ರಣಧೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಣಧೀರ
ರಣಧೀರ
ನಿರ್ದೇಶನವಿ.ರವಿಚಂದ್ರನ್
ನಿರ್ಮಾಪಕವಿ.ರವಿಚಂದ್ರನ್
ಸಂಭಾಷಣೆಹಂಸಲೇಖ
ಪಾತ್ರವರ್ಗರವಿಚಂದ್ರನ್ ಖುಷ್ಬೂ ಲೋಕೇಶ್, ಮಾ.ಮಂಜುನಾಥ್, ಉಮಾಶ್ರೀ, ಅನಂತನಾಗ್, ಜೈಜಗದೀಶ್, ಸುಧೀರ್, ಶನಿ ಮಹಾದೇವಪ್ಪ, ಜಗ್ಗೇಶ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆಈಶ್ವರಿ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಾ.ಮಂಜುನಾಥ್, ವಾಣಿ ಜಯರಾಂ, ಎಸ್.ಜಾನಕಿ, ರಮೇಶ್, ಪಿ.ಸುಶೀಲ
ಇತರೆ ಮಾಹಿತಿರಜತ ಮಹೋತ್ಸವದ ಚಿತ್ರ

ರಣಧೀರ - ೧೯೮೮ ರಲ್ಲಿ ಬಿಡುಗಡೆಯಾದ ಚಿತ್ರ. ರವಿಚಂದ್ರನ್ ನಾಯಕನಟನಾಗಿ ಖುಷ್ಬೂ ನಾಯಕಿಯಾಗಿ ಅಭಿನಯಿಸಿರುವ ಚಿತ್ರ. ಹಂಸಲೇಖ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಸಂಗೀತವನ್ನೂ ಸಂಯೋಜಿಸಿದ ಈ ಚಿತ್ರದಲ್ಲಿ ಲೋಕೇಶ್, ಮಾ.ಮಂಜುನಾಥ್, ಉಮಾಶ್ರೀ, ಅನಂತನಾಗ್, ಜೈಜಗದೀಶ್, ಸುಧೀರ್, ಶನಿ ಮಹಾದೇವಪ್ಪ, ಜಗ್ಗೇಶ್ ನಟಿಸಿದ್ದಾರೆ. ಅನಂತನಾಗ್, ಮಾ.ಮಂಜುನಾಥ್ ಮತ್ತು ಉಮಾಶ್ರೀಗಳ ಹಾಸ್ಯಭರಿತ ದೃಶ್ಯಗಳು, ಸಂಗೀತ ಮತ್ತು ಆರ್.ಮಧುಸೂದನ್ರ ಚಮತ್ಕಾರಿಕ ಛಾಯಾಗ್ರಹಣ ಇವುಗಳು ಈ ಚಿತ್ರದ ಜನಪ್ರಿಯತೆಗೆ ಕಾರಣವಾದವು.

ಕಥೆ[ಬದಲಾಯಿಸಿ]

ಭೂಗತ ದೊರೆ ಭಾಷಾ ತನ್ನ ಬಂಧನಕ್ಕೆ ಕಾರಣನಾದ ಐ.ಜಿ.ಪಿ ಜಗನ್ನಾಥ್, ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯದಂತೆ, ತನ್ನ ಶಿಷ್ಯ ರೌಡಿ ರಣಧೀರನಿಗೆ ಜೈಲಿನಿಂದಲೇ ಸಂದೇಶ ರವಾನಿಸುತ್ತಾನೆ. ರಣಧೀರ ಜಗನ್ನಾಥ್ ಮನೆಗೆ ತೆರಳಿ ಎಚ್ಚರಿಸಲು ಯತ್ನಿಸಿದಾಗ, ಜಗನ್ನಾಥ್ ನಿರಾಕರಿಸುತ್ತಾನೆ. ರಣಧೀರ ಜಗನ್ನಾಥ್ ಮಗಳು ರಾಧಾಳ ಭಾವಚಿತ್ರ ಕಂಡು, ಆಕೆಯನ್ನು ತನ್ನ ೪ ಮಂದಿ ಸಹಚರರ ಸಹಾಯದಿಂದ, ಕಾಲೇಜು ಪ್ರವಾಸದಿಂದ ಅಪಹರಿಸುತ್ತಾನೆ. ತಾವೆಲ್ಲರೂ ಮಫ಼್ತಿ ಪೋಲೀಸರೆಂದೂ, ರಾಧಾಳನ್ನು ಅಪಾಯದಿಂದ ರಕ್ಷಿಸಲು ತಮ್ಮೊಡನೆ ಚಾರ್ಮುಡಿ ಬೆಟ್ಟದ ತಪ್ಪಲಿನಲ್ಲಿ ಮರೆಯಲ್ಲಿ ಇಟ್ಟಿರುವುದೆಂದು ಸುಳ್ಳು ಹೇಳುತ್ತಾನೆ.
ರಾಧಾಳ ಅಣ್ಣ ಇನ್ಸ್ ಪೆಕ್ಟರ್ ಆನಂದ್, ರಣಧೀರನ ಎಚ್ಚರಿಕೆಯ ಪ್ರಕಾರ ರಣಧೀರ ಮಫ಼್ತಿ ಪೋಲೀಸ್ ಎಂದು ಕ್ಯಾಸೆಟ್ ನಲ್ಲಿ ರಾಧಾಳಿಗೆ ಸಂದೇಶ ಕಳಿಸುತ್ತಾನೆ ಮತ್ತು ಹುಡುಕಲು ಸಂಫೂರ್ಣ ಪೋಲೀಸ್ ಪಡೆಯೊಂದಿಗೆ ಹುಡುಕಲು ತೊಡಗುತ್ತಾನೆ. ರಣಧೀರ ಒಬ್ಬ ಪಾತಕಿ ಎಂದು ರಾಧಾಳಿಗೆ ಅರ್ಥವಾಗುವ ಹೊತ್ತಿಗೆ ಅವರಿಬ್ಬರ ಮಧ್ಯೆ ಪ್ರೀತಿ ಅರಳುತ್ತದೆ. ರಾಧಾಳ ಪ್ರೀತಿಗಾಗಿ, ರಣಧೀರ ಪಾತಕ ಲೋಕ ತ್ಯಜಿಸಿ, ಮುರಳಿ ಎಂಬ ಹೊಸಹೆಸರಿನಿಂದ ಪ್ರಾಮಾಣಿಕನಾಗಿ ಬದುಕುವುದಾಗಿ ರಾಧಾಳಿಗೆ ವಚನ ಈಯುವ ಹೊತ್ತಿಗೆ ಆನಂದ್ ರಣಧೀರನನ್ನು ಬಂಧಿಸುತ್ತಾನೆ.
ರಾಧಾ ತನ್ನ ಅತ್ತಿಗೆಯ ಬಳಿ ತನ್ನ ಮತ್ತು ರಣಧೀರನ ಪ್ರೀತಿ ಬಗ್ಗೆ ತಿಳಿಸುತ್ತಾಳೆ. ಆನಂದ್, ತನ್ನ ತಂಗಿಗಾಗಿ ನ್ಯಾಯಾಲಯದಲ್ಲಿ ರಣಧೀರನಿಗೆ ಅನುಕೂಲವಾಗುವಂತೆ ಸಾಕ್ಷಿ ಹೇಳುತ್ತಾನೆ. ಮರಣದಂಡನೆಯ ಬದಲು ೨ ವರ್ಷ ಸಾದಾ ಶಿಕ್ಷೆಯನ್ನು ಪಡೆದು ಮರಳುವುದಾಗಿ ರಣಧೀರ, ಆನಂದ್ ನಿಗೆ ಮಾತು ನೀಡುತ್ತಾನೆ. ತನ್ನ ತಂಗಿಯನ್ನು ತಾನೇ ಧಾರೆ ಎರೆಯುವುದಾಗಿ ಹೇಳುವ ಆನಂದ್, ತನ್ನ ಮನೆಗೆಯೇ ಮಾರುವೇಷದಲ್ಲಿ ಬಂದು ರಾಧಾ ಜಿಮ್ಮಿ ಎಂಬ ತನ್ನ ಸ್ನೇಹಿತನನ್ನು ಪ್ರೀತಿ ಮಾಡುತ್ತಿರುವುದಾಗಿಯೂ, ಆತ ೨ ವರ್ಷ ಸಿಂಗಾಪುರದಲ್ಲಿ ವ್ಯವಹಾರ ಮುಗಿಸಿ ಭಾರತಕ್ಕೆ ಮರಳುವವರೆಗೆ, ರಾಧಾಲ ಮದುವೆ ಮಾಡದಂತೆ ತಂದೆ ಜಗನ್ನಾಥ್ ರಿಂದ ಮಾತು ಪಡೆಯುತ್ತಾನೆ. ಜಿಮ್ಮಿ ಆನಂದ್ ನ ಸಹಪಾಠಿ ಮತ್ತು ಕಳ್ಲಸಾಗಣೆಯ ಆರೋಪ ಹೊತ್ತು ಸೀಮ್ಗಾಪುರ ಜೈಲಿನಲ್ಲಿ ಇರುವನು ಮತ್ತು ಎಂದಿಗೂ ಭಾರತಕ್ಕೆ ಬರಲಾರ ಎಂಬುದು ಆನಂದ್ ನ ನಂಬುಗೆ. ಆದರೆ, ಜಿಮ್ಮಿಯನ್ನು ಆಭರಣದ ಆಂಗಡಿಯಲ್ಲಿ ಕಂಡ ಜಗನ್ನಾಥ್ ನ ತಂಗಿ, ಜಿಮ್ಮಿಯನ್ನು ಮನೆಗೆ ಕರೆತರುತ್ತಾಳೆ. ರಾಧಾರ ಅಂದ ಕಂಡ ಜಿಮ್ಮಿ, ಆನಂದ್ ನ ಆಶಯಕ್ಕ್ಕೆ ವಿರುದ್ಧವಾಗಿ ಆಕೆಯನ್ನೇ ವರಿಸಲು ಮತ್ತು ಅದಕ್ಕಾಗಿ ಏನೇ ಮಾಡಲು ಸಿದ್ಧನಾಗುತ್ತಾನೆ.
