ಕೊರಟಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊರಟಗೆರೆ

ಕೊರಟಗೆರೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.31° N 77.14° E
ವಿಸ್ತಾರ
 - ಎತ್ತರ
 km²
 - 753 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
13638
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 13638
 - +08138
 - 

ಇದು ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಭೌಗೋಳಿಕ[ಬದಲಾಯಿಸಿ]

ತಾಲ್ಲೂಕು ಸ್ಥೂಲವಾಗಿ 13°31′N 77°14′E / 13.52°N 77.23°E / 13.52; 77.23.[೧] ನಡುವೆ ಇದೆ. ಮಧುಗಿರಿ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕು ಮಧುಗಿರಿ ತಾಲ್ಲೂಕು, ಕೋಲಾರ ಜಿಲ್ಲೆ, ಬೆಂಗಳೂರು ಜಿಲ್ಲೆ ಮತ್ತು ತುಮಕೂರು ತಾಲ್ಲೂಕು-ಇವುಗಳ ನಡುವೆ ಇದೆ.ಸಮುದ್ರ ಮಟ್ಟದಿಂದ 750 metres (2460 feet)ಎತ್ತರದಲ್ಲಿದೆ

ವಿಸ್ತೀರ್ಣ ಮತ್ತು ಜನಸಂಖ್ಯೆ[ಬದಲಾಯಿಸಿ]

ಇದರ ವಿಸ್ತೀರ್ಣ 243.8 ಚದರ ಮೈ. ಅಥವಾ 631.4 ಚ.ಕಿ.ಮೀ. ತಾಲ್ಲೂಕನ್ನು ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. 222 ಗ್ರಾಮಗಳು ಮತ್ತು ಒಂದು ಪಟ್ಟಣವನ್ನೊಳಗೊಂಡಿರುವ ತಾಲ್ಲೂಕಿನ ಜನಸಂಖ್ಯೆ ೧,೬೭,೫೯೧(೨೦೧೧).ಇದರಲ್ಲಿ ೮೪,೩೪೯ ಪುರುಷರು ಮತ್ತು ೮೩,೨೪೨ ಮಹಿಳೆಯರು[೨]

ಮೇಲ್ಮೈಲಕ್ಷಣ[ಬದಲಾಯಿಸಿ]

ತುಮಕೂರು ಜಿಲ್ಲೆಯ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಗ್ರಾನೈಟ್ ಬೆಟ್ಟ ಶ್ರೇಣಿಯೊಂದು ಕೊರಟಗೆರೆಯ ಮೂಲಕ ಹಾದುಹೋಗುತ್ತದೆ. ಚನ್ನರಾಯನದುರ್ಗ (3,734') ಮತ್ತು ಕೊರಟಗಿರಿ (2,885') ಇವು ತಾಲ್ಲೂಕಿನ ಎರಡು ಉನ್ನತ ಶಿಖರಗಳು. ಚನ್ನರಾಯನದುರ್ಗದಲ್ಲಿ ಹುಟ್ಟುವ ಸುವರ್ಣಮುಖಿ ಹೊಳೆ ಕೊರಟಗೆರೆ ತಾಲ್ಲೂಕಿನಲ್ಲಿ 15 ಮೈಲಿಗಳ ದೂರ ಹರಿಯುತ್ತದೆ. 1888-1892ರಲ್ಲಿ ಇದಕ್ಕೆ ಒಂದು ಅಣೆಕಟ್ಟು ಕಟ್ಟಲಾಯಿತು. ಇದರ ನೀರು ಬರಗಾಲದಲ್ಲಿ ನೆರವಾಗಿ ಒದಗುತ್ತಿದ್ದುದರಿಂದ ಇದಕ್ಕೆ ಬರನಕಣಿವೆ ಸರೋವರವೆಂದು ಹೆಸರಾಯಿತು. ದೇವರಾಯನದುರ್ಗದಲ್ಲಿ ಹುಟ್ಟುವ ಜಯಮಂಗಲಿ ಮತ್ತು ಗರುಡಾಚಲ ಹೊಳೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ.

ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ಹಿತಕರವಾಗಿಯೇ ಇರುತ್ತದೆ. ಮೇ-ನವೆಂಬರ್‍ನಲ್ಲಿ ಮಳೆಯಾಗುತ್ತದೆ. ನವೆಂಬರಿನಲ್ಲಿ ಅಧಿಕ. ವಾರ್ಷಿಕ ಸರಾಸರಿ ಮಳೆ 658.3 ಮಿಮೀ. ವರ್ಷದಲ್ಲಿ ಸುಮಾರು 40 ಮಳೆ ದಿನಗಳು.

ಕೃಷಿ ಮತ್ತು ವಾಣಿಜ್ಯ[ಬದಲಾಯಿಸಿ]

1965-66ರಲ್ಲಿ 82,617 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ಕಾಡುಗಳಿಂದ ಆವೃತವಾದ ಪ್ರದೇಶ 7,612 ಎಕರೆ. ಗೋಮಾಳ 26,548 ಎಕರೆ. ಸಾಗುವಳಿಗೆ ಒದಗದ ಬಂಜರು ನೆಲ 6,272 ಎಕರೆ. ಸುಮಾರು 15, 423 ಎಕರೆಗಳಿಗೆ ನೀರಾವರಿ ಸೌಲಭ್ಯವಿತ್ತು. ಕಾಲುವೆ, ಕೆರೆ ಮತ್ತು ಬಾವಿಗಳು ನೀರಾವರಿಯ ಮುಖ್ಯ ಸಾಧನಗಳು.ರಾಗಿ,ಜೋಳ (1920), ನವಣೆ (1269), ಹುರುಳಿ (9,500), ಅವರೆ (1557), ನೆಲಗಡಲೆ (10,000), ಕಬ್ಬು (255), ಮತ್ತು ಭತ್ತ (9500) ಇವು ತಾಲ್ಲೂಕಿನ ಮುಖ್ಯ ಬೆಳೆಗಳು. (1965-66ರಲ್ಲಿ ಇವನ್ನು ಬೆಳೆಯುತ್ತಿದ್ದ ಜಮೀನುಗಳ ಒಟ್ಟು ವಿಸ್ತೀರ್ಣಗಳನ್ನು ಎಕರೆಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ). ವಿದ್ಯುತ್ ಮತ್ತು ಡೀಸೆಲ್ ಪಂಪುಗಳನ್ನು ಉಪಯೋಗಿಸಿ ನೀರೆತ್ತುವ ವಾಡಿಕೆ ಬೆಳೆಯುತ್ತಿದೆ.

ಕೋರಂಡಂ ಕ್ವಾಟ್ರ್ಸ್ ಈ ತಾಲ್ಲೂಕಿನಲ್ಲಿ ದೊರಕುವ ಖನಿಜಗಳು.

ಸಂಪರ್ಕ[ಬದಲಾಯಿಸಿ]

ಕೊರಟಗೆರೆ ತಾಲ್ಲೂಕಿನಲ್ಲಿ ರೈಲು ಮಾರ್ಗಗಳಿಲ್ಲ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ದಾಬಸ್ ಪೇಟೆಯಿಂದ(ಬೆಂಗಳೂರು ಜಿಲ್ಲೆ) ಕೊರಟಗೆರೆಗೆ 15 ಮೈಲಿ ಉದ್ದದ ಒಂದು ರಸ್ತೆ ಇದೆ. ಇದರಿಂದ ಬೆಂಗಳೂರಿನೊಂದಿಗೆ ಕೊರಟಗೆರೆಗೆ ಸಂಪರ್ಕ ಕಲ್ಪಿತವಾಗಿದೆ. ಅಲ್ಲದೆ, ಬೆಂಗಳೂರು ಕಡೆಯಿಂದ ಮಧುಗಿರಿ, ಪಾವಗಡಗಳಿಗೆ ಹೋಗುವ ವಾಹನಗಳು ಈ ಮೂಲಕ ಸಾಗುತ್ತವೆ. ಕೊರಟಗೆರೆ-ಮಾವತ್ತೂರು ರಸ್ತೆ ಇನ್ನೊಂದು. ಇದು ತೊಂಡೆಬಾವಿಯವರೆಗೂ ಮುಂದುವರೆದು ಬೆಂಗಳೂರು-ಗುಂತಕಲ್ ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಕೊರಟಗೆರೆಯಿಂದ ತುಮಕೂರಿಗೂ ನೆಲಹಾಳ್‍ಗೂ ರಸ್ತೆಗಳುಂಟು.

ಜಾತ್ರೆಗಳು[ಬದಲಾಯಿಸಿ]

ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಮತ್ತು ದೊಡ್ಡಸಾಗ್ಗೆರೆಗಳಲ್ಲಿ ಹಾಗೂ ಮಾವತೂರುಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರತಿವರ್ಷ ಯುಗಾದಿ ಆದ 15 ದಿನಗಳಲ್ಲಿ ನಡೆಯುವಂತಹ ಅರಸೇಶ್ವರಿ ಜಾತ್ರೆ ಮಹೋತ್ರವವು ತುಂಬಾ ಪ್ರಸಿದ್ಧಿ .ಈ ಜಾತ್ರೆಯ ಸಂದರ್ಬದಲ್ಲಿ ಜಿಲ್ಲೆಯ ಪ್ರತಿಯೊಂದು ಬಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಹಾಗೂ ದೇವಿ ಕೃಪೆಗೆ ಪಾತ್ರರಾಗುತ್ತಾರೆ. ಕ್ಯಾಮೆನಹಳ್ಳಿಯದು ತುಮಕೂರಿನ ದೊಡ್ಡ ಜಾತ್ರೆಗಳಲ್ಲಿ ಒಂದು. ಆಂಜನೇಯಸ್ವಾಮಿ ಇಲ್ಲಿಯ ಆರಾಧ್ಯದೈವ. ಫೆಬ್ರವರಿ-ಮಾರ್ಚ್ ತಿಂಗಳುಗಳ ಸುಮಾರಿಗೆ ರಥೋತ್ಸವದ ಸಮಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದನಗಳ ಪ್ರದರ್ಶನ ಮತ್ತು ರಾಸುಗಳ ಜಾತ್ರೆ ತುಂಬಾ ಪ್ರಸಿದ್ದಿ ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ರಾಸುಗಳನ್ನು ಕೊಂಡುಕೊಂಡು ಹೋಗುತ್ತಾರೆ ಮಾರಾಟಗಳು ನಡೆಯುತ್ತವೆ.ದೊಡ್ಡಸಾಗ್ಗೆರೆಯ ಜಾತ್ರೆ ನಡೆಯುವುದು ಮಾರ್ಚ್ -ಏಪ್ರೀಲ್ ತಿಂಗಳಲ್ಲಿ .ಇನ್ನು ದೊಡ್ಡಸಾಗ್ಗೆರೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನವಿದೆ. ತೋವಿನಕೆರೆ (ಶುಕ್ರವಾರ), ನಾಗೇನಹಳ್ಳಿ(ಶನಿವಾರ), ಅಕ್ಕಿರಾಂಪುರ(ಶನಿವಾರ), ಮಾವತ್ತೂರು (ಭಾನುವಾರ), ಇರಕಸಂದ್ರ (ಮಂಗಳವಾರ) ಮತ್ತು ಎಲೆ ರಾಂಪುರಗಳಲ್ಲಿ (ಬುಧವಾರ) ಸಂತೆಗಳು ನಡೆಯುತ್ತವೆ. (ಸಂತೆಗಳು ನಡೆಯುವ ದಿನಗಳನ್ನು ಆಯಾ ಊರುಗಳ ಹೆಸರುಗಳ ಮುಂದೆ ಆವರಣಗಳಲ್ಲಿ ಕೊಡಲಾಗಿದೆ).

ಪಟ್ಟಣ[ಬದಲಾಯಿಸಿ]

ಕೊರಟಗೆರೆ ಪಟ್ಟಣ ಸುವರ್ಣಮುಖಿಯ ಎಡದಂಡೆಯ ಮೇಲೆ ತುಮಕೂರು-ಮಧುಗಿರಿ ರಸ್ತೆಯಲ್ಲಿ ತುಮಕೂರಿನಿಂದ 16 ಮೈ. ಉತ್ತರಕ್ಕಿದೆ. ತಾಲ್ಲೂಕಿನ ಕೇಂದ್ರ. ಜನಸಂಖ್ಯೆ ೧೫,೨೬೨ (೨೦೧೧)[೩]. ಇಲ್ಲೊಂದು ಪೌರಸಭೆ ಇದೆ. ಇಲ್ಲಿಯ ಕೋಟೆಯನ್ನು ಪೇಟೆಯನ್ನು ಹೊಳವನಹಳ್ಳಿ ಪಾಳೆಯಗಾರನೊಬ್ಬ ಸ್ಥಾಪಿಸಿದ. ಕೋಟೆ ಜೀರ್ಣಸ್ಥಿತಿಯಲ್ಲಿದೆ. ಇದನ್ನು ಟಿಪ್ಪುಸುಲ್ತಾನ ಪಾಳುಗೆಡವಿದ. ಪಟ್ಟಣದ ಜನಕ್ಕೆ ಸುವರ್ಣಮುಖಿಯ ನೀರು ವರ್ಷದ ಎಲ್ಲಾ ಕಾಲದಲ್ಲೂ ಒದಗುತ್ತದೆ. ಕೊರಟಗೆರೆ ಬೆಟ್ಟದ ನಡುವೆ ಗವಿಗಂಗಾಧರೇಶ್ವರನ ದೇವಾಲಯವು ಬೆಟ್ಟದ ಮೇಲೆ ಬಸವ ದೇವಾಲಯವೂ ಇವೆ. ಪಟ್ಟಣದೊಳಗೆ ಇರುವ ಆಂಜನೇಯ ದೇವಾಲಯದ ಬಳಿ ಕೆಲವು ಮಾಸ್ತಿ ಕಲ್ಲುಗಳುಂಟು.

ಪ್ರವಾಸಿ ಕೇಂದ್ರ[ಬದಲಾಯಿಸಿ]

ಇಲ್ಲಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳೆಂದರೆ,

ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ 

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸಿದ್ದರ ಬೆಟ್ಟ, ಚನ್ನರಾಯನ ದುರ್ಗ ಮತ್ತು ತುಂಬಾಡಿಯ ಹೊಸಕೆರೆ (ಯೋಜನೆ ಮತ್ತು ವಿನ್ಯಾಸ : ವಿಶ್ವೇಶ್ವರಯ್ಯ. ರಾಜ್ಯ ಹೆದ್ದಾರಿ ೩ ಇಲ್ಲಿ ಹಾದು ಹೋಗಿದೆ.ಮಾವತ್ತೂರು ಕೆರೆ

ಇತಿಹಾಸ[ಬದಲಾಯಿಸಿ]

ಕೊರಟಗೆರೆ ಐತಿಹಾಸಿಕ ಮಹತ್ವವನ್ನು ಸಹ ಹೊಂದಿದೆ. ಕೊರಟಗೆರೆಯನ್ನು ಕೊರಟಗೆರೆ ಪಾಳೇಗಾರರು ಆಳುತ್ತಿದ್ದರು. ಕೊರಟಗೆರೆ ಮತ್ತು ಮಧುಗಿರಿ ಪಾಳೇಗಾರರ ನಡುವೆ ಯುದ್ಧಗಳು ಆಗುತ್ತಿದ್ದವು. ಬಹುಮುಖ್ಯವಾಗಿ ಕೊರಟಗೆರೆಯಲ್ಲಿ ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳು ಹರಿಯುತ್ತವೆ. ಈ ಎರಡೂ ನದಿಗಳು ದೇವರಾಯನದುರ್ಗ ಮತ್ತು ಸಿದ್ಧರಬೆಟ್ಟಗಳಲ್ಲಿ ಹುಟ್ಟಿ, ನಂತರ ಕ್ಯಾಶವಾರ ಗ್ರಾಮದ ಬಳಿ ಸಂಗಮವಾಗುತ್ತವೆ.

ಇಡೀ ಕರ್ನಾಟಕದಲ್ಲಿ ಆದಿ ಜಾಂಭವ ಜನಾಂಗದ ವ್ಯಕ್ತಿ ತನ್ನದೇ ಸ್ವತಂತ್ರವಾದ 'ಸುವರ್ಣಗಿರಿ ಮಹಾ ಸಂಸ್ಥಾನ' ಸಾಮ್ರಾಜ್ಯವನ್ನು ಸ್ಥಾಪಿಸಿ ಕೋಟೆ ಕಟ್ಟಿ ಆಳಿದ ದಾಖಲೆ ಕುರಂಕೋಟೆ ಬಿಟ್ಟರೆ ಎಲ್ಲೂ ಇಲ್ಲ. ಬೆಟ್ಟದ ಮೇಲೆ ದೇಸೀ ಮಾದರಿಯಲ್ಲಿ ಕೋಟೆ ಕಟ್ಟಿಸಲಾಗಿದೆ. ಕೆರೆ, ಕೊಳ ಕಟ್ಟಿಸಿದ್ದಾನೆ. ಆತನ ನೆನಪಿಗಾಗಿ ಬೆಟ್ಟದ ಕೆಳಗೆ ಕುರಂಕೋಟೆ ಗ್ರಾಮ ಕಟ್ಟಿದ. ಈ ಗ್ರಾಮ ಈಗಲೂ ಇದೆ.ಸಿದ್ಧರ ಬೆಟ್ಟದ ಸುವರ್ಣ ಗಿರಿಯ ಭೂ ಭಾಗವನ್ನು ಆಳಿದ ಮಹಾರಾಜ ಕುರಂಗರಾಯ ರ ಆಳ್ವಿಕೆಗೆ ಸಾಕ್ಷಿಯಾಗಿ 18ನೆಯ ಶತಮಾನದ ಶಾಸನ ಕೋಟೆಯ ಕುರಂಕೋಟೆಯ ಪ್ರದೇಶದಲ್ಲಿ ಲಭ್ಯವಾಗಿದೆ. ಹಾಗೂ ಕುರಂಗರಾಯರು ಗುಪ್ಪಟ್ಟಣದ ತನ್ನ ಬಂಟ ಬೆನಕ ಭೈರಪ್ಪನಿಗೆ ಕೊಡುಗೆಯಾಗಿ ಕೊಟ್ಟ ಅರಸು ಕುರಂಗರಾಯರ ಖಡ್ಗ ಶತಮಾನಗಳಿಂದ ಬೆನಕ ಭೈರಪ್ಪ ನವರ ವಂಶಜರ ಬಳಿ ಇರುವುದು ಬೆಳಕಿಗೆ ಬಂದಿದೆ.

ಸಾರಿಗೆ[ಬದಲಾಯಿಸಿ]

ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ
ಸ್ಥಾನಿಕ ಓಡಾಟಗಳಿಗಾಗಿ ಆಟೋ"ಗಳು ಲಭ್ಯ
ತುಮಕೂರು - ರಾಯದುರ್ಗ ರೈಲು ಮಾರ್ಗ ಇಲ್ಲಿ ಹಾದು ಹೋಗಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. Falling Rain Genomics, Inc - Koratagere
  2. "ಕೊರಟಗೆರೆ ತಾಲೂಕು ಜನಸಂಖ್ಯೆ".
  3. "ಕೊರಟಗೆರೆ ಪಟ್ಟಣ".

4. "ಮಾವತ್ತೂರು ಕೆರೆ"ಮಾವತ್ತೂರು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: