲ್ಲುತ್ತಾಳೆ .

  • ಅಡಗಿದ್ದ ಕ್ರೋನಸ್ ಶಿಲೆಯ ಕತ್ತಿಯನ್ನು ಎತ್ತಿಕೊಂಡು ಬಂದು ಯುರೇನಸನ ಜನನಾಂಗದ ಬೀಜಗಳನ್ನು ತರಿದುಬಿಡುತ್ತಾನೆ. ಅವನು , "ಅಪ್ಪಾ ನಿನ್ನ ಕಾಲವು ಮುಗಿಯಿತು . ನಾನೀಗ ನಿನಗಿಂತ ಶಕ್ತಿವಂತ ; ಇನ್ನು ನಾನು ಜಗತ್ತನ್ನು ಆಳುವವನು, ನೀನು ನಿರ್ವೀರ್ಯನಾದೆ." ಎನ್ನುತ್ತಾನೆ. ಅಮರನಾದ ಸಾವಿಲ್ಲದ ಯರೇನಸ್ ನಿರ್ವೀರ್ಯನಾಗಿ ನಿರಂತರ ನೋವಿನಿಂದ ನರಳುತ್ತಾ ಇರುವುದೇ ಅವನ ವಿಧಿಯಾಗುತ್ತದೆ. (ಭೂಮಾತೆ ಗೇಯಾ ಆಕಾಶದಿಂದ ಆಗುವ ಪ್ರಕೃತಿ ಹಾನಿಯನ್ನು ತಡೆದು ಸಸ್ಯ-ಪ್ರಾಣಿ ಸಂಕುಲವನ್ನು ಉಳಿಸುವ ಸಂಕೇತವೆಂದು ಭಾವಿಸುತ್ತಾರೆ)
  • ಯುರೇನಸನ ಅಂಡಾಶಯವೀಗ ಹರಿದು ರಕ್ತವಾಗಿ ಭೂಮಿಯಮೇಲೆ ಹರಿಯುತ್ತದೆ. ಅದರಿಂದ ಮೂವರು ಕಪ್ಪು ವಸ್ತ್ರ ಧಾರಿಯರು ಭೀಕರಿಯರು ಹುಟ್ಟಿಬರುತ್ತಾರೆ. ಕಣ್ಣಿನಿಂದ ವಿಷಧಾರೆಯನ್ನು ಸುರಿಸುತ್ತಾ ದುರ್ನಾತದ ಉಸಿರನ್ನು ಬಿಡುತ್ತಾ ತಂದೆತಾಯಿಯರನ್ನು ಕೊಲ್ಲವವರನ್ನು ಉನ್ಮತ್ತರನ್ನಾಗಿ ಮಾಡುತ್ತಿರುತ್ತಾರೆ.

ಸೌಂದರ್ಯ ದೇವತೆ ಅಫ್ರೋಡೈಟ್ ಜನನ

  • ಯರೇನಸನ ಜನನಾಂಗದ ಮಾಂಸದ ತುಂಡುಗಳು ಸಮುದ್ರದಲ್ಲಿ ಬೀಳುತ್ತದೆ. ಅದನ್ನು ಸಮುದ್ರದ ನೊರೆಗಳು ಆವರಿಸಿ -ಅದರಿಂದ ಸೌದರ್ಯದ ಅಧಿದೇವತೆ ಅಫ್ರೋಡೈಟ್ ಜನಿಸಿ ಬರುತ್ತಾಳೆ.(ಅಫ್ರೋಡೈಟ್ ಎಂದರೆ-ಜನನಾಂಗದ ಬಯಕೆ)[ ಕೆಳಗೆ- ಗ್ರೀಕ್ ದೇವತೆಗಳು ವಿಭಾಗದಲ್ಲಿ ಚಿತ್ರ ಹಾಕಿದೆ]
  • ಅವಳು ವೀನಸ್ -ಫೇನಜಾತೆ ನೊರೆಯಲ್ಲಿ ಹುಟ್ಟಿದವಳು ಎಂದು ಪ್ರಸಿದ್ಧಳಾಗತ್ತಾಳೆ.

ಕ್ರೋನಸನ ಭಯ-ಮಕ್ಕಳನ್ನೇ ನುಂಗಿದ[ಬದಲಾಯಿಸಿ]