ಸಜೆ ಮುಗಿಸಿ ಹೊರಬಂದ ರಣಧೀರ/ಮುರಳಿಯನ್ನು ಯಮಹಾ ಕಂಪನಿಯಲ್ಲಿ ಉದ್ಯೋಗಿಯಾಗಿಸುತ್ತಾನೆ. ಬೈಕ್ ಸವಾರಿಯಲ್ಲಿ ಪರಿಣತನಾದ ರಣಧೀರ, ಜಿಮ್ಮಿಯ ವಿರುದ್ಧ ವೇಗದ ಬೈಕ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು, ರಾಧಾಳ ಮನಗೆಲ್ಲುತ್ತಾನೆ. ತನ್ನ ಮಿತ್ರನಾದ, ಯಮಹಾ ಕಂಪನಿಯ ಮಾಲೀಕನೊಂದಿಗೆ ಮಾತನಾಡುವ ಜಗನ್ನಾಥ್, ರಣಧೀರನನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸುತ್ತಾನೆ. ತನ್ನ ಉದ್ಯೋಗಿಯನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದು, ತೆಗೆದುಹಾಕುವುದು ನನ್ನ ನಿರ್ಧಾರ ಎಂದು ಜಗನ್ನಾಥ್ ನ ಮಾತನ್ನು ಧಿಕ್ಕರಿಸುವ ಮಾಲೀಕ, ಪರೋಕ್ಷವಾಗಿ ರಾಧಾ-ರಣಧೀರರ ಪ್ರೇಮಕ್ಕೆ ತನ್ನ ಬೆಂಬಲ ಈಯುತ್ತಾನೆ.
ತಾನು ಮುರಳಿಯಾಗಿ ಪರಿವರ್ತನೆ ಆಗಿರುವುದಾಗಿಯೂ, ಪ್ರಾಮಾಣಿಕನಾಗಿ ಬದುಕುವುದಾಗಿಯೂ, ತನಗೆ ರಾಧಾಳ ಕೈನೀಡುವಂತೆ ರಣಧೀರ ಜಗನ್ನಾಥ್ ರನ್ನು ಅವರ ಮನೆಗೆಯೇ ಬಂದು ಆಗ್ರಹಿಸುತ್ತಾನೆ. ಜಗನ್ನಾಥ್ ರಣಧೀರನಿಗೆ ಅವಮಾನ್ ಮಾಡಿ ಕಳಿಸುತ್ತಾನೆ. ಜೈಲಿನಿಂದ ಪರಾರಿಯಾಗಿ, ಭಾಷಾ ಜಿಮ್ಮಿಯ ಜೊತೆಗೂಡಿ ರಾಧಾಳನ್ನು ಮತ್ತು ಜಗನ್ನಾಥ್ ನನ್ನು ಅಪಹರಿಸುತ್ತಾನೆ. ಕುಡಿದ ಮತ್ತಿನಲ್ಲಿ ಚಿತ್ತಾಗಿ ಬಿದ್ದಿದ್ದ ರಣಧೀರನ ಮೇಲೆ ಭಾಷಾನ ಸಹಚರರು ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ ಮತ್ತು ಅವನ ಸಹಚರರನ್ನು ಅಪಹರಿಸುತ್ತಾರೆ.
ಆನಂದ್ ಮಾರುವೇಷ ಧರಿಸಿ ತನ್ನ ತಂಗಿ-ತಂದೆಯನ್ನು ಉಳಿಸುವ ಯತ್ನದಲ್ಲಿ ವಿಫಲನಾಗುತ್ತಾನೆ. ರಣಧೀರ ಆಸ್ಪತ್ರೆಯಿಂದ ಎದ್ದು ಬಂದು,ಖೂಳರನ್ನೆಲ್ಲಾ ಬಡಿದು, ತನ್ನವರನ್ನೆಲ್ಲಾ ಉಳಿಸಿಕೊಳ್ಳುತ್ತಾನೆ. ಜಗನ್ನಾಥ್ ಸ್ವತಃ ತಾನೇ ರಾಧಾಳ ಕೈಯನ್ನು ರಣಧೀರನಿಗೆ ನೀಡುತ್ತಾನೆ.

ಉಲ್ಲೇಖಗಳು[ಬದಲಾಯಿಸಿ]

ನವೀನ ಅಂಶಗಳು[ಬದಲಾಯಿಸಿ]

  • ಅನಂತನಾಗ್ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ, ಹಾಸ್ಯಭರಿತವಾಗಿ ನಟಿಸಿದ್ದು ವಿಶೇಷ.
  • ಮಾ.ಮಂಜುನಾಥ್ ನಟನೆಯ ಜೊತೆಗೆ ೨ ಹಾಡು ಹಾಡಿದ್ದೂ ಅಲ್ಲದೆಯೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದು ವಿಶೇಷ.
  • ಸಕಲೇಶಪುರದ ಮತ್ತು ಇತರ ಗುಡ್ಡುಗಾಡು ಪ್ರದೇಶದಲ್ಲಿ ಜ಼ಿಪ್ ಕ್ಯಾಮೆರಾ ಬಳಸಿದ್ದೂ ಮತ್ತು ಕ್ಲೈಮಾಕ್ಸ್ ನಲ್ಲಿ ಹಡಗು ಒಡೆಯುವ ದೃಶ್ಯದ ಚಿತ್ರೀಕರಣಕ್ಕಾಗಿ ಭಾರೀ ವೆಚ್ಚದಲ್ಲಿ ಸೆಟ್ ಹಾಕಿದ್ದು ಹೊಸ ಪ್ರಯೋಗ
  • ನಾಯಕನ ಸಹಚರರ ಹೆಸರು ಸರಿಗಮ ಎಂದು ಇಟ್ಟದ್ದೂ (ಸಂಜು, ರಿಝ್ಝು, ಗಂಪೂ, ಮಂಜೂ), ಪೀಣ್ಯ-ಕೀನ್ಯ ಎಂದು ಅನಂತನಾಗ್ ಮುದುಕನ ಮಾರುವೇಷದಲ್ಲಿ ಕಥೆ ಹೇಳುವುದು, ಇದೇ ಮೊದಲಾಗಿ ಸಂಭಾಷಣೆಯಲ್ಲಿ ಹಂಸಲೇಖ ವಿಭಿನ್ನ ಪ್ರಯೋಗಗಳನ್ನು ಮಾಡಿದರು. ಚಿತ್ರದ ಹಾಡುಗಳ ಜೊತೆಗೆಯೇ, ಸಂಭಾಷಣೆಯ ಕ್ಯಾಸೆಟ್ ಗಳು ಕೂಡಾ ಬಹುವಾಗಿ ಮಾರಾಟವಾಯಿತು.[೩]
  1. https://music.apple.com/us/album/ranadheera-original-motion-picture-soundtrack/1163348145
  2. "ಆರ್ಕೈವ್ ನಕಲು". Archived from the original on 2022-08-10. Retrieved 2022-06-11.
  3. "ಆರ್ಕೈವ್ ನಕಲು". Archived from the original on 2022-08-10. Retrieved 2022-06-11.
"https://kn.wikipedia.org/w/index.php?title=ರಣಧೀರ&oldid=1184663" ಇಂದ ಪಡೆಯಲ್ಪಟ್ಟಿದೆ