ದೇ. ಜವರೇಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದೇ.ಜವರೆಗೌಡ ಇಂದ ಪುನರ್ನಿರ್ದೇಶಿತ)
ದೇ. ಜವರೇಗೌಡ
ಜನನಜುಲೈ 6, 1915
ಚಕ್ಕೆರೆ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ
ಮರಣಮೇ 30, 2016
ಮೈಸೂರು
ಅಂತ್ಯ ಸಂಸ್ಕಾರ ಸ್ಥಳಮೈಸೂರು
ಕಾವ್ಯನಾಮದೇಜಗೌ
ವೃತ್ತಿಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಆತ್ಮಕಥೆ, ಜೀವನ ಚರಿತ್ರೆ
ವಿಷಯಜಾನಪದ, ಜೀವನ ಚರಿತ್ರೆ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ
ಬಾಳ ಸಂಗಾತಿಸಾವಿತ್ರಮ್ಮ
ಮಕ್ಕಳುಜೆ. ಶಶಿಧರ ಪ್ರಸಾದ್, ಜೆ. ಶಶಿಕಲಾ

ಪ್ರಭಾವಗಳು

ದೇವೇಗೌಡ ಜವರೇಗೌಡ, ದೇಜಗೌ ಎಂಬ ಕಾವ್ಯನಾಮದಿಂದ ಹೆಸರಾಗಿರುವ ದೇ. ಜವರೇಗೌಡ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಕುವೆಂಪು ಅವರ ಮಾನಸ ಪುತ್ರರೆಂದು ಕರೆಯಲ್ಪಡುವ ದೇಜಗೌ ಅವರು, ಡಾ. ಕುವೆಂಪು ಅವರ ಶಿಷ್ಯರಾಗಿ ಅವರ ಮಾರ್ಗದರ್ಶನದಿಂದ ಕನ್ನಡದ ಹೆಸರಾಂತ ಗದ್ಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ. 'ದೇಜಗೌ' ಎಂಬ ಸಂಕ್ಷಿಪ್ತ ನಾಮದಿಂದಲೇ ಸಾಹಿತ್ಯವಲಯದಲ್ಲಿ ಪ್ರಖ್ಯಾತರಾಗಿದ್ದಾರೆ. ಕನ್ನಡಕ್ಕೆ ಎಲ್ಲೇ ಸಮಸ್ಯೆಗಳು ಉದ್ಬವಿಸಿದರೂ ಇಳಿವಯಸ್ಸಿನಲ್ಲೂ ಹಾಜರಾಗುತ್ತಿದ್ದರು. ಅವರ ಕನ್ನಡ ಪ್ರೇಮ, ಪುಸ್ತಕ ಪ್ರೀತಿ ಅನನ್ಯ, ಅವರ್ಣನೀಯ. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಕುಡಿ.

ಜನನ[ಬದಲಾಯಿಸಿ]

ದೇ.ಜವರೇಗೌಡರು ಈಗಿನ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಜುಲೈ 6, 1915 ರಂದು ದೇವೇಗೌಡ, ಚೆನ್ನಮ್ಮ ದಂಪತಿಗಳಿಗೆ ಜನಿಸಿದರು.[೧] ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದು. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ಇವರು ಸ್ಥಾಪಿಸಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಕುಡಿ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲೂ ಕೃತಿ ರಚನೆ ಮಾಡಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಬಡತನವನ್ನು ಹಾಸಿಹೊದ್ದರೂ ವಿದ್ಯೆಯ ಕಡೆ ಅಪಾರವಾದ ಆಸಕ್ತಿ ಇದ್ದುದರಿಂದ ಶಾಲೆಗೆ ಸೇರಿ, ನಂತರದಲ್ಲಿ ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ, ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