  • ಈಗ ದೈತ್ಯನಾದ ಕ್ರೋಸೆನ್ ತಂದೆಯನ್ನು ಪದಚ್ಯುತಗೊಳಿಸಿ ಜಗತ್ತನ್ನು ಆಳುವ ರಾಜ. ಅದರೆ ಅವನಿಗೂ ಈಗ ಶತಬಾಹು ಮತ್ತು ಸೈಕ್ಲೋಪ್ ದೈತ್ಯರ ಭಯ -ಎಲ್ಲಾದರೂ ಅವರು ತನಗೆ ತಿರುಗಿಬಿದ್ದರೆ -ತನ್ನ ಅಧಿಕಾರಕ್ಕೆ ತೊಂದರೆ ಆಗಬಹುದು. ಅದಕ್ಕಾಗಿ ಅವನು ಅವನ್ನು ವಾಪಾಸು ತರುವ ಬದಲು ಅಲ್ಲಿಯೇ ಬಂಧಿಸಿ ಪಾತಾಳದಲ್ಲೇ ಇರುವಂತೆ ಮಾಡುತ್ತಾನೆ.
  • ತಾಯಿ ಗೇಯಾ ಮತ್ತೆ ಕುಪಿತಳಾಗುತ್ತಾಳೆ. ಭವಿಷ್ಯ ನುಡಿಯುವ ಸಾಮರ್ಥ್ಯವಿರುವವಳು. ಮಗ ಕ್ರೋನಸ್‌ನನ್ನು ಕರೆದು, ನೋಡುತ್ತಿರು , ನಿನಗೆ ಜನಿಸುವ ಮಗನೇ ನಿನ್ನನ್ನು ಶಿಕ್ಷಿಸುತ್ತಾನೆ, ಎಂದಳು. ಆಗ ಕ್ರೋನಸ್‌ನು ನಾನು ವಿಧಿಯನ್ನೇ ವಂಚಿಸಬಲ್ಲೆ. ನನಗೆ ಮಕ್ಕಳೇ ಆಗದಂತೆ ನಾನು ಶಾಶ್ವತವಾಗಿ ಜಗತ್ತಿನ ಒಡೆಯನಾಗಿರವೆ ಎಂದನು.
  • ಆತನು ತನ್ನ ಮಡದಿಯನ್ನು ತುಂಬಾ ಪ್ರೀತಿಸುತ್ತಿದ್ದ. ಆಕೆ ಗರ್ಭವತಿಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ವಿತ್ತಳು. ಅದು ಹೆಸ್ತಿಯಾ ಎಂದು ಹೆಸರು. (ಅವಳು ಒಲೆಯ ದೇವತೆ ಎಂದು ನಂತರ ಪ್ರಸಿದ್ಧಿಯಾದಳು ; ಹೆಸ್ತಿಯಾ ಎಂದರೆ ಕುಲುಮೆ/ಒಲೆಯ ಬೆಂಕಿ). ಅದನ್ನು ಸಂತಸದಿಂದ ಕ್ರೋಸನ್‌ನಿಗೆ ತೋರಿಸುತ್ತಾಳೆ. ಅವನ ತಲೆಯೊಳಗೆ ವಿಧಿಯ ಗುಡುಗು ಕೇಳುತ್ತದೆ. ಅದು ಹೆಂಣೋ-ಗಂಡೋ ಎಂದು ಯೋಚಸದೆ ಅದನ್ನು ಸೆಳೆದು ದೊಡ್ಡ ಬಾಯಿ ತೆರೆದು ನುಂಗಿಬಿಟ್ಟ. ವಿಧಿಯನ್ನು ವಂಚಿಸಿದೆನೆಂದು ಸಮಾಧಾನ ಪಟ್ಟ.
  • ರಿಯಾ ಮತ್ತೆ ಗರ್ಭಿಣಿಯಾಗಿ ಮಗುವನ್ನು ಹೆತ್ತು ಗಂಡನಿಗೆ ಪ್ರೀತಿಯಿಂದ ತೋರಿಸಿದಾಗ ಅದನ್ನು ಸೆಳೆದು ಗಬಕ್ಕನೆ ನುಂಗಿಬಿಟ್ಟ. ಹೀಗೆ ನಾಲ್ಕು ಬಾರಿ ಆಯಿತು. ಅವರು, ಡೆಮಿಟರ್ (ವ್ಯವಸಾಯ ದೇವತೆ) ; ಹೆರಾ (ಔಷಧಿ) ; ಹೇಡ್ಸ್ (ಸತ್ತವರ ಲೋಕದ ಅಧಿಪತಿ) ; ಪೊಸೀಡಿಯನ್ (ಜಲಾಧಿಪತಿ).
  • ರಿಯಾ ತುಂಬಾ ದುಃಖಿತಳಾದಳು; ಮತ್ತೆ ಗರ್ಭಿಣಿಯಾದಳು; ಈಗ ಭಯದಿಂದ ತನ್ನ ತಾಯಿ ಗೇಯಾಳಿಗೆ ವಿಷಯ ತಿಳಿಸಿ. ಸಲಹೆ ಕೇಳುತ್ತಾಳೆ. ಗೇಯಾ. "ಅವನು ತಂದೆಯಂತೆಯೇ. ಆದರೆ ನಿನಗೆ ಹುಟ್ಟುವ ಮಗನು ತಂದೆಯನ್ನು ನಿವಾರಿಸುತ್ತಾನೆ", ಎಂದು ಹೇಳಿ ಅದನ್ನು ಹೆತ್ತು ಬೆಳೆಸುವ ಕ್ರಮ ತಿಳಿಸುತ್ತಾಳೆ. "ಹೆರಿಗೆಗೆ ಕ್ರೆಟೇ ದ್ವೀಪಕ್ಕೆ ಹೋಗು. ಅಲ್ಲಿ ಡಿಕ್ಟೇ ಬೆಟ್ಟದ ಆಳವಾದ ಗುಹೆಯಲ್ಲಿ ನಿನಗೆ ಹೆರಿಗೆ ಮಾಡಿಸಿ ಮಗುವಿಗೆ ಹಾಲುಣಿಸಲು ಅಪ್ಸರೆಯನ್ನು ಕಳಿಸುತ್ತೇನೆ. ಅಲ್ಲಿ ಮಗುವನ್ನು ಮರಕ್ಕೆ ಕಟ್ಟಿದ ತೊಟ್ಟಿಲಲ್ಲಿ ಇಡಬೇಕು ; ಅದನ್ನು ಕಾಯಲು ಕುರೇಟಿಸ್ ಬಾಲಕರು ಕಂಚಿನ ಗುರಾಣಿಗೆ ಸದಾ ಈಟಿಯಿಂದ ಬಡಿಯುತ್ತಾ ಸದ್ದುಮಾಡಿ ಮಗು ಅಳುವುದನ್ನು ಕ್ರೋನಸನ್ ಗೆ ಕೇಳದಂತೆ ಮಾಡುತ್ತಾರೆ. ಅವನಿಗೆ ಅನುಮಾನ ಬಂದು ನೆಲದಮೇಲೆ, ನೀರನಲ್ಲಿ ಅಥವಾ ಗಾಳಿಯಲ್ಲಿ ಹುಡುಕಿದರೂ ತೊಟ್ಟಿಲಲ್ಲಿರುವ ಮಗು ಸಿಗಲಾರದು. ಅವನು ಭಯ-ಗಾಬರಿಯಲ್ಲಿದ್ದಾನೆ -ಮಗುವೆಂದು ಕಲ್ಲುಗುಂಡು ಕೊಟ್ಟರೂ ಅದನ್ನು ಗಬಕ್ಕನೆ ನುಂಗಿಬಿಡುತ್ತಾನೆ", ಎಂದಳು.
  • ರಿಯಾ ತಾಯಿ ಹೇಳಿದಂತೆಯೇ ಮಾಡಿ ಮಗುವನ್ನು ಡಿಕ್ಟೇ ಬೆಟ್ಟದ ಆಳವಾದ ಗುಹೆಯಲ್ಲಿ ತಾಯಿಯ ಬಳಿಬಿಟ್ಟು ಬರುತ್ತಾಳೆ. ಬರುವಾಗ ಒಂದು ಕಲ್ಲು ಗುಂಡನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಂದು ಪಕ್ಕದಲ್ಲಿಟ್ಟುಕೊಂಡು ಮಲಗುತ್ತಾಳೆ. ಪತಿ ಕ್ರೊನಸ್ ಬಂದು ಪ್ರೀತಿಯಿಂದ "ಹೇಗಿದ್ದೀ; ಮಗು ಎಲ್ಲಿ", ಎಂದು ಕೇಳುತ್ತಾನೆ. ಅವಳು ಬಟ್ಟೆ ಸುತ್ತಿದ ಕಲ್ಲುಗುಂಡನ್ನೇ ಕೊಡುತ್ತಾಳೆ . ಎತ್ತಿಕೊಳ್ಳುತ್ತಲೇ ಭಯದಿಂದ ಕ್ರೂರವಾಗಿ ಬಾಯಗಲಿಸಿ ನುಂಗಿಬಿಡುತ್ತಾನೆ. ವಿಧಿಯನ್ನು ಮೋಸಗೊಳಿಸಿದೆನೆಂದು ಆನಂದದಿಂದ ಬೀಗುತ್ತಾನೆ.

ಜೀಯಸ್ ದೇವತೆಯಾಗಿ ಬೆಳದು ಸ್ವರ್ಗದ ಅಧಿಪತಿಯಾದ[ಬದಲಾಯಿಸಿ]

ಜೀಯಸ್ ನ ಎದೆಮಟ್ಟದ ಪ್ರತಿಮೆಯ ಚಿತ್ರ (ಫೋಟೊ),(ವಕ್ಷದ-ಪ್ರತಿಮೆ), ಆಟ್ರ‍ಿಕೋಲಿಯಲ್ಲಿ ಇರುವುದು, (ಸಾಲಾ ರೋಟೊಂಡಾ, ಮ್ಯೂಸಿಯೊ ಪಿಯೋ-ಕ್ಲೆಮೆಂಟಿನೊ, ವ್ಯಾಟಿಕಾನ್)
  • ವರ್ಷಗಳು ಕಳೆದಂತೆ ರಿಯಾಳ ಮಗ ದೇವತೆಯಾಗಿ ಬೆಳೆದ ಜೀಯಸ್ ಕ್ರೆಟೇ ದ್ವೀಪದಲ್ಲಿ ಬೆಳೆದು ಪ್ರಬುದ್ಧನಾದ. ಕ್ರೋನಸ್‌ನಿಗೆ ಇದು ಗೊತ್ತಿಲ್ಲ.
  • ಒಂದುದಿನ ಬಾಯಾರಿಕೆಗೆಂದು ಕ್ರೋನಸ್‌ನಿಗೆ ಒಂದು ಬಟ್ಟಲು ಪಾನೀಯ ಕೊಡುತ್ತಾಳೆ . ಅದರ ರುಚಿ ನೋಡಿ ಇನ್ನೊಂದು ಬಟ್ಟಲು ಪಾನೀಯ ಕೇಳುತ್ತಾನೆ. ಗೇಯಾ ಜೀಯಸ್‌ನ ಕೈಗೆ ವಿಷದ ಬಟ್ಟಲು ಕೊಟ್ಟು ಜೀಯಸನಿಗೆ ಕ್ರೋನಸನನ್ನು ಸೋಲಿಸುವ ಉಪಾಯ ಹೇಳುತ್ತಾಳೆ. ಆಗ ಜೀಯಸ್ ಅವನಿಗೆ ಮತ್ತೊಂದು ಬಟ್ಟಲು ಪಾನೀಯ ಕೊಡುತ್ತಾನೆ. ಈ ಹೊಸಬ ಯಾರೆಂದು ಕೂಡಾ ವಿಚಾರಿಸದೆ ಅದನ್ನು ತೆಗೆದುಕೊಂಡು ಕ್ರೋನಸ್, ಕುಡಿದುಬಿಟ್ಟ. ಕ್ರೋನಸ್‌ಗೆ ಹೊಟ್ಟೆ ನೋವು ಆರಂಭವಾಗಿ ಪಾನೀಯಕ್ಕೆ ವಿಷಹಾಕಿರಬಹುದೇ ಎಂದು ಯೋಚಿಸಿ ಈ ಹುಡುಗನಾರೆಂದು ವಿಚಾರಿಸುತ್ತಾನೆ. ಅಷ್ಟರಲ್ಲಿ ಎಲ್ಲಾ ವಾಂತಿಯಾಗಿ ಅವನು ಹಿಂದೆ ನುಂಗಿದ ಕಲ್ಲುಗುಂದು ಹೊರಬೀಳುತ್ತದೆ.
  • ನಂತರ ಅವನು ನುಂಗಿದ ರಿಯಾಳ ಎಲ್ಲಾ ಮಕ್ಕಳೂ ಅವನ ಬಾಯಿಂದ ಹೊರಬಿದ್ದರು.ಅವರೇ ಪೊಸೀಡಿಯನ್ (ಜಲಾಧಿಪತಿ), ಡೆಮಿಟರ್ (ವ್ಯವಸಾಯ ದೇವತೆ) ; ಹೆರಾ (ಔಷಧಿ) ; ಹೇಡ್ಸ್ (ಸತ್ತವರ ಲೋಕದ ಅಧಿಪತಿ) ; ಮತ್ತು ಹೆಸ್ತಿಯಾ. ಅವರೆಲ್ಲಾ ಬೆಳೆದು ದೊಡ್ಡವರಾಗಿದ್ದರು. ಆಗ ರ‍್ಹೇಯಾ ಕ್ರೋಸಿನ್‌ಗೆ ನೋಡು ಶತಬಾಹುಗಳನ್ನೂ ಸೈಕ್ಲೋಪರನ್ನೂ ನೀನು ಪಾತಾಳದಲ್ಲಿ ಸೆರೆ ಇಟ್ಟೆ, ನನ್ನ ಮಕ್ಕಳನ್ನು ನಂಗಿದೆ ಅವರೆಲ್ಲಾ. ಈಗ ನಿನ್ನ ಮುಂದಿದ್ದಾರೆ. ನಿನ್ನನ್ನು ಶಿಕ್ಷಿಸುತ್ತಾರೆ ಮತ್ತು ಅವನು ಅಧಿಕ/ಅರಕ್ಕೆ ಬಂದು ಸೋದರರನ್ನು ಹೇಗೆ ನೋಡಿಕೊಳ್ಮ್ಳತ್ತಾನೆ ಎಂಬುದನ್ನು ನೋಡೋಣ, ಎಂದಳು.
  • ಕ್ರೋನಸ್ ಅದು ಸುಲಭವಲ್ಲ ಅವನು ನನ್ನ ಸೋದರರೆಲ್ಲರೊಡನೆ (ಬಲಾಢ್ಯ ಟೈಟಾನರೊಡನೆ) ಹೋರಾಡಬೇಕಾಗುವುದು, ಎಂದನು.
  • ಜೀಯಸ್‌ನ ಸೋದರರು ಒಂದು ಕಡೆ ಮತ್ತು ಅವನ ಅಪ್ಪ ಕ್ರೋನಸ್ ಮತ್ತು ಅವನ ಟೈಟಾನ್ ಸೋದರರು ಮತ್ತೊಂದು ಕಡೆ; ಹೀಗೆ ದೇವ -ದಾನವರ ಯುದ್ಧ ಮುಂದುವರೆಯಿತು. ಹತ್ತು ವರ್ಷ ಯುದ್ಧ ನಡೆಯಿತು . ಯಾರೂ ಸೋಲಲಿಲ್ಲ. ಆಗ ಗೇಯಾ ಪುನಃ ಜೀಯಸನ ನೆರವಿಗೆ ಬರುತ್ತಾಳೆ. ಟಾರ್ಟರಸ್ ನ ಲೋಕದಿಂದ ಶತಬಾಹುಗಳನ್ನೂ , ಸೈಕ್ಲೋಪರನ್ನೂ ಬಿಡುಸಿಕೊಂಡು ಬಂದು ಅವರ ಸಹಾಯ ಪಡೆಯಲು ಹೇಳುತ್ತಾಳೆ.
  • ಜೀಯಸ್ ಮತ್ತು ಸೋದರರು ಪಾತಾಳಕ್ಕೆ ಹೋಗಿ ಅವರನ್ನು ಬಿಡಿಸಿಕೊಂಡು - ಅವರು ತನಗೆ ಕ್ರೋನಸನನ್ನು ಸೋಲಿಸಲು ಸಹಾಯಮಾಡಲು ಕೇಳುತ್ತಾನೆ.
  • ಅದಕ್ಕೆ ಒಪ್ಪಿದ ಶತಬಾಹುಗಳು , ಸೈಕ್ಲೋಪರು ತಮ್ಮನ್ನು ಬಿಡಿಸಿದ್ದಕ್ಕೆ ಕೃತಜ್ಞತೆ ಹೇಳಿ, ಜೀಯಸ್ ಸೋದರರಿಗೆ (ನಿಮ್ಮಲ್ಲಿ) ಪ್ರತಿಯೊಬ್ಬನಿಗೂ ಒಂದೊಂದು ಆಯುಧವನ್ನು ಕೊಡುವದಾಗಿ ತಿಳಿಸುತ್ತಾರೆ.
ಜೀಯಸ್‌ನಿಗೆ ಎದುರಿಲ್ಲದ ಅಜೇಯವಾದ ಗುಡುಗು ಸಿಡಲಿನ ವಜ್ರಾಘಾತದ ಆಯುಧ,
ಪೊಸಿಡಿಯನ್‌ನಿಗೆ ಭೂಮಿ ಸಮುದ್ರಗಳನ್ನು ಅಲುಗಾಡಿಸಬಲ್ಲ ತ್ರಿಶೂಲ,
ಹ್ಭೆಡ್ಸ್‌ಗೆ ಮಾಯವಾಗಬಲ್ಲ ಕಿರೀಟ/ಶಿರಸ್ತ್ರಾಣ ; ಮೊದಲಾದವುಗಳನ್ನು ಕೊಟ್ಟರು .
  • ಅವರು (ಶತಬಾಹುಗಳು , ಸೈಕ್ಲೋಪರು) ಬೆಟ್ಟದ ಬಂಡೆಗಳನ್ನು ಕಿತ್ತು ಆಯುಧ ಮಾಡಿಕೊಂಡರು.
  • ಅವರು ವೇಗವಾಗಿ ಮೇಲೆ ಬಂದು ಕ್ರೋನಸ್‌ನ ಮತ್ತು ಟೈಟಾನರಮೇಲೆ ಕಲ್ಲುಬಂಡೆಗಳ ಮಳೆ ಸುರಿಸುತ್ತಾರೆ. ಆಯಾಸಗೊಂಡ ಟೈಟಾನರನ್ನೆಲ್ಲಾ ಕ್ರೋನಸ್‌ನನ್ನು ಸೇರಿಸಿ ಪಾತಾಳಕ್ಕೆ ನೂಕಿ ಬಂಧಿಸಿಡುತ್ತಾರೆ . ಅದರಲ್ಲಿ ಬಹಳ ಬಲಾಢ್ಯನಾದ ಅಟ್ಲಾಸ್‌ನನ್ನು ,ಜೀಯಸ್‌, ಬಲವಂತವಾಗಿ ಭೂಮಿಯ ಮೇಲೆ ಆಕಾಶ ಬೀಳದಂತೆ ಸದಾ ಎತ್ತಿ ಹಿಡಿದಿರಲು ನೇಮಿಸುತ್ತಾನೆ. ಇಬ್ಬರು ಶತಬಾಹುಗಳು ಪಾತಾಳದಲ್ಲಿ ಟೈಟಾನರಿಗೆ ಕಾವಲಿರುತ್ತಾರೆ .
ಜೀಯಸ್‌ ನು ಜಗತ್ತಿನ ಅಧಿಕಾರ ವಹಿಸಿಕೊಂಡು ಆಗಸ/ ಸ್ವರ್ಗದ ಅಧಿಕಾರವನ್ನು ತಾನು ಇಟ್ಟುಕೊಂಡನು.
ಹೇಡ್ಸ್ ಭೂಮಿಯ ಒಳಲೋಕದ / ಸತ್ತವರ ಲೋಕದ ಅಧಿಕಾರವನ್ನು ಆರಿಕೊಳ್ಳುತ್ತಾನೆ.
ಪೊಸಿಡಿಯನ್ ಸಮುದ್ರಾಧಿಪತಿಯಾಗುತ್ತಾನೆ.

