ಗೋಪಾಲಕೃಷ್ಣ ಅಡಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gopalakrishna Adiga
ಮೊಗೇರಿ ಗೋಪಾಲಕೃಷ್ಣ ಅಡಿಗ
© Kamat's Potpourri
ಜನನ18-02-1918
ಮೊಗೇರಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ಕರ್ನಾಟಕ
ಮರಣ04-11-1992
ಬೆಂಗಳೂರು, Karnataka
ವೃತ್ತಿಕವಿ, ಬರಹಗಾರ, ಕನ್ನಡ ಪ್ರಾಧ್ಯಾಪಕ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿFiction
ಸಾಹಿತ್ಯ ಚಳುವಳಿನವ್ಯ

ಎಂ. ಗೋಪಾಲಕೃಷ್ಣ ಅಡಿಗ : - (೧೮ ಫೆಬ್ರುವರಿ ೧೯೧೮ - ೪ ನವೆಂಬರ ೧೯೯೨) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. "ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ" ಎಂದು ಅವರೇ ಹೇಳಿದ್ದಾರೆ.[೧][೨]

ವಿದ್ಯಾಭ್ಯಾಸ/ಶಿಕ್ಷಣ

ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಹದಿಮೂರರ ಹರೆಯದಲ್ಲೇ ಪದ್ಯ ಬರೆಯಲಾರಂಭಿಸಿದ ಅವರಿಗೆ ಕುಂದಾಪುರದ ವಾತಾವರಣ ಇನ್ನಷ್ಟು ಬರೆಯಲು ಪ್ರೇರಣೆ ನೀಡಿತು.ಮೊದಲೇ ಇದ್ದ ಓದುವ ಹುಚ್ಚು ಇನ್ನಷ್ಟು ಬಲವಾಯಿತು. ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಅಣ್ಣ ಕೋಟ ಲಕ್ಮೀನಾರಾಯಣ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಆಗ ಇಡೀ ದೇಶವೇ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ, ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ ಭಾಗಿಯಾದರು. ಹೆಂಡದಂಗಡಿಯ ಮುಂದೆ `ಪಿಕೆಟಿಂಗ್' ಮಾಡಿದರು. ದೇಶ ಭಕ್ತಿಯ ಉತ್ಸಾಹ, ಉದ್ರೇಕಗಳು ಅವರ ಕಾವ್ಯ ರಚನೆಗೆ ಪೂರಕವಾದವು. ಅವರ ಕೆಲವು ಕವನಗಳು ಬೆಂಗಳೂರಿನ `ಸುಬೋಧ', ಮಂಗಳೂರಿನ `ಬಡವರ ಬಂಧು', ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ತರಗತಿಗೆ ಸೇರಿ ಕೊಂಡರು. ಅಲ್ಲಿ ಕಳೆದ ಐದಾರು ವರ್ಷ ಅವರ ಬದುಕಿನ ಒಂದು ಮಹತ್ವದ ಅವಧಿಯಾಗಿತ್ತು. ಈ ಅವಧಿಯಲ್ಲಿ ಅವರಿಗೆ ಬಿ.ಎಚ್. ಶ್ರೀಧರ್, ಹೆಚ್ ವೈ.ಶಾರದಾಪ್ರಸಾದ್, ಚದುರಂಗ, ಟಿ.ಎಸ್.ಸಂಜೀವ ರಾವ್. ಎಂ.ಶಂಕರ್, ಕೆ.ನರಸಿಂಹಮೂರ್ತಿ ಮುಂತಾದವರ ಒಡನಾಟ, ಸ್ನೇಹ ಅವರಿಗೆ ಲಭ್ಯವಾಯಿತು. `ಭಾವತರಂಗ' ಸಂಕಲನದ ಹೆಚ್ಚಿನ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅವುಗಳಲ್ಲೊಂದಾದ `ಒಳತೋಟಿ' ಎಂಬ ಕವನ ಬಿ.ಎಂ.ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಸುವರ್ಣ ಪದಕವನ್ನು ಪಡೆಯಿತು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. "ಸಾಕ್ಷಿ" ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಫರ್ಧಿಸಿದ್ದರು. ಅಡಿಗರು ಸಾಗರದಲ್ಲಿದ್ದಾಗ ಕೇವಲ ಸಾಹಿತಿಗಳನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗೂ ವಿವಿಧ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿದ್ದರು. ಅವರು ಕಾಲೇಜಿನ ಉಪನ್ಯಾಸಕರನ್ನು ತಮ್ಮ ಗೆಳೆಯರಂತೆಯೇ ಸ್ವೀಕರಿಸಿದ್ದರು. ಅವರು ಒಬ್ಬರೇ ಕಾಲೇಜಿನ 'ಕ್ಯಾಂಟೀನ್' ಹೋಗಿದ್ದು ತೀರಾ ಅಪರೂಪವೇ ಸರಿ. ಕೆಲವು ಬಾರಿ ಅವರು ತಮ್ಮ ವಿದ್ಯಾರ್ಥಿಗಳಿಗೂ ಶುಲ್ಕ ತುಂಬಲು, ಪುಸ್ತಕ ಕೊಳ್ಳಲು ತಮ್ಮ ಸಂಬಳದಿಂದಲೇ ಸಹಾಯ ಮಾಡುತ್ತಿದ್ದರು. ಮನೆಯಲ್ಲಿಯೂ ಒಬ್ಬಿಬ್ಬ ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು.[೩] [೪][೫]