  • 1946ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ, ಕನ್ನಡ ಅಧ್ಯಾಪಕರಾದರು. ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಕಟಣ ವಿಭಾಗದ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕ, ಪರೀಕ್ಷೆಗಳ ನಿಯಂತ್ರಣಾ ಧಿಕಾರಿ, ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮುಂತಾದವು ಅವುಗಳಲ್ಲಿ ಕೆಲವು.
  • ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬೆಳವಣಿಗೆಯಲ್ಲಿ ಇವರ ಪಾತ್ರ ತುಂಬಾ ಹಿರಿದಾದುದು. ೧೯೬೬ರಲ್ಲಿ ಜಾನಪದವನ್ನು ಕನ್ನಡ ತರಗತಿಗಳಲ್ಲಿ ವಿಶೇಷ ಅಧ್ಯಯನವಾಗಿ ಅಳವಡಿಸಿದರು. ಮೈಸೂರು ವಿಶ್ವವಿದ್ಯಾನಿಲಯ ದಲ್ಲಿನ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ದಿಗೆ ನೆರವಾದವರು. 1969ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ತಮ್ಮ ಕನ್ನಡಪರವಾದ ರಚನಾತ್ಮಕ ಚಟುವಟಿಕೆಗಳನ್ನು ಆರು ವರ್ಷಗಳ ಕಾಲ ಮುಂದುವರೆಸಿದರು.
  • ಅವರು ವಿಶ್ವವಿದ್ಯಾಲಯದಲ್ಲಿ ಅನೇಕ ಹೊಸ ವಿಭಾಗಗಳನ್ನು ಪ್ರಾರಂಭಿಸಿದರು. ದೇಜಗೌ ಅವರು ಪ್ರಾರಂಭಿಸಿದ ಮತ್ತು ಯಶಸ್ವಿಯಾಗಿ ನಿರ್ವಹಿಸಿದ ‘ಕನ್ನಡ ವಿಶ್ವಕೋಶ’, ‘ವಿಷಯ ವಿಶ್ವಕೋಶ-ಕರ್ನಾಟಕ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಸಮಗ್ರ ಕನ್ನಡ ಸಾಹಿತ್ಯಚರಿತ್ರೆ ‘, ‘ಕನ್ನಡ ಛಂದಸ್ಸಿನ ಇತಿಹಾಸ’ ಮುಂತಾದ ಕೆಲವು ಮುಖ್ಯವಾದ ಯೋಜನೆಗಳನ್ನು ಇಲ್ಲಿ ಹೆಸರಿಸಬಹುದು.
  • ಕರ್ನಾಟಕಲ್ಲೇ ಮೊದಲಬಾರಿಗೆ ‘ಜಾನಪದ ವಸ್ತುಸಂಗ್ರಹಾಲ’ಯವನ್ನು ಸ್ಥಾಪಿಸಿ ಜಾನಪದ ಅಧ್ಯಯನಕ್ಕೆ ತಳಹದಿಯನ್ನು ರೂಪಿಸಿಕೊಟ್ಟಿದ್ದು ಅವರ ಮುಖ್ಯವಾದ ಸಾಧನೆಗಳಲ್ಲಿ ಒಂದು.

ಕನ್ನಡದ ಕಟ್ಟಾಳು[ಬದಲಾಯಿಸಿ]

  • ದೇ. ಜವರೇಗೌಡ ಅವರು ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಒಬ್ಬರು. ಸರಿಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳುವಳಿಗಳೆಂಬ -ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ. ಜಾನಪದ, ಗ್ರಂಥಸಂಪಾದನೆ, ಸಾಹಿತ್ಯವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ.
  • ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿ, ಅವನ್ನು ಯಶಸ್ವಿಯಾಗಿ ನಿರ್ವಹಿಸಿದ ದೇಜಗೌರ ಸಾಧನೆ ಅನುಪಮವಾದುದು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ, ಅವರು ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿದ್ದಾರೆ.

ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದು. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು.

ಸಾಹಿತ್ಯ ಕೃಷಿ[ಬದಲಾಯಿಸಿ]

  • ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 400ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇವರ ಭಾಷಾಂತರಗಳಲ್ಲಿ 'ಪುನರುತ್ಥಾನ' ಪ್ರಮುಖವಾದುದು. ಇದಕ್ಕೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರಕಿದೆ. ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಕೃತಿಯನ್ನು 'ಯುದ್ದ ಮತ್ತು ಶಾಂತಿ' ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ್ದಾರೆ.
  • ಅಲ್ಲದೆ ಇವರು 'ಕಬ್ಬಿಗರ ಕಾವ', 'ನಳಚರಿತ್ರೆ', 'ರಾಮನಾಥ ಚರಿತೆ', 'ಲೀಲಾವತಿ ಪ್ರಬಂಧಂ' ಮೊದಲಾದ ಗ್ರಂಥಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ನಲವತ್ತಕ್ಕೂ ಹೆಚ್ಚು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ 'ಕುಲಪತಿಯ ಭಾಷಣಗಳು', 'ಕುಲಪತಿಯ ಪತ್ರಗಳು' ಮುಂತಾದ ಆರು ಸಂಪುಟಗಳ ಬರಹವನ್ನು ಹೊರತಂದಿದ್ದಾರೆ.

ಕೃತಿಗಳು[ಬದಲಾಯಿಸಿ]

ಗ್ರಂಥ ಸಂಪಾದನೆ[ಬದಲಾಯಿಸಿ]

  1. ಹರಿಹರನ ‘ಗಿರಿಜಾಕಲ್ಯಾಣ ಮಹಾಪ್ರಬಂಧಂ’ (1951)
  2. ನಯಸೇನನ ‘ಧರ್ಮಾಮೃತ ಸಂಗ್ರಹ’ (1958)
  3. ಲಕ್ಷ್ಮೀಶನ ‘ಜೈಮಿನೀ ಭಾರತ’ (1956)
  4. ಕನಕದಾಸರ ‘ನಳಚರಿತ್ರೆ’ (1965)
  5. ಆಂಡಯ್ಯನ ‘ಕಬ್ಬಿಗರ ಕಾವ’ (1964)
  6. ಚಿಕ್ಕುಪಾಧ್ಯಾಯನ ‘ರುಕ್ಮಾಂಗದ ಚರಿತ್ರೆ’ (1982)
  7. ರಾಮನಾಥ ಚರಿತೆ
  8. ನೇಮಿಚಂದ್ರನ ‘ಲೀಲಾವತೀ ಪ್ರಬಂಧಂ’, (ಕೆ.ವೆಂಕಟರಾಮಪ್ಪನವರೊಂದಿಗೆ)

ಜಾನಪದ[ಬದಲಾಯಿಸಿ]

  1. ‘ಜಾನಪದ ಅಧ್ಯಯನ’ (1976)
  2. ‘ಜಾನಪದ ಸೌಂದರ್ಯ’ (1977)
  3. ‘ಜಾನಪದ ವಾಹಿನಿ’ (1983)
  4. ‘ಜನಪದ ಗೀತಾಂಜಲಿ’ (ಸಂಪಾದಿತ ಕೃತಿ) (1978)

ಜೀವನ ಚರಿತ್ರೆಗಳು[ಬದಲಾಯಿಸಿ]

  1. ಮೋತಿಲಾಲ್ ನೆಹರೂ
  2. ರಾಷ್ಟ್ರಕವಿ ಕುವೆಂಪು
  3. ತೀನಂಶ್ರೀ
  4. ಶ್ರೀ ಬಸವೇಶ್ವರರು
  5. ಸ್ವಾಮಿ ಓಂಕಾರಾನಂದ

ಆತ್ಮಕಥೆ[ಬದಲಾಯಿಸಿ]

  1. ಹೋರಾಟದ ಬದುಕು (ಭಾಗ 1, 2)
  2. ನೆನಪಿನ ಬುತ್ತಿ

ಅನುವಾದ[ಬದಲಾಯಿಸಿ]

  1. ‘ಹಮ್ಮು-ಬಿಮ್ಮು,’ (ಜೇನ್ ಆಸ್ಟಿನ್ ಅವರ 'ಪ್ರೈಡ್ ಅಂಡ್ ಪ್ರಿಜುಡೀಸ್')
  2. ‘ನೆನಪು ಕಹಿಯಲ್ಲ’, (ಕೃಷ್ಣಾ ಹಥೀಸಿಂಗ್ ಅವರ 'ವಿತ್ ನೋ ರಿಗ್ರೆಟ್ಸ್')
  3. ‘ಆನಾ ಕೆರಿನಿನಾ’ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)
  4. ‘ಯುದ್ಧ ಮತ್ತು ಶಾಂತಿ’, (ಲಿಯೋ ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್')
  5. ‘ಪುನರುತ್ಥಾನ’ (ಲಿಯೋ ಟಾಲ್ ಸ್ಟಾಯ್ ಅವರ 'ರಿಸರೆಕ್ಷನ್')

ಗದ್ಯಾನುವಾದ[ಬದಲಾಯಿಸಿ]

  1. ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ

ಭಾಷಣ[ಬದಲಾಯಿಸಿ]

  1. ಕುಲಪತಿಯ ಭಾಷಣಗಳು (ಸಂಪುಟ 1,2)
  2. ದೇಜಗೌ ಭಾಷಣಗಳು (ಸಂಪಟ 1,2)

ಪತ್ರ ಸಾಹಿತ್ಯ[ಬದಲಾಯಿಸಿ]

  1. ಕುಲಪತಿಯ ಪತ್ರಗಳು

ಇತರೆ[ಬದಲಾಯಿಸಿ]

  1. ಸಾಹಿತಿಗಳ ಸಂಗದಲ್ಲಿ
  2. ಸಿದ್ಧಗಂಗೆಯ ಶಿವನಿಧಿ

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

ದೇ. ಜ. ಗೌ. ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ.

  1. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
  2. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
  3. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
  4. ತಿರುವನಂತಪುರದ ‘ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ,
  5. ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ
  6. ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ
  7. ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ
  8. ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿತು.
  9. ಕರ್ನಾಟಕ ಸರ್ಕಾರ ೨೦೧೦ ರಲ್ಲಿ ೨೦೦೮ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
  10. ಬಸವ ರಾಷ್ಟ್ರೀಯ ಪುರಸ್ಕಾರ
  11. ಅಲ್ಲಮಶ್ರೀ
  12. ಕನಕಶ್ರೀ
  13. ಪದ್ಮಶ್ರೀ

ಅಧ್ಯಕ್ಷತೆ[ಬದಲಾಯಿಸಿ]

  1. ದೇ. ಜವರೇಗೌಡರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  2. ಇವರ ಜಾನಪದ ಸೇವೆ ಗಮನಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂರನೇ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿತು.

ಅಭಿನಂದನಾ ಗ್ರಂಥಗಳು[ಬದಲಾಯಿಸಿ]

ಜವರೇಗೌಡರ ಅಭಿಮಾನಿಗಳು ಅವರಿಗೆ ಕೆಳಕಂಡ ಅಭಿನಂದನಾ ಗ್ರಂಥಗಳನ್ನು ಅರ್ಪಿಸಿದ್ದಾರೆ.

  1. ಅಂತಃಕರಣ
  2. ರಸಷಷ್ಠಿ
  3. ದೇಜಗೌ: ವ್ಯಕ್ತಿ ಮತ್ತು ಸಾಹಿತ್ಯ
  4. ಅಪೂರ್ವ
  5. ನಮ್ಮ ನಾಡೋಜ

ಮರಣ[ಬದಲಾಯಿಸಿ]

ದೇ.ಜವರೇಗೌಡರು, ದಿನಾಂಕ 30-5-2016ರಂದು ಸೋಮವಾರ ಸಂಜೆ 6.30ಕ್ಕೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.[೨],[೩] ಅವರ ಅಂತ್ಯಕ್ರಿಯೆಯನ್ನು ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಮೈಸೂರಿನಲ್ಲಿ ನಡೆಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "De. Ja. Gow. turns 100". The Hindu. 7 July 2015. Retrieved 30 May 2016.
  2. ಕನ್ನಡದ ಕಟ್ಟಾಳು ದೇಜಗೌ ವಿಧಿವಶ; ಇಂದು ಮೈಸೂರಲ್ಲಿ ಅಂತ್ಯಕ್ರಿಯೆ, ಉದಯವಾಣಿ, May 31, 2016
  3. Noted Kannada litterateur Javare Gowda no more[ಶಾಶ್ವತವಾಗಿ ಮಡಿದ ಕೊಂಡಿ] News karnataka.com, May 31, 2016,