ಜೀಯಸ್‌ನ ಶಾಂತಿ ಧರ್ಮದ ವ್ಯವಸ್ಥೆ.[ಬದಲಾಯಿಸಿ]

ಹೀಗೆ ಅಧಿಕಾರವನ್ನು ಹಂಚಿಕೊಂಡು ಶಾಂತಿ ಧರ್ಮದ ವ್ಯವಸ್ಥೆಯಲ್ಲಿ ಜಗತ್ತನ್ನಾಲುವ ನಿರ್ಧಾರ ಮಾಡುತ್ತಾರೆ . ಜೀಯಸ್‌ನು ಮಾನವರು ತಮ್ಮ ಒಡಹುಟ್ಟಿದವರು, ಕುಟುಂಬದವರು ಹೆಂಗಸರು ,ಗಂಡಸರು ಹೇಗೆ ಪ್ರೀತಿಯಿಂದ ಸಹಕರಿಸಿಕೊಂಡು ಬಾಳಬೇಕೆಂಬ ಕುಟುಂ ಧರ್ಮನೀತಿಯನ್ನು ಹೇಳಿಕೊಡುತ್ತಾನೆ. ಯಾವನು ದೇವತೆಗಳೀಗೆ ಗೌರವನೀಡುವುದಿಲ್ಲವೋ ಅವರನ್ನು ಉಗ್ರವಾಗಿ ಶಿಕ್ಷಿಸುತ್ತಾನೆ. ಪೋಸಿಡಿಯನ್ ತ್ರಿಶೂಲದಿಂದ ಭೂಕಂಪ , ಬಿರುಗಾಳಿಯನ್ನು ಉಂಟುಮಾಡುವವ. ಅವನು ಕುದುರೆಗಳನ್ನು ಪಳಗಿಸುವವ. ಅವನು ಮಾನವರಿಗೆ ಹಡಗು ನಿರ್ಮಿಸುವ ವಿದ್ಯೆಯನ್ನು ಹೇಳಿಕೊಡುವನು.

ಈಗ ಜಗತ್ತಿನ ಒಡೆಯನಾದ ಜೀಯಸನು ತನ್ನ ಹಿರಿಯ ಸೋದರಿ ಹೆರಾಳನ್ನೇ ಮದುವೆಯಾಗುತ್ತಾನೆ.
  • ಅದೇ ಹೆರಾ ಮುಂದೆ ವಿವಾಹ ದೇವತೆ ಆಗುತ್ತಾಳೆ. ವಿವಾಹ ವಿಧಿಗಳನ್ನು ಹೇಳುವ ವಿವಾಹದೇವತೆ ಎನಿಸುತ್ತಾಳೆ.
  • ಹೆಸ್ಟಿಯಾ ಗೃಹರಕ್ಷೆಯ ದೇವತೆ . ಗೃಹರಚನೆಯನ್ನು ತಿಳಿಸವವಳು. ವಾಸ್ತುದೇವತೆ.
  • ಡೆಮಿಟರ್ ವ್ಯವಸಾಯ-ಧಾನ್ಯಗಳ ದೇವತೆ . ಕಾಡು ಬೆಳೆಯನ್ನು ಉತ್ತಿ-ಬಿತ್ತಿ ನಾಡಬೆಳೆಯಾಗಿ ಮಾಡುವ ಕ್ರಮವನ್ನು ಹೇಳಿಕೊಡುವವಳು.
  • ಮುಂದೆ ಸ್ವರ್ಗಾಧಿಪತಿ ಜೀಯಸ್‌ನು ಅನೇಕ ದೇವತೆಗಳಿಗೆ ಜನ್ಮದಾತನಾದ.

ಜೀಯಸ್‌ನ ದೇವಸಂತತಿ[ಬದಲಾಯಿಸಿ]

ಅಥೇನಾ ;[ರೋಮನ್ ಪ್ರತಿಮೆ ನಕಲು ಮೂಲ ಗ್ರೀಕ್ ಫಿಡಿಯಾದ ವೃತ್ತ- 430 AD,ಆರ್ಕಿಯಾಲಜಿ ಮ್ಯೂಜಿಯಮ್ - ನೇಪಲ್ಸ್]
  • ಜೀಯಸ್‌ನ ದೇವ ಸಂತತಿ
  • ಜೀಯಸ್‌ನು ಸ್ವರ್ಗಾಧಿಪತಿಯಾದ ನಂತರ ಅನೇಕ ದೇವ-ದೇವತೆಗಳಿಗೆ ಜನ್ಮ ನೀಡುತ್ತಾನೆ.
  • ಅವರಲ್ಲಿ :
  • ಅಥೇನಾ -ಲಲಿತಕಲೆ, ಕುಶಲಕಲೆ, ಯುದ್ಧದಲ್ಲಿ ರಕ್ಷೋಪಾಯ , ಮುಂತಾದ ಜ್ಞಾನಕ್ಕೆ ಅಧಿದೇವತೆಯಾಗುತ್ತಾಳೆ.
  • ಅಪೋಲ್ಲೋ -ಭವಿಷ್ಯ ಹೇಳುವ, ಔಷಧಿ ಜ್ಞಾನದ ದೇವತೆ,ಅಜೇಯನಾದ ಧನುರ್ಧಾರಿ.
  • ಆರ್ತೆಮಿಸ್ - ಬ್ಭೆಟೆಯಲ್ಲಿ ರಕ್ಷಿಸುವ ದೇವಿ.
  • ಹೆರ್ಮಿಸ್ ಜೀಯಸ್‌ನ ದೂತನಾಗುತ್ತಾನೆ.
  • ಪೆರ್ಸೆಪೋನ್ ಭೂಮಿಚಿi ಒಳಗಿನ ಲೋಕದ ಅಧಿಪತಿಹೇಡ್ಸ್‌ನನ್ನು ಮದುವೆಯಾಗಿ ಅಲ್ಲಿ ರಾಣಿಯಾಗುತ್ತಾಳೆ. ಅವಳು ಫಲ ಸಂವೃದ್ಧಿಯ-ಸುಗ್ಗಿಯ ದೇವತೆ.
  • ಏರಿಸ್ ಯುದ್ಧ ದೇವತೆ.
  • ಹೆಪಿಸ್ಟಸ್ ಲೋಹಕಾರನಾಗುತ್ತಾನೆ.
ಕೆಲವು ಕಾಲಾನಂತರ ಭುಲೋಕದ ಜನರ ನಡವಳಿಕೆಗೆ ಜೀಯಸ್ ಬೇಸರಪಟ್ಟು ಜಲಪ್ರಳಯ ಮಾಡಿಬಿಡುತ್ತಾನೆ. ಪುನಃ ಉಳಿದ ಒಂದು ದೈವ ಭಕ್ತ ದಂಪತಿಗಳಿಂದ ಪುನರ್‌ಸೃಷ್ಟಿಯಾಗುತ್ತದೆ.

ಜೀಯಸ್`ನಿಂದ ಮರ್ತ್ಯರ ಪರೀಕ್ಷೆ-ಪ್ರಳಯಕ್ಕೆ ನಿರ್ಧಾರ[ಬದಲಾಯಿಸಿ]

  • ಜಗತ್ತಿನ ಒಡೆಯನಾದ ಒಲಂಪಸ್ ನಲ್ಲಿ ನೆಲಸಿದ ಝೀಯಸ್‌ನಿಗೆ ಭೂಲೋಕದ ಆದಿ ಮಾನವ ಕುಲದವರು ದುಷರೂ ಸ್ವಾರ್ಥಿಗಳೂ ಆಗಿದ್ದಾರೆಂ ದೂ ದೇವತಗಳ ಬಗ್ಗೆ ಕೂಡಾ ತಾತ್ಸಾರ ಹೊಂದಿದ್ದಾರೆಂದೂ ವರದಿ ಬಂತು . ತಾನೇ ಪರೀಕ್ಷಿಸಲು ಭೂಮಿಗೆ ಬಂದು ಎಲ್ಲೆಡೆ ತಿರುಗಾಡಿದ ; ವರದಿ ನಿಜವೆನ್ನಿಸಿತು. ಹಾಗೇ ಸಂಜೆಯಾಧಾಗ ಆರ್ಕಾಡಿಯಾದ ರಾಜ ಲೈಕವೋನ್‌ನ (ಲ್ಯೂಕೋಸ್ =ತೋಳ) ಅರಮನೆಯ ಬಾಗಿಲಿಗೆ ಬಂದ. ಯಾರೋ ಕಾಣಲಿಲ್ಲ ಮುಂದೆ ಹೋದಾಗ ಭೋಜನ ಶಾಲೆಯಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದರು. ಭೋಜನ ಶಾಲೆಯ ಬಾಗಿಲಿನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ನಿಂತು ನೋಡುತ್ತಿರುವುದನ್ನು ರಾಜ ಲೈಕವೋನ್ ಗಮನಿಸಿದ. ಅವನು ,"ಯಾರು ನೀನು ? ಅರಮನೆಯ ಬಾಗಿಲಲ್ಲಿ ನಿನಗೇನು ಕೆಲಸ ? ಕೂಳಿಗಾಗಿ ಬಂದಿದ್ದರೆ ಹೊರಗೆ ಕಾಯುತ್ತಿರು ; ಏನಾದರೂ ತುಣುಕುಗಳು ಉಳಿದರೆ ಸೇವಕರು ಹಾಕುವರು" , ಎಂದು ಗದರಿಸಿ ಹೇಳಿದ. ಆಗ ಜೀಯಸ್, ಊಟದ ಸಮಯದಲ್ಲಿ ಅಪರಿಚಿತರು ಬಂದರೆ ಅವರನ್ನು ಉಪಚರಿಸಬೇಕು . ಅತಿಥಿಗಳು ದೇವರಾಜ ಜೀಯಸ್‌ನಿಗೆ ಸಮವೆಂದು ಗೊತ್ತಿಲ್ಲವೇ ? ನಾನು ಉತ್ತರದುಂದ ಬಂದಿದ್ದೇನೆ, ಮರ್ತ್ಯರ ಮತ್ತು ದೇವತೆಗಳ ಒಡೆಯ ಜೀಯಸನಾಗಿ ನಿಂತಿದ್ದೇನೆ. ಎಂದ.
  • ಆಗ ಊಟಕ್ಕೆ ಕುಳಿತಿರುವರು ಬೆದರಿದರು. ಆದರೆ ಲೈಕವೋಸ್ ಅವರಿಗೆ, "ಯಾವದನ್ನೂ ಕೂಡಲೇ ನಂಬಬೇಡಿ ನಾನು ಪತ್ತೆ ಹಚ್ಚುತ್ತೇನೆ." ಎಂದು ಹೇಳಿ ಅವನನ್ನು ಊಟಕ್ಕೆ ಕರೆದು ಕೂರಿಸಿ ಸೇವಕರಿಗೆ ರಹಸ್ಯವಾಗಿ ನರಮಾಂಸದ ಬೇಯಿಸಿದ ಅಡಗೆ ತರಲು ಹೇಳುತ್ತಾನೆ. ಆ ಮಾಂಸದ ಬಟ್ಟಲನ್ನು ಜೀಯಸ್‌ನಿಗೆ ಕೊಟ್ಟು , "ಮರ್ತ್ಯರ ಒಡೆಯಾ, ಒಲಿಂಪಸ್ ದೇವಾ ನಮ್ಮ ಆರ್ಕಾಡಿಯಾದ ಮರ್ತ್ಯರ ಕಿರು ನೈವೇದ್ಯವಾಗಿ ನೀನಿದನ್ನು ಸ್ವೀಕರಿಸಬೇಕು,", ಎಂದನು. ಜೀಯಸ್ ಅದನ್ನು ನೋಡಿ ಅಸಹ್ಯ ಪಟ್ಟುಕೊಂಡ ; ಅದರಲ್ಲಿ ಮಾನವನ ಕೈ,ಕಾಲು ಬೆರಳುಗಳ ಎಲುಬು ಕಾಣುತ್ತಿದ್ದವು .
  • (ದೇವತೆಗಳಲ್ಲಿ ಆರ್ತೆಮಿಸ್ ಒಬ್ಬಳೇ ನರಮಾಂಸ ಭಕ್ಷಿಸುವವಳು - ಕಾಳಿ-ಶಂಕಿಣಿ-ಡಾಕಿಣಿಯರಿದ್ದಂತೆ) .
  • ಜೀಯಸ್ ಅದನ್ನು ಹೇಸಿಗೆಯಿಂದ ಪಕ್ಕಕ್ಕೆ ಸರಿಸಿ, ಕೋಪಗೊಂಡು ಇಡೀ ಅರಮನೆಯೇ ನಡುಗುವಂತೆ ಭಯಂಕರವಾಗಿ ಆರ್ಭಟಿಸಿದ. ಎಲ್ಲರೂ ನಡುಗಿಹೋದರು. ಕಣ್ಣುಗಳು ಮಧ್ಯಾಹ್ನದ ಸೂರ್ಯನಂತೆ ಬೆಂಕಿಯುಗುಳುತ್ತಿದ್ದವು . ಅವನ ಕಣ್ಣುಗಳಿಂದ ಹೊರಟ ಕಿಡಿಗಳಿಂದ ಅಲ್ಲದ್ದ ಕುರ್ಚಿ ಮೇಜುಗಳೆಲ್ಲಾ ಉರಿದು ಬೆಂಕಿ ಹತ್ತಿಕೊಂಡಿತು. ಎಲ್ಲಾ ಓಡಲು ನೋಡಿದರು, ಆದರೆ ಆಗಲಿಲ್ಲ, ಆ ಬೆಂಕಿಯಲ್ಲಿ ಸುಟ್ಟು ಉರಿದು ಹೋದರು - ಲೈಕವೋಸ್ ಒಬ್ಬನನ್ನು ಬಿಟ್ಟು .
  • ಈಗ ಜೀಯಸ್ ಎತ್ತರವಾಗಿ ಬೆಳೆಯುತ್ತಿದ್ದಾನೆ ;
  • ಲೈಕವೋಸ್ ಆ ಬೆಂಕಿಗೆ ನೋಟಕ್ಕೆ ಹೆದರಿ ಬೆನ್ನುಹುರಿಯಲ್ಲಿ ನೋವನ್ನು ಅನಭವಿದುತ್ತಾ ವಿಕಾರ ರೂಪವಾಗಿ ತೋಳವಾಗಿ ಮಾರ್ಪಾಟಾಗಿ ಬೀದಿಗಳಳಲ್ಲಿ ಕೂಗುತ್ತ ಕಾಡು ಸೇರಿ ಹಸಿಮಾಂಸದ ಭಕ್ಷಕನಾಗಿ ಸುತ್ತುತ್ತಿದ್ದಾನೆ.
ಪ್ರಳಯ ಮಾಡಲು ನಿರ್ಧಾರ
  • ಜೀಯಸ್ ಕೋಪದ ಭರದಲ್ಲೇ ಒಲಂಪಸ್‌ಗೆ ಬಂದ. ದೇವಲೋಕದಲ್ಲಿ ಅವನು ತನ್ನ ಅನುಭವ ಹೇಳಿ, ಮರ್ತ್ಯರ

ದುರ್ವತನೆಗೆ ಶಿಕ್ಷೆಯಾಗಲೇಬೇಕೆಂದು ಹೇಳಿದ ಮತ್ತು ಭೂಲೋಕದ ಮರ್ತ್ಯರನ್ನೆಲ್ಲಾ ನಾಶಮಾಡುವದಾಗಿ ಹೇಳಿದ. ಇದಕ್ಕೆ ದೇವತೆಗಳು ಒಪ್ಪಿದರೂ, ಮುಂದಿನ ಚಿಂತೆ ಕಾಡಿತು. ಮಾನವರಿಲ್ಲದಿದ್ದರೆ ದೇವತೆಗಳಿಗೆ ತರ್ಪಣ ಕೊಡುವವರು ಯಾರು?, ಬಲಿ, ನೈವೆದ್ಯ ಕುಡುವವರು ಇಲ್ಲದೆ ದೇವತೆಗಳಿಗೆ ಪ್ರಾಮುಖ್ಯತೆ ಇಲ್ಲದೆ ಹೋಗುತ್ತದೆ. ಜೀಯಸ್ ಅವರನ್ನು ಸಮಾಧಾನ ಮಾಡಿ ಇವರನ್ನು ನಾಶಮಾಡಿ ಹೊಸಬರನ್ನು ಸೃಷ್ಟಿಸೋಣ ಎಂದನು.

  • ಅವನು ತನ್ನ ಸಿಡಿಲಿನ ಆಯುಧದಿಂದ ಎಲ್ಲವನ್ನೂ ಸುಟ್ಟು ಬಿಡಲು ಯೋಚಿಸಿದ- ಆದರೆ ಆ ಬೆಂಕಿ ಒಲಂಪಿಸ್ ಪರ್ವತವನ್ನೂ ಸುಡಬಹುದು ಎಂದು ಯೋಚಿಸಿ ಜಲಪ್ರಳಯ ಮಾಡಲು ನಿರ್ಧರಿಸಿದ.