ಸಾಹಿತ್ಯ

ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರು. ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ನವ್ಯ ಕಾವ್ಯದ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. `ಸಾಕ್ಷಿ' ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಎಲ್ಲಾ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’(ಸಾಕ್ಷಿಪ್ರಕಾಶನ, 1977) ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲದಲ್ಲಿದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬೀ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ದಾರಿಯನ್ನು ಬಿಟ್ಟ ಹೊಸದಾರುಯನ್ನು ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯ ರಚನೆಯಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆ ಎಂದು ತೋರುತ್ತದೆ. ಅಡಿಗರ ಕವನದ ಸಾಲುಗಳು

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು

ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು

ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ

ಪನ್ನತಿಕೆ ಬರುವನಕ ನನ್ನ ಬಾಳಿದು ನರಕ

‘ಭಾವತರಂಗದ’ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ.

ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ

ಕೆಚ್ಚೆದೆತನದ ಬಲ್ಮೆಯನ್ನು ಬಿತ್ತರಿಪೆನು

ಪದವನಿಡುತೆನ್ನೆದೆಯ ಮೇಲೆ ತಾಮಡವವೆಸಗು

ಬೆದರುವೆನೆ ಬೆಚ್ಚುವೆನೆ ನಿನಗೆ ನಾನು(ವಿಧಿಗೆ)

ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿ ಪೆನು, ಎಸಗು ಮೊದಲಾದ ಪದಪ್ರಯೋಗಗಳ ನಡೆದಿದೆ.

ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ

ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ

ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ

ಮಂಜುತರ ಸೃಷ್ಟಿಗಾನದಲಿ ಮೈಮರೆಯೆ

ಎಂಜಲಾಗದ ಮಧುರ ಮಧುರಸವ ಸವಿಯೆ

ರಂಜಿಸುವ ಕಾಡುಮೇಡುಗಳನಂಡಲೆಯೆ(ಹೊಸ ಹಾದಿ)

ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ

ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ

ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ

ಸರದೊಳಾವುದೋ ಕಲ್ಲು ಬಿದ್ದ ಹಾಗೆ

ಹಲವು ತಾನಗಳ ಸಂತಾನವಾದುದು ಮಧುರ

ನೊಳಬಾಳು; ಹರಯದೊಡ್ಡೋಲಗದಲಿ

ತನಗೆಲ್ಲಿ ನೆಲೆ? ಬಾಲಹಾಡಿಗೆಲ್ಲಿಹುದು ಬೆಲೆ?

ಎಂದು ಮುರುಟಿದನು ತನುಮನಗಳಲ್ಲಿ(ಒಳತೋಟಿ)

ಕಂಡು ಮಾತಾಡಿ ಮೈ

ದಡವಿ ನಗಿಸಿ ನಲಿವರಿಲ್ಲ

ಬೆಂದ ಬಗೆಗೆ ಸೊದೆಯನೆರೆದು

ಕಂಬನಿಯ ತೊಡೆವರಿಲ್ಲ

ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ.