ಜಲಪ್ರಳಯ[ಬದಲಾಯಿಸಿ]

  • ಜೀಯಸ್ ದುಷ್ಟರಾದ ಮನುಕುಲವನ್ನು ನಾಶಮಾಡಲು ಯೋಚಿಸಿ, ವಾಯು ರಾಜ ಅಲೋಯಿಸ್‌ನನ್ನು ಕರೆಸಿ ಅವನಿಗೆ ಮಂದಮಾರುತಗಳನ್ನು ತನ್ನ ಗುಹೆಯಲ್ಲಿ ಬಂಧಿಸಿಟ್ಟು ಚಂಡಮಾರುತಗಳನ್ನು ಬಿಡಲು ಹೇಳಿದ. ರುದ್ರ ಮರುತ್ತುಗಳ ಆರ್ಭm ಆರಂಭವಾಯಿತು . ಕಾರ್ಮೋಡಗಳು ಒಂದೇ ಸಮನೆ ವರ್ಷಧಾರೆಯನ್ನು ಸುರಿಸುತ್ತಿದ್ದವು. ಜಡಿಮಳೆಗೆ ಬೆಳಯೆಲ್ಲಾ ನಾಶವಾದವು. ಜೀಯಸನ ಕೋಪ ತಣಿಯಲಿಲ್ಲ ; ತನ್ನ ಸೋದರ ಸಾಗರದ ಒಡೆಯ ಪೊಸಿಡಿಯನ್‌ನ ಸಹಾಯ ಕೇಳಿದ ; ಪೊಸಿಡಿಯನ್ ಜೀಯಸನು ಹೇಳಿದಂತೆ ತ್ರಿಶೂಲದಿಂದ ಭೂಮಿಯನ್ನು ತಿವಿದು ನಡುಗಿಸಿದ. ಭೂಮಿಯ ಎಲ್ಲಾ ಕಡೆ ಬಿರುಕುಬಿಟ್ಟು ನೀರು ತುಂಬಿತು-ಸಮುದ್ರದ ನೀರು ಉಕ್ಕಿ ಬೂಮಿಯನ್ನುಆವರಿಸಿ, ಪ್ರಾಣಿ ಪಕ್ಷಿಗಳೂ ,ತೋಗಳೂ ಮನೆ ದೇವಾಲಯಗಳೂ ನೀರಿನಲ್ಲಿ / ಪ್ರವಾಹದಲ್ಲಿ ಕೊಚ್ಚಿ ಹೋದವು. ಎಲ್ಲವೂ ಮುಳುಗಿ ಭೂಮಿಯೇ ಕಾಣದಂತಾಯಿತು .ಜನರು ಆದಷ್ಟು ಎತ್ತರದ ಬೆಟ್ಟಗಳಿಗೆ ಏರಿದರು , ದೋಣಿಗಳಲ್ಲಿ ಸಂಚರಿಸಿದರು ಆದರೆ ಪ್ರವಾಹದ ನೀರು, ಒಂದೊಂದೇ ಬೆಟ್ಟಗಳನ್ನು ಮುಳುಗಿಸುತ್ತಾ ಎಲ್ಲರನ್ನೂ ನಾಶಮಾಡಿತು. ಆದರೆ ಪ್ರೊಮಿಥಿಯಸ್‌ನ ಮಗ ಮತ್ತು ಸೊಸೆ, ಡ್ಯುಕಾಲಿಯನ್ ಮತ್ತು ಅವನ ಪತ್ನಿ ಪಿರ್ರಾ ಮಾತ್ರಾ ಪ್ರೊಮಿಥಿಯಸ್‌ನ ಸಲಹೆಯಿಂದ ಉಳಿದುಕೊಂಡರು.

ಡ್ಯುಕಾಲಿಯನ್ ಮತ್ತು ಅವನ ಪತ್ನಿ ಪಿರ್ರಾ[ಬದಲಾಯಿಸಿ]

ಪ್ರಾಮಿಥೀಯಸ್ (1868 ಬೈ ಗಸ್ಟೇವ್ ಮೊರಾವ್). ಬಂಧಿಸಲ್ಪಟ್ಟ ಪ್ರೊಮಿಥಿಯಸ್‌;ಜೀಯಸ್`ಈತನನ್ನು ಸಿಥಿಯಾದ ಕೇಕಸಸ್ ಪರ್ವತಕ್ಕೆ ಮೊಳೆಹೊಡೆದು ಬಿಗಿದು ಕಟ್ಟಿಹಾಕಿದ್ದ.
  • ಈಗ ನಾಶವಾದ ನರವಂಶ ಜೀಯಸ್‌ನ ತಂದೆ ಕ್ರೋನಸ್‌ನ ಸೋದರ ಕುಶಲ ಕೆಲಸಗಾರ ಪ್ರೊಮಿಥಿಯಸ್‌ನಿಂದ ಸೃಷ್ಟಿಸಲ್ಪಟ್ಟವರು. ವನು ಪ್ರಜಾಪತಿಎಂದು ಹೆಸರಾದವನು. ಅವನೇ ಮಣ್ಣು ನೀರಿನಿಂದ ಮಾನವರನ್ನು ತಯಾರಿಸಿ ಜೀವ ಕೊಟ್ಟವನು. ದೇವಲೋಕದಿಂದ ಬೆಂಕಿಯನ್ನು ಕದ್ದು ಮರ್ತ್ಯರಿಗೆ ಕೊಟ್ಟು ಉಪಕಾರ ಮಾಡಿದವ. ಅದಕ್ಕಾಗಿ ಅವನಿಗೆ ಜೀಯಸ್ ಕಠಿಣ ಶಿಕ್ಷೆ ವಿಧಿಸಿದ್ದ. ಈತನನ್ನು ಸಿಥಿಯಾದ ಕೇಕಸಸ್ ಪರ್ವತಕ್ಕೆ ಮೊಳೆಹೊಡೆದು ಬಿಗಿದು ಕಟ್ಟಿಹಾಕಿದ್ದ. ಅಲ್ಲಿ ಆತನನ್ನು ಹಗಲೆಲ್ಲಾ ಹದ್ದುಗಳು ಅವನ ಪಿತ್ತಕೋಶವನ್ನು ಕುಕ್ಕಿ ತಿನ್ನುತ್ತಿದ್ದವು ಆದರ ಬೆಳಗಾಗುವುದರೊಳಗೆ ಅದು ಬೆಳೆಯುತ್ತಿತ್ತು (ಅವರೆಲ್ಲಾ ಸಾವಿಲ್ಲದವರು -ಆದರೆ ನೋವಿದೆ)
  • ತಾನು ಪ್ರೀತಿಯಿಂದ ಸೃಷ್ಟಿಸಿದ ಮನುಕುಲವನ್ನು ನಾಶಮಾಡುವ ಜೀಯಸ್ ನ ಕುಟಿಲ ತಂತ್ರವನ್ನು /ಯೋಜನೆಯನ್ನು ಅರತಿದ್ದ. ಅದರಿಂದ ತನ್ನ ಮಗ ಥಿಯಾದ ರಾಜ ಡ್ಯುಕಾಲಿಯನ್‌ನ ಸ್ವಪ್ನದಲ್ಲಿ ಕಾಣಿಸಿಕೊಂಡು ಅವನಿಗೆ ಜಲಪ್ರಳಯದ ಮುನ್ಸೂಚನೆ ಕೊಟ್ಟು , ಒಂದು ದೊಡ್ಡ ಪೆಟ್ಟಿಗೆ/ದೋಣಿ ಯನ್ನು ತಯಾರಿಸಿ , ಬೇಕಾದ ಬಟ್ಟೆ,ವಸ್ತುಗಳನ್ನು ಅದರಲ್ಲಿ ಇಟ್ಟುಕೊಂಡು,ಮಳೆ- ಪ್ರವಾಹ ಆರಂಭವಾದ ತಕ್ಷಣ ಮಡದಿ ಪಿರ್ರಾಳಜೊತೆ ಅದರಲ್ಲಿ ಕುಳ್ಳಿರಬೇಕೆಂದು ಸಲಹೆ ಕೊಟ್ಟ. ಡ್ಯುಕಾಲಿಯನ್ ಅದೇ ರೀತಿ ಮಾಡಿ ಉಳಿದುಕೊಂಡ. ಒಂಭತು ಹಗಲು ಒಂಭತ್ತು ರಾತ್ರಿ ಹೀಗೆ ತೇಲುತ್ತಲೇ ಇದ್ದರು. ಹಾಗಾಗಿ ಎಲ್ಲವೂ ನಾಶವಾದರೂ, ಡ್ಯುಕಾಲಿಯನ್ ಮತ್ತು ಪಿರ್ರಾ (Deucalion and Pyrrha) ಉಳಿದುಕೊಂಡರು.

ಮರುಸೃಷ್ಟಿ[ಬದಲಾಯಿಸಿ]

  • ಎಲ್ಲವನ್ನೂ ಒಲಂಪಿಸ್‌ನಿಂದ ನೋಡುತ್ತಿದ್ದ ಜೀಯಸ್‌ನಿಗೆ ಇವರು ಕಣ್ಣಿಗೆ ಬಿದ್ದರು. ಆದರೆ ಅವನು ಇವರು ದೈವಭಕ್ತರೂ ಒಳ್ಳೆಯವರೂ ಆದ್ದರಿಂದ .ಅವರನ್ನು ಕಾಪಾಡಲು ನಿರ್ಧರಿಸಿದ. ಮರುತ್ತುಗಳ ರಾಜ ಅಲೋಯಿಸ್‌ನಿಗೆ ಚಂಡಮಾರುತಗಳನ್ನು ತಡೆದು ಮಂದಮಾರುತ (ಮಿತ್ರಮಾರುತ- ಬೊರಿಯಾಸ್) ಬಿಡಲು ಹೇಳಿದ. ಪೊಸಿಡಿಯನ್ನಗೆ ತ್ರಿಶೂಲ ಕೆಳಗಿಟ್ಟು ಸಮುದ್ರ ತೆರೆಗಳು ಶಂತವಗುವಂತೆ ಮಾಡಲು ಹೇಳಿದ. ಅದೇ ರೀತಿ ಜಲದೇವತೆ ತ್ರಿತನ್‌ನಿಗೆ ಸಾಗರಾದ್ಯಂತ ಕೇಳುವಂತೆ ಶಂಖ ಊದಿ ತೆರೆಗಳು ಇಳಿದುಬರಲು ಆಜ್ಞಾಪಿಸಲು ಹೇಳಿದ.
  • ಸ್ವಲ್ಪ ಹೊತ್ತಿನಲ್ಲಿ ಸಾಗರದ ತಟಗಳು ಕಾಣಿಸಿಕೊಂಡವು ನದಿಗಳ ಪ್ರವಾಹ ತಗ್ಗಿ ಮೊದಲಿನಂತೆ ಆಯಿತು.

ಡ್ಯುಕಾಲಿಯನ್ ಮತ್ತು ಪಿರ್ರಾ ನಕ್ಷತ್ರಗಳಿಗೆ ತಾಗುವಷ್ಟು ಎತ್ತರವಿದ್ದ ಪರ್ನಾಸಸ್ ಪರ್ವತದ ಜೋಡಿ ಶಿಖರಗಳನ್ನು ಸುತ್ತುತ್ತಿದ್ದರು. ನೀರಿಳಿದ ನಂತರ ಅದರ ಕಣಿವೆಯಲ್ಲಿ ಇಳಿದರು. ಅಲ್ಲಿಂದ ಎಲ್ಲವಮ್ಮೂನೇಡಿದರು. ಎಲ್ಲವೂ ನಿರ್ಜನವಾಗಿದೆ ಜೀವರಹಿತವಾಗಿದೆ. ತಮ್ಮನ್ನು ಉಳಿಸಿದ್ದಕ್ಕೆ ದೇವತೆಗಳಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು. ನಂತರ ಭವಿಷ್ಯ ದೇವತೆ ಥೆಮಿಸ್‌ಳನ್ನು ಕೇಳಲು ಅವಳ ಗಡಿಗೆ ಬಂದರು.

  • ಗುಡಿಯೊಳಗೆ ಸದಾಉರಿಯುತ್ತಿದ್ದ ನಂದಾದೀಪ ಆರಿಹೋಗಿತ್ತು . ಅವರು ಬಲಿಪೀಠಕ್ಕೆ ನಮಸ್ಕರಿಸಿ ಅದಕ್ಕೆ ಮುತ್ತಿಟ್ಟು ಪ್ರಾರ್ಥನೆ ಮಾಡಿಕೊಂಡರು.
"ಅಮರದೇವತೆಗಳು ತಮ್ಮ ಕೋಪವನ್ನು ಬಿಟ್ಟು ಶಾಂತಚಿತ್ತರಾಗಿ ನಮ್ಮ ಮೊರೆಯನ್ನು ಕೇಳುವರಾದರೆ ನಮ್ಮ ಬಯಕೆಯನ್ನು ಈಡೇರಿಸಬೇಕೆಂದು ಬಯಸುತ್ತೇವೆ. ಓ ತಾಯಿಯೇ, ಭವಷ್ಯವನ್ನು ಬಲ್ಲವಳು ನೀನು , ಇದೀಗ ನಾಶವಾದ ಮನುಕುಲವನ್ನು ಮತ್ತೆ ಈ ಮರ್ತ್ಯ ಭೂಮಿಯಲ್ಲಿ ಸ್ಥಾಪಿಸುವ ಬಗೆ ಯಾವುದೆಂದು ಹೇಳುವೆಯಾ ?" ಎಂದು ಪ್ರಾರ್ಥಿಸಿದರು.
  • ಅದಕ್ಕೆ ಕರುಣಾಮಯಿ ದೇವಿ, "ನೀವು ಈಗುಡಿಯಿಂದ ಮರಳುವಾಗ ನಿಮ್ ಬಟ್ಟೆಗಳನ್ನು ಸಡಿಲಿಸಿಕೊಂಡು ನಿಮ್ಮ ಸುತ್ತ ಹಾರುತ್ತಿರುವಂತೆ ಮಾಡಿಕೊಳ್ಳಿ; ನಿಮ್ಮ ಮುಖವನ್ನು ಅದರಿಂದ ಮುಚ್ಚಿಕೊಳ್ಳಿ . ಹೋಗುತ್ತಿದ್ದಂತೆ ನಿಮ್ಮ ತಾಯಿಯ ಎಲುಬುಗಳನ್ನು ಹಿಂದಕ್ಕೆ ಎಸೆಯುತ್ತಾ ಸಾಗಿರಿ", ಎಂದಳು.
  • ಆಗ ಪಿರ್ರಾ ತಾಯಿಯ ಎಲುಬು ಎಂದು ನೆನೆದು ನಡುಗಿದಳು ; ಅದಕ್ಕೆ ಡ್ಯುಕಾಲಿಯನ್ ತಾಯಿಯ ಎಲುಬು ಎಂದರೆ ಭೂಮಿಯಲ್ಲಿರುವ ಕಲ್ಲುಗಳು ಎಂದು ಸಮಾಧಾನ ಪಡಿಸಿದನು.
  • ಇಬ್ಬರೂ ಥೆಮಿಸ್ ಹೇಳಿದಂತೆ ಬಟ್ಟೆಯನ್ನು ಸಡಿಲಿಸಿ ಮುಖವನ್ನು ಅದರಲ್ಲಿ ಮುಚ್ಚಿಕೊಂಡು ಕಲ್ಲುಗಳನ್ನು ಹೆಕ್ಕಿಕೊಂಡು ಬಟ್ಟೆಯಲ್ಲಿ ಶೇಖರಿಸಿಕೊಂಡು ಗುಡಿಯಿಂದ ಹೊರಟರು. ದಾರಿಯುದ್ದಕ್ಕೂ ಒಂದೊಂದೇ ಕಲ್ಲುಗಳನ್ನು ಎಸೆಯುತ್ತಿದ್ದರು. . ಹಿಂದೆ ನೋಡದೆ ಪರ್ವತದಿಂದ ಇಳಿದು ಬರುತ್ತಾರೆ. ಕಲ್ಲುಗಳು ನೆಲಕ್ಕೆ ತಾಗಿದ ಕೂಡಲೇ ಮೃದುವಾಗುತ್ತವೆ. ಮೃದುವಗುತ್ತಾ ಬೆಳೆಯುತ್ತವೆ; ಬೆಳೆದು ಮಾನವಾಕೃತಿ ತಳೆಯುತ್ತವೆ. ಶಿಲೆಯ ಮೂರ್ತಿಯಂತೆ ಕಾಣುತ್ತವೆ. ಕಲ್ಲಿನ ಕಠಿಣ ಭಾಗಗಳು ಅಸ್ತಿಗಳಾಗಿಯೂ, ಮೃದುಭಾಗಗಳು ರಕ್ತ ಮಾಂಸಗಳಾಗಿಯೂ ಪರಿವರ್ತಿತವಾಗುತ್ತವೆ.
ಡ್ಯುಕಾಲಿಯನ್ ಎಸೆದ ಕಲ್ಲುಗಳು ಗಂಡುಗಳಾಗುತ್ತವೆ; ಮತ್ತು ಪಿರ್ರಾ ಎಸೆದವು ಹೆಣ್ಣುಗಳಾಗುತ್ತವೆ.
  • ಕಲ್ಲಿನಿಂದ ಹುಟ್ಟಿದ ಮಾನವರು ದೃಢಕಾಯರಾಗಿರುತ್ತಾರೆ, ಬಲಿಷ್ಟರೂ ಸುಂದರರೂ ಆಗಿರುತ್ತಾರೆ.

ಅಷ್ಟರಲ್ಲಿ ಭೂಮಿತಾಯಿಯು ಎಲ್ಲಾ ತರದ ಜೀವರಾಶಿಗಳಿಗೂ, ಸಸ್ಯಗಳಿಗೂ ಹಿಂದೆ ಇದ್ದಂತೆಯೇ ಸೃಷ್ಟಿಸುತ್ತಾಳೆ . ಇನ್ನೂ ಹೆಚ್ಚಿನ ಜೀವಜಂತುಗಳೂ ಮೈತಾಳುತ್ತವೆ . ಹಿಲೋಯಿಸ್ - ಸೂರ್ಯದೇವ ಮುಂಚಿನಂತೆಯೇ ತನ್ನ ಶುಭ್ರಕಿರಣಗಳನ್ನು ಜೀವಜಗತ್ತಿನಮೇಲೆ ಚೆಲ್ಲುತ್ತಾ ದಿನ ಚಕ್ರದಲ್ಲಿ ಸಂಚರಿಸತೊಡುಗುತ್ತಾನೆ . ಇದು ಮರುಸೃಷ್ಟಿ..

ಗ್ರೀಕ್ ದೇವತೆಗಳು[ಬದಲಾಯಿಸಿ]

ಪ್ರೇಮ,ಸೌಂದರ್ಯ, ಮತ್ತು ಕಾಮದ ದೇವತೆ ; ಅಫ್ರೋಡೈಟ್` (ರೋಮನ್ ಪ್ರತಿಮೆ -ಕ್ರಿ.ಶ.ಎರಡನೇ ಶತಮಾನ, * ನ್ಯಾಶನಲ್ ಆರ್ಖಿಯಾಲಜಿ ಮ್ಯೂಜಿಯಂ ಅಥೆನ್ಸ್`)
  • ಗೇಯಾ (ಭೂಮಿಯ ದೇವತೆ -ಜಗನ್ಮಾತೆ)- Gaea..;
  • ಟಾರ್ಟರಸ್ (ತಾರ್ತರಸ್- ಕೂರ್ಮ-ಆಮೆ ಇರೋಸ್- ಮೋಹಿನಿ - ಮೋಹದ ರೂಪ;
  • ಯುರೇನಸ್ (ಆಕಾಶದ ತತ್ವ-ಆಕಾಶ)- Urenus.;; ಓರಿಯಾ (ಪರ್ವತ) ; ಮತ್ತು ಪೋಂಟೋಸ್(ಸಮುದ್ರ);
  • ಶತಬಾಹು ದೈತ್ಯರು - briyarius with 100hands’(3):-
  • ಸೈಕ್ಲೋಪರು - Cylopes.(3);
  • ಟೈಟಾನ್‌ರಲ್ಲಿ ಹೀಲಿಯೋಸ್ -(Helios)ಎಂಬುವವನು ರಥಾರೂಢನಾದ ಸೂರ್ಯಾಧಿಪತಿ- ;
  • ಟೈಟಾನರಲ್ಲಿ ಕಿರಿಯ ರಡನೇ ಜಗದೊಡೆಯ-ಕ್ರೋನಸ್- Cronus-Saturn- Rhea -(celebe);;.
  • ಸೆಲೆನ್ ಚಂದ್ರ ದೇವತೆ; .
  • ಓಸಿಯಾನ್ ನ್ನು ಸುತ್ತುವರಿದ ನದೀ ದೇವತೆ.;
  • ಥೆಮಿಸ್ ಕಣಿ ಹೇಳುವ ಕೊರವಂಜಿ- Themis; ಜೀಯಸ್ -Zeus.:,
  • ಪೋಸಿಡಿಯನ್- Poseidian., ಹೇಡ್ಸ್- Hades :;,
  • ಹೆರಾ hera., ಡೆಮೆಟರ್- Demeter.; , ಮತ್ತು ಹೆಸ್ತಿಯಾ Hestia(vesta);
  • ಜೀಯಸ್‌ನು ಸ್ವರ್ಗಾಧಿಪತಿಯಾದ ನಂತರ ಅನೇಕ ದೇವ-ದೇವತೆಗಳಿಗೆ ಜನ್ಮ ನೀಡುತ್ತಾನೆ.
  • ಅವರಲ್ಲಿ :ಅಥೇನಾ -ಲಲಿತಕಲೆ, ಕುಶಲಕಲೆ, ಯುದ್ಧದಲ್ಲಿ ರಕ್ಷೋಪಾಯ- Athena -Minarva ಮುಂತಾದ ಜ್ಞಾನಕ್ಕೆ ಅಧಿದೇವತೆಯಾಗುತ್ತಾಳೆ;;.-
  • (Aphrodite-ಸೌಂದರ್ಯದ ಅಧಿದೇವತೆ ಅಫ್ರೋಡೈಟ್ ಜನಿಸಿ ಬರುತ್ತಾಳೆ.(ಅಫ್ರೋಡೈಟ್ ಎಂದರೆ-ಜನನಾಂಗದ ಬಯಕೆ), ಅವಳು ವೀನಸ್ -ಫೇನಜಾತೆ ನೊರೆಯಲ್ಲಿ ಹುಟ್ಟಿದವಳು ಎಂದು ಪ್ರಸಿದ್ಧಳಾಗತ್ತಾಳೆ.; ಅಪೋಲ್ಲೋ - Apollo-.ಭವಿಷ್ಯ ಹೇಳುವ, ಔಷಧಿ ಜ್ಞಾನದ ದೇವತೆ,ಅಜೇಯನಾದ ಧನುರ್ಧಾರಿ.; ಆರ್ತೆಮಿಸ್ -Arthemis.- ಬ್ಭೆಟೆಯಲ್ಲಿ ರಕ್ಷಿಸುವ ದೇವಿ.;
  • ಹೆರ್ಮಿಸ್ hermis (Marcury ಜೀಯಸ್‌ನ ದೂತನಾಗುತ್ತಾನೆ.;
  • ಪೆರ್ಸೆಪೋನ್ ಳು ಭೂಮಿ ಒಳಗಿನ ಲೋಕದ ಅಧಿಪತಿಯಾದ -ಹೇಡ್ಸ್‌ನನ್ನು Hades-ಮದುವೆಯಾಗಿ ಅಲ್ಲಿ ರಾಣಿಯಾಗುತ್ತಾಳೆ. ಅವಳು ಫಲ ಸಂವೃದ್ಧಿಯ-ಸುಗ್ಗಿಯ ದೇವತೆ.;;
  • ಏರಿಸ್- Aris (Mars)(god of war)-ಯುದ್ಧ ದೇವತೆ. ಹೆಪಿಸ್ಟಸ್-Hopaestes -ಲೋಹಕಾರನಾಗುತ್ತಾನೆ.
  • *ರೋಗಗಳು,(ರೋಗಗಳ ಅಧಿದೇವತೆಗಳು) Fates ;Clotho;Lachesis;Atropos(diseases)

[೧][೨][೩]

ನೋಡಿ[ಬದಲಾಯಿಸಿ]

ವರ್ಗದ ಲೇಖನಗಳು[ಬದಲಾಯಿಸಿ]

ಸೃಷ್ಟಿ ಮತ್ತು ಪುರಾಣ; ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ

ಉಲ್ಲೇಖ[ಬದಲಾಯಿಸಿ]

  1. ಸೃಷ್ಟಿ ಪ್ರಲಯ ಮರುಸೃಷ್ಟಿ :ಲೇಖಕ: ಪ್ರೊ.ಪಿ.ಶ್ರೀಪತಿ ತಂತ್ರಿ -ಎಸ್.ಬಿ.ಎಸ್.ಪಬ್ಲಿಷರ್ಸ್ ಬೆಂಗಳೂರು.೫೬೦೦೦೧(೧೯೯೬)
  2. ಇಂಗ್ಲಿಷ್` ವಿಕಿಪೀಡಿಯಾ-'ಅಥೇನಾ' ;ಅಫ್ರೋಡೈಟ್`-ದಿಂದ
  3. Odyssey - Homer