ಕಲ್ಲಾಗು ಕಲ್ಲಾಗು ಬಾಳ ಬಿರುಗಾಳಿಯಲಿ

ಅಲ್ಲಾಡದೆಯೆ ನಿಲ್ಲು ಜೀವ( ಕಲ್ಲಾಗು ಕಲ್ಲಾಗು )

ಉದ್ಯೋಗ ಪರ್ವ

ಬಿ.ಎ ಆನರ್ಸ್ ಮುಗಿಸಿದ ಬಳಿಕ ಅಡಿಗರು ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದರು. ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿಯೂ ಗುಮಾಸ್ತರಾಗಿ ದುಡಿದರು. ಅನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. (೧೯೪೮-೫೨) ಬಳಿಕ ಎರಡು ವರ್ಷ ಕುಮಟಾದ ಕೆನರಾ ಕಾಲೇಜಿನಲ್ಲೂ, ಅನಂತರ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿಯೂ, ಇಂಗ್ಲಿಷ್ ಉಪನ್ಯಾಸಕರಾಗಿ (೧೯೫೪-೫೨) ಹತ್ತು ವರ್ಷ ದುಡಿದರು.೧೯೬೪ರಿಂದ ೬೮ರವರೆಗೆ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಆ ಹೊಸ ಕಾಲೇಜನ್ನು ಕಟ್ಟಿದರು. ೧೯೬೮ರಲ್ಲಿ ಆ ಹುದ್ದೆಯನ್ನು ತ್ಯಜಿಸಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲರಾದರು. ೧೯೭೧ರಲ್ಲಿ ಅವರ ಬದುಕಿನಲ್ಲಿ ಒಂದು ಅನಿರೀಕ್ಷಿತ ತಿರುವು ಬಂತು. ಲೋಕಸಭಾ ಚುನಾವಣೆಯಲ್ಲಿ ೯ ಪಕ್ಷಗಳ ಒಕ್ಕೂಟದ ಪರವಾಗಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದರು. ಆಗ ವಿಜೃಂಭಿಸುತ್ತಿದ್ದ `ಇಂದಿರಾ ಅಲೆ'ಯ ಅಬ್ಬರದಲ್ಲಿ ಅವರಿಗೆ ಸೋಲಾಯಿತು. ತತ್ಪರಿಣಾಮವಾಗಿ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು. ಅನಂತರ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ಸ್ವಲ್ಪ ಕಾಲ ದುಡಿದ ಬಳಿಕ ಶಿಮ್ಲಾದ `ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್' ಸಂಸ್ಥೆಯಲ್ಲಿ ಮೂರು ವರ್ಷ ವಿಸಿತ್ಟಿಂಗ್ ಫೆಲೊ ಆಗಿ ಕೆಲಸ ಮಾಡಿದರು.

ನವ್ಯದ ನಾಯಕತ್ವ

೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು.ಆರ್.ಅನಂತಮೂರ್ತಿ, ಎ.ಕೆ. ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಲಕ್ಶ್ಮಿ ನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಚಂದ್ರಶೇಖರ ಪಾಟೀಲ, ಎಂ.ಎನ್. ವ್ಯಾಸರಾವ್, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ ನಾ.ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ.

ಕವನ ಸಂಕಲನಗಳು

  • ಭಾವತರಂಗ (೧೯೪೬)
  • ಕಟ್ಟುವೆವು ನಾವು (೧೯೪೮)
  • ನಡೆದು ಬಂದ ದಾರಿ (೧೯೫೨)
  • ಚಂಡೆಮದ್ದಳೆ (೧೯೫೪)
  • ಭೂಮಿಗೀತ (೧೯೫೯)
  • ವರ್ಧಮಾನ (೧೯೭೨)
  • ಇದನ್ನು ಬಯಸಿರಲಿಲ್ಲ (೧೯೭೫)
  • ಮೂಲಕ ಮಹಾಶಯರು (೧೯೮೦)
  • ಬತ್ತಲಾರದ ಗಂಗೆ (೧೯೮೩)
  • ಮಾವೋ ಕವನಗಳು
  • ಚಿಂತಾಮಣಿಯಲ್ಲಿ ಕಂಡ ಮುಖ (೧೯೮೭)
  • ಸುವರ್ಣ ಪುತ್ಥಳಿ (೧೯೯೦)
  • ಬಾ ಇತ್ತ ಇತ್ತ(೧೯೯೩)
  • ೧೯೩೭ರಿಂದ ೧೯೭೬ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ (ಐ.ಬಿ.ಎಚ್. ಪ್ರಕಾಶನ, ೧೯೮೭) ಪ್ರಕಟವಾಗಿದೆ.
  • ಅವರ ಈ ಎಲ್ಲ ವೈಚಾರಿಕ ಲೇಖನಗಳೂ "ಸಮಗ್ರ ಗದ್ಯ" (ಸಾಕ್ಷಿ ಪ್ರಕಾಶನ, ೧೯೭೭) ಎಂಬ ಸಂಪುಟವೊಂದರಲ್ಲಿ ಪ್ರಕಟವಾಗಿದೆ.
  • ಕಾದಂಬರಿಗಳು : - ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ.
  • ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ -ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ.
  • ೧೯೮೭ರಲ್ಲಿ ಮತ್ತೊಮ್ಮೆ ಅಡಿಗರ ಸಮಗ್ರ ಕಾವ್ಯ ಪ್ರಕಟವಾಯಿತು. ಐಬಿಎಚ್ ಪ್ರಕಾಶನ ಇದನ್ನು ಪ್ರಕಟಿಸಿತ್ತು.
  • ೧೯೯೯ರಲ್ಲಿ ಅಡಿಗರ ಎಲ್ಲಾ ಕವನಗಳು ಇರುವ ಸಮಗ್ರ ಕವನಗಳ ಪೂರ್ಣ ಆವೃತ್ತಿಯನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿತು.
  • ಅಡಿಗರು ಕೆಲವು ಸಣ್ಣ ಕಥೆಗಳನ್ನೂ ಬರೆದಿದ್ದಾರೆ.

ಯಕ್ಷಗಾನದ ಪ್ರಭಾವ

ಅಡಿಗರ ಮನೆಯಲ್ಲಿ ಸಾಹಿತ್ಯಕ್ಕೆ ಪ್ರೇರಕವಾದ ವಾತಾವರಣ ಇತ್ತು. ಅಡಿಗರ ತಂದೆ, ಅಜ್ಜ, ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ-ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ತಂದೆ ರಾಮಪ್ಪ ಅಡಿಗರು ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರು. ಯಕ್ಶಗಾನದ ತಾಳಮದ್ದಲೆಗಳಲ್ಲಿ ಅರ್ಥ ಹೇಳುತ್ತಿದ್ದರು. ಸೋದರತ್ತೆ ಪ್ರತಿ ರಾತ್ರಿಯೂ ಗದುಗಿನ ಭಾರತ, ಜೈಮಿನಿ ಭಾರತಗಳನ್ನು ರಾಗವಾಗಿ ಹಾಡುತ್ತಿದ್ದರು. ಇವರಲ್ಲೊಬ್ಬರಾದ ಮೂಕಾಂಬು(ಮೂಕಜ್ಜಿ) ಎಂಬವರು ಸ್ವತಃ ಪದ್ಯಗಳನ್ನು ರಚಿಸುತ್ತಿದ್ದರು. ಅಜ್ಜಿಯ ತಮ್ಮ ಬವಳಾಡಿ ಹಿರಿಯಣ್ಣ ಹೆಬ್ಬಾರ ಎಂಬವರು ಹೆಸರಾಂತ ಯಕ್ಷಗಾನದ ಅರ್ಥಧಾರಿಯಾಗಿದ್ದರು. ಇವರ ವಂಶಜರಾದ ಪ್ರೊ.ಬಿ.ಎಚ್. ಶ್ರೀಧರ್ ಅವರು ಮುಂದೆ ಕನ್ನಡದಲ್ಲಿ ಓರ್ವ ಗಣ್ಯ ಕವಿಯಾಗಿ ಪ್ರಸಿದ್ಧರಾದರು. ಕರಾವಳಿಯ ಮಹಾನ್ ಕಲೆ ಯಕ್ಷಗಾನವೇ ಅಡಿಗರ ಮೇಲೆ ಗಾಢ ಪ್ರಭಾವ ಬೀರಿತ್ತು. ಅವರ ಪ್ರಸಿದ್ಧ ಕವನ `ಗೊಂದಲಒಉರ'ದಲ್ಲಿ ಗೊಂದಲಾಸುರನ ಪ್ರವೇಶದ ಸಂದರ್ಭ - ಯಕ್ಷಗಾನದಲ್ಲಿ ರಂಗಸ್ಥಳ ಪ್ರವೇಶ ಮಾಡುವ ರಾಕ್ಷಸನ ಪ್ರವೇಶ ಶೈಲಿಯಲ್ಲಿದೆ. `ಅಜ್ಞಾತ ವೇಷ' ಎಂಬ ಕವನದಲ್ಲಿ ವೇಷಭೂಷಣಗಳ ಪೆಟ್ಟಿಗೆಯನ್ನು ಹೊರುವ ಬಡ ಕೂಲಿಗಳ ಪ್ರತಿಮೆಯನ್ನು ಪ್ರಜಾಸತ್ತೆಯಲ್ಲಿ ಪುಢಾರಿಗಳ ಚಾಕರಿ ಮಾಡುವ ಜನಸಾಮಾನ್ಯರ ಪ್ರತೀಕವಾಗಿ ಬಳಸಿದ್ದಾರೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು

ಸಾಹಿತ್ಯ ಶೈಲಿ

ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ "ಆಧುನಿಕ ಮಹಾಕಾವ್ಯ"ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ , ಸಾಂಸ್ಕೃತಿಕ ವಾಸ್ತವ ಇವರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನು ಹೀಗೆ ಗುರ್ತಿಸಬಹುದು.

  • ಸಾಂಪ್ರದಾಯಿಕವಾದ ಒಪ್ಪಿತ ಮೌಲ್ಯಗಳ ಬಗ್ಗೆ ಈತನಿಗೆ ಆರಾಧಕ ಮನೋಭಾವವಿಲ್ಲ. ಹಾಗೆಂದು ಅವುಗಳನ್ನು ಈತ ಸಾರಾಸಗಟಾಗಿ ತಿರಸ್ಕರಿಸುವಂಥವನೂ ಅಲ್ಲ. ಚಿಕಿತ್ಸಕ ಮನೋಭಾವದ ಈತನಿಗೆ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಪರಂಪರೆಯನ್ನು ಸೂಕ್ತವಾಗಿ ಒಗ್ಗಿಸಿಕೊಳ್ಳುವುದರ ಬಗ್ಗೆ ಆಸಕ್ತಿ. ಅನೇಕ ನವ್ಯ ಕೃತಿಗಳಲ್ಲಿ ಕಾಣಿಸುವಂತೆ ಅಡಿಗರ ನಾಯಕ ಸೂಕ್ಷ್ಮ ಮನಸ್ಸಿನ ದುರ್ಬಲ ವ್ಯಕ್ತಿಯಲ್ಲ. ಈತನೊಬ್ಬ ಹೋರಾಟಗಾರ, ಎಲ್ಲದರ ಬಗ್ಗೆ ಬಂಡೇಳುವಂಥ ಬಂಡಾಯಗಾರ. ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧವೂ ಈತ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆ ಆತ್ಮ ವಿಶ್ಲೇಷಣೆಯ ಪ್ರಕ್ರಿಯೆಯೂ ಆಗುತ್ತದೆ. ಎಲ್ಲ ರೀತಿಯ ಆಕ್ರಮಣಗಳನ್ನು ಎದುರಿಸಿ ವ್ಯಕ್ತಿವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಈತನ ತುಡಿತ.
  • ಅಡಿಗರ ಆರಂಭದ ಕವಿತೆಗಳ ಮುಖ್ಯಗುಣ -ಭಾವತೀವ್ರತೆ. ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವಾವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು, ವಿರೋಧಿಸಿದ್ದು, ಇಂಥ ರೀತಿಯನ್ನೇ. ಅಡಿಗರ ಆವೇಶ ಉತ್ಸಾಹ ಕ್ರಮೇಣ ವ್ಯಾವಹಾರಿಕ ಜಗತ್ತಿನ ಆಕ್ರಮಣದಿಂದಾಗಿ ಆಘಾತಕ್ಕೊಳಗಾದಂತೆ ಕಂಡು ಬರುತ್ತದೆ. ಬಾಲ್ಯದ ಮುಗ್ಧಲೋಕ, ಹದಿಹರಯದ ಹೊಂಗನಸಿನ ಜಗತ್ತು ಒಡೆದು ಛಿದ್ರವಾಗಿ ಕವಿಮನಸ್ಸು ವ್ಯಗ್ರವಾಗುತ್ತದೆ, ದಿಕ್ಕೆಡುತ್ತದೆ.
  • ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಠುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಸಹ ಕವಿಗೆ ಕಪಟವೆನ್ನಿಸುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲ ವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರೀತಿ, ಚೆಲುವು ಒಲವುಗಳಿಗೆ ಜಡರೇನೂ ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮುಖ್ಯವಾಗಿ ಧ್ಯಾನರೂಪೀ ಮನಸ್ಸು. ಅವರದೇ ಮಾತಿನಲ್ಲಿ ಹೇಳುವುದಾದರೆ -"ಹುತ್ತಗಟ್ಟಿದ ಚಿತ್ತ".
  • ಅಡಿಗರ ಕಾವ್ಯದುದ್ದಕ್ಕೂ ಕಂಡು ಬರುವ ಪ್ರಧಾನ ಅಂಶಗಳಲ್ಲೊಂದು ಭೂಮಿ ಆಕಾಶಗಳ ಸೆಳೆತಕ್ಕೆ ಸಿಕ್ಕ ಮಾನವನ ಸ್ಥಿತಿ. ಇದು ದೇಹ-ಮನಸ್ಸುಗಳ ಸಂಘರ್ಷವೂ ಹೌದು. ಆದರ್ಶ ವಾಸ್ತವಗಳ ನಡುವಿನ ತಿಕ್ಕಾಟವೂ ಹೌದು. ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗುವ ಈ ಸಂಘರ್ಷ, ನೆಲ ಮುಗಿಲಿನ ಸೆಳೆತ ಸೇಂದ್ರಿಯವಾಗಿ ಅಭಿವ್ಯಕ್ತಿ ಪಡೆಯುವುದು "ಮೋಹನ ಮುರಲಿ" ಕವಿತೆಯಲ್ಲಿ. ಅಡಿಗರ ಕಾವ್ಯ ಬೆಳವಣಿಗೆಯಲ್ಲಿ ಇದು ಮುಖ್ಯ ಕವಿತೆ. ಲೌಕಿಕ ಸುಖದಲ್ಲಿ ತೃಪ್ತಿ ಪಡೆದಿದ್ದ ಮನಸ್ಸು ಅಲೌಕಿಕ ಸೆಳೆತಕ್ಕೆ ಒಳಗಾಗಿರುವ ಚಿತ್ರವನ್ನು ಈ ಕವಿತೆ ಸೊಗಸಾಗಿ ಚಿತ್ರಿಸುತ್ತದೆ.
  • ಸ್ನೇಹ-ಪ್ರೀತಿ, ಕೋಪ-ತಾಪ, ಅಳು-ನಗು ಎಲ್ಲವನ್ನು ನಿರಾಕರಿಸಿ ಜನವಿದೂರ ಹೋಗ ಬಯಸುವ ಕಾವ್ಯ ಬದುಕನ್ನೆ ನಿರಾಕರಿಸುವಂಥದಾಗಿ ತೋರುವುದು ಮೇಲ್ನೋಟಕ್ಕೆ ಸಹಜ. ಆದರೆ ಮೇಲ್ಪಪದರದ ಈ ಆಕ್ರೋಶದ ಹಿಂದಿನ ಆಳವಾದ ವಿಷಾದ ವಾಸ್ತವ ಬದುಕಿನ ಸ್ವೀಕರಣೆಯ ಕಡೆ ಮುಖಮಾಡಿದೆ. ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ. ಕವಿಯ ಈ ಮಹತ್ವಾಕಾಂಕ್ಷೆ ಉನ್ನತವಾದುದನ್ನು ತನ್ನದಾಗಿಸಿಕೊಳ್ಳಬೇಕೆಂಬ ಬಯಕೆ –ಇದರಿಂದಾಗಿ ಅಡಿಗರ ಕಾವ್ಯ ದೈನಿಕ ಸಹಜ ವಿವರಗಳಿಂದ, ಬದುಕಿನ ವೈವಿಧ್ಯದಿಂದ, ಕೌಟುಂಬಿಕ ಜಗತ್ತಿನಿಂದ ವಂಚಿತವಾಗುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರಿತಿ, ಚೆಲುವು, ಒಲವುಗಳಿಗೆ ಜಡರೇನು ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮಖ್ಯವಾಗಿ ಧ್ಯಾನರೂಪಿ ಮನಸ್ಸು, ಅವರ ಮಾತಿನಲ್ಲೇ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’. ಬದುಕಿನಲ್ಲಿ ತಾನು ಅನುಭವಿಸಿದ ನೋವು, ಅಪಮಾನ, ಪ್ರೀತಿಯ ಕೊರತೆ-ಸ್ವಭಾವತಃ ಅಂತರ್ಮುಖಿಯಾಗುವಂತೆ ಮಾಡುತ್ತವೆ. ಆದರೆ ಈ ಅಂತರ್ಮುಖತೆ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳದೆ, ಅದನ್ನು ಅರ್ಥ ಮಾಡಿಕೊಳ್ಳುವ ಸಮರ್ಥ ರೀತಿಯಲ್ಲಿ ಅಡಿಗರ ಕಾವ್ಯ ರೂಪುಗೊಳ್ಳುತ್ತದೆ. ಆದ್ದರಿಂದಲೇ ಅಡಿಗರ ನಂತರದ ಕಾವ್ಯ ಏಕಕಾಲಕ್ಕೆ ವೈಯುಕ್ತಿಕವೂ, ಸಾಮಾಜಿಕವೂ ಆಗಿಬಿಡುತ್ತದೆ. ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ, ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ- ಅಡಿಗರ ಕಾವ್ಯರೀತಿ.

ದರ್ಶನ

ಅಡಿಗರ ಶೋಧನೆ -ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ -ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು. ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ? ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಈ ನೆಲದಲ್ಲಿಯೇ, ನೆಲದ ಪ್ರಜ್ಞೆ ಹೀರಿಯೇ ಬೆಳೆದು ದೊಡ್ಡವನಾಗಬೇಕು, ಉನ್ನತ ಚೇತನವಾಗಿ ರೂಪುಗೊಳ್ಳಬೇಕು -ಇದೇ ಅಡಿಗರ ದರ್ಶನ. ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗು ವುದಿದ್ದರೂ ಅದು ವ್ಯಕ್ತಿಯಲ್ಲಿ. ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ಸಾಮಾಜಿಕವಾದ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ "ವ್ಯಕ್ತಿತ್ವ ವಿಕಾಸದ ಹೋರಾಟ"ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ. ನವೋದಯ ಕಾವ್ಯದಲ್ಲಿ ಅನುಕರಣೆಯೇ ಹೆಚ್ಚಾಗುತ್ತಿದ್ದ ಕಾಲದಲ್ಲಿ, ಹೊಸ ಕಾಲದ ಹೊಸ ಅನುಭವಗಳಿಗೆ ಸ್ಪಂದಿಸುವ ಕಾವ್ಯವನ್ನು ರಚಿಸಿ ಹೊಸದೊಂದು ಮಾರ್ಗವನ್ನೇ ತೆರೆದ ಕವಿ ಅಡಿಗರು.

ಸಂದೇಶ

  • ಒಂದು ಕವನ ಒಂದು ಶತಮಾನದ ಮೇಲೆಯೂ ಸಂತೋಷ ಕೊಟ್ಟು ಜುಮ್ಮು ದಟ್ಟಿಸುವುದು ಸಾಧ್ಯವಾದರೆ, ಒಂದು ಶತಮಾನದ ಹಿಂದೆ ಇದ್ದ ಕಾವ್ಯಪ್ರಿಯನೊಬ್ಬ ಎದ್ದು ಬಂದು ಇದನ್ನು ಓದಿ ಮೆಚ್ಚುವುದು ಸಾಧ್ಯವಾದರೆ ಆಗ ಮಾತ್ರ ಕೃತಿ ಕೃತಾರ್ಥ.
  • ದೇಶದ ಪರಿಸ್ಥಿತಿ ತುಂಬ ಕೆಡುತ್ತ ಬರುತ್ತಿದೆ -ಆರ್ಥಿಕವಾಗಿ, ನೈತಿಕವಾಗಿ ಯಾವ ಕಡೆ ಹೋಗುತ್ತದೆ, ಏನಾಗುತ್ತದೆ, ತಿಳಿಯುವುದಿಲ್ಲ.
  • ಹುಡುಗನಲ್ಲಿ ಕಪಿ ಅಂಶವೂ ಇದೆ, ಆಂಜನೇಯನಂತೆ ಅದ್ಭುತವಾಗಿ ಬೆಳೆಯಬಲ್ಲ ಸಾಧ್ಯತೆಯೂ ಇದೆ -"ಹನುಮದ್ವಿಲಾಸ".
  • ಕಾವ್ಯ ಸಂಪ್ರದಾಯಬದ್ಧವಾಗಬಾರದು, ಆಗ ಕಾವ್ಯದಲ್ಲಿ ಮುಗ್ಗಲು ವಾಸನೆ ಬರುತ್ತದೆ.
  • ಪಂಪ ಕುಮಾರವ್ಯಾಸರನ್ನು ಓದಿ ಸಂತೋಷಪಡಲಾರದವನು, ಆಧುನಿಕ ಕಾವ್ಯವನ್ನೋದಿ ನಿಜವಾಗಿಯೂ ಪುಳಕಿತನಾಗುತ್ತಾನೆ ಎಂದು ನಂಬುವುದು ಕಷ್ಟ.
  • ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ.

ಅಡಿಗರಿಗೆ ಸಂದ ಪ್ರಶಸ್ತಿಗಳು

೧೯೬೮ರಲ್ಲಿ ಅಡಿಗರಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರೊ. ಕು.ಶಿ.ಹರಿದಾಸ ಭಟ್ಟ ಮತ್ತು ವಿಜಯನಾಥ ಶೇಣೈ ಮುಂತಾದ ಸಾಹಿತ್ಯಾಭಿಮಾನಿಗಳು ಒಂದು ಅಪೂರ್ವ ಸಮಾರಂಭವನ್ನು ಏರ್ಪಡಿಸಿದರು. ಅದರಲ್ಲಿ ಹೊಸ ಪೀಳಿಗೆಯ ಮಹತ್ವದ ಕವಿ, ಸಾಹಿತಿ, ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ,ಎಂ.ಜಿ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಜಿ. ಎಚ್. ನಾಯಕ, ಕಿ ರಂ. ನಾಗರಾಜ. ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚರ್ಯ, ಡಿ. ಎಸ್. ರಾಯಕರ್ ಮುಂತಾದವರು ಭಾಗವಹಿಸಿದ್ದರು. ವಿಮರ್ಶಕ ನಿಸ್ಸಿಂ ಇಝೆಕಿಲ್ ಅವರು` ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ' ಎಂದು ಕೊಂಡಾಡಿದರು. ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೫ರಲ್ಲಿ ಅಡಿಗರಿಗೆ `ವರ್ಧಮಾನ'ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ ಲಭ್ಯವಾಯಿತು. ೧೯೮೦ರಲ್ಲಿ `ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ `ವರ್ಧಮಾನ' ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು. ೧೯೮೬ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ `ಕಬೀರ್ ಸನ್ಮಾನ್' ಅಡಿಗರ ಮಡಿಲಿಗೆ ಬಂತು. ೧೯೮೮ರಲ್ಲಿ ಥ್ಯಾಲಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಎಂಡ್ ಕಲ್ಚರ್' ಸಂಸ್ಥೆ ಅವರಿಗೆ ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ ನೀಡಿತು.

  • 'ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ'
  • ’ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ'
  • ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
  • ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ.
  • 'ಮಧ್ಯ ಪ್ರದೇಶ ಸರಕಾರದ "ಕಬೀರ್ ಸಮ್ಮಾನ್"
  • ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ
  • 'ರಾಜ್ಯೋತ್ಸವ ಪ್ರಶಸ್ತಿ'
  • 'ಪಂಪ ಪ್ರಶಸ್ತಿ'.
  • ಹೀಗೆ ಕನ್ನಡದ ಮಹತ್ವದ ಕವಿಯಾಗಿ ಮೂರು ದಶಕಗಳ ಕಾಲ ಬೆಳಗಿದ ಅಡಿಗರು ೧೯೯೨ ನವೆಂಬರ್ ೧೪ರಂದು ಅಸ್ತಂಗತರಾದರು.

ಹೆಚ್ಚಿನ ಓದಿಗೆ

ನೋಡಿ

ಉಲ್ಲೇಖಗಳು

  1. http://www.hinduonnet.com/thehindu/mp/2002/09/26/stories/2002092600660200.htm Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ. The Hindu - 26 September 2002
  2. Gopalakrishna Adiga remembered Archived 2007-03-13 ವೇಬ್ಯಾಕ್ ಮೆಷಿನ್ ನಲ್ಲಿ. The Hindu - 4 October 2004
  3. http://www.cnn.com/profiles/manu-raju
  4. The Mysore generation Archived 2004-08-23 ವೇಬ್ಯಾಕ್ ಮೆಷಿನ್ ನಲ್ಲಿ. The Hindu - 25 Apr 2004.
  5. "Indian Poets Writing In Kannada". Archived from the original on 26 October 2009. {{cite web}}: Unknown parameter |deadurl= ignored (help) - Indian Poets

ಹೊರಕೊಂಡಿಗಳು

